![]() |
ಮಣಿಚಿತ್ರತ್ತಾಳ್ |
ಕನ್ನಡದಲ್ಲಿ ’ಆಪ್ತಮಿತ್ರ’ ಚಿತ್ರವನ್ನು ನೋಡದವರಿಲ್ಲ. ಇದು ಸುಮಾರು ೧೫ ವರ್ಷಗಳ ಹಿಂದೆ ಮಲಯಾಳಂನಲ್ಲಿ ತೆರೆಕಂಡ ’ಮಣಿಚಿತ್ರತ್ತಾಳ್’ ಎಂಬ ಚಿತ್ರದ ರಿಮೇಕ್. ಮೋಹನಲಾಲ್, ಶೋಭನಾ ನಟಿಸಿದ ಈ ಚಿತ್ರ ಹಲವು ರಾಷ್ಟ್ರಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಮಾತ್ರವಲ್ಲ ಅತ್ಯಂತ ಚರ್ಚಾಸ್ಪದ ಮತ್ತು ಎವರ್-ಗ್ರೀನ್ ಚಿತ್ರವಾಗಿ ಇಂದಿಗೂ ನೆನಪಿನಲ್ಲುಳಿದಿದೆ. ಇದಕ್ಕೆ ಸಾಕ್ಷಿಯೆಂಬಂತೆ ನಂತರ ಕನ್ನಡದಲ್ಲಿ ’ಆಪ್ತಮಿತ್ರ’ನಾಗಿ, ತೆಲುಗು ಮತ್ತು ತಮಿಳುಗಳಲ್ಲಿ ’ಚಂದ್ರಮುಖಿ’ಯಾಗಿ, ಬಂಗಾಲಿಯಲ್ಲಿ ’ರಾಜಮಹಲ್’, ಹಿಂದಿಯಲ್ಲಿ ’ಭೂಲ್-ಭುಲೈಯ್ಯಾ’ ಆಗಿ ಹೀಗೆ ಭಾರತದ ಬಹುತೇಕ ಭಾಷೆಗಳಲ್ಲಿ ಈ ಚಿತ್ರ ಮರುನಿರ್ಮಾಣಗೊಂಡಿದೆ. ನಾನು ಇವಿಷ್ಟೂ ಚಿತ್ರಗಳನ್ನು ನೋಡಿದ್ದೇನೆ. ಎಲ್ಲ ಚಿತ್ರಗಳೂ ಚೆನ್ನಾಗಿದ್ದರೂ ಯಾವುದೂ ಕೂಡ ಮಲಯಾಳಂನ ’ಮಣಿಚಿತ್ರತಾಳ್’ನ ತೂಕವನ್ನು ಮೀರುವುದಿಲ್ಲ. ಇದು ಇಂದಿಗೂ ಮಲಯಾಳಂನಲ್ಲಿ ಇತಿ ದೊಡ್ಡ ಹಿಟ್ ಚಿತ್ರಗಳಲ್ಲೊಂದೆಂದು ಪರಿಗಣಿಸಲ್ಪಡುತ್ತದೆ. ಫಾಸಿಲ್ ನಿರ್ದೇಶನದ ಈ ಚಿತ್ರಕ್ಕೆ ಕಥೆ ಬರೆದವರು ಮಧುಮುತ್ತನ್. ಪ್ರಸಿದ್ಧ ನಿರ್ದೇಶಕರಾದ ಬಾಡಿಗಾರ್ಡ್ ಖ್ಯಾತಿಯ ಸಿದ್ಧಿಕಿ, ಹಿಸ್ ಹೈನೆಸ್ ಅಬ್ದುಲ್ಲ ಖ್ಯಾತಿಯ ಸಿಬಿ ಮಲಾಯಿಲ್, ಹಿಂದಿಯ ಪ್ರಿಯದರ್ಶನ್ ಇವರೆಲ್ಲ ಈ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ. ೧೯ನೇ ಶತಮಾನದಲ್ಲಿ ತ್ರಾವೆಂಕೋರ್ ರಾಜಮನೆತನದ ’ಆಲುಮುತ್ತಿಲ್ ತರವಾಡು’ವಿನಲ್ಲಿ(ಅರಮನೆ) ನಡೆದಿತ್ತು ಎನ್ನಲಾದ ನೈಜ ಘಟನೆಯನ್ನಾಧರಿಸಿ ಚಿತ್ರ ತಯಾರಿಸಲಾಗಿದೆ ಎಂದು ಕಥಾರಚನೆಕಾರ ಮಧುಮುತ್ತನ್ ಮತ್ತು ನಿರ್ದೇಶಕ ಫಾಸಿಲ್ ಹೇಳಿದ್ದಾರೆ. ಅಲ್ಲದೇ ಹಾಗೆಯೇ ದೊಡ್ಡಮಟ್ಟಿನಲ್ಲಿ ಪ್ರಚಾರ ಮಾಡಲಾಯ್ತು. ಚಿತ್ರದ ಕಥೆ ನಿಮಗೆಲ್ಲ ತಿಳಿದಿದೆ. ಆದರೂ ಮೂಲ ಕಥೆಯನ್ನು ಮತ್ತೊಮ್ಮೆ ಹೇಳುತ್ತೇನೆ. ೧೯ನೇ ಶತಮಾನದಲ್ಲಿ ’ಆಲುಮುತ್ತಿಲ್ ತರವಾಡು’ವಿನಲ್ಲಿ ಶಂಕರನ್ ತಂಪಿ ಎಂಬ ರಾಜನಿದ್ದ. ಒಮ್ಮೆ ತಂಜಾವೂರು ಮೂಲದ ನಾಗವಲ್ಲಿ ಎಂಬ ಪ್ರಸಿದ್ಧ ಭರತನಾಟ್ಯ ನರ್ತಕಿಯನ್ನು ರಾಜ ಬಲವಂತವಾಗಿ ಗೃಹಬಂಧನದಲ್ಲಿರಿಸುತ್ತಾನೆ. ಅವಳನ್ನು ರಕ್ಷಿಸಲು ಅವಳ ಪ್ರಿಯತಮ ರಾಮನಾಥನ್ ಎಂಬವನು ಪ್ರಯತ್ನಪಡುತ್ತಾನೆ. ಇದನ್ನು ತಿಳಿದ ರಾಜ ಸಿಟ್ಟಿನಿಂದ ನಾಗವಲ್ಲಿಯನ್ನು ಅದೇ ಮನೆಯಲ್ಲಿ ದುರ್ಗಾಷ್ಟಮಿಯಂದು ಕೊಲೆ ಮಾಡುತ್ತಾನೆ. ಕೊಲೆಗೆ ಸೇಡು ತೀರಿಸಿಕೊಳ್ಳಲು ರಕ್ತಪಿಪಾಸು ನಾಗವಲ್ಲಿಯ ಆತ್ಮ ದುರ್ಗಾಷ್ಟಮಿಯಂದು ರಾಜಮನೆತನದವರನ್ನು ಕೊಲ್ಲಲು ತಿರುಗಿ ಬರುತ್ತದೆಂದು ಜ್ಯೋತಿಷಿಗಳಿಂದ ತಿಳಿದುಕೊಂಡ ರಾಜ ಮಂತ್ರವಾದಿಗಳ ನೆರವಿನೊಂದಿಗೆ ನಾಗವಲ್ಲಿಯ ಆತ್ಮವನ್ನು ಅರಮನೆಯ ದಕ್ಷಿಣ ದಿಕ್ಕಿನ(ತೆಕ್ಕಿನಿ) ಕೋಣೆಯೊಂದರಲ್ಲಿ ದಿಗ್ಬಂಧನದಲ್ಲಿರಿಸುತ್ತಾನೆ. ಕೆಲ ವರ್ಷಗಳ ನಂತರ ರಾಜ ಶಂಕರನ್ ತಂಪಿಯೂ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇವನ ಆತ್ಮವನ್ನೂ ಅದೇ ತೆಕ್ಕಿನಿಯಲ್ಲಿ ದಿಗ್ಬಂಧನಗೊಳಿಸಲಾಗುತ್ತದೆ. ಈ ದಿಗ್ಬಂಧನಕ್ಕೆ ಹಾಕಲಾದ ಬೀಗಮುದ್ರೆಯೇ ’ಮಣಿಚ್ಚಿತ್ರತಾಳ್’(ಮಣಿಚ್ಚಿತ್ರ=Ornate, ತಾಳ್=Lock)
![]() |
ಆಲುಮುಟ್ಟಿಲ್ ತರವಾಡು |
ತಮ್ಮ ಪೂರ್ವಿಕರ ಈ ಮನೆಗೆ ಬಂದು ವಾಸಮಾಡುವ ಗಂಗಾ ಮತ್ತು ನಕುಲನ್ ದಂಪತಿಗಳಿಗೆ(ಕನ್ನಡದಲ್ಲಿ ಸೌಂದರ್ಯಾ, ರಮೇಶ್) ಕಾಟ ಕೊಡುವ ನಾಗವಲ್ಲಿ, ನಾಗವಲ್ಲಿಯಿಂದ ಗಂಗಾಳನ್ನು ಬಚಾವ್ ಮಾಡುವ ’psychiatrist’ (ಮಲಯಾಳಂನಲ್ಲಿ ಡಾ. ಸನ್ನಿ ಜೊಸೇಫ್ ಪಾತ್ರದಲ್ಲಿ ಮೋಹನಲಾಲ್, ಕನ್ನಡದಲ್ಲಿ ಡಾ. ವಿಜಯ್ ಪಾತ್ರದಲ್ಲಿ ವಿಷ್ಣುವರ್ಧನ್), ಅದಕ್ಕೆ ಸಹಾಯ ಮಾಡುವ ’ತಾಂತ್ರಿಕ’(ಮಲಯಾಳಂನಲ್ಲಿ ಬ್ರಹ್ಮದತ್ತ ನಂಬೂದಿರಿಪಾಡ್ ಆಗಿ ತಿಲಕನ್, ಕನ್ನಡದಲ್ಲಿ ರಾಮಚಂದ್ರಶರ್ಮನಾಗಿ ಅವಿನಾಶ್) ಇವೆಲ್ಲ ಕತೆಯನ್ನು ನೀವು ನೋಡಿಯೇ ಇರುತ್ತೀರಿ.
ತಿರುವಾಂಕೂರು ರಾಜಮನೆತನಗಳ ಬಗ್ಗೆ ಇರುವ ಅಸಂಖ್ಯ ದಂತಕಥೆಗಳಲ್ಲಿ ನಾಗವಲ್ಲಿಯ ಕಥೆ ಕೂಡ ಒಂದು. ಕೇರಳದ ಒಡನಾಟ ನನಗೆ ಸ್ವಲ್ಪ ಜಾಸ್ತಿಯೇ ಆದ್ದರಿಂದ ನಾನೂ ಕೂಡ ಇಂಥ ಕೆಲ ಕಥೆಗಳನ್ನು ಕೇಳಿಯೂ ಇದ್ದೇನೆ. ಈಗಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ ಸಮೀಪದ ಪದ್ಮನಾಭಪುರ ತ್ರಾವೆಂಕೋರ್ ರಾಜಮನೆತನದ ಮೊದಲ ರಾಜಧಾನಿ. ಇದು ಕನ್ಯಾಕುಮಾರಿ ಜಿಲ್ಲೆಯ ನಾಗರ್ಕೋಯಿಲ್-ನಿಂದ ಸುಮಾರು ೨0ಕಿ.ಮಿ ಮತ್ತು ತಿರುವನಂತಪುರದಿಂದ ೫0ಕಿ.ಮಿ ದೂರದಲ್ಲಿದೆ. ನಾಗವಲ್ಲಿಯ ’ಆಲುಮುಟ್ಟಿಲ್ ತರವಾಡು’ ಕೂಡ ಇಲ್ಲೇ ಇದೆ. ಪದ್ಮನಾಭಪುರದಲ್ಲಿದ್ದ ರಾಜಧಾನಿ ೧೯ನೇ ಶತಮಾನದ ಪ್ರಾರಂಭದಲ್ಲಿ ಅಲ್ಲಿಂದ ತಿರುವನಂತಪುರಂಗೆ ಸ್ಥಳಾಂತರಗೊಡಿತು. ತದನಂತರ ಪದ್ಮನಾಭಪುರ ತನ್ನ ಹಳೆಯ ವೈಭವವನ್ನೆಲ್ಲ ಕಳೆದುಕೊಂಡಿತು. ಕಥೆಗಳ ಪ್ರಕಾರ ರಾಜವಂಶಸ್ಥರು ಅರಮನೆಯನ್ನು ಸ್ಥಾಳಾಂತರಿಸಿಲು ನಾಗವಲ್ಲಿಯ ಕಾಟವೂ ಒಂದು ಕಾರಣ. ಆದರೆ ಇತಿಹಾಸವನ್ನು ಕೂಲಂಕುಶವಾಗಿ ಗಮನಿಸಿದಾಗ ಅದಕ್ಕೆ ಅಂಥ ಆಧಾರಗಳೇನೂ ಸಿಗುವುದಿಲ್ಲ. ನಾಗವಲ್ಲಿಗಿಂತಲೂ ಅನಂತಪದ್ಮನಾಭ ಮಂದಿರಕ್ಕೆ ಹತ್ತಿರವಾಗುವ ಉದ್ದೇಶದಿಂದಲೇ ಅರಮನೆಯನ್ನು ಸ್ಥಳಾಂತರಿಸಿರುವ ಸಾಧ್ಯತೆಗಳೇ ಹೆಚ್ಚು. ಅಷ್ಟಕ್ಕೂ ತ್ರಾವೆಂಕೋರಿನ ಅಧಿಕೃತ ಇತಿಹಾಸವನ್ನು ಗಮನಿಸಿದರೆ ನಾಗವಲ್ಲಿ ಹೆಸರಿನ ಯಾವ ರಾಜನರ್ತಕಿಯ ಉಲ್ಲೇಖವಾಗಲೀ ಅವಳು ಕೊಲೆಯಾಗಿ ದೆವ್ವವಾದ ಉಲ್ಲೇಖವಾಗಲೀ ಇಲ್ಲ. ಹಾಂ.. ಸುಗಂಧವಲ್ಲಿ ಎಂಬ ರಾಜನರ್ತಕಿಯ ಉಲ್ಲೇಖವಿದೆ. ಈಕೆಯೂ ತಂಜಾವೂರು ಮೂಲದವಳು. ಕಾರಣಾಂತರಗಳಿಂದ ಈಕೆಯನ್ನು ರಾಜ್ಯದಿಂದ ಗಡೀಪಾರು ಮಾಡಲಾಯ್ತಂತೆ ಮತ್ತು ಈಕೆ ಆತ್ಮಹತ್ಯೆ ಮಾಡಿಕೊಂಡಳಂತೆ. ಕೆಲ ವರ್ಷಗಳ ನಂತರ ರಾಜನೂ ಕೂಡ ಇವಳ ನೆನಪಿನಲ್ಲೇ ನಿಗೂಢವಾಗಿ ಮೃತಪಟ್ಟ. ಹೆಚ್ಚಿನ ಮಾಹಿತಿಗಾಗಿ ”ತಿರುವನಂತಪುರತ್ತಿಂಟೆ ಐತಿಹಾಸಮ್” ಪುಸ್ತಕ ನೋಡಿ.
ನಾಗವಲ್ಲಿ ನನ್ನನ್ನು ಬಹಳ ದಿನಗಳಿಂದ ಕಾಡುತ್ತಿದ್ದಳು( ಪುಣ್ಯ, ಅವಳ ಆತ್ಮವಲ್ಲ!!). ಮೊನ್ನೆ ಒಂದು ವಾರ ಕನ್ಯಾಕುಮಾರಿ, ನಾಗರಕೋಯಿಲ್ ಮತ್ತು ತಿರುವನಂತಪುರಂನ ಸುತ್ತಮುತ್ತಲಲ್ಲೇ ನಾನಿದ್ದರೂ ಒಮ್ಮೆಯೂ ತರವಾಡಿಗೆ ಭೇಟಿ ಕೊಡಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ನಾಗವಲ್ಲಿಯನ್ನು ತುಂಬ ಮಿಸ್ ಮಾಡಿಕೊಂಡಿದ್ದೇನೆ. ಮಾತ್ರವಲ್ಲ ಅವಳಿನ್ನೂ ಕೆಲ ಕಾಲ ನನ್ನನ್ನು ಕಾಡುತ್ತಲಿರಬಹುದು.