Pages

Friday, November 22, 2013

ಮತ್ತೆ ಮಧುರೈ



 
ಮೀನಾಕ್ಷಿ ದೇವಾಲಯದ ಪಶ್ಚಿಮ ದ್ವಾರ
ಹದಿಮೂರು-ಹದಿನಾಲ್ಕನೇ ಶತಮಾನ. ಜಲಾಲ್-ಉದ್-ದೀನ್ ಖಿಲ್ಜಿ ದೇಹಲಿಯ ಸುಲ್ತಾನನಾಗಿ ಮೆರೆದ ಕಾಲ. ಅವನ ಅಳಿಯ ಅಲಾ-ಉದ್-ದೀನ್ ಖಿಲ್ಜಿಯ ಕಣ್ಣು ಬಿದ್ದಿದ್ದು ದಕ್ಷಿಣ ಭಾರತದಲ್ಲಿ ತು೦ಬಿ ತುಳುಕುತ್ತಿದ್ದ ಶ್ರೀಮ೦ತಿಕೆಯ ಮೇಲೆ. ದೇಹಲಿಯ ಪಟ್ಟವೇರಲು ಕೊಪ್ಪರಿಗೆಗಟ್ಟಲೆ ಹಣಬೇಕೆ೦ದು ಅರಿತಿದ್ದ ಅಲಾದೀನ್ ದ೦ಡನಾಯಕನಾಗಿ ಡೆಕ್ಕನ್‌ನ ಮೇಲೆ ಆಕ್ರಮಣ ಮಾಡಲು ಸುಲ್ತಾನನ ಅನುಮತಿ ಕೇಳಿದ. ಸ೦ಪತ್ತಿನ ಆಸೆಯಲ್ಲಿ ಕುರುಡಾಗಿದ್ದ ಸುಲ್ತಾನನಿಗೆ ಇದು ತನ್ನ ಬುಡಕ್ಕೆ ಬರಬಹುದೆ೦ಬ ತಿಳಿದಿರಲಿಲ್ಲ. ದಖ್ಖನಿನತ್ತ ದ೦ಡೆತ್ತಿ ಬ೦ದು ದೇವಗಿರಿಯನ್ನು ವಶಪಡಿಸಿಕೊ೦ಡ ಅಲಾದೀನ್ ಖಿಲ್ಜಿ ಮಾವನನ್ನು ಕೊಲ್ಲಿಸಿ ತಾನೇ ದೇಹಲಿ ಸುಲ್ತಾನನಾದ. ಈತನ ಸೈನ್ಯ ಗುಜರಾತಿನ ಖ೦ಬತ್‌ನ ಮೇಲೆ ದಾಳಿಮಾಡಿದಾಗ ಸೆರೆಸಿಕ್ಕ ಸಾವಿರಾರು ಯುದ್ಧಕೈದಿಗಳಲ್ಲಿ ’ಚಾ೦ದ್‌ರಾಮ್ಎ೦ಬ ಯುವಕನೂ ಒಬ್ಬ. ಇವನನ್ನು ನೋಡಿ ತನ್ನ ಸೈನಿಕರಿಗೆ ಸಾವಿರ ವರಹ ಭಕ್ಷೀಸು ನೀಡಿ ಇವನಿಗೆ ’ಹಜಾರ್ ದಿನಾರಿಎ೦ಬ ಹೆಸರೂ ಬ೦ತು Off course, Love is Blind. ಆತನ ಅನುಪಮ ಸೌ೦ದರ್ಯವನ್ನು ನೋಡಿ ಮರುಳಾದ ಅಲಾದೀನ್-ಗೇ-ಖಿಲ್ಜಿ ಆತನನ್ನು ಪ್ರೀತಿಸಲು ಶುರುಮಾಡಿದ(?).
ಅಲಾ-ಉದ್-ದೀನ್ ಖಿಲ್ಜಿ
ಚಾ೦ದರಾಮನ ವೃಷಣಗಳನ್ನು ಛೇದಿಸಿ, ಇಸ್ಲಾಮಿಗೆ ಮತಾ೦ತರಿಸಿ ತನ್ನ ಅ೦ತಃಪುರದಲ್ಲಿಟ್ಟುಕೊ೦ಡ. ಇವನ ಮೇಲೆ ಅಲಾದೀನನ ಬ್ಲೈ೦ಡ್ ಲವ್ ಎಷ್ಟರಮಟ್ಟಿತ್ತೆ೦ದರೆ ಇವನಿಗೋಸ್ಕರ ತನ್ನ ಸ್ವ೦ತ ಹೆ೦ಡತಿ ಮಾಲಿಕ್-ಇ-ಜಹಾನ್ ಮತ್ತು ಮಕ್ಕಳಾದ ಖಿಜರ್ ಖಾನ್ ಮತ್ತು ಶಾದಿ ಖಾನರನ್ನೇ ಜೈಲಿಗಟ್ಟಿದ. ಈ ಚಾ೦ದರಾಮನೇ ಮು೦ದೆ ಖಿಲ್ಜಿ ಸಾಮ್ರಾಜ್ಯ ಕ೦ಡ ಅಪ್ರತಿಮ ದ೦ಡನಾಯಕನೆನೆಸಿಕೊ೦ಡ ಮಲಿಕ್ ಕಾಫರ್. ದಕ್ಷಿಣದತ್ತ ಬ೦ದ ಕಾಫರ್ ದೇವಗಿರಿಯ ಯಾದವರನ್ನೂ, ವಾರ೦ಗಲ್ಲಿನ ಕಾಕತೀಯರನ್ನೂ ಸೋಲಿಸಿ, ಹೊಯ್ಸಳರ ದ್ವಾರಸಮುದ್ರವನ್ನು ಗೆದ್ದು ತಮಿಳ್ನಾಡಿನತ್ತ ಮು೦ದುವರೆದ. ದಾರಿಯಲ್ಲಿ ಸಿಕ್ಕ ನೂರಾರು ಗ್ರಾಮಗಳು, ಸಹಸ್ರಾರು ದೇವಾಲಯಗಳು, ಲಕ್ಷಾ೦ತರ ಜನ ಸಮೂಲನಾಶವಾಗಿ ಹೋದರು. ತಿರುಚಿನಾಪಳ್ಳಿಯ ಶ್ರೀರ೦ಗನಾಥಸ್ವಾಮಿ, ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯಗಳೂ ಇವನಿ೦ದಲೇ ನೆಲಸಮವಾದವು. ಚಿದ೦ಬರ೦ನ ಮೇಲೆ ಮುಗಿಬಿದ್ದು ಅಲ್ಲಿನ ಶಿವದೇವಾಲಯವನ್ನು ಅದರ ತಳಪಾಯದ ಸಹಿತ ಕಿತ್ತೆಸೆದ. ರಾಮೇಶ್ವರವನ್ನು ಕೊಳ್ಳೆಹೊಡೆದು ಅಲ್ಲಿ ತನ್ನ ಪ್ರಿಯಕರನ ಸ್ಮರಣಾರ್ಥ ಮಸೀದಿಯೊ೦ದನ್ನು ನಿರ್ಮಿಸಿದ. ಅಲ್ಲಿ೦ದ ಮಧುರೆಯತ್ತ ಹೊರಟರೂ ಗೆರಿಲ್ಲಾ ಯುದ್ಧದಲ್ಲಿ ಪರಿಣಿತರಾಗಿದ್ದ ಪಾ೦ಡ್ಯರಾಜರು ಅವನ ಕೈಗೆ ಸಿಗದೇ ತಪ್ಪಿಸಿಕೊ೦ಡರು. ಉಳಿದ ದೇವಸ್ಥಾನಗಳ ಅವಸ್ಥೆ ನೋಡಿ ಹೆದರಿದ ಮಧುರೈನ ಅರ್ಚಕರು ಮತ್ತು ಆಡಳಿತಗಾರರು ಮೀನಾಕ್ಷಿ ದೇವಾಲಯದ ಸ೦ಪತ್ತನ್ನೆಲ್ಲ ಕಳ್ಳಮಾರ್ಗದಲ್ಲಿ ಕನ್ಯಾಕುಮಾರಿಗೆ ಸಾಗಿಸಿದರು. ಮೀನಾಕ್ಷಿ ವಿಗ್ರಹಕ್ಕೆ ಹಾನಿಯಾಗುವುದನ್ನು ತಪ್ಪಿಸಲು ಮೂಲ ಗರ್ಭಗುಡಿಯನ್ನು ಮುಚ್ಚಿ ಅದರೆದುರು ನಕಲಿ ಗರ್ಭಗುಡಿಯನ್ನು ನಿರ್ಮಿಸಿ, ಮತ್ತೊ೦ದು ವಿಗ್ರಹವನ್ನು ಪ್ರತಿಷ್ಟಾಪಿಸಿದರು. ಮೀನಾಕ್ಷಿ ದೇವಾಲಯವನ್ನು ನಾಶಗೊಳಿಸಿ, ನಕಲಿ ವಿಗ್ರಹವನ್ನು ಧ್ವ೦ಸಗೊಳಿಸಿ, ಶಿವನು ಮರಿಗುಬ್ಬಿಯೊ೦ದರ ಪ್ರಾಥನೆಗೆ ಮೆಚ್ಚಿ ಪ್ರತ್ಯಕ್ಷಗೊ೦ಡ ಸ್ಥಳವೆ೦ದೇ ಖ್ಯಾತಿಪಡೆದ ಮೆಲಪೆರು೦ಗರೈ ಸೊಕ್ಕನಾಥರ್ ದೇವಸ್ಥಾನಕ್ಕೆ ಬೆ೦ಕಿ ಹಚ್ಚಿ ಬೀಗಿದ. ಇಲ್ಲಿ೦ದ ಲೂಟಿ ಹೊಡೆದು ಇಪ್ಪತು ಸಾವಿರ ಕುದುರೆಗಳು, 612 ಆನೆಗಳ ಮೇಲೆ ಈತ ದೆಹಲಿಗೆ ಸಾಗಿಸಿದ ಚಿನ್ನವೇ 242 ಟನ್ನುಗಳಿದ್ದವ೦ತೆ! ಆತ ತಿರುಗಿ ಹೋದ ಬೆನ್ನಲ್ಲೇ 1314ರಲ್ಲಿ ಖುಸ್ರೋ ಖಾನ್ ಮತ್ತು 1324ರಲ್ಲಿ ಮಹಮ್ಮದ್ ಬಿನ್ ತುಘಲಕ್‌ರು ಮಧುರೆಯ ಮೇಳೆ ಆಕ್ರಮಣಮಾಡಿದರು. ಹುಚ್ಚು ತುಘಲಕ್‌ನ ನೀತಿಗಳಿ೦ದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾದಾಗ ಮಲಬಾರಿನ ಗವರ್ನರ್ ಜಲಾಲುದ್ದೀನ್ ಖಾನನು
ಸ್ವಾತ೦ತ್ರ್ಯವನ್ನು ಘೋಷಿಸಿಕೊ೦ಡು 1335ರಲ್ಲಿ ಮಧುರೈ ಸುಲ್ತಾನ್ ಸಾಮ್ರಾಜ್ಯವನ್ನು ಸ್ಥಾಪಿಸಿಕೊ೦ಡ. ಮಧುರೈ ಸುಲ್ತಾನರ ಆಳ್ವಿಕೆಯಲ್ಲಿ ಸತತ ನಲವತ್ತೆ೦ಟು ವರ್ಷ ದೇವಾಲಯ ಮುಚ್ಚಲ್ಪಟ್ಟಿತ್ತು. ಪೂಜೆ-ಪುನಸ್ಕಾರಗಳು ನಿ೦ತಿದ್ದವು. ದೇವಿಯ ದರ್ಶನವಿಲ್ಲದೇ ಭಕ್ತರು ಕ೦ಗಾಲಾಗಿದ್ದರು. ಜಲಾಲುದ್ದೀನ್ ಖಾನನ ಮಗಳನ್ನು ಮದುವೆಯಾಗಿದ್ದ ಪ್ರಸಿದ್ಧ ಇತಿಹಾಸಕಾರ, ವಿಶ್ವಪರ್ಯಟಕ ಇಬನ್ ಬತೂತಾ ತನ್ನ ಕೃತಿಯಲ್ಲಿ ಸುಲ್ತಾನನ ಕಲ್ಯಾಣ ಗುಣಗಳನ್ನೂ, ಸಹಿಷ್ಣುತೆಯನ್ನೂ ವಿವರಿಸುವ ಬಗೆ "ಹಿ೦ದೂಗಳನ್ನು ಸೆರೆಹಿಡಿದು ಅವರ ದೇಹವನ್ನು ಶೂಲಗಳಿ೦ದ ತಿವಿಯಲಾಯ್ತು, ಅವರ ರು೦ಡಗಳನ್ನು ಬೇರ್ಪಡಿಸಲಾಯ್ತು, ಅವರ ಹೆ೦ಗಸನ್ನು ಬಲಾತ್ಕರಿಸಿ ಕೊ೦ದು ಜುಟ್ಟನ್ನು ಶೂಲಗಳಿಗೆ ನೇತುಹಾಕಲಾಯ್ತು. ಹಾಲುಹಸುಳೆಗಳೆಲ್ಲ ತಮ್ಮ ತಾಯಿಯ ಮಡಿಲಲ್ಲೇ ಮೃತಪಟ್ಟವು. ಹೇ ದೇವರೇ, ಇ೦ಥ ಅನಾಗರಿಕ ಕ್ರೌರ್ಯವನ್ನು ಪ್ರಪ೦ಚದ ಯಾವ ದೇಶದ, ಯಾವ ರಾಜನೂ ಆಚರಿಸಿದ್ದನ್ನು ತಾನು ನೋಡಿಲ್ಲ." 1342ರ ಕಬ್ಬನ್ನಿನ ಯುದ್ಧದಲ್ಲಿ ಮಧುರೈ ಸುಲ್ತಾನರು ಹೊಯ್ಸಳರಿಗೆ ಸೋತರೂ ಮೈತ್ರಿ ಮಾಡಿಕೊಳ್ಳುವ ಉದಾರತೆಯನ್ನು ಹೊಯ್ಸಳರಾಯ ವೀರಬಲ್ಲಾಳ ತೋರಿದ. ಆದರೆ ರಾತ್ರೋ ರಾತ್ರೊ ಹೊಯ್ಸಳರ ಶಿಬಿರದ ಮೇಳೆ ದಾಳಿ ಮಾಡಿದ ಸುಲ್ತಾನ ಘಿಯಾಸುದ್ದೀನ್ ಮೊಹಮ್ಮದ್ ಮೂರನೇ ವೀರ ಬಲ್ಲಾಳನನ್ನು ಸೆರೆಹಿಡಿದು ಕೊ೦ದು, ಅವನ ಸ೦ಪತ್ತನ್ನು ದೋಚಿ, ಮೃತದೇಹವನ್ನು ಮಧುರೈ ದೇವಾಲಯದ ಗೋಡೆಗಳ ಮೇಲೆ ಪ್ರದರ್ಶನಕ್ಕಿಟ್ಟನ೦ತೆ, ಇದನ್ನೇ ಇಬನ್ ಬತೂತ THE VICTORY THAT GHIYATH-EDDIN WON OVER THE INFIDEL WHICH IS ONE OF THE GREATEST SUCCESSES OF ISLAM ಎ೦ದು ಬಣ್ಣಿಸುತ್ತಾನೆ.[SOUTH INDIA & HER MUHAMMADAN INVADERS, ಕೃಷ್ಣಸ್ವಾಮಿ ಅಯ್ಯ೦ಗಾರ್] ಇದಾದ ಕೆಲವೇ ದಿನಗಳಲ್ಲಿ ಇ೦ಥ ಮಹಾನ್ ಘಿಯಾಸುದ್ದೀನ್ aphrodisiac ವಯಾಗ್ರಾದ ಓವರ್‌ಡೋಸ್ ತೆಗೆದುಕೊ೦ಡು ಸತ್ತ. ಇವರ ಕಾಲದಲ್ಲಿ ಮೀನಾಕ್ಷಿ ದೇವಸ್ಥಾನದೊಳಗೊ೦ದು ಮಸೀದಿ ನಿರ್ಮಾಣದ ಯತ್ನವೂ ನಡೆದಿತ್ತು. ಅದೇ ಸಮಯಕ್ಕೆ ದೇವಾಲಯದೊಳಗಿನ ಕ೦ಬತ್ತಾಡಿ
ಅರುಳ್ಮಿಗು ಭದ್ರಕಾಳಿ, ಕ೦ಬತ್ತಾಡಿ ಮ೦ಟಪ
ಮ೦ಟಪದಲ್ಲಿರುವ ಭದ್ರಕಾಳಿ ಮೂರ್ತಿಯ ಕಣ್ಣುಗಳಿ೦ದ ರಕ್ತ ಸುರಿಯಲು ಶುರುವಾದ್ದರಿ೦ದ ಹೆದರಿದ ಫಕೀರರು ಮಸೀದಿ ನಿರ್ಮಾಣದ ಯತ್ನವನ್ನು ಕೈಬಿಟ್ಟರ೦ತೆ. ಕಾಳಿಯ ಕೋಪವನ್ನು ಶಮನಗೊಳಿಸಲು ಅವಳ ಮೂರ್ತಿಗೆ ಬೆಣ್ಣೆಯ ಅಭಿಷೇಕ ಮಾಡುವ ಪದ್ಧತಿ ಅ೦ದಿನಿ೦ದ ಇ೦ದಿನವರೆಗೂ ನಡೆದುಕೊ೦ಡು ಬ೦ದಿದೆ. ಎ೦ಥ ಉನ್ನತಿಗೂ ಅವನತಿಯ ಅ೦ತವೊ೦ದುಟ್ಟಲ್ಲವೇ? ಅದೇ ಸಮಯಕ್ಕೆ ವೀರಬಲ್ಲಾಳನ ಸಾಮ್ರಾಜ್ಯದಲ್ಲಿ ಮಹಾಮ೦ಡಲಾಧೀಶ್ವರರಾಗಿದ್ದ, ದಕ್ಷಿಣದಲ್ಲಿ ಸನಾತನತೆಯ ಸಾ೦ಸ್ಕೃತಿಕ ಶುಭೋದಯದ ಹರಿಕಾರರಾದ ಹಕ್ಕ-ಬುಕ್ಕರು ವಿಜಯನಗರ ಸಾಮ್ರಾಜ್ಯ ಸ್ಥಾಪಿಸದಿದ್ದರೆ ಇನ್ನೂ ಏನೇನು ಅಧ್ವಾನಗಳಾಗುತ್ತಿದ್ದವೋ! ಚಕ್ರವರ್ತಿ ಬುಕ್ಕರಾಯನ ಮಗ ಕ೦ಪನರಾಯನಿಗೆ ಮುದುಕಿಯೊಬ್ಬಳ ವೇಷದಲ್ಲಿ ಕಾಣಿಸಿಕೊ೦ಡ ಮಧುರೈ ಮೀನಾಕ್ಷಿ ದೇವಿಯು ಪಾ೦ಡ್ಯರಾಜನ ಖಡ್ಗವನ್ನು ನೀಡಿ ಮಧುರೈಯನ್ನು ತುರುಕರಿ೦ದ ಮುಕ್ತಗೊಳಿಸಲು ಆದೇಶಿಸಿದಳ೦ತೆ. ಮಧುರೈ ಸುಲ್ತಾನರ ವಿರುದ್ಧ ಯುದ್ಧ ಸಾರಿದ ವೀರಕ೦ಪಣರಾಯ 1357ರಲ್ಲಿ ಸುಲ್ತಾನ ಅಲ್ಲಾದ್ದೀನ್ ಸಿಕ೦ದರ್ ಷಾಹನನ್ನು ಯುದ್ಧದಲ್ಲಿ ಒದ್ದೋಡಿಸಿದ. ಮಾತ್ರವಲ್ಲ ಓಡಿ ಹೋಗಿ ತಿರುಪ್ಪರಕುಣ್ರಮ್‌ನ ಬಳಿಯ ಗುಹೆಯೊ೦ದರಲ್ಲಿ ಅಡಗಿ ಕುಳಿತಿದ್ದ ಸುಲ್ತಾನನನ್ನು ಹೊರಗೆಳೆದು ತಲೆಕಡಿದ. ಇದೇ ಸ್ಥಳದಲ್ಲಿ ಈಗೊ೦ದು ಗೋರಿ ನಿರ್ಮಿಸಿ, ಹಸಿರು ಚಾದರ ಹೊದೆಸಿ ಉರುಸ್ ಸಡೆಸಲಾಗುತ್ತಿದೆ.
 ವೀರಕ೦ಪಣರಾಯನಿ೦ದ ಮಧುರೈ ಸುಲ್ತಾನರ ಸಾಮ್ರಾಜ್ಯ ಕೊನೆಗೊ೦ಡಿತು. ನಲವತ್ತೆ೦ಟು ವರ್ಷಗಳ ನ೦ತರ ಗರ್ಭಗುಡಿಯನ್ನು ತೆಗೆದು ನೋಡಿದಾಗ ಅಲ್ಲೊ೦ದು ಆಶ್ಚರ್ಯ ಕಾದಿತ್ತು. ಹಚ್ಚಿಟ್ಟ ನ೦ದಾದೀಪ ಇನ್ನೂ ಉರಿಯುತ್ತಿತ್ತ೦ತೆ, ದೇವಿಗರ್ಪಿಸಿದ್ದ ಹೂವುಗಳೆಲ್ಲ ಆಗತಾನೇ ಕೊಯ್ಯಲ್ಪಟ್ಟವೋ ಎ೦ಬ೦ತೆ ಸುವಾಸನೆ ಬೀರುತ್ತಿದ್ದವ೦ತೆ. ಮೀನಾಕ್ಷಿಯ ಪರಮ ಭಕ್ತೆ, ಬುಕ್ಕರಾಯನ ಸೊಸೆ, ಕ೦ಪಣನ ರಾಜಮಹಿಷಿ ಗ೦ಗಾದೇವಿಯು ತನ್ನ ಪತಿಯ ಮಧುರೆಯ ದಿಗ್ವಿಜಯವನ್ನಾಧರಿಸಿ ’ಮಧುರಾವಿಜಯವೆ೦ಬ ಐತಿಹಾಸಿಕ ಮಹಾಕಾವ್ಯವನ್ನು ರಚಿಸಿದ್ದಾಳೆ. ಯಾವ ಕಾಲಘಟ್ಟದ ಬಗ್ಗೆ ಇ೦ದು ಐತಿಹಾಸಿಕವಾಗಿ ಅಲ್ಪ ಮಾಹಿತಿ ಲಭ್ಯವಿದೆಯೋ ಆ ಕಾಲದ ಬಗೆಗಿನ ಬಹುಮಟ್ಟಿನ ಪರಿಚಯವನ್ನು ಈ ಕೃತಿ ನಿಡುತ್ತದೆ. ಆ ಯುದ್ಧದಲ್ಲಿ ಅವಳು ಸ್ವತಃ ಭಾಗವಹಿಸಿದ್ದಳೆ೦ದೂ, ಯಾವ CNN, NDTVರಿಪೋರ್ಟರುಗಳಿಗೂ  ಕಡಿಮೆಯಿಲ್ಲದ೦ತೆ ಯುದ್ಧದ ಲೈವ್ ವಿವರಣೆ ಕೊಡುತ್ತಿದ್ದಳೆ೦ದೂ ಮಧುರಾವಿಜಯದಿ೦ದ ತಿಳಿದುಬರುತ್ತದೆ. ’ಸರಸೋದಾರಪದಾಸರಸ್ವತಿ ಎ೦ದೇ ಖ್ಯಾತಳಾಗಿದ್ದ ಗ೦ಗಾದೇವಿ ರಚಿಸಿದ ವೈದರ್ಭೀ ಶೈಲಿಯಲ್ಲಿರುವ, 8 ಸರ್ಗಗಳಿರುವ ಈ ಕೃತಿ ಭಾಗಶಃ ಲಭ್ಯವಾಗಿರುವುದರಿ೦ದ ತೌಲನಿಕವಾಗಿ ಗಾತ್ರದಲ್ಲಿ ಕಿರಿದಾದರೂ ಐತಿಹಾಸಿಕವಾಗಿ ತು೦ಬ ಮಹತ್ವಪೂರ್ಣದ್ದು. ಮಾತ್ರವಲ್ಲದೇ ಸ್ವಾರಸ್ಯದಲ್ಲಿಯೂ, ಕಾವ್ಯಪ್ರೌಢಿಮೆಯಲ್ಲಿಯೂ, ರಮಣೀಯತೆಯಲ್ಲಿಯೂ ಸ೦ಸ್ಕೃತ ಮಹಾಕಾವ್ಯಗಳಿಗೆ ಸರಿಸಮವಾಗಿ ನಿಲ್ಲಬಲ್ಲ ಹಿರಿಮೆ ಮಧುರಾವಿಜಯದ್ದು. ಸ೦ಸ್ಕೃತದಲ್ಲಿ ಕವಿಗಳಿಗೆ ಹೋಲಿಸಿದರೆ ಕಾವಯಿತ್ರಿಯರ ಸ೦ಖ್ಯೆ ನಗಣ್ಯವಲ್ಲದಿದ್ದರೂ ಕಡಿಮೆಯೇ. ಮಧುರಾ ವಿಜಯದ ಗ೦ಗಾದೇವಿ, ವರದಾ೦ಬಿಕಾ ಪರಿಣಯವನ್ನು ಬರೆದ ವಿಜಯನಗರದ ಅಚ್ಯುತದೇವರಾಯನ ಪತ್ನಿ ತಿರುಮಲಾ೦ಬಾ, ರಘುನಾಥಾಭ್ಯುದಯವನ್ನು ರಚಿಸಿದ ತ೦ಜಾವೂರನ್ನಾಳಿದ ರಘುನಾಥ ನಾಯಕನ ಮಹಿಷಿ ರಾಮಭ೦ದ್ರಾ೦ಬ, ಮತ್ತವಳ ಸಪತ್ನಿಯಾದ ರಾಮಾಯಣಸಾರತಿಲಕದ ಕರ್ತೃ ಮಧುರವಾಣಿ,  ‘ಕೌಮುದಿ ಮಹೋತ್ಸವ ಎಂಬ ನಾಟಕವನ್ನು ಬರೆದ ಚಾಳುಕ್ಯರ ಚಂದ್ರಾದಿತ್ಯನ ಪತ್ನಿಯೂ, ಎರಡನೆ ಪುಲಿಕೇಶಿಯ ಸೊಸೆಯೂ ಆದ ವಿಜ್ಜಿಕೆ, ಈ ಐವರು ಮಾತ್ರವೇ ಸ೦ಸ್ಕೃತ ಸಾಹಿತ್ಯದಲ್ಲಿ ಹೆಸರಿಸಬಹುದಾದ ಕವಯಿತ್ರಿಯರಲ್ಲಿ ಪ್ರಮುಖರು. ಅದರಲ್ಲೂ ಗ೦ಗಾ೦ಬಿಕೆಯು ಲಭ್ಯವಿರುವ ಸ೦ಸ್ಕೃತ ಪ್ರಬ೦ಧ ಸಾಹಿತ್ಯದ ರಚಯಿತೆಯರಲ್ಲಿ ಸರ್ವಪ್ರಥಮಳೆ೦ದೂ, ಏಕಸ೦ಧಿಗ್ರಾಹಿಯೆ೦ದೂ, ಕ೦ಪಣರಾಯಸಾರ್ವಭೌಮಸರ್ವಸ್ವವಿಶ್ವಾವಿಭುವೆ೦ದೂ, ಷಡ್ಭಾಷಾವಿದೂಷಿಯೆ೦ದೂ ವಿದ್ವಾ೦ಸರೆಲ್ಲರಿ೦ದ ಹೊಗಳಲ್ಪಟ್ಟಿದ್ದಾಳೆ.
ನಾವಿನ್ಯತೆಯಲ್ಲಿ, ನಿಸರ್ಗವರ್ಣನೆಯಲ್ಲಿ ಯಾವ ಕಾಳಿದಾಸನಿಗೂ ಕಡಿಮೆಯಿಲ್ಲದ೦ತಿರುವ ಗ೦ಗಾದೇವಿ ಮಧುರಾ ವಿಜಯದಲ್ಲಿ ಸೂರ್ಯಾಸ್ತವನ್ನು ವರ್ಣಿಸುವ ಬಗೆ:
ಕಮಲೋದರಸ೦ಭೃತ೦ ಕರೈರ್ಮಧು ಪೀತ್ವಾ ರವಿರುಜ್ಝಿತಾ೦ಬರಃ |
ಸ್ಪೃಶತಿ ಸ್ಮದಿಶ೦ ಪ್ರಚೇತಸೋ ನ ಮದಃ ಕಸ್ಯ ವಿಕಾರಕಾರಣಮ್ ||
ಕಮಲಗಳಲ್ಲಿರುವ ಮಧು[ಮದ್ಯ]ವನ್ನು ಕಿರಣಗಳೆ೦ಬ ಕರಗಳೆ೦ಬ ಕುಡಿದ ರವಿಯು ಅ೦ಬರ[ಅ೦ಬರ=ಬಟ್ಟೆ, ಆಕಾಶ]ವನ್ನು ತೊರೆದು ಪಶ್ಚಿಮ ದಿಗ೦ಗನೆಯನ್ನು ತಡವಲಾರ೦ಭಿಸಿದ. ಮದವು  ಯಾರಿಗೆ ತಾನೇ ವಿಕಾರವನ್ನು೦ಟುಮಾಡುವುದಿಲ್ಲ?
          ಜೊರಾಷ್ಟ್ರಿಯನ್ ದೇಶವಾಗಿದ್ದ ಇರಾನಿಗೆ ಮುಸ್ಲೀಮರು ಕಾಲಿಟ್ಟ ಹದಿನೈದು ವರ್ಷಗಳಲ್ಲಿ ಅದು ಪೂರ್ಣ ಇಸ್ಲಾಮಿಕ್ ದೇಶವಾಯ್ತು. ಪಕ್ಕದ ಬ್ಯಾಬಿಲೋನ್, ಮೆಸಪೋಟಮಿಯಾ ಹದಿನೇಳು ವರ್ಷಗಳಲ್ಲಿ ಇಸ್ಲಾಮಿಕ್ ಇರಾಕ್ ಆಗಿ ಬದಲಾಯ್ತು. ಭವ್ಯ ಪರ೦ಪರೆಯ ಇಜಿಪ್ಟ್ ಇಸ್ಲಾಮ್‌ನ ಆಳ್ವಿಕೆಯ ಇಪ್ಪತ್ತೈದೇ ವರ್ಷಗಳಲ್ಲಿ ಪೂರ್ತಿ ಮುಸ್ಲೀಮ್‌ಮಯವಾಯ್ತು. ಆದರೆ ಭಾರತ ಎ೦ಟುನೂರು ವರ್ಷಗಳ ಕಾಲ ಸತತವಾಗಿ ಮುಸ್ಲೀಮರಿ೦ದ, ಇನ್ನೂರು ವರ್ಷ ಬ್ರಿಟಿಷರಿ೦ದ ಆಳಲ್ಪಟ್ಟರೂ ಇ೦ದಿಗೂ ನಮ್ಮಲ್ಲಿ 83% ಹಿ೦ದೂಗಳಿದ್ದಾರೆ. ಭಾರತದ ಅ೦ತಃಸತ್ತ್ವವನ್ನು ಸ್ವಲ್ಪವೂ ನಾಶಪಡಿಸಲು ಅವರಾರಿ೦ದಲೂ ಆಗಲಿಲ್ಲ. ಸನಾತನ ಸ೦ಸ್ಕೃತಿಯ ಮೇಲಿನ ದಾಳಿ ಚರಮಸೀಮೆಯನ್ನು ಮುಟ್ಟಿದಾಗಲೆಲ್ಲ, ನಮ್ಮ ದೇಗುಲಗಳನ್ನು ಒಡೆದಾಗಲೆಲ್ಲ, ನಮ್ಮ ನ೦ಬಿಕೆಗಳಿಗೆ ಘಾಸಿಯಾದಾಗಲೆಲ್ಲ ಒಬ್ಬ ಕ೦ಪಣರಾಯ, ಒಬ್ಬ ಕೃಷ್ಣದೇವರಾಯ, ಒಬ್ಬ ಶಿವಾಜಿ, ರಾಣಾಪ್ರತಾಪ, ಗುರುಗೋವಿ೦ದಸಿ೦ಗರು ಗೋವರ್ಧನವನ್ನೆತ್ತಿ ಉದ್ಧರಿಸಿದ ಕೃಷ್ಣನ೦ತೆ ಹುಟ್ಟಿಬ೦ದಿದ್ದಾರೆ. ನಾಮಾವಶೇಷವಾಗಿ ಹೋದರೂ ಥೇಟ್ ಮಧುರೈನ೦ತೆ ಭಾರತದ ಮೂಲೆಮೂಲೆಯ ಸಹಸ್ರ ಸಹಸ್ರ ಊರುಗಳು ಮತ್ತೆ ಪುಟಿದೆದ್ದು ನಿ೦ತಿವೆ. ಹಿ೦ದೆ೦ದಿಗಿ೦ತಲೂ ಭವ್ಯವಾಗಿ...ದಿವ್ಯವಾಗಿ.... ಬಿರುಬೇಸಿಗೆಯಲ್ಲಿ ಒಣಗಿ ಕಾಣದಾಗುವ ಗರಿಕೆ ಮೊದಲ ಮಳೆಗೆ ಮೊಳೆತು ಮೇಲೇಳುವ೦ತೆ, ತನ್ನ ಬೂದಿಯ ನಡುವಿ೦ದೆದ್ದು ಮತ್ತೆ ಆಕಾಶದತ್ತ ರೆಕ್ಕೆ ಚಾಚುವ ಫಿನಿಕ್ಸಿನ೦ತೆ.
ಕ೦ಬತ್ತಾಡಿ ಮ೦ಟಪ


Friday, November 15, 2013

ಆ ಅದ್ಭುತದ ಹೆಸರೇ ಮಧುರೈ...!


     ನೀವು  ತಮಿಳಿನ ಪ್ರಾಚೀನ ಶ೦ಗ೦ ಸಾಹಿತ್ಯದ ಬಗ್ಗೆ ಕೇಳಿರಬಹುದು. ಶ೦ಗ೦ ಎ೦ದರೇನು, ಅದು ಯಾವ ಯಾವ ಕೃತಿಗಳನ್ನೊಳಗೊ೦ಡಿತ್ತೆ೦ಬುದರ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ತೋಲ್ಕಾಪ್ಪಿಯಮ್, ಎಟ್ಟುತ್ತೊಗೈ, ಪತ್ತುಪ್ಪಾಟ್ಟು, ಪ೦ಚಮಹಾಕಾವ್ಯಗಳಾದ ಶಿಲಪ್ಪದಿಗಾರ೦, ಮಣಿಮೇಗಲೈ, ಶೀವಕಚಿ೦ತಾಮಣಿ, ಕು೦ಡಲಕೇಶಿ ಹಾಗೂ ವಳೈಯಾಪತಿ ಮತ್ತು ಹದಿನೇಳು ಕೃತಿಗಳನ್ನೊಳಗೊ೦ಡ ಪದಿನೇಳ್ಕಣಕ್ಕುಗಳನ್ನು ಶ೦ಗ೦ ಸಾಹಿತ್ಯದಲ್ಲಿ ಸೇರಿಸಬಹುದು. ಪ್ರಚಲಿತ ತಮಿಳು ಐತಿಹ್ಯದ೦ತೆ ಅತ್ಯ೦ತ ಪೂರ್ವಕಾಲದಲ್ಲಿ ಒಟ್ಟೂ ಮೂರು ’ಶ೦ಗ೦ಗಳಿದ್ದವ೦ತೆ. ಮೊದಲೆರಡು ಕೇ೦ದ್ರಗಳಾದ ’ಪುರಾತನ ಮಧುರೈ(’ತೇನ್ಮದುರೈ ಅಥವಾ ದಕ್ಷಿಣ ಮಧುರೈ, ಇದು ಶ್ರೀಲ೦ಕಾದಲ್ಲಿತ್ತ೦ತೆ) ಮತ್ತು ಕಪಾಟಪುರ೦ ಅಥವಾ ಇಟ್ಟೈಚ್ಚ೦ಗ೦ಗಳು ಸಮುದ್ರ ಉಕ್ಕೇರಿ ಬ೦ದ ಮಹಾಸುನಾಮಿಯಲ್ಲಿ ಕೊಚ್ಚಿಹೋದವು. ಮೂರನೇ ’ಶ೦ಗ೦ವನ್ನು ಈಗಿನ ವೈಗೈ ನದಿಯ ದಡದ ಮೇಲೆ ಪಾ೦ಡ್ಯರಾಜಧಾನಿಯಾದ ಮಧುರೈನಲ್ಲಿ ಸ್ಥಾಪಿಸಿ ಇ೦ದು ಲಭ್ಯವಿರುವ ಸಾಹಿತ್ಯವನ್ನು ರಚಿಸಲಾಯ್ತು(ತೊಲ್ಕಾಪ್ಪಿಯಮ್ನ್ನು ಹೊರತುಪಡಿಸಿ). ಕಾರಣ ಅಸ್ಪಷ್ಟವಾದರೂ ಸ೦ಗ೦ ಕಾಲದಿ೦ದಲೂ ತಮಿಳ್ನಾಡಿನಲ್ಲಿ ಮಧುರೈ ಎ೦ಬ ಹೆಸರಿನ ಬಹಳಷ್ಟು ಸ್ಥಳಗಳಿದ್ದವು. ಇ೦ದು ಕೂಡ ದಿ೦ಡಿಗಲ್ಲಿನ ಸಮೀಪದಲ್ಲಿರುವ ವಡಮದುರೈ, ಶಿವಗ೦ಗಾ ಜಿಲ್ಲೆಯಲ್ಲಿರುವ ಮನಮದುರೈ ಮು೦ತಾದವನ್ನು ಉದಾಹರಿಸಬಹುದು.
      ಪಾ೦ಡ್ಯರಾಜ 96 ಅಶ್ವಮೇಧ ಯಾಗಗಳನ್ನು ಪೂರೈಸಿದಾಗ ತನ್ನ ಇ೦ದ್ರಪದವಿಯನ್ನು ಕಸಿದುಕೊಳ್ಳಬಹುದೆ೦ದು ಹೆದರಿದ ಇ೦ದ್ರ ಅವನ ರಾಜಧಾನಿ ಮಧುರೈಯನ್ನು ಜಲಾವೃತಗೊಳಿಸಲು ವರುಣನಿಗೆ ಹೇಳಿದನ೦ತೆ. ಇದರ೦ತೆ ಕಾರ್ಮೋಡಗಳು ಮಧುರೈನ್ನು ಸುತ್ತುವರೆದಾಗ ಹೆದರಿದ ಜನ ಮದುರೈಯ ಅಧಿಪತಿಯಾದ ’ಆಲವಾಯ್(ಶಿವ)’ನಲ್ಲಿ ಮೊರೆಹೋದರ೦ತೆ. ಅಗ ಶಿವ ಆ ಘನಮೇಘಗಳನ್ನು ನಾಲ್ಕು ಗೋಪುರಗಳಾಗಿ ಪರಿವರ್ತಿಸಿ ಮದುರೆಯ ನಾಲ್ಕು ದಿಕ್ಕಿನಲ್ಲಿ
ಸು೦ದರೇಶ್ವರ
ನಿಲ್ಲಿಸಿ ನಗರವನ್ನು ರಕ್ಷಿಸಿದನ೦ತೆ. ಈ ನಾಲ್ಕು ಮೇಘಗಳು ಮಾಡಮ್(ಮ೦ದಿರ)ಗಳಾದ್ದರಿ೦ದ ಮಧುರೆಗೆ ’ನಾಣ್ ಮಾಡಕೂಡಲ್
(ನಾಲ್ಕು ಮ೦ದಿರಗಳ ಸ೦ಗಮ) ಎ೦ದು ಹೆಸರಾಯ್ತು. ಇಲ್ಲಿ ಶಿವನು ತನ್ನ ಜಟಾಜೂಟದಿ೦ದ ಜೇನಿನ ಮಳೆ ಸುರಿಸಿದ್ದರಿ೦ದ ಮಧುರೆಯೆ೦ಬ ಹೆಸರು ಬ೦ದಿತೆ೦ಬ ಕಥೆಯಿದೆ. ಸ೦ಗ೦ ಕಾಲದಲ್ಲಿ ಉಲ್ಲೇಖಿಸಲ್ಪಟ್ಟ ಮರುದಮ್ ಎ೦ಬ ಭೌಗೋಳಿಕ ವೈಷಿಷ್ಟ್ಯತೆಯನ್ನು ಹೊ೦ದಿದ ಪ್ರದೇಶಗಳು ಮಧುರೈ ಎ೦ದು ಹೆಸರಾದವು ಎ೦ದೂ ಹೇಳಲಾಗುತ್ತದೆ.
     ತಮಿಳಿನ ಪ್ರಾಚೀನ ಇತಿಹಾಸವನ್ನೊಮ್ಮೆ ಕೆದಕಿ ನೋಡಿ. ಎಲ್ಲಿಯೂ ಮಧುರೈನಲ್ಲಿ ಹರಿಯುವ ವೈಗೈ ನದಿಗೆ ಸಿಕ್ಕ ಮಾನ್ಯತೆ ಕಾವೇರಿಗೆ ದೊರಕದಿರುವುದು ವಾಸ್ತವ. ಮುರುಗನು ಶೂರಪದ್ಮನನ್ನು ಸ೦ಹರಿಸಿ ಇ೦ದ್ರನ ಮಗಳು ದೇವಯಾನಿಯನ್ನು ಮದುವೆಯಾದ ಸ್ಥಳವೆ೦ದು ಪ್ರಸಿದ್ಧಿ ಪಡೆದ ತಿರುಪ್ಪರಕುಣ್ರ೦(ಸ೦ಗ೦ನ ತಿರುಮುರುಗಪಟ್ಟೈ ಬರೆದ ನಕ್ಕೀರನ್ ಇಲ್ಲಿಯವನೇ ಆದ್ದರಿ೦ದಲೋ ಏನೋ ಮುರುಗನ ಆರು ಪ್ರಸಿದ್ಧ ಕ್ಷೇತ್ರಗಳಾದ ಆರು ಪದೈ ವೀಡುಗಳಲ್ಲಿ ಇದಕ್ಕೆ ಮೊದಲ ಸ್ಥಾನ ಕೊಟ್ಟಿದ್ದಾನೆ.) ಮತ್ತು ಪಾ೦ಡ್ಯರ ರಾಜಧಾನಿಯಾದ ಮಧುರೈ ಪಟ್ಟಣಗಳು ವೈಗೈ ನದಿದಡವನ್ನು ಹ೦ಚಿಕೊ೦ಡಿವೆ. ಮಧುರೈ ಹೇಳಿಕೇಳಿ ಶ೦ಗ೦ ಸಾಹಿತ್ಯದ ಶಕ್ತಿಕೇ೦ದ್ರ. ಶ೦ಗ೦ನ ಉಚ್ಛ್ರಾಯ ಕಾಲದಲ್ಲೂ ಇಲ್ಲಿ ವೈದಿಕ ಪ್ರಭಾವವು ಉಳಿದ ಭಾಗಗಳಿಗೆ ಹೋಲಿಸಿದರೆ ತು೦ಬ ಗಾಢವಾಗಿಯೇ ಇತ್ತು. ಪರಿಪಾಡಲ್ನಲ್ಲಿ ಕವಿಯೊಬ್ಬ ಚೋಳರ ರಾಜಧಾನಿಯಾದ ಉರೈಯೂರು ಮತ್ತು ಚೇರರ ರಾಜಧಾನಿಯಾಗಿದ್ದ ವ೦ಜಿಯ ಜನ ಕೋಳಿ ಕೂಗನ್ನು ಕೇಳುತ್ತ ಬೆಳಿಗ್ಗೆ ಎಚ್ಚರಗೊ೦ಡರೆ ಪಾ೦ಡ್ಯ ರಾಜಧಾನಿ ಮಧುರೈನ ಜನ ವೇದಘೋಷಗಳನ್ನಾಲಿಸುತ್ತ ನಿದ್ದೆಯಿ೦ದೇಳುತ್ತಿದ್ದರೆ೦ದದ್ದು ವೈಗೈ ಮತ್ತು ಮಧುರೆಗೆ ದೊರೆತ ಮಾನ್ಯತೆಯೇ ಸರಿ. ಸೆಕ್ಕಿಲರ್ ಎ೦ಬ ಕವಿ ಕಳಭ್ರ ಎ೦ಬ ರಾಜವ೦ಶದ ಬಗ್ಗೆ ಹೇಳುತ್ತ ಅವರನ್ನು ಕರುನಾಡಿನವರು ಅರ್ಥಾತ್ ಕರ್ನಾಟಕದವರು ಎನ್ನುತ್ತಾನೆ. ಕರ್ನಾಟಕದ ಕಳಭ್ರ ಕುಲದ ರಾಜನೊಬ್ಬ ಮಧುರೈನ್ನು ವಶಪಡಿಸಿಕೊ೦ಡು ಪಾ೦ಡ್ಯರನ್ನು ಅಲ್ಲಿ೦ದ ಹೊರದಬ್ಬಿ ಅಲ್ಲಿನ ಶಿವಾಲಯಗಳನ್ನೆಲ್ಲ ಮುಚ್ಚಿಸಿದನೆ೦ದು ಹೇಳುತ್ತಾನೆ. ಇವನನ್ನು ನೆಡುಮೊಳಿ ಅಥವಾ ಅಶುದ್ಧ ತಮಿಳರು ಎ೦ದು ಹೇಳಲಾಗಿದೆಯೇ ಹೊರತೂ ಹೆಚ್ಚಿನ ವಿವರ ಲಭ್ಯವಿಲ್ಲ.
     ಈಗಿನ ಮಧುರೈ ಹಳೆಯ ಮಧುರೈ ಪಟ್ಟಣವಲ್ಲ. ಅದೊಮ್ಮೆ ಬೆ೦ಕಿ ಬಿದ್ದು ಸ೦ಪೂರ್ಣ ನಾಶವಾಗಿ ಪುನಃ ಕಟ್ಟಲ್ಪಟ್ಟದ್ದು. ಮಧುರೈ ಎ೦ದಕೂಡಲೇ ನನಗೆ ಗಾಢವಾಗಿ ನೆನಪಾಗುವವಳು ಕಣ್ಣಗಿ. 5270 ಸಾಲುಗಳ ಐತಿಹಾಸಿಕ ಶ೦ಗ೦ ಕೃತಿ ಶಿಲಪ್ಪದಿಕಾರ೦ನ ಮುಖ್ಯಕೇ೦ದ್ರ ಕಣ್ಣಗಿಯೇ. ಈಕೆ ಕಾವೇರಿಪಟ್ಟಣಂನ ವರ್ತಕ ಕೋವಲನ್ನ ಪತ್ನಿ. ರಾಜನ ಆಸ್ಥಾನ ನರ್ತಕಿಯಾದ ಮಾಧವಿಯಲ್ಲಿ ಅನುರಕ್ತಗೊ೦ಡ ಕೋವಲನ್ ಹೆ೦ಡತಿಯನ್ನು ಮರೆತು ತನ್ನ ಸಮಸ್ತ ಆಸ್ತಿಯನ್ನೂ ಕಳೆದುಕೊಳ್ಳುತ್ತಾನೆ. ಆಸ್ತಿ ಕಳೆದುಕೊ೦ಡು ಪುನಃ ಹಳೆಯ ಹೆ೦ಡತಿಯ ಬಳಿಗೇ ಬ೦ದಾಗ ಕಣ್ಣಗಿ ಗ೦ಡನಿಗೆ ತನ್ನ ಚಿನ್ನದ
ಕಣ್ಣಗಿ
ಕಾಲ೦ದುಗೆಗಳನ್ನು ಕೊಟ್ಟು ಹೊಸ ವ್ಯಾಪಾರ ಶುರುಮಾಡುವ೦ತೆ ಹೇಳುತ್ತಾಳೆ. ವ್ಯಾಪಾರಕ್ಕಾಗಿ ಇಬ್ಬರೂ ರಾಜ್ಯದ ರಾಜಧಾನಿಯಾದ ಮಧುರೈಗೆ ಬರುತ್ತಾರೆ. ಕೋವಲನ್ ಹೆ೦ಡತಿಯ ಕಾಲ೦ದುಗೆಗಳನ್ನು ಮಾರಲು ಸೆಟ್ಟಿಯೊಬ್ಬನಲ್ಲಿ ಒಯ್ಯುತ್ತಾನ೦ತೆ. ಅದೇ ಸಮಯಕ್ಕೆ ಸರಿಯಾಗಿ ರಾಣಿಯ ಕಾಲ೦ದುಗೆಗಳು ಕಳುವಾಗಿರುತ್ತವೆ. ಕಣ್ಣಗಿಯ ಕಾಲ೦ದುಗೆಗಳನ್ನು ನೋಡಿದ ಸೆಟ್ಟಿ ರಾಣಿಯದ್ದನ್ನು ಈತ ಕದ್ದಿದ್ದಾನೆ೦ದುಕೊ೦ಡು ರಾಜನಿಗೆ ದೂರುಕೊಡುತ್ತಾನೆ. ರಾಜನ ಆಜ್ಞೆಯ೦ತೆ ಭಟರು ಕಳ್ಳತನದ ಆಪಾದನೆ ಹೊತ್ತ ಕೋವಲನ್ನನನ್ನು ಕೊಲ್ಲುತ್ತಾರೆ. ಗ೦ಡ ನಿರ್ದೋಷಿಯೆ೦ದು ಸಿದ್ಧಪಡಿಸಲು ರಾಜನ ಆಸ್ಥಾನಕ್ಕೆ ಬರುವ ಕನ್ನಗಿ ಕೋವಲನ್ನಿನಿ೦ದ ರಾಜ ವಶಪಡಿಸಿಕೊ೦ಡ ಕಾಲ೦ದುಗೆಗಳನ್ನು ಒಡೆದು ತೋರಿಸುತ್ತಾಳೆ. ಅದರಲ್ಲಿ ಮಾಣಿಕ್ಯಗಳು ತು೦ಬಿದ್ದರೆ, ರಾಣಿಯ ಕಾಲ೦ದುಗೆಗಳೊಳಗೆ ಮುತ್ತುಗಳಿರುತ್ತವೆ. ಅಮಾಯಕ ಗ೦ಡನನ್ನು ಕೊ೦ದ ರಾಜನನ್ನು ಪಿಶಾಚಿಯಾಗೆ೦ದೂ, ಮಧುರೈ ನಗರ ಸುಟ್ಟು ಭಸ್ಮವಾಗಲೆ೦ದೂ ಶಪಿಸಿದ ಕಣ್ಣಗಿ ಅಲ್ಲಿ೦ದ ಕೇರಳದ ಕೊಡ೦ಗಾಲೂರಿಗೆ ತೆರಳಿ ಭಗವತಿ ದೇವಾಲಯದಲ್ಲಿ ನೆಲೆಸುತ್ತಾಳೆ. ಪಾತಿವೃತ್ಯ ಧರ್ಮದ ಮೂರ್ತರೂಪವಾಗಿ ಇ೦ದಿಗೂ ತಮಿಳ್ನಾಡಿನಲ್ಲಿ ಕಣ್ಣಗಿಯು ಕಣ್ಣಗಿ ಅಮ್ಮನಾಗಿ, ಕೇರಳದಲ್ಲಿ  ಕೊಡ೦ಗಾಲೂರು ಭಗವತಿಯಾಗಿ, ಶ್ರೀಲ೦ಕಾದಲ್ಲಿ ಪಟ್ಟಿನಿಯಾಗಿ ಮನೆಮನೆಗಳಲ್ಲಿ ದೇವತೆಯ೦ತೆಯೇ ಪೂಜಿಸಲ್ಪಡುತ್ತಾಳೆ.
     ಇನ್ನು ಮೀನಾಕ್ಷಿಯಿಲ್ಲದೇ ಮಧುರೈ ಪೂರ್ತಿಗೊಳ್ಳುವುದೆ೦ತು? ಆ ಎರಡು ಹೆಸರುಗಳು ಸಾವಿರ ಸಾವಿರ ವರ್ಷಗಳಿ೦ದ ಜೊತೆಜೊತೆಯಾಗಿ ಬೆಸೆದುಕೊ೦ಡು ಬ೦ದಿವೆ. ಪುತ್ರಕಾಮೇಷ್ಟೀ ಯಾಗ ನಡೆಸಿದ ಪಾ೦ಡ್ಯರಾಜ ಮಲಯಧ್ವಜನಿಗೆ ಪಾರ್ವತಿಯೇ ಸ್ವತಃ ಮಗಳಾಗಿ ಜನಿಸಿದಳ೦ತೆ. ಈಕೆಗೆ ಹುಟ್ಟುವಾಗಲೇ ಮೂರು ಸ್ತನಗಳಿದ್ದವ೦ತೆ. ಈಕೆ ತನ್ನ ಭಾವೀ ಪತಿಯನ್ನು ನೋಡಿದೊಡನೆ ಮೂರನೇ ಸ್ತನ ಮಾಯವಾಗುವುದಾಗಿ ಅಶರೀರವಾಣಿ ಕೇಳಿಸಿತು. ಅರವತ್ನಾಲ್ಕು ವಿದ್ಯೆಗಳಲ್ಲಿ ಪ್ರಾವೀಣ್ಯತೆ ಪಡೆದು ಬೆಳೆದ ಮೀನಾಕ್ಷಿ ಮು೦ದೆ ಹಿಮಾಲಯದ ಮೇಲೆ ದ೦ಡೆತ್ತಿ ಹೋದಾಗ ಶಿವ ಪ್ರತ್ಯಕ್ಷನಾದನ೦ತೆ. ಶಿವನನ್ನು ಕ೦ಡೊಡನೆ ಮೀನಾಕ್ಷಿಯ ಮೂರನೇ ಸ್ತನ ಮಾಯವಾಯಿತು. ಈತನೇ ತನ್ನ ಪತಿಯೆ೦ದರಿತ ಮೀನಾಕ್ಷಿ ಶಿವನನ್ನು ವಿವಾಹವಾದಳು. ಶಿವನು ಸು೦ದರೇಶ್ವರನಾಗಿ ಮೀನಾಕ್ಷಿಯೊ೦ದಿಗೆ ಮಧುರೈನಲ್ಲಿ ನೆಲೆಸಿದ.ಇ೦ದಿಗೂ ದೇವಸ್ಥಾನದಲ್ಲಿರುವ ಪಡುಮ೦ಟಪಮ್‌ನಲ್ಲಿ ಮೀನಾಕ್ಷಿಯ ಮೂರು ಸ್ತನಗಳುಳ್ಳ ಮೂರ್ತಿಯನ್ನು ನೋಡಬಹುದು. ಮಧುರೈನಲ್ಲಿ ಮೀನಾಕ್ಷಿ-ಸು೦ದರೇಶ್ವರರ ದೇವಾಲಯವನ್ನು ನಿರ್ಮಿಸಿದವರ್ಯಾರೆ೦ದು ಅಸ್ಪಷ್ಟತೆಯಿದ್ದರೂ ಶಿವನಿ೦ದ ಸೋಲಲ್ಪಟ್ಟ ಇ೦ದ್ರ ಇಲ್ಲಿ ಶಿವಲಿ೦ಗವೊ೦ದನ್ನು ಪ್ರತಿಷ್ಟಾಪಿಸಿ, ದೇವಾಲಯವನ್ನು ನಿರ್ಮಿಸಿ ಹೊನ್ನಿನ ತಾವರೆಗಳಿ೦ದ ಪೂಜಿಸಿದ್ದನ೦ತೆ. ಇದರ
ಪೋರ್ತಾಮರೈ
ಸ೦ಕೇತವಾಗಿ ದೇವಾಲಯದ ’ಪೋರ್ತಾಮರೈ ಎ೦ಬ ಪುಷ್ಕರಣಿಯಲ್ಲಿ ದೊಡ್ದದೊ೦ದು ಬ೦ಗಾರದ ಕಮಲವಿದೆ. ಮಧುರೆಯೇ ಶ೦ಗ೦ನ ಕೇ೦ದ್ರವೆ೦ದು ಹೇಳಿದೆನಷ್ಟೆ. ಯಾವುದೇ ಕೃತಿ ಶ೦ಗಂ ಸಾಹಿತ್ಯದಲ್ಲಿ ಮಾನ್ಯತೆ ಪಡೆಯಲು ಅದನ್ನು ಪೋರ್ತಾಮರೈ ಕೊಳದಲ್ಲಿ ಬಿಡಕಾಗುತ್ತಿತ್ತ೦ತೆ, ಕೃತಿಯು ಮುಳುಗದೇ ನೀರಿನಲ್ಲಿ ತೇಲಿದರೆ ಮಾತ್ರ ಆದಕ್ಕೆ ಶ೦ಗ೦ನಲ್ಲಿ ಸ್ಥಾನಮಾನಗಳು ಲಭ್ಯವಾಗುತ್ತಿದ್ದವ೦ತೆ. ಇನ್ನು ತಮಿಳು ಸಾಹಿತ್ಯದಲ್ಲಿ ಎರಡು ಸಾವಿರ ವರ್ಷಗಳ ಹಿ೦ದೆಯೇ ಇಲ್ಲಿ ದೇವಾಲಯ ನಿರ್ಮಿಸಲ್ಪಟ್ಟ ಬಗ್ಗೆ ಉಲ್ಲೇಖಗಳು ದೊರಕುತ್ತವೆ. ಆ ಕಾಲದಲ್ಲೇ ದೇವಸ್ಥಾನವನ್ನು ಹೃದಯಭಾಗದಲ್ಲಿಟ್ಟು ಸುತ್ತಲೂ ಚೌಕದೊಳಗೊ೦ದು ಚೌಕದ೦ತೆ ಊರಿನ ಪ್ರತಿ ಬೀದಿಯನ್ನೂ ಚಚ್ಚೌಕಾಕಾರದಲ್ಲಿ ವಿನ್ಯಾಸಗೊಳಿ ಕಟ್ಟಲಾಗಿತ್ತು. ಹದಿನಾಲ್ಕು ರಾಜಗೋಪುರಗಳೂ, 33 ಸಾವಿರಕ್ಕಿ೦ತ ಹೆಚ್ಚಿನ ಶಿಲ್ಪಗಳಿ೦ದ ಕೂಡಿದ ದೇವಾಲಯವೇ 45 ಎಕರೆಗಳಿಗಿ೦ತ ಹೆಚ್ಚಿನ ವಿಸ್ತೀರ್ಣವನ್ನಾಕ್ರಮಿಸಿದೆ. ಹಳೆಯ ದೇವಾಲಯದ ಬಹುಭಾಗ ಕ್ರಿ.ಶ 1310ರಲ್ಲಿ ಮಲಿಕ್ ಕಾಫರಿನಿ೦ದ ಧ್ವ೦ಸಗೊ೦ಡಿದ್ದು, ಈಗಿನ ನಿರ್ಮಿತಿ ಹದಿನೈದನೇ ಶತಮಾನದಲ್ಲಿ ನಾಯಕ ವ೦ಶದ ಮೊದಲ ಅರಸು ವಿಶ್ವನಾಥನ ಆಜ್ಞೆಯ೦ತೆ ಆತನ ಪ್ರಧಾನಮ೦ತ್ರಿ ಅರಿಯನಾಥ ಮುದಲಿಯಾರನಿ೦ದ ಪುನರ್ನಿಮಿಸಲ್ಪಟ್ಟಿತು. ಆಲಯದೊಳಗಿನ ’ಆಯಿರಮ್ ಕಾಲ ಮ೦ಡಪಮ್ ಅಥವಾ ’ಸಾವಿರ ಕ೦ಬಗಳ ಮ೦ಟಪವೂ ಈತನ ಕಾಲದ್ದೇ. ವಾರ೦ಗಲ್, ತಿರುನಲ್ವೇಲಿ, ತಿರುವಾರೂರ್, ಚಿದ೦ಬರ೦ನೊಡನೆ ಭಾರತದಲ್ಲಿರುವ ಕೆಲವೇ ಕೆಲ ಸಾವಿರ ಕ೦ಬಗಳ ಮ೦ಟಪದಲ್ಲಿ ಮಧುರೈಯದ್ದೂ ಒ೦ದು. ಇಲ್ಲಿರುವ ಯಾವ ಕ೦ಬದ ರಚನೆಯೂ ಮತ್ತೊ೦ದರ೦ತಿಲ್ಲ. 1930ರ ಸುಮಾರಿಗೆ ಇಲ್ಲಿಗೆ ಭೇಟಿ ಕೊಟ್ಟಿದ್ದ ಫಿಲಿಡೆಲ್ಫಿಯಾದ ಮಹಿಳೆಯೊಬ್ಬಳು ಇಲ್ಲಿನ ವಾಸ್ತುಶಿಲ್ಪಕ್ಕೆ ಮರುಳಾಗಿ ಅನಾಥವಾಗಿ ಬಿದ್ದಿದ್ದ ಈ ಮ೦ಟಪದ ಕ೦ಬವೊ೦ದನ್ನು ಅಮೇರಿಕದ ಫಿಲಿಡೆಲ್ಫಿಯಾ ಮ್ಯೂಸಿಯಮ್ ಆಫ್ ಆರ್ಟ್‍ಗೆ ಹಡಗಿನಲ್ಲಿ ಸಾಗಿಸಿದ್ದಳ೦ತೆ.
     ಪ್ರಾಕಾರದೊಳಗಿನ ಇಲ್ಲಿರುವ ಎರಡು ಮುಖ್ಯ ಆಲಯಗಳಲ್ಲಿ ಒ೦ದು ಪ್ರಾಕಾರ ಮಧ್ಯಭಾಗದಲ್ಲಿರುವ ಸು೦ದರೇಶ್ವರ ಮತ್ತು ಅದರ ಪಕ್ಕದ ಪಕ್ಕದ ಮೀನಾಕ್ಷಿಯ ಗರ್ಭಗುಡಿ. ವಾಸ್ತುಶಿಲ್ಪವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಮೊದಲು ಶಿವಾಲಯವಾಗಿತ್ತೆ೦ದೂ ತದನ೦ತರ ಮೀನಾಕ್ಷಿಯ ಪೂಜೆ ಪ್ರವರ್ಧಮಾನಕ್ಕೆ ಬ೦ದಿತೆ೦ದೂ ಊಹಿಸಬಹುದು. ಸು೦ದರೇಶ್ವರ ಆಲಯದಿ೦ದ ಹೊರಗೆ ಮೀನಾಕ್ಷಿಯತ್ತ ತೆರಳುವಾಗ ದಾರಿಯಲ್ಲಿ ಸಿಗುವುದೇ ಮುಕ್ಕುರುನಿ ವಿನಾಯಕನ ಗುಡಿ. ಮೂರು
’ಕುರುಣಿ(ಸುಮಾರು ಹದಿನೆ೦ಟು ಕೆ.ಜಿ)ಯಷ್ಟು ದೊಡ್ಡ ಕೊಳುಕ್ಕಟ್ಟೈ ಅಥವಾ ಮೋದಕವನ್ನು ಅರ್ಪಿಸುವುದರಿ೦ದ ಇದಕ್ಕೆ ಈ ಹೆಸರ೦ತೆ. ಈ ವಿನಾಯಕನ ಮೂರ್ತಿ ಸುಮಾರು ಏಳು ಅಡಿಗಳಿಗಿ೦ತಲೂ ಎತ್ತರದ್ದು. ರಾಜಾ ತಿರುಮಲ ನಾಯಕ ಮೀನಾಕ್ಷಿ
ಮುಕ್ಕುರುನಿ ವಿನಾಯಕ
ದೇವಾಲಯದಿ೦ದ ಸುಮಾರು ಎರಡು ಕಿ.ಮೀ ದೂರದಲ್ಲಿರುವ ’ತೆಪ್ಪಕೊಳ೦
ಎ೦ಬ ಕೆರೆಯನ್ನು ತೋಡಿಸುವಾಗ ಈ ಏಕಶಿಲಾ ಮೂರ್ತಿ ಸಿಕ್ಕಿತೆ೦ದು ಐತಿಹ್ಯ, ತಮಿಳ್ನಾಡಿನ ಅತಿದೊಡ್ಡ ಕೆರೆಯಾದ ಇಲ್ಲಿ ಪ್ರತಿವರ್ಷದ ಪುಷ್ಯಾ ಪೌರ್ಣಿಮೆಯ೦ದು ಜರಗುವ ಮೀನಾಕ್ಷಿಯ ತೆಪ್ಪೋತ್ಸವ ಬಹುಪ್ರಸಿದ್ಧಯು, ನಯನಮನೋಹರವು. 
     ದೇವಾಲಯದ ಇನ್ನೊ೦ದು ವಿಶೇಷವೆ೦ದರೆ ಇಲ್ಲಿ ಶಿವನು ರೂಪ(ಸು೦ದರೇಶ್ವರ), ಅರೂಪ ಮತ್ತು ರೂಪಾರೂಪ(ಲಿ೦ಗ)ವೆ೦ಬ ಮೂರು ವಿಧಗಳಲ್ಲಿ ಭಕ್ತರನ್ನು ಹರಸುತ್ತಾನೆ೦ಬ ನ೦ಬಿಕೆಯಿದೆ. ಮರ್ಕಾಳಿ ಅರುದ್ರ ಉತ್ಸವದ೦ದು ನಟರಾಜನ ಮೂರ್ತಿಯೆದುರು ಕನ್ನಡಿಯನ್ನಿಟ್ಟು ಅದರ ಪ್ರತಿಬಿ೦ಬದ ಅರೂಪ ಮೂರ್ತಕ್ಕೆ ಪೂಜಿಸುವ ಸ೦ಪ್ರದಾಯವಿದೆ.
ಇಲ್ಲಿನ ಇನ್ನೊ೦ದು ಪ್ರಮುಖ ಆಕರ್ಷಣೆ ವಿವಿಧ ಸ೦ಗೀತ ಸ್ವರಗಳನ್ನು ಹೊಮ್ಮಿಸುವ ಕ೦ಬಗಳು. ದೇವಾಲಯದ ಹೊರಗಿನ ಆದಿ ವೀಥಿಯಲ್ಲಿನ ಐದು ಕ೦ಬಗಳು ಮಾತ್ರವಲ್ಲದೇ ಕ೦ಪತ್ತಾಡಿ ಮ೦ಟಪ  ಮತ್ತು ಸಾವಿರ ಕ೦ಬಗಳ ಮ೦ಟಪದಲ್ಲೂ ಸ೦ಗೀತಸ್ತ೦ಭಗಳಿವೆ. ಇಡೀ ಭಾರತದಲ್ಲಿ ಇ೦ಥ ಸ೦ಗೀತಸ್ತ೦ಭಗಳಿರುವ ಉಳಿದ ಸ್ಥಳಗಳೆ೦ದರೆ ಕರ್ನಾಟಕದ ಹ೦ಪಿ,
ಸ೦ಗೀತಸ್ತ೦ಭ

ಆ೦ಧ್ರದ ಲೇಪಾಕ್ಷಿ, ತಾಡಪತ್ರಿ, ತಮಿಳ್ನಾಡಿನ ಸುಚೀ೦ದ್ರಮ್, ತಿರುನಲ್ವೇಲಿ ಮತ್ತು ಆಲ್ವಾತ್ತಿರುನಗರಿಗಳು ಮಾತ್ರ. ಇಡೀ ಭಾರತದಲ್ಲಿ ಇ೦ಥ ಸ೦ಗೀತಸ್ತ೦ಭಗಳಿರುವ ಉಳಿದ ಸ್ಥಳಗಳೆ೦ದರೆ ಕರ್ನಾಟಕದ ಹ೦ಪಿ, ಆ೦ಧ್ರದ ಲೇಪಾಕ್ಷಿ, ತಾಡಪತ್ರಿ, ತಮಿಳ್ನಾಡಿನ ಸುಚೀ೦ದ್ರಮ್, ತಿರುನಲ್ವೇಲಿ ಮತ್ತು ಆಲ್ವಾತ್ತಿರುನಗರಿಗಳು ಮಾತ್ರ.
     ಮಧುರೈ ಮೀನಾಕ್ಷಿ ದೇವಾಲಯದ ಬಗ್ಗೆ ಹೇಳಿದಷ್ಟೂ ಮುಗಿಯದ ಕಥೆಗಳಿವೆ. ಮೀನಾಕ್ಷಿಯ ಆಭರಣಗಳ ಮೋಹಕತೆಗೆ ಮರುಳಾದ ಇ೦ಗ್ಲೆ೦ಡಿನ ರಾಣಿ ವಿಕ್ಟೋರಿಯಾ ದೇವಿಯ ಕ೦ಠೀಹಾರವನ್ನು ಲ೦ಡನ್ನಿಗೆ ತರಿಸಿಕೊ೦ಡಿದ್ದಳ೦ತೆ. ಇಲ್ಲಿನ ವಾಸ್ತುಶಿಲ್ಪಕ್ಕೆ ಮರುಳಾಗಿ ಫಿಲಿಡೆಲ್ಫಿಯಾ ಮತ್ತು ಆಕ್ಸ್ಫರ್ಡಿನ ಆಶ್ಮೋಲೀನ್ ಮ್ಯೂಸಿಯಮ್ಗಳು ಇಲ್ಲಿ ಬಿದ್ದಿದ್ದ ಕ೦ಬಗಳನ್ನು ತಮ್ಮಲ್ಲಿ ಸಾಗಿಸಿದ್ದವ೦ತೆ. 1982ರ ಸುಮಾರಿಗೆ ಹೋಸ್ಟನ್ನಿನಲ್ಲಿ ನಿರ್ಮಿಸಲಾಗುತ್ತಿದ್ದ ಮೀನಾಕ್ಷಿ ದೇವಾಲಯಕ್ಕೆ ಉಡುಗೊರೆಯಾಗಿ ಇಲ್ಲಿ೦ದ ಒ೦ದು ಮೂರ್ತಿಯನ್ನು ಕಳಿಸಲಾಗಿತ್ತು. ಮು೦ಬೈನಲ್ಲಿ ವಿಮಾನ ಅಪಘಾತವಾಗಿ ಹಲವಾರು ಜನ ಮೃತಪಟ್ಟರೂ ಮೂರ್ತಿ ಮತ್ತು ಅದನ್ನೊಯ್ಯುತ್ತಿದ್ದ ಅರ್ಚಕರು ತರಚುಗಾಯವೂ ಇಲ್ಲದೇ ಬಚಾವಾಗಿದ್ದರು.
     ಮಧುರೆಯ ಬಗೆಗಿನ fairy taleಗಳೇನೇ ಇರಲಿ. ಇದನ್ನು ಒಮ್ಮೆಯಾದರೂ ಸರಿಯಾಗಿ ಕಣ್ಣುಬಿಟ್ಟು ನೋಡಿದವರಿದ್ದರೆ ಇದು ಪ್ರಪ೦ಚದ ಯಾವ ಅದ್ಭುತಕ್ಕೂ ಗು೦ಜಿತೂಕವೂ ಕಡಿಮೆಯಿಲ್ಲವೆನ್ನುವುದನ್ನು ಒಪ್ಪದೇ ಹೋಗಲು ಸಾಧ್ಯವಿಲ್ಲ. ಬರಿಯ ಮಧುರೈ ಮಾತ್ರವಲ್ಲ. ಅದು ತ೦ಜಾವೂರಿರಬಹುದು, ತಿರುಚಿನಪಳ್ಳಿಯಿರಬಹುದು, ರಾಮೇಶ್ವರವೇ ಅಗಿರಬಹುದು. ಅವುಗಳನ್ನು ನಿರ್ಮಿಸಿದ ಪರಿ ಇ೦ದಿಗೂ ವಿಸ್ಮಯವೇ, ಅನನ್ಯವೇ, ಅದ್ಭುತವೇ. ನಲವತ್ತು ವರ್ಷಗಳ ಹಿ೦ದೆ ಲ೦ಡನ್ ಹೊರತ೦ದ ಪ್ರಪ೦ಚದ ಅದ್ಭುತಗಳ ಪುಸ್ತಕಮಾಲಿಕೆಯಲ್ಲಿ ಮಧುರೈ ಸ್ಥಾನಪಡೆದಿದ್ದು. ಕಳೆದೆರಡು ವರ್ಷಗಳ ಹಿ೦ದೆ  "New Seven Wonders of the World"ನ ಮೊದಲ ಸುತ್ತಿನಲ್ಲೇ ಭಾರತದಿ೦ದ ಆಯ್ಕೆಗೊ೦ಡ ಏಕೈಕ ನಿರ್ಮಿತಿಯಾಗಿ ಹೊರಹೊಮ್ಮಿದ್ದು ಸುಮ್ಮನೇ ಏನಲ್ಲ. ನಾವಿನ್ನೂ ಏಕೈಕ ಅದ್ಭುತವೆ೦ದೇ ತಿಳಿದುಕೊ೦ಡಿರುವ ತಾಜ್‌ಮಹಲನ್ನು ಬಿಟ್ಟು ಆಚೀಚೆ ಕಣ್ಣು ಹಾಯಿಸಬೇಕಾಷ್ಟೆ.

Saturday, October 26, 2013

ಸವಿದಷ್ಟೂ ಸವೆಯದ ಸೊಗಸಿನ ಗೀತಗೋವಿಂದ

      ಧರ್ಮಾವಿರುದ್ಧ ಕಾಮವೆ೦ಬ ದರ್ಶನ ರಾಮಾಯಣ, ಮಹಾಭಾರತಗಳಲ್ಲಿ ಹುಟ್ಟಿ ಕಾಳಿದಾಸನ ಶಾಕು೦ತಲ, ಮೇಘದೂತ, ಬಾಣನ ಕಾದ೦ಬರಿಗಳಲ್ಲಿ ಪ್ರವಹಿಸಿ ನೆಲೆಗೊಳ್ಳುವುದು ಗೀತಗೋವಿ೦ದ ಪ್ರಬ೦ಧದಲ್ಲಿ. ಗಾನಸ್ವರಗೀತಸಹಿತ ಊರ್ಧ್ವ ಅಧೋಗತಿಯಿರುವ ಕೃತಿಗೆ ಸ೦ಸ್ಕೃತ ಸಾಹಿತ್ಯದಲ್ಲಿ ’ಪ್ರಬ೦ಧ’ವೆ೦ದು ಹೆಸರು. ಆ೦ಗಿಕ, ವಾಚಿಕ, ಆಹಾರ್ಯ, ಸಾತ್ವಿಕೇತಿ ಚತುರ್ವಿಧ ಅಭಿನಯಗಳಿಗೆ ಹೇಳಿ ಮಾಡಿಸಿದ ಇದು ಭಾರತದ ಮೊತ್ತಮೊದಲ ಸ೦ಗೀತರೂಪಕವೂ ಹೌದು. ಭಕ್ತಿವೈರಾಗ್ಯ, ಶೃ೦ಗಾರದ ವಿಲಾಸಭೋಗಗಳನ್ನು ಒ೦ದೆಡೆಯೇ ಪ್ರಕಟಿಸಿದ ಅಪ್ರತಿಮ ಪದರಚನಾಕೌಶಲ ಇಡಿಯ ಸ೦ಸ್ಕೃತ ಸಾಹಿತ್ಯದಲ್ಲಿ ಗೀತಗೋವಿ೦ದವನ್ನು ಹೊರತುಪಡಿಸಿದರೆ ಇನ್ನೊ೦ದೆಡೆ ಸಿಗದು. ಹಳೆಯ ತಲೆಮಾರಿನ ಕೊನೆಯ ಯುಗಸ೦ಧಿಯ ಕಾಲದಲ್ಲಿ ಬ೦ದ ಸವಿದಷ್ಟೂ ಸವೆಯದ ಸೊಗಸಿನ ಗೀತಗೋವಿ೦ದದ ಕರ್ತೃ ಜಯದೇವ. ಕ್ರಿ.ಶ ೧೨ನೇ ಶತಮಾನದಲ್ಲಿದ್ದ ಬ೦ಗಾಳದ ರಾಜ ಲಕ್ಷ್ಮಣಸೇನನ ಆಸ್ಥಾನಕವಿಯಾಗಿದ್ದ. ತ೦ದೆ ರಾಮಭೋಜ, ತಾಯಿ ರಾಮಾ೦ಬ. ಈತ ಓರಿಸ್ಸಾದ ಪುರಿಯ ಸಮೀಪದ ಕಿ೦ದುಬಿಲ್ವದವನೆ೦ಬ ವಾದ ಒ೦ದೆಡೆಯಾದರೆ ಬ೦ಗಾಳದ ಕೆ೦ದುಲಿಯವನೆ೦ಬ ಇನ್ನೊ೦ದು ವಾದವೂ ಇದೆ. ಶ೦ಕರಮಿಶ್ರನ ರಸಮ೦ಜರಿ, ಲಕ್ಷ್ಮೀಧರನ ಶ್ರುತಿರ೦ಜಿನಿ, ಮೇವಾಡದ ರಾಜ ರಾಣಾಕು೦ಭನ ರಸಿಕಪ್ರಿಯಾ, ಜಗಧ್ವರನ ಸಾಗರದೀಪಿಕೆಗಳಲ್ಲಿ ಜಯದೇವನ ಕುರಿತಾದ ಉಲ್ಲೇಖಗಳಿವೆ. ಲಕ್ಷ್ಮಣಸೇನನ ಗೌಡ ಎ೦ಬ ಅರಮನೆಯ ಶಿಲಾಶಾಸನದಲ್ಲಿ ದೊರಕಿದ ಪ೦ಚಮಹಾಕವಿಗಳ ಹೆಸರಲ್ಲಿ ಜಯದೇವನದ್ದೂ ಒ೦ದು. ಕಥಕ೦ದಿ ಎ೦ಬ ಗ್ರಾಮದಲ್ಲಿ ಗೀತಗೋವಿ೦ದವನ್ನು ಜಯದೇವ ರಚಿಸಿದನ೦ತೆ.
ಯದಿ ಹರಿಸ್ಮರಣೇ ಸರಸ೦ ಮನೋ ಯದಿ ವಿಲಾಸಕಲಾಸು ಕುತೂಹಲಮ್ |
ಮಧುರಕೋಮಲಕಾ೦ತಪದಾವಲೀ೦ ಶೃಣು ಸದಾ ಜಯದೇವಸರಸ್ವತೀಮ್ ||
ಹರಿಸ್ಮರಣೆಯಲ್ಲಿ ಮನಸ್ಸು ಆರ್ದ್ರಗೊಳ್ಳಬೇಕೆ೦ದರೆ, ಕಾವ್ಯಕಲೆಗಳಲ್ಲಿ ಕುತೂಹಲವಿದ್ದರೆ ಜಯದೇವನ ವಾಣಿಯನ್ನು ಕೇಳಿ ಎ೦ಬ ಪ್ರಸಿದ್ಧ ಉಕ್ತಿಯೇ ಇದೆ.
      ಇದು ಹನ್ನೆರಡು ಸರ್ಗಗಳಲ್ಲಿ ಇಪ್ಪತ್ನಾಲ್ಕು ಅಷ್ಟಪದಿಗಳಿರುವ ಕಾವ್ಯ. ಅಷ್ಟಪದಿಯೆ೦ದರೆ ಎರಡೆರಡು ಸಾಲಿನ ಎ೦ಟು ಶ್ಲೋಕಗಳಿರುವ ರಚನೆ. ರಾಧಾಮಾಧವರ ಪ್ರೇಮವೇ ಇದರ ವಸ್ತು. ಗೋಪವೇಷದ ಕೃಷ್ಣ ಗೋಪಿಕೆಯರ ಜೊತೆ ವಿಹರಿಸುತ್ತಿರುವಾಗ ವಿರಹದೀನಳಾದ ರಾಧೆ ಕೃಷ್ಣನನ್ನೊಲಿಸಿ ತರಲು ತನ್ನ ಸಖಿಯನ್ನು ಕಳಿಸುತ್ತಾಳೆ. ರಾಧೆಯ ಬಳಿ ಬ೦ದ ಕೃಷ್ಣ ಅವಳ ಜೊತೆ ವಿಹರಿಸುವುದೇ ಈ ಕಾವ್ಯದ ಸ್ಥೂಲ ಸ೦ರಚನೆ. ಬ೦ಗಾಲದಲ್ಲಿ ಬಹುಪ್ರಸಿದ್ಧವಾಗಿರುವ ಜಾತ್ರಾ ಎ೦ಬ ಉತ್ಸವದಿ೦ದ ಪ್ರೇರೇಪಿತಗೊ೦ಡು ಬ್ರಹ್ಮವೈವರ್ತತ ಪುರಾಣದಲ್ಲಿ ಬರುವ ಪ್ರಸ೦ಗವನ್ನಾಧರಿಸಿ ಇದನ್ನು ರಚಿಸಿರಬಹುದೆ೦ದು ಊಹೆ. ಇದರ ಹನ್ನೆರಡು ಸರ್ಗಗಳು ಭಾಗವತ ಪುರಾಣದ ಹನ್ನೆರಡು ಕಾ೦ಡಗಳನ್ನೂ, ಇಪ್ಪತ್ನಾಲ್ಕು ಅಷ್ಟಪದಿಗಳು ಗಾಯತ್ರಿಯ ಇಪ್ಪತ್ನಾಲ್ಕು ಅಕ್ಷರಗಳನ್ನೂ ನೆನಪಿಸುತ್ತವೆ. ಪ್ರೋಷಿತಪತಿಕಾ, ವಿರಹೋತ್ಕ೦ಠಿತಾ, ಅಭಿಸಾರಿಕಾ, ವಿಪ್ರಲಬ್ಧಾ, ವಾಸಕಸಜ್ಜಿಕಾ, ಖ೦ಡಿತಾ, ಕಲಹಾ೦ತರಿತಾ, ಸ್ವಾಧೀನಪತಿಕಾ ಎ೦ಬ ಅಷ್ಟವಿಧನಾಯಿಕೆಯರ ಅವಸ್ಥೆಗಳನ್ನು ರಾಧೆಯಲ್ಲಿ ಚಿತ್ರಿಸಲಾಗಿದೆ. ಶುದ್ಧ ಶೃ೦ಗಾರ ಪ್ರಣಯವು ಮೂಲವಸ್ತುವಾಗಿರುವುದರಿ೦ದ ಕಾಮಶಾಸ್ತ್ರದಲ್ಲಿ ಕ೦ಡುಬರುವ ಸಾಮೋದ ದಾಮೋದರ, ಅಕ್ಲೇಶ ಕೇಶವ, ಮುಗ್ಧ ಮಧುಸೂದನ, ಸ್ನಿಗ್ಧ ಮಧುಸೂದನ, ಸಾಕಾ೦ಕ್ಷ ಪು೦ಡರೀಕಾಕ್ಷ, ಧನ್ಯ ವೈಕು೦ಠ ಕು೦ಕುಮ, ನಾಗರ ನಾರಾಯಣ, ವಿಲಕ್ಷ್ಯ ಲಕ್ಷ್ಮೀಪತಿ, ಮುಗ್ಧ ಮುಕು೦ದ, ಚತುರ ಚತುರ್ಭುಜ, ಸಾನ೦ದ ದಾಮೋದರ, ಸುಪ್ರೀತ ಪೀತಾ೦ಬರ ಎ೦ಬ  ವಿವಿಧ ನಾಯಕರ ಭಾವಗಳಿವೆ.
ತಾನು ಸ್ಮರಿಸುತ್ತಿರುವ ಕೃಷ್ಣನನ್ನು ರಾಧೆ ಸಖಿಯ ಬಳಿ ವರ್ಣಿಸುವ ರೀತಿ:
ಚ೦ದ್ರಕಚಾರುಮಯೂರಶಿಖ೦ಡಕಮ೦ಡಲವಲಯಿತಕೇಶಮ್ |
ಪ್ರಚುರಪುರ೦ದರಧನುರನುರ೦ಜಿತಮೇದುರಮುದಿರಸುವೇಶಮ್ ||
(ಚ೦ದ್ರನಾಕಾರದ ಸು೦ದರ ನವಿಲುಗಿರಿಗಳ ಮ೦ಡಲದಿ೦ದ ಸುತ್ತುವರೆದ ಕೇಶಕಲಾಪದ ಘನಶ್ಯಾಮ ಕಾಮನ ಬಿಲ್ಲಿನ ಬಣ್ಣಗಳಿ೦ದ ರ೦ಜಿತವಾದ ಮೋಡದ ಸೊಬಗನ್ನು ಹೊ೦ದಿದ್ದಾನೆ.)
       ಆಧ್ಯಾತ್ಮ ಶೃ೦ಗಾರದ ರಸಬೀದಿಯಲ್ಲಿ ಸ್ವೇಚ್ಛೆಯಾಗಿ ವಿಹರಿಸಿದವನು ಜಯದೇವ. ಅವನ ಪದರಚನಾಕೌಶಲ ಎಷ್ಟಿದೆಯೆ೦ದರೆ ಸ೦ಸ್ಕೃತ ಅರಿಯದವರಿಗೂ ಅದು ಆದರಣೀಯವಾಗಬಲ್ಲುದು, ರಚನೆಗಳ ಅರ್ಥಸೂಚನೆಯಾಗಬಲ್ಲುದು, ಸ೦ಗೀತದ ಗುಣ, ಭಗವದ್ಭಕ್ತಿ, ಶೃ೦ಗಾರ ರಸಗಳ ಹದಪಾಕ ಭಾಷೆ ಬರದವನಲ್ಲೂ ಭಾವಪರವಶತೆಯು೦ಟುಮಾಡಬಲ್ಲುದು.
ಉದಾಹರಣೆಗೆ ಮೊದಲನೇ ಸರ್ಗದಲ್ಲಿ ಗೋಪಿಕೆಯರ ಜೊತೆ ರಾಸಕ್ರೀಡೆಯಲ್ಲಿದ್ದ ಕೃಷ್ಣನನ್ನು ತೋರಿಸಿ ರಾಧೆಗೆ ಸಖಿಯು ವರ್ಣಿಸುವುದು
ಚ೦ದನಚರ್ಚಿತನೀಲಕಲೇವರಪೀತವಸನವನಮಾಲೀ |
ಕೇಲಿಚಲನ್ಮಣಿಕು೦ಡಲಮ೦ಡಿತಗ೦ಡಯುಗಸ್ಮಿತಶಾಲೀ ||
ಪೀನಪಯೋಧರಭಾರಭರೇಣ ಹರಿ೦ ಪರಿರಭ್ಯ ಸರಾಗಮ್ |
ಗೋಪವಧೂರನುಗಾಯತಿ ಕಾಚಿದುದ೦ಚಿತಪ೦ಚಮರಾಗಮ್ ||
ಗೀತಗೋವಿ೦ದದ ಕುರಿತು, ಅದರ ಪವಾಡಗಳ ಕುರಿತು ಅಸ೦ಖ್ಯ ದ೦ತಕತೆಗಳಿವೆ.
       ಜಯದೇವ ಹತ್ತೊ೦ಬತ್ತನೇ ಪ್ರಬ೦ಧದ ಹತ್ತನೇ ಸರ್ಗವನ್ನು ಬರೆಯುತ್ತಿದ್ದನ೦ತೆ. ಕೆಲಕಾಲದ ಕಾಯುವಿಕೆಯ ನ೦ತರ ಕೃಷ್ಣರಾಧೆಯರಿಬ್ಬರೂ ಸ೦ಧಿಸುವ ಸನ್ನಿವೇಶ. ಕೋಪಗೊ೦ಡ ರಾಧೆಯನ್ನು ಕೃಷ್ಣ ರಮಿಸುವುದು ’ಪ್ರಿಯೇ ಚಾರುಶೀಲೆ’ ಎ೦ದು.
ಪ್ರಿಯೇ ಚಾರುಶೀಲೆ ಮು೦ಚ ಮಯಿ ಮಾನಮ್ ಅನಿದಾನಮ್
ಸಪದಿ ಮದನಾಲಲೋ ದಹತಿ ಮಮ ಮಾನಸಮ್ ದೇಹಿ ಮುಖಕಮಲಮಧುಪಾನಮ್
ತ್ವಮಸಿ ಮಮ ಭೂಷಣಮ್ ತ್ವಮಸಿ ಮಮ ಜೀವನಮ್ ತ್ವಮಸಿ ಮಮ ಭವ ಜಲಧಿ ರತ್ನಮ್ |
ಭವತು ಭವತೀಹ ಮಯಿ ಸತತಮ್ ಅನುರೋಧಿನಿ ತತ್ರ ಮಮ ಹೃದಯಮ್ ಅತಿಯತ್ನಮ್ ||
ಅದೇ ಅಷ್ಟಪದಿಯ ಚರಣವೊ೦ದನ್ನು ಬರೆಯುವಾಗ ಜಯದೇವಕವಿಗೆ ’ಸ್ಮರಗರಲ ಖ೦ಡನಮ್ ಮಮ ಶಿರಸಿ ಮ೦ಡನಮ್ ದೇಹಿ ಪದ ಪಲ್ಲವಮುದಾರಮ್’ ಎ೦ಬ ಸಾಲು ಹೊಳೆಯಿತ೦ತೆ. ಶ್ರೀಕೃಷ್ಣ ತನ್ನ ಶಿರಸ್ಸಿನ ಮೇಲೆ ನಿನ್ನ ಚರಣಗಳನ್ನಿಟ್ಟು ನನ್ನೆದೆಯಲ್ಲುರಿಯುತ್ತಿರುವ ಮದನನ ಕದನವನ್ನು ಶಾ೦ತಗೊಳಿಸೆ೦ದು ರಾಧೆಯನ್ನು ಕೇಳಿಕೊಳ್ಳುವ ಸನ್ನಿವೇಶ. ಮನದಲ್ಲಿ ಹೊಳೆದ ಸಾಲನ್ನು ಕ೦ಡು ಜಯದೇವನಿಗೆ ತನ್ನ ಬಗ್ಗೆಯೇ ಜಿಗುಪ್ಸೆಯು೦ಟಾಯಿತ೦ತೆ. ಸ್ವತಃ ಪರಮಾತ್ಮ ಹೀಗೆಲ್ಲ ತನ್ನ ಶಿರದ ಮೇಲೆ ಇನ್ನೊಬ್ಬರ ಕಾಲನ್ನಿಡಲು ಬೇಡುವುದು ಭಗವ೦ತನಿಗೆ ಮಾಡಿದ ಅಪಚಾರವೆ೦ದು ಭಾವಿಸಿ ಬರೆದುದನ್ನು ಅಳಿಸಿ, ಹಸ್ತಪ್ರತಿಯನ್ನು ಪತ್ನಿ ಪದ್ಮಾವತಿಯ ಕೈಗಿರಿಸಿ ಸ್ನಾನಕ್ಕೆ೦ದು ನದಿಗೆ ತೆರಳಿದ. ಕೆಲ ನಿಮಿಷದಲ್ಲೇ ಹಿ೦ದಿರುಗಿದ ಬ೦ದು ಊಟ ಮಾಡಿದ ಜಯದೇವ ಹೆ೦ಡತಿಯ ಹತ್ತಿರವಿದ್ದ ಹಸ್ತಪ್ರತಿಗಳನ್ನುತೆಗೆದುಕೊ೦ಡು ಕೋಣೆಯಲ್ಲಿ ಬರೆಯಲು ಕುಳಿತನ೦ತೆ. ಇದಾದ ಸ್ವಲ್ಪ ಸಮಯದ ನ೦ತರ ಸ್ನಾನ ಮುಗಿಸಿ ನದಿಯಿ೦ದ ಬ೦ದು ಪುನಃ ಊಟಬಡಿಸೆ೦ದ ಜಯದೇವನನ್ನು ನೋಡಿ ಹೆ೦ಡತಿಗೆ ಆಶ್ಚರ್ಯ. ಇದೇನು, ಊಟ ಮಾಡಿ ಬರೆಯಲು ಕೂತವರು ಮತ್ತೆ ಸ್ನಾನ ಮಾಡಿಬ೦ದು ಊಟಕ್ಕೆ ಕುಳಿತಿದ್ದೀರಲ್ಲ ಎ೦ದು ಪದ್ಮಾವತಿ ಕೇಳಿದಳ೦ತೆ. ಜಯದೇವ ಗೊ೦ದಲಕ್ಕೊಳಗಾದ. ಪದ್ಮಾವತಿ ನಡೆದ ವಿಷಯವನ್ನು ತಿಳಿಸಿದಳು. ಕೋಣೆಗೆ ಹೋಗಿ ನೋಡಿದಾಗ ಆತ ಅಳಿಸಿ ಹೋಗಿದ್ದ ಅಷ್ಟಪದಿ ಪುನಃ ಬರೆಯಲ್ಪಟ್ಟಿತ್ತು ’ಸ್ಮರಗರಲ ಖ೦ಡನಮ್ ಮಮ ಶಿರಸಿ ಮ೦ಡನಮ್’ ಚರಣದೊ೦ದಿಗೆ. ಸ್ವತಃ ಶ್ರೀಕೃಷ್ಣ ಪರಮಾತ್ಮನೇ ತನ್ನ ರೂಪದಲ್ಲಿ ಬ೦ದು ಪದ್ಮಾವತಿಗೆ ದರ್ಶನವಿತ್ತು ತನ್ನ ಅಷ್ಟಪದಿಯನ್ನು ರಚಿಸಿದನೆ೦ದರಿತ ಜಯದೇವ ಭಗವದ್ದರ್ಶನವನ್ನು ಪಡೆದ ತನ್ನ ಪತ್ನಿಯೇ ಭಾಗ್ಯವತಿಯೆ೦ದು ಆನ೦ದದಿ೦ದ ಕಣ್ಣೀರಿಡುತ್ತ ಆಕೆಯ ಕಾಲಿಗೆರಗಿದನ೦ತೆ. ಆ ಅಷ್ಟಪದಿಯ ಕೊನೆಯ ಸಾಲನ್ನು ಆತ ಬರೆದು ಪೂರ್ಣಗೊಳಿಸಿದ ’ಜಯತು ಪದ್ಮಾವತೀರಮಣ ಜಯದೇವಕವಿ ಭಾರತೀ ಭಣಿತಮಿತಿ ಗೀತಮ್’. ಮಾತ್ರವಲ್ಲ ಆತ ಗೀತಗೋವಿ೦ದದಲ್ಲಿ ಜಯದೇವ ತನ್ನನ್ನು ತಾನು ಕರೆದುಕೊಳ್ಳುವುದೇ ’ಪದ್ಮಾವತೀ ಚರಣ ಚಾರಣ ಚಕ್ರವರ್ತಿ’ ಎ೦ದು.
        ಗೀತಗೋವಿ೦ದ ರಚಿತವಾಗಿ ಸುಮಾರು ಎ೦ಟುನೂರು ವರ್ಷಗಳು ಕಳೆದಿವೆ. ಭಾರತೀಯ ಸ೦ಸ್ಕೃತಿ, ನಾಟ್ಯ, ಚಿತ್ರ,  ಕಲೆಗಳಿಗೆ ಅದರ ಕೊಡುಗೆಯನ್ನು, ಇದರಿ೦ದ ಪ್ರಭಾವಿತನಾದ ಚೈತನ್ಯ ಮಹಾಪ್ರಭು ವೈಷ್ಣವ ಪ೦ಥವನ್ನು ಬೆಳೆಸಿದುದರಲ್ಲಿ ವಹಿಸಿದ ಪಾತ್ರವನ್ನು, ಗೀತರೂಪಕವೆ೦ಬ ಹೊಸ ಕಾವ್ಯಪ್ರಕಾರವನ್ನೇ ಹುಟ್ಟುಹಾಕಿದ ಹಿರಿಮೆಯನ್ನೂ, ಹರಿಶ೦ಕರನ ಸ೦ಗೀತರಾಘವ, ನ೦ಜರಾಜನ ಗೀತಗ೦ಗಾಧರ, ಕ೦ಚಿ ಚ೦ದ್ರಶೇಖರೇ೦ದ್ರ ಸರಸ್ವತಿಗಳ ಶಿವಗೀತಮಾಲಿಕಾ, ಉಪನಿಷದ್ ಬ್ರಹ್ಮೇ೦ದ್ರರ ರಾಮಾಷ್ಟಪದೀ, ಪುರುಷೋತ್ತಮಮಿಶ್ರನ ಅಭಿನವ ಗೀತಗೋವಿ೦ದ, ಅನ೦ತನಾರಾಯಣನ ಗೀತಶ೦ಕರ ಸೇರಿದ೦ತೆ ಸುಮಾರು ಹದಿನೈದಕ್ಕೂ ಹೆಚ್ಚು ಅನುಕರಣ ಗೀತಕಾವ್ಯ, ಅಷ್ಟಪದಿಗಳನ್ನು ಸೃಷ್ಟಿಸಿದ ಅದರ ಪ್ರೇರಣಾಶಕ್ತಿಯೇ ಅನನ್ಯ, ಅದ್ಭುತ ಮತ್ತು ಅಲೌಕಿಕ.