Pages

Thursday, March 21, 2019

ಯಾರೆಂದವರು ಹೋಳಿ ಬರಿ ಹಿಂದೂಗಳದ್ದೆಂದು?

 
 ತೀರ ಈಚೀಚೆಗೆ ದಕ್ಷಿಣದಲ್ಲಿ ಹಬ್ಬುತ್ತಿದೆಯೆಂಬುದನ್ನು ಬಿಟ್ಟರೆ ಹೋಳಿ ಮುಖ್ಯವಾಗಿ ಉತ್ತರ ಭಾರತದ ಹಬ್ಬವೇ. ನಾವೆಲ್ಲ ಚಿಕ್ಕಂದಿನಲ್ಲಿ ಹೋಳಿಯೆಂಬ ಹೆಸರು ಕೇಳಿದ್ದೇ ಅಪರೂಪ. ನಮ್ಮ ಉತ್ತರ ಕನ್ನಡದವರಿಗೆ ಅದು ಸುಗ್ಗಿ ಹಬ್ಬ. ಅದೂ ಕೂಡ ಹಾಲಕ್ಕಿ, ಕುಣುಬಿ ಮತ್ತು ಮರಾಠಿಗರಲ್ಲೇ ಆ ಭರಾಟೆ ಹೆಚ್ಚು. ಗುಮ್ಮಟೆ ಪಾಂಗ್ ನುಡಿಸುತ್ತ, ಧುಮ್ಸೋಲೆ ಎಂದು ಕೂಗುತ್ತಾ ಮನೆಮನೆಗೆ ಬರುವ ಸುಗ್ಗಿಕುಣಿತದ ತಂಡಗಳನ್ನು ನೋಡುವುದೇ ಒಂದು ಖುಷಿ. ಸಮೃದ್ಧಿಯ ಬೆಳೆ ಕೊಯ್ಲಿನ ಒಳಿತಿನ ಹಾಡುಗಳನ್ನು ಹಾಡುತ್ತ ಕಾಣಿಕೆಗಳನ್ನು ಪಡೆದುಕೊಂಡು ತಮ್ಮೂರಿಗೆ ಮರಳುತ್ತಾರೆ. ಕಾಮ ಎಂಬ ಆಕೃತಿಯನ್ನು ಸುಟ್ಟು ಹಾಕಿ ತಮ್ಮ ಮನದಲ್ಲಿರುವ ಕೆಟ್ಟ ಭಾವನೆಗಳನ್ನು ತೊರೆದುಕೊಳ್ಳುತ್ತಾರೆ. ನಂತರ ಎಲ್ಲರೂ ಗ್ರಾಮವೆಲ್ಲ ಮೆರವಣಿಗೆ ಹೊರಡುತ್ತಾರೆ, ಈ ಮೆರವಣಿಗೆಯಿಂದ ಗ್ರಾಮದಲ್ಲಿ ಒಳ್ಳೆಯ ಮಳೆ ಬೆಳೆ ಆಗುತ್ತದೆ, ಗ್ರಾಮಸ್ಥರು ರೋಗ ರುಜಿನಗಳಿಂದ ದೂರವಿರುತ್ತಾರೆ ಎಂಬುದು ನಂಬಿಕೆ. ಚಿಕ್ಕಂದಿನಲ್ಲಿ ಅದನ್ನು ಬಿಟ್ಟರೆ ಹೋಳಿಯ ದಿನ ಒಬ್ಬರಿಗೊಬ್ಬರು ಬಣ್ಣ ಎರಚುವುದನ್ನು ನಾವು ನೋಡಿದ್ದೇ ಟಿವಿಯಲ್ಲಿ. ಅಷ್ಟರಮಟ್ಟಿಗದು ಉತ್ತರದ ಸಂಪ್ರದಾಯವೇ. ಅಲ್ಲಿಯ ಹೋಳಿಯಾಚರಣೆಯ ಮಜವೇ ಬೇರೆ ಬಿಡಿ. ಇಡೀ ಊರಿಗೆ ಊರೇ ಬಣ್ಣದಲ್ಲಿ ಮುಳುಗೆದ್ದು ಒದ್ದೆಯಾಗುತ್ತದೆ. ಅದರಲ್ಲೂ ಮಥುರಾ, ಬೃಂದಾವನಗಳಂಥ ಸ್ಥಳಗಳಲ್ಲಂತೂ ಹೋಳಿಯ ಭಯಂಕರ ಸಂಭ್ರಮವನ್ನು ಅನುಭವಿಸಿಯೇ ತೀರಬೇಕು. ಎಷ್ಟೆಂದರೂ ಕೃಷ್ಣ ರಾಧೆಯರು ಹೋಳಿಯಾಡಿದ ಸ್ಥಳವದು.
ಹಾಲಕ್ಕಿಗಳ ಸುಗ್ಗಿ(ಚಿತ್ರಕೃಪೆ:ದಿನೇಶ್ ಮಾನೀರ್)

     ಭಾರತಕ್ಕೂ ಬಣ್ಣಗಳಿಗೂ ಬಿಡಿಸಲಾಗದ ಪುರಾನಾ ರಿಶ್ತಾ. ಭಿನ್ನ ಭಿನ್ನ ರಂಗುಗಳೆಲ್ಲ ಕಲೆತಲ್ಲವೇ ಭಾರತೀಯ ಸಂಸ್ಕೃತಿಯ ರಾಗಿಣಿಯಾಗಿದ್ದು. ಜಾತಿ, ಮತ, ಪಂಥಗಳಾಚೆ ಬೆಳೆದು ಭಾರತದ ನೈಜ ಶತರಂಗಿ ಬಣ್ಣಗಳನ್ನು ತೆರೆದಿಡುವ ಹಬ್ಬವದು ಹೋಳಿ. ಹಬ್ಬವೆಂಬುದು ಬರಿ ಆಚರಣೆಯಲ್ಲ, ಅದೊಂದು ಅನುಭವ. ಶಾಸ್ತ್ರವೊಂದೇ ಅಲ್ಲ, ಅದು ಸಂಪ್ರದಾಯ. ಅಲ್ಲಿ ಬರಿ ಸಂಸ್ಕೃತಿಯಿಲ್ಲ, ಫ್ಯಾಂಟಸಿಯೂ ಇದೆ. ಒಂದೊಂದು ಹಬ್ಬದ ಜೊತೆಗೂ ಸಾವಿರಾರು ಕತೆಗಳು ಹೆಣೆದುಕೊಂಡಿವೆ. ಹೋಳಿಹುಣ್ಣಿಮೆಯ ಅವೆಲ್ಲ ಕತೆಗಳನ್ನು ನೀವು ಕೇಳಿಯೇ ಇರುತ್ತೀರಿ.  ಹೋಳಿಯನ್ನು ಭಾರತದಲ್ಲಿ ನೂರಾರು ವರ್ಷಗಳಿಂದ ಆಚರಿಸಿಕೊಳ್ಳುತ್ತ ಬರಲಾಗಿದೆ. ಫಾಗುನ್, ಫಗ್, ಆಬ್-ಪಾಶಿ, ಈದ್-ಎ-ಗುಲಾಬಿ ಇನ್ನೂ ಎಷ್ಟೆಷ್ಟೋ ಹೆಸರುಗಳಿಂದ. ಧಮ್ಮಪದದಲ್ಲಿ ಬುದ್ಧ ಕೂಡ ಹೋಳಿಯಲ್ಲಿ ಪಾಲ್ಗೊಂಡ ಒಂದು ಘಟನೆಯ ಉಲ್ಲೇಖವಿದೆ. ಶುದ್ಧ ಜಾನಪದ ಹಿನ್ನೆಲೆಯ ಸುಗ್ಗಿಹಬ್ಬವಾದರೂ ಹೋಳಿಯು ಅವೈದಿಕವಲ್ಲವೆಂದು ನಿರೂಪಿಸುವ ಕೆಲಸವೂ ಮೀಮಾಂಸಾದರ್ಶನದ ಹೋಲಿಕಾ ಅಧಿಕರಣದಲ್ಲಿ ನಡೆದಿದೆ. ಸಂಸ್ಕೃತದ ಕವಿಗಳೆಲ್ಲ ಇದನ್ನು ನವಾನ್ನೇಷ್ಟಿ, ಪುಷ್ಪಪ್ರಚಾಯಿಕಾ, ವಸಂತೋತ್ಸವ, ಮದನೋತ್ಸವ, ಹೋಲಿಕೋತ್ಸವ, ಉದಕ್ಷ್ವೋಡಿಕಾ ಇತ್ಯಾದಿ ಇತ್ಯಾದಿ ವಿಭಿನ್ನ ಹೆಸರುಗಳಿಂದ ಕರೆದಿದ್ದಾರೆ. ಹೋಳಿಯೆಂಬುದು ಹರಾಮ್ ಎಂದು ಜಾಕೀರ್ ನಾಯ್ಕ್ ಎಷ್ಟು ಬಡಕೊಂಡರೂ, ಸರ್ಫ್ ಎಕ್ಸೆಲ್ ಜಾಹಿರಾತು ನೋಡಿ ಭಕ್ತಕೋಟಿ ಕುಂಯ್ಯೋ-ಮರ್ರೋ ಎಂದರೂ ಹಿಂದೂ-ಇಸ್ಲಾಮ್‌ಗಳೆರಡೂ ಇತಿಹಾಸದುದ್ದಕ್ಕೂ ಹೋಳಿಯ ಬಣ್ಣಗಳಲ್ಲಿ ಮಿಂದೆದ್ದಿವೆ. ಹಿಂದೂಗಳ ಕತೆಬಿಡಿ. ಇಸ್ಲಾಮಿನ ಸುಪ್ರಸಿದ್ಧ ಕವಿಗಳೆಲ್ಲ ಹೋಳಿಯ ಮೇಲೆ ಟನ್ನುಗಟ್ಟಲೆ ಕವಿತೆಗಳನ್ನು ರಚಿಸಿದ್ದಾರೆ. ಮುಘಲರ ಕಾಲದಲ್ಲಿ ಈದ್‌ಗಿಂತ ವಿಜೃಂಭಣೆಯಿಂದ ಹೋಳಿಯಾಡಲಾಗುತ್ತಿತ್ತು. ಹೋಳಿಗೆ ಈಪಾಟಿ ಪ್ರಸಿದ್ಧಿ ಬರಲು ಮುಕ್ಕಾಲಂಶ ಕೊಡುಗೆ ಮೊಘಲರದೇ.  ’ಆಜ್ ಹೋರೀ ರೇ ಮೋಹನ್ ಹೋರೀ, ಅಬ್ ಕ್ಯುಂ ದೂರ ಬೈಠೇ ನಿಕಸೋ ಕುಂಜ್ ಬಿಹಾರಿ’ ಎಂಬ ಅಕ್ಬರನ ಮಾತನ್ನು ಇಬ್ರಾಹಿಂ ರಸಖಾನ್ ತನ್ನ ಕವಿತೆಗಳಲ್ಲಿ ಹಲವು ಬಾರಿ ಸ್ಮರಿಸಿದ್ದಾನೆ. ’ಕ್ಯುಂ ಮೂಹ್ ಪೆ ಮಾರೆ ರಂಗ್ ಕಿ ಪಿಚಕಾರಿ, ದೇಖೋ ಕುಂವರ್ಜಿ ದೂಂಗಿ ಗಾರಿ’ ಎಂದು ಬಾದಷಾ ಬಹದೂರ್ ಷಾ ಜಾಫರ್ ಬರೆದ ಖ್ಯಾತ ಪದ್ಯವೊಂದಿದೆ. ಆತನ ಕಾಲದಲ್ಲಿ ಕಡುಬಡವನೂ ಅರಸನ ಹಣೆಗೆ ಗುಲಾಲು ಮೆತ್ತುವ ಅವಕಾಶ ಪಡೆಯುತ್ತಿದ್ದ. ಸ್ವತಃ ಷಹಜಹಾನ್ ಹೋಳಿಯನ್ನು ಈದ್-ಎ-ಗುಲಾಬಿ(ಗುಲಾಬಿ ಈದ್), ಆಬ್-ಎ-ಪಾಶಿ(ಬಣ್ಣದ ಹೂಮಳೆ)ಎಂದು ಕರೆದ. ಅವನಿಗಿಂತ ಮೊದಲು ತಜ್ಕ್-ಎ-ಜಹಾಂಗೀರಿಯಲ್ಲಿ ಜಹಾಂಗೀರ ಕೂಡ ಹೋಳಿ ಉತ್ಸವವನ್ನು ಉಲ್ಲೇಖಿಸಿದ್ದಾನೆ. ಗೋವರ್ಧನ ಹಾಗೂ ರಸಿಕರಂಥ ಮೊಘಲರ ಆಸ್ಥಾನಕವಿಗಳು ಜಹಾಂಗೀರ್ ತನ್ನ ಬೇಗಂ ನೂರ್‌ಜಹಾನಳೊಡನೆ ಹೋಳಿಯಾಡಿದ ಘಟನೆಗಳನ್ನು ಬಹುರಮ್ಯವಾಗಿ ಚಿತ್ರಿಸಿದ್ದಾರೆ. ಮುಘಲ್ ಬಾದಶಾಹ್ ಮಹಮ್ಮದ್ ಶಾ ರಂಗೀಲಾ ತನ್ನ ಜನಾನಾದವರೊಡನೆ ಹೋಳಿಯಾಡುವ ಪೇಂಟಿಂಗುಗಳಂತೂ ವಿಶ್ವಪ್ರಸಿದ್ಧಿ. ನಿಧಾಮಲ್ ಹಾಗೂ ಭೋಪಾಲ್ ಸಿಂಗ್ ಎಂಬಿಬ್ಬರು ಚಿತ್ರಕಾರರು ರಚಿಸಿದ ಮುಘಲರ ಕಾಲದ ಹೋಳಿ ಚಿತ್ರಗಳನ್ನು ಇವತ್ತಿಗೂ ನ್ಯೂಯಾರ್ಕಿನ ಏಶಿಯಾ ಸೊಸೈಟಿ ಮ್ಯೂಸಿಯಮ್ಮಿನಲ್ಲಿ ಕಾಣಬಹುದು. ಇದನ್ನು ನೋಡಿಯೇ ಉರ್ದುವಿನ ಸುಪ್ರಸಿದ್ಧ ಕವಿ ಮುನ್ಷಿ ಮೊಹಮ್ಮದ್ ಝಕೌಲ್ಲಾ ತನ್ನ ’ತಾರೀಕ್-ಎ-ಹಿಂದೂಸ್ತಾನಿ’ಯಲ್ಲಿ ಹೇಳಿರಬೇಕು ’ಯಾರಂದವರು ಹೋಳಿ ಹಿಂದುಗಳದ್ದೆಂದು?’. ಇನ್ನೂ ಮುಂದುವರೆದು ’ಮೆರೆ ಹಜರತ್ ನೆ ಮದೀನಾ ಮೆಂ ಮನಾಯಿ ಹೋಲಿ’, ನನ್ನ ದೇವರು ಮದೀನಾದಲ್ಲೂ ಹೋಳಿಯಾಡುತ್ತಾನೆ ಎಂದುಬಿಟ್ಟಿದ್ದ ಆತ. ನಜೀರ್ ಅಕ್ಬರ್ ಬಂದಿ, ಮೆಹಜೂರು ಲಖನವಿ, ಶಾಹ್ ನಿಯಾಜ್, ಮೀರ್ ತಾಕಿ ಮೀರ್‌ರಂಥ ಮುಘಲ ಜಮಾನಾದ ಕವಿಸಾಮ್ರಾಟರೆಲ್ಲ ಹೋಳಿಯ ಬಗ್ಗೆ ಹಾಡು ಹಾಡಿ ಕುಣಿದಿದ್ದಾರೆ. ಮೊಘಲರ ಕಾಲದಿಂದ ಹೋಳಿ ಅಷ್ಟು ವಿಸ್ತೃತ ಸ್ವರೂಪ ಪಡೆದಿತ್ತು. ಆಗ ಅದೊಂದು ಹಬ್ಬವೆನ್ನುವುದಕ್ಕಿಂತ ಅದೊಂದು ಭಾವೈಕ್ಯತೆಯ ಪರ್ವವಾಗಿತ್ತು. ಔರಂಗಜೇಬನ ಮಗ ಷಾ ಆಲಂ ಹೋಳಿಯ ಬಗ್ಗೆ ’ನಾದಿರಾತ್-ಎ-ಶಾಹಿ’ ಎಂಬ ಅಪರೂಪದ ಕೃತಿಯೊಂದನ್ನು ರಚಿಸಿದ್ದಾನೆ. ಇದು ಬಹಳಷ್ಟು ಕಾರಣಗಳಿಗೆ ವೈಶಿಷ್ಟ್ಯಪೂರ್ಣ. ಈ ಉರ್ದು ಕೃತಿ ದೇವನಾಗರಿ ಲಿಪಿಯಲ್ಲಿ ರಚಿಸಲ್ಪಟ್ಟಿದೆ ಎನ್ನುವುದೂ ಅದರಲ್ಲೊಂದು.  ಅದರ ಒಂದು ಸಾಲು - 
ಲೇ ಪಿಚಕಾರಿ ಚಲಾಯೇ ಲಲಾ, ತಬ್ ಚಂಚಲ್ ಚೋಟ್ ಬಚಾಏ ಗಯೀ ಹೈ | 
ಅಪನೀ ನಾಕ್ ಸು ಖೇಳತ್ ಹೈ, ಕಹಾ ಚಾತುರ ನಾರ ಖಿಲಾರ್ ನಯೀ ಹೈ ||
ನಿಧಾಮಲ್ ಬಿಡೀಸಿದ ಮಹಮ್ಮದ್ ಷಾ ರಂಗೀಲಾ(೧೭೦೨-೧೭೪೮)ನ ಚಿತ್ರಪಟ

ಹೋಳಿಯಾಡುತ್ತಿರುವ ಜಹಾಂಗೀರ್(೧೬೩೫)

ಜಹಾಂಗೀರನದೇ ಇನ್ನೊಂದು ಚಿತ್ರಪಟ

ಭೂಪಾಲ್ ಸಿಂಗ್ ರಚಿಸಿದ ಮಹಮ್ಮದ್ ಷಾನ ಹೋಳಿ ಆಚರಣೆ(೧೭೩೫)

ಮೀರ್ ಕಲನ್ನಿನ ಚಿತ್ರಪಟ, ಮುಘಲರ ಜಮಾನಾದ ಹೋಳಿ

ಗೋಲ್ಕೋಂಡಾದ ನವಾಬನೂ ಹೋಳಿಯಾಡುತ್ತಿದ್ದ, ೧೮೦೦, ನ್ಯಾಶನಲ್ ಮ್ಯೂಸಿಯಂ, ದೆಲ್ಲಿ
 ನಾಥ ಸಂಪ್ರದಾಯದ ಸಾರ್ವಕಾಲಿಕ ಶ್ರೇಷ್ಟ ಸೂಫಿ ಸಂತನಾದ ಬುಲ್ಲೇ ಷಾನ ಪ್ರಸಿದ್ಧ ಪಂಜಾಬಿ ಗೀತೆಯೊಂದಿದೆ ಹೋಲಿಯ ಬಗ್ಗೆ. 
ಹೋಲಿ ಖೇಲೂಂಗಿ, ಕೆಹ್ ಬಿಸ್ಮಿಲ್ಲಾಹ್
ನಾಮ್ ನಬಿ ಕಿ ರತನ್ ಚಡಿ, ಬೂಂದ್ ಪಡಿ ಅಲ್ಲಾಹ್ ಅಲ್ಲಾಹ್
ರಂಗ್ ರಂಗೀಲೀ ಓಹಿ ಖಿಲಾವೆ, ಜಿಸ್ ಸೀಖೀ ಹೋ ಫನಾ ಫಿ ಅಲ್ಲಾಹ್
’ಅಲಸ್ತು ಬಿ ರಬ್ಬಿಕುಮ್’ ಪ್ರಿತಮ್ ಬೋಲೇ, ಸಬ್ ಸಖಿಯಾಂ ನೆ ಘೂಂಗಟ್ ಖೋಲೆ
’ಕಲೂ ಬಲಾ’ ಯೂಂ ಹಿ ಕರ್ ಬೋಲೇ, ’ಲಾ ಇಲಾಹ್ ಇಲ್ಲಲ್ಲಾಹ್’
ಹೋಲೀ ಖೇಲೂಂಗಿ, ಕೆಹ್ ಬಿಸ್ಮಿಲ್ಲಾಹ್
ಪ್ರಪಂಚದ ದೇಶಗಳೆಲ್ಲ ದ್ವೇಷ, ಅಸಹನೆ, ಧಾರ್ಮಿಕ ಮೂಲಭೂತವಾದದ ಬೆಂಕಿಯಲ್ಲಿ ಬೇಯುತ್ತಿರುವಾಗ ಇಂಥೊಬ್ಬ ಪಂಥಗಳನ್ನು ಮೀರಿದ ಅದ್ಭುತ ದಾರ್ಶನಿಕನೊಬ್ಬನಿದ್ದನೆಂದು ಜಗತ್ತಿಗೆ ತೋರಿಸುವುದಕ್ಕಿಂತ ಹೆಚ್ಚಿನ ಮದ್ದೇನಿದೆ? ಮುನ್ನೂರು ವರ್ಷಗಳ ಹಿಂದೆಯೂ ಇದೇ ಸ್ಥಿತಿಯಿತ್ತು. ಅದೂ ಔರಂಗಜೇಬನ ಕಾಲದಲ್ಲಿ. ಈಗ ಸರ್ಕಾರವನ್ನು ಟೀಕಿಸುವುದೇ ದೇಶದ್ರೋಹವೆನಿಸಿಕೊಂಡಂತೆ ಆಗ ರಾಜನ ವಿರುದ್ಧ ಉಸಿರೆತ್ತುವುದು ಧರ್ಮದ್ರೋಹವೆನಿಸಿತ್ತು. ಸಂಗೀತ, ನಾಟ್ಯಗಳನ್ನೆಲ್ಲ ಹರಾಮ್ ಎಂದು ಘೋಷಿಸಲಾಗಿತ್ತು. ಬುಲ್ಲೇ ಷಾ ಮೊಘಲರ ವಿರುದ್ಧ ತಿರುಗಿ ಬಿದ್ದ. ಗುರುಗೋವಿಂದ ಸಿಂಗರು ಔರಂಗಜೇಬನ ವಿರುದ್ಧ ಕತ್ತಿ ಎತ್ತಿದರೆ, ಬುಲ್ಲೆ ಷಾ ಎಕ್‌ತಾರಾ ಹಿಡಿದು ಪಂಜಾಬಿನ ಹಳ್ಳಿಗಳಿಗೆ ತೆರಳಿ ಜನರನ್ನು ಜಾಗರೂಕರನ್ನಾಗಿಸಿದ. ಔರಂಗಜೇಬ ಬರಿ ಹಿಂದೂದ್ವೇಷಿಯಲ್ಲ. ಷಿಯಾ ಸಂಪ್ರದಾಯ ಪಾಲಿಸುತ್ತಿದ್ದ ಕಾರಣಕ್ಕೆ ತನ್ನ ತಮ್ಮನನ್ನೇ ಕೊಂದ ಮನುಷ್ಯದ್ವೇಷಿ. ಅಂಥ ಕಾಲದಲ್ಲೇ ಬುಲ್ಲೇ ಷಾ ಹಿಂದೂ-ಇಸ್ಲಾಮುಗಳೆರಡನ್ನೂ ತಿರಸ್ಕರಿಸಿ ಮೊದಲು ಮನುಶ್ಯರಾಗಲು ಕರೆಕೊಟ್ಟ.
ಮಕ್ಕಾ ಗಯಾಂ, ಗಲ್ ಮುಕ್ತೀ ನಹೀಂ
ಪಾವೇಂ ಸೊ ಸೊ ಜುಮ್ಮೇ ಪಾರ್ ಆಯೀ |
ಗಂಗಾ ಗಯಾ, ಗಲ್ ಮುಕ್ತೀ ನಹೀಂ
ಪಾವೇಂ ಸೋ ಸೋ ಗೋಟೇ ಖಾಯೀಂ|
ಬುಲ್ಲೇ ಷಾ ಗಲ್ ತಂಯೋ ಮುಕ್ತೀ
ಜದೋಂ ಮೇಂ ನು ದಿಲ್ಲೋಂ ಗವಾಯಿ ||
ಬುಲ್ಲೇ ಷಾ
ಉರ್ದು ಸಾಹಿತ್ಯದಲ್ಲಿ ಹೋಳಿಗೆ ಮೀಸಲಾದ ರಚನೆಗಳೆಷ್ಟೆಂದು ಲೆಕ್ಕವಿಟ್ಟವರಿಲ್ಲ. ಅವುಗಳಲ್ಲಿ ಮಹಮ್ಮದ್ ಕತೀಲನ ’ಹಫ್ತ್ ತಮಾಶಾ’ ಎಂಬ ಪರ್ಷಿಯನ್ ಕೃತಿ ಹೋಳಿಯ ಬಗ್ಗಿನ ಕೃತಿಗಳಲ್ಲೇ ಅತ್ಯುತ್ತಮವೆಂದು ವಿಮರ್ಶಕರು ಪರಿಗಣಿಸುತ್ತಾರೆ. ಬೃಜ್ ಮತ್ತು ಬುಂದೇಲಖಂಡದ ರಂಗಿನಾಚರಣೆಯ ಬಗ್ಗೆ ಕುಲಿ ಕುತುಬ್ ಷಾ ಹೈದ್ರಾಬಾದಿ ಉರ್ದುವಿನಲ್ಲಿ ಬರೆದ ಪದ್ಯಗಳೂ ಇಲ್ಲಿ ಸ್ಮರಣಾರ್ಹ. ವಾಜಿದ್ ಸೆಹ್ರಿ, ಫಯಾಜ್ ದೆಹಲವಿ, ನಾಜಿರ್ ಅಕ್ಬರಾಬಾದಿಗಳ ಹೋಳಿಯ ಕವಿತೆಗಳು ಸಾಟಿಯಿಲ್ಲದವು.  ನವಾಬ್ ಅಸಫ್-ಉದ್ದೌಲನ ಆಸ್ಥಾನದಲ್ಲಿದ್ದ ಮೀರ್ ತಾಕಿ ಮೀರನ ಜಶ್ನೆ-ಹೋಲಿ ಇಂದಿಗೂ ಹಾಡಲ್ಪಡುತ್ತದೆ.   
ಅವುಗಳೆಲ್ಲವುಗಳಿಗೆ ಕಳಸವಿಟ್ಟಂತಿರುವುದು ಅಮೀರ್ ಖುಸ್ರೋನ ರಚನೆ. ಖುಸ್ರೋ ಒಂದು ಕಡೆ ಹೇಳುತ್ತಾನೆ:
ಆಜ್ ರಂಗ್ ಹೈ ಹೇ ಮಾನ್ ರಂಗ್ ಹೈ
ಮೊರೇ ಮೆಹಬೂಬ್ ಕಾ ಘರ್ ರಂಗ್ ಹೈ
ಸಜನ್ ಮಿಲಾವರಾ, ಸಜನ್ ಮಿಲಾವರಾ ಮೊರೆ ಆಂಗನ್ ಕೊ
ಮೊಹೆ ಪೀರ್ ಪಾಯೋ ನಿಜಾಮುದೀನ್ ಔಲಿಯಾ.
ದೇಸ್ ಬಿದೇಸ್ ಮೇಂ ಢೂಂಡ್ ಫಿರೇ ಹೋ
ತೊರಾ ರಂಗ್ ಮನ ಭಾಯೋ ರಿ
ಜಗ್ ಉಜಿಯಾರೋ, ಜಗತ್ ಉಜಿಯಾರೋ
ಮೆಂ ತೋ ಐಸೋ ರಂಗ್ ಔರ್ ನಹಿಂ ದೆಖಿ ರೇ
ಮಂ ತೋ ಜಬ್ ದೇಖೂಂ ಮೊರೆ ಸಂಗ್ ಹೈ
ಆಜ್ ರಂಗ್ ಹೈ ಹೇ ಮಾನ್ ರಂಗ್ ಹೈ ರಿ
ಪ್ರಾಯಶಃ ಉರ್ದುವಿನಲ್ಲಿ ಹೋಳೀಗೆ ರಂಗುತುಂಬಿದ ಮೊದಮೊದಲ ರಚನೆಯಿದು. ಆಮೇಲೆ ಬಂದ ಎಲ್ಲ ಸೂಫಿಗಳೂ ಇದೇ ರಂಗಿನಲ್ಲಿ ಹೋಳಿಯಾಡಿದವರು. ಆ ಸಮಯದಲ್ಲಿ ಹಿಂದೂಮುಸ್ಲೀಮರಿಬ್ಬರಿಗೂ ನಿಧಾನವಾಗಿ ಒಬ್ಬರ ರಂಗು ಇನ್ನೊಬ್ಬರು ತುಂಬಿಕೊಳ್ಳತೊಡಗಿದ್ದರು. ಆ ರಂಗು ’ಗಗನಮಂಡಲ ಬೀಚ್ ಹೋಲೀ ಮಚೀ ಹೈ, ಕೊಯಿ ಗುರು ಗಮ್ ತೇ ಲಖಿ ಪಾಯೀ’ ಎಂದ ಕಬೀರನ ದೋಹೆಗಳಲ್ಲೂ ಕಾಣಬಹುದು. 
ಫಗುವಾ ನಾಮ ದಿಯೋ ಮೊಹಿ ಸತಗುರು, ತನ ಕೀ ತಪನ ಬುಝಾಯೀ’ ಎಂದ ಕಬೀರ ಸ್ವತಃ ಫಗುವಾ ಆಗಿಬಿಟ್ಟ. ಕಬೀರನಿಗೇ ಹೋಳಿ ಇಷ್ಟು ಹುಚ್ಚು ಹಿಡಿಸಿದ್ದರೆ ಸಾಮಾನ್ಯರ ಪಾಡೇನು? 
ಝೂಲತ್ ರಾಧಾ ಸಂಗ್, ಗಿರಿಧರ್ ಝೂಲತ್ ರಾಧಾ ಸಂಗ್ | 
ಅಬೀರ್ ಗುಲಾಲ್ ಕೀ ಧೂಮ್ ಮಚಾಯೀ, ಡಾರತ್ ಪಿಚಕಾರೀ ರಂಗ್ || 
ಎಂದಸಂತ  ಮೀರಾಳೂ ಇದೇ ರಂಗಿನಲ್ಲಿ ಮಿಂದೆದ್ದವಳು. ಮೀರಾಳಂತೆ ಕೃಷ್ಣನೊಂದಿಗೆ ಹೋಳಿಯಾಡಿದವರಲ್ಲಿ ’ಸೋಹೀ ಚೂನರಯಾ ರಂಗ್ ದೇ ಮೋಕಾ, ಓ ರಂಗರೇಜ್ ರಂಗೀಲೇ ಯಾರ್’ ಎಂದ ಶಾಹ್ ತುರಾಬ್ ಅಲಿ ಕಲಂದರನೂ ಒಬ್ಬ. ಕಟ್ಟಾ ಮುಸ್ಲೀಮನಾದರೂ
 ’ಶಾಮ್ ಬಿಹಾರಿ ಚತುರ್ ಖಿಲಾರೀ, ಖೇಲ್ ರಹಾ ಹೋರೀ ಸಖಿಯನ್ ಮಾ | 
ಅಬ್ ಕೀ ಹೋರೀ ಕಾ ರಂಗ್ ನ ಪೂಛೋ, ಧೂಮ್ ಮಚೀ ಹೈ ಬೃಂದಾವನ್ ಮಾ|
ಹಾತ್ ಲಿಯೆ ಪಿಚಕಾರೀ ಫಿರತ್ ಹೈ, ಅಬೀರ ಗುಲಾಲ್ ಭರೇ ದಾವನ ಮಾ |
ಕೈಸೆ ಸಖೀ ಕೋವೂ ನಿಕಸೆ ಮಂದಿರ, ಠಾಡೋ ಹೈ ಡೀಠ್ ಲಂಗರ್ ಆಂಗನ ಮಾ |
ಮೋ ಕಾ ಕಹಾಂ ವಹ ಢೂಂಢ್ ಪಾವೈ, ಮೇಂ ತೋ ಛುಪೀ ಹೂಂ ತುರಾಬ ಕೆ ಮನ ಮಾ||’ ಎಂದ ಕಲಂದರ ಯಾವ ಮೀರಳಿಗೆ ಕಮ್ಮಿ?
ಹದಿನೆಂಟನೇ ಶತಮಾನದಲ್ಲಿ ನಡೆದ ಭಕ್ತಿ ಚಳುವಳಿಯಲ್ಲಿ ಹಲವಾರು ನಿರ್ಗುಣ ಸಂತರು ಆಗಿಹೋದರು. ಅವರಲ್ಲಿ ಎರಡು ಪ್ರಮುಖ ಹೆಸರುಗಳು ಗುಲಾಲ್ ಸಾಹೇಬ್ ಹಾಗೂ ಬೀಖಾ ಸಾಹೇಬ್. ಇಬ್ಬರ ರಚನೆಗಳಲ್ಲೂ ಹೋಳಿ ಹಲವಷ್ಟು ಸಲ ಇಣುಕಿದೆ.
ಕೋಊ ಗಗನ ಮೇಂ ಹೋರೀ ಖೇಲೈ
ಪಾಂಚ್ ಪಚೀಸೋ ಸಖಿಯಾಂ ಗಾವಂಹೀ ಬಾನಿ ದಸೌ ದಿಸಿ ಮೆಲೈ
- ಗುಲಾಲ್ ಸಾಹೇಬ್
ಮನ ಮೇಂ ಆನಂದ್ ಫಾಗ್ ಉಠೋ ರೀ
ಇಂಗಲಾ ಪಿಂಗಲಾ ತಾರೀ ದೇವೈ ಸುಖಮನ್ ಗಾವತ್ ಹೋರಿ
- ಭೀಖಾ ಸಾಹೆಬ್
ದೇವಾ ಶರೀಫ್‌ನ ಉಲ್ಲೇಖವಿಲ್ಲದೇ ಭಾರತದಲ್ಲಿ ಹೋಳಿಯ ಆಚರಣೆಯ ಬಗ್ಗೆ ಹೇಳಿದರೆ ಅದು ಪೂರ್ತಿಯಾದಂತೆನಿಸುವುದಿಲ್ಲ. ಬಾರಾಬಂಕಿಯಲ್ಲಿ ಹಜರತ್ ವಾರಿಸ್-ಎ-ಪಾಕ್ ಎಂಬ ದರ್ಗಾವಿದೆ. ಹಜರತರ ಕಾಲದಿಂದಲೂ ಈ ಸ್ಥಳ ಹೋಳಿಹಬ್ಬಕ್ಕೆ ಹೆಸರುವಾಸಿ. ವಾರಿಸ್ ಅಂದೇ ಕರೆಕೊಟ್ಟಿದ್ದ ’ಧರ್ತಿ ಅಂಬರ್ ಝೂಮ್ ರಹೇ ಹೈಂ ಬರಸ್ ರಹಾ ಹೈ ರಣ್ಗ್, ಆವೋ ವರ್ಸಿಯಾಂ ಹೋಲಿ ಖೇಲೇಂ ವಾರಿಸ್ ಪಿಯಾ ಕೆ ಸಂಗ್’. ಇದು ಹೋಳೀಯಾಚರಿಸುವ ದೇಶದ ಏಕೈಕ ದರ್ಗಾ. ಅಂದು ಗುಲಾಲನ್ನೆರೆಚಲು ದೇಶದ ಮೂಲೆಮೂಲೆಯಿಂದ ಜನ ಇಲ್ಲಿಗಾಗಮಿಸುತ್ತಾರೆ. ಮಾತ್ರವಲ್ಲ, ಇಲ್ಲಿ ವರ್ಷಂಪ್ರತಿ ಎರಡು ಬಾರಿ ಉರುಸ್ ನಡೆಯುತ್ತದೆ. ಒಮ್ಮೆ ಸಫರ್ ತಿಂಗಳಲ್ಲಿ ಮುಸ್ಲೀಮರು ನಡೆಸಿಕೊಟ್ಟರೆ, ಇನ್ನೊಮ್ಮೆ ಕಾರ್ತಿಕ ಪೌರ್ಣಿಮೆಯಂದು ಹಿಂದೂಗಳು ನಡೆಸಿಕೊಡುವುದು. 
ಹಿಂದೂಸ್ತಾನದ ಮಣ್ಣಿನ ಗುಣವೇ ಅದಲ್ಲವೇ? ಇಲ್ಲಿ ಕೇಸರಿ ಬಣ್ಣವೂ ಇದೆ, ಹಸಿರೂ ಇದೆ, ಬಿಳಿಯೂ ಇದೆ. ಅವೆಲ್ಲವೂ ಸೇರಿಯೇ ಭಾರತವೆಂಬ ರಂಗೋಲಿಯಾಗಿದ್ದು. ಅನಾಮಿಕ ಸೂಫಿ ಕವಿಯೊಬ್ಬ ಹೇಳಿದಂತೆ
ರಂಗ್ ಹೋ, ಗುಲಾಲ್ ಹೋ, ವಿಶಾಲ್ ಹೀ ವಿಶಾಲ್ ಹೋ | ಯಾರ್ ಸಂಗ್ ಮಯ ಪಿಯೋ, ಯಾರ್ ಹೀ ಹಲಾಲ್ ಹೋ ||
ಹಾಜಿ ವಾರಿಸ್ ಅಲಿ ಷಾಹ್ ದರ್ಗಾದಲ್ಲಿ ವರ್ಷಂಪ್ರತಿ ಆಚರಿಸಲ್ಪಡುವ ಹೋಳಿ
ಹೌದು. ಬಣ್ಣಗಳಿಗೆ ಧರ್ಮವಿಲ್ಲ. ಬಣ್ಣಗಳಿಲ್ಲದೇ ಬದುಕಿಲ್ಲ. ಬದುಕು ಬಣ್ಣಗಳಂತೆ ರಂಜನೀಯವಾಗಿರಬೇಕೆಂದು ಬಯಸುವುದು ಸಹಜ ಧರ್ಮ. 
ಬದುಕು ಬಣ್ಣವಾಗಲಿ. ಬಣ್ಣಗಳಂತೆ ವಿಶಾಲವಾಗಲಿ. ಪವಿತ್ರವಾಗಲಿ.
ಕಹಿಂ ಅಬೀರ್ ಕೀ ಖುಷಬೂ, ಕಹಿಂ ಗುಲಾಲ್ ಕೆ ರಂಗ್
ಕಹಿಂ ಪರ್ ಶರ್ಮ್ ಸೆ ಲಿಪಟೆ ಹುಯೆ ಜಮಾಲ್ ಕಾ ರಂಗ್
ಚಲೆ ಭೀ ಆಓ ಭುಲಾಕರ್ ಕೆ ಸಬ್ ಗಿಲೆ ಶಿಕವೇ
ಬರಸನಾ ಚಾಹಿಯೇ ಹೋಲಿ ಕೆ ದಿನ್ ವಿಸಾಲ್ ಕಾ ರಂಗ್

ಹೋಲಿ ಮುಬಾರಕ್. ಸರ್ಫ್ ಎಕ್ಸೆಲ್ ಜಾಹಿರಾತಿನಿಂದ ಹಿಂದೂ ಧರ್ಮಕ್ಕೆ ಅವಮಾನವಾಯ್ತೆಂದುಕೊಂಡ ಎಲ್ಲರ ಆತ್ಮಕ್ಕೂ ಶಾಂತಿ ಸಿಗಲಿ.

Saturday, October 6, 2018

ಟಿಪ್ಪು ಮತ್ತು ನನ್ನ ಕ್ಯಾಲಿಕಟ್ ಟ್ರಿಪ್ಪು - ೧

      
 ಕಲ್ಲಿಕೋಟೆ ಉರುಫ್ ಕ್ಯಾಲಿಕಟ್ ಉರುಫ್ ಕೊಝಿಕೋಡ್ ನನ್ನ ಮೆಚ್ಚಿನ ತಾಣಗಳಲ್ಲೊಂದು. ಕಳೆದ ವಾರ ಗೆಳತಿ ಹಿತಳ ಮದುವೆಗೆ ಕಲ್ಲೀಕೋಟೆಗೆ ಹೋಗಿ ಕೆಲ ದಿನ ಅಲ್ಲೇ ಉಳಿಯುವ ಪ್ರಸಂಗ ಬಂತು. ಪ್ರವಾಸಿ ತಾಣವೆನ್ನುವುದಕ್ಕಿಂತ ಕಲ್ಲೀಕೋಟೆ ಐತಿಹಾಸಿಕವಾಗಿ ನನಗೆ ಅಚ್ಚುಮೆಚ್ಚು. ವಾಸ್ಕೋಡಿಗಾಮನ ಕಥೆಯಂತೂ ಗೊತ್ತೇ ಇದೆ. ಅದಕ್ಕೂ ಮೊದಲು ಸಾವಿರಾರು ವರ್ಷಗಳ ಹಿಂದೆ ಕಲ್ಲಿಕೋಟೆಯ ಕಡಲುಂಡಿಯು ಸಂಗಂ ಸಾಹಿತ್ಯದ ಕಾಲದಲ್ಲಿ ತೊಂಡಿ ಎಂಬ ಚೇರರ ರಾಜಧಾನಿಯಾಗಿತ್ತು. ೧೨ನೇ ಶತಮಾನದಲ್ಲಿ ಚೇರರ ಅವಸಾನದ ನಂತರ ಪ್ರವರ್ಧಮಾನಕ್ಕೆ ಬಂದವರು ಸಾಮೂದಿರಿಗಳು(ಝಾಮೋರಿನ್ಗಳು).  ವಾಸ್ಕೋಡಗಾಮ ೧೪೯೮ರಲ್ಲಿ ಕಲ್ಲಿಕೋಟೆಗೆ ಬಂದಾಗ ಅದು ಏಷ್ಯಾದ ಅತಿ ದೊಡ್ಡ ಬಂದರಾಗಿ ಹೆಸರುವಾಸಿಯಾಗಿತ್ತು. ಅಲ್ಲಿಂದ ಮಧ್ಯಏಷ್ಯಾ, ಚೈನಾ, ಟರ್ಕಿ, ಇರಾಕ್, ಪರ್ಷಿಯಾ, ಅರಬ್ ಸೇರಿ ವಿಶ್ವದ ಬಹುಭಾಗಗಳೊಡನೆ ಅವ್ಯಾಹತವಾದ ವ್ಯಾಪಾರ ಸಂಪರ್ಕ ಶತಶತಮಾನಗಳಿಂದ ನಡೆಯುತ್ತಿತ್ತು. ಮಾರ್ಕೊ ಪೊಲೊ, ಇಬ್ನ್ ಬತೂತಾ, ವಾಂಗ್ ತ್ಯುವಾನ್ನಂಥ ಇತಿಹಾಸಕಾರರೆಲ್ಲ ಕಲ್ಲಿಕೋಟೆಗೆ ಭೇಟಿ ಕೊಟ್ಟು ತಮ್ಮ ಅನುಭವಗಳನ್ನು ವಿವರವಾಗಿ ದಾಖಲಿಸಿದ್ದಾರೆ. ಚೈನಾ ತನ್ನ ವಸಾಹತೊಂದನ್ನು ಆ ಕಾಲಕ್ಕೇ ಕಲ್ಲಿಕೋಟೆಯಲ್ಲಿ ಸ್ಥಾಪಿಸಿದ್ದು ವಿಶೇಷವೇ ಸೈ. ೧೪೩೩ರಲ್ಲಿ ಚೀನಾದ ರಾಜಕುಮಾರನೊಬ್ಬ ತನ್ನ ಏಳನೇ ಭೇಟಿಯಲ್ಲಿ ಇಲ್ಲೇ ಮೃತಪಟ್ಟ ದಾಖಲೆಗಳಿವೆ. ಇಂದಿಗೂ ಕಲ್ಲಿಕೋಟೆಯಲ್ಲಿ ಸಿಲ್ಕ್ ಸ್ಟ್ರೀಟ್, ಚೈನಾಕೊಟ್ಟಾ(ಕೋಟೆ), ಚೀನಂಚೇರಿ, ಚೀನಪಲ್ಲಿ(ಚೈನಾ ಮಸೀದಿ)ನಂಥ ಹಲವು ಕುರುಹುಗಳು ಚೈನಾ-ಕೇರಳದ ಮಧ್ಯದ ಸಂಬಂಧದ ಸಾಕ್ಷಿಯಾಗಿ ನಿಂತಿವೆ. ಮುಂದೆ ಗಾಮ ಕೇರಳಕ್ಕೆ ಬಂದಿಳಿಯುವುದರೊಂದಿಗೆ ಅರಬ್ ಹಾಗೂ ಮಧ್ಯಪ್ರಾಚ್ಯದ ವ್ಯಾಪಾರಿಗಳ ಕೈಲಿದ್ದ ಅರಬ್ಬಿ ಸಮುದ್ರದ ವ್ಯಾಪಾರ ಪೂರ್ತಿಯಾಗಿ  ಪೋರ್ಚುಗೀಸರ ಕೈಸೇರಿತು. ಪೋರ್ಚುಗೀಸರು ಕಟ್ಟಿಕೊಂಡ ಕಲ್ಲಿನ ಕೋಟೆಯಿಂದಲೇ ಆ ಊರಿಗೆ ಕಲ್ಲಿಕೋಟೆಯೆಂಬ ಹೆಸರು ಬಂತೆಂದೂ, ಅಲ್ಲಿಂದ ಕ್ಯಾಲಿಕೋ ಎಂಬ ಬಟ್ಟೆ ವಿಶ್ವದಾದ್ಯಂತ ರಫ್ತಾಗುತ್ತಿದ್ದುದರಿಂದ ಕ್ಯಾಲಿಕಟ್ ಎಂಬ ಹೆಸರು ಬಂತೆಂದೂ ಪ್ರತೀತಿಯಿದೆ. 
       ಅದು ಪೋರ್ಚುಗೀಸರು ಝಾಮೋರಿನ್ನನ ಆಳ್ವಿಕೆಯ ಮಲಬಾರಿನಲ್ಲಿ ನೆಲೆಯೂರಲು ಅವಕಾಶಕ್ಕಾಗಿ ಕಾಯುತ್ತಿದ್ದ ಸಮಯ. ಇಲ್ಲಿನ ಕಾಳುಮೆಣಸು, ಸಾಂಬಾರು ಪದಾರ್ಥಗಳು ಯುರೋಪಿಯನ್ನರಿಗೆ ಎಷ್ಟು ಹುಚ್ಚು ಹಿಡಿಸಿದ್ದವೆಂದರೆ ಅದನ್ನು ಹುಡುಕಿಕೊಂಡೇ ವಾಸ್ಕೋಡಿಗಾಮ ಬಾರಿ ಬಾರಿ ಕಲ್ಲಿಕೋಟೆಯ ಬಂದರಿಗೆ ಬಂದಿಳಿಯುತ್ತಿದ್ದ. ಮೂರನೇ ಬಾರಿ ಆತ ಬಂದಿಳಿದಾಗ ನಡೆದ ಯುದ್ಧದಲ್ಲಿ ಸ್ಥಳೀಯರೇ ಕೇಳು ನಾಯರ್ ಎಂಬ ಯುವಕನ ನೇತೃತ್ವದಲ್ಲಿ ಆತನನ್ನು ಬಡಿದು ಕೊಂದರೆಂಬುದು ಬೇರೆ ವಿಷಯ. ಇಷ್ಟಾದರೂ ಪೋರ್ಚುಗೀಸರಿಗೆ ಬುದ್ಧಿ ಬರಲಿಲ್ಲ. ಕೊಚ್ಚಿಯಲ್ಲಾಗಲೇ ಭದ್ರವಾದ ನೆಲೆ ಸ್ಥಾಪಿಸಿಕೊಂಡಿದ್ದ ಅವರು ಝಾಮೋರಿನ್ನನ ಕಲ್ಲಿಕೋಟೆಯೊಳಗೆ ಹೇಗಾದರೂ ಮಾಡಿ ನುಗ್ಗಲು ಶತಪ್ರಯತ್ನ ನಡೆಸುತ್ತಿದ್ದರು. ಅರಬ್ಬಿ ವರ್ತಕರಿಂದ ಎದುರಾಗುತ್ತಿದ್ದ ತೀವ್ರ ಸ್ಪರ್ಧೆ ಬೇರೆ. ಅದಕ್ಕಿಂತ ಹೆಚ್ಚಾಗಿ ಅವರಿಗಿದ್ದ ಭಯ ಮರಕ್ಕರ್ ವ್ಯಾಪಾರಿಗಳು. ಇವರ ಹಿಂದಿನ ತಲೆಮಾರು ಝಾಮೋರಿನ್ನನ ವಿಧೇಯ ಸೇವಕರಾಗಿದ್ದರಿಂದ ಅರಸನಿಗೆ ಇವರನ್ನು ಕಂಡರೆ ಭಾರೀ ಪ್ರೀತಿ. ಇದೇ ಕಾಲದಲ್ಲಿ ಈಜಿಪ್ಟಿನಲ್ಲಿ ಮಾಮ್ಲೂಕ್ ವಂಶವನ್ನು ಪದಚ್ಯುತಗೊಳಿಸಿ ಒಟ್ಟೋಮನ್ ಸಾಮ್ರಾಜ್ಯ ಪಟ್ಟಕ್ಕೇರಿತ್ತು. ಕೇರಳದಿಂದ ಕೆಂಪು ಸಮುದ್ರದ ಮೂಲಕ ಸಾಂಬಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲು ಇಜಿಪ್ಟ್ ನಂಬಿಕೊಂಡಿದ್ದು ಇದೇ ಮರಕ್ಕರ್ ವ್ಯಾಪಾರಿಗಳನ್ನು. ಝಾಮೋರಿನ್ನನ ರಾಜಾಶ್ರಯ, ಸಾಂಬಾರ್ ಪದಾರ್ಥಗಳಿಗೆ ಈಜಿಪ್ಟ್ ಮತ್ತು ಮಧ್ಯಪ್ರಾಚ್ಯದಲ್ಲಿದ್ದ ಭಾರೀ ಬೇಡಿಕೆ ಇದೆರಡೂ ಸೇರಿ ಮರಕ್ಕರ್ ವ್ಯಾಪಾರಿಗಳು ತಮ್ಮ ಸಾಮರ್ಥ್ಯ ಮೀರಿ ಬೆಳೆದರು. ಒಂದೆಡೆ ಪೋರ್ಚುಗೀಸರು, ಇನ್ನೊಂದೆಡೆ ಮರಕರ್ ವ್ಯಾಪಾರಿಗಳು, ಕೇರಳದ ಸಮುದ್ರ ವ್ಯಾಪಾರದ ಮೇಲೆ ಹತೋಟಿ ಸಾಧಿಸಲು ಎರಡು ಗುಂಪುಗಳು ಮುಖಾಮುಖಿಯಾಗುವ ಪರಿಸ್ಥಿತಿ ಸೃಷ್ಟಿಯಾಯಿತು. ಝಾಮೋರಿನ್ನನ ವೈರಿ ಕೊಲತ್ತಿರಿ ಅರಸನ ಜೊತೆ ಪೋರ್ಚುಗೀಸರು ಸಂಧಿ ಮಾಡಿಕೊಂಡು ಕಲ್ಲಿಕೋಟೆಯ ಹತ್ತಿರ ತಮ್ಮ ಕೋಟೆಯೊಂದನ್ನು ಕಟ್ಟಿಕೊಳ್ಳಲು ಪ್ರಾರಂಭಿಸಿದರು. ಇದಕ್ಕೆ ಬದಲಾಗಿ ಕೊಲತ್ತಿರಿ ರಾಜ್ಯಕ್ಕೆ ಝಾಮೋರಿನ್ನನ ವಿರುದ್ಧದ ಯುದ್ಧದಲ್ಲಿ ಪೋರ್ಚುಗೀಸರು ಸಹಾಯ ಮಾಡಬೇಕಿತ್ತು.  ಈ ಬೆಳವಣಿಗೆಯಿಂದ ಝಾಮೋರಿನ್ ಮತ್ತು ಪೋರ್ಚುಗೀಸರ ಮಧ್ಯೆ ಮೊದಲೇ ಹೊಗೆಯಾಡುತ್ತಿದ್ದ ದ್ವೇಷ ಹೊತ್ತಿ ಉರಿಯಲು ಕಾರಣವಾಯ್ತು. ಮೊದಮೊದಲು ಸಣ್ಣಪುಟ್ಟಗೆ ಗುದ್ದಾಡಿ ಬರುತ್ತಿದ್ದ ಸಾಮೂದಿರಿ ಲಂಕೆಯ ಭುವನೇಕ ವಿಜಯಭಾನುವಿನ ಜೊತೆ ಸೇರಿ ಪೋರ್ಚುಗೀಸರ ವಿರುದ್ಧ ಯುದ್ಧ ಘೋಷಿಸಿದ. ೧೫೩೪ರಲ್ಲಿ ನಾಗಪಟ್ಟಣಂನಲ್ಲಿ ನಡೆದ ಕದನದಲ್ಲಿ ಪೋರ್ಚುಗೀಸರು ಸಾಮೂದಿರಯ ಸೈನ್ಯದೆದುರು ಭಾರೀ ನಷ್ಟವನುಭವಿಸಿದರು. ಈ ಕಾರಣದಿಂದ ಝಾಮೋರಿನ್ನನನ್ನು ಕಂಡರಾಗದ ವೆಟ್ಟದನಾಡಿನ ರಾಜ ಪೋರ್ಚುಗೀಸರನ್ನು ಕರೆದು ಚಲಿಯಾ ನದಿದಡದ ಚಲಿಯಾಂನಲ್ಲಿ ಕೋಟೆ ಕಟ್ಟಿಕೊಳ್ಳಲು ಅನುಮತಿ ನೀಡಿದ. ಪೋರ್ಚುಗೀಸರು ತನೂರಿನ ಅರಸನನ್ನು ಕ್ರೈಸ್ತಮತಕ್ಕೆ ಮತಾಂತರಿಸಿ ಡೋಮ್ ಜಾವೋ ಎಂದು ಹೆಸರಿಟ್ಟರು. ಬೆನ್ನಿಗೇ ವೆಟ್ಟದ ನಾಡಿನವನೂ ಮತಾಂತರಗೊಂಡ. ಮಲಬಾರಿನ ವ್ಯಾಪಾರದ ಮೇಲೆ ಝಾಮೋರಿನ್ನನ ಹಿಡಿತ ಸಡಿಲವಾಗುತ್ತಿತ್ತು. ೧೫೩೭ರಲ್ಲಿ ಪೊನ್ನಾನಿಯಲ್ಲಿ ಪೋರ್ಚುಗೀಸರೊಡನೆ ನಡೆದ ಯುದ್ಧದಲ್ಲಿ ಝಾಮೋರಿನ್ನನ ಸೈನ್ಯ ಸೋತರೂ ಮುಂದೆ ಮೂರನೇ ಕುಂಜಾಳಿ ಮರಕ್ಕರಿನ ಸಹಾಯದಿಂದ ೧೫೭೧ರಲ್ಲಿ ನಡೆದ ಇತಿಹಾಸ ಪ್ರಸಿದ್ಧ ಚಲಿಯಾಂ ಯುದ್ಧದಲ್ಲೂ ಪೋರ್ಚುಗೀಸರನ್ನು ಬಗ್ಗುಬಡಿದ. ಮಲಬಾರಿನಲ್ಲಿ ಅಧಿಪತ್ಯ ಸಾಧಿಸುವ ಪೋರ್ಚುಗೀಸರ ಕನಸು ಮತ್ತೊಮ್ಮೆ ಭಗ್ನವಾಯಿತು. ಕೇರಳದ ಆಸೆ ಬಿಟ್ಟು ಗೋವದತ್ತ ಮುಖಮಾಡಲು ಈ ಯುದ್ಧ ಅವರಿಗೆ ಮುಖ್ಯ ಕಾರಣವಾಯಿತು. ಪೋರ್ಚುಗೀಸರು ಬಿಟ್ಟುಹೋದ ಕಲ್ಲಿಕೋಟೆಯ ಹತ್ತಿರದ ವೆಲಿಯಂಕಲ್ಲಿನಲ್ಲಿ ಝಾಮೋರಿನ್ ಕಟ್ಟಿದ ಕೋಟೆ ಚಲಿಯಾಂ ಯುದ್ಧದಲ್ಲಿ ಅವನಿಗೆ ಸಹಾಯ ಮಾಡಿದ ಕುಂಜಾಳಿಯ ಹೆಸರಿನಿಂದ ಇಂದೂ ಕರೆಯಲ್ಪಡುತ್ತಿದೆ. ಇದೇ ಕೋಟೆಯಿಂದ ಊರಿಗೆ ಕಲ್ಲಿಕೋಟೆಯೆಂದು ಹೆಸರು ಬಂತೆಂಬುದು ಒಂದು ಊಹೆ.
ಚಾಲಿಯಾಂ ಸೀವಾಕ್
       ಪೋರ್ಚುಗೀಸರನ್ನು ಸೋಲಿಸಲು ಸಾಮೂದಿರಿಗೆ ತಾವೇ ಬೇಕು ಎಂಬ ಅಹಂಕಾರ ತಲೆಗೇರಿದ್ದೇ ಸೈ, ಸಾಮೂದಿರಿಯ ರಾಜ್ಯದಲ್ಲಿ ಕುಂಜಾಳಿ ಮರಕ್ಕರನ ನೇತೃತ್ವದಲ್ಲಿ ಮುಸ್ಲಿಮರ ಉಪಟಳ ಮೇರೆ ಮೀರಿತು. ಸಾಮೂದಿರಿ ಸಹಿಸುವಷ್ಟು ಸಹಿಸಿದ. ಸಾಮಾನ್ಯ ವರ್ತಕನಾಗಿ ಬಂದವ ಸ್ಥಳೀಯ ಮಾಪಿಳ್ಳೆಗಳ ಸಹಾಯದಿಂದ ಕೊಳತ್ತಿರಿಗಳನ್ನು ಪದಚ್ಯುತಗೊಳಿಸಿ ಕಣ್ಣೂರಿನಲ್ಲಿ ಸ್ವಂತ ಇಸ್ಲಾಮಿಕ್ ರಾಜ್ಯ ಸ್ಥಾಪನೆ ಮಾಡಿಕೊಂಡ ಅಲಿರಾಜನ ದೃಷ್ಟಾಂತ ಸಾಮೂದಿರಿಯ ಕಣ್ಣೆದುರೇ ಇತ್ತು. ಮೆಲ್ಲನೆ ಗೋವೆಯಲ್ಲಿದ್ದ ಪೋರ್ಚುಗೀಸರಿಗೆ ಒಂದು ಸಂದೇಶ ಕಳಿಸಿದ. ಪೊನ್ನಾನಿಯಲ್ಲಿ ಮಲಬಾರಿನ ಕ್ರಿಶ್ಚಿಯನ್ನರಿಗಾಗಿ ಒಂದು ಚರ್ಚ್ ಕಟ್ಟಿಕೊಡಿ ಎಂದು. ಆದರೆ ಉದ್ದೇಶವಿದ್ದುದು ಇನ್ನೊಂದು. ಇಬ್ಬರೂ ಕೈಜೋಡಿಸಿ ಮಾಪಿಳ್ಳೆಗಳನ್ನು ಕಂಡಕಂಡಲ್ಲಿ ಬಡಿಯತೊಡಗಿದರು. ೪೦೦ ಮಾಪಿಳ್ಳೆಗಳನ್ನು ಸೆರೆಹಿಡಿಯಲಾಯ್ತು. ಅವರ ನೇತೃತ್ವ ವಹಿಸಿದವರನ್ನು ಪೋರ್ಚುಗೀಸರು ಕೈಕಾಲು ಕತ್ತರಿಸಿ ಸಮುದ್ರಕ್ಕೆಸೆದರು. ಮಾಪಿಳ್ಳೆಗಳ ಉಪಟಳ ಒಂದು ಹಂತಕ್ಕೆ ಕಡಿಮೆಯಾಯ್ತು. ಎರಡನೇ ಶತ್ರುವನ್ನು ಮುಗಿಸಿದ ಸಾಮೂದಿರಿ ಮೊದಲನೇಯವರ ವಿರುದ್ಧವೂ ತಿರುಗಿಬಿದ್ದ. ನಿಧಾನವಾಗಿ ಡಚ್ಚರೊಂದಿಗೆ ಕೈಜೋಡಿಸಿ ಅವರನ್ನು ರಾಜ್ಯಕ್ಕೆ ಕರೆದ. ೧೬೦೪ರಲ್ಲಿ ಕಲ್ಲಿಕೋಟೆಯ ಜೊತೆ ಪೋರ್ಚುಗೀಸರನ್ನು ಓಡಿಸುವ ಒಪ್ಪಂದ ಮಾಡಿಕೊಂಡ ಡಚ್ಚರು ಅಲ್ಲೇ ತಮ್ಮ ವ್ಯಾಪಾರ ಪ್ರಾರಂಭಿಸಿದರು. ಪೋರ್ಚುಗೀಸರಿಗೂ ಡಚ್ಚರಿಗೂ ತಂದಿಟ್ಟ ಮೇಲೆ ಸಾಮೂದಿರಿ ಡಚ್ಚರಿಗೂ ಕೈಕೊಟ್ಟ. ೧೬೧೦ರಲ್ಲಿ ಬ್ರಿಟಿಷರತ್ತ ಕೈಚಾಚಿ ಅವರ ಸಹಾಯದಿಂದ ಇಬ್ಬರನ್ನೂ ಮಲಬಾರಿನಿಂದ ಓಡಿಸಿದ. ಆದರೆ ಸಾಮೂದಿರಿಗೆ ಇಂಗ್ಲಿಷರು ಡಚ್ಚರಷ್ಟು ನಂಬಿಕಸ್ಥರಲ್ಲ ಎನಿಸಿತೇನೋ. ಮತ್ತೆ ಡಚ್ಚರೊಡನೆ ಸ್ನೇಹ ಕುದುರಿಸಿಕೊಂಡ. ಆದರೆ ಈ ಆಟ ಹೆಚ್ಚು ಕಾಲ ನಡೆಯಲಿಲ್ಲ. ಮಲಬಾರಿನಲ್ಲಿ ಫ್ರೆಂಚರು ಪೈಪೋಟಿ ನೀಡಲಾರಂಭಿಸಿದಂತೆ ಡಚ್ಚರು ಇಂಗ್ಲೀಷರ ಜೊತೆ ಸೇರಿದರು.  ಸಾಮೂದಿರಿ ಏಕಾಂಗಿಯಾದ. 
       ೧೭೩೨ರಲ್ಲಿ ಪಾಲ್ಘಾಟ್ ಅಥವಾ ಪಾಲಕ್ಕಾಡಿನ ಆಳುಗರ ಆಹ್ವಾನದ ಮೇರೆ ಮೈಸೂರು ಪಡೆಗಳು ಮೊದಲ ಬಾರಿ ಕೇರಳದತ್ತ ದಂಡೆತ್ತಿ ಬಂದವು. ೧೭೩೫ ಹಾಗೂ ೧೭೩೭ರಲ್ಲಿ ಮತ್ತೆರಡು ಬಾರಿ ಸಾಮೂದಿರಿಗಳ ಕಲ್ಲಿಕೋಟೆ ಮೈಸೂರಿನ ದಾಳಿಗೊಳಗಾಯ್ತು. ೧೭೪೫ರಲ್ಲೊಮ್ಮೆ, ೧೭೫೬ರಲ್ಲಿ ಇನ್ನೊಮ್ಮೆ ಮೈಸೂರಿಗೂ ಕಲ್ಲಿಕೋಟೆಗೂ ಹೊಯ್ಕೈ ನಡೆಯಿತು. ಪದೇಪದೇ ನಡೆಯುತ್ತಿದ್ದ ದಾಳಿ ಹಾಗೂ ಲೂಟಿಯನ್ನು ತಡೆಯಲು ಸಾಮೂದಿರಿ ಮೈಸೂರಿನೊಂದಿಗೆ ಹನ್ನೆರಡು ಲಕ್ಷ ರೂಪಾಯಿಗಳ ಒಪ್ಪಂದ ಮಾಡಿಕೊಂಡ. ಆದರೆ ಕೊಡಲು ಅವನಲ್ಲಿ ಅಷ್ಟು ಹಣವಿರಬೇಕಿತ್ತಲ್ಲ! ಅದು ದಿಂಡಿಗಲ್ಲಿನ ಫೌಜದಾರ ಹೈದರ್ ಅಲಿ ಮೈಸೂರಿನ ಸಿಂಹಾಸನವನ್ನು ಆಕ್ರಮಿಸಿಕೊಂಡ ಕಾಲ. ಹೇಳಿಕೇಳಿ ಮಲಬಾರೆಂಬುದು ಆ ಕಾಲದ ಅಕ್ಷಯಭಂಡಾರ. ಇಡೀ ಭಾರತದ ಸಮುದ್ರವ್ಯಾಪಾರವನ್ನು ನಿಯಂತ್ರಿಸುತ್ತಿದ್ದ ಕೇಂದ್ರ. ರಾಜ್ಯವಿಸ್ತಾರದ ತುರ್ತಿಗೆ ಬಿದ್ದ ಹೈದರಾಲಿ ಬಿಡಲಿಕ್ಕುಂಟೇ? ೧೭೬೬ರಲ್ಲಿ ತನ್ನ ಹನ್ನೆರಡು ಸಾವಿರ ಸೇನಾಬಲದೊಟ್ಟಿಗೆ ಮಂಗಳೂರಿನ ಕಡೆಯಿಂದ ಕಲ್ಲಿಕೋಟೆಯನ್ನು ಮುತ್ತಲು ಹೊರಟೇ ಬಿಟ್ಟ. ಕೇರಳದ ಏಕೈಕ ಮುಸ್ಲಿಂ ಅರಸು ಅರಸು ಕಣ್ಣೂರಿನ ಅಲಿರಾಜ ಹೈದರಾಲಿಯ ಸಹಾಯಕ್ಕೆ ಓಡೋಡಿ ಬಂದ. ಮುಸ್ಲಿಂ ಎಂಬ ಕಾರಣಕ್ಕೆ ಮಲಬಾರಿನ ಸಮಸ್ತ ಮುಸ್ಲಿಮರು ಮೈಸೂರಿನ ಸಹಾಯಕ್ಕೆ ಟೊಂಕಕಟ್ಟಿ ನಿಂತರು. ಹಿಂದೆ ಇವನ ಸ್ನೇಹ ಮಾಡಿ ಕೈಸುಟ್ಟುಕೊಂಡಿದ್ದ ಫ್ರೆಂಚು ಡಚ್ಚರು ಮತ್ತೆ ಕೈಜೋಡಿಸಲು ಹಿಂದೆಮುಂದೆ ನೋಡಿದರು. ಪರಿಣಾಮ ಇಡೀ ಉತ್ತರ ಮಲಬಾರ್ ಹೈದರನ ವಶವಾಗಿ ಮೈಸೂರಿನ ಸೈನ್ಯ ಕಲ್ಲೀಕೋಟೆಯನ್ನು ಪ್ರವೇಶಿಸಿತು. ತುರ್ಕನ ಕೈಲಿ ಸೋತ ಅವಮಾನ ತಾಳಲಾರದೇ ಸಾಮೂದಿರಿ ರಾಜ ತನ್ನ ಪರಿವಾರದವರನ್ನೆಲ್ಲ ಗುಟ್ಟಾಗಿ ತ್ರಾವೆಂಕೋರಿಗೆ ಕಳುಹಿಸಿ ಇತ್ತ ಮನಂಚಿರಾದಲ್ಲಿರುವ ತನ್ನ ಅರಮನೆಗೆ ಬೆಂಕಿಕೊಟ್ಟು ಅದರಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ. ಕೊಚ್ಚಿಯವರೆಗಿನ ಪೂರ್ತಿ ಮಲಬಾರು ಹೈದರನ ರಾಜ್ಯಕ್ಕೆ ಸೇರಿತು. 
       ಕ್ಯಾಲಿಕಟ್‌ನ ರೈಲ್ವೇ ಸ್ಟೇಷನ್ನಿನಲ್ಲಿ ಇಳಿದರೆ ಎಡಕ್ಕೊಂದು ಒಯೊಟ್ಟಿ ರೋಡ್ ಎಂಬ ರಸ್ತೆ ದೊರೆಯುತ್ತದೆ. ಅಲ್ಲೇ ಕಾಲು ಕಿಲೋಮೀಟರ್ ಮುಂದುವರೆದು ಬಲಕ್ಕೆ ತಿರುಗಿದರೆ ಸಿಗುವುದೇ ಕಲ್ಲಿಕೋಟೆಯ ಹೆಸರಾಂತ, ಇತಿಹಾಸ ಪ್ರಸಿದ್ಧ ಎಸ್.ಎಮ್.ಸ್ಟ್ರೀಟ್ ಅಥವಾ ಸ್ವೀಟ್ ಮೇಕರ್ಸ್ ಸ್ಟ್ರೀಟ್(ಮಿಠಾಯಿ ತಿರುವು). ಅದು ಶಾಪಿಂಗ್ ಮಾಡುವವರ ಪಾಲಿಗೆ ಭುವಿಗಿಳಿದು ಬಂದ ಸ್ವರ್ಗ. ಆ ರಸ್ತೆ ಶುರುವಾಗುವಲ್ಲಿ ಎಡಕ್ಕೆ ಕಂಚುಗಲ್ಲಿ. ಒಂದಿಡೀ ರಸ್ತೆಯಲ್ಲಿ ಬರೀ ಕಂಚು, ಹಿತ್ತಾಳೆ ಸಾಮಾನಿನ ಅಂಗಡಿಗಳೇ. ಚೂರು ಮುಂದುವರೆದರೆ ಕೋರ್ಟ್ ರೋಡ್. ಅಲ್ಲಿ ಬರೀ ಚಪ್ಪಲಿ, ಶೂಗಳ ಅಂಗಡಿಯದ್ದೇ ಕಾರುಬಾರು. ಒಂದೆಡೆ ಬಗೆಬಗೆಯ ಕ್ಯಾಲಿಕಟ್ ಹಲ್ವಾ, ಸಿಹಿತಿಂಡಿಗಳ ರಾಶಿರಾಶಿ ಅಂಗಡಿಗಳು.  ಕ್ಯಾಲಿಕಟ್ ಇಡೀ ದಕ್ಷಿಣ ಭಾರತದಲ್ಲಿ ಅತಿದೊಡ್ಡ ಚರ್ಮದ ವಸ್ತುಗಳು, ಚಪ್ಪಲಿ ಹಾಗೂ ಬಟ್ಟೆಗಳ ತಯಾರಕ. ಎರಡು ಸಾವಿರ ವರ್ಷಗಳ ಹಿಂದೇ ಕೇರಳದಲ್ಲಿ ಬಟ್ಟೆಗಳಿಂದ ಮಾಡಲಾಗುವ ಕಾಗದದ ಬಳಕೆಯಿತ್ತು. ಇದು ಇಲ್ಲಿಂದಲೇ ಹಲವು ದೇಶಗಳಿಗೆ ರಫ್ತಾಗುತ್ತಿತ್ತು. ಕ್ಯಾಲಿಕಟ್ನಲ್ಲಿ ತಯಾರಾಗುವ ಕಾರಣದಿಂದ ಅವುಗಳಿಗೆ ಕ್ಯಾಲಿಕೋ ಎಂಬ ಹೆಸರಾಯ್ತು. ಅಂದಮೇಲೆ ಬಟ್ಟೆಅಂಗಡಿಗಳಿಗೆ ಬರವುಂಟೇ! ಸುತ್ತಮುತ್ತ ಕಣ್ಣುಹಾಯಿಸಿದಷ್ಟು ದೂರಕ್ಕೆ ಕಾಣುವುದು ವಸ್ತ್ರದಂಗಡಿಗಳೇ. ಒಂದು ಕಡೆ ಅಂಜುಮನ್ ಬಾಗ್ ಎಂಬ ಪಾರ್ಸಿ ಸಮುದಾಯದ ಅಗ್ನಿ ದೇಗುಲ(fire temple). ಕೇರಳದಲ್ಲಿರುವ ಪಾರ್ಸಿಗಳ ಪೂಜಾಸ್ಥಳ ಇದೊಂದೇ. ಬೀಚ್ ರೋಡಿನಲ್ಲಿರುವ Auto Motto ಎಂಬ ಆಟೋಮೊಬೈಲ್ ಅಂಗಡಿಯ ಮಾಲೀಕ ದಾರಿಯುಸ್ ಮಾರ್ಶಲ್ ಎಂಬ ಪಾರ್ಸಿ ಈ ದೇಗುಲದ ಉಸ್ತುವಾರಿ ನೋಡಿಕೊಳ್ಳುತ್ತಾನೆ. ಸದ್ಯಕ್ಕೆ ಕ್ಯಾಲಿಕಟ್ಟಿನಲ್ಲಿರುವ ಪಾರ್ಸಿ ಕುಟುಂಬ ಇವರದ್ದು ಮಾತ್ರ. ಈ ದೇಗುಲದ ಸ್ವಲ್ಪ ದೂರದಲ್ಲೇ ಪಾರ್ಸಿಗಳ ಕಬ್ರಸ್ಥಾನವೂ ಇದೆ. ಮಂಗಳೂರಿನಿಂದ ತ್ರಿವೇಂದ್ರಮ್ಮಿನ ತನಕ ಯಾವ ಪಾರ್ಸಿ ಸತ್ತರೂ ಆತನನ್ನು ಹೂಳಲು ಎಸ್.ಎಮ್.ಸ್ಟ್ರೀಟಿನ ಈ ಸ್ಥಳಕ್ಕೇ ತರಬೇಕು. ೧೯೩೭ರಲ್ಲಿ ಸ್ಥಾಪನೆಯಾದ ಕೇರಳದ ಅತಿ ಹಳೆಯ ಚಿತ್ರಮಂದಿರ ರಾಧಾ ಥೇಟರ್ ಕೂಡ ಇದೇ ರಸ್ತೆಯಲ್ಲಿದೆ. ಎಸ್.ಎಮ್.ಸ್ಟ್ರೀಟ್ ಕೊನೆಗೊಳ್ಳುವ ಸ್ಥಳ ಮನಂಚಿರಾ ಸ್ಕ್ವೇರ್. ಶಾಪಿಂಗ್ ಮಾಡಲಿ ಬಿಡಲಿ. ಎಸ್.ಎಮ್.ಸ್ಟ್ರೀಟ್ನಲ್ಲಿ ಹಾಗೇ ಒಂದು ವಾಕ್ ಹೋಗುವ ಥ್ರಿಲ್ ಇದೆಯಲ್ಲ, ಅದನ್ನು ಕಟ್ಟಿಕೊಡಲು ಪದಗಳು ಬೇಡ. ಎದುರಿಗೆ ಪ್ರವಾಸಿಗಳು ಭೇಟಿನೀಡಲೇ ಬೇಕಾದ ಮನಂಚಿರಾ ಮೈದಾನ. ಕ್ರೌನ್ ಥಿಯೇಟರ್, ಓಪನ್ ಏರ್ ಥಿಯೇಟರ್, ಸಂಗೀತ ಕಾರಂಜಿ, ಪಾರ್ಕ್, ಲೈಬ್ರರಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ಅಲ್ಲಿ ಏನುಂಟು ಏನಿಲ್ಲ ಎಂಬ ಪ್ರಶ್ನೆಯೇ ಇಲ್ಲ. ಸಾಮೂದಿರಿ ತನ್ನ ಅರಮನೆಗೆ ಬೆಂಕಿಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಎಂದೆನಲ್ಲ. ಆ ಅರಮನೆಯಿದ್ದುದು ಇದೇ ಸ್ಥಳದಲ್ಲಂತೆ. ಆದರೆ ಅದರ ಯಾವ ಕುರುಹೂ ಈಗ ಲಭ್ಯವಿಲ್ಲ. ಮೈದಾನದ ಎಡಕ್ಕೆ ಮನಂಚಿರಾ ಕೆರೆ. ಹದಿನಾಲ್ಕನೇ ಶತಮಾನದಲ್ಲಿ ಮಾನದೇವನ್ ವಿಕ್ರಮ ಸಾಮೂದಿರಿ ಅರಮನೆಯನ್ನು ಕಟ್ಟಿಸುವಾಗ ಪಕ್ಕದಲ್ಲಿ ಸ್ನಾನಕ್ಕಾಗಿ ದೊಡ್ಡ ಕೆರಯೊಂದನ್ನೂ ನಿರ್ಮಿಸಿದ್ದ. ಕೆರೆಯನ್ನು ತೋಡಿದಾಗ ಸಿಕ್ಕ ಮಣ್ಣಿನಿಂದ ಪೂರ್ವಕ್ಕೆ ಹಾಗೂ ಪಶ್ಚಿಮಕ್ಕೆ ಎರಡು ಅರಮನೆಗಳನ್ನು ನಿರ್ಮಿಸಿದ್ದ ಎಂದೂ ಹೇಳುತ್ತಾರೆ. ಅರಮನೆ ನಾಶವಾದರೂ ಆ ಕೆರೆ ಇಂದೂ ಉಳಿದುಕೊಂಡಿದೆ. ಮಾನದೇವನ ಹೆಸರಿನಿಂದ ಈ ಕೆರೆ ಜೊತೆಗೆ ಸುತ್ತಲಿನ ಸ್ಥಳ ಮಾನನ್ ಚಿರ(ಕೆರೆ) ಅಥವಾ ಮನಂಚಿರಾ ಎಂದು ಕರೆಯಲ್ಪಟ್ಟಿತು. ಈಗ ಕ್ಯಾಲಿಕಟ್ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಾಗುವುದು ಇದೇ ಕೆರೆಯಿಂದ. 
ಮಿಠಾಯಿ ತಿರುವು

ಬಗೆಬಗೆಯ ಕ್ಯಾಲಿಕಟ್ ಹಲ್ವಾಗಳು
ಎಸ್ಸೆಮ್ ಸ್ಟ್ರೀಟಿನ ಸಂಜೆ ನೋಟ
ಮನಂಚಿರಾ ಸ್ಕ್ವೇರ್
ಮನಂಚಿರಾ ಕೆರೆ
       ೧೫೦೧ರಲ್ಲಿ ಕಲ್ಲಿಕೋಟೆಗೆ ಭೇಟಿನೀಡಿದ್ದ ಪೋರ್ಚುಗೀಸ್ ಪ್ರವಾಸಿಗನೊಬ್ಬ ಹೇಳುವಂತೆ ಕೋಟೆಗಳಿಲ್ಲದ ಈ ಅರಮನೆಯಲ್ಲಿ ಚಾಕರಿಗಿದ್ದವರು ಬರೋಬ್ಬರಿ ಏಳು ಸಾವಿರ ಜನರಂತೆ. ಅಂದರೆ ಆ ಅರಮನೆ ಅದೆಷ್ಟು ದೊಡ್ಡದಿರಬಹುದು?!?!?! ಹಿಂದೂಗಳು, ಮಹಮ್ಮದೀಯರು, ಕ್ರಿಸ್ತರು, ಯಹೂದಿಗಳು ಹೀಗೆ ನಾಲ್ಕೂ ಸಮುದಾಯದವರಿಗೆ ಪ್ರಾರ್ಥನೆ ನಡೆಸಲು ಅರಮನೆಯೊಳಗೆ ನಾಲ್ಕು ಹಜಾರಗಳನ್ನು ಬಿಟ್ಟುಕೊಡಲಾಗಿತ್ತಂತೆ. ಇನ್ನು ಅರಮನೆಯ ಗೋಡೆಗಳಿಗೆ ಚಿನ್ನದ ತಗಡುಗಳನ್ನು ಹೊಡೆಯಲಾಗಿತ್ತೆಂದು ಇತಿಹಾಸಕಾರರೆಲ್ಲ ಮೂಗಿನ ಮೇಲೆ ಬೆರಳಿಟ್ಟಿದ್ದು ದೊಡ್ಡ ವಿಷಯವೇನಲ್ಲ. ಯಾಕೆಂದರೆ ಅದು ಚಿನ್ನಕ್ಕಿಂತ ಸಾಂಬಾರಪದಾರ್ಥಗಳೇ ಹೆಚ್ಚು ಬೆಲೆಬಾಳುತ್ತಿದ್ದ ಕಾಲ. ಮುಂದೆ ಬಂದ ರಾಜರ್ಯಾರೂ ವಿಕ್ರಮಪುರಂ ಅರಮನೆಯನ್ನು ಮರುನಿರ್ಮಿಸುವ ಮನಸ್ಸು ಮಾಡಲಿಲ್ಲ. ದುಡ್ಡಿನ ಅಭಾವದಿಂದಲೋ ಅಥವಾ ಅಪಶಕುನವೆಂಬ ಕಾರಣಕ್ಕೋ! ಈ ಅರಮನೆ ನಾಶವಾದಮೇಲೆ ಮೀನ್ಚಂಡದಲ್ಲಿರುವ ತಿರುವಚ್ಚಿರ ಕೋವಿಲಕಂ ಸಾಮೂದಿರಿಗಳ ವಾಸಸ್ಥಳವಾಯ್ತು. 
       ತಿರುಗಿ ಹೈದರನ ಕಡೆ ಬರೋಣ.  ಕಣ್ಣೂರಿನ ಅಲಿರಾಜನ ಜೊತೆ ಸ್ನೇಹ ಸಾಧಿಸಿದ ಹೈದರ್ ಆತನನ್ನು ಸಾಮೂದಿರಿಯ ಬಳಿ ಕಳುಹಿಸಿದ. ಮುಸ್ಲಿಂ ಎಂಬ ಕಾರಣಕ್ಕೆ ಕಲ್ಲೀಕೊಟೆಯ ಶ್ರೀಮಂತ ಮುಸ್ಲಿಂ ವ್ಯಾಪಾರಿಗಳು, ಮಾಪಿಳ್ಳೆಗಳು ಹೈದರನ ಕಡೆ ವಾಲಿದರು. ಈಬಾರಿ ಹೈದರ್ ಬೇಡಿಕೆಯಿಟ್ಟಿದ್ದು ಒಂದು ಕೋಟಿ ಚಿನ್ನದ ನಾಣ್ಯಗಳಿಗೆ. ಅಷ್ಟು ಸೊತ್ತು ಸಾಮೂದಿರಿಯ ಹತ್ತಿರ ಇರಲೇಬೇಕೆಂದು ಹೈದರನ ನಂಬಿಕೆಯಾಗಿತ್ತು. ಸಾಮೂದಿರಿ ಕವಡೆ ಕಾಸು ಕೊಡಲೂ ನಿರಾಕರಿಸಿದ. ಕೋಟೆಗಳಿಲ್ಲದ ಬಯಲು ಪ್ರದೇಶದ ಅರಮನೆ ಶತ್ರುಗಳಿಗೆ ಸುಲಭದ ತುತ್ತಾಗಿತ್ತು. ಸಾಮೂದಿರಿ ತನ್ನ ಸಂಪತ್ತನ್ನೆಲ್ಲ ಪರಿವಾರದವರ ಜೊತೆ ತ್ರಾವೆಂಕೂರಿಗೆ ರವಾನಿಸಿದ. ಕೆ.ವಿ.ಕೃಷ್ಣ ಅಯ್ಯರ್ ಹೇಳುವಂತೆ ಹೀಗೆ ಕಲ್ಲೀಕೋಟೆಯಿಂದ ತ್ರಾವೆಂಕೂರಿಗೆ ಸಾಗಿಸಲ್ಪಟ್ಟ ಸಂಪತ್ತಿನ ಮೌಲ್ಯ ಹಲವು ಕೋಟಿ ರೂಪಾಯಿಗಳಾಗಿತ್ತು. ತಿರುವನಂತಪುರದ ಅನಂತಪದ್ಮನಾಭ ದೇವಸ್ಥಾನದಲ್ಲಿ ಸಿಕ್ಕ ನಿಧಿಯಲ್ಲಿ ಕಲ್ಲಿಕೋಟೆಯ ಪಾಲೂ ಇರಬಹುದು.  The sword of Tipu Sultan ಪುಸ್ತಕವನ್ನು ಬರೆದ ಗಿಡ್ವಾಣಿ ಇನ್ನೂ ಒಂದು ಸ್ವಾರಸ್ಯಕರ ವಿಚಾರವನ್ನು ಹಂಚಿಕೊಂಡಿದ್ದಾರೆ. ಆಯಾಜ್ ಖಾನ್ ಎಂಬ ಹೈದರನ ಬಂಟನ ಕುರಿತು ಹಿಂದೊಮ್ಮೆ ಲೇಖನದಲ್ಲಿ ಬರೆದಿದ್ದೆ. ಈ ಆಯಾಜ್ ಖಾನ್ ಮೂಲತಃ ಕಲ್ಲಿಕೋಟೆಯವ. ಆಶಿಲಾ ಬಾನು ಎಂಬ ಆಸ್ಥಾನವೇಶ್ಯೆಯ ಮಗ. ಸಾಮೂದಿರಿಯ ಅರಮನೆಯ ರಕ್ಷಣಾದಳದ ಅಧಿಪತಿಯಾಗಿದ್ದವ. ಇವ ಸಾಮೂದಿರಿಯ ಮಗನೇ ಎಂದು ಗಿಡ್ವಾಣಿ ತಲೆಯ ಮೇಲೆ ಹೊಡೆದಂತೆ ಬರೆದಿದ್ದಾರಾದರೂ ಅದಕ್ಕೆ ಸಬೂತು ಒದಗಿಸುವ ಗೋಜಿಗೆ ಹೋಗಲಿಲ್ಲವೆನ್ನುವುದು ಬೇರೆ ಪ್ರಶ್ನೆ. ಈತ ರಾತ್ರೋರಾತ್ರಿ ಹೈದರನ ಪಕ್ಷ ಸೇರಿದ. ಅರಮನೆಯ ರಕ್ಷಣಾ ವ್ಯವಸ್ಥೆ ಕುಸಿದು ಬಿತ್ತು. ಹೈದರನ ಕೈಲಿ ಒತ್ತೆಯಾಳಾಗಿ ಸಿಗುವುದನ್ನು ಬಿಟ್ಟರೆ ಸಾಮೂದಿರಿಗೆ ಬೇರೆ ದಾರಿಯಿದ್ದದ್ದು ಆತ್ಮಹತ್ಯೆಯೊಂದೇ ಆಗಿತ್ತು. ೬೦೦ ವರ್ಷದ ಸಾಮೂದಿರಿಗಳ ಆಳ್ವಿಕೆ ಅಲ್ಲಿಗೆ ಕೊನೆಯಾಯ್ತು. ಹಾಗೆಂದು ಹೈದರನೇನು ಬಹುಕಾಲ ಬಾಳಲಿಲ್ಲ. ೧೭೮೨ರಲ್ಲಿ ಸ್ವಂತದೂರಿಂದ ದೂರದಲ್ಲಿ ಕ್ಯಾನ್ಸರಿನಿಂದ ನರಳಿ ನರಳಿ ಸತ್ತ. ಆರು ಶತಮಾನ ಮಲಬಾರಿನ  ಏಕಮೇವಾದ್ವಿತೀಯ ಅಧಿಪತಿಗಳಾಗಿದ್ದ ಸಾಮೂದಿರಿಗಳೆದುರು ಮೈಸೂರಿನ ಆಳ್ವಿಕೆ ಕೇರಳದಲ್ಲಿ ಮೂವತ್ತು ವರ್ಷಗಳನ್ನೂ ಕಾಣಲಿಲ್ಲ. ಆದರೆ ಆ ಮೂವತ್ತು ವರ್ಷಗಳಲ್ಲಿ ಕೇರಳದ ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಪರಿಸ್ಥಿತಿಗಳು ಇನ್ನು ರಿಪೇರಿಯಾಗದಷ್ಟು ಹದಗೆಟ್ಟವು ಎಂಬುದಂತೂ ಸತ್ಯ.  
ಕೊಟ್ಟಾರತ್ತಿಲ್ ಶುಂಗೂನಿ ಮೆನನ್ ಕೇರಳ ಕಂಡ ಹೆಸರಾಂತ ಕವಿ, ವಿದ್ವಾಂಸ ಹಾಗೂ ಇತಿಹಾಸಕಾರ. ಆತನ ’ಐತಿಹ್ಯಮಾಲಾ’ ಕೇರಳದ ಇತಿಹಾಸದ ಬಗ್ಗೆ ತಿಳಿಸುವ ವಿಶಿಷ್ಟ ಗ್ರಂಥ. ಹೆಸರೇ ಹೇಳುವಂತೆ ಇದೊಂದು ಕೇರಳದ ಬಗೆಗಿನ ಐತಿಹ್ಯಗಳನ್ನು ಕಟ್ಟಿಕೊಡುವ ಪ್ರಯತ್ನ. ಇತಿಹಾಸವೆನ್ನುವುದಕ್ಕಿಂತಲೂ ಇದು ಪುರಾಣಗಳಂತೆ ಐತಿಹಾಸಿಕ ಘಟನೆಗಳನ್ನು ಒಂದಕ್ಕಿಂತ ಒಂದು ರೋಚಕ ಫ್ಯಾಂಟಸಿ ಕಥೆಗಳಡಿಯಲ್ಲಿ ವ್ಯಾಖಾನಿಸುತ್ತ ಸಾಗುತ್ತದೆ. ಎಂಟು ಭಾಗಗಳು ಸುಮಾರು ನೂರಿಪ್ಪತ್ತು ಆಶ್ವಾಸಗಳಿರುವ ಇದು ನಿಜಕ್ಕೂ ಬ್ರಹದ್ಗ್ರಂಥವೇ ಸೈ.  ಇದನ್ನು ಬರೆದು ಮುಗಿಸಲು ಶುಂಗುನ್ನಿ ಸುಮಾರು ಇಪ್ಪತ್ತೈದು ವರ್ಷಗಳನ್ನು ತೆಗೆದುಕೊಂಡನಂತೆ. ಮುಂದೆ ’ಭಾಷಾಪೋಷಿಣಿ’ ಎಂಬ ಮಲಯಾಳಂ ಮಾಸಪತ್ರಿಕೆಯೊಂದು ಇದನ್ನು ಧಾರಾವಾಹಿಗಳ ರೂಪದಲ್ಲಿ ಹೊರತಂದಿತು. ಯಾವ ಹ್ಯಾರಿಪಾಟರಿಗೂ ಕಮ್ಮಿಯಿಲ್ಲದಂತೆ ಈ ಸರಣಿ ಕೇರಳದಲ್ಲಿ ಎಷ್ಟು ಪ್ರಸಿದ್ಧಿಗೊಂಡಿತ್ತೆಂದರೆ ೧೯೯೧ರಲ್ಲಿ ಇದು ಮತ್ತೊಮ್ಮೆ ಪುಸ್ತಕರೂಪದಲ್ಲಿ ಬಂದಾಗ ಸುಮಾರು ಒಂದೂವರೆ ಲಕ್ಷ ಪ್ರತಿಗಳು ಬಿಕರಿಗೊಂಡಿದ್ದವು. ಅದಾಗಿ ಇಪ್ಪತ್ತೆರಡು ಬಾರಿ ಮರುಮುದ್ರಣಗೊಂಡರೂ ಇದರ ಜನಪ್ರಿಯತೆ ಕೊಂಚವೂ ಮುಕ್ಕಾಗಿಲ್ಲ.  ಈ ಪುಸ್ತಕದಲ್ಲಿ ಬರುವ ಸಾಮೂದಿರಿಯ ಬಗೆಗಿನ ಹಲವು ಆಖ್ಯಾಯಿಕೆಗಳಲ್ಲಿ ಒಂದು ಕಥೆ ಹೀಗಿದೆ.
ಶುಂಗುನಿ ಮೆನನ್ 
ಐತಿಹ್ಯಮಾಲಾ


       ಸಾಮೂದಿರಿ ರಾಜನಿಗೆ ಪಟ್ಟಕ್ಕೆ ಬಂದಾಗಿನಿಂದ ಬಲಭುಜದಲ್ಲಿ ನೋವು. ಅದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತ ಸಾಗಿತೇ ವಿನಃ ಕಡಿಮೆಯಾಗುವ ಲಕ್ಷಣಗಳ್ಯಾವವೂ ಕಾಣಿಸಲಿಲ್ಲ. ಆಸ್ಥಾನ ವೈದ್ಯರಿಂದ ಅಳಲೆಕಾಯಿ ಪಂಡಿತರವರೆಗೆ, ತಾಂತ್ರಿಕರಿಂದ ಮಾಂತ್ರಿಕರವರೆಗೆ ಎಲ್ಲರೂ ತಮ್ಮತಮ್ಮ ವಿದ್ಯೆಯನ್ನು ಪ್ರಯೋಗಿಸಿ ನೋಡಿದರೂ ಯಾವುದೇ ಫಲಿತಾಂಶ ಮಾತ್ರ ಕಾಣಿಸುತ್ತಿರಲಿಲ್ಲ. ಇದೊಂದು ಗುಣಪಡಿಸಲಾಗದ ತೀರವ್ಯಾಧಿ ಎಂದು ಅಲ್ಲಿದ್ದ ವೈದ್ಯರೆಲ್ಲ ಘೋಷಿಸಿ ಕೈತೊಳೆದುಕೊಂಡರು. ಹೀಗಿಪ್ಪಾಗ ಒಂದು ದಿನ ಸಾಮೂದಿರಿಯ ಆಸ್ಥಾನದಲ್ಲಿ ಯುವಕನೊಬ್ಬ ಪ್ರತ್ಯಕ್ಷನಾಗಿ ಅರಸನ ನೋವನ್ನು ತಾನು ಗುಣಪಡಿಸುವುದಾಗಿ ಹೇಳಿಕೊಂಡ. ರಾಜವೈದ್ಯರೇ ಗುಣಪಡಿಸಲಾಗದ ಕಾಯಿಲೆಗೆ ಇವನ್ಯಾವ ಮದ್ದು ಹೇಳುತ್ತಾನೆಂದು ಕೇಳುವ ಕುತೂಹಲ ಆಸ್ಥಾನಿಕರಿಗೆ. ಕಾಯಿಲೆಯ ಪೂರ್ವಾಪರಗಳನ್ನೆಲ್ಲ ತಿಳಿದುಕೊಂಡವ ’ಅಯ್ಯೋ ಇಷ್ಟೇನಾ, ಇದಕ್ಕೊಂದು ತುಂಬಾ ಸರಳ ವಿಧಾನವಿದೆ. ಯಾವಾಗಲೂ ಬಲಭುಜದ ಮೇಲೆ ಒದ್ದೆ ವಸ್ತ್ರ ಹಾಕಿಕೊಂಡರಾಯ್ತು. ಅಷ್ಟೆ. ನೋವು ಗುಣವಾಗದಿದ್ರೆ ಹೇಳಿ!’ ಅಂದನಂತೆ. ಸಾಮೂದಿಗೆ ವಿಚಿತ್ರವೆನಿಸಿತು. ದೊಡ್ಡದೊಡ್ಡ ಚಿಕಿತ್ಸೆಗಳೇ ಪರಿಣಾಮ ಬೀರದಿರುವಾಗ ’ಹೆಗಲ ಮೇಲೆ ಟವಲ್’ ಅದೇನು ಮ್ಯಾಜಿಕ್ ಮಾಡತ್ತಪ್ಪಾ ಅಂತ. ಆದರೆ ಅವನಿಗೂ ಬೇರೆ ದಾರಿ ಇರಲಿಲ್ಲ. ನೋವು ಗುಣವಾಗುವುದಾದರೆ ಇದನ್ನೂ ಒಂದು ಮಾಡಿದರಾಯ್ತು ಎಂದುಕೊಂಡು ಹೆಗಲ ಮೇಲೆ ಒದ್ದೆ ಟವಲ್ ಹಾಕಿಕೊಂಡ್ರೆ ಏನಾಶ್ಚರ್ಯ ಅಂತೀರಿ, ದಿನದಿಂದ ದಿನಕ್ಕೆ ನೋವು ಕಡಿಮೆಯಾಗತೊಡಗಿತು. ಸಾಮೂದಿರಿ ಖುಷಿಯಿಂದ ಕುಣಿದಾಡತೊಡಗಿದ. ಇದಾಗಿ ಒಂದೆರಡು ದಿನಗಳಲ್ಲೇ ದೇಶಾಂತರ ಹೋಗಿದ್ದ ದೀವಾನ ತಿರುಗಿ ಬಂದನಂತೆ. ರಾಜ ದೀವಾನನಿಗೆ ನಡೆದ ಕಥೆಯನ್ನೆಲ್ಲ ಹೇಳಿ ಆ ಯುವಕನಿಗೆ ಸನ್ಮಾನ ಸಮಾರಂಭವನ್ನೇರ್ಪಡಿಸಲು ಸೂಚಿಸಿದ. ಸಾಮೂದಿರಿ ಹೇಳಿದ್ದೆಲ್ಲ ಕೇಳಿದ ದಿವಾನ ತಲೆತಲೆ ಚಚ್ಚಿಕೊಂಡ. ಏನೋ ನೆನಪಾದವನಂತೆ ಅಲ್ಲಿಂದ ಓಡಿದವ ಕಲ್ಲಿಕೋಟೆಯ ಮೂಲೆಮೂಲೆಗಳನ್ನೆಲ್ಲ ಹುಡುಕತೊಡಗಿದನಂತೆ. ಆತ ಏನು ಹುಡುಕುತ್ತಿದ್ದನೆಂದು ಯಾರಿಗೂ ಗೊತ್ತಾಗಲಿಲ್ಲ. ಸಂಜೆ ಕಪ್ಪೇರುತ್ತಿತ್ತು. ನಿರಾಸೆ ಹೊತ್ತ ಮುಖದೊಂದಿಗೆ ದಿವಾನ ಅರಮನೆಯ ದಾರಿ ಹಿಡಿದ. ದಾರಿ ಮಧ್ಯದಲ್ಲಿ ಕಲ್ಲೀಕೋಟೆಯ ಅಂಗಡಿ ಸ್ಥಳ ಅಥವಾ ಮಾರ್ಕೆಟ್ ಏರಿಯಾ. ದಿವಾನ ಎಲ್ಲರನ್ನೂ ಗಮನಿಸುತ್ತ ಸಾಗುತ್ತಿದ್ದ. ಒಂದು ಮೂಲೆಯಲ್ಲಿ ಹೆಂಗಸೊಬ್ಬಳು ಸುಮ್ಮನೇ ನಿಂತಿದ್ದು ಅವನ ಕಣ್ಣಿಗೆ ಬಿತ್ತು. ಅನುಮಾನವೇ ಇಲ್ಲ. ಇದು ಅವಳೇ! ಓಡೋಡಿ ಹೋದವನೇ ಅವಳಿಗೆ ಕೈಮುಗಿದು ’ತಾಯಿ, ನಿಮಗೇನೋ ತುಂಬ ಮುಖ್ಯವಾದ ವಿಷಯ ಹೇಳಲಿಕ್ಕಿದೆ,  ಮಾತಾಡಲು ಕೆಲ ಸಮಯ ಮೀಸಲಿಡಬಹುದೇ’ ಎಂದನಂತೆ. ಅರಮನೆಯ ದಿವಾನನ ಜೊತೆ ಮಾತಾಡಲು ಯಾರು ತಾನೇ ನಿರಾಕರಿಸುತ್ತಾರೆ? ಖಂಡಿತ ನಿಸ್ಸಂಕೋಚವಾಗಿ ಮಾತಾಡಿ ಎಂದಳವಳು. ಏನೋ ಹೇಳಲು ಹೊರಟವ ಸ್ವಲ್ಪ ತಡೆದ. ’ಅಯ್ಯೋ ನನ್ನ ರಾಜಮುದ್ರೆಯನ್ನು ಅರಮನೆಯಲ್ಲೇ ಬಿಟ್ಟು ಬಂದೆ. ಅದು ಯಾರ ಕೈಗಾದರೂ ಸಿಕ್ಕಿದರೆ ಗಂಡಾತರವಾಗುತ್ತದೆ. ಅದನ್ನು ಹೀಗೆ ಹೋಗಿ, ಹಾಗೆ ತಂದೆ. ಅಲ್ಲಿಯವರೆಗೂ ಕಾಯಬಹುದೇ. ನಾನು ನಿಮ್ಮೊಂದಿಗೆ ತುಂಬ ತುರ್ತಿನ ವಿಚಾರ ಮಾತಾಡಲಿಕ್ಕಿದೆ. ಇದು ರಾಜ್ಯದ ಅಳಿವು ಉಳಿವಿನ ಪ್ರಶ್ನೆ’ ಎಂದ. ಹೆಂಗಸು ಆಗಬಹುದೆಂದು ತಲೆಯಾಡಿಸಿದಳು. ದಿವಾನನಿಗ್ಯಾಕೋ ಸಮಾಧಾನವಾಗಲಿಲ್ಲ. ನಾನು ರಾಜಮುದ್ರೆಯನ್ನು ತೆಗೆದುಕೊಂಡು ಇಲ್ಲಿ ಬರುವವರೆಗೂ ಕಾಯುತ್ತ ನಿಲ್ಲುವುದಾಗಿ ಆಣೆ ಮಾಡಿ ಎಂದು ಗೋಗರೆದ. ನೀನು ಬರುವವರೆಗೂ ನಾನೆಲ್ಲೂ ಹೋಗದೇ ಇಲ್ಲೇ ಇರುತ್ತೇನೆ ಎಂದು ಹೆಂಗಸು ಭಾಷೆ ಕೊಟ್ಟಳು. ದಿವಾನ ಮತ್ತೆ ಅರಮನೆಯತ್ತ ಓಡಿದ. ದಿವಾನನ ಬರುವಿಕೆಯನ್ನೇ ಎದುರುನೋಡುತ್ತಿದ್ದ ಸಾಮೂದಿರಿಗೆ ವಿಚಿತ್ರವೆನಿಸಿತು. ಓಡಿ ಬಂದವನನ್ನು ತಡೆದು ನಿಲ್ಲಿಸಿ ಏನಾಯ್ತೆಂದು ಕೇಳಿದ. ಅಯ್ಯೋ ನೀವೆಂಥ ದೊಡ್ಡ ತಪ್ಪು ಮಾಡಿಬಿಟ್ಟಿರಿ ಎಂದು ಮಹಾಸ್ವಾಮಿ ಎಂದು ದಿವಾನ ಗೋಳಾಡತೊಡಗಿದ. ಸಾಮೂದಿರಿಗೊಂದೂ ಅರ್ಥವಾಗಲಿಲ್ಲ. ದಿವಾನ ಬಿಡಿಸಿ ಹೇಳತೊಡಗಿದ. ನಿಮ್ಮ ಬಲಭುಜದ ನೋವಿಗೆ ಕಾರಣವಾಗಿದ್ದು ಅಲ್ಲಿ ನೆಲೆನಿಂತ ಸಾಕ್ಷಾತ್ ಮಹಾಲಕ್ಷ್ಮಿಯ ಕಾರಣದಿಂದ. ಐಶ್ವರ್ಯದ ದೇವಿ ನಿಮ್ಮ ಭುಜದ ಮೇಲೆ ತಾಂಡವವಾಡುತ್ತಿರುವುದರಿಂದಲೇ ಈ ರಾಜ್ಯ ಇಷ್ಟೊಂದು ಸಂಪದ್ಭರಿತವೂ ಸುಭಿಕ್ಷವೂ ಆಗಿದೆ. ನಿಮ್ಮ ಸಂಪತ್ತು ಹೆಚ್ಚಿದಂತೆ ನಿಮ್ಮ ಭುಜದ ನೋವೂ ಹೆಚ್ಚಿದೆ. ಈಗ ಒದ್ದೆಬಟ್ಟೆಯನ್ನು ಧರಿಸಿದ್ದರಿಂದ ಅಪಶಕುನವಾಗಿ ಲಕ್ಷ್ಮಿ ಅರಮನೆಯನ್ನು ತೊರೆದು ಹೊರನಡೆದಿದ್ದಾಳೆ. ನಿಮ್ಮ ಕೈಯಾರೆ ದುರದೃಷ್ಟವನ್ನು ಆಹ್ವಾನಿಸಿಕೊಂಡಿದ್ದೀರೀ.  ಅವಳನ್ನು ಕಷ್ಟಪಟ್ಟು ತಡೆದು ನಿಲ್ಲಿಸಿದ್ದೇನೆ. ಅವಳು ರಾಜ್ಯ ಬಿಟ್ಟು ಹೋಗದಂತೆ ಮಾಡುವುದಕ್ಕೆ ಇನ್ನು ಇರುವುದು ಒಂದೇ ದಾರಿ ಎಂದವನೇ ಸಾಮೂದಿರಿಯ ಉತ್ತರಕ್ಕೂ ಕಾಯದೆ ತನ್ನ ಮನೆಕಡೆ ತೆರಳಿದ. ಸಾಮೂದಿರಿಗೆ ಅವನ ಮಾತುಗಳಿಂದ ಹೆಚ್ಚಿನದೇನೂ ಹೊಳೆಯದೇ ಹೋದ ದಾರಿಯನ್ನೇ ನೋಡುತ್ತ ನಿಂತ. ಇತ್ತ ದಿವಾನ ಸೀದಾ ತನ್ನ ಮನೆಗೆ ತೆರಳಿದವನೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ. ಅರಮನೆಯ ಪಂಡಿತರಿಗೆ ದಿವಾನನ ಕೃತ್ಯದ ಅರಿವಾಯ್ತು. ಲಕ್ಷ್ಮಿದೇವಿ ಕಲ್ಲೀಕೋಟೆಯನ್ನು ಬಿಟ್ಟು ತೆರಳದಂತೆ ಮಾಡಲು ಉಪಾಯ ಹೂಡಿದ ದಿವಾನ ತಾನು ಬರುವವರೆಗೂ ಸ್ಥಳಬಿಟ್ಟು ಕದಲದಂತೆ ಅವಳಿಂದ ಮಾತು ಪಡೆದಿದ್ದ.  ದಿವಾನ ಬರುವುದನ್ನು ಎದುರು ನೋಡಿ ಮಹಾಲಕ್ಷ್ಮೀ ಕಲ್ಲೀಕೋಟೆಯ ಬಜಾರಿನಲ್ಲಿ ಕಾಯುತ್ತ ನಿಂತಳು. ಆ ಸ್ಥಳವೇ ಈಗಿನ ಎಸ್.ಎಮ್.ಸ್ಟ್ರೀಟ್.  ಈ ಮಾರ್ಕೇಟಿನ ಮಧ್ಯದಲ್ಲಿ ಲಕ್ಷ್ಮಿ ನೆಲೆನಿಂತ ಸ್ಥಳದಲ್ಲಿ ಚಿಕ್ಕದೊಂದು ಭಗವತಿಯ ಮಂದಿರವಿದೆ. ದೇವಿಯ ಕೃಪೆಯಿರಬೇಕು. ಶತಶತಮಾನಗಳಿಂದ ಎಸ್ಸೆಂ ಗಲ್ಲಿಯ ಬಜಾರಿನ ವೈಭವಕ್ಕೆ ಭಂಗಬಂದಿಲ್ಲ. ಸಂಜೆಯ ಹೊತ್ತು ಆ ಸ್ಥಳದಲ್ಲಿ ಅಡ್ಡಾಡುವುದೇ ಕಣ್ಣಿಗೊಂದು ಹಬ್ಬ. ಅಲ್ಲಿ ಯಾವತ್ತೂ ಸಂಪತ್ತು, ಸಮೃದ್ಧಿ ತುಂಬಿತುಳುಕುತ್ತಿರುತ್ತದೆ. ಹೆಗಲ ಮೇಲೆ ಒದ್ದೆ ವಸ್ತ್ರ ಅಶುಭವೆಂದು ನಮ್ಮಲ್ಲಿನ ನಂಬಿಕೆ. ಅದೂ ಬಲಭುಜದ ಮೇಲೆ ಒದ್ದೆವಸ್ತ್ರ ಹೊದೆಯುವುದು, ಉಪವೀತವನ್ನು ಬಲಭಾಗದಲ್ಲಿ ಧರಿಸುವುದು ಅಪರಕರ್ಮಗಳಲ್ಲಿ ಮಾತ್ರ. ಇದಾಗಿ ಕೆಲ ತಿಂಗಳುಗಳು ಕಳೆಯುವುದರಲ್ಲಿ ಹೈದರನ ದಾಳಿಯಾಗಿತ್ತು. ಕಲ್ಲಿಕೋಟೆ ಸರ್ವನಾಶವಾಯಿತು. ವಿಜಯನಗರದ ಸಂಪತ್ತನ್ನು ಬಹಮನಿಯವರು ಲೂಟಿ ಹೊಡೆದಂತೆ ಕಲ್ಲಿಕೋಟೆಯನ್ನು ಮೈಸೂರಿನವರು ಸೂರೆಹೊಡೆದು ಸಂಪತ್ತನ್ನೆಲ್ಲ ಆನೆಗಳ ಮೇಲೆ ತುಂಬಿಕೊಂಡು ಹೋದರು. ವಿಜಯನಗರವೇನೋ ಹಾಳುಹಂಪೆಯಾಯಿತು, ಆದರೆ ಕಲ್ಲೀಕೋಟೆಯ ಖ್ಯಾತಿ ಶತಮಾನಗಳುರುಳಿದರೂ ಕೊಂಚವೂ ಮುಕ್ಕಾಗಲಿಲ್ಲ.

Sunday, July 22, 2018

ಬೆಳಗೊಳಕ್ಕೆ ಬಂದ ಚಂದ್ರಗುಪ್ತ

       ಭದ್ರಬಾಹು ಮುನಿಗಳು ತಮ್ಮ ಶಿಷ್ಯ ಚಂದ್ರಗುಪ್ತನೊಡನೆ ಶ್ರವಣಬೆಳಗೊಳಕ್ಕೆ ಬಂದು ನೆಲೆಸಿ ತಪಸ್ಸನ್ನಾಚರಿಸಿದ್ದು ಕರ್ನಾಟಕದ ಇತಿಹಾಸದಲ್ಲೇ ಮಹತ್ವಪೂರ್ಣ ಘಟನೆ. ಈ ಮೂಲಕ ಜೈನ ಧರ್ಮವು ಕರ್ನಾಟಕಕ್ಕೆ ಬಂದ ಧರ್ಮಗಳಲ್ಲಿಯೇ ಅತಿ ಪ್ರಾಚೀನವಾದುದು ಎಂಬುದು ಮಾತ್ರವಲ್ಲ, ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಜೈನ ಧರ್ಮ ಕಾಲಿಟ್ಟಿದ್ದು, ಪ್ರಸಾರಗೊಂಡಿದ್ದು ಶ್ರವಣಬೆಳಗೊಳದ ನೆಲದಲ್ಲಿ ಎಂಬುದು ವಿಶೇಷ. ಈ ಘಟನೆ ನಡೆದಿದ್ದು ಕ್ರಿ.ಪೂ ೨೯೮ರಲ್ಲೆಂದು ಹಾಸನ ಜಿಲ್ಲಾ ಗೆಜೆಟಿಯರ್ ತಿಳಿಸುತ್ತದೆ. ಜೈನರ ಪರಂಪರೆ, ಸಾಹಿತ್ಯ ಹಾಗೂ ಶಾಸನಗಳು ತಿಳಿಸುವಂತೆ ಶ್ರುತಕೇವಲಿಗಳಲ್ಲಿ ಕೊನೆಯವರಾದ ಭದ್ರಬಾಹು ಮುನಿಗಳು ತಮ್ಮ ತ್ರಿಕಾಲಜ್ಞಾನದಿಂದ ಮುಂದೆ ಉತ್ತರ ಭಾರತದಲ್ಲಿ ಬರಬಹುದಾದ ಹನ್ನೆರಡು ವರ್ಷಗಳ ಮಹಾಕ್ಷಾಮದ ಬಗ್ಗೆ ತಿಳಿದುಕೊಂಡು ಉತ್ತರಭಾರತದ ಬೇರೆಬೇರೆ ಭಾಗಗಳ ಜೈನಾನುಯಾಯಿಗಳೊಂದಿಗೆ ಉಜ್ಜಯಿನಿಯನ್ನು ಬಿಟ್ಟು ಕರ್ನಾಟಕದ ಹಾಸನ ಜಿಲ್ಲೆಯ ಕಟವಪ್ರ(ಕಳ್ವಪ್ಪು) ಎಂಬ ಸ್ಥಾನಕ್ಕೆ ಬಂದು ನಿಂತರು.  
       ತೀರ್ಥಂಕರರ ಬೋಧನೆಯನ್ನು ಕಿವಿಯಾರೆ ನೇರವಾಗಿ ಕೇಳಿದವರನ್ನು ಶ್ರುತಕೇವಲಿ  ಎನ್ನುತ್ತಾರೆ.  ದಿಗಂಬರ ಜೈನರ ಐತಿಹ್ಯದ ಪ್ರಕಾರ ಗೋವರ್ಧನ ಮಹಾಮುನಿ, ಆಚಾರ್ಯ ವಿಷ್ಣು, ನಂದಿಮಿತ್ರ, ಅಪರಾಜಿತ ಹಾಗೂ ಭದ್ರಬಾಹುಗಳು ಪಂಚಶ್ರುತಕೇವಲಿಗಳು. ಅಲ್ಲದೇ ಭದ್ರಬಾಹುಗಳು ಅವಿಭಜಿತ ಜೈನಸಂಘದ ಕೊನೆಯ ಆಚಾರ್ಯರು ಕೂಡ. ಈಗಿನ ಬಾಂಗ್ಲಾದೇಶದ ಪುಂಡ್ರವರ್ಧನ ಎಂಬಲ್ಲಿ ಬ್ರಾಹ್ಮಣ ಕುಟುಂಬವೊಂದರಲ್ಲಿ ಇವರ ಜನನವಾಯ್ತು. ಚಿಕ್ಕಂದಿನಲ್ಲೇ ತಾವು ಶ್ರುತಕೇವಲಿಗಳಾಗುವುದನ್ನು ಅರಿತಿದ್ದ ಭದ್ರಬಾಹುಗಳು ಸಂನ್ಯಾಸ ಸ್ವೀಕರಿಸಿ ಆಚಾರ್ಯ ಪದವಿಯನ್ನು ಹೊಂದಿದರಂತೆ. ಒಮ್ಮೆ ಕಾರ್ತಿಕ ಪೌರ್ಣಿಮೆಯಂದು ಚಂದ್ರಗುಪ್ತನಿಗೆ ಸೂರ್ಯಾಸ್ತಮಾನ, ತೆಂಗಿನ ಮರ ಮುರಿದು ಬೀಳುವುದು, ಕಪ್ಪಾನೆಗಳ ಹೊಡೆದಾಟ, ಸಿಂಹಾಸನದ ಮೇಲೆ ಕೂತ ಮಂಗ, ತುಂಡಾದ ಚಂದ್ರ, ಒಣಗಿದ ಕೆರೆ, ಸ್ವರ್ಣಪಾತ್ರೆಯಲ್ಲಿನ ಪಾಯಸ ತಿನ್ನುತ್ತಿರುವ ನಾಯಿ, ಕತ್ತೆಯ ಮೇಲೆ ಕೂತ ಕ್ಷತ್ರಿಯ ಯೋಧ, ಆಕಾಶದಿಂದಿಳಿದು ಬಂದ ರಥ, ಹುಣ್ಣಿಮೆಯ ರಾತ್ರಿಯಲ್ಲಿ ಮಿಂಚುಹುಳಗಳು, ಊರನ್ನಾವರಿಸಿದ ಹೊಗೆ,  ಗದ್ದೆಯೂಳುತ್ತಿರುವ ಎತ್ತುಗಳು, ಹಂಸಗಳನ್ನು ಸರೋವರದಿಂದ ಓಡಿಸುತ್ತಿರುವ ಕಪಿಗಳು, ಸಮುದ್ರಕ್ಕೆ ಬೀಳುತ್ತಿರುವ ಕರು, ಮುದಿ ಎತ್ತಿನ ಮೇಲೆ ಕೂತ ನರಿ , ಹನ್ನೆರಡು ಹೆಡೆಯ ಸರ್ಪ ಹೀಗೆ ಹದಿನಾರು ಬಗೆಯ ಸ್ವಪ್ನಗಳುಂಟಾದವಂತೆ. ಗಾಬರಿಗೊಂಡ ಚಂದ್ರಗುಪ್ತ ಈ ಕನಸುಗಳ ಮರ್ಮವೇನೆಂದು ತಿಳಿಸಲು ಆಚಾರ್ಯರಾದ ಭದ್ರಬಾಹುಗಳನ್ನು ಕೇಳಿಕೊಂಡ. ರಾಜ್ಯದಲ್ಲಿ ಹನ್ನೆರಡು ವರ್ಷಗಳ ಭೀಕರ ಕ್ಷಾಮ ಬರುವುದಾಗಿಯೂ, ಧರ್ಮ ಹಾಗು ಸತ್ತೆ ಅಪಾಯಕ್ಕೆ ಸಿಲುಕುವುದಾಗಿಯೂ ಅರಿತ ಭದ್ರಬಾಹುಗಳು ತಮ್ಮೆಲ್ಲ ಅನುಯಾಯಿಗಳನ್ನು ಕೂಡಿಕೊಂಡು ಉತ್ತರವನ್ನು ತೊರೆದು ದಕ್ಷಿಣದ ಕಟವಪ್ರದತ್ತ ಪ್ರಯಾಣ ಬೆಳೆಸಿದರಂತೆ.ಚಂದ್ರರಾಜಾಕಥಾವಳಿಯ ಪ್ರಕಾರ ಈರೀತಿ ಭದ್ರಬಾಹುಮುನಿಗಳ ಸಂಗಡ ಬೆಳಗೊಳಕ್ಕೆ ಬಂದ ಅನುಯಾಯಿಗಳ ಸಂಖ್ಯೆ ಬರೋಬ್ಬರಿ ಹನ್ನೆರಡು ಸಾವಿರ.  ಕಟವಪ್ರ ಅಥವಾ ಕಳ್ವಪ್ಪುವಿಗೆ ಕಪ್ಪಾದ ಗುಡ್ಡ, ಸಮಾಧಿಬೆಟ್ಟವೆಂಬೆಲ್ಲ ವಿವರಣೆಗಳಿವೆ. ಶಾಸನಗಳಲ್ಲಿ ಕಟಪ, ಕಟವಪ್ರ, ವೆಳ್ಗೊಳವೇತ್ಯಾದಿಯಾಗಿ ಕರೆಯಲ್ಪಟ್ಟ ಪ್ರದೇಶ ಸುಮಾರು ೧೯ನೇ ಶತಮಾನದಲ್ಲಿ ಶ್ರವಣಬೆಳಗೊಳವೆಂದು ಹೆಸರಾಯ್ತು. ಚಾವುಂಡರಾಯ ಮಸ್ತಕಾಭಿಷೇಕ ನೆರವೇರಿಸುವ ಸಂದರ್ಭದಲ್ಲಿ ಗುಳ್ಳೇಕಾಯಿ ಅಜ್ಜಿ ತನ್ನ ಸೋರೆಬುರುಡೆಯಿಂದ ಅಭಿಷೇಕ ಮಾಡಿದ ಹಾಲು ಬಾಹುಬಲಿಯನ್ನು ತೋಯಿಸಿ ದೊಡ್ಡಬೆಟ್ಟದಿಂದ ಕೆಳಗಿಳಿದು ಬಂದು ಬೆಳ್ಳಗಿನ ಪುಷ್ಕರಣಿಯಾಯ್ತೆಂದೂ ಅದರಿಂದಾಗಿಯೇ ಈ ಊರಿಗೆ ಬೆಳಗೊಳವೆಂಬ ಹೆಸರು ಬಂತೆಂದೂ ಇರುವ ಕತೆಯನ್ನು ನೀವು ಕೇಳಿಯೇ ಇರುತ್ತೀರಿ. ಆದರೆ ಬೆಳಗೊಳದ ಇತಿಹಾಸದುದ್ದಕ್ಕೂ ಇಲ್ಲಿ ಪ್ರಾಮುಖ್ಯತೆಯನ್ನು ಪಡೆದಿದ್ದು ಎದುರಿಗಿನ ಚಿಕ್ಕಬೆಟ್ಟವೇ. ಕಟವಪ್ರ, ಕಳ್ವಪ್ಪುಗಳೇ ಮುಂತಾಗಿ ಹೆಸರು ಬರಲೂ ಈ ಬೆಟ್ಟವೇ ಕಾರಣ. ಇಲ್ಲಿರುವ ಎರಡು ಬೆಟ್ಟಗಳಲ್ಲಿ ಬಾಹುಬಲಿ ಇರುವುದನ್ನು ದೂಡ್ಡಬೆಟ್ಟ ಅಥವಾ ಇಂದ್ರಗಿರಿಯೆಂದೂ, ಎದುರಿಗಿದ್ದುದನ್ನು ಚಿಕ್ಕಬೆಟ್ಟ ಅಥವಾ ಚಂದ್ರಗಿರಿಯೆಂದೂ ಕರೆಯುತ್ತಾರೆ. ಈ ಬೆಟ್ಟಕ್ಕೆ ಚಂದ್ರಗಿರಿ ಎಂದು ಹೆಸರು ಬಂದಿದ್ದು ಚಂದ್ರಗುಪ್ತನಿಂದ. ಆತ ತಪಸ್ಸಿನಿಂದ ದೇಹತ್ಯಾಗ ಮಾಡಿದ ಸ್ಥಳದಲ್ಲಿ ನಿರ್ಮಿಸಿದ ಚಂದ್ರಗುಪ್ತ ಬಸದಿ, ಇಲ್ಲಿ ಕಂಡುಬರುವ ಭದ್ರಬಾಹುಮುನಿಗಳ ಪಾದಚಿಹ್ನೆ ಹಾಗೂ ತಪಸ್ಸು ಮಾಡಿದ ಗುಹೆ ಪ್ರಚಲಿತದಲ್ಲಿರುವ ವಾದಕ್ಕೆ ಪ್ರತ್ಯಕ್ಷಸಾಕ್ಷಿಗಳಾಗಿವೆ. ಭದ್ರಬಾಹುಗಳು ತಮ್ಮ ಅವಸಾನಕಾಲವನ್ನು ತಿಳಿದು ತಮ್ಮ ಇಬ್ಬರು ಶಿಷ್ಯರಾದ ಪ್ರಭಾಚಂದ್ರ ಹಾಗೂ ಚಂದ್ರಗುಪ್ತರನ್ನು ತಮ್ಮ ಬಳಿ ಇರಿಸಿಕೊಂಡು ಉಳಿದವರನ್ನು ರಾಮಿಲಾಚಾರ್ಯ ಮತ್ತು ವಿಶಾಖಾಚಾರ್ಯರ ನೇತೃತ್ವದಲ್ಲಿ ತಮಿಳ್ನಾಡಿನ ಚೋಳ ಮತ್ತು ಪಾಂಡ್ಯ ರಾಜ್ಯಗಳಿಗೆ ಕಳಿಸಿಕೊಟ್ಟರು. ಹೀಗೆ ಭದ್ರಬಾಹುಗಳ ಮೂಲಕವೇ ಜೈನಧರ್ಮ ತಮಿಳುನಾಡನ್ನೂ ಪ್ರವೇಶಿಸಿತು. ಇಂಥ ಐತಿಹಾಸಿಕ ಮಹತ್ವವುಳ್ಳ ಘಟನೆಗೆ ಸಾವಿರಾರು ಜೈನ ಕಥನಗಳು, ಶಾಸನಗಳು ಹಾಗೂ ದಂತಕಥೆಗಳು ಬೆಳಕು ಚೆಲ್ಲುತ್ತವೆ. ಇಷ್ಟಾದರೂ ಬೆಳಗೊಳಕ್ಕೆ ಆಗಮಿಸಿದ ಚಂದ್ರಗುಪ್ತ ಮತ್ತು ಶ್ರುತಕೇವಲಿ ಭದ್ರಬಾಹುಮುನಿಗಳು ಯಾರು ಎಂಬ ವಿಷಯದ ಕುರಿತು ಇತಿಹಾಸಕಾರರಲ್ಲಿ ಒಮ್ಮತಾಭಿಪ್ರಾಯವಿಲ್ಲ.  
ಚಂದ್ರಗುಪ್ತ ಬಸದಿ

    
ಎದುರಿಗೆ ಕಾಣುವ ಇಂದ್ರಗಿರಿ


ಹೋದಲ್ಲೆಲ್ಲ ಇದೇ ಕೆಲಸ

ಚಂದ್ರಗಿರಿಯ ಬಸದಿಯೊಂದರಲ್ಲಿ

ಚಂದ್ರಗಿರಿಯ ಸೂರ್ಯಾಸ್ತ

ಭದ್ರಬಾಹು ಶಾಸನ
  ಶ್ರವಣಬೆಳಗೊಳದಲ್ಲಿ ಸಿಕ್ಕ ಮುಖ್ಯ ಶಾಸನಗಳ ಸಂಖ್ಯೆ ಬರೋಬ್ಬರಿ ೭೫೩. ಜೈನಕಾಶಿಯೊಟ್ಟಿಗೆ ಅದನ್ನು ಭಾರತದ ಶಾಸನಕಾಶಿಯೆಂದು ಕರೆದರೂ ಅದು ಅತಿಶಯದ ಮಾತಲ್ಲ. ಶ್ರವಣಬೆಳಗೊಳದ ಶಾಸನ ಸಂಖ್ಯೆ ೧(ಕ್ರಿ.ಶ ೬೦೦), ೩೧(ಕ್ರಿ.ಶ ೬೫೦), ೬೪(ಕ್ರಿ.ಶ ೧೧೬೩), ೬೭(ಕ್ರಿ.ಶ  ೧೧೨೯), ೨೫೮(ಕ್ರಿ.ಶ ೧೪೨೧) ಮತ್ತು ಶ್ರೀರಂಗಪಟ್ಟಣದ ಎರಡು ಶಾಸನಗಳು ಭದ್ರಬಾಹು-ಚಂದ್ರಗುಪ್ತರು ಈ ಸ್ಥಳಕ್ಕೆ ಬಂದ ವಿಷಯವನ್ನು ತಿಳಿಸುತ್ತವೆ. ಆದರೆ ಯಾವ ಶಾಸನಗಳೂ ಇವರಿಬ್ಬರು ಯಾರು ಎನ್ನುವುದನ್ನು ಅರಹುವುದಿಲ್ಲ. ಹರಿಸೇನನ ಬೃಹತ್ಕಥಾಕೋಶದ ಪ್ರಕಾರ ೧೨ ವರ್ಷಗಳ ಕ್ಷಾಮದ ಕಾರಣದಿಂದ ತನ್ನ ಶಿಷ್ಯರಿಗೆ ದಕ್ಷಿಣಕ್ಕೆ ತೆರಳುವಂತೆ ಭದ್ರಬಾಹು ಆಜ್ಞಾಪಿಸುತ್ತಾನೆ. ಅರಸು ಚಂದ್ರಗುಪ್ತ ಜೈನದೀಕ್ಷೆ ಪಡೆದು ವಿಶಾಖಾಚಾರಿ ಎಂಬ ಹೆಸರು ಪಡೆದು ಕರ್ನಾಟಕಕ್ಕೆ ತೆರಳಿ ೧೨ ವರ್ಷಗಳ ನಂತರ ಪುನಃ ತನ್ನ ದೇಶಕ್ಕೆ ಸೇರಿದ. ರತ್ನನಂದಿಯ ಭದ್ರಬಾಹುಚರಿತೆಯಲ್ಲೂ ಅಜಮಾಸು ಇದೇ ಕಥೆಯಿದೆ.  ಚಿದಾನಂದನ ಮುನಿವಂಶಾಭ್ಯುದಯದ ಪ್ರಕಾರ ಕಳ್ವಪ್ಪುವಿನಲ್ಲಿ ನೆಲೆಸಿದ ಭದ್ರಬಾಹು ಹುಲಿಯ ಬಾಯಿಗೆ ತುತ್ತಾದ. ಆಗ ಅಲ್ಲಿಗೆ ಬಂದ ಚಂದ್ರಗುಪ್ತ ಜೈನದೀಕ್ಷೆ ಪಡೆದು ಭದ್ರಬಾಹುವಿನ ಪಾದಗಳನ್ನು ಪೂಜಿಸತೊಡಗಿದ. ಇನ್ನು ದೇವಚಂದ್ರನ ರಾಜಾವಳಿ ಈ ಕುರಿತಾಗಿ ಹೇಳುವ ಇತ್ತೀಚಿನ ಕಾವ್ಯ. ದಕ್ಷಿಣಾಪಥಕ್ಕೆ ಹೊರಟಿದ್ದ ಭದ್ರಬಾಹುವಿನ ಸಂಗಡ ಪಾಟಲೀಪುತ್ರದ ರಾಜ ಚಂದ್ರಗುಪ್ತನೂ ಕೂಡಿಕೊಂಡು ಕಳ್ವಪ್ಪುವನ್ನು ತಲುಪಿದ. ಅವನ ಮೊಮ್ಮಗ ಇಲ್ಲಿಗೆ ಬಂದು ಚಂದ್ರಗುಪ್ತನ ಸ್ಮರಣಾರ್ಥ ಕೆಲ ಬಸದಿಗಳನ್ನೂ, ಬೆಳಗೊಳ ಎಂಬ ಪಟ್ಟಣವನ್ನೂ ಕಟ್ಟಿಸಿದ.  ಪಾಟಲೀಪುತ್ರದ ಅರಸ ಎಂಬ ಈ ರಾಜಾವಳಿಯ ಕಥೆಯನ್ನು ಆಧಾರವಾಗಿಟ್ಟುಕೊಂಡೇ ಈ ಚಂದ್ರಗುಪ್ತನು ಮೌರ್ಯರ ಚಂದ್ರಗುಪ್ತನೇ ಆಗಿರಬೇಕೆಂಬ ಊಹೆ ಬೆಳೆಯಲು ಕಾರಣವಾಯಿತು. 
       ಜೈನಸಂಪ್ರದಾಯದ ದಿಗಂಬರ ಐತಿಹ್ಯದ ಪ್ರಕಾರ ಮಹಾವೀರನ ನಿರ್ವಾಣದ ೧೬೨ನೇ ವರ್ಷದಲ್ಲಿ ಅಂದರೆ ಕ್ರಿ.ಪೂ ೩೬೫ರಲ್ಲಿ ಪಂಚಮಶೃತಕೇವಲಿ ಭದ್ರಬಾಹು ಜಿನೈಕ್ಯಗೊಂಡ. ಶ್ವೇತಾಂಬರ ಐತಿಹ್ಯದ ಪ್ರಕಾರ ೧೭೦ನೇ ವರ್ಷದಲ್ಲಿ ಕಾಲವಾದ. ಮಹಾವಂಶವು ಮಹಾವೀರನ ನಿರ್ವಾಣದ ೧೫೫ನೇ ವರ್ಷದಲ್ಲಿ ಚಂದ್ರಗುಪ್ತ ಪಟ್ಟಾಭಿಷಕ್ತನಾದನೆಂದು ತಿಳಿಸುತ್ತದೆ. ಮೌರ್ಯರ ಚಂದ್ರಗುಪ್ತನ ಆಳ್ವಿಕೆಯ ಕ್ರಿ.ಪೂ ೩೦೦ರ ಆಚೀಚೆಗೂ ಭದ್ರಬಾಹುವಿನ ಕೊನೆಗಾಲಕ್ಕೂ ಸುಮಾರು ೬೦ ವರ್ಷಗಳ ವ್ಯತ್ಯಾಸವಿರುವುದರಿಂದ ಭದ್ರಬಾಹುವಿನ ಶಿಷ್ಯನಾದ ಚಂದ್ರಗುಪ್ತ ಮೌರ್ಯಚಂದ್ರಗುಪ್ತನಲ್ಲ. ಬದಲಾಗಿ ಉಜ್ಜೈನಿಯ ಚಂದ್ರಗುಪ್ತ. ಜೊತೆಗೆ ಮೌರ್ಯ ಚಂದ್ರಗುಪ್ತನ ಆಳ್ವಿಕೆಯಲ್ಲಿ ಸಾಮ್ರಾಜ್ಯದಲ್ಲಿ ಕ್ಷಾಮ ತಲೆದೋರಿದ ಪ್ರಸ್ತಾಪವಿಲ್ಲವೆಂದೂ, ಮೆಗಸ್ತನಿಸನ ಬರವಣಿಗೆಗಳಲ್ಲಿ ಚಂದ್ರಗುಪ್ತ ಶ್ರಮಣನಾದ ಉಲ್ಲೇಖವಿಲ್ಲದಿರುವುದರಿಂದ ಮೌರ್ಯ ಚಂದ್ರಗುಪ್ತ ಭದ್ರಬಾಹುವಿನ ಶಿಷ್ಯನಲ್ಲವೆಂದು ಎಂ.ಗೋವಿಂದ ಪೈಗಳು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಬೌದ್ಧರ ಆರ್ಯಮಂಜುಶ್ರೀ ಮೂಲಕಲ್ಪದಲ್ಲಿ ಬರುವ ಮೌರ್ಯವಂಶಾವಳಿಯ ವಿವರಣೆಯಲ್ಲಿ ಚಂದ್ರಗುಪ್ತ ಸಿಡುಬು ಕಾಯಿಲೆಯಿಂದ ಮೃತಪಟ್ಟ ಕಥೆಯಿರುವುದರಿಂದ ಶ್ರವಣಬೆಳಗೊಳಕ್ಕೆ ಬಂದಿದ್ದು ಮೌರ್ಯವಂಶಸ್ಥಾಪಕನಲ್ಲವೆನ್ನುವುದು ನಿಸ್ಸಂದೇಹ. ಆದರೆ ಆತ ಮೌರ್ಯ ಚಂದ್ರಗುಪ್ತನೇ ಎಂದು ಬಿ.ಎಲ್.ರೈಸ್, ವಿ.ಎ.ಸ್ಮಿತ್‌ರಂಥ ವಿದೇಶಿ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ನಾರಾಯಣಾಚಾರ್ಯರ ಚಾಣಕ್ಯ ಕಾದಂಬರಿಯಲ್ಲಿಯೂ ಮೌರ್ಯ ಅರಸು ಬೆಳಗೊಳಕ್ಕೆ ಬಂದ ಕಥನವಿದೆ. ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆ ಚಾಣಕ್ಯ-ಚಂದ್ರಗುಪ್ತರೇ ಮುಂದೆ ಏಳನೇಯ ಜನ್ಮದಲ್ಲಿ ವಿಷ್ಣುವರ್ಧನ-ರಾಮಾನುಜಾಚಾರ್ಯರಾಗಿ ಹುಟ್ಟುವರೆಂದು ತಮ್ಮ ಮತಕ್ಕೆ ತಕ್ಕಂತೆ ಹೊಸಕಥೆಯೊಂದನ್ನು ಸೃಜಿಸಿಕೊಂಡು ವೈಷ್ಣವಭಕ್ತಿಯನ್ನು ಮೆರೆದಿದ್ದಾರೆ.  ಡಾ. ಶಾಮಾಶಾಸ್ತ್ರಿ, ಹುಲ್ಲೂರು ಶ್ರೀನಿವಾಸಜೋಯಿಸರಂಥವರ ಪ್ರಕಾರ ಬೆಳಗೊಳಕ್ಕೆ ಬಂದವನು ಗುಪ್ತರ ಎರಡನೇ ಚಂದ್ರಗುಪ್ತ. ಕದಂಬರಿಗೂ ಗುಪ್ತರಿಗೂ ವೈವಾಹಿಕ ಸಬಂಧವಿತ್ತು. (ಕಾಕುಸ್ಥವರ್ಮನ ಮಗಳ ವಿವಾಹ ಚಂದ್ರಗುಪ್ತ ವಿಕ್ರಮಾದಿತ್ಯನ ಜೊತೆ ಜರುಗಿತ್ತು. ಕಾಕುಸ್ಥವರ್ಮನು ತನ್ನ ನಾಲ್ಕು ಹೆಣ್ಣುಮಕ್ಕಳನ್ನು ಆಗಿನ ಸುಪ್ರಸಿದ್ಧ ರಾಜವಂಶಗಳಾದ ಗಂಗರ ಇಮ್ಮಡಿ ಮಾಧವ, ಗುಪ್ತರ ಎರಡನೇ ಚಂದ್ರಗುಪ್ತ, ವಾಕಾಟಕರ ನರೇಂದ್ರಸೇನ, ಆಳುಪರ ಪಶುಪತಿಗೆ ಮದುವೆಮಾಡಿಕೊಟ್ಟಿದ್ದ). ಆದ್ದರಿಂದ ಗುಪ್ತರ ಎರಡನೇ ಚಂದ್ರಗುಪ್ತನೇ ಬೆಳಗೊಳಕ್ಕೆ ಬಂದಿರಬಹುದೆಂದು ಎಂಬುದು ಅವರ ಅಂಬೋಣ. ಆದರೆ ಶೃತಕೇವಲಿ ಭದ್ರಬಾಹುವಿಗೂ ವಿಕ್ರಮಾದಿತ್ಯನಿಗೂ ಐನೂರು ವರ್ಷಕ್ಕೂ ಮಿಕ್ಕಿ ಅಂತರವಿರುವುದರಿಂದ ಅವರಿಬ್ಬರೂ ಸಮಕಾಲೀನರಾಗಿರಲು ಸಾಧ್ಯವೇ ಇಲ್ಲ.
       ಇನ್ನು ಬೆಳಗೊಳಕ್ಕೆ ಬಂದವನು ಅಶೋಕನ ಮೊಮ್ಮಗ ಸಂಪ್ರತಿ ಚಂದ್ರಗುಪ್ತನೆಂಬ ವಾದವೂ ಇದೆ. ಶತಾವಧಾನಿ ಆರ್. ಗಣೇಶರೂ ಇದನ್ನು ಹಲವು ಬಾರಿ ಪ್ರಸ್ತಾಪಿಸಿದ್ದಾರೆ. ಇದಕ್ಕೂ ಯಾವುದೇ ಆಧಾರಗಳಿಲ್ಲ. ಅಶೋಕನ ನಂತರ ಸಂಪ್ರತಿ ಎಂಬ ರಾಜ ಮೌರ್ಯ ಕುಲದಲ್ಲಿ ಇದ್ದಿರಬಹುದಾದರೂ ಆತ ಸಂಪ್ರತಿ ಚಂದ್ರಗುಪ್ತನೆಂದು ಕರೆಯಲ್ಪಟ್ಟ ಬಗ್ಗೆ ಯಾವುದೇ ಪುರಾಣಗಳಲ್ಲಿ ಹೇಳಲ್ಪಟ್ಟಿಲ್ಲ. ಚಂದ್ರಗುಪ್ತನ ಮೌರ್ಯನ ಐತಿಹ್ಯವೇ ಸಂಪ್ರತಿಯ ಐತಿಹ್ಯವಾಗಿ ಪರಿವರ್ತನೆಗೊಂಡು ದಿವ್ಯಾವದಾನ, ಪರಿಶಿಷ್ಟ ಪರ್ವ, ವಡ್ಡಾರಾಧನೆಯಂಥ ಕೃತಿಗಳಲ್ಲಿ ಕಾಣಿಸಿಕೊಂಡಿರಬಹುದು. ಮೇಲಾಗಿ ಚಂದ್ರಗುಪ್ತನಿಗೂ ಅಶೋಕನ ಮೊಮ್ಮಗನಿಗೂ ಸರಿಸುಮಾರು ೧೦೦ ವರ್ಷಗಳಿಗೂ ಮಿಕ್ಕಿ ಅಂತರವಿರುವುದರಿಂದ ಅವನ ಕಾಲಮಾನ ಭದ್ರಬಾಹುವಿನ ಜೀವಿತಾವಧಿಯ ಜೊತೆ ತಾಳೆಯಾಗುವುದಿಲ್ಲ. ಅದೂ ಅಲ್ಲದೇ ಅಶೋಕನ ಮೊಮ್ಮಗ ಬೌದ್ಧಧರ್ಮವನ್ನು ಬಿಟ್ಟು ಜೈನಧರ್ಮವನ್ನು ಯಾಕಾಗಿ ಸ್ವೀಕರಿಸಿದನೆಂಬುದಕ್ಕೆ ಉತ್ತರ ಹುಡುಕುವುದು ಕಷ್ಟ.
       ಹಾಗಾಗಿ ಚಂದ್ರಗುಪ್ತ ಮೌರ್ಯ, ಎರಡನೇ ಚಂದ್ರಗುಪ್ತ ಅಥವಾ ಸಂಪ್ರತಿ ಚಂದ್ರಗುಪ್ತ ಇವರಲ್ಲಿ ಯಾರೊಬ್ಬರೂ ಬೆಳಗೊಳಕ್ಕೆ ಬಂದಿರಲು ಸಾಧ್ಯವಿಲ್ಲವೆನ್ನುವುದು ದಿಟ. ಇತಿಹಾಸದಲ್ಲಿ ಇನ್ನುಳಿದವನು ಒಬ್ಬನೇ ಒಬ್ಬ. ಆತ ನಂದ ಚಂದ್ರಗುಪ್ತ. ನಂದ ವಂಶದ ಐದನೇ ಅರಸನಾದ ಈತ ಪಟ್ಟಕ್ಕೇರಿದ್ದು ಕ್ರಿ.ಪೂ ೩೭೨ರಲ್ಲಿ. ಪ್ರದ್ಯೋತನಿಂದ ೧೭ನೇಯವನಾದ ಈತ ಒಟ್ಟೂ ಐದು ವರ್ಷಗಳ ಕಾಲ ರಾಜ್ಯವಾಳಿದ್ದ. ನಂತರ ತನ್ನ ಮಗ ಸಿಂಹಸೇನನಿಗೆ ರಾಜ್ಯವನ್ನು ವಹಿಸಿಕೊಟ್ಟು ಹೊರಟುಹೋದನೆಂದು ವಡ್ಡಾರಾಧನೆ ಪ್ರಸ್ತಾಪಿಸುತ್ತದೆ. ಈ ಚಂದ್ರಗುಪ್ತನೇ ಜೈನದೀಕ್ಷೆಯನ್ನು ಸ್ವೀಕರಿಸಿದನೆಂಬುದಕ್ಕೆ ಬೇಕಾದಷ್ಟು ಆಧಾರಗಳು ದೊರಕುತ್ತವೆ. 
ಯಾವುದೋ ಸಂದರ್ಭದಲ್ಲುಂಟಾದ ತಪ್ಪುಗ್ರಹಿಕೆಯಿಂದ ಬೆಳಗೊಳಕ್ಕೆ ಭ್ರದ್ರಬಾಹುವೊಡನೆ ಬಂದವನು ಚಂದ್ರಗುಪ್ತಮೌರ್ಯನೆಂಬ ಗ್ರಹಿಕೆ ಉಂಟಾಯಿತು. ಗೋವಿಂದ ಪೈಗಳು ತಮ್ಮ ನಂತರದ ಎರಡು ಲೇಖನಗಳಲ್ಲಿ ಸಂಪ್ರತಿ ಚಂದ್ರಗುಪ್ತನೇ ಬೆಳಗೊಳಕ್ಕೆ ಬಂದಿರಬಹುದೆಂಬ ನಿಲುವನ್ನು ತಳೆದಿದ್ದಾರೆ. ಈ ವಿಷಯದ ಕುರಿತು ದೀರ್ಘಕಾಲದ ಸಂಶೋಧನೆ ನಡೆಸಿದ ಪ್ರೊ.ವಸಂತರಾಜ್, ಎಂ.ವಿ.ಶ್ರೀನಿವಾಸರಂಥವರು ಚಂದ್ರಗುಪ್ತ ಮೌರ್ಯನಾಗಲೀ, ಸಂಪ್ರತಿಯಾಗಲೀ ಭದ್ರಬಾಹುಗಳೊಡನೆ ಬಂದಿರಲು ಸಾಧ್ಯವಿಲ್ಲವೆಂದು ಬಹುಸಮರ್ಪಕವಾಗಿ ನಿರೂಪಿಸಿದ್ದಾರೆ. 
       ಜೈನಧರ್ಮದ ಇತಿಹಾಸದಲ್ಲೇ ಇದೊಂದು ಅತಿಮಹತ್ವದ ಸಂಗತಿ. ಕರ್ನಾಟಕದಲ್ಲಿ ಮಾತ್ರವಲ್ಲ ದಕ್ಷಿಣ ಭಾರತದಲ್ಲೇ ಜೈನ ಧರ್ಮದ ಪ್ರಾಚೀನತೆಯನು ನಿರ್ಧರಿಸಲು ಇರುವ ಆಧಾರ ಇದೊಂದೇ. ಹಾಗಾಗಿಯೇ ಇಲ್ಲಿಗೆ ಬಂದ ಚಂದ್ರಗುಪ್ತ ಯಾರೆಂಬುದು ಮಹತ್ವ ಪಡೆದುಕೊಳ್ಳುವ ಸಂಗತಿ. ಭದ್ರಬಾಹುವಿನೊಡನೆ ಬಂದವನು ನಂದಚಂದ್ರಗುಪ್ತನೇ ಎಂದಾದರೆ ಕರ್ನಾಟಕಕ್ಕೆ ಜೈನಧರ್ಮವು ಆಗಮಿಸಿದ ಕಾಲಮಾನವನ್ನು ಸುಮಾರು ನೂರು ವರ್ಷಗಳಿಗೂ ಮಿಕ್ಕಿ ಹಿಂದೆ ತಳ್ಳಬೇಕಾದ ಅಗತ್ಯತೆಯಿದೆ.

Tuesday, June 26, 2018

ಹೊಯ್ಸಳ ಲಾಂಛನದಲ್ಲಿ ಹುಲಿಯನ್ನು ಕೊಲ್ಲುತ್ತಿರುವ ಸಳ: ಒಂದು ವಿಮರ್ಶೆ

     
  ಆರೇಳು ತಿಂಗಳ ಹಿಂದೆ ಗೆಳತಿ ಅನಘಾ ನಾಗಭೂಷಣ ಒಂದು ಪ್ರಶ್ನೆ ಕೇಳಿದ್ದರು.  ಆದರೆ ನಾವೆಲ್ಲ ಕೇಳಿದ ಕಥೆಯ ಪ್ರಕಾರ ಸುದತ್ತಾಚಾರ್ಯರ ಶಿಷ್ಯ ಸಳ ಗುರುಗಳ ಆಜ್ಞೆಯಂತೆ ’ಹುಲಿ’ಯನ್ನು ಸಂಹರಿಸುತ್ತಾನೆ. ಹೊಯ್ಸಳರ ಲಾಂಛನದಲ್ಲಿ ಸಳ ಸಂಹರಿಸುತ್ತಿರುವುದು ಸಿಂಹವನ್ನಲ್ಲವೇ? ಹಾಗೇಕೆ? ಎಂದು. ಅಲ್ಲಿಯವರೆಗೂ ನಾನೊಮ್ಮೆಯೂ ಆಬಗ್ಗೆ ಯೋಚಿಸಿರಲಿಲ್ಲ. ಅದು ಹೊಳೆದಿರಲೂಇಲ್ಲ.
       ಹೊಯ್ಸಳರ ಎಲ್ಲಾ ದೇವಾಲಯಗಳಲ್ಲೂ ಎದ್ದು ಕಾಣುವ ಗುರುತು ಹುಲಿಯನ್ನು ಕೊಲ್ಲುತ್ತಿರುವ ಮನುಷ್ಯ. ಇದು ಹೊಯ್ಸಳರ ದೇವಸ್ಥಾನಗಳ ಮೇಲಿನ ಶುಕನಾಸಿಗಳಲ್ಲಿ ಇಲ್ಲವೇ ಬೇಲೂರಲ್ಲಿದ್ದಂತೆ ಪ್ರವೇಶದ್ವಾರದಲ್ಲಿ ಇದ್ದೇ ಇರುವ ಶಿಲ್ಪ. ಇದು ಹೊಯ್ಸಳರ ರಾಜಲಾಂಛನವಾಗಿತ್ತೆಂದೂ, ಆ ಶಿಲ್ಪದಲ್ಲಿರುವುದು ಹುಲಿಯನ್ನು ಕೊಲ್ಲುತ್ತಿರುವ ಸಳನೆಂದೂ ಹೆಚ್ಚಿನೆಲ್ಲಾ ಇತಿಹಾಸಕಾರರ ಅಭಿಪ್ರಾಯ. ಆದರೆ ವಿಚಿತ್ರವೆಂದರೆ ಆ ಶಿಲ್ಪದಲ್ಲಿರುವುದು ಹುಲಿಯಲ್ಲ ಸಿಂಹ. ಹುಲಿಗೆ ಕೇಸರಗಳಿರುವುದಿಲ್ಲ ಬದಲಾಗಿ ಸಿಂಹಕ್ಕಿರುತ್ತವೆ. ಶಿಲ್ಪದಲ್ಲಿರುವ ಪ್ರಾಣಿಗೆ ಕೇಸರಗಳಿವೆಯೇ ಹೊರತೂ ಹುಲಿಗಿದ್ದಂತೆ ಪಟ್ಟೆಗಳಿಲ್ಲ. ಕೊಂಡಜ್ಜಿಯ ರವಳನಾಥನ ಪಂಚೆಯ ನೆರಿಗೆಗಳನ್ನು, ಹಳೆಬೀಡಿನಲ್ಲಿ ಅಂಗುಷ್ಟದುದ್ದದ ತಲೆಬುರುಡೆಗಳಲ್ಲಿ ಒಳಗಿನ ಟೊಳ್ಳನ್ನೂ, ಆಭರಣಗಳ ಸೂಕ್ಷ್ಮ ಕೆತ್ತನೆಯನ್ನೂ ಕೆತ್ತಿದ ಹೊಯ್ಸಳ ಶಿಲ್ಪಿಗಳಿಗೆ ಹುಲಿಯ ಮೇಲೆ ನೆರಿಗೆಗಳನ್ನು ಬಿಡಿಸುವುದು ಕಷ್ಟದ ಕೆಲಸವೇನಾಗಿರಲಿಲ್ಲ. ಹಾಗಾದರೆ ಅವರು ಹುಲಿಯ ಬದಲು ಸಿಂಹವನ್ನು ಕೆತ್ತಿದ್ಯಾಕೆ? ಅದರ ಅಂಗಸೌಷ್ಟವವೇ ಇತ್ಯಾದಿ ಕಾರಣದಿಂದ ಸಿಂಹದ ಶಿಲ್ಪದ ಕೆತ್ತುಗೆ ಸುಲಭ. ಹುಲಿಗೆ ಸಿಂಹಕ್ಕಿದ್ದಂತೆ ಪ್ರಮಾಣಲಕ್ಷಣಗಳಿಲ್ಲ. ಆದುದರಿಂದ ಹುಲಿಯದ್ದು ಅಷ್ಟು ಸುಲಭವಲ್ಲ ಎಂಬ ಮಾತಿದೆ. ಹೀಗಿದ್ಯಾಗ್ಯೂ ಹುಲಿ ಕರ್ನಾಟಕದಲ್ಲಿ ಸಾಧಾರಣವಾಗಿ ಎಲ್ಲ ಕಡೆಯೂ ಕಂಡುಬರುವ ಪ್ರಾಣಿ. ಆದರೆ ಸಿಂಹ ಭಾರತದಲ್ಲಿ ಹೆಚ್ಚಾಗಿ ಕಂಡುಬರುವುದು ಗುಜರಾತ್ ಹಾಗೂ ಬಂಗಾಳದ ಪ್ರದೇಶದಲ್ಲಿ. ಹಾಗಾಗಿ ಶಿಲ್ಪಿಗಳಿಗೆ ಸಿಂಹಕ್ಕಿಂತ ಹುಲಿಯೇ ಹೆಚ್ಚು ಪರಿಚಿತ. ಅಷ್ಟಿದ್ದೂ ಎಲ್ಲ ಕಡೆಗಳಲ್ಲೂ ಸಿಂಹವನ್ನು ಕೆತ್ತಿದ್ದಕ್ಕೆ ಬಲವಾದ ಕಾರಣಗಳಿರಲೇ ಬೇಕು.
       ಮೊದಲನೇಯದಾಗಿ ಆ ಶಿಲ್ಪ ಹುಲಿಯನ್ನು ಕೊಲ್ಲುತ್ತಿರುವ ಸಳನದ್ದೆನ್ನುವುದು ತಪ್ಪುಕಲ್ಪನೆ. ಜೊತೆಗೆ ಸಿಂಹವನ್ನು ಒಂದೇ ಪ್ರಕಾರವಾಗಿ ಕೆತ್ತಿದ್ದರೂ ಅದರ ಜೊತೆ ಇರುವ ಮನುಷ್ಯ ಚರ್ಯೆ ಮತ್ತು ಲಕ್ಷಣಗಳು ಶಿಲ್ಪದಿಂದ ಶಿಲ್ಪಕ್ಕೆ ಬೇರೆಯಾಗಿವೆ. ಬೇಲೂರಿನಲ್ಲಿರುವ ಎರಡು ಶಿಲ್ಪಗಳಲ್ಲಿ ಆ ಮನುಷ್ಯನಿಗೆ ಕೊಂಬುಗಳಿದ್ದರೆ ಸಾಗರದ ನಾಡಕಲಸಿ, ಹಾಸನ ಸಮೀಪದ ದೇವರಗದ್ದವಳ್ಳಿ, ಮೊಸಳೆ ಹಾಗೂ ಶಿವಮೊಗ್ಗದ ಶಿರಾಳಕೊಪ್ಪದ ಸಮೀಪದ ಬಳ್ಳಿಗಾವೆಗಳಲ್ಲಿ ಕೋರೆಹಲ್ಲುಗಳೂ ಇವೆ. ಬೇಲೂರಿನಲ್ಲಿ ಮುಖ್ಯ ದ್ವಾರದ ಬಳಿಯ ಎರಡು ಶಿಲ್ಪಗಳಲ್ಲಿ ಒಂದರ ಮನುಷ್ಯನ ಕೈಲಿ ಕತ್ತಿಯಿದ್ದರೆ ಇನ್ನೊಬ್ಬ ಬರಿಗೈಲಿದ್ದಾನೆ. ಬರಿಗೈಯಲ್ಲಿರುವವನ ಮುಖದಲ್ಲಿ ಭಯದ ಚಹರೆಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಮೊದಲನೇಯವನ ತಲೆಕೂದಲು ನೇರವಾಗಿದ್ದರೆ ಎರಡನೇಯವನದ್ದು ಗುಂಗುರಾಗಿದೆ. ಅದೇ ಇನ್ನೊಂದು ಬಾಗಿಲಲ್ಲಿರುವ ಶಿಲ್ಪದಲ್ಲಿರುವ ವ್ಯಕ್ತಿ ತಲೆಯನ್ನು ಆಚೆ ತಿರುಗಿಸಿ ಓಡಲು ಸಿದ್ಧವಾಗಿರುವಂತಿದೆ. ಬೇಲೂರಿನ ಇಂಥ ಆರು ಶಿಲ್ಪಗಳಲ್ಲಿರುವ ಮನುಷ್ಯನ ಕೇಶವಿನ್ಯಾಸ, ಕರ್ಣಕುಂಡಲ, ಆಭರಣ ಇವ್ಯಾವವೂ ಒಂದಿದ್ದಂತೆ ಇನ್ನೊಂದರಲ್ಲಿಲ್ಲ. ನಾಡಕಲಸಿ, ದೇವರಗದ್ದವಳ್ಳಿ, ಹಳೆಬೀಡಿನ ಶಿಲ್ಪಗಳಲ್ಲಿ ರಾಕ್ಷಸ ಕಳೆ ಢಾಳಾಗಿದೆ. ಇದನ್ನು ಗಮನಿಸಿದರೆ ಸಿಂಹದ ಜೊತೆ ಹೋರಾಡುತ್ತಿರುವ ಸಳನ ಶಿಲ್ಪವಿದಾಗಿರದೇ ಸಿಂಹವೊಂದು ರಾಕ್ಷಸನ ಮೇಲೆ ದಾಳಿಮಾಡುತ್ತಿರುವಂತೆ ಈ ಶಿಲ್ಪಗಳನ್ನು ಕೆತ್ತಲಾಗಿದೆ. 


ರಾಕ್ಷಸ ಛಾಯೆಯನ್ನು ಗಮನಿಸಿ

ಬೇಲೂರಿನ ಬಾಗಿಲಲ್ಲಿರುವ ಒಂದು ಶಿಲ್ಪದಲ್ಲಿ ಮನುಷ್ಯನ ಮೇಲೆ ಸಿಂಹ ಆಕ್ರಮಣ ಮಾಡುವಂತಿದೆ






       ಎರಡನೇಯದಾಗಿ ಈ ಮೂರ್ತಿ ಎಲ್ಲ ಹೊಯ್ಸಳ ದೇವಾಲಯಗಳಲ್ಲಿದ್ದರೂ ಇದು ಅವರ ರಾಜಲಾಂಛನವಲ್ಲ. ಹೊಯ್ಸಳರ ಅಧಿಕೃತ ಲಾಂಛನ ಸೆಳೆ(ಬೆತ್ತ)ಯೊಂದಿಗೆ ಇರುವ ಹುಲಿ. ಹೆರದು, ಶಾಂತಿಗ್ರಾಮ ಸೇರಿ ಹೊಯ್ಸಳರ ಹಲವಾರು ಶಾಸನಗಳಲ್ಲಿ ’ಪುಲಿಯ ಲಾಂಛನ’, ’ಶಾರ್ದೂಲ ಲಾಂಛನ’ ಹಾಗೂ ’ವ್ಯಾಘ್ರ ಕೇತನ’ಗಳೆಂಬ ಪ್ರಸ್ತಾವನೆ ಸಿಗುತ್ತದೆ. ಬೇಲೂರಿನ ಕುವರಲಕ್ಷ್ಮನ ಶಾಸನದಲ್ಲಿ ’ಜಿನಮುನಿಪೋತ್ತಮಂ ಬೆತ್ತದ ಸೆಳೆಯಿನೀ ಪುಲಿಯಂ ಪೊಯ್ಸಳೆಂದೊಡಾ ಸಳ ನೃಪಂಗೆ ಪೊಯ್ಸಳಾಭಿದಾನಮಾದುದಾ ಶಾರ್ದೂಲಂ ಪತಾಕಾ ಪ್ರವಿರಾಜಿತ ಚಿತ್ರ ಚಿಹ್ನಮಾದುದು’ ಎಂಬ ಒಕ್ಕಣೆಯಿದೆ. ’ಶಾರ್ದೂಳದೊಳುಕೂಡಿದ ಸೆಳೆ ಪಿರಿದುಂ ಚಿಹ್ನಮ’ ಎಂದು ಅರಸಿಕೆರೆ ಶಾಸನವೂ, ’ಧ್ವಜಪಟದೊಳು ಹೊನ್ನೊಳೊತ್ತಿ ಪುಲಿಯುಂ ಸೆಳೆಯುಂ ನಿಜಲಾಂಛನಮಾದುದು’ ಎಂದು ಚನ್ನರಾಯಪಟ್ಟಣದ ಬಳಗಟ್ಟೆ ಶಾಸನವೂ. ’ಪೊಯ್ಸಳ ನೀನೀಸೀಯಿಂದನೆ ಮುನೀಂದ್ರನ್ ಅವನು ಆ ಪುಲಿಯಂ ಪೋಸೆಳೆದು ಸೆಳೆಯನ್ ಆ ಪುಲಿಯ ಸೆಳೆಯುಂಡಿಗೆಯದಾಯ್ತು ಪೊಯ್ಸಳ ವಂಶಂ’ ಎಂದು ಚಿಕ್ಕಮಗಳೂರಿನ ಖಾಂಡ್ಯ ಶಾಸನವೂ, ’ಸಳನಿಂದ ಹುಲಿಯ ಸೆಳೆಯುಂಡಿಗೆಯಾದುದು ಚಿಹ್ನಂ’ ಎಂದು ಕಳಸಾಪುರ ಶಾಸನವೂ ಉಲ್ಲೇಖಿಸುತ್ತದೆ. ಇದೆಲ್ಲವುಗಳಿಂದ ಸೆಳೆಯೊಡನೆ ಇರುವ ಹುಲಿ ಹೊಯ್ಸಳರ ಲಾಂಛನವಾಗಿತ್ತಲ್ಲದೇ ಸಿಂಹದೊಂದಿಗಿರುವ ಮನುಷ್ಯ ಅಲ್ಲವೆಂದು ಸ್ಪಷ್ಟವಾಗುತ್ತದೆ. ಸಳನು ಬೆತ್ತದ ಸೆಳೆಯಿಂದ ಹುಲಿಯನ್ನು ಕೊಂದ ಸ್ಮರಣಾರ್ಥ ಹೊಯ್ಸಳರು ಅದನ್ನೇ ರಾಜಲಾಂಛನವಾಗಿಟ್ಟುಕೊಂಡರೆಂಬುದೇ ಸರಿ. ಜೊತೆಗೆ ಹೊಯ್ಸಳರ ಕಾಲದ ಎಲ್ಲ ತಾಮ್ರಶಾಸನಗಳಲ್ಲಿ ರಾಜಮುದ್ರೆಯ ಭಾಗದಲ್ಲಿ ಹುಲಿಯ ಮುದ್ರೆಯಿರುತ್ತದೆ. 
ಹೀಗಿದ್ದಾಗ್ಯೂ ದೇವಾಲಯಗಳ ಆವರಣದಲ್ಲಿ ಸಿಂಹದೊಂದಿಗಿನ ಮನುಷ್ಯ ಶಿಲ್ಪ ಕಂಡುಬರಲು ಕಾರಣವೇನು?
       ನನಗನ್ನಿಸಿದಂತೆ ಹೊಯ್ಸಳರ ಶಿಲ್ಪಶೈಲಿ ಪ್ರಭಾವಿತಗೊಂಡಿದ್ದು ಚಾಲುಕ್ಯರಿಂದ. ಚಾಲುಕ್ಯರ ಶೈಲಿಯೇ ತುಂಗಭದ್ರೆಯ ದಕ್ಷಿಣಕ್ಕೆ ಮುಂದೆ ಸ್ವತಂತ್ರವಾಗಿ ಬೆಳೆದು ಹೊಯ್ಸಳ ಶೈಲಿಯೆಂದೆನಿಸಿತು. ಚಾಲುಕ್ಯ-ಹೊಯ್ಸಳ ದೇವಾಲಯಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಹೋಲಿಕೆ ಸ್ವವೇದ್ಯ. ಹೊಯ್ಸಳರ ಶೈಲಿ ದಕ್ಷಿಣಾಚಾರ್ಯ ಪಂಥವೆನೆಸಿದ್ದರಿಂದ ಇದರ ಶಿಲ್ಪಿಗಳಿಗೆ ದಕ್ಷಿಣಾಚಾರಿ ಅಥವಾ ತದ್ಭವದಲ್ಲಿ ಜಕ್ಕಣಾಚಾರಿ ಎಂಬ ಅಭಿದಾನ ಬಂದಿರಲೂ ಸಾಕೇ ಹೊರತೂ ಜಕ್ಕಣಾಚಾರಿ ಎಂಬ ಯಾವೊಬ್ಬ ಶಿಲ್ಪಿಯೂ ಇತಿಹಾಸದಲ್ಲಿ ಇದ್ದ ಯಾವ ದಾಖಲೆಯೂ ಇಲ್ಲ. ಚಾಲುಕ್ಯರ ಗುಲ್ಬರ್ಗ, ಏವೂರಿನಂಥ ಕೆಲ ದೇವಾಲಯಗಳಲ್ಲಿ ಇದೇ ಶಿಲ್ಪವಿದೆ.  ಹೊಯ್ಸಳರು ನರ’ಸಿಂಹ’ನ ಆರಾಧಕರು. ಹಾಸನದ ಎಂಟು ದಿಕ್ಕುಗಳಲ್ಲೂ ಹೊಯ್ಸಳರ ಎಂಟು ನರಸಿಂಹ ದೇವಸ್ಥಾನಗಳೇ ಅದಕ್ಕೆ ಸಾಕ್ಷಿ. ಬೇಲೂರು, ಹಳೆಬೀಡು ಸೇರಿ ಹೆಚ್ಚಿನೆಲ್ಲ ಕಡೆ ಪ್ರಾಂಗಣದಲ್ಲಿ, ಮುಖ್ಯದ್ವಾರದ ಮೇಲೆ ನರಸಿಂಹನ ಉಬ್ಬುಶಿಲ್ಪಗಳಿವೆ. ಜೊತೆಗೆ ಚಾಲುಕ್ಯರಂತೆ ಹೊಯ್ಸಳರೂ ಚಾಮುಂಡೇಶ್ವರಿಯ ಆರಾಧಕರು. ಆದ್ದರಿಂದ  ಚಾಮುಂಡಿಯ ವಾಹನವಾದ ಸಿಂಹ ರಾಕ್ಷಸರ ಮೇಲೆ ದಾಳಿ ಮಾಡುತ್ತಿದ್ದಂಥ ಶಿಲ್ಪವನ್ನು ಅವರು ತಮ್ಮ ದೇವಾಲಯಗಳಲ್ಲಿ ಕಡೆದಿರಬಹುದು. ಯಾಕೆಂದರೆ ಹೊಯ್ಸಳರ ಎಲ್ಲಾ ದೇವಾಲಯಗಳಲ್ಲಿ ಚಾಮುಂಡೇಶ್ವರಿಯ ಶಿಲ್ಪಗಳಿವೆ. ಅವರ ನಾಣ್ಯಗಳ ಮೇಲೆ ಸಿಂಹ ಅಥವಾ ಸಿಂಹವಾಹನೆ ದುರ್ಗೆಯ ಚಿತ್ರಗಳನ್ನು ಕಾಣಬಹುದು. ವಿಷ್ಣುವರ್ಧನನ ನಾಣ್ಯಗಳಲ್ಲಿ ಒಂದು ಕಡೆ ಸಿಂಹದ ಚಿತ್ರವೂ ಇನ್ನೊಂದೆಡೆ ತಳಕಾಡುಗೊಂಡ ವಂಬ ಬರಹವಿದೆ. ಇನ್ನೊಂದು ನಾಣ್ಯದಲ್ಲಿ ಒಂದೆಡೆ ಹುಲಿಯೂ ಇನ್ನೊಂದೆಡೆ ನೊಳಂಬವಾಡಿಗೊಂಡ ಎಂಬ ಬರಹವೂ ಮೂರನೇ ಥರದ ನಾಣ್ಯದಲ್ಲಿ ಮಲಪೆರುಳ್ಗೊಂಡ ಎಂಬ ಬರಹವೂ ಇದೆ. ಇನ್ನು ಒಂದನೇ ನರಸಿಂಹನ ಕಾಲದ ನಾಣ್ಯಗಳಲ್ಲಿ ಒಂದೆಡೆ ದುರ್ಗೆಯ ಚಿತ್ರ ಇನ್ನೊಂದೆಡೆ ಶ್ರೀಪತಾಪನಾರಸಿಂಹ ಎಂಬ ಬರಹವಿದ್ದರೆ ಇಮ್ಮಡಿ ನರಸಿಂಹನ ಕಾಲದ ನಾಣ್ಯಗಳಲ್ಲಿ ಒಂದೆಡೆ ಸಿಂಹ ಇನ್ನೊಂದೆಡೆ ನರಸಿಂಹನ ಚಿತ್ರವಿದೆ. ಹಾಗಾಗಿ ದುರ್ಗೆಯ ವಾಹನ ಸಿಂಹ ಹಾಗೂ ನರ’ಸಿಂಹ’ನ ಕಾರಣದಿಂದಲೇ ಹೊಯ್ಸಳರ ಎಲ್ಲಾ ದೇವಾಲಯಗಳಲ್ಲೂ ಆ ಶಿಲ್ಪವಿದೆಯೇ ಹೊರತೂ ಅದು ಸಳ ಹುಲಿ(ಸಿಂಹ)ಯನ್ನು ಕೊಲ್ಲುವ ಶಿಲ್ಪವಾಗಿರಲು ಸಾಧ್ಯವಿಲ್ಲ.
ವಿಷ್ಣುವರ್ಧನನ ನಾಣ್ಯ(ಒಂದೆಡೆ ಹುಲಿ)

ವಿಷ್ಣುವರ್ಧನನ ನಾಣ್ಯ(ಇನ್ನೊಂದೆಡೆ ಮಲಪೆರುಳ್ಗೊಂಡ ಎಂಬ ಬರಹ )


ಶಾರ್ದೂಲದ ಚಿತ್ರವಿರುವ ಇನ್ನೊಂದು ನಾಣ್ಯ

Tuesday, November 21, 2017

ಪದ್ಮಾವತಿ: ಕಾವ್ಯಕನ್ನಿಕೆಯ ಸುತ್ತಮುತ್ತ

 
ಈ ಕಥೆ ಎಲ್ಲರೂ ಬಹಳಷ್ಟು ಸಾರಿ ಕೇಳಿದ್ದೇ, ಓದಿದ್ದೇ, ನೋಡಿದ್ದೇ. ಅದರೂ ನಾನೊಮ್ಮೆ ಹೇಳಿಬಿಡುತ್ತೇನೆ.
       ರಾಣಿ ಪದ್ಮಾವತಿ ಉರುಫ್ ಪದ್ಮಿನಿ. ಸಿಂಹಳದ ರಾಜಾ ಗಂಧರ್ವಸೇನನ ಮಗಳು. ಅವಳ ಸೌಂದರ್ಯದ ವರ್ಣನೆ ಸಪ್ತಸಾಗರಗಳಾಚೆ ದಾಟಿ ನಾಲ್ಕು ದಿಕ್ಕುಗಳಲ್ಲಿಯೂ ಹಬ್ಬಿತ್ತು. ಪದ್ಮಾವತಿಯ ಬಳಿ ಹಿರಾಮಣಿ ಎನ್ನುವ ಮಾತನಾಡುವ ಗಿಳಿಯಿತ್ತಂತೆ. ಒಮ್ಮೆ ಬೇಟೆಗಾರನೊಬ್ಬನ ಬಲೆಗೆ ಬಿದ್ದ ಗಿಳಿ ಹೇಗೋ ಮೇವಾಡದ ರಾಜಾ ರತ್ನಸಿಂಹನ ಬಳಿ ಸೇರಿತು. ರತ್ನಸಿಂಹ ಚಿತ್ರಕೂಟವನ್ನಾಳಿದ ಗುಹಿಲ ವಂಶದ ರಾವಲ ಶಾಖೆಯ ಅರಸು. ಇವನಿಗೆ ಈಗಾಗಲೆ ನಾಗಮತಿ ಎನ್ನುವ ರಾಜಕುಮಾರಿಯೊಡನೆ ಮದುವೆಯಾಗಿತ್ತು. ಗಿಳಿಯ ಬಾಯಿಂದ ಕೇಳಿದ ಪದ್ಮಾವತಿಯ ಬೆಡಗಿನ ಸ್ತುತಿಗೆ ಮಾರುಹೋದ ರತ್ನಸಿಂಹ ಅವಳನ್ನು ಮದುವೆಯಾಗಲು ನಿರ್ಧರಿಸುತ್ತಾನೆ. ತನ್ನ ಹದಿನಾರು ಸಾವಿರ ಸೈನಿಕರೊಡನೆ ಸಮುದ್ರದಾಟಿ ಮಾರುವೇಷದಲ್ಲಿ ಸಿಂಹಳಕ್ಕೆ ಬಂದ ರತ್ನಸಿಂಹ ಪದ್ಮಾವತಿಯ ಭೇಟಿಗೆ ದಿನಗಟ್ಟಲೆ ಕಾದ. ಅವಳ ಭೇಟಿ ಸಾಧ್ಯವಾಗದ ಹತಾಶೆನಾಗಿದ್ದವನ ಕನಸಿನಲ್ಲಿ ಕಾಣಿಸಿಕೊಂಡ ಶಿವಪಾರ್ವತಿಯರು ಸಿಂಹಳವನ್ನು ಯುದ್ಧದಲ್ಲಿ ಗೆದ್ದು ಪದ್ಮಾವತಿಯನ್ನು ತನ್ನವಳಾಗಿಸಿಕೊಳ್ಳುವಂತೆ ಉಸುರಿದರಂತೆ. ಯುದ್ಧದಲ್ಲಿ ಗಂಧರ್ವಸೇನನಿಗೆ ರತ್ನಸಿಂಹನ ಪರಾಕ್ರಮದ ಅರಿವಾಯ್ತು. ಅಂಥ ವೀರನ ಮನೆಗೆ ತನ್ನ ಮಗಳು ಸೇರುವುದು ಭಾಗ್ಯವೆಂದುಕೊಂಡು ಸಂತೋಷದಿಂದ ಪದ್ಮಾವತಿಯನ್ನು ಧಾರೆಯೆರೆದುಕೊಟ್ಟ. ಮಾತ್ರವಲ್ಲ ಅವಳ ಹದಿನಾರು ಸಾವಿರ ಗೆಳತಿಯರನ್ನು ರತ್ನಸಿಂಹನ ಜೊತೆಬಂದವರೊಟ್ಟಿಗೆ ಮದುವೆ ಮಾಡಿಸಿದ. ಮೇವಾಡಕ್ಕೆ ತಿರುಗಿ ಬಂದ ರತ್ನಸಿಂಹ ತನ್ನಿಬ್ಬರು ರಾಣಿಯರಾದ ನಾಗಮತಿ ಹಾಗೂ ಪದ್ಮಾವತಿಯರೊಡನೆ ಸುಖವಾಗಿ ಸಂಸಾರ ಮಾಡಿದ.
ಇದು ಕತೆಯ ಫಸ್ಟ್ ಹಾಫ್ ಆಯಿತು. ಇಂಟರ್ವಲ್ ಆದ ನಂತರ ಮುಂದೆ ಕೇಳಿ.
       ರತ್ನಸಿಂಹನ ಆಸ್ಥಾನದಲ್ಲಿ ರಾಘವ ಚೈತನ್ಯನೆಂಬ ಮಂತ್ರವಾದಿಯಿದ್ದ. ಒಮ್ಮೆ ವಾಮಾಚಾರದಲ್ಲಿ ಪಾಲ್ಗೊಂಡ ರಾಘವನನ್ನು ರತ್ನಸಿಂಹ ಗಡಿಪಾರು ಮಾಡುತ್ತಾನೆ. ಈ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ ರಾಘವ ಸೀದಾ ದೆಹಲಿಗೆ ತೆರಳಿ ಅಲ್ಲಾದ್ದೀನ್ ಖಿಲ್ಜಿಯ ಸ್ನೇಹ ಸಂಪಾದಿಸುತ್ತಾನೆ. ರಾಣಿ ಪದ್ಮಿನಿಯ ಅಪ್ರತಿಮ ಅಂದಚಂದವನ್ನು ಖಿಲ್ಜಿಯ ಎದುರು ಹೊಗಳಿ ಮೇವಾಡವನ್ನು ಮುತ್ತಿ ಪದ್ಮಿನಿಯನ್ನು ವಶಪಡಿಸಿಕೊಳ್ಳುವಂತೆ ಕಿವಿಯೂದುತ್ತಾನೆ. ಹೇಳಿಕೇಳಿ ಖಿಲ್ಜಿ ಮೊದಲೇ ಕಾಮುಕವ್ಯಾಘ್ರ. ಪಕ್ಕಾ ಬೈಸೆಕ್ಷುವಲ್ ಖಿಲ್ಜಿಗೆ ಹೆಣ್ಣುಗಂಡುಗಳ ವ್ಯತ್ಯಾಸವೇ ಗೊತ್ತಿರಲಿಲ್ಲ. ಗಂಡಸರು, ಹೆಂಗಸರು, ಮಕ್ಕಳು ಸೇರಿ ಅವನ ಹರೇಮ್‌ನಲ್ಲಿದ್ದವರು ಬರೋಬ್ಬರಿ ಎಪ್ಪತ್ತು ಸಾವಿರ ಮಂದಿ. ಅದರಲ್ಲೂ ಅವನಿಗೆ ಅತ್ಯಂತ ಪ್ರೀತಿಪಾತ್ರಳಾದವಳು, ಛೀ.... ಆದವನು ಚಾಂದರಾಮ. ಗುಜರಾತಿನ ಬಚ್ಚಾ ಬಾಝಿ ಮಾರ್ಕೇಟಿನಲ್ಲಿ ಚಾಂದರಾಮನನ್ನು ನೋಡಿದ ಕೂಡಲೆ ಖಿಲ್ಜಿಗೆ ಲವ್ ಎಟ್ ಫಸ್ಟ್ ಸೈಟ್ ಶುರುವಾಗಿತ್ತು.  (ಬಚ್ಚಾಬಾಝಿ ಎಂಬುದು ಅಫ್ಘಾನಿಸ್ತಾನದಿಂದ ಭಾರತದ ಒಳಪ್ರವೇಶಿಸಿದ್ದು. ದಾಳಿಕಾರರು ತಮ್ಮ ದಾಹ ತೀರಿಸಿಕೊಳ್ಳಲು ಪುರುಷ ನರ್ತಕರು ಹಾಗೂ ಗಂಡುಮಕ್ಕಳನ್ನು ಸ್ತ್ರೀವೇಷ ತೊಡಿಸಿ ತಮ್ಮೊಡನೆ ಕರೆತರುತ್ತಿದ್ದರು. ಇದು ಮುಂದೆ ಮುಘಲರ ಕಾಲದಲ್ಲಿ ದೊಡ್ಡ ದಂಧೆಯಾಗಿಯೇ ಬೆಳೆಯಿತು. ಈ ಬಚ್ಚಾ ಬಾಝಿ ಅಪ್ಘಾನಿಸ್ತಾನದಲ್ಲಿ ಇಂದಿಗೂ ದೊಡ್ಡ ಉದ್ಯಮ. ಅದರಲ್ಲಿ ಅಮೇರಿಕಾದ ಸೈನ್ಯದ ಪಾಲುದರಿಕೆಯೇನು ಕಡಿಮೆಯದ್ದಲ್ಲ. ಅದನ್ನು ಬರೆಯಹೊರಟರೆ ದೊಡ್ಡ ಪುರಾಣವಾದೀತು)  ಸಾವಿರ ವರಹಗಳನ್ನು ಕೊಟ್ಟು ಖರೀದಿಸಿದ್ದರಿಂದ ಇವನಿಗೆ ಹಜಾರಿ ದಿನಾರಿ ಎಂಬ ಹೆಸರು ಅಂಟಿಕೊಂಡಿತು. ಚಾ೦ದರಾಮನ ವೃಷಣಗಳನ್ನು ಛೇದಿಸಿ, ಇಸ್ಲಾಮಿಗೆ ಮತಾ೦ತರಿಸಿದ ಖಿಲ್ಜಿ ಅವನನ್ನು ತನ್ನ ಅ೦ತಃಪುರದಲ್ಲಿಟ್ಟುಕೊ೦ಡ. ಇವನ ಮೇಲೆ ಅಲಾದೀನನ ಬ್ಲೈ೦ಡ್ ಲವ್ ಎಷ್ಟರಮಟ್ಟಿತ್ತೆ೦ದರೆ ಇವನಿಗೋಸ್ಕರ ತನ್ನ ಸ್ವ೦ತ ಹೆ೦ಡತಿ ಮಾಲಿಕ್-ಇ-ಜಹಾನ್ ಮತ್ತು ಮಕ್ಕಳಾದ ಖಿಜರ್ ಖಾನ್ ಮತ್ತು ಶಾದಿ ಖಾನರನ್ನೇ ಜೈಲಿಗಟ್ಟಿದ. ಈ ಚಾ೦ದರಾಮನೇ ಮು೦ದೆ ಖಿಲ್ಜಿ ಸಾಮ್ರಾಜ್ಯ ಕ೦ಡ ಅಪ್ರತಿಮ ದ೦ಡನಾಯಕನೆನೆಸಿಕೊ೦ಡ ಮಲಿಕ್ ಕಾಫರ್.
ಅಲ್ಲಾದ್ದೀನ್ ಖಿಲ್ಜಿ
        ಇರಲಿ ಬಿಡಿ. ಇಷ್ಟೆಲ್ಲ ಘನಸ್ತಿಕೆಯ ಖಿಲ್ಜಿ ಜಗದೇಕಸುಂದರಿ ಪದ್ಮಿನಿಯ ವರ್ಣನೆ ಕೇಳಿದರೆ ಸುಮ್ಮನೇ ಬಿಡುತ್ತಾನೆಯೇ! ಪದ್ಮಿನಿಯನ್ನು ಒಮ್ಮೆ ಕಣ್ಣಾರೆ ನೋಡಬೇಕೆಂದು ರತ್ನಸಿಂಹನಿಗೆ ಸಂದೇಶ ಕಳುಹಿಸಿದ. ರತ್ನಸಿಂಹನಿಗೆ ಸಂದಿಗ್ಧ. ದೆಲ್ಲಿ ಸುಲ್ತಾನನಿಗೆ ಹೆಂಡತಿಯನ್ನು ತೋರಿಸುವುದಕ್ಕೆ ಒಪ್ಪಿಕೊಳ್ಳುವುದು ಹೇಗೆ? ಒಪ್ಪಿಕೊಳ್ಳದಿದ್ದರೆ ಸುಲ್ತಾನ ಸುಮ್ಮನೇ ಬಿಟ್ಟಾನಾ? ಅಳೆದು ತೂಗಿ ಕೊನೆಗೆ ಕನ್ನಡಿಯಲ್ಲಿ ಅವಳ ಮುಖ ತೋರಿಸಲು ಒಪ್ಪಿರುವುದಾಗಿ ಮಾರುತ್ತರ ನೀಡಿದ. ಸಿಂಗಾರ ರಾವಣನಂತೆ ಅಲಂಕರಿಸಿಕೊಂಡು ಮೇವಾಡಕ್ಕೆ ಬಂದ ಖಿಲ್ಜಿ ಕನ್ನಡಿಯಲ್ಲಿ ಪದ್ಮಿನಿಯ ಮುಖ ನೋಡಿದವನೇ ಹೌಹಾರಿಬಿದ್ದ. ತನ್ನ ಜನಾನಾದಲ್ಲಿದ್ದ ಎಲ್ಲರನ್ನು ಒಟ್ಟುಸೇರಿಸಿದರೂ ಇವಳಂಥ ಒಬ್ಬ ಸುಂದರಿ ಹುಟ್ಟಲಾರಳೆಂದು ಅವನಿಗೆ ಮನವರಿಕೆಯಾಗಿಯ್ತು. ಹೇಗಾದರೂ ಮಾಡಿ ಪದ್ಮಿನಿಯನ್ನು, ಮೇವಾಡವನ್ನು ವಶಪಡಿಸಿಕೊಳ್ಳಬೇಕೆಂಬ ಹಠಕ್ಕೆ ಬಿದ್ದವನೇ ರತ್ನಸಿಂಹನನ್ನು ಹೊಗಳಿ ದೆಹಲಿ ಮರುಪ್ರಯಾಣ ಬೆಳೆಸುವುದಾಗಿ ತಿಳಿಸಿದ. ರಾಜಮರ್ಯಾದೆಯಂತೆ ಅವನನ್ನು ಕೋಟೆಯ ದ್ವಾರದವರೆಗೆ ಬೀಳ್ಕೊಡಲು ಬಂದ ರತ್ನಸಿಂಹನನ್ನು ಮೊದಲೇ ತಯಾರಿದ್ದ ಖಿಲ್ಜಿಯ ಸೈನಿಕರು ಮುಗಿಬಿದ್ದು ಬಂಧಿಸಿದರು.  
ಮೇವಾಡದ ರಾಜಕವಿ ಪಂಡಿತ ನರೇಂದ್ರ ಮಿಶ್ರರ ಪದ್ಮಿನಿ ಗೋರಾಬಾದಲ್ ಎಂಬ ಅಪ್ರತಿಮ ವೀರರಸದ ಕವಿತೆ ಇಲ್ಲಿಂದ ಶುರುವಾಗುತ್ತದೆ.
दोहराता हूँ सुनो रक्त से लिखी हुई क़ुरबानी |
जिसके कारन मिट्टी भी चन्दन है राजस्थानी ||
रावल रत्न सिंह को छल से कैद किया खिलजी ने
काल गई मित्रों से मिलकर दाग किया खिलजी ने
जिसको सुनकर शक्ति शौर्य पर फिर अँधियारा छाया
दस दिन के भीतर न पद्मिनी का डोला यदि आया
यदि ना रूप की रानी को तुमने दिल्ली पहुँचाया
तो फिर राणा रत्न सिंह का शीश कटा पाओगे
शाही शर्त ना मानी तो पीछे पछताओगे
ಹತ್ತು ದಿನಗಳಲ್ಲಿ ಪದ್ಮಿನಿ ತನ್ನವಳಾಗದಿದ್ದರೆ ರತ್ನಸಿಂಹ ತಲೆಕಡಿದು ಕಳುಹಿಸುವುದಾಗಿ ಖಿಲ್ಜಿ ಬೆದರಿಕೆ ಹಾಕಿದ.
खिलजी मचला था पानी में आग लगा देने को
पर पानी प्यास बैठा था ज्वाला पी लेने को
गोरा का आदेश हुआ सज गए सात सौ डोले
और बाँकुरे बदल से गोरा सेनापति बोले
खबर भेज दो खिलजी पर पद्मिनी स्वयं आती है
अन्य सात सौ सखियाँ भी वो साथ लिए आती है
       ಇತ್ತ ಪದ್ಮಿನಿ ಮೇವಾಡದ ಸೇನಾಪತಿ ಗೋರಾನ ಜೊತೆ ಒಂದು ಕೂಟನೀತಿ ರಚಿಸಿದಳು. ಸೈನಿಕ ಪಹರೆ ಇಲ್ಲದೆ  ತನ್ನ ಪತಿಯನ್ನು  ಸಂಧಿಸಲು ಅವಕಾಶ ನೀಡಿದರೆ ತಾನು ತನ್ನ ಏಳುನೂರು ಸಖಿಯರೊಡನೆ ದಿಲ್ಲಿಗೆ ಬಂದು ನಿನ್ನವಳಾಗುವುದಾಗಿ ತಿಳಿಸಿದಳು. ಒಬ್ಬಳ ಜೊತೆ ಇನ್ನೂ ಏಳುನೂರು ಸಿಕ್ಕರೆ ಲಾಭವೇ ತಾನೆ ಎಂದು ಖಿಲ್ಜಿ ಮರುಮಾತಾಡದೇ ಒಪ್ಪಿಕೊಂಡ.
       ಆದರೆ ನಡೆದಿದ್ದೇ ಬೇರೆ. ಏಳುನೂರು ಪಲ್ಲಕಿಗಳಲ್ಲಿ ಪ್ರತಿ ಪಲ್ಲಕ್ಕಿಯಲ್ಲೂ ವೇಷಮರೆಸಿಕೊಂಡ ಸಶಸ್ತ್ರ ಸೈನಿಕರು ಜೊತೆಗೆ ನಾಲ್ಕು ಹೊರುವವರು ಒಟ್ಟೂ ಮೂರೂವರೆ ಸಾವಿರ ಮಂದಿ ಗೋರಾಬಾದಲರ ನೇತೃತ್ವದಲಿ ದಿಲ್ಲಿ ತಲುಪಿದರು. ಕೊಟ್ಟ ಮಾತಿನಂತೆ ಖಿಲ್ಜಿ ಪಲ್ಲಕ್ಕಿಯಲ್ಲಿದ್ದ ಪದ್ಮಿನಿಗೆ ರತ್ನಸಿಂಹನನ್ನು ಭೇಟಿಯಾಗಲು ಅವಕಾಶ ಕೊಟ್ಟ. ಆದರೆ ಪಲ್ಲಕಿಯಲ್ಲಿ ಅವಳಿದ್ದರೆ ತಾನೆ. ಸೈನಿಕರು ರಾಣನನ್ನು ಸೆರೆಯಿಂದ ಬಿಡಿಸಿ ಮೇವಾಡದತ್ತ ಕರೆದೊಯ್ದರು. ಸುದ್ದಿ ಖಿಲ್ಜಿಯ ದಂಡನಾಯಕ ಜಾಫರನಿಗೆ ತಲುಪಿತು. ಆತ ಸೈನ್ಯ ಸಜ್ಜುಗೊಳಿಸಿ ರತ್ನಸಿಂಹನ ಬೆನ್ನಟ್ಟಿದ್ದ.
राणा के पथ पर शाही सेना तनिक बढ़ा था
पर उसपर तो गोरा हिमगिरि सा अड़ा खड़ा था
ಆದರೆ ಅವರ ಎದುರಾದದ್ದು ರಾಜಸ್ಥಾನ ಕಂಡ ಎರಡು ಅಪ್ರತಿಮ ವೀರಮಣಿಗಳಾದ ಗೋರಾಬಾದಲರು.
यह कह के महाकाल बन गोरा रण में हुंकारा
लगा काटने शीश बही समर में रक्त की धारा
खिलजी की असंख्य सेना से गोरा घिरे हुए थे
लेकिन मानो वे रण में मृत्युंजय बने हुए थे
इस भीषण रण से दहली थी दिल्ली की दीवारें
गोरा से टकरा कर टूटी खिलजी की तलवारें
ಗೋರಾಬಾದಲರ ಶೌರ್ಯದೆದುರು ಖಿಲ್ಜಿಯ ಖಡ್ಗಗಳು ಕತ್ತರಿಸಿ ಬಿದ್ದವು. ಅವರನ್ನು ತಡೆವರಿಲ್ಲದೆ ದೆಹಲಿಯ ಕೋಟೆಗಳು ತತ್ತರಿಸಿ ಬಿದ್ದವು. ಲಕ್ಷ ಲಕ್ಷ ಸೈನಿಕರು ಗೋರಾಬಾದಲರ ಕತ್ತಿಗೆ ಸಿಕ್ಕು ತರಿದು ಹೋದರು.
मगर क़यामत देख अंत में छल से काम लिया था
गोरा की जंघा पर अरि ने छिप कर वार किया था
वहीँ गिरे वीर वर गोरा जफ़र सामने आया
शीश उतार दिया धोखा देकर मन में हर्षाया
ಎದುರಿಂದ ಗೆಲ್ಲಲಾಗದೇ ಹಿಂದಿನಿಂದ ಗೋರಾನ ಕಾಲಿಗೆ ಕತ್ತಿ ಬೀಸಿದನಂತೆ ಜಾಫರ್. ಕೆಳಗೆ ಬಿದ್ದವನ ಕುತ್ತಿಗೆಗೆ ಪ್ರಹಾರ ಮಾಡಿದ.
मगर वाह रे मेवाड़ी गोरा का धड़ भी दौड़ा
किया जफ़र पर वार की जैसे सर पर गिरा हतोड़ा
एक बार में ही शाही सेना पति चीर दिया था
जफ़र मोहम्मद को केवल धड़ ने निर्जीव किया था
ಎಂಥ ಅದ್ಭುತ ರೂಪಕವನ್ನು ಬಳಸುತ್ತಾರೆ ನರೇಂದ್ರಮಿಶ್ರರಿಲ್ಲಿ. ಕುತ್ತಿಗೆಯಿಲ್ಲದ ಗೋರಾನ ದೇಹ ವೈರಿಗಳ ಮೇಲೆ ಮುಗಿಬಿತ್ತಂತೆ. ಮುಂದಿನ ಹೊಡೆತಕ್ಕೆ ಜಾಫರ ನಿರ್ಜೀವನಾಗಿದ್ದ.
ज्यों ही जफ़र कटा शाही सेना का साहस लरज़ा
काका का धड़ लख बादल सिंह महारुद्र सा गरजा
ಚಿಕ್ಕಪ್ಪ ಗೋರಾನ ದೇಹ ಆರೀತಿ ಹೋರಾಡುವುದನ್ನು ನೋಡಿ ಬಾದಲ್ ತಾನೇನು ಕಡಿಮೆ ಎಂದು ಮಹಾರುದ್ರನಂತೆ ದೆಹಲಿಯ ಸೈನಿಕರ ಮೇಲೆರಗಿದ.
ज्वाला मुखी फहत हो जैसे दरिया हो तूफानी
सदियों दोहराएंगी बादल की रण रंग कहानी
अरि का भाला लगा पेट में आंते निकल पड़ी थीं
जख्मी बादल पर लाखो तलवारें खिंची खड़ी थी
कसकर बाँध लिया आँतों को केशरिया पगड़ी से
रण चक डिगा न वो प्रलयंकर सम्मुख मृत्यु खड़ी से
अब बादल तूफ़ान बन गया शक्ति बनी फौलादी
मानो खप्पर लेकर रण में लड़ती हो आजादी
उधर वीरवर गोरा का धड़ आर्दाल काट रहा था
और इधर बादल लाशों से भूदल पात रहा था
आगे पीछे दाएं बाएं जैम कर लड़ी लड़ाई
उस दिन समर भूमि में लाखों बादल पड़े दिखाई
ಎಂಥ ಅಪ್ರತಿಮ ವರ್ಣನೆ. ಪ್ರಳಯಭಯಂಕರ ಜ್ವಾಲಾಮುಖಿ ಬಾಯ್ದೆರೆದಂತೆ, ಭೀಕರ ಚಂಡಮಾರುತ ಅಪ್ಪಳಿಸಿದಂತೆ ಬಾದಲ್ ದೆಹಲಿಯ ಸೈನಿಕರ ಮೇಲೆ ಮುಗಿಬಿದ್ದ. ಹೊಟ್ಟೆಬಗೆದು ಕರುಳು ಹೊರಬಂದಿದ್ದರೂ ತನ್ನ ಪಗಡಿಯನ್ನು ಬಿಚ್ಚಿ ಹೊಟ್ಟೆಗೆ ಕಟ್ಟಿ ಹೋರಾಡುತ್ತಿದ್ದಾನೆ ಬಾದಲ್. ಆದರೆ......
मगर हुआ परिणाम वही की जो होना था
उनको तो कण कण अरियों के सोन तामे धोना था
अपने सीमा में बादल शकुशल पहुच गए थे
गारो बादल तिल तिल कर रण में खेत गए थे
ಕೊನೆಗೂ ಆಗುವುದೇ ಆಯಿತು. ತಮ್ಮ ಕಣಕಣದ ರಕ್ತವನ್ನೂ ಯುದ್ಧಭೂಮಿಯಲ್ಲಿ ಬಿತ್ತಿದ ಗೋರಾಬಾದಲರು ಭಾರತಮಾತೆಯ ಮಣ್ಣಿನಲ್ಲಿ ಒಂದಾಗಿ ಹೋದರು. ಅತ್ತ ರತ್ನಸಿಂಹ ಸುರಕ್ಷಿತವಾಗಿ ಮೇವಾಡ ತಲುಪಿದ್ದ.
       ಈ ಸೋಲಿನ ಅವಮಾನದಿಂದ  ಚೇತರಿಸಿಕೊಳ್ಳುವುದು ಅಲ್ಲಾವುದ್ದೀನನಿಗೆ ಬಹಳ ಕಷ್ಟವಾಯಿತು. ಮುಂದಿನ ವರ್ಷ ಆತ ಭಾರೀ ಸೈನ್ಯದೊಡನೆ ಚಿತ್ತೂರಿಗೆ ಬಂದು ಘನಘೋರವಾದ ಧಾಳಿ ಮಾಡಿದ. ಇತರೇ ರಜಪೂತರ ಸಹಾಯ ಪಡೆಯಲು ರತ್ನಸಿಂಹ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಚಿತ್ತೂರು ಏಳು ತಿಂಗಳುಗಳ ಕಾಲ ಏಕಾಂಗಿಯಾಗಿ ಹೋರಾಡಬೇಕಾಯಿತು. ಕೋಟೆಯಲ್ಲಿದ್ದ ಆಹಾರದ ದಾಸ್ತಾನು ಖಾಲಿಯಾಗಿತ್ತು.  ಇನ್ನು ಉಳಿಯುವುದು ಕಷ್ಟವೆಂದು ಕಂಡುಬಂದಾಗ ರತ್ನಸಿಂಹ ಮತ್ತವನ ಸೈನಿಕರು ಕೋಟೆಯ ಬಾಗಿಲನ್ನು ತೆರೆದು, ಸುಲ್ತಾನನ ಸೈನ್ಯದ ಮೇಲೆ ಬಿದ್ದು ಪ್ರಾಣವಿರುವವರೆಗೂ  ಹೋರಾಡಿ ಹುತಾತ್ಮರಾದರು.
       ಇತ್ತ ಚಿತ್ರಕೂಟ(ಚಿತ್ತೋರ್‌ಗಢ್) ಕೋಟೆಯೊಳಗೆ ಪದ್ಮಿನಿ ಮತ್ತವಳ ಸಖಿಯರು ವಿಶಾಲವಾದ ಅಗ್ನಿಕುಂಡವನ್ನು ಸಿದ್ಧಪಡಿಸಿ ಅದರಲ್ಲಿ ಧುಮುಕಿ ಜೋಹರ್ ಆಚರಿಸಿದರು.ಕೋಟೆ ಗೆದ್ದ ವಿಜಯೋತ್ಸಾಹದಲ್ಲಿ ಒಳಬಂದ ಖಿಲ್ಜಿಗೆ ಕಂಡಿದ್ದು ಬೂದಿಗಳ ರಾಶಿಯಷ್ಟೆ. ತಮ್ಮ ಆತ್ಮಬಲ, ಧರ್ಮಬಲಗಳ ಅಪ್ರತಿಮ ಉಪಮೆಯಾಗಿ ಪದ್ಮಿನಿ ಭಾರತೀಯರ ಮನೆಮನಗಳಲ್ಲಿ ಚಿರಸ್ಥಾಯಿಯಾಗಿ ಹೋದಳು.
       ಮೇವಾಡದ ಚಿತ್ತೋರ್‌ಗಢ್ ಕೋಟೆ ಮೂರು ಬಾರಿ ಜೋಹರ್ ಅನ್ನು ಕಂಡಿದೆ. ಖಿಲ್ಜಿಯ ಆಕ್ರಮಣವಾದಾಗ ಪದ್ಮಿನಿಯು ಆತ್ಮಾರ್ಪಣೆ ಮಾಡಿಕೊಂಡದ್ದು ಮೊದಲ ಬಾರಿ. ರಾಣಾ ಸಂಗನ ಕಾಲದಲ್ಲಿ ಬಹದೂರ್ ಷಾ ಜಾಫರನ ಆಕ್ರಮಣವಾದಾಗ ರಾಣಿ ಕರ್ಣಾವತಿಯದ್ದು ಎರಡನೇ ಬಾರಿ ಹಾಗೂ ರಾಣಾ ಉದಯ ಸಿಂಗನು ಅಕ್ಬರನೆದುರು ಸೋತಾಗ ಮೂರನೇ ಬಾರಿ .
ಇದು ಪದ್ಮಾವತಿ ಹಾಗೂ ಚಿತ್ತೋರಿನ ಸಂಕ್ಷಿಪ್ತ ಕಥೆ.
       ಕೇಳುಗ ಎಂಥವನೇ ಆಗಿರಲಿ, ಅವನ ಕಣ್ಣುಗಳಿಂದ ಎರಡು ಹನಿ ಕಣ್ಣೀರು ಉದುರದಿರುವುದೇ ಅಸಾಧ್ಯವಾಗಿರುವಷ್ಟು ಭಾವೋತ್ಕಟವಾದ ಕಥೆಯಿದು.  ಸಮಕಾಲೀನ ಜಗತ್ತಿನಲ್ಲಿ ಪದ್ಮಿನಿಯ ಬಗ್ಗೆ ಬಂದ ಎರಡು ಅತ್ಯುತ್ತಮ ಪುಸ್ತಕಗಳಲ್ಲಿ ಒಂದು ಜಗರ್ನಾಟಿನ ’ರಾಣಿ ಪದ್ಮಿನಿ: ದಿ ಬರ್ನಿಂಗ್ ಕ್ವೀನ’, ಇನ್ನೊಂದು ಅನುಜಾ ಚಂದ್ರಮೌಳಿ, ಮೃದುಲಾ ಬೆಹಾರಿಯವರ ’ಪದ್ಮಿನಿ: ದ ಸ್ಪಿರಿಟೆಡ್ ಕ್ವೀನ್ ಆಫ್ ಚಿತ್ತೋರ್’. ಎರಡನೇಯ ಪುಸ್ತಕದಲ್ಲಿ ಒಂದು ಸಂಭಾಷಣೆಯಿದೆ. ಖಿಲ್ಜಿ ಪದ್ಮಿನಿಯ ಮುಖ ತೋರಿಸುವಂತೆ ರತ್ನಸಿಂಹನಿಗೆ ಹೇಳಿದಾಗ ಆತ ಒಪ್ಪಿಕೊಂಡು ವಿಷಯವನ್ನು ಪದ್ಮಿನಿಯಲ್ಲಿ ಪ್ರಸ್ತಾಪಿಸುತ್ತಾನೆ. ಚಿತ್ತೋರಿನ ಭವಿಷ್ಯಕ್ಕೊಸ್ಕರ ಪದ್ಮಿನಿ ಇಷ್ಟಾದರೂ ತ್ಯಾಗ ಮಾಡಿಯಾಳೆಂದು ಅವನ ಭಾವನೆ. ಮಾತು ಮುಗಿಸುವುದರೊಳಗೆ ಪದ್ಮಿನಿ ಸಿಡಿದೇಳುತ್ತಾಳೆ. ’ಹಾಗಾದರೆ ಈ ಅರಸೊತ್ತಿಗೆಯವರಿಗೆ ಹೆಣ್ಣೆಂದರೆ ಏನೂ ಅಲ್ಲವೇ! ಹೆಣ್ಣು ಒಂದು ದೇಹವಲ್ಲ, ಅವಳೊಂದು ಸಂಸ್ಕೃತಿಯೆಂಬ ಕನಿಷ್ಟ ಪ್ರಜ್ಞೆಯೂ ಇಲ್ಲವೇ ನಿಮಗೆ? ಹೆಣ್ಣೆಂದರೆ ತಾಯಿ, ಹೆಣ್ಣೆಂದರೆ ಶೀಲ, ಹೆಣ್ಣೆಂದರೆ ಹುಟ್ಟು. ಸಹಸ್ರ ಸಹಸ್ರ ವರ್ಷಗಳಿಂದ ನೆಲ ಮೌಲ್ಯಗಳನ್ನು, ಸಂಸ್ಕಾರಗಳನ್ನು, ಧ್ಯೇಯಗಳನ್ನು ಹೊತ್ತು ತಂದವಳು  ಹೆಣ್ಣು. ರಾಜರ ಕಿರೀಟಗಳು, ಸಿಂಹಾಸನಗಳು ಇಂದಿರುತ್ತವೆ, ನಾಳೆ ಬೀಳುತ್ತವೆ. ಸನಾತನ ಸಂಸ್ಕೃತಿಯೊಂದೇ ಕೊನೆಯವರೆಗೂ ಬಾಳಬೇಕಾದದ್ದು. ಆತನ ಬಲ, ಐಶ್ವರ್ಯ, ರಾಜ್ಯದ ವರ್ಣನೆ ನನಗೆ ಬೇಡ. ಅರ್ಯಾವರ್ತದ ಮಹಾರಾಜರುಗಳೆಲ್ಲ ಯಕಶ್ಚಿತ್ ತುರ್ಕನೆದುರು ಶರಣಾಗಿದ್ದು ರಜಪೂತ ಕುಲಕ್ಕೇ ಅವಮಾನ. ಹೆಣ್ಣಿನ ಘನತೆಗೆ ಕುಂದು ತರುವ ಆಚರಣೆ ಮಾಡೆಂದು ಅಪೇಕ್ಷಿಸುವುದು ಯಾವ ಸೀಮೆ ಧರ್ಮ’ ಎಂದು ಅಬ್ಬರಿಸುತ್ತಾಳೆ. ಅವಳ ಮಾತು ನಿಜವೂ ಹೌದು. ರಾಣಾ ಪ್ರತಾಪ, ರಾಣ ಸಂಗನಂಥವರನ್ನು ಬಿಟ್ಟು ಹೆಚ್ಚಿನೆಲ್ಲ ರಜಪೂತರು ಮೊಘಲರ ಕಾಲದಲ್ಲಿ ತಮ್ಮ ರಾಜ್ಯವನ್ನುಳಿಸಿಕೊಳ್ಳಲು ಮನೆಯ ಮಗಳನ್ನು ಸುಲ್ತಾನನಿಗೆ ಮದುವೆ ಮಾಡಿ ಕೊಡಬೇಕಾದ ದುಷ್ಕರ ಸ್ಥಿತಿಯನ್ನೆದುರಿಸಬೇಕಾಯಿತು. ರಜಪೂತರ ಮನೆಯ ಹೆಣ್ಣು ತರುವುದು ಆ ಕಾಲದಲ್ಲಿ ಮೊಘಲರಿಗೂ ಪ್ರತಿಷ್ಟೆಯ ವಿಷಯವಾಗಿತ್ತೆನ್ನಿ. ಇದರ ವಿರುದ್ಧವೇ ಪದ್ಮಿನಿ ಸಿಡಿದೆದ್ದಿದ್ದು. ಅಂಥವಳು ಭಾರತೀಯ ನಾರಿಯರ ಸಾರ್ವಕಾಲಿಕ ಐಕಾನ್ ಆಗದೇ ಇನ್ಯಾರಾಗಬೇಕು ಹೇಳಿ?
ಪದ್ಮಿನಿ ಮಹಲ್, ಚಿತ್ತೋರಗಢ ಕೋಟೆ
 ಹಾಗಾದರೆ ಪದ್ಮಿನಿಯ ಕಥೆ ನಿಜವೇ?!
       ಈ ಕಥೆ ನಮಗೆ ಮೊದಲು ಸಿಗುವುದು ಮಲಿಕ್ ಮಹಮ್ಮದ್ ಜಯಸಿ ಎಂಬ ಸೂಫಿ ಸಂತನ ಪದ್ಮಾವತ್ ಎಂಬ ಮಹಾಕಾವ್ಯದಲ್ಲಿ.  ಅದೂ ರಾಣಾ ರತ್ನಸಿಂಹನ ಮರಣದ ಬರೋಬ್ಬರಿ ಇನ್ನೂರ ಮೂವತ್ತೇಳು ವರ್ಷಗಳ ನಂತರ.  ಇದರ ಮೂಲ ಹೆಸರು ಪದ್ಮಾವತಿ ಎಂದೇ ಇರಬೇಕು. ಲಖ್ನೋದ ನವಲ್ ಕಿಶೋರ್ ಪ್ರೆಸ್ಸಿನಲ್ಲಿ ರಾಮಜಶನ ಮಿಶ್ರರಿಂದ ಮೊದಲು ಸಂಪಾದನೆಗೊಂಡು ಪದ್ಮಾವತ್ ಎಂಬ ಹೆಸರಿನೊಂದಿಗೆ ಮುದ್ರಣಗೊಂಡಿತು. ಡಾ.ಗ್ರಿಯರ್ಸನ್ ರಾಯಲ್ ಏಶಿಯಾಟಿಕ್ ಸೊಸೈಟಿ ಆಫ್ ಬೆಂಗಾಲದಲ್ಲಿ ಇದರ ಮುದ್ರಣವನ್ನು ಹೊರತರುವಾಗ ಪದ್ಮಾವತಿ ಎಂಬ  ಶುದ್ಧ ಹೆಸರೇ ಉಳಿಯಿತು. ಮುಂದೆ ಡಾ.ಸೂರ್ಯಕಾಂತ ಶಾಸ್ತ್ರೀ, ಆಚಾರ್ಯ ರಾಮಚಂದ್ರ ಶುಕ್ಲ, ಡಾ.ಮಾತಾಪ್ರಸಾದ ಗುಪ್ತ, ವಾಸುದೇವಶರಣ ಅಗರವಾಲರಂಥ ಪ್ರಗಲ್ಭರ ಸಂಪಾದಕತ್ವದ ಮರುಮುದ್ರಣಗಳಲ್ಲಿ ಮತ್ತೆ ಇದು ಪದ್ಮಾವತ್ ಎಂದು ಕರೆಸಿಕೊಂಡಿತು. ಇದರ ಮೂಲ ಹಸ್ತಪ್ರತಿಯಿರುವುದು ಪಾರಸಿ ಲಿಪಿಯಲ್ಲಿ. ಪಾರಸಿಯಲ್ಲಿ ದೀರ್ಘ ಈಕಾರಕ್ಕೆ ಸರಿಯಾದ ಅಕ್ಷರವಿದ್ದರೆ ಹೃಸ್ವ ಇಕಾರಕ್ಕೆ ’ಅ’ದ ಕೆಳಗೆ ’ಪೇಶ್’ ಎಂಬ ಚಿಹ್ನೆಯನ್ನು ಉಪಯೋಗಿಸಲಾಗುತ್ತದೆ. ಹಾಗಾಗಿ ಮೂಲಪ್ರತಿಯಲ್ಲಿ ಪದ್ಮಾವತಿ ಎಂದಿದ್ದರೂ ಪೇಶ್ ಒರೆಸಿಹೋಗಿರುವ ಕಾರಣಕ್ಕೋ ಅಥವಾ ಓದುವಾಗ ಬಿಟ್ಟುಹೋದ್ದರಿಂದಲೋ ಅದು ಮುಂದೆ ಪದ್ಮಾವತ್ ಆಗಿಯೇ ರೂಢಿಗೆ ಬಂದಿರಬೇಕು. ಹೆಸರೇನೇ ಇದ್ದರೂ ಆ ಕಾವ್ಯ ತನ್ನ ನಾಯಿಕೆ ಪದ್ಮಾವತಿಯಿಂದಲೇ ಹೆಸರು ಪಡೆದುಕೊಂಡಿತೆಂಬುದು ನಿರ್ವಿವಾದ. ಜಯಸಿ ಕಥೆಯುದ್ದಕ್ಕೂ ತನ್ನ ನಾಯಿಕೆಯನ್ನು ಪದ್ಮಾವತಿಯೆಂದೇ ಸಂಬೋಧಿಸುತ್ತಾನೆ. ಒಂದೆರಡು ಕಡೆ ಪದ್ಮಿನಿಯೆಂದು ಕರೆದಿದ್ದೂ ಇದೆ. ಅವನ ಕಾಲಕ್ಕೆ ಖ್ಯಾತವಾಗಿದ್ದ ಹಿಂದಿಯ ಸರ್ವಪ್ರಥಮ ಸಾಹಿತ್ಯವೆಂದು  ಪರಿಗಣಿತವಾಗುವ ಮುಲ್ಲಾ ದಾವೂದನ ಚಂದಾಯನ ಹಾಗೂ ಕುತುಬನ್‌ನ ಮೃಗಾವತಿ ಎಂಬೆರಡು ನಾಯಿಕಾ ಪ್ರಧಾನವಾದ ಮಹಾಕಾವ್ಯಗಳು ಪದ್ಮಾವತಿಯ ಶೀರ್ಷಿಕೆ ಮತ್ತು ಶೈಲಿಯ ಮೇಲೆ ಮಹದ್ಪ್ರಭಾವವನ್ನು ಬೀರಿರುವ ಸಾಧ್ಯತೆಯಿದೆ. ಇದೇ ಕಾಲಕ್ಕೆ ಮಂಝನನ ಮಧುಮಾಲತಿ, ಉಸ್ಮಾನನ ಚಿತ್ರಾವಳಿ, ನೂರ್ ಮಹಮ್ಮದನ ಇಂದ್ರಾವತಿಯಂಥ ನಾಯಿಕಾ ಪ್ರಧಾನ ಕಾವ್ಯಗಳ ಶೀರ್ಷಿಕೆಗಳನ್ನು ಗಮನಿಸಿದರೆ ಒಟ್ಟಾರೆಯಾಗಿ ಜಯಸಿ ಪದ್ಮಾವತಿಯನ್ನು ತನ್ನ ನಾಯಕಿಯಾಗಿಟ್ಟುಕೊಂಡು ಅದರ ಸುತ್ತಲೇ ಕಥೆ ಹೆಣೆದನೆಂಬುದನ್ನು ಯಾರೂ ಊಹಿಸಬಹುದು. 
ಪದ್ಮಾವತ್ 
       
ಅಮೇಠಿಯಲ್ಲಿರುವ ಜಯಸಿಯ ಸಮಾಧಿ
     ಇವೆಲ್ಲವುಗಳಿಗಿಂತ ಹೆಚ್ಚಾಗಿ ಜಯಸಿಯನ್ನು ಪ್ರಭಾವಿಸಿದ್ದು ಹದಿನೈದನೇ ಶತಮಾನದ ನಯಚಂದ್ರಸೂರಿಯ ಹಮ್ಮೀರ ಮಹಾಕಾವ್ಯ. ಇದು ಹದಿಮೂರನೇ ಶತಮಾನದಲ್ಲಿ ರಣಥಂಬೋರನ್ನಾಳಿದ ಹಮ್ಮೀರ ದೇವನ ಕುರಿತು ರಚನೆಗೊಂಡಿದ್ದು. ಜಲಾಲುದ್ದೀನ ಖಿಲ್ಜಿಯ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದ ಹಮ್ಮೀರದೇವ ದಿಲ್ಲಿ ಸಾಮ್ರಾಜ್ಯಕ್ಕೆ ದೊಡ್ಡ ಕಂಟಕವಾಗಿ ಬೆಳೆಯುತ್ತಾನೆ. ಜಲಾಲುದ್ದೀನನ ನಂತರ ಅಲ್ಲಾದ್ದೀನ್ ಖಿಲ್ಜಿ ಮೂರು ಬಾರಿ ಹಮ್ಮೀರ ರಾಜ್ಯದ ಮೇಲೆ ಆಕ್ರಮಣ ಮಾಡಿದ. ಮೊದಲೆರಡು ಬಾರಿ ಹಮ್ಮೀರ ಖಿಲ್ಜಿಯನ್ನು ಸೋಲಿಸಿ ದೆಹಲಿಯ ಸೀಮೆಯ ತನಕ ಅಟ್ಟಿಕೊಂಡು ಹೋಗುತ್ತಾನೆ. ಮೂರನೇ ಬಾರಿ ಹಮೀರನ ಅದೃಷ್ಟ ಕೈಕೊಟ್ಟಿತು. ದೊಡ್ಡ ಮೊತ್ತದ ರಾಯಧನವನ್ನೂ ಜೊತೆಗೆ ಮಗಳನ್ನೂ ಕೊಡುವಂತೆ ಖಿಲ್ಜಿ ಬೇಡಿಕೆಯಿಟ್ಟ. ಮಗಳೂ ಕೂಡ ಖಿಲ್ಜಿಯನ್ನು ಮದುವೆಯಾಗಲು ಒಪ್ಪಿದಳು. ರಾಯಸವನ್ನು ಕೊಡಲೇನೋ ಮನಸ್ಸು ಮಾಡಿದ್ದ ಹಮ್ಮೀರ ಯಾವ ಕಾರಣಕ್ಕೂ ಕಲುಷಿತ ರಕ್ತದ ಮ್ಲೇಚ್ಛನಿಗೆ ರಜಪೂತ ಕನ್ಯೆಯನ್ನು ಕೊಡಲು ಸಾಧ್ಯವಿಲ್ಲವೆಂದು ಖಡಾಖಂಡಿತವಾಗಿ ನಿರಾಕರಿಸುತ್ತಾನೆ. ಖಿಲ್ಜಿ ತನ್ನ ಹಳೆಯ ವಿದ್ಯೆ ಪ್ರಯೋಗಿಸಿದ. ಕೋಟೆಯನ್ನು ತಿಂಗಳುಗಳ ಕಾಲ ಮುತ್ತಿ ನೀರು, ಆಹಾರ ಸಿಗದಂತೆ ನೋಡಿಕೊಂಡ. ಕೊನೆಗೆ ಕೋಟೆ ಬಿಟ್ಟು ಮೈದಾನಕ್ಕಿಳಿದ ರಜಪೂತರು ಯುದ್ಧದಲ್ಲಿ ಮಡಿದರು. ಒಳಗೆ ಅವರ ಹೆಂಡಂದಿರು, ಹೆಣ್ಮಕ್ಕಳು ತಮ್ಮ ಮಾನ ಕಾಪಾಡಿಕೊಳ್ಳಲು ಜೋಹರ್ ಪ್ರವೇಶಿಸಿದರು.  ಈ ಕಥೆ ಜಯಸಿಯ ಪದ್ಮಾವತದ ರಚನೆಯ ಮೂಲಪ್ರೇರಣೆಯಾಗಿರಬಹುದೆಂದು ಹೆಚ್ಚಿನ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಸೂರಿಯ ಕಾವ್ಯದ ಹಮ್ಮೀರ ಹದಿನಾರನೇ ಶತಮಾನಕ್ಕೆ ಬರುವಾಗ ಜಯಸಿಯ ಕೈಯಲ್ಲಿ ರತ್ನಸಿಂಹನಾಗಿದ್ದ. ತನ್ನ ಮಗಳನ್ನು ತುರ್ಕನಿಗೆ ಕೊಡಲು ಒಪ್ಪದೇ ರಜಪೂತರ ಸ್ವಾಭಿಮಾನದ ಪ್ರತೀಕವಾಗಿ ನಿಂತಿದ್ದ ಹಮ್ಮೀರದೇವನ ಕಥೆ ಹೆಂಡತಿಯನ್ನು ಬಿಟ್ಟುಕೊಡಲೊಪ್ಪದ ರತ್ನಸಿಂಹನ ಕಥೆಯಗಿ ರೂಪಾಂತರವಾಯಿತು. ಅಲ್ಲಿ ಹಮ್ಮೀರನ ಮಗಳು ಖಿಲ್ಜಿಯನ್ನು ಮದುವೆಯಾಗಲು ಒಪ್ಪಿದರೆ ಇಲ್ಲಿ ರತ್ನಸಿಂಹನ ಪತ್ನಿ ಪದ್ಮಿನಿ ರಜಪೂತರ ಸಾರ್ವಕಾಲಿಕ ರೆಬೆಲ್ ಮಹಿಳೆಯಾಗಿ ಬೆಳೆದುನಿಲ್ಲುತ್ತಾಳೆ. ಹಾಗೆಂದು ಇದು ಹಮ್ಮೀರಕಾವ್ಯದ ಭಟ್ಟಿಯೆಂದು ತಿಳಿದರೆ ಅದು ಜಯಸಿಯಂಥ ಮಹಾಕವಿಗೆ ಮಾಡಿದ ಅಪಮಾನವಾದೀತು. ಇಂದಿಗೂ ಪದ್ಮಿನಿ ಭಾರತೀಯರ ಮನೆಮನಗಳಲ್ಲಿ ಚಿರಸ್ಥಾಯಿಯಾಗಿದ್ದರೆ ಅದರ ಹೆಚ್ಚಿನ ಶ್ರೇಯ ಸಲ್ಲುವುದು ಅವನಿಗೇ.
        ನಲ್ವತ್ತೇಳು ಖಂಡಗಳ ಈ ಮಹಾಕಾವ್ಯ ರಚನೆಗೊಂಡಿದ್ದು ೧೫೪೦-೪೧ರ ಆಸುಪಾಸಿನಲ್ಲಿ. ಜಯಸಿಯ ಕಾವ್ಯಗಳ ಮೆಲೆ ವರ್ಷಗಳ ಕಾಲ ಸಂಶೋಧನೆ ನಡೆಸಿದ ಪಂಡಿತ ಮಾತಾಪ್ರಸಾದ್ ಗುಪ್ತಾ ಪರ್ಷಿಯನ್, ನಾಗರಿ, ಮುಘಲರ ಕಾಲದಲ್ಲಿ ಪ್ರಸಿದ್ಧಿಯಲ್ಲಿದ್ದ ಕೈಥಿ ಲಿಪಿಯ ಪದ್ಮಾವತ್‌ನ ಐದು ಹಸ್ತಪ್ರತಿಗಳನ್ನು ಹುಡುಕಿ ತೆಗೆದಿದ್ದಾರೆ. ಅವೆಲ್ಲವೂ ಹದಿನೇಳನೇ ಶತಮಾನದ ಅಂತ್ಯದವು. ಅವುಗಳಲ್ಲಿ ಮೊದಲನೇಯದು ಹಾಗೂ ಇದ್ದುದರಲ್ಲಿ ಜಯಸಿಯ ಮೂಲಕೃತಿಯ ಆಶಯಕ್ಕೆ ಹೋಲುವಂಥದ್ದು ೧೬೭೫ರಲ್ಲಿ ಅಮರೋಹಾದ ಮುಹಮ್ಮದ್ ಶಾಕೀರನ ರಾಂಪುರ ಹಸ್ತಪ್ರತಿ. ಪದ್ಮಾವತ್‌ದ ಬೇರೆ ಬೇರೆ ವ್ಯಾಖ್ಯಾನಗಳನ್ನು, ದೊರಕಿರುವ ಹತ್ತಕ್ಕೂ ಹೆಚ್ಚು ಪಾಠಬೇಧಗಳನ್ನು ಗಮನಿಸಿದರೆ ಅದು ಜಯಸಿಯ ರಚನೆಯಿಂದ ಹಾಡುಗಬ್ಬಗಳ ಮೂಲಕ, ಅನುವಾದ, ಭಾವಾಂತರಗಳ ಮೂಲ ಹದಿನೇಳನೇ ಶತಮಾನದ ಅಂತ್ಯಭಾಗಕ್ಕಾಗಲೇ ಉತ್ತರ ಭಾರತದ ಮೂಲೆಮೂಲೆಗಳನ್ನು ತಲುಪಿರಬೇಕು. ದೃಶ್ಯ,ಶೃವ್ಯ ಮಾಧ್ಯಮದ ಮೂಲಕವೂ ಪದ್ಮಾವತಿಯ ಬೇರೆಬೇರೆ versionಗಳು ಬೆಳೆದುಬಂದವು. ಜಯಸಿಯ ಈ ಕಾವ್ಯವನ್ನು ಬರೆದು ಐವತ್ತು ವರ್ಷಗಳ ನಂತರ ಕವಿ ಹೇಮರತ್ನನ ಗೋರಾಬಾದಲ್ ’ಪದ್ಮಿನಿ ಚೌಪದ’ ಕಾವ್ಯದೊಡನೆ ರಾಜಸ್ಥಾನದಲ್ಲಿ ಪದ್ಮಿನಿಯ ಕಥೆ ಪ್ರಚಾರಕ್ಕೆ ಬಂತು. ಈ ಕಾವ್ಯಗಳೆರಡೂ ಬೇರೆ ಬೇರೆ ರಾಜಾಸ್ಥಾನಗಳನ್ನು ಹಾದು ೧೬೨೩ರಲ್ಲಿ ಜಟ್ಮಲ್ ನಹರ್‌ನ ’ಗೋರಾಬಾದಲ್ ಕಿ ಕಥಾ’, ೧೬೪೫ರಲ್ಲಿ ಲಬ್ಧೋದಯನ ’ಪದ್ಮಿನೀ ಚರಿತ್ರ’, ೧೭೦೨ರಲ್ಲಿ ಭಾಗ್ಯವಿಜಯನ ’ಪದ್ಮಿನಿ ಚರಿತ್‌’ದಂಥ ಗ್ರಂಥಗಳ ಹುಟ್ಟಿಗೆ ಕಾರಣವಾದವು. ಈ ಕಥೆಗಳು ಅದೆಷ್ಟು ಜನಪ್ರಿಯವಾದವೆಂದರೆ ಮುಂದೆ  ’ರಾಜಾವಿಲಾಸ’, ’ಖುಮ್ಮನ ರಾಸೋ’,  ಮುಹೋಂತ್ ನೈನಸಿಯ ’ನೈನ್ಸಿ ರಿ ಖ್ಯಾತ್’, ’ಮರ್ವಾರ್ ರಾ ಪರ್ಗಾನಾ ರಿ ವಿಗತ್’, ’ರಾವಲ್ ರಾಂಜಿ ರಿ ಬಾತ್’, ’ಸಿಸೋದಿಯಾ ವಂಶಾವಳಿ’, ’ಚಿತ್ತೋರ್ ಉದಯಪುರ ಪಾಠನಾಮಾ’ನಂಥ ಹದಿನೇಳನೇ ಶತಮಾನದಲ್ಲಿ ರಚಿತಗೊಂಡಿರುವ ರಾಜವಂಶಾವಳಿಗಳಲ್ಲೂ ಸೇರಿಕೊಂಡಿತು. ಜೋಧಪುರದ ರಾಣಾ ಜಸವಂತ ಸಿಂಗನ ದೀವಾನ ನೈನಸಿ ತಾನು ಪದ್ಮಿನಿಯ ಕಾರಣಕ್ಕೆ ರತ್ನಸಿಂಹ ಖಿಲ್ಜಿಯಿಂದ ಕೊಲ್ಲಲ್ಪಟ್ಟ ಕಥೆಯನ್ನು ಹಾಡುಗಳಲ್ಲಿ ಕೇಳಿದ್ದಾಗಿ ಹೇಳಿಕೊಳ್ಳುತ್ತಾನೆ. ಹದಿನಾರನೇ ಶತಮಾನದ ಮಧ್ಯಭಾಗದಲ್ಲಿ ಹುಟ್ಟಿದ್ದ ಪದ್ಮಿನಿ ಪಾತ್ರ ನೂರುವರ್ಷಗಳೊಳಗೆ  ಮೇವಾಡದ ರಾಣಿಯಾಗಿ ಇಡೀ ರಾಜಸ್ಥಾನ ಹಾಗೂ ಪಶ್ಚಿಮ ಭಾರತವನ್ನು ವ್ಯಾಪಿಸಿಕೊಳ್ಳುತ್ತದೆ. ನಾಥ, ಜೈನ, ಸೂಫಿ ಪಂಥಗಳ ವಿವಿಶ ಉಪಾಖ್ಯಾನಗಳಲ್ಲಿ ಪದ್ಮಿನಿಯ ಕಥೆ ಬೆಳೆದು ನಿಲ್ಲುತ್ತದೆ. ಅಷ್ಟಾಗಿದ್ದರೆ ವಿಶೇಷವಿಲ್ಲ. ೧೬೫೧ರಲ್ಲಿ ದೂರದ ಬರ್ಮಾದ ಅರಕನ್ ಪ್ರದೇಶದ(ರೋಹಿಂಗ್ಯಾಗಳು ಮೂಲ ಇಲ್ಲಿಯವರೇ) ಸಯ್ಯದ್ ಆಲೋಲ್ ಎಂಬ ಸೂಫಿ ಸಂತನ ಕೈಲಿ ಇದೇ ಪದ್ಮಾವತ್ ’ಪದ್ಮಬತ್ತಿ’ಯಾಗಿ ಜನ್ಮತಳೆದು ಹಳೆಯ ವಂಗದೇಶದಲ್ಲಿ ಪ್ರಸಿದ್ಧಿ ಗಳಿಸುತ್ತದೆ. ಮುಂದೆ ಹದಿನೆಂಟನೇ ಶತಮಾನದಲ್ಲಿ ಕರ್ನಲ್ ಜೇಮ್ಸ್ ಟೋಡ್‌ನ ’Annals and Antiquities of Rajast'han’ದಲ್ಲಿ ಮತ್ತೆ ಉಲ್ಲೇಖಿಸಲ್ಪಡುವ ಪದ್ಮಾವತಿಯ ಕತೆ ಇಂಗ್ಲೀಷಿನಲ್ಲಿಯೂ ಪ್ರಚಲಿತಕ್ಕೆ ಬರುತ್ತದೆ. ಟೋಡ್‌ನ ಪ್ರಕಾರ ಪದ್ಮಾವತಿ ಸಿಲೋನಿನ ಹಮಿರ್ ಸಂಕ್‌ ಎಂಬ ರಾಜನ ಮಗಳು ಹಾಗೂ ಮೇವಾಡದ ಭೀಮಸಿಂಗನ ಮಡದಿ. ಅದರಾಚೆಯಂತೂ ಪದ್ಮಾವತಿಯ ಕಥೆ ದೇಶವಿದೇಶಗಳಲ್ಲಿ ಎಷ್ಟು ಬಾರಿ ಜನ್ಮತಳೆದಿದೆಯೋ ಲೆಕ್ಕವಿಟ್ಟವರಿಲ್ಲ. ರಂಗಲಾಲ ಬಂಡೋಪಾಧ್ಯಾಯರ ’ಪದ್ಮಿನಿ ಉಪಾಖ್ಯಾನ’, ಜ್ಯೋತೀಂದ್ರನಾಥ ಠಾಕೂರರ ’ಚಿತ್ತೋರ್ ಆಕ್ರಮಣ’ಗಳ ಮೂಲಕ ಪೂರ್ವದಲ್ಲೂ ಪದ್ಮಾವತಿ ಜನಪ್ರಿಯಳಾದಳು.
       ಅವಳೆಷ್ಟು ಬಾರಿ ಜನ್ಮತಳೆದರೂ ಅವೆಲ್ಲವುಗಳೂ ಮೂಲಕಥೆಯಾದ ಪದ್ಮಾವತ್‌ನಿಂದಲೇ ಸ್ಫೂರ್ತಿಗೊಂಡವು. ಅದರಾಚೆ ಪದ್ಮಿನಿಯನ್ನು ಹುಡುಕಹೊರಟರೆ ನಿರಾಸೆ ಕಾದಿಟ್ಟಿದ್ದೆ.  ಭಾರತೀಯ ವಿದ್ಯಾಭವನದ ಭಾರತೀಯ ಇತಿಹಾಸವನ್ನು ತೆಗೆದು ನೋಡಿದರೆ ಜನವರಿ ೧೩೦೩ರಂದು ಖಿಲ್ಜಿ ಚಿತ್ತೋರನ್ನು ಮುತ್ತಿದ ಘಟನೆಯಿಂದ ಹಿಡಿದು ರಜಪೂತರು ಏಳು ತಿಂಗಳು ಬಿಡದೇ ಕಾದಾಡಿದ್ದು, ಕೊನೆಗೂ ಅಗಸ್ಟಿನಲ್ಲಿ ಕೋಟೆ ವಶವಾದಾಗ ಒಳಗಿದ್ದ ಹೆಂಗಸರೆಲ್ಲ ಜೌಹರಿಗೆ ಹಾರಿ ಬೂದಿಯಾಗಿದ್ದು ದಾಖಲಾಗಿದ್ದರೂ ಪದ್ಮಿನಿಯ ಹೆಸರು ಮಾತ್ರ ನಾಪತ್ತೆ. ಇನ್ನು ಪದ್ಮಿನಿಯ ಸಮಕಾಲೀನ ಇತಿಹಾಸಕಾರರ ಪುಸ್ತಕಗಳಲ್ಲಿ ಅವಳನ್ನು ಹುಡುಕೋಣವೆಂದರೆ ಅಲ್ಲೂ ನಿರಾಸೆಯೇ. ಅಲ್ಲಾದ್ದೀನ್ ಖಿಲ್ಜಿಯ ಆಸ್ಥಾನ  ಕವಿ ಅಮೀರ್ ಖುಸ್ರೋ ಖಿಲ್ಜಿಯ ಜೊತೆಗೇ ಬಂದು ಚಿತ್ತೋರಿನ ಘಟನೆಗೆ ಸಾಕ್ಷಿಯದವ. ಆದರಾತ ತನ್ನ ತ್ವಾರಿಕ್-ಎ-ಅಲ್ಲಾಹಿಯಲ್ಲಿ ಪದ್ಮಿನಿಯ ಬಗ್ಗೆ ಒಂದಕ್ಷರವನ್ನೂ ನುಡಿಯುವುದಿಲ್ಲ. ತನ್ನದೇ ಇನ್ನೊಂದು ಕೃತಿಯಾದ ಖಾಜಾಂ-ಉಲ್-ಫತೂಹ್‌ನಲ್ಲಿ ರಾಣಿ ಶೆಬಾ ಎನ್ನುವವಳನ್ನುಲ್ಲೇಖಿಸಿದರೂ ಅವಳೇ ಪದ್ಮಿನಿಯೆಂದು ಹೇಳುವ ಹಾಗಿಲ್ಲ.  ರಾಜಾಸ್ಥಾನಗಳಲ್ಲಿ ಚಾಕರಿಗಿದ್ದ ಬಹುಪರಾಕ್ ಲೇಖಕರೆಲ್ಲ ಇದ್ದದ್ದನ್ನು ಇದ್ದಂತೆ ಬರೆದಿಟ್ಟಿದ್ದಾರಂತೇನಲ್ಲ. ಅವರಿಗೂ ಅವರದೇ ಆದ ಇತಿಮಿತಿಗಳಿರುತ್ತವೆ. ಮೊಘಲರ ಆಸ್ಥಾನದಲ್ಲಿದ್ದ ಖ್ಯಾತ ಇತಿಹಾಸಕಾರ  ಅಬುಲ್ ಫಜಲ್‌ನಿಗೆ ಅವನ್ನ ಐನ್-ಎ-ಅಕ್ಬರಿಯಲ್ಲಿ ಜಹಾಂಗೀರನ ಪತ್ನಿ ಮೆಹ್ರುನ್ನಿಸಾ ಉರುಫ್ ನೂರ್ ಜಹಾನಳ ಬಗ್ಗೆ ಬರೆಯದಂತೆ ಅಕ್ಬರನ ನಿರ್ಬಂಧವಿತ್ತು. ಯಾಕೆಂದರೆ ಅದಾಗಲೇ ಶೇರ್ ಅಫ್ಘನ್ ಎನ್ನುವ ಪರ್ಷಿಯನ್ ಸೈನಿಕನೊಡನೆ ಮದುವೆಯಾಗಿದ್ದ ನೂರ್ ಜಹಾನಳನ್ನು ರಾಜಕುಮಾರ ಸಲೀಮ್ ಉರುಫ್ ಜಹಾಂಗೀರ್ ಪ್ರೀತಿಸುತ್ತಿದ್ದ ವಿಷಯ ಅಕ್ಬರನಿಗೆ ಸಾಕಷ್ಟು ಇರುಸುಮುರುಸು ತಂದಿತ್ತು. ಇದೇ ಅಬುಲ್ ಫಜಲ್ ಮುಂದೆ ಜಹಾಂಗೀರ್ ಪಟ್ಟಕ್ಕೇರಿದಾಗ ತುಝಕ್-ಎ-ಜಹಾಂಗರಿಯಲ್ಲಿ ನೂರಜಹಾನಳ ಬಗ್ಗೆ ವಿಸ್ತೃತವಾಗಿ ಬರೆಯುತ್ತಾನೆ. ಈ ನೂರ್ ಜಹಾನಳನ್ನು ಅನಾರ್ಕಲಿ ಎಂದು ತಪ್ಪು ತಿಳಿದ ಇತಿಹಾಸಕಾರರಿಗೇನು ಕಡಿಮೆ ಇಲ್ಲ. ಅಸಲಿಗೆ ಅನಾರ್ಕಲಿ ಎಂಬೊಬ್ಬಳು ಚರಿತ್ರೆಯಲ್ಲಿರಲೇ ಇಲ್ಲ. ಅಕ್ಬರ, ಜಹಾಂಗೀರರ ಕಾಲದ ಅಕ್ಬರನಾಮಾ, ತುಝಕ್-ಎ-ಜಹಾಂಗರಿ ಇನ್ನಿತರ ದಾಖಲೆಗಳಲ್ಲಿ ಅವಳ ಹೆಸರೆಲ್ಲೂ ಇಲ್ಲ. ಮುಂದೆ ಅಬ್ದುಲ್ ಹಲೀಮ್ ಶರಾರ್ ತನ್ನ ಕೃತಿಗಳಲ್ಲಿ ಅನಾರ್ಕಲಿ ಎಂಬ ಕಾಲ್ಪನಿಕ ಸುಂದರಿಯನ್ನು ಸೃಷ್ಟಿಸಿ ಜಗತ್ಪ್ರಸಿದ್ಧಗೊಳಿಸಲಿಲ್ಲವೇ! ಅದರ ಮೇಲೆ ಬಂದ ಸಿನೆಮಾಗಳಿಗೇನು ಕೊರತೆಯೇ!
       ಅದರ ಕಥೆ ಏನೇ ಇದ್ದರೂ ಅಮೀರ್ ಖುಸ್ರೋನಂಥ ದಾರ್ಶನಿಕ, ಚಿತ್ತೋರಿನ ಮೇಲೆ ಖಿಲ್ಜಿಯ ಆಕ್ರಮಣವನ್ನು ಕಣ್ಣಾರೆ ಕಂಡವನು ಎಲ್ಲಿಯೂ ಪದ್ಮಿನಿಯ ಹೆಸರೆತ್ತದಿರುವುದೇಕೆ? ಕರ್ನಲ್ ಜೇಮ್ಸ್ ಟೋಡಿನ Annals and Antiquities of Rajast'hanದಲ್ಲಿ ಪದ್ಮಿನಿಯ ಪ್ರಸಂಗವಿದ್ದರೂ ಖಿಲ್ಜಿ ಅವಳ ಸೌಂದರ್ಯಕ್ಕೆ ಮನಸೋತು ಚಿತ್ತೋರಿನ ಮೇಲೆ ದಾಳಿ ಮಾಡಿದ ಕಥೆಯಿಲ್ಲ. ಪದ್ಮಿನಿ ಜೌಹರ್ ಪ್ರವೇಶಿಸಿದ ನಂತರದ ಇನ್ನೂರ ಮೂವತ್ತು ಚಿಲ್ಲರೆ ವರ್ಷಗಳವರೆಗೆ ಆಕೆಯ ಬಗ್ಗೆ ಒಂದೇ ಒಂದು ಉಲ್ಲೇಖವನ್ನೂ ಯಾವ ಕವಿ, ಇತಿಹಾಸಕಾರನೂ ಒಂದೇ ಒಂದು ಕಡೆಯೂ ಮಾಡಿಲ್ಲ. ಇನ್ನು ಜಯಸಿಯ ಪದ್ಮಾವತ್ ಅಪ್ಪಟ ಇತಿಹಾಸವೆನ್ನುವಂತಿಲ್ಲ. ಸಮಕಾಲೀನ  ಚಂದಾಯಣ, ಮೃಗಾವಲಿಗಳಂತೆ ಅದೂ ಒಂದು ಐತಿಹಾಸಿಕ ಕಾಲ್ಪನಿಕ ಕೃತಿ. ತನ್ನ ಕಾವ್ಯದಲ್ಲಿ ಪದ್ಮಾವತಿಯನ್ನು ಸಿಂಹಳದ ಗಂಧರ್ವಸೇನನ ಮಗಳೆನ್ನುತ್ತಾನೆ ಜಯಸಿ. ಆ ಹೆಸರಿನ ರಾಜನೊಬ್ಬ ಸಿಂಹಳವನ್ನಾಳಿದ ಯಾವುದೇ ಕುರುಹಿಲ್ಲ. ಹದಿಮೂರನೇ ಶತಮಾನದಲ್ಲಿ ಸಿಂಹಳವನ್ನಾಳಿದ ದಂಬದೇನಿಯ ವಂಶದ ಮೂವರು ರಾಜರ ಹೆಸರು ಮೂರನೇ ವಿಜಯಬಾಹು(೧೨೨೦-೧೨೨೪), ಒಂದನೇ ಭುವನೈಕಬಾಹು(೧೨೭೧-೧೨೮೩) ಹಾಗೂ ಇಂತರಗ್ನಂ(೧೨೮೩-೧೩೦೨). ಈ ಮೂವರಲ್ಲಿ ಪದ್ಮಿನಿಯ ತಂದೆಯೆನ್ನಲಾಗುವ ಗಂಧರ್ವಸೇನ ಯಾರು? ಇನ್ನು ಮಾತಾಡುವ ಗಿಳಿಯೊಂದು ಸಿಂಹಳದಿಂದ ಚಿತ್ತೂರಿಗೆ ಹಾರಿ ಬರುವುದು, ಅದರ ಮಾತು ಕೇಳಿ ರತ್ನಸಿಂಹ ಸಮುದ್ರ ದಾಟಿ ಸಿಂಹಳಕ್ಕೆ ಬಂದು ಗಂಧರ್ವಸೇನನನ್ನು ಗೆದ್ದು ಪದ್ಮಿನಿಯನ್ನು ವರಿಸುವುದು ಇವೆಲ್ಲ ಕವಿಕಲ್ಪನೆಯ ರಮ್ಯಚೈತ್ರಕಾವ್ಯವಷ್ಟೆ.
       ಇಲ್ಲಿ ಇನ್ನೂ ಎರಡು ಉಲ್ಲೇಖಿಸಲರ್ಹವಾದ ವಿಷಯಗಳಿವೆ. ರಾಣಾಸಂಗನ ನಂತರ ಮೇವಾಡವನ್ನಾಳಿದ ಎರಡನೇ ರತ್ನಸಿಂಹ ಜಯಸಿಯ ಸಮಕಾಲೀನ. ರಜಪೂತರ ಜೊತೆ ಹತ್ತಿರದ ಒಡನಾಟವಿಟ್ಟುಕೊಂಡಿದ್ದ ಜಯಸಿ ಆತನನ್ನೇ ನಾಯಕನನ್ನಾಗಿಟ್ಟುಕೊಂಡು ಈ ಕೃತಿಯನ್ನು ಬರೆದಿರಬಹುದು ಎಂದು ಕೆಲ ಚರಿತ್ರಕಾರರ ಊಹೆ. ಮನ್ನಣೆಗಾಗಿ ರಜಪೂತ ಮಹಾರಾಜನನ್ನು ಖುಷಿಪಡಿಸಲು ಬರೆದಿರಬಹುದೆಂದಿಟ್ಟುಕೊಂಡರೂ ಹಾಗೆ ತಿಳಿಯಲು ಇನ್ನೊಂದು ಕಾರಣವೂ ಇದೆ.  ತನ್ನ ಸಮಕಾಲೀನ ಘಟನೆಗಳನ್ನು ಜಯಸಿ ತನ್ನ ಕಾವ್ಯದಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದಾನೆ. ದೆಹಲಿಯನ್ನಾಳಿದ್ದ ಶೇರ್ ಶಾ ಸೂರಿ ಕೂಡ ಇವನ ಸಮಕಾಲೀನ. ರೊಹ್ತಾಸಿನ ಕೋಟೆ ಆಗ ಹಿಂದೂ ರಾಜರ ಕೈಲಿತ್ತು. ಅದೇ ಸಮಯಕ್ಕೆ ಶೇರ್ ಶಾ ಹುಮಾಯೂನನ ವಿರುದ್ಧ ಯುದ್ಧದಲ್ಲಿ ಚುನಾರ್ ಕೋಟೆಯನ್ನು ಕಳೆದುಕೊಂಡಿದ್ದ. ತಾನು ದೂರದ ಬಂಗಾಳದಲ್ಲಿರುವುದಾಗಿಯೂ ಕೆಲ ದಿನಗಳ ಮಟ್ಟಿಗೆ ತನ್ನ ಅರಮನೆಯಲ್ಲಿರುವ ಹೆಂಗಸರು, ಮಕ್ಕಳು ಹಾಗೂ ನಗನಾಣ್ಯಗಳನ್ನು ಮುಘಲರಿಂದ ರಕ್ಷಣೆ ಪಡೆಯಲು ತಮ್ಮ ಕೋಟೆಯಲ್ಲಿರಿಸಿಕೊಳ್ಳಲು ದಯಮಾಡಿ ಅವಕಾಶ ನೀಡಬೇಕಾಗಿಯೂ ರೊಹ್ತಾಸಿನ ರಾಜನಿಗೆ ಪತ್ರ ಬರೆದ. ಭೋಳಾಶಂಕರ ರೊಹ್ತಾಸ್ ರಾಜ ಉದಾರ ಮನಸ್ಸಿನಿಂದ ಹೂಂ ಅಂದ. ಬಂದ ನೂರಾರು ಪಲ್ಲಕ್ಕಿಗಳಲ್ಲಿ ಎದುರಿಗಿದ್ದವರು ಮಾತ್ರ ಹೆಂಗಸರು, ಮಕ್ಕಳು. ಹಿಂದಿದ್ದವರೆಲ್ಲ ಅಫ್ಘನ್ ಸೈನಿಕರು. ರಾತ್ರಿ ಬೆಳಗಾಗುವುದರೊಳಗೆ ಯುದ್ಧ ಮಾಡದೇ ಕೋಟೆ ಶೇರ್ ಶಾನ ವಶವಾಗಿತ್ತು. ಇದೇ ಘಟನೆ ಜಯಸಿಯ ಕಾವ್ಯದ ಭಾಗವೊಂದಕ್ಕೆ ಸ್ಫೂರ್ತಿಯಾಗಿರಬಹುದೇ!
       ಸಮಕಾಲೀನ ಸಾಹಿತ್ಯದಲ್ಲಿ ಎಲ್ಲೂ ಉಲ್ಲೇಖಿಸಲ್ಪಡದ ಪದ್ಮಾವತಿ ಅಸಲು ಇದ್ದಳೆಂದು ನಂಬಲರ್ಹವಾಗುವ ಆಧಾರ ಇದುವರೆಗೂ ದೊರಕಿಲ್ಲ. ಹಾಗೆಂದು ಅವಳು ಇಲ್ಲವೇ ಇಲ್ಲ ಎನ್ನುವುದಕ್ಕೆ ನನಗಂತೂ ಧೈರ್ಯ ಸಾಲದು. ರಾಜಸ್ಥಾನದ ಜನಪದದಲ್ಲಿ, ಲಾವಣಿಗಳಲ್ಲಿ ಹಾಡುಗಬ್ಬಗಳಲ್ಲಿ ಅವಳಿಂದಿಗೂ ಜೀವಂತವಾಗಿದ್ದಾಳೆ. ಪದ್ಮಿನಿಯೇನೋ ಇದ್ದಳು ಎಂದಿಟ್ಟುಕೊಳ್ಳೋಣ. ಲಾಹೋರಿನ ಜಟ್ಮಲ್ ನಹರನಿಂದ ಬರ್ಮಾದ ಆಲೋಲನ ತನಕ, ಮುಸ್ಲಿಂ ಮಲಿಕ್ ಮಹಮ್ಮದ ಜಯಸಿಯಿಂದ ನಾಥ ಪಂಥದ ಹೇಮರತ್ನನ ತನಕ ನೂರಾರು ಕವಿಗಳ ಬಾಯಲ್ಲಿ ಸಾವಿರ ಸಾವಿರ ಬಾರಿ ಪದ್ಮಿನಿ ಜನ್ಮತಳೆದಿದ್ದಾಳೆ. ಬನ್ಸಾಲಿಯದ್ದು ಸಾವಿರದ ಒಂದನೇಯದ್ದಷ್ಟೆ. ಆ ಸಾಗರದಲ್ಲಿ ಅಸಲು ಪದ್ಮಿನಿಯನ್ನು ಹುಡುಕುವುದು ಹೇಗೆ? ಯಾರ ಕಥೆ ನಿಜ, ಯಾರ ಕಥೆ ಸುಳ್ಳು?  ಹದಿನಾರನೇ ಶತಮಾನದ ಜಯಸಿಯ ಕಲ್ಪನೆಯ ಕೂಸು ಈ ಪದ್ಮಾವತಿ. ಕಳೆದ ನಾನೂರೈವತ್ತು ವರ್ಷಗಳಲ್ಲಿ ಆ ಪದ್ಮಾವತಿಗಿಲ್ಲದ ವಿರೋಧ ಬನ್ಸಾಲಿ ಚಿತ್ರ ಮಾಡುತ್ತೇನೆಂದ ಕೂಡಲೇ ಹುಟ್ಟಿದ್ದು ಯಾಕೆಂಬ ಯಕ್ಷಪ್ರಶ್ನೆಗೆ ಪ್ರಜ್ಞಾವಂತರ್ಯಾರಿಗೂ ಉತ್ತರ ಹುಟ್ಟಲು ಸಾಧ್ಯವಿಲ್ಲ.
       ಹದಿನೈದನೇ ಶತಮಾನದ ಭೋಜಪ್ರಬಂಧವೆಂಬ ಕಾಲ್ಪನಿಕ ಕೃತಿಯನ್ನಾಧರಿಸಿ ನಿರ್ಮಿಸಿದ ಕವಿರತ್ನ ಕಾಳಿದಾಸ ಎಂಬ ಚಿತ್ರದಲ್ಲಿ ಕ್ರಿ.ಪೂರ್ವದಲ್ಲಿದ್ದವನನ್ನು ಹನ್ನೊಂದನೇ ಶತಮಾನಕ್ಕೆಳೆತಂದು ಭೋಜನ ಆಸ್ಥಾನದಲ್ಲಿ ಕೂಡ್ರಿಸಿದ್ದಲ್ಲದೇ ಶುದ್ಧ ವೈದಿಕ ಕಾಳಿದಾಸನನ್ನು ಕುರಿ ಕಾಯುವ ಪೆಕ್ರನಂತೆ ತೋರಿಸಲಾಯಿತು. ಹಾಗೆಂದು ಆ ಚಿತ್ರವನ್ನು ಚಿತ್ರವಾಗಿ ನೋಡಿದರಲ್ಲದೇ ಅದನ್ನು ನಿಷೇಧಿಸಿ, ರಾಜಕುಮಾರರ ಮೂಗು ಕತ್ತರಿಸಿ ಎಂದು ಯಾವ ಸಂಘಟನೆಯೂ ಕರೆಕೊಡಲಿಲ್ಲ. ರಾಜಸ್ಥಾನಕ್ಕೆ ಪದ್ಮಿನಿ ಹೇಗೋ ಕೇರಳಿಗರ ಪಾಲಿಗೆ ಉನ್ನಿಯಾರ್ಚೆ ವೀರನಾರಿ. ೧೯೮೯ರಲ್ಲಿ ಜ್ಞಾನಪೀಠಿ ಎಮ್.ಟಿ.ವಾಸುದೇವನ್ ನಾಯರ್ ಮಲಬಾರಿನ ವಡಕ್ಕನ್ ಪಾಟ್ಟುಗಳಲ್ಲಿ ಬರುವ ಉನ್ನಿಯಾರ್ಚೆಯ ಕಥೆಯನ್ನಾಧರಿಸಿ ಆವರೆಗೆ ಪ್ರಚಲಿತದಲ್ಲಿದ್ದ ನಿರೂಪಣೆಯನ್ನೇ ಸ್ವಲ್ಪ ಬದಲಿಸಿ ಒರು ವಡಕ್ಕನ್ ವೀರಗಥಾ ಎನ್ನುವ ಚಿತ್ರ ನಿರ್ಮಿಸಿದ್ದರು. ವಡಕ್ಕನ್ ಪಾಟ್ಟುಗಳ ಖಳನಾಯಕ ಛಾಯೆಯುಳ್ಳ ಚತ್ತಿಯಾನ್ ಚಂದುವಿನ ದೃಷ್ಟಿಕೋನದಲ್ಲಿ ನಿರೂಪಿಸಲ್ಪಟ್ಟ ಚಿತ್ರದಲ್ಲಿ ಅವನೇ ನಾಯಕನಾಗಿದ್ದ. ದೇಶವಿದೇಶಗಳಲ್ಲಿ ಪ್ರಶಸ್ತಿಗಳನ್ನು ಕೊಳ್ಳೆ ಹೊಡೆದ ಈ ಚಿತ್ರವನ್ನು ನಿಷೇಧಿಸಿ ಎಂದು ಯಾವ ಮಲಯಾಳಿಯೂ ಬೀದಿಗಿಳಿಯಲಿಲ್ಲ. ಪದ್ಮಾವತಿ ಖಿಲ್ಜಿಯ ಒಂದೇ ಫ್ರೇಮಿನಲ್ಲಿ ಕಾಣಿಸಿಕೊಳ್ಳುವುದಿಲ್ಲವೆಂದೂ ಅವರಿಬ್ಬರ ಮಧ್ಯೆ ಯಾವ ರೊಮ್ಯಾನ್ಸ್ ದೃಶ್ಯವೂ ಇಲ್ಲವೆಂದು ಬನ್ಸಾಲಿ ಈಗಾಗಲೇ ಸಾರಿ ಹೇಳಿದ ಮೇಲೂ ಚಿತ್ರವನ್ನೂ ಪ್ರತಿಭಟನೆಯನ್ನು ಮುಂದುವರೆಸಿರುವ ಉದ್ದೇಶವೇನು? ಈಗಾಗಲೇ ಪ್ರಚಲಿತದಲ್ಲಿರುವ ಕಾವ್ಯವೊಂದನ್ನು ಭಟ್ಟಿಯಿಳಿಸುವ ಸ್ವಾತಂತ್ರ್ಯವೂ ನಿರ್ದೇಶಕನಿಗಿಲ್ಲವೆಂದಮೇಲೆ ನಮ್ಮಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಉಳಿದ ಬೆಲೆಯಾದರೂ ಏನು? ದೇಶದಲ್ಲಿ ಭ್ರಷ್ಟಾಚಾರದ ಪ್ರಕರಣಗಳಲ್ಲಿ ನಂಬರ್ ಒನ್, ದಲಿತರ ವಿರುದ್ಧ ನಡೆಯುವ ದೌರ್ಜನ್ಯದಲ್ಲಿ ಎರಡನೇ ಸ್ಥಾನ, ಅತ್ಯಾಚಾರದಲ್ಲಿ ಮೂರನೇ ಸ್ಥಾನ, ಮಹಿಳಾ ದೌರ್ಜನ್ಯದಲ್ಲಿ ನಾಲ್ಕನೇ ಸ್ಥಾನ, ಮಹಿಳಾ ಸಾಕ್ಷರತೆಯಲ್ಲಿ ಕೊನೆಯ ಸ್ಥಾನ, ಶಿಶು ಮರಣದಲ್ಲಿ ಮೊದಲ ಸ್ಥಾನದಲ್ಲಿರುವ ರಾಜಸ್ಥಾನಕ್ಕೆ ಪದ್ಮಿನಿಯನ್ನು ಬಿಟ್ಟರೆ ಪ್ರತಿಭಟಿಸಲು ಉಳಿದ ವಿಷಯಗಳೇ ಇಲ್ಲವೇ?
       ರಾಜಸ್ಥಾನದಲ್ಲಿ ಮುಂದಿನ ವರ್ಷ ಚುನಾವಣೆ. ರಾಜಕಾರಣಿಗಳಿಗೆ ಪ್ರತಿಭಟನೆಯ ನೆಪದಲ್ಲಿ ಹುಲುಸಾದ ವೋಟುಗಳ ಬೆಳೆ. ಸಂಕ ಮುರಿದಲ್ಲೇ ಸ್ನಾನ ಎಂಬಂತೆ ಮಧ್ಯಪ್ರದೇಶದ ಶಿವರಾಜ್ ಚೌಹಾನ್ ಪದ್ಮಾವತಿಗೆ ಕೆಲವು ಕೋಟಿಗಳ ಭವ್ಯ ಸ್ಮಾರಕ ಸ್ಮಾರಕವನ್ನು ನಿರ್ಮಿಸಿ, ಅವಳ ಹೆಸರಲ್ಲಿ ಪ್ರಶಸ್ತಿಯನ್ನು ಸ್ಥಾಪಿಸುವ ಸೂಚನೆ ನೀಡಿದ್ದಾರೆ. ಟಿವಿ ಚಾನಲ್ಲುಗಳಿಗೆ ಇನ್ನೊಂದಾರು ತಿಂಗಳ ಚರ್ಚೆಗೆ ಬರವಿಲ್ಲ. ಆಮೇಲೆ ಯಥಾ ಪ್ರಕಾರ ರಾಮಮಂದಿರ ಯಾವಾಗ ನಿರ್ಮಾಣವಾಗಬೇಕು? ಟಿಪ್ಪು ಜಯಂತಿ ಆಚರಿಸಬೇಕೋ ಇಲ್ಲವಾ? ಥೇಟರುಗಳಲ್ಲಿ ಜನಗಣಮನಕ್ಕೆ ನಿಲ್ಲಬೇಕಾ ಬೇಡ್ವಾ? ಇತ್ಯಾದಿ ಇತ್ಯಾದಿ ದೇಶ ಜನ ಎದುರಿಸುತ್ತಿರುವ ಜ್ವಲಂತ ಚರ್ಚೆಗಳು ಮುನ್ನೆಲೆಗೆ ಬರುತ್ತವೆ. ಇವುಗಳ ಜೊತೆಗೆ ವಂದೇ ಮಾತರಂ, ಪಾಕಿಸ್ತಾನ, ಕಾಶ್ಮೀರ, ಲವ್ ಜಿಹಾದ್, ಹಿಂದು ಮುಸ್ಲಿಂಗಳಲ್ಲಿ ಕಾಲೌ ಗಚ್ಛತು ಧೀಮತಾಂ.
Thats how years will pass, our lives will pass too. ಲೋಗ್ ಮರ್ ಜಾಯೇಂಗೆ, ಸಬ್ ಠೀಕ್ ಹೋಜಾಯೇಗಾ....ಓಂ ಶಾಂತಿ.