Pages

Tuesday, March 8, 2016

ಟಿಪ್ಪು ಕಾ ಬೇಟಾ, ಮಲಬಾರ್ ಕಿ ಬೀವಿ

ಜಾನ್ ಜೊಟ್ಟಮ್‌ನ ಟಿಪ್ಪುವಿನ ತೈಲಚಿತ್ರ(೧೭೮೦)

       ಅತ್ತ ಹೈದ್ರಾಬಾದಿನ ನಿಜಾಮರು, ಇತ್ತ ಮರಾಠರು, ಟಿಪ್ಪುವಿಗೆ ಮಗ್ಗುಲ ಮುಳ್ಳಾಗಿ ಕಾಡುತ್ತಿದ್ದರು. ಒಡೆಯರ್ ಮನೆತನ ಒಳಗೊಳಗೆ ದಂಗೆಯೇಳುವ ಭೀತಿ ಬೇರೆ. ಬ್ರಿಟಿಷರು, ಡಚ್ಚರ್, ಪೋರ್ಚುಗೀಸರು ಮೂವರನ್ನೂ ಸೋಲಿಸಿದ ಏಕೈಕ ಅರಸನೆಂಬ ಖ್ಯಾತಿಯ ಧರ್ಮರಾಜಾರಾಮವರ್ಮನ ತಿರುವಾಂಕೂರಿಗೆ ಎದುರಾಳಿಗಳೇ ಇರಲಿಲ್ಲ. ಬ್ರಿಟಿಷರೂ ನಿಧಾನಕ್ಕೆ ತಿರುವಾಂಕೂರಿನ ಜೊತೆ ಕೈಜೋಡಿಸಿ ಇಬ್ಬರೂ ಮತ್ತಷ್ಟು ಪ್ರಬಲವಾಗುತ್ತಿದ್ದುದು ಟಿಪ್ಪುವಿನ ಪಾಲಿಗೆ ನುಂಗಲಾರದ ತುತ್ತಾಗಿತ್ತು. ಜೊತೆಗೆ ಮಲಬಾರಿನಲ್ಲಿ ಸ್ಥಳೀಯ ಮಾಪಿಳ್ಳೆ ಮುಸ್ಲೀಮರೂ ತಿರುಗಿ ಬಿದ್ದಿದ್ದರು. ಹಿಂದೂ ತುಂಡರಸರುಗಳು ಕೊಟ್ಟಾಯಂ ರಾಜ್ಯದ ನೇತೃತ್ವದಲ್ಲಿ ಒಟ್ಟುಗೂಡತೊಡಗಿದ್ದರು. ಟಿಪ್ಪುವಿಗೆ ತನ್ನ ಖುರ್ಚಿ ಗಟ್ಟಿಮಾಡಿಕೊಳ್ಳುವ ಉಪಾಯವ್ಯಾವುದೂ ಉಳಿದಿರುವ ಲಕ್ಷಣಗಳು ಕಾಣುತ್ತಿರಲಿಲ್ಲ. ಹಿಂದೂ ಅರಸರಿಂದ ಸಹಾಯ ದೊರಕುವುದಂತೂ ದೂರದ ಮಾತು. ಮುಸ್ಲೀಮರ ಮಧ್ಯದಲ್ಲಿ ಇರುವ ನೆಲೆಯೂ ಕುಸಿಯುವ ಹಂತ ತಲುಪಿತ್ತು. ಆದರೆ ಟಿಪ್ಪು ಬುದ್ಧಿವಂತ. ಮಲಬಾರಿನ ಮುಸ್ಲಿಂ ರಾಜಮನೆತನ ಅರಕ್ಕಲ್ ಸುಲ್ತಾನರಲ್ಲಿ ತನ್ನ ಮಗನ ವಿವಾಹ ಸಂಬಂಧ ಬೆಳೆಸಬಯಸಿ ಸಂದೇಶ ಕಳುಹಿಸಿದ. ಅದೇ ಸಮಯದಲ್ಲಿ ಮಲಬಾರಿನ ದಂಗೆಕೋರರಿಗೆ ಸಹಾಯ ಮಾಡುವುದನ್ನು ನಿಲ್ಲಿಸುವಂತೆ ಕೋರಿ ತಲಶೇರಿಯಲ್ಲಿನ ಬ್ರಿಟಿಷರಿಗೆ ಪತ್ರ ಬರೆದ. ಎರಡನೇ ಐಡಿಯಾ ಫ್ಲಾಪ್ ಆದರೆ ಮೊದಲನೇಯ ಬಾಣ ಗುರಿಮುಟ್ಟಿತ್ತು.
       ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ದಾಖಲೆಗಳ ಪ್ರಕಾರ ೧೭೮೯ರಂದು ಟಿಪ್ಪು ಕಣ್ಣೂರಿಗೆ ಭೇಟಿ ಕೊಟ್ಟಿದ್ದ. ಟಿಪ್ಪುವಿನ ಮಗ ಅಬ್ದುಲ್ ಖಾಲಿಕ್‌ನ ಜೊತೆ ಕಣ್ಣೂರಿನ ಅಲಿ ವಂಶದ ಅರಕ್ಕಲ್ ಬೀವಿಯ ಮಗಳ ಮದುವೆ ಏರ್ಪಾಡಾಗಿತ್ತು. ೧೭೮೨ರಲ್ಲಿ ಹುಟ್ಟಿದ್ದ ಖಾಲಿಕನಿಗೆ ಆಗ ಕೇವಲ ೭ ವರ್ಷ. ಇದಾಗಿ ಮೂರೇ ವರ್ಷಗಳ ನಂತರ ಟಿಪ್ಪುವಿನ ಇನ್ನೊಬ್ಬ ಮಗ ಮುಯಿಜುದ್ದೀನನೊಡನೆ ಖಾಲಿಕ್ ಶ್ರೀರಂಗಪಟ್ಟಣದ ಒಪ್ಪಂದದ ಪ್ರಕಾರ ಬ್ರಿಟಿಷರ ಯುದ್ಧ ಕೈದಿಯಾಗಿ ಉಳಿಯಬೇಕಾಯಿತು. ಸೆಪ್ಟೆಂಬರ್ ೧೨, ೧೮೦೬ರಲ್ಲಿ ಸಾಯುವಾಗ ಅಬ್ದುಲ್ ಖಾಲೀಕನಿಗೆ ಬರೀ ೨೪ ವರ್ಷ ವಯಸ್ಸು.        ವಿಲಿಯಮ್ ಲೋಗನ್ನಿನ ಮಲಬಾರ್ ಮ್ಯಾನ್ಯುವೆಲ್ಲಿನಲ್ಲಿ ಈ ಬಗ್ಗೆ ವಿಸ್ತ್ರತ ವರದಿಯಿದೆ. ತಾಮ್ರಶೇರಿ ಘಾಟಿನ ಮೂಲಕ ತನ್ನ ಬೃಹತ್ ಸೈನ್ಯದೊಡನೆ ಮಲಬಾರ್ ಪ್ರವೇಶಿಸಿದ ಟಿಪ್ಪು ಕಣ್ಣೂರಿನನಲ್ಲಿ ವೈಭವದಿಂದ ನಡೆದ ತನ್ನ ಮಗನ ಮದುವೆಯಲ್ಲಿ ಪಾಲ್ಗೊಂಡಿದ್ದ. ಇದೇ ಖುಷಿಗೆ ಆಗ ತಾನೆ ಮೈಸೂರಿನವರು ಗೆದ್ದಿದ್ದ ಕೊಳತ್ತಿರಿ ಪ್ರಾಂತ್ಯವನ್ನು  ವಧುದಕ್ಷಿಣೆಯಾಗಿ ಅರಕ್ಕಲ್ ರಾಜ್ಯಕ್ಕೆ ಬಳುವಳಿ ನೀಡಲಾಗಿತ್ತು. ಪ್ರಾಯಶಃ ಟಿಪ್ಪುವಿನ ಆ ನಿರ್ಧಾರ ಆ ದಿನಗಳ ಮಟ್ಟಿಗೆ ಒಂದು ಪೊಲಿಟಿಕಲ್ ಮಾಸ್ಟರ್ ಸ್ಟ್ರೋಕ್. ಕೇರಳದ ಏಕೈಕ ಮುಸ್ಲಿಂ ರಾಜಮನೆತನದ ಜೊತೆಗಿನ ವೈವಾಹಿಕ ಸಂಬಂಧ ಆ ಪ್ರದೇಶದಲ್ಲಿ ಸಡಿಲಗೊಳ್ಳುತ್ತಿದ್ದ ಬೇರುಗಳನ್ನು ಬಿಗಿಗೊಳಿಸಿಕೊಳ್ಳುವಲ್ಲಿ ಟಿಪ್ಪುವಿಗೆ ಬಹುಮಟ್ಟಿಗೆ ನೆರವು ನೀಡಿತು. ಇದು ಇನ್ನೂ ಒಂದು ಕಾರಣಕ್ಕೆ ಇಂಟರೆಸ್ಟಿಂಗ್. ಹೈದರಾಲಿಗೆ ತನ್ನ ಮಗನಿಗೆ ಹೈದರಾಬಾದಿನ ನಿಜಾಮರ ಮನೆಯಿಂದ ಹೆಣ್ಣು ತರಬೇಕೆಂಬ ಮಹದಾಸೆಯಿತ್ತು. ಉತ್ತರದಲ್ಲಿ ಮುಘಲರನ್ನು ಹೊರತುಪಡಿಸಿದರೆ ದಕ್ಷಿಣ ಭಾರತದ ನಿಜಾಮರೇ ಅತಿ ಪ್ರಬಲ ಮುಸ್ಲಿಂ ಅರಸರಾಗಿದ್ದರು. ಹೆಣ್ಣು ಕೇಳಿಕೊಂಡು ನಿಜಾಮರ ಮನೆಬಾಗಿಲಿಗೂ ಹೈದರಾಲಿ ಎಡತಾಕಿದ್ದ. ಪ್ರಪಂಚದಲ್ಲೇ ಅತಿ ಶ್ರೀಮಂತ ಅರಸೊತ್ತಿಗೆಯಾದ ನಿಜಾಮರು ಹೋಗಿ ಹೋಗಿ ಕುದುರೆ ಮಾಲಿಯ ಸಂಬಂಧ ಬೆಳೆಸುತ್ತಾರೆಯೇ? ಕೆಳ ಜಾತಿಯ ಪಂಜಾಬಿ ಸೈನಿಕನ ಮಗನಿಗೆ ಹೆಣ್ಣು ಕೊಡುವುದಿಲ್ಲವೆಂದು ನಿಜಾಮ ಕಡ್ಡಿ ಮುರಿದಂತೆ ಹೇಳಿಬಿಟ್ಟ. ಹೈದರನಿಗೆ ದೊಡ್ಡ ಮುಖಭಂಗವುಂಟಾಗಿತ್ತು. ಹಾಗೆ ಶುರುವಾದ ನಿಜಾಮ ಮತ್ತು ಮೈಸೂರು ಸಂಸ್ಥಾನಗಳ ಮುಸುಕಿನ ಗುದ್ದಾಟವೇ ಟಿಪ್ಪುವಿನ ಕಾಲದಲ್ಲಿ ಹೊಗೆಯಾಡಿ ಬೆಂಕಿಹೊತ್ತಿಕೊಂಡಿದ್ದು. ಹೈದರಾಲಿ ಆರ್ಕಾಟಿನ ನವಾಯತಿ ಇಮಾಮ್ ಸಾಹೆಬ್ ಬಕ್ಷಿಯ ಮಗಳು ರೌಶಾನಾ ಬೇಗಮ್ಮಳೊಡನೆ ಟಿಪ್ಪುವಿಗೆ ಮದುವೆ ಮಾಡಿಸಿದ. ಅದು ಅರೇಂಜ್ಡ್ ಮ್ಯಾರೇಜಿನ ಕಥೆಯಾಯಿತು. ಜೊತೆಜೊತೆಗೆ ಟಿಪ್ಪು ತಾನು ಚಿಕ್ಕಂದಿನಿಂದ ಪ್ರೀತಿಸುತ್ತಿದ್ದ ಜನರಲ್ ಲಾಲಾ ಮಿಯಾನ ಮಗಳು ರುಕಯ್ಯಾ ಬಾನುವನ್ನು ಮದುವೆಯಾದ. ಮಜಾ ಎಂದರೆ ಅವೆರಡೂ ಮದುವೆ ನಡೆದದ್ದು ಒಂದೇ ದಿನ. ೧೭೭೪ರಲ್ಲಿ ಮದುವೆಯಾದಾಗ ಟಿಪ್ಪುವಿಗೆ ೨೪ ವರ್ಷ ವಯಸ್ಸು.
       ಅರಕ್ಕಲ್ ಸಂಸ್ಥಾನದಲ್ಲಿ ಒಂದು ವಿಶೇಷತೆಯಿದೆ. ಅಲ್ಲಿ ರಾಜ್ಯಾಡಳಿತ ನಡೆಸಿದವರಲ್ಲಿ ಹೆಚ್ಚಿನವರೆಲ್ಲ ಮಹಿಳೆಯರೇ ಮತ್ತು ಅವರನ್ನೂ ’ರಾಜಾ’ ಎಂಬ ವಿಶೇಷಣದಿಂದಲೇ ಸಂಬೋಧಿಸಲಾಗುತ್ತಿತ್ತು. ೧೭೫೯ರಲ್ಲಿ ಕೃಷ್ಣರಾಜ ಒಡೆಯರನ್ನು ಸಿಂಹಾಸನದಿಂದ ಹೈದರಾಲಿ ಉಚ್ಛಾಟಿಸಿದಾಗ ಜಾತಿಯ ಕಾರಣಕ್ಕೆ ಅರಕ್ಕಲ್ ರಾಜ ಕುಞಿ ಅಂಸಾ ಹೈದರನ ಪಕ್ಷ ವಹಿಸಿದ್ದ. ಮಾಲ್ಡೀವ್ಸಿನ ಸುಲ್ತಾನ್ ಮಹಮ್ಮದ್ ಉಮಾದುದ್ದೀನನನ್ನು ಕುಞಿ ಅಂಸಾ ಸೆರೆಹಿಡಿದ ಬಳಿಕ ಹೈದರ ಮತ್ತವನ ದೋಸ್ತಿ ಶುರುವಾಗಿತ್ತು. ೧೭೬೩ರಲ್ಲಿ ಬಿದನೂರಿನ ದಂಗೆಯನ್ನಡಗಿಸಲು ಅರಕ್ಕಲ್ ರಾಜ್ಯ ಸಹಾಯ ಮಾಡಿದ ನಂತರ ಅದು ಮತ್ತೂ ಗಾಢವಾಯಿತು. ಹಾಗೆ ನೋಡಿದರೆ ಅರಕ್ಕಲ್ ಸಂಸ್ಥಾನ ಹೈದರ್ ಸಂತತಿಗಿಂತ  ಕುಲೀನ ವಂಶದವರು. ಮಲಬಾರಿನ ಇತಿಹಾಸದಲ್ಲಿ ಅಲಿ ವಂಶಕ್ಕೊಂದು ವಿಶಿಷ್ಟ ಸ್ಥಾನವಿದೆ. ಅವರ ಮೂಲ ಹುಡುಕುತ್ತ ಹೋದರೆ ಅದು ಹೋಗಿ ನಿಲ್ಲುವುದು ಇತಿಹಾಸ ಪ್ರಸಿದ್ಧ ಕೊಲತ್ತಿರಿ ಸೇನಾಧಿಪತಿ ಆರ್ಯಕುಲಂಗರ ನಾಯರ್‌ ಇಸ್ಲಾಮಿಗೆ ಮತಾಂತರವಾಗುವಲ್ಲಿ. ವಾಸ್ಕೋಡಿಗಾಮನ ಪಡೆಗಳ ವಿರುದ್ಧ ಹೋರಾಡಿದವರಲ್ಲಿ ಅರಕ್ಕಲ್ ರಾಜಕುಮಾರಿ ಆಯೇಶಳದ್ದು ದೊಡ್ಡ ಹೆಸರು. ಅಂಥಹ ಪ್ರತಿಷ್ಟಿತ ಮನೆತನದೊಟ್ಟಿಗೆ ಸಂಬಂಧ ಬೆಳೆಸುವುದು ಜಟಕಾ ಸಾಬಿ ಮಗ ಟಿಪ್ಪುವಿಗೆ ಹೆಮ್ಮೆ ತರುವ ವಿಷಯವಾಗಿತ್ತು.
       ಅಷ್ಟು ಮಾತ್ರವಲ್ಲ. ಅರಕ್ಕಲ್ ಮನೆತನದ ಇತಿಹಾಸ ಬಹಳ ಕುತೂಹಲಕರವಾದದ್ದು ಕೂಡ. ಇದರ ಬಗ್ಗೆ ಎರಡು ಕತೆಗಳು ಮಲಬಾರಿನಲ್ಲಿ ಚಾಲ್ತಿಯಲ್ಲಿವೆ. ಚೇರಾಮನ್ ಪೆರುಮಾಳ ಇಸ್ಲಾಮಿಗೆ ಮತಾಂತರವಾದ ವಿಷಯ ತಿಳಿದೇ ಇದೆ. ಈ ಪೆರುಮಾಳನ ಮೈದುನ ಮಾಬೇಲಿ ಆರ್ಯಕುಲಂಗರ ನಾಯರ್‌ ಕೊಳತ್ತನಾಡಿನ ಮುಖ್ಯ ಸೇನಾನಿಯಾಗಿದ್ದ. ಹೆಂಡತಿ ಶ್ರೀದೇವಿ ಕೊಳತ್ತಿರಿಯ ರಾಜಕುಮಾರಿ. ಪೆರುಮಾಳನ ಸಂದೇಶ ಹೊತ್ತು ಬಂದಿದ್ದ ಮಲಿಕ್ ದಿನಾರನ ಪ್ರಭಾವಕ್ಕೊಳಗಾಗಿ ಪೆರುಮಾಳನ ಹಲವು ಸಂಬಧಿಕರು ಇಸ್ಲಾಮಿಗೆ ಮತಾಂತರಗೊಂಡರು. ಕಣ್ಣೂರ್ ನಗರದ ಉತ್ತರಕ್ಕೆ ಮದಾಯಿಯಲ್ಲಿ ಮಲಿಕ್ ದಿನಾರ್ ಕಟ್ಟಿಸಿದ ಮಸೀದಿಗೆ ಭಾರತದ ಮೂರನೇ ಅತಿ ಹಳೆಯ ಮಸೀದಿಯೆಂಬ ಹೆಗ್ಗಳಿಕೆಯೂ ಇದೆ.(ಮೊದಲೆರಡೂ ಕೇರಳದಲ್ಲೇ ಇದೆ ಬಿಡಿ). ಮಾಬೇಲಿಯೂ ಮಲಿಕ್ ದಿನಾರಿನ ಪ್ರಭಾವದಿಂದ ಇಸ್ಲಾಮಿಗೆ ಮತಾಂತರವಾಗಿ ಮಹಮ್ಮದ್ ಅಲಿ ಎಂಬ ಹೆಸರಿಟ್ಟುಕೊಂಡ. ಕಣ್ಣೂರಿನ ತಲಶೇರಿಯ ಉತ್ತರಕ್ಕಿರುವ ಹಿನ್ನೀರಿನ ಮಧ್ಯದ ಸುಂದರ ದ್ವೀಪವಾದ ಧರ್ಮದಮ್‌ನ್ನು ಮುಖ್ಯಸ್ಥಾನವಾಗಿಟ್ಟುಕೊಂಡು ಈತನೇ ಅರಕ್ಕಲ್ ವಂಶವನ್ನು ಸ್ಥಾಪಿಸಿದನೆಂಬ ಪ್ರತೀತಿಯಿದೆ. ಹಾಗಾದರೂ ಮಾಬೇಲಿ ಕೊಳತ್ತಿರಿ ರಾಜ್ಯಕ್ಕೆ ತನ್ನ ನಿಷ್ಠೆಯನ್ನು ಮುಂದುವರೆಸಿದ. ಇವನ ಸಂತತಿಯವರು ಇಸ್ಲಾಂ ಸ್ವೀಕರಿಸಿದ್ದರೂ ಕೊಳತ್ತಿರಿ ರಾಜ್ಯದ ಜೊತೆ ವೈವಾಹಿಕ ಸಂಬಂಧ ಬೆಳೆಸುತ್ತ ತಮ್ಮ ನಾಯರ್ ಮೂಲವನ್ನು ಪೂರ್ತಿ ಬಿಟ್ಟುಕೊಡಲಿಲ್ಲ. ಜೊತೆಗೆ ನಾಯರ್ ಸಮುದಾಯದಲ್ಲಿ ಸಾಧಾರಣವಾಗಿ ಪ್ರಚಲಿತದಲ್ಲಿರುವ ಕುಟುಂಬದ ಒಡೆತನದ ಹಕ್ಕು ಹಿರಿಯ ಮಗಳಿಗೆ ವರ್ಗಾವಣೆಯಾಗುವ ಪದ್ಧತಿಯೂ ಅರಕ್ಕಲ್ ವಂಶಸ್ಥರಲ್ಲಿ ಮುಂದುವರೆಯಿತು. ೧೬ನೇ ಶತಮಾನದ ಹೊತ್ತಿಗೆ ಮಲಬಾರಿನಲ್ಲಿ ಹಲವು ಮುಸ್ಲಿಂ ಕುಟುಂಬಗಳು ಆರ್ಥಿಕವಾಗಿ ಶಕ್ತಿಶಾಲಿಯಾಗಿದ್ದವು. ಇದೇ ಸಮಯ ಲಕ್ಷದ್ವೀಪದ ಮೇಲೆ ದಂಡೆತ್ತಿ ಹೋಗಿ ಜಯಿಸಿದ ಅರಕ್ಕಲ್ ವೀರರ ಶೌರ್ಯ ಸಾಹಸಗಳು ಅವರಿಗೆ ರಾಜಪದವಿಗೆ ಸಮಾನವಾದ ಗೌರವವನ್ನು ಮಲಬಾರಿನಲ್ಲಿ ತಂದುಕೊಟ್ಟವು. ಸಮುದ್ರವನ್ನು ದಾಟಿ ಲಕ್ಷದ್ವೀಪವನ್ನು ಜಯಿಸಿದ್ದರಿಂದ ಅರಕ್ಕಲ್ ಅರಸರಿಗೆ ’ಅಳಿ ರಾಜ’ ಅಥವಾ ಸಮುದ್ರ ರಾಜರೆಂಬ ಉಪಾಧಿ ಅಂಟಿಕೊಂಡಿತು.’ಅಳಿ’ ಕಾಲಕ್ರಮೇಣ ಅಳಿದು ಆ ವಂಶಕ್ಕೆ ಅರಕ್ಕಲ್ ’ಅಲಿ’ ವಂಶವೆಂಬ ಹೆಸರು ಬಂತು. ರಾಜಕೀಯವಾಗಿ ಮತ್ತು ಭೌಗೋಳಿಕವಾಗಿ ಆಯಕಟ್ಟಿನ ಪ್ರದೇಶವಾದ ಅರಕ್ಕಲ್ಲಿನ ರಾಜಧಾನಿ ಧರ್ಮದಂ‌ ಅನ್ನು ಕೈವಶ ಮಾಡಿಕೊಳ್ಳಲು ವರ್ಷಗಳ ಕಾಲ ಬ್ರಿಟಿಷರು ಒದ್ದಾಡಿದರು. ಆದರೆ ನಾಯರ ಸೈನಿಕರ ಬಲದೊಂದಿಗೆ ಅರಕ್ಕಲ್ ಎಷ್ಟು ಬಲಶಾಲಿಯಾಗಿತ್ತೆಂದರೆ ಅಲ್ಲೊಂದು ಮಿಲಿಟರಿ ಕ್ಯಾಂಪನ್ನು ಸ್ಥಾಪಿಸಲೂ ಅವರಿಗಾಗಲಿಲ್ಲ.
       ಅರಕ್ಕಲ್ಲಿನ ಬಗ್ಗೆ ಇನ್ನೂ ಒಂದು ಕಥೆಯಿದೆ. ಚಿರಕ್ಕಲ್ಲಿನ ರಾಜಕುಮಾರಿ ಒಂದು ದಿನ ಸ್ನಾನಕ್ಕೆಂದು ತೆರಳಿದವಳು ಕೆರೆಯಲ್ಲಿ ಮುಳುಗತೊಡಗಿದಳಂತೆ. ಅವಳನ್ನು ಮೇಲೆತ್ತಲಾಗದೇ ಭಯದಿಂದ ಸ್ನೇಹಿತೆಯರು ಬೊಬ್ಬೆ ಹೊಡೆಯತೊಡಗಿದರು. ಮಹಮ್ಮದ್ ಅಲಿ ಎಂಬ ಮುಸ್ಲಿಂ ತರುಣ ಕೂಗು ಕೇಳಿ ಓಡಿಬಂದ. ನೋಡಿದರೆ ರಾಜಕುಮಾರಿ ನೀರಿನಲ್ಲಿ ಮುಳುಗುತ್ತಿದ್ದಾಳೆ. ಅವಳನ್ನು ರಕ್ಷಿಸುವುದನ್ನು ಬಿಟ್ಟು ಇವನೂ ಬೊಬ್ಬೆಹೊಡೆಯತೊಡಗಿದ. ಕಾರಣ ಕೆಳಜಾತಿಯವನೊಬ್ಬ ಮೇಲ್ಜಾತಿಯ ಹೆಂಗಸನ್ನು ಸ್ಪರ್ಶಿಸುವುದು ಆಕಾಲಕ್ಕೆ ಶಿಕ್ಷಾರ್ಹ ಅಪರಾಧವಾಗಿತ್ತು. ಹತ್ತಿರದಲ್ಲಿ ಸಹಾಯಕ್ಕೆ ಬರುವವರು ಯಾರೂ ಇರಲಿಲ್ಲ. ಕೊನೆಗೆ ಆದದ್ದಾಗಲಿ ಎಂದು ಕೆರೆಗೆ ಹಾರಿ ಅವಳನ್ನು ದಡಕ್ಕೆಳೆದು ತಂದ. ಮೈಮುಚ್ಚಲು ತನ್ನ ಪಂಚೆಯನ್ನೂ ತೆಗೆದು ಕೊಟ್ಟ. ಸುದ್ದಿ ಊರಿಡೀ ಹರಡಿತು. ಕೆಳಜಾತಿಯ ಮುಸ್ಲಿಮನೊಬ್ಬ ರಾಜಕುಮಾರಿಯ ಮೈಮುಟ್ಟಿದನೆಂಬ ಸುದ್ದಿ ಜನರಿಗೆ ಆಡಿಕೊಳ್ಳುವ ವಿಷಯವಾಯಿತು. ಅದೂ ಅಲ್ಲದೇ ಆ ಕಾಲದಲ್ಲಿ ಹೆಣ್ಣೊಬ್ಬಳು ಗಂಡಸು ನೀಡಿದ ಪುದುವಾ ಎಂಬ ಮೇಲ್ವಸ್ತ್ರವನ್ನು ಸ್ವೀಕರಿಸಿದರೆ ಅದು ಅವನೊಟ್ಟಿಗಿನ ಮದುವೆಗೆ ಒಪ್ಪಿಗೆ ಸೂಚಿಸಿದಂತಾಗುತ್ತಿತ್ತಂತೆ. ಆಳುವವನೇ ಧರ್ಮ ತಪ್ಪಿ ನಡೆಯಲಾದೀತೇ! ರಾಜನಿಗೆ ಬೇರೆ ದಾರಿಕಾಣದೇ ಮಗಳನ್ನು ಮಹಮ್ಮದ್ ಅಲಿಗೆ ಮದುವೆ ಮಾಡಿಕೊಟ್ಟ. ರಾಜಕುಮಾರಿಯ ಗಂಡ ಬಡವನಾದರಾದೀತೇ? ತನ್ನದೇ ರಾಜ್ಯದ ಭಾಗವೊಂದನ್ನು ನೀಡಿ ಅಲ್ಲಿಯೇ ಆಳಿಕೊಂಡಿರಲು ಸೂಚಿಸಿದ. ಆ ಪ್ರದೇಶದ ಹೆಸರಿನ ಮೇಲೆ ಮಹಮ್ಮದ್ ಅಲಿಯ ರಾಜ್ಯಕ್ಕೆ ಅರಕ್ಕಲ್ ಎಂದು ಹೆಸರಾಯ್ತು. ಕೇರಳವನ್ನು ಈವರೆಗೆ ಆಳಿದ ಏಕೈಕ ಮುಸ್ಲಿಂ ಶಾಸಕರೆಂಬ ಹೆಗ್ಗಳಿಕೆ ಅರಕ್ಕಲ್ ವಂಶಕ್ಕಿದೆ. ಕೇವಲ ಕಣ್ಣೂರು ನಗರವನ್ನೊಳಗೊಂಡ ಸುತ್ತಲಿನ ಪ್ರದೇಶ ಮತ್ತು ಲಕ್ಷದ್ವೀಪದ ಆಡಳಿತಕ್ಕೆ ಇವರು ಸೀಮಿತರಾದರೂ ೧೯೧೧ರಲ್ಲಿ ಬ್ರಿಟಿಷರಿಂದ ಸಂಪೂರ್ಣವಾಗಿ ರಾಜ್ಯವನ್ನೂ ರಾಜಪದವಿಯನ್ನೂ ಕಳೆದುಕೊಳ್ಳುವವರೆಗೂ ಮಲಬಾರಿನ ಸಾಂಸ್ಕೃತಿಕ, ರಾಜಕೀಯ ವ್ಯವಸ್ಥೆಗೆ ಅಲಿರಾಜರಿಗೆ ಕೊಡುಗೆ ಗಮನಾರ್ಹವಾದದ್ದು. ಕೊಚ್ಚಿಯ ಸಾಮೂದಿರಿ ಅರಸರ ಸಾಮಂತರಾಗಿದ್ದಷ್ಟು ಸಮಯ ಅಲಿರಾಜರಿಂದಾಗಿ ಮಲಬಾರಿನಲ್ಲಿ ಮುಸ್ಲೀಮರ ಜನಜೀವನ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ವೈಭವದ ತುದಿ ತಲುಪಿತ್ತು.

ಅರಕ್ಕಲ್ ಅರಮನೆ(ಈಗ ಮ್ಯೂಸಿಯಮ್)  
ಅರಕ್ಕಲ್ ಅರಸರ ಲಾಂಛನ
ಸೈಂಟ್ ಆಂಜಲೋ ಕೋಟೆ, ಕಣ್ಣೂರ್
ಸೈಂಟ್ ಆಂಜಲೋ ಕೋಟೆ, ಕಣ್ಣೂರ್
ಮ್ಯೂಸಿಯಮ್
ಧರ್ಮದಂ
ಧರ್ಮದಂ ದ್ವೀಪ(ತಲಶ್ಶೇರಿ)
       
ಅಬ್ದುಲ್ ಖಾಲಿಕ್
       ಟಿಪ್ಪುವಿಗೆ ಹಲವು ಹೆಂಡಿರಲ್ಲಿ ಒಟ್ಟೂ ೧೬ ಮಕ್ಕಳಿದ್ದರು. ೧೧ನೇಯ ಮತ್ತು ಕೊನೆಯ ಮಗು ಚಿಕ್ಕ ಪ್ರಾಯದಲ್ಲೇ ಮೃತಪಟ್ಟಿತ್ತು. ಇತಿಹಾಸದಲ್ಲಿ ಉಳಿದ ೧೪ ಜನರ ಹೆಸರು ದಾಖಲಾಗಿದೆ. ಫತೇ ಹೈದರ್ ಅಲಿ(೧೭೮೨-೧೮೦೬), ಅಬ್ದುಲ್ ಖಾಲಿಕ್(೧೭೮೨-೧೮೦೬), ಮೌಯುದ್ದೀನ್(೧೭೮೩-೧೮೧೧), ಮುಯಿಜುದ್ದೀನ್(೧೭೮೩-೧೮೧೬), ಮಿರಾಜುದ್ದೀನ್(೧೭೮೪-), ಮೌಯಿನುದ್ದೀನ್(೧೭೮೪-), ಮುಹಮ್ಮದ್ ಯಾಸಿನ್(೧೭೮೪-೧೮೪೯), ಮುಹಮ್ಮದ್ ಸುಭಾನ್(೧೭೮೫-೧೮೪೫), ಮುಹಮ್ಮದ್ ಶುಕ್ರುಲ್ಲಾಹ್(೧೭೮೫-೧೮೩೭), ಸರ್ವಾರುದ್ದೀನ್(೧೭೯೦-೧೮೩೩), ಜಮಾಲುದ್ದೀನ್(೧೭೯೫-೧೮೭೨) ಮತ್ತು ಗುಲಾಮ್ ಅಹ್ಮದ್(೧೭೯೬-೧೮೨೪). ೧೭೮೨ರಲ್ಲಿ ಇಬ್ಬರು, ೧೭೮೫ರಲ್ಲಿ ಇಬ್ಬರು, ೧೭೯೫ರಲ್ಲಿ ಮೂವರು ಮಕ್ಕಳು ಹುಟ್ಟಿದ್ದು. ತಿರುವಾಂಕೂರಿನವರಿಂದ ಕಾಲ್ಮುರಿಸಿಕೊಂಡು, ಬ್ರಿಟಿಷರಿಂದ ಒದೆಸಿಕೊಂಡು ಶ್ರೀರಂಗಪಟ್ಟಣ ಸಂಧಿ ಮಾಡಿಕೊಂಡಾಗಿನಿಂದ ಹೆದರಿ ಜನಾನಾ ಹೊಕ್ಕ ಟಿಪ್ಪು ಬಹುಕಾಲ ಅದರಿಂದಾಚೆ ಬರಲೇ ಇಲ್ಲ. ೧೭೯೫ರಲ್ಲಿ ಮೂವರು ಮಕ್ಕಳು ಅದರ ಫಲಶೃತಿಯೇ! ಟಿಪ್ಪು ಸತ್ತಾಗ ಕ್ಯಾಪ್ಟನ್ ಥಾಮಸ್ ಮರಿಯೋಟ್ ಟಿಪ್ಪುವಿನ ಜನಾನಾದಲ್ಲಿದ್ದ ಆರುನೂರಕ್ಕೂ ಹೆಚ್ಚಿನ ಹೆಂಗಸರನ್ನು ಲೆಕ್ಕ ಹಾಕಿ ಪಟ್ಟಿಮಾಡಿಯೇ ಸುಸ್ತಾಗಿದ್ದನಂತೆ! ಟರ್ಕಿಯಾ, ಜಾರ್ಜಿಯಾ, ಪರ್ಷಿಯಾ ಜೊತೆಗೆ ತಂಜಾವೂರು, ದೇಹಲಿ, ಹೈದ್ರಾಬಾದಿನ ಹೆಣ್ಮಕ್ಕಳೆಲ್ಲ ಜನಾನಾದಲ್ಲಿದ್ದರು. ಹಾಗೆ ಇದ್ದವರಲ್ಲಿ ಕೊಡಗಿನ ಅರಸನ ಇಬ್ಬರು ಸಹೋದರಿಯರು, ದಿವಾನ್ ಪೂರ್ಣಯ್ಯನ ತಮ್ಮನ ಮಗಳು, ಒಡೆಯರ್ ಮನೆತನದ ಮೂವರು ಸಂಬಂಧಿಕರೂ ಸೇರಿದ್ದರು. ಇವೆಲ್ಲವನ್ನೂ ಬ್ರಿಟಿಷರಿಗೆ ದೊರಕಿದ ಡೈರಿಯಲ್ಲಿ ಸ್ವತಃ ಟಿಪ್ಪುವೇ ಬರೆದಿಟ್ಟಿದ್ದಾನೆ. ಟಿಪ್ಪುವಿನ ಸಹೋದರ ಅಬ್ದುಲ್ ಕರೀಮನ ಹೆಂಡತಿ ಸವಣೂರಿನ ನವಾಬನ ಮಗಳು ಮೊದಲು ಹೈದರನ ಜನಾನಾದಲ್ಲಿದ್ದಳಂತೆ. ಹೈದರ ಸತ್ತ ನಂತರ ಅವಳು ಟಿಪ್ಪುವಿನ ಜನಾನಾಕ್ಕೆ ಸೇರಿಸಲ್ಪಟ್ಟಳೆಂದು ತಾರೀಖ್-ಎ-ಟಿಪ್ಪುವಿನಲ್ಲಿ ಕಿರ್ಮಾನಿ ಉಲ್ಲೇಖಿಸುತ್ತಾನೆ. ಕರೀಮನ ಮಗ ಫತೇ ಹೈದರ ಟಿಪ್ಪುವಿನ ಮಗನೆಂದೇ ಎಲ್ಲೆಡೆ ದಾಖಲಿಸಲ್ಪಟ್ಟಿದೆ. ಅಣ್ಣತಮ್ಮಂದಿರಿಬ್ಬರಿಗೂ ಒಬ್ಬನೇ ಮಗನೆಂಬ ವಿಶೇಷಣ ಹೊತ್ತ ಕರೀಮ ಮುಂದೆ ಟಿಪ್ಪುವಿನ ವಾರಸುದಾರರಲ್ಲೊಬ್ಬನಾದದ್ದು ಬೇರೆ ಕಥೆ. ಇವೆಲ್ಲ ಅನಧಿಕೃತ ಹೆಂಡತಿಯರ ಕಥೆಯಾಯಿತು. ಟಿಪ್ಪು ಅಧಿಕೃತವಾಗಿ ಮೊದಲ ಬಾರಿ ರೌಶಾನಾ ಮತ್ತು ರುಕಯ್ಯಾ ಎಂಬಿಬ್ಬರನ್ನು ಮದುವೆಯಾದದ್ದು ೧೭೭೪ರಲ್ಲಿ ತನ್ನ ೨೪ನೇ ವಯಸ್ಸಿನಲ್ಲಿ ಮತ್ತು ಕೊನೆಯ ಬಾರಿ ೧೭೯೬ರಲ್ಲಿ ಖದೀಜಾ ಬೇಗಂಳನ್ನು. ಆಕೆ ಮರುವರ್ಷವೇ ಮೃತಪಟ್ಟಳು. ಟಿಪ್ಪುವಿನ ಪ್ರಿಯಪತ್ನಿ ರುಕಯ್ಯಾ ಬೇಗಂ ೧೭೯೯ರಲ್ಲಿ ಟಿಪ್ಪು ಬ್ರಿಟಿಷರ ಕೈಯಲ್ಲಿ ಸಿಕ್ಕು ಸತ್ತ ಸುದ್ದಿ ಕೇಳಿದ ಆಘಾತಕ್ಕೆ ಎದೆಯೊಡೆದು ಸತ್ತಳಂತೆ(ಬನ್ಸಾಲಿಯ ಮುಂದಿನ ಚಿತ್ರಕ್ಕೆ ಬಾಜಿರಾವ್ ಮಸ್ತಾನಿ ರೇಂಜಿನ ಕಥೆ ಸಿಕ್ಕಬಹುದೇನೋ)
       ಅದಿರಲಿ. ತಿರುಗಿ ಖಾಲೀಕನ ಕಡೆ ಬರೋಣ. ೧೭೯೨ರಲ್ಲಿ ಬ್ರಿಟಿಷರು ಟಿಪುವಿನ ೨ ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಾಗ ಅವನಿಗೆ ಬರಿ ೧೦ ವರ್ಷ. ಆತ ಯಾರ ಮಗನೆಂಬ ಬಗ್ಗೆ ಇನ್ನೂ ಭಿನ್ನಾಭಿಪ್ರಾಯಗಳಿವೆ. ರುಕಯ್ಯ ಭಾನುವಿನ ಮಗನೆಂಬ ವಾದವಿದ್ದರೂ ಅವಳ ಮಗನ ಹೆಸರು ಅಧಿಕೃತ ದಾಖಲೆಗಳ ಪ್ರಕಾರ ಮುಯಿಝ್. ಇನ್ನು ಆತ ಉನ್ನಿಯಾರ್ಚೆಯ ಮಗನೆಂಬ ಮತ್ತೊಂದು ವಾದವೂ ಇದೆ. ಅದನ್ನು ಧೃಢೀಕರಿಸುವುದು ಸ್ವಲ್ಪ ಕಷ್ಟವಾದರೂ ಅವನ ತಾಯಿ ಮಲಬಾರ್ ಮೂಲದ ಹಿಂದುವಾಗಿದ್ದಳೆಂಬ ಮಾತಿದೆ. ಅದೇ ಕಾರಣಕ್ಕೇ ಏನೋ ಟಿಪ್ಪು ತನ್ನ ಮಗನಿಗೆ ಮಲಬಾರಿನ ಸಂಬಂಧ ಬೆಳೆಸಿದ್ದು. ಆ ಕಾಲಕ್ಕೆ ಮಲಬಾರಿನಲ್ಲಿ ಟಿಪ್ಪುವಿನ ವಿರುದ್ಧ ಮಾಪಿಳ್ಳೆಗಳ ಆಕ್ರೋಶ ಮುಗಿಲು ಮುಟ್ಟಿತ್ತು. ಸ್ಥಳೀಯ ಮಾಪಿಳ್ಳೆಗಳ ಸಹಾಯವಿಲ್ಲದೇ ಕಣ್ಣೂರಿನ ಅರಕ್ಕಲ್ ಸುಲ್ತಾನರಿಗೆ ಆಡಳಿತ ನಡೆಸುವುದು ಅಸಂಭವ. ಉಪಾಯವಾಗಿ ದಾಳ ಉರುಳಿಸಿದ ಜುನುಮಾಬೆ ಟಿಪ್ಪುವಿನಿಂದ ರಕ್ಷಣೆ ಕೋರಿ ಬ್ರಿಟಿಷರ ಮೊರೆ ಹೊಕ್ಕಳು. ಮಾಪಿಳ್ಳೆಗಳ ವಿರೋಧ ಕಟ್ಟಿಕೊಳ್ಳುವುದಂತೂ ಅಸಾಧ್ಯದ ಮಾತಲ್ಲ!. ೧೭೮೯ರಲ್ಲಿ ಮಲಬಾರಿಗೆ ಟಿಪ್ಪು ಎರಡನೇ ಬಾರಿ ಭೇಟಿಕೊಟ್ಟಾಗ ಕಡತ್ತನಾಡು ಮತ್ತು ಕೊಳತ್ತಿರಿ ಪಾಳೆಪಟ್ಟುಗಳು ಮೈಸೂರಿನ ವಶವಾದವು. ಕೊಳತ್ತಿರಿಯ ರಾಜಕುಮಾರನನ್ನು ಆನೆಗಳಿಂದ ಎಳೆಸಿ ಅವನ ಹದಿನೇಳು ಜನ ಸಹಚರರೊಡನೆ ಮರಕ್ಕೆ ನೇಣು ಹಾಕಲಾಯ್ತು. ಇದೇ ಕೊಳತ್ತಿರಿ ವಂಶಕ್ಕೆ ಸೇರಿದವನೇ ಹೈದರನ ಕಾಲದಲ್ಲಿ ಹಿಂದೆ ಸೆರೆಹಿಡಿಯಲ್ಪಟ್ಟಿದ್ದ ಅವನ ಸಾಕುಮಗ ಆಯಾಜ್ ಖಾನ್. ೧೭೮೬ರಲ್ಲಿ ತಿರುವಾಂಕೂರಿನ ಅಶ್ವತ್ಥಿ ತಿರುನಾಳ್ ಮರಣಿಸಿದಾಗ ತಿರುವಾಂಕೂರು ರಾಜಮನೆತನ ಕೊಳತ್ತನಾಡು ಅರಸುಮನೆತನದ ಇಬ್ಬರು ಮಕ್ಕಳನ್ನು ದತ್ತುಪಡೆದಿತ್ತು. ಅರಕ್ಕಲ್ ಅರಸರ ಮೂಲವೂ ಕೊಳತ್ತಿರಿಯ ಅರಸು ಮನೆತನವೇ. ಸ್ವತಂತ್ರವಾಗಿ ಆಳ್ವಿಕೆ ಶುರುಮಾಡಿದ ಬಹುಕಾಲದವರೆಗೂ ತಮ್ಮ ಮೂಲವಾದ ಕೊಳತ್ತನಾಡಿಗೆ ಅಧೀನರಾಗಿಯೇ ಅವರಿದ್ದರು. ಟಿಪ್ಪುವಿನ ಹುಚ್ಚಾಟದಿಂದ ಮೊದಲೇ ಸಿಟ್ಟಿಗೆದ್ದಿದ್ದ ಮಲಬಾರಿನ ಸಣ್ಣಪುಟ್ಟ ಪಾಳೆಗಾರರೆಲ್ಲ ಈ ಘಟನೆಯ ನಂತರ ಕೊಟ್ಟಾಯಂನ ಪಳಸ್ಸಿರಾಜನ ನೇತೃತ್ವದಲ್ಲಿ ಮೈಸೂರಿನಿಂದ ಸ್ವಾತಂತ್ರ್ಯ ಘೋಷಿಸಿಕೊಂಡರು. ಹಿಂದೊಮ್ಮೆ ಕೊಡವರು, ಮೈಸೂರಿಗರು, ಬ್ರಿಟಿಷರು ಸೇರಿ ಮುಗಿಬಿದ್ದಿದ್ದರೂ ಪಳಸಿರಾಜನನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿರಲಿಲ್ಲ. ಈಗ ಬ್ರಿಟಿಷರೂ, ಕೊಡವರೂ ಮಗ್ಗುಲ ಮುಳ್ಳಾಗಿ ಕಾಡುತ್ತಿದ್ದಾರೆ. ಕೊಳತ್ತನಾಡಿನ ಮೇಲಿನ ಆಕ್ರಮಣದ ಪ್ರತೀಕಾರ ತೀರಿಸಿಕೊಳ್ಳಲು ತಿರುವಾಂಕೂರು ಕೂಡ ಕಾದುಕುಳಿತಿತ್ತು. ಅದೇ ಸಂದರ್ಭದಲ್ಲಿ ಇವರ ವಿರುದ್ಧ ಸಹಾಯಕ್ಕೆ ಬರುವವರು ಯಾರಾದರೂ ಇದ್ದಾರಾ ಎಂದು ಆಸೆಗಣ್ಣಿನಿಂದ ಕಂಡ ಟಿಪ್ಪುವಿನ ಕಣ್ಣಿಗೆ ಬಿದ್ದದ್ದು ಕಣ್ಣೂರು. ಮಲಬಾರಿನಲ್ಲಿ ಗಟ್ಟಿಯಾಗಿ ಕಾಲೂರಲು ಅವಕಾಶ ಕಾಯುತ್ತಿದ್ದವ ಉಪಾಯವಾಗಿ ಅರಕ್ಕಲ್ ಬಿವಿಯತ್ತ ಸ್ನೇಹಹಸ್ತ ಚಾಚಿ ಮಗನನ್ನು ಮದುವೆ ಮಾಡಿಕೊಟ್ಟ. ಅರಕ್ಕಲ್ ಬಿವಿಯಂತೂ ಗಾಳಿ ಬಂದಾಗ ತೂರಿಕೋ ಎಂಬುದನ್ನೇ ಧ್ಯೇಯವಾಕ್ಯವಾಗುಳ್ಳವಳು. ಒಮ್ಮೊಮ್ಮೆ ಹೈದರನ ಜೊತೆ, ಕೆಲವೊಮ್ಮೆ ಬ್ರಿಟಿಷರ ಜೊತೆ ಬೇಕಾದ ಹಾಗೆ ಬಣ್ಣ ಬದಲಿಸುವ ಕಲೆ ಬಿವಿಗೆ ಚೆನ್ನಾಗಿ ಸಿದ್ಧಿಸಿತ್ತು. ಊಹೂಂ ಎಂದರೆ ಕಣ್ಣೂರನ್ನು ಮುಗಿಸುವುದು ಟಿಪ್ಪುವಿಗೇನು ದೊಡ್ಡ ವಿಷಯವಾಗಿರಲಿಲ್ಲ. ಕಣ್ಮುಚ್ಚಿ ಟಿಪ್ಪುವಿನ ಸಂಬಂಧಕ್ಕೆ ಸೈ ಎಂದಳು. ಟಿಪ್ಪು ಕಣ್ಣೂರಿನ ಬೀಗನಾದ ವಿಷಯ ತಿಳಿಯುತ್ತಿದ್ದಂತೆ ಮಾಪಿಳ್ಳೆಗಳ ದಂಗೆ ಒಂದು ಹಂತದಲ್ಲಿ ಠುಸ್ಸಾಯಿತು. ಇಷ್ಟಾದರೂ ಕೇರಳದ ಎರಡು ದೊಡ್ಡ ವೈರಿಗಳಾದ ತಿರುವಾಂಕೂರು ಮತ್ತು ಪಳಸಿರಾಜನನ್ನು ಸೋಲಿಸುವ ಟಿಪ್ಪುವಿನ ಕನಸು ಕೊನೆಗೂ ನನಸಾಗಲಿಲ್ಲ.
       ಮದುವೆಯಾಗಿ ಮೂರು ವರ್ಷವಾಗುವುದರೊಳಗೆ ಖಾಲಿಕ್ ಬ್ರಿಟಿಷರ ಕೈಲಿ ಯುದ್ಧಕೈದಿಯಾಗಿ ಸಿಕ್ಕಿಬಿದ್ದ. ಶ್ರೀರಂಗಪಟ್ಟಣದ ಸಂಧಿಯ ಪ್ರಕಾರ ಟಿಪ್ಪು ಬ್ರಿಟಿಷರಿಗೆ ನಾಲ್ಕು ತಿಂಗಳೊಳಗೆ ನಿಗದಿತ ರಾಜಧನವನ್ನು ಪಾವತಿಸುವವವರೆಗೆ ಅವನಿಬ್ಬರು ಮಕ್ಕಳನ್ನು ಬ್ರಿಟಿಷರಿಗೆ ಒತ್ತೆಯಾಗಿರಿಸಬೇಕಾಗಿತ್ತು. ಆದರೆ ಆ ಕಾಲಕ್ಕಾಗಲೇ ದಿವಾಳಿಯಾಗಿದ್ದ ಟಿಪ್ಪು ಹಣ ಪಾವತಿಸಲು ಬರೋಬ್ಬರಿ ಒಂದೂವರೆ ವರ್ಷಕ್ಕೂ ಮಿಕ್ಕಿ ಸಮಯ ತೆಗೆದುಕೊಂಡ. ೧೭೯೯ರ ನಾಲ್ಕನೇ ಆಂಗ್ಲೋಮೈಸೂರು ಯುದ್ಧದಲ್ಲಿ ಬ್ರಿಟಿಷರು ಟಿಪ್ಪುವನ್ನು ಬಡಿದು ಹಾಕಿದ ಮೇಲೆ ಅವನ ಮಕ್ಕಳು ಮತ್ತೆ ಬ್ರಿಟಿಶರ ಕೈಲಿ ಸೆರೆಸಿಕ್ಕರು. ಅದೇ ವರ್ಷ ಅವರನ್ನೆಲ್ಲ ವೆಲ್ಲೂರು ಕೋಟೆಗೆ ವರ್ಗಾಯಿಸಲಾಯ್ತು. ೧೮೦೬, ಜುಲೈ ೧೦ರಂದು ವಲ್ಲೂರು ಬ್ರಿಟಿಷ್ ಆಡಳಿತದ ಮೊದಲ ಸಿಪಾಯಿ ದಂಗೆಗೆ ಸಾಕ್ಷಿಯಾಯ್ತು. ಅದೂ ಕೂಡ ೧೮೫೭ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ೫೧ ವರ್ಷಗಳ ಮುಂಚೆ. ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೊಘಲರ ಬಹದ್ದೂರ್ ಶಾ ಜಾಫರನನ್ನು ದೆಹಲಿಯ ಸುಲ್ತಾನನಾಗಿ ಘೋಷಿಸಲಾದ ರೀತಿಯಲ್ಲೇ ವೆಲ್ಲೂರಿನ ಸ್ವಾತಂತ್ರ್ಯ ಹೋರಾಟಗಾರರು ಟಿಪ್ಪುವಿನ ಮಗ ಶಹಜಾದಾ ಫತೇ ಹೈದರ್ ಅಲಿಯನ್ನು ತಮ್ಮ ರಾಜನನ್ನಾಗಿ ಘೋಷಿಸಿಕೊಂಡು ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ ಪ್ರಾರಂಭಿಸಿದರು. ಆ ದಂಗೆಯನ್ನು ಹತ್ತಿಕ್ಕಲು ಬ್ರಿಟಿಷರಿಗೇನೂ ಹೆಚ್ಚು ಸಮಯ ಬೇಕಾಗಲಿಲ್ಲವೆನ್ನಿ. ಫತೇ ಹೈದರ್ ವೆಲ್ಲೂರಿನಿಂದ ತಪ್ಪಿಸಿಕೊಂಡು ಹೋಗಿ ಮರಾಠರೊಡನೆ ಕೈಜೋಡಿಸಿದ. ತುರಾತುರಿಯಲ್ಲಿ ಬ್ರಿಟಿಷರು ಟಿಪ್ಪುವಿನ ಉಳಿದ ಮಕ್ಕಳನ್ನು ವೆಲ್ಲೊರಿನಿಂದ ಕೊಲ್ಕತ್ತದ ಕೋಟೆಗೆ ಸಾಗಹಾಕಿದರು. ಇದಾಗಿ ಸುಮಾರು ವರ್ಷಗಳ ನಂತರವೂ ಬ್ರಿಟಿಷರಿಗೆ ಟಿಪ್ಪುವಿನ ಸಂತತಿ ದಕ್ಷಿಣ ಭಾರತದಲ್ಲೆಲ್ಲಾದರೂ ಉಳಿದುಕೊಂಡಿರುವ ಹೆದರಿಕೆ ಕಾಡುತ್ತಲೇ ಇತ್ತು. ಅಬ್ದುಲ್ ಖಾಲೀಕ್ ೨೪ರ ಸಣ್ಣ ವಯಸ್ಸಿನಲ್ಲೇ ಮೃತಪಟ್ಟ. ಮುಂದೆ ಟಿಪ್ಪುವಿನ ಕೊನೆಯ ಮಗ ಗುಲಾಮ್ ಮೊಹಮ್ಮದ್ ಖಾನ್‌ನನ್ನು ಟಿಪ್ಪುವಿನ ವಾರಸುದಾರನೆಂದು ಕಂಪನಿ ಘೋಷಿಸಿತು. ಈತನ ಸೇವೆಯನ್ನು ಮೆಚ್ಚಿ ೧೮೭೦ರಲ್ಲಿ ಕಂಪನಿ ’ಸರ್’ ಪದವಿ ನೀಡಿ ಗೌರವಿಸಿತು. ೧೮೭೨ರಲ್ಲಿ ಸರ್ ಗುಲಾಮ್ ಮೊಹಮ್ಮದ್ ಖಾನ್ ಡೆಂಗ್ಯೂ ಜ್ವರದಿಂದ ಮೃತಪಟ್ಟ. ಈತನ ವಂಶಜರು ಈಗಲೂ ಬದುಕಿದ್ದಾರಂತೆ.

       ಟಿಪ್ಪು ಮತ್ತು ಅರಕ್ಕಲ್ ಸಂಸ್ಥಾನದವರು ಸಂಬಂಧ ಬೆಳೆಸಿದ ಮುಹೂರ್ತವೇ ಸರಿಯಿರಲಿಲ್ಲವೇನೋ! ಟಿಪ್ಪು ಕೇರಳಕ್ಕೆ ಬಂದಿದ್ದು ಆ ವರ್ಷವೇ ಕೊನೆಯದಾಗಿ. ನೆಡುಂಕೊಟ್ಟ ಯುದ್ಧದಲ್ಲಿ ಕಾಲುಮುರಿಸಿಕೊಂಡ ನಂತರ ಮತ್ತೆ ಅತ್ತ ತಲೆಹಾಕಿ ಮಲಗುವ ಸಾಹಸವನ್ನು ಆತ ಮಾಡಲಿಲ್ಲ. ಮರುವರ್ಷ ೧೭೯೦ರಲ್ಲಿ ಕಣ್ಣೂರನ್ನು ಮುತ್ತಿದ ಬ್ರಿಟಿಷರು ಅರಕ್ಕಲ್ ಸುಲ್ತಾನರ ಆಳ್ವಿಕೆಯನ್ನು ಕೊನೆಗಾಣಿಸಿದರು. ಜನರಲ್ ರಾಬರ್ಟ್ ಅಬೆಕ್ರೋಂಬಿಯ ನೇತೃತ್ವದಲ್ಲಿ ನಡೆದ ಯುದ್ಧದಲ್ಲಿ ಕಣ್ಣೂರಿನ ಸೇಂಟ್ ಏಂಜಲೋ ಕೋಟೆ ಕಂಪನಿಯ ವಶವಾಯ್ತು. ೧೭೭೨ರಲ್ಲಿ ಈ ಕೋಟೆಯ ಜೊತೆ ಕಣ್ಣೂರು ಅರಮನೆ ಒಂದು ಲಕ್ಷ ರೂಪಾಯಿಗೆ ಡಚ್ಚರಿಂದ ಅರಕ್ಕಲ್ಲಿನವರಿಗೆ ಮಾರಲ್ಪಟ್ಟಿತ್ತು. ಧರ್ಮದಮ್‌ನಂಥ ಆಯಕಟ್ಟಿನ ದ್ವೀಪಪ್ರದೇಶವನ್ನು ಬಿಟ್ಟು ಕಣ್ಣೂರಿನ ಬಯಲಿಗೆ ಬಂದು ಕೂತ ಅರಕ್ಕಲ್ಲಿನ ಅತಿಬುದ್ಧಿವಂತಿಕೆಯೇ ಅವರಿಗೆ ಮುಳುವಾಗಿದ್ದು. ಈ ಯುದ್ಧದೊಂದಿಗೆ ಕಣ್ಣೂರು ಪ್ರಾಂತ್ಯದಲ್ಲಿ ಬ್ರಿಟಿಷರ ಏಕಾಧಿಪತ್ಯ ಸ್ಥಾಪಿತವಾಯ್ತು. ಆದರೆ ಮುಂದೆ ನಡೆದದ್ದು ಬ್ರಿಟಿಷರು ಮತ್ತು ಪಳಸಿ ರಾಜನ ನಡುವಿನ ಘೋರ ಸಂಗ್ರಾಮ. ಆತ ತನ್ನವರೇ ಬೆನ್ನಿಗಿರಿದಾಗಲೂ ತಲೆಬಾಗದೇ ರಾಣಾ ಪ್ರತಾಪನಂತೆ ಕಾಡು ಮೇಡಲೆದ. ಪ್ರಥ್ವಿರಾಜನಂತೆ ಕೊಟ್ಟ ಕೊನೆಯ ಸೈನಿಕ ನೆಲಕ್ಕಚ್ಚುವವರೆಗೆ ಗೆಲ್ಲುವ ಆಸೆಯೇ ಇಲ್ಲದ ಯುದ್ಧಮಾಡಿದ. ಅಪಮಾನಕರ ರಾಜಿಗೆ ಸಿದ್ಧನಾದರೂ ಕಪಟನಾಟಕದಿಂದ ಬ್ರಿಟಿಷರು ಮತ್ತು ಟಿಪ್ಪುವಿನ ಮಧ್ಯೆ ತಂದಿಟ್ಟು ಶಿವಾಜಿಯಂತೆ ವಿರೋಧಿಗಳನ್ನು ಮಣ್ಣುಮುಕ್ಕಿಸಿದ. ಕೊನೆಗೆ ರಣಾಂಗಣದಲ್ಲಿ ವೀರಾವೇಶದಿಂದ ಕಾದಾಡಿ ಲಕ್ಷ್ಮೀಬಾಯಿಯಂತೆ ವೀರಸ್ವರ್ಗ ಸೇರಿದ. ಆತನಿಲ್ಲದೇ ಟಿಪ್ಪುವಿನನದಾಗಲೀ, ಮಲಬಾರಿನ ಇತಿಹಾಸವಾಗಲೀ ಮುಗಿಯುವುದೆಂತು?

Friday, January 29, 2016

ಶ್ರೀಮಚ್ಛಂಕರಭಗವತ್ಪಾದ ಚರಿತ್ರ: ಕಾಲಪ್ರಕರಣ


       ಶ್ರೀಮಚ್ಛಂಕರ ಭಗವತ್ಪಾದರು ಕಾಲಾತೀತನಾದ ಶಿವನ ಅವತಾರವೆಂಬುವ ಪ್ರತೀತಿಯ ಕಾರಣಕ್ಕೋ ಏನೋ ಅವರ ಆವಿರ್ಭಾವಕಾಲವನ್ನು ಪ್ರಚಲಿತ ಶಾಂಕರಪೀಠಗಳ ಸಂಪ್ರದಾಯಸ್ಥರು ತಮಗೆ ಬೇಕಾದಂತೆ ಎಲ್ಲೆಲ್ಲೋ ಎಳೆದು ಬಿಸುಟಿದ್ದಾರೆ. ಯಾವುದೋ ಕಾಲದ ಇತಿಹಾಸಪುರುಷರನ್ನು ಇನ್ಯಾವುದೋ ಕಾಲಕ್ಕೆ ದರದರನೆ ಎಳೆತಂದು ಬೇಕುಬೇಕಾದ ಹಾಗೆ ಹುಟ್ಟಿಸುವುದು, ಸಾಯಿಸುವುದು ನಮ್ಮ ಇತಿಹಾಸಕಾರರಿಗೆಲ್ಲ ಕರತಲಾಮಕ. ಅದಕ್ಕೆ ಶಂಕರರೂ ಹೊರತಲ್ಲ. ಶ೦ಕರರ ಕಾಲಮಾನದ ವಿಚಾರದಲ್ಲಿ ವಾದ-ವಿವಾದಗಳು ವಿರಳವಾಗಿ ನಡೆದಿದ್ದರೂ ಅವುಗಳಲ್ಲಿ ಒಮ್ಮತಾಭಿಪ್ರಾಯವಿಲ್ಲದಿರುವುದ೦ತೂ ಸತ್ಯ.  ಲೋಕರೂಢಿಯೂ, ಕೆಲ ಇತಿಹಾಸದ ಪುಸ್ತಕಗಳೂ, ಭೈರಪ್ಪನವರ ’ಸಾರ್ಥ’ವೇ ಮು೦ತಾದ ಕಾದ೦ಬರಿಗಳೂ ಶ೦ಕರರನ್ನು ಕ್ರಿ.ಶ 8ನೇ ಶತಮಾನದಲ್ಲಿರುವ೦ತೆ ಚಿತ್ರಿಸಿವೆ. ಇದಕ್ಕೆ ವ್ಯತಿರಿಕ್ತವಾಗಿ ಕೆಲ ಐತಿಹಾಸಿಕ ದಾಖಲೆಗಳು, ಆದಿ ಶ೦ಕರರಿ೦ದ ಸ್ಥಾಪಿಸಲ್ಪಟ್ಟ ಕೆಲ ಮಠ, ದೇವಾಲಯಗಳು ಅವರ ಕಾಲವನ್ನು ಕ್ರಿ.ಪೂರ್ವದಷ್ಟು ಹಿ೦ದಕ್ಕೊಯ್ಯುತ್ತವೆ. ಕಾಲದ ನಿಷ್ಕರ್ಷೆಗೆ ಬರುವ ಮೊದಲು ಶಂಕರವಿಜಯಗಳನ್ನೇ ಗಮನಿಸೋಣ.
       ಚತುರಾಮ್ನಾಯಗಳಲ್ಲೊ೦ದಾದ ಶೃ೦ಗೇರಿ ಮಠವನ್ನು ಶ೦ಕರರು ಕ್ರಿ.ಶ. 8ನೇ ಶತಮಾನದಲ್ಲಿ ಸ್ಥಾಪಿಸಿದರೆ೦ಬುದು ಲೋಕರೂಢಿ. ಅವರೂ ಅದೇ ಕಾಲದವರೆಂದಾಯ್ತು. ಶೃಂಗೇರಿ ಮಠದಲ್ಲೇ ಅದಕ್ಕೇನಾದರೂ ದಾಖಲೆ ಸಿಗಬೇಕಾದರೆ ಅವರದ್ದೇ ಗುರುಪರಂಪರೆಗಳ ಪಟ್ಟಿ ನೋಡಬೇಕು. ಮಹಾದೇವ ರಾಜಾರಾಮ ಬೋಡಸ್‌ರ ’ಶಂಕರಾಚಾರ್ಯ ವ ತ್ಯಾಂಚಾ ಸಂಪ್ರದಾಯ’ ಪುಸ್ತಕದಲ್ಲಿ ಶೃಂಗೇರಿ ಸಂಪ್ರದಾಯದ ಗುರುಪರಂಪರೆಯ ನಾಲ್ಕು ಪಟ್ಟಿಗಳನ್ನು ಕೊಟ್ಟಿದ್ದಾರೆ!. ಮೊದಲನೇಯದು 8ನೇ ಜಗದ್ಗುರುಗಳಾದ ನರಸಿಂಹಭಾರತೀ ಸ್ವಾಮಿಗಳ ಮಂತ್ರಾಕ್ಷತೆಯೊಂದಿಗೆ 1879ರಲ್ಲಿ ಸಿದ್ಧಾಂತಿ ಸುಬ್ರಹ್ಮಣ್ಯ ಶಾಸ್ತ್ರಿಗಳು ಬರೆದದ್ದು. ಎರಡನೇಯದು ಸೂರ್ಯನಾರಾಯಣರಾಯರು ಬರೆದ ವಿಜಯನಗರ ಇತಿಹಾಸದ್ದು. ಇದರ ಗುರುಪರಂಪರೆಯ ಪಟ್ಟಿ ಮೊದಲನೇಯದ್ದನ್ನೇ ಆಧರಿಸಿದ್ದು. ಮೂರನೇಯದು ಶ್ರೀಸಚ್ಚಿದಾನಂದಶಿವಾಭಿನವನೃಸಿಂಹಭಾರ್ತೀಸ್ವಾಮಿಗಳು ಮದ್ರಾಸಿನ ವಾಣಿವಿಲಾಸ ಪ್ರೆಸ್ಸಿನಲ್ಲಿ ಅಚ್ಚುಹಾಕಿಸಿದ ಕೃತಿ. ಅದು ಮೊದಲೆರಡನ್ನು ಹೋಲುವುದಾದರೂ ಸುರೇಶ್ವರಾಚಾರ್ಯರ ಬದಲು ವಿಶ್ವರೂಪರ ಹೆಸರು ಅಚ್ಚಾಗಿದೆ. ಇವುಗಳ ಪ್ರಕಾರ 14ನೇ ಈಶ್ವರ ಸಂವತ್ಸರದ ವೈಶಾಖ ಶುದ್ಧ ಆರ್ದ್ರಾ ನಕ್ಷತ್ರ ಮಿಥುನಲಗ್ನದಲ್ಲಿ ಆಚಾರ್ಯರ ಅವತಾರವೂ ವಿಕ್ರಮಶಕೆಯ 46ನೇ ಜ್ಯೇಷ್ಠಶುದ್ಧ ದ್ವಾದಶಿಯ ದಿನ ಕೈಲಾಸಗಮನವೆಂದೂ ಬರೆದಿದೆ. ಇದರ ಪ್ರಕಾರವೇ ಕ್ರಿ.ಪೂ 44ರಿಂದ ಕ್ರಿಪೂ 12ರವರೆಗೆ ಆಚಾರ್ಯರ ಕಾಲವಾಯ್ತು. ಇದೇ ಪಟ್ಟಿಯಲ್ಲಿ ಮೊದಲ ಪೀಠಾಧಿಪತಿಗಳಾದ ಸುರೇಶ್ವರಾಚಾರ್ಯರು ಕ್ರಿ.ಪೂ 28ರಿಂದ ಕ್ರಿ.ಶ 773ರವರೆಗೆ ಬರೋಬ್ಬರಿ 8೦೦ ವರ್ಷಗಳು ಪೀಠಾಧಿಪತಿಗಳಾಗಿದ್ದಾರು! ಅವರ ನಂತರ ಎರಡನೇ ಪೀಠಾಧಿಪತಿಗಳಾದ ನಿತ್ಯಬೋಧಘನಾಚಾರ್ಯರು ಪೀಠವೇರಿದ್ದು ಕ್ರಿ.ಶ 773ರಲ್ಲಿ. ಶೃಂಗೇರಿ ಪರಂಪರೆಯ ಪ್ರಕಾರವೇ ಆಚಾರ್ಯರ ಕಾಲ ಕ್ರಿ.ಪೂವೆಂದಾದಮೇಲೆ ಮಠಸ್ಥಾಪನೆ ಕ್ರಿ.ಶ 8ನೇ ಶತಮಾನದಲ್ಲಾಗಲು ಹೇಗೆ ಸಾಧ್ಯ? ಶೃಂಗೇರಿ ಅಂಗೀಕರಿಸಿದ ವಿಕ್ರಮಶಕೆಯು ಮಾಲವ ಶಕೆಯಲ್ಲವೆಂದೂ, ಅದು ಚಾಲುಕ್ಯ ವಿಕ್ರಮಶಕೆಯೆಂದೂ, ಸರ್ವಪ್ರಥಮ ವಿಕ್ರಮನು ಕ್ರಿ.ಶ 670ರಲ್ಲಿ ಸಿಂಹಾಸನಾರೋಹಣಗೈದುದರಿಂದ ಶಂಕರರ ಜನನ ಮತ್ತು ಕೈಲಾಸಗಮನವಾದುದು ಕ್ರಮವಾಗಿ ಕ್ರಿ.ಶ 684 ಹಾಗೂ ಕ್ರಿ.ಶ 716ರಲ್ಲೆಂದು ಇದಕ್ಕೆ ಸಮಾಧಾನವನ್ನು ಲೋಕಮಾನ್ಯ ತಿಲಕರು ನೀಡಿದ್ದಾರೆ.
       ಶಂಕರಾಚಾರ್ಯರು ಕ್ರಿಸ್ತನಿಗಿಂತ ಪೂರ್ವದವರೆಂಬುದು ಸರ್ವವಿದಿತ. ಅದಕ್ಕೆ ಬೇಕಾದಷ್ಟು ಇತಿಹಾಸದ ಪುರಾವೆಗಳಿವೆ. ಈ ಕಷ್ಟದಿಂದ ಪಾರಾಗಲು ಪ್ರಾಯಶಃ ಶೃಂಗೇರಿಯವರು ಸುರೇಶ್ವರಾಚಾರ್ಯರಿಗೆ 8೦೦ ವರ್ಷಗಳನ್ನು ಕೊಟ್ಟು ಅವರ ಸಮಾಧಿ ಕಾಲವನ್ನು ಕ್ರಿ.ಶ 8ನೇ ಶತಮಾನಕ್ಕೆ ಇಳಿಸಿದ್ದಾರೆ. ಶೃಂಗೇರಿ ಮಠವೇ ಹೀಗಾದರೆ ಇನ್ನು ಅದರ ಕಾಲುಮಠವಾದ ಶಂಕರರ ಏಕೈಕ ಅವಿಚ್ಛಿನ್ನ ಪರಂಪರೆಯೆಂದು ಹೇಳಿಕೊಳ್ಳುವ ರಾಮಚಂದ್ರಾಪುರಮಠದ ಕಾಲ ಅದಕ್ಕಿಂತ ಹಿಂದಿನದಂತೂ ಅಲ್ಲ. ಸ್ವರ್ಣವಲ್ಲಿ ಮಠವೂ ಅಷ್ಟೇ. ಶಂಕರರಿಂದ ಕಾಶಿಯಲ್ಲಿ ಸ್ಥಾಪಿತವಾಗಿ ಪ್ರಯಾಗವೇತ್ಯಾದಿ ಜಾಗಗಳಲ್ಲಿ  ಸ್ಥಳಾಂತರಗೊಂಡು ಈಗ ಶಿರಸಿ ಸಮೀಪದ ಸೋಂದೆಯಲ್ಲಿದೆ ಎಂದು ಮಠದ ಇತಿಹಾಸ ಹೇಳುತ್ತದೆ. ಆದರೆ ಇದು ಮೂಲತಃ ಹೊನ್ನಾವರ ತಾಲೂಕಿನ ಚಂದಾವರದ ಹತ್ತಿರದ ಹೊನ್ನೆಹಳ್ಳದಲ್ಲಿ ಚಂದಾವರದ ರಾಮಕ್ಷತ್ರಿಯ ಸಮಾಜದ ತುಂಡರಸ ಚಂದ್ರಸೇನನ ಕಾಲದಲ್ಲಿ ಶೃಂಗೇರಿ ಮಠದವರಿಂದ ಸ್ಥಾಪಿತವಾದ ಕಾಲುಮಠ.  ಗೋಮಾಂತಕರ ದಾಳಿಯ ನಂತರ ಅದು ಅಲ್ಲಿಂದ ಕಡತೋಕೆಗೆ ಹೋಯಿತು. ಮುಂದೆ ಸರ್ವಜ್ಞೇಂದ್ರ ಸರಸ್ವತಿಯವರ ಕಾಲದಲ್ಲಿ ಸೋದೆ ಅರಸರ ಕೋರಿಕೆಯ ಮೇರೆಗೆ ಅಲ್ಲಿಂದ ಸೋದೆಗೆ ಸ್ಥಳಾಂತರವಾಯಿತು. ಹೊನ್ನೆಹಳ್ಳಿ ಸ್ವರ್ಣವಲ್ಲಿಯಾಯಿತು. ಆದ್ದರಿಂದ ಅವೆರಡೂ ಮಠಗಳ ಇತಿಹಾಸವನ್ನು ಶಂಕರರ ಕಾಲಮಾನ ನಿಷ್ಕರ್ಷೆಗೆ ಬಳಸಲು ಬರುವುದಿಲ್ಲ. ಶೃಂಗೇರಿಯ ಪಟ್ಟಿಗಳನ್ನೂ ಬದಿಗಿಟ್ಟು ಶಂಕರವಿಜಯಗಳನ್ನೇ ಗಮನಿಸೋಣ.
ಕಂಚಿಕಾಮಕೋಟಿ ಪೀಠದ ಸಂಪ್ರದಾಯದಂತೆ ಆತ್ಮಬೋಧರು ಉದಾಹರಿಸಿರುವ ಪ್ರಾಚೀನಶಂಕರವಿಜಯದಲ್ಲಿ
ತಿಷ್ಯೇ ಪ್ರಯಾತ್ಯನಲಶೇವಧಿಬಾಣನೇತ್ರೇ
ಯೋ ನನ್ದನೇ ದಿನಮಣಾವುದಗಧ್ವಭಾಜಿ |
ರಾಧೇದಿತೇರುಡುನಿ ನಿರ್ಗತಮಸ್ತಲಗ್ನೆ
ಪ್ಯಾಹೂತವಾನ್ ಶುವಗುರುಃ ಸ ಚ ಶಂಕರೇತಿ ||

ಅನಲ=3, ಸೇವಧಿ=9, ಬಾಣ=5, ನೇತ್ರ=2 . ಕಲಿಪ್ರಾರಂಭವಾದ 2593ನೇ ಸಂವತ್ಸರವಾದ ನಂದನದ ಉತ್ತರಾಯಣ ವೈಶಾಖ ಶುದ್ಧ ಪಂಚಮಿ ಪುನರ್ವಸು ನಕ್ಷತ್ರ ಕರ್ಕಾಟಕ ಲಗ್ನದಲ್ಲಿ ಶಿವಗುರುವಿಗೆ ಹುಟ್ಟಿದನು.
ಕಲಿಯುಗ ಪ್ರಾರಂಭವಾದದ್ದು ಕ್ರಿ.ಪೂ 3102ರಲ್ಲೆಂದು ಸಿದ್ಧಪಟ್ಟಿದೆ. ಅ೦ದರೆ ಶ೦ಕರರ ಜನನವಾದದ್ದು ಕ್ರಿ.ಪೂ 3102- ಕ್ರಿ.ಪೂ 2593= ಕ್ರಿ.ಪೂ 509ರಲ್ಲಿ.
ವ್ಯಾಸಾಚಲೀಯದಲ್ಲಿ
ಅಬ್ದೇ ಕಲೇರನಲವರ್ಷಶರಾಕ್ಷಿಸಂಖ್ಯೇ
ಶ್ರೀನಂದನೇ ದಿನಮಣಾವುದಗಧ್ವಭಾಜಿ |
ರಾಧೇಽದಿಪಞ್ಚಮಿತಿಥಾವಸಿತೇತರಾಯಾಮ್
ವಾರೇ ರವೇರದಿತಿಭೇ ಶುಭಯೋಗಯುಕ್ತೇ ||
ಲಗ್ನೇ ಶುಭೇ ಶುಭಯುತೇ ಸುಷುವೇ ಕುಮಾರಂ
ಶ್ರೀಪಾರ್ವತೀವ ಸುಖಿನೀ ಶುಭವೀಕ್ಷಿತೇ ಚ |
ಜಾಯಾ ಸತೀ ಶಿವಗುರೋರ್ನಿಜತುಙ್ಗಸಂಸ್ಥೇ
ಸೂರ್ಯೇ ಕುಜೇ ರವಿಸುತೇ ಚ ಗುರೌ ಚ ಕೇಂದ್ರೇ ||

ಮೊದಲ ಭಾಗವನ್ನು ಗಮನಿಸಿದರೆ ಇದು ಪ್ರಾಚೀನಶಂಕರ ವಿಜಯದಿಂದ ತೆಗೆದುಕೊಂಡಿರಬಹುದಾದ ಸಾಧ್ಯತೆಗಳಿವೆ. ಎರಡನೇ ಶ್ಲೋಕ ಮಾಧವೀಯದಲ್ಲಿಯೂ ಇದೆ. ಯುಧಿಷ್ಟಿರ ಶಕದ 2631ನೇ ವರ್ಷ ನಂದನ ಸಂವತ್ಸರ ವೈಶಾಖ ಶುದ್ಧ ಭಾನುವಾರ ಪುನರ್ವಸು ನಕ್ಷತ್ರ ಅಭಿಜಿನ್ಮುಹೂರ್ತದಲ್ಲಿ ಕರ್ಕಾಟಕ ಲಗ್ನ ರವಿಕುಜಗುರುಶನಿಗಳು ಉಚ್ಛಸ್ಥರಾಗಿ ಕೇಂದ್ರದಲ್ಲಿರಲು ಶುಕ್ರನು ಉಚ್ಛಸ್ಥಾನದಲ್ಲಿದ್ದು ಬುಧನು ರವಿಯೊಡನೆ ಸೇರಿದ ಶುಭಮುಹೂರ್ತದಲ್ಲಿ ಆರ್ಯಾಂಬೆ ಮಗನನ್ನು ಪಡೆದಳು.
ಇದೇ ಗ್ರಂಥದಲ್ಲಿ ಆಚಾರ್ಯರ ದೇಹಾಂತದ ವಿವರಗಳಿವೆ.
ವರ್ಷೇ ಕಲೇಃ ಶರವಿಲೋಚನಶಾಸ್ತ್ರನೇತ್ರೇ
ರಕ್ತಾಕ್ಷಿನಾಮ್ನಿ ವೃಷಶುಕ್ಲಮುಕುನ್ದನಿಥ್ಯಾಮ್ |
ಗಚ್ಛನ್ ಸ ಜಾತು ಸವಿಧೇ ಪರದೇವತಾಯಾಃ
ತ್ಯಕ್ತುಂ ಸಮೃಚ್ಛದಥ ಭೌತಿಕಮಾತ್ಮದೇಹಮ್ ||

-ಕಲಿ 2625ನೇ ರಕ್ತಾಕ್ಷಿ ಸಂವತ್ಸರದ ವೈಶಾಖ ಶುದ್ಧದ್ವಾದಶೀ ದಿನ ಪರದೇವತೆಯ ಸಮೀಪಕ್ಕೆ ಹೋಗಲು ಭೌತಿಕ ದೇಹವನ್ನು ಬಿಡಲಿಚ್ಛಿಸಿದರು. ಕಲಿ 2625ನೇ ವರ್ಷವೆಂದರೆ ಅದು ಕ್ರಿ.ಪೂ 477 ಆಯಿತು.
ಇದಕ್ಕನುಗುಣವಾಗಿ ಚಿತ್ಸುಖರ ಪ್ರಾಚೀನ ಶಂಕರವಿಜಯದ ಆತ್ಮಬೋಧರ ವ್ಯಾಖ್ಯಾನದಲ್ಲಿ
ಕಲ್ಯಬ್ದೈಶ್ಚ ಶರೇಕ್ಷಣಾಧ್ವನಯನೈಃ ಸತ್ಕಾಮಕೋಟಿಪ್ರಥೇ
ಪೀಠೇ ನ್ಯಸ್ಯ ಸುರೇಶ್ವರಂ ಸಮವಿತುಂ ಸರ್ವಜ್ಞಸಂಜ್ಞಂ ಮುನಿಮ್ |
ಕಾಮಾಕ್ಷ್ಯಾಃ ಸವಿಧೇ ಸ ಜಾತು ನಿವಿಶನ್ನುನ್ಮುಕ್ತಲೋಕಸ್ಪೃಹೋ
ದೇಹಂ ಸ್ವಂ ವ್ಯಪಹಾಯ ದೇಹ್ಯಸುಗಮಂ ಧಾಮ ಪ್ರಪೇದೇ ಪರಮ್ ||

ಎಂದಿದೆ.
ಬೃಹಚ್ಛಂಕರ ವಿಜಯವನ್ನು ಗಮನಿಸೋಣ.
ವಹ್ನ್ಯದ್ದ್ವಶಾಸ್ತ್ರನಯನಾಙ್ಕ ಯುಧಿಷ್ಠಿರಾಬ್ಧೇ
ದ್ವಾತ್ರಿಂಶತಂ ಹಿ ಶರದೋ ಧರಣೀಂ ವಿಭೂಷ್ಯ
ಶ್ರೀಶಂಕರೇಂದ್ರಗುರುರಾಟ್ಭ್ರತರಾಜಸೇನಃ
ಸಂ ಶಿಷ್ಯ ಧರ್ಮಮಖಿಲಂ ಶಿವತಾಂ ಪ್ರಪೇದೇ ||

ಯುಧಿಷ್ಟಿರಶಕದ 2663ರಂದು ಮೂವತ್ತೆರಡು ವರ್ಷ ಭೂಮಿಯನ್ನಲಂಕರಿಸಿದ ಮೇಲೆ ರಾಜಸೇನನಿಂದ ಸೇವೆಗೊಂಡ ಶ್ರೀಶಂಕರೇಂದ್ರ ಗುರುರಾಜರು ಶಿವತ್ವವನ್ನು ಹೊಂದಿದರು. ಇದರಲ್ಲಿರುವ ರಾಜಸೇನ ಯಾರೆಂಬುದು ಗೊಂದಲವಾದರೂ ಯುಧಿಷ್ಟಿರಶಕದ 2663ನೇ ವರ್ಷ ಕ್ರಿ.ಪೂ 477ಕ್ಕೆ ಸರಿಯಾಗಿ ಹೊಂದುತ್ತದೆ.
       ದ್ವಾರಕಾಮಠದ ಶಾಸನದಲ್ಲಿ ಯುಧಿಷ್ಟಿರಶಕದ 2631ನೇ ವೈಶಾಖ ಶುದ್ಧ ಪಂಚಮಿಯಂದು ಅವತರಿಸಿ 2663ನೇ ಕಾರ್ತ್ತೀಕ ಹುಣ್ಣಿಮೆಯಂದು ಬ್ರಹ್ಮೀಭೂತರಾದರು ಎಂದು ಇದೆಯಂತೆ. ಅದೂ ಕೂಡ ಕ್ರಿ.ಪೂ 508 ಮತ್ತು ಕ್ರಿ.ಪೂ 477ನ್ನೇ ಸೂಚಿಸುತ್ತದೆ.
ಇನ್ನು ಶಂಕರರ ಜನ್ಮಕಾಲ ವೈಶಾಖ ಶುದ್ಧ ಪಂಚಮಿ ಎನ್ನುವವರಂತೆ ದಶಮಿ ಎನ್ನುವವರೂ ಇದ್ದಾರೆ. ನೀಲಕಂಠಭಟ್ಟನ ಶಂಕರಮಂದಾರಸೌರಭದಲ್ಲಿ
ಸಂವತ್ಸರೇ ವಿಭವನಾಮ್ನಿ ಶುಭೇ ಮುಹೂರ್ತೇ
ರಾಧೇ ಸಿತೇ ಶಿವಗುರೋರ್ಗೃಹಿಣೀ ಧಶಮ್ಯಾಮ್ ||

ವಿಭವ ಸಂವತ್ಸರದ ವೈಶಾಖ ಶುದ್ಧ ದಶಮಿಯ ದಿನ ಶಿವಗುರುವಿನ ಪತ್ನಿ ಶಂಕರನನ್ನು ಹಡೆದಳು(ವಿಭವ ಸಂವತ್ಸರವೆಂದು ಹೇಳಿರುವುದನ್ನು ಆಸಕ್ತರು ಗಮನಿಸಬೇಕು!). ಇದಕ್ಕನುಗುಣವಾಗಿ ಶಂಕರಜಯಂತಿಯನ್ನು ದಶಮಿಯ ದಿನ ಆಚರಿಸುವವರೂ ಇದ್ದಾರೆ. ಎಲ್ಲ ಶಂಕರವಿಜಯಗಳು ಮತ್ತು ಮಠಗಳ ಸಂಪ್ರದಾಯಗಳನ್ನು ಹೊಂದಿಸಿಕೊಂಡು ಹೋಗುವುದಂತೂ ಸಾಧ್ಯವಿಲ್ಲ. ಕ್ರಿ.ಪೂ 5ನೇ ಶತಮಾನದಿಂದ ಹಿಡಿದು ಕ್ರಿ.ಶ 8ನೇ ಶತಮಾನದವರೆಗೆ ತಮಗೆ ತೋಚಿದ ಕಾಲಗಳನ್ನು ಎಲ್ಲರೂ ಬರೆದಿದ್ದಾರೆ. ಹಾಗೆ ಬರೆದವರಲ್ಲಿ ಒಬ್ಬರೂ ಶಂಕರರ ಕಾಲದವರಲ್ಲ. ಬರೆದುದಕ್ಕೆ ಏನು ಆಧಾರವೆಂಬುದು ಸ್ಪಷ್ಟವಿಲ್ಲ. ವೈಶಾಖ ಶುದ್ಧ ಪಂಚಮಿಯನ್ನು ಶಂಕರಜಯಂತಿಯೆಂದು ಆಚರಿಸಲಾಗುತ್ತಿದೆಯಾದರೂ ಅದಕ್ಕೂ ಸಾಧಾರವಿಲ್ಲ. ’ಶಂಕರ’ ಎಂಬ ಶಬ್ದದ ಅಕ್ಷರಗಳ ಅಂಕೆಗಳನ್ನು ಹಿಂದುಮುಂದಾಗಿ ಎಣಿಸಿದರೆ 5,1,2 ಬರುವುದರಿಂದ ವೈಶಾಖ ಶುದ್ಧ ಪಂಚಮಿಯೆಂದು ತರ್ಕಿಸಲಾಯ್ತೇ? ಶಂಕರರೇ ಹೇಳಬೇಕು!
ಇದಲ್ಲದೇ ಜಿನವಿಜಯದಲ್ಲಿ ಶಂಕರರ ಉಲ್ಲೇಖವಿದೆಯಂತೆ( ಈ ಹೆಸರಿನ ಪುಸ್ತಕ ನನಗಂತೂ ಸಿಕ್ಕಿಲ್ಲ)
ಋಷಿರ್ಬಾಣಸ್ತಥಾ ಭೂಮಿರ್ಮರ್ತ್ಯಾಕ್ಷೋ ವಾಮಮೇಳನಾತ್ |
ಏಕತ್ವೇನ ಲಭೇದಙ್ಕೋ ರಕ್ತಾಕ್ಷಸ್ತದ್ಧಿ ವತ್ಸರಃ ||

ರಶಿ=7, ಬಾನ=5, ಭೂಮಿ=1, ಮರ್ತ್ಯಕ್ಷವು=2. ಜೈನ ಕ್ಯಾಲೆ೦ಡರಿನ ಪ್ರಕಾರ ಶ೦ಕರರ ಭೌತಿಕ ಶರೀರದ ಮರಣ 2157ನೇ ಯುಧಿಷ್ಟೀರ ಶಕದ೦ದು ಸ೦ಭವಿಸಿತು. ಜೈನರ ಯುಧಿಷ್ಟಿರ ಶಕೆಗೂ ಹಿ೦ದುಗಳ ಯುಧಿಷ್ಟಿರ ಶಕೆಗೂ ಇರುವ ವ್ಯತ್ಯಾಸ 467 ವರ್ಷಗಳು. ಹಿ೦ದುಗಳ ಯುಧಿಷ್ಟಿರ ಶಕೆಯು ಕಲಿಯುಗದ ಮೊದಲ ವರ್ಷದಿ೦ದ ಪ್ರಾರ೦ಭವಾದರೆ ಜೈನರ ಯುಧಿಷ್ಟಿರ ಶಕವು 468ನೇ ಕಲಿ ವರ್ಷದಿ೦ದ ಪ್ರಾರ೦ಭವಾಗುತ್ತದೆ.
ಅರ್ಥಾತ್ ಶ೦ಕರರ ಮರಣ ಸ೦ಭವಿಸಿದ್ದು 2157+468=2625ನೇ ಕಲಿ ವರ್ಷದಲ್ಲಿ ಅಥವಾ 3102-2625=477 ಕ್ರಿ.ಪೂ.ದಲ್ಲಿ
ನೇಪಾಳವನ್ನು ಕ್ರಿ.ಪೂ 547 ರಿ೦ದ 486ರವರೆಗೆ ಆಳಿದವನು ಸೂರ್ಯವ೦ಶದ 18ನೇ ರಾಜ ವ್ರಶದೇವ ವರ್ಮ. ನೇಪಾಳರಾಜವ೦ಶಾವಳಿಯಾದ ಕಲ್ಹಣನ ರಾಜತರ೦ಗಿಣಿಯಲ್ಲಿ ಉಲ್ಲೇಖಿಸಿದ೦ತೆ ಕ್ರಿ.ಪೂ 487(ಕಲಿ ವರ್ಷ 2614)ರಲ್ಲಿ ದಕ್ಷಿಣದಿ೦ದ ಬ೦ದ ಆದಿ ಶ೦ಕರಾಚಾರ್ಯರು ಬೌದ್ಧರನ್ನು ವಾದದಲ್ಲಿ ಸೋಲಿಸಿ ಬುದ್ಧರ ನ೦ಬಿಕೆಯನ್ನು ನಾಶ ಮಾಡಿದರು.
ಶಂಕರರು ಕ್ರಿ.ಪೂರ್ವ 5ನೇ ಶತಮಾನದವರೆಂದು ಆಧಾರಗಳಿರುವಾಗ 8೦೦ ವರ್ಷಗಳ ಶೃಂಗೇರಿ ಮಠದ ಇತಿಹಾಸ ಮಾತ್ರ ಮಾಯವಾಗಿರುವುದು ಹೇಗೆ?
ಮಹಾನುಭಾವ ಸಂಪ್ರದಾಯದಲ್ಲಿ ದರ್ಶನಪ್ರಕಾಶವೆಂಬ ಗ್ರಂಥವೊಂದಿದೆ. ಅದರಲ್ಲಿರುವ ಒಂದು ಶ್ಲೋಕವನ್ನು ಗಮನಿಸಿ.
ಯುಗ್ಮಪಯೋಧಿರಸಾಮಿತಶಾಕೇ ರೌದ್ರಕವತ್ಸರ ಊರ್ಜಕಮಾಸೇ |
ವಾಸರ ಈಜ್ಯ ಉತಾಚಲ ಮಾನೇ ಕೃಷ್ಣತಿಥೌ ದಿವಸೇ ಶುಭಯೋಗೇ |
ಶಂಕರ ಲೋಕಮಗಾನ್ನಿಜದೇಹಂ ಹೇಮಗಿರೌ ಪ್ರವಿಹಾಯ ಹಠೇನ ||

- ಇಲ್ಲಿ ಶಂಕರರ ಮೃತ್ಯುಕಾಲ 642ನೇ ಶಕೆ(ಕ್ರಿ.ಶ  72೦) ಎಂದಿದೆ. ಆದರೆ ಹಠಯೋಗದಿಂದ ಹೇಮಗಿರಿಯಲ್ಲಿ ದೇಹವನ್ನು ಬಿಟ್ಟರು ಎಂದು ಹೇಳಿರುವುದರಿಂದ ಇದು ಯಾವ ಶಂಕರ ಕುರಿತಾದದ್ದೆಂದು ವಿಮರ್ಶಕರೇ ಊಹಿಸಬೇಕು. ಕಂಚಿಪೀಠದಲ್ಲಿ ಕೃಪಾಶಂಕರ, ಮೂಕ ಶಂಕರ, ಅಭಿನವಶಂಕರ ಎಂಬಿತ್ಯಾದಿ ಹೆಸರಿನ ಹಲವು ಯತಿಗಳು ಆಗಿಹೋಗಿರುವುದರಿಂದ ಅವರ ಚರಿತ್ರೆಗಳು ಆದ್ಯಶಂಕರರೊಡನೆ ಸೇರಿ ಹೋಗಿರಬಹುದೇ?!
ಕೇರಳೀಯ ಶಂಕರವಿಜಯದಲ್ಲಿ ಚೇರಾಮನ್ ಪೆರುಮಾಳನ ಕಾಲದಲ್ಲಿ ಶಂಕರರ ಜನನವಾಯ್ತೆಂದಿದೆ(ಪೆರುಮಾಳನ ಕಥೆಗಾಗಿ ಇಲ್ಲಿ ನೋಡಿ). ಆತ ಕ್ರಿ.ಶ ಏಳನೇ ಶತಮಾನದವನು. ಒಂದೇ ಸರ್ಗದಲ್ಲಿ ಸರ್ವಜ್ಞಪೀಠವನ್ನು ಕಾಶ್ಮೀರದಲ್ಲಿಯೂ ಕಾಂಚಿಯಲ್ಲಿಯೂ ಇತ್ತೆಂದು ಬರೆಯಲ್ಪಟ್ಟಿರುವ ಕೇರಳೀಯವು ಇತಿಹಾಸಕಾರರಿಂದ ತಿರಸ್ಕೃತವಾಗಿರುವುದರಿಂದ ಅದನ್ನು ಆಧಾರಯೋಗ್ಯವೆಂದು ಪರಿಗಣಿಸುವಂತಿಲ್ಲ.
       ಕಂಚಿಮಠ ಸಂಪ್ರದಾಯದ ಪ್ರಕಾರ ಶಂಕರರು ಜನಿಸಿದ್ದು ಕ್ರಿ.ಪೂ 508ರಲ್ಲಿ ಮತ್ತು ಸಿದ್ಧಿ ಹೊಂದಿದ್ದು ಕ್ರಿ.ಪೂ 476ರಲ್ಲಿ. ಕ್ರಿ.ಪೂ 406ರವರೆಗೆ ಸುರೇಶ್ವರಾಚಾರ್ಯರು ಕಂಚಿಯ ಮೊದಲ ಪೀಠಾಧಿಪತಿಗಳಾಗಿದ್ದರು. ಆತ್ಮಬೋಧರು ತಮ್ಮ ಸುಷುಮಾ ಗ್ರಂಥದಲ್ಲಿ ಸುರೇಶ್ವರರು ಅಪರಮಹಂಸರಾಗಿದ್ದರಿಂದ ಅವರ ಬದಲು ನಂತರ ಪೀಠವೇರಿದ್ದ ಸರ್ವಜ್ಞಾತ್ಮರನ್ನು ಮೊದಲ ಪೀಠಾಧಿಪತಿಯೆಂದಿದ್ದಾರೆ. ಅದೇನೇ ಇದ್ದರೂ ಶೃಂಗೇರಿಯಲ್ಲಿ ಮೊದಲ ಪೀಠಾಧಿಪತಿಗಳಾಗಿದ್ದ ಸುರೇಶ್ವರರೇ ಕಂಚಿಯಲ್ಲೂ ಪೀಠವೇರಿದ್ದಾರೆ. ಅದೇ ದ್ವಾರಕಾ ಪೀಠದಿಂದ 1957ರಲ್ಲಿ ಪ್ರಕಾಶಿತವಾದ ಗುರುಪರಂಪರೆಯ ಪಟ್ಟಿಯನ್ನೂ ಬಲದೇವ ಉಪಾಧ್ಯಾಯರ ದ್ವಾರಕಾ ಪರಂಪರೆಯ ಪಟ್ಟಿಯನ್ನೂ ನೋಡಿದರೆ ಅಲ್ಲಿನ ಮೊದಲ ಪೀಠಾಧಿಪತಿಗಳೂ ಸುರೇಶ್ವರಾಚಾರ್ಯರೇ. ಅವರಿಗೆ ಯುಧಿಷ್ಟಿರ ಶಕ 2649ರ ಮಾಘ ಶುದ್ಧ ಸಪ್ತಮಿಯ ದಿನ ಶಾರದಾಪೀಠದ ಅಧ್ಯಕ್ಷರಾಗಿ ಅಭಿಷೇಕವಾಯಿತೆಂದು ಪರಂಪರೆಯಲ್ಲಿದೆ. ಮಹಾದೇವ ರಾಜಾರಾಮ ಬೋಡಸ್‌ರು ಮೊದಲನೇಯ ಆಚಾರ್ಯರು ಹಸ್ತಾಮಲಕರೆನ್ನುತ್ತಾರೆ. ದ್ವಾರಕಾ ಮಠದಲ್ಲಿ ಕ್ರಿ.ಪೂ 477ರಲ್ಲಿ ಸುಧನ್ವ ರಾಜನಿಂದ ಬರೆಸಲ್ಪಟ್ಟ(!!!) ತಾಮ್ರಶಾಸನವೊಂದಿದೆಯಂತೆ. ಸುಧನ್ವ ಎಂಬ ರಾಜ ಕೇರಳ ದೇಶದವನೆಂದು ಕೆಲ ಶಂಕರವಿಜಯಗಳು ಹೇಳಿದರೆ, ಚಿತ್ಸುಖರ ಬೃಹತ್ ಶಂಕರ ವಿಜಯ ಮತ್ತು ಆನಂದಗಿರಿಯ ಪ್ರಾಚೀನ ಶಂಕರವಿಜಯಗಳು ಸುಧನ್ವ ದ್ವಾರಕೆಯನ್ನಾಳಿದ್ದನೆಂದಿವೆ. ಮಹಾಮಹೋಪಾಧ್ಯಾಯ ಜೆ.ಎನ್ ದ್ವಿವೇದಿ ಮತ್ತು ಬೋಡಸ್‌ರ ಶಂಕರರ ಚರಿತ್ರೆಗಳಲ್ಲಿಯೂ ಸುರೇಶ್ವರರನ್ನೇ ದ್ವಾರಕಾ ಮಠದ ಮೊದಲ ಪೀಠಾಧಿಪತಿಗಳನ್ನಾಗಿಸಿದೆ.
        ಮಠಾಮ್ನಾಯಗಳಲ್ಲಿ ದ್ವಾರಕೆ ’ಭದ್ರಕಾಲೀ’ಪೀಠವೆಂದಿದ್ದರೂ ಈ  ಪೀಠಕ್ಕೆ ’ಶಾರದಾ ಪೀಠ’ವೆಂದು ಅವರ ಪರಂಪರೆ ಕರೆದಿರುವುದು ವಿಚಾರಣೀಯ. ಶಾರದಾ ಪ್ರತಿಷ್ಟೆಯನ್ನು ಯುಧಿಷ್ಟಿರ ಶಕ 2648ರಲ್ಲೇ ಮಾಡಲಾಯಿತೆಂದು ದ್ವಾರಕಾ ಮಠದ ಸಂಪ್ರದಾಯ ಹೇಳುತ್ತದೆ. ಆದರೆ ಇಲ್ಲಿ ಭದ್ರಕಾಲಿ ಮತ್ತು ಸಿದ್ಧೇಶ್ವರರಿಗೇ ಹೆಚ್ಚು ಪ್ರಾಶಸ್ತ್ಯ. ಮಠಾಮ್ನಾಯಶಾಸನದಲ್ಲಿ ’ಕಾಲಿಕಾಪೀಠಶಾಸನೇ’ ಎಂದಿದ್ದು ದ್ವಾರಕೆಯ ಮಹಾಶಾಸನದಲ್ಲಿ ಮಾತ್ರ ’ಶಾರದಾಪೀಠಸ್ಕೃತಾಃ’ ಎಂದಾಗಿದೆ. ’ದ್ವಾರಕಾ ಶ್ರೀಶಾರದಾಪೀಠಗುರುಪರಂಪರೆ’ಯಲ್ಲಿ ಯುಧಿಷ್ಟಿರ ಶಕ 2648ರಲ್ಲಿ ಕಾರ್ತ್ತಿಕಮಾಸದ ಕೃಷ್ಣಪಕ್ಷದಂದು ಮಂದನರ ಪತ್ನಿ ಭಾರತಿದೇವಿಯ ಜೊತೆಗಿನ ವಾದದ ನಂತರ ಆಕಾಶಮಾರ್ಗದಿಂದ ತನ್ನ ಲೋಕಕ್ಕೆ ಹೋಗುತ್ತಿದ್ದ ಆಕೆಯನ್ನು ಚಿಂತಾಮಣಿ ಮಂತ್ರದಿಂದ ಆಕರ್ಷಣೆ ಮಾಡಿ ದ್ವಾರಕೆಯಲ್ಲಿ ಶಾರದೆಯಾಗಿ ಸ್ಥಾಪಿಸಿದರು ಎಂದಿದೆ. ಶೃಂಗೇರಿಯದ್ದೂ ಕೂಡ ಇದೇ ಕಥೆ. ಕಂಚಿಯಲ್ಲಿ ಕಾಮಾಕ್ಷಿಗೆ ಹೆಚ್ಚಿನ ಪ್ರಾಶಸ್ತ್ಯವಿದ್ದರೂ ಕಂಚಿಯವರೂ ತಮ್ಮದು ಶಾರದಾ ಪೀಠವೆಂದು ಕರೆದುಕೊಳ್ಳುತ್ತಾರೆ. ಶೃಂಗೇರಿಯವರೂ ಕೂಡ. ಇದರ ಗುಟ್ಟೇನೋ ತಿಳಿದಿಲ್ಲ.
       ದ್ವಾರಕೆ ಮತ್ತು ಕಾಂಚಿ ಇವೆರಡರ ಪರಂಪರೆಯಲ್ಲೂ ಶಂಕರಾಚಾರ್ಯರಿಗೆ ಹೆಚ್ಚುಕಡಿಮೆ ಕ್ರಿ.ಪೂ ೫ನೇ ಶತಮಾನದ ಕಾಲವನ್ನೇ ಕೊಟ್ಟಿದ್ದಾರೆ. ಇವೆರಡರಲ್ಲೂ ಮೊದಮೊದಲ ಗುರುಗಳಿಗೆ ಹೆಚ್ಚಿನ ಕಾಲಾವಧಿಯನ್ನೂ ಇತ್ತೀಚಿನವರಿಗೆ ಸ್ವಲ್ಪ ಕಡಿಮೆ ಒಪ್ಪುವ ಕಾಲವನ್ನೂ ಬರೆದಿರುತ್ತಾರೆ. ಕಂಚಿಯಲ್ಲಿ 67 ಪೀಠಾಧ್ಯಕ್ಷರ ಪಟ್ಟಿಯಿದ್ದರೆ ದ್ವಾರಕೆಯಲ್ಲಿ ಸುಮಾರು 78 ಜನರ ಹೆಸರಿದೆ. ಇವೆರಡೂ ಮಠಗಳ ಪೀಠಾಧಿಪತಿಗಳ ಸಂಖ್ಯೆಯಲ್ಲಿ ಸಾಮ್ಯವಿದ್ದರೂ ಶೃಂಗೇರಿಯ ಪಟ್ಟಿಯಲ್ಲಿ 36 ಜನರ ಹೆಸರು ಮಾತ್ರವಿದೆ. ಮಾತ್ರವಲ್ಲ ಶೃಂಗೇರಿ ಮಠದವರು ಒಪ್ಪುವಂತೆ ಶಂಕರರ ಕಾಲಮಾನ ಕ್ರಿ.ಶ 8ನೇ ಶತಮಾನ. ಶೃಂಗೇರಿ, ರಾಮಚಂದ್ರಾಪುರ, ಕಂಚಿ ಮತ್ತು ದ್ವಾರಕೆ ಈ ನಾಲ್ಕೂ ಪೀಠಗಳೂ ತಮ್ಮ ತಮ್ಮ ಮೊದಲ ಪೀಠಾಧಿಪತಿಗಳನ್ನಾಗಿ ಸುರೇಶ್ವರಾಚಾರ್ಯರನ್ನೇ ಹೆಸರಿಸಿದೆ. ಮಂಡನ ಮಿಶ್ರರು ಸಂನ್ಯಾಸ ಸ್ವೀಕಾರದ ನಂತರ ಸುರೇಶ್ವರರೆಂದು ಹೆಸರಾದರು ಎಂಬುದು ಲೋಕವಿದಿತ. ಆದರೆ ಶೃಂಗೇರಿಪೀಠದ ಅನುಜ್ಞೆಯಂತೆ ರಚಿತವಾದ ಗುರುವಂಶಕಾವ್ಯದಲ್ಲಿ ಮಂಡನಸುರೇಶ್ವರಿಬ್ಬರನ್ನೂ ಬೇರೆಬೇರೆ ವ್ಯಕ್ತಿಗಳಾಗಿ ಪರಾಮರ್ಶಿಸಲಾಗಿದೆ.
ಈ ಒಗಟುಗಳನ್ನು ಒಡೆಯುವುದು ಹೇಗೆಂದು ಸಾಕ್ಷಾತ್ ಶಂಕರರೇ ಬಲ್ಲರು!!!!!!!

Wednesday, January 20, 2016

ಶ್ರೀಮಚ್ಛಂಕರಭಗವತ್ಪಾದ ಚರಿತ್ರ: ಶಂಕರವಿಜಯ ಪ್ರಕರಣ


श्रुति स्मृति पुराणानामालयं करुणालयं|
      नमामि भगवत्पादशंकरं लॊकशंकरं ||
ಶ್ರೀಮಚ್ಛಂಕರ ಭಗವತ್ಪಾದರ ಬಗ್ಗೆ ಯಾರಾದರೂ ಏನಾದರೂ ಬರೆದರೆ ಅದು ಹೊಸತೇನೂ ಆಗಿರುವುದಿಲ್ಲ. ಶಂಕರರ ಸಮಕಾಲೀನರಿಂದ ಹಿಡಿದು ಇಂದಿನವರೆಗೂ ಸಹಸ್ರ ಸಹಸ್ರ ಲೇಖಕರು ಶಂಕರಾಚಾರ್ಯರ ಬಗ್ಗೆ ಲೆಕ್ಕಕ್ಕಿಡಲಾಗದಷ್ಟು ಬಾರಿ ಬರೆದಿದ್ದಾರೆ. ಅವರ ವೇದಾಂತ ತತ್ತ್ವಗಳಿಂದ ಮೊದಲು ಮಾಡಿ ಜೀವನದ ಘಟನಾವಳಿಗಳವರೆಗೆ. ಹಾಗೆಂದು ಶಂಕರರ ಅದ್ವೈತ ವೇದಾಂತವನ್ನು ವಿಮರ್ಶಿಸುವುದು ಈ ಲೇಖನದ ಉದ್ದೇಶವಲ್ಲ. ಹುಲುಮಾನವರಿಂದ ಅದು ಸಾಧ್ಯವೂ ಇಲ್ಲ. ಶಂಕರರ ಇತಿಹಾಸದ ಬಗ್ಗೆ ಒಂದು ವಿಮರ್ಶಕ ನೋಟ ಬೀರುವುದಷ್ಟೇ ಈ ಲೇಖನದ ಗುರಿ.
ವೇದಾಂತವಿಚಾರದ ಇತಿಹಾಸ ತಿಳಿಯಬೇಕೆನ್ನುವವರಿಗೆ ಆಚಾರ್ಯರ ಗ್ರಂಥಗಳಂತೆ ಅವರ ಶಿಷ್ಯ ಅಥವಾ ಶಿಷ್ಯಪರಂಪರೆಯ ಗ್ರಂಥಗಳೂ ಅವಶ್ಯವಾಗಿ ಪರೀಕ್ಷಣೀಯ. ಆದರೆ ಆಚಾರ್ಯರ ಚರಿತ್ರೆ ಮತ್ತು ಉಪದೇಶವನ್ನು ಗೊತ್ತುಪಡಿಸಹೊರಟಾಗ ಅವರ ಮೂಲಗ್ರಂಥಗಳ ಅಭಿಪ್ರಾಯಕ್ಕೆ ಅಗ್ರಸ್ಥಾನ ಕೊಡುವುದು ಅತ್ಯಗತ್ಯ. ಹಾಗಾಗಿ ಆ ಚರಿತ್ರಾದಿಗಳ ಸತ್ಯಾಸತ್ಯತೆಯ ಪರಿಶೀಲನೆಯೂ ಅಷ್ಟೇ ಮುಖ್ಯ. ಶಂಕರಾಚಾರ್ಯರ ಬಗೆಗೆ ನಮಗೆ ಈಗ ತಿಳಿದುಕೊಳ್ಳಲು ಇರುವ ಮೂಲಾಧಾರವೆಂದರೆ ಬೇರೆ ಬೇರೆ ಕಾಲಗಳಲ್ಲಿ ರಚಿತಗೊಂಡಿರುವ ’ಶಂಕರವಿಜಯ’ ಗ್ರಂಥಗಳು. ಈ ಹೆಸರಿನ ಒಟ್ಟೂ ೨೨ ಗ್ರಂಥಗಳಿವೆಯಂತೆ. ಆದರೆ ಈಗ ಲಭ್ಯವಿರುವ ಅಥವಾ ಪ್ರಚಲಿತದಲ್ಲಿರುವ ಪ್ರಮುಖ ಶಂಕರವಿಜಯಗಳೆಂದರೆ ಮಾಧವೀಯ ಶಂಕರವಿಜಯ, ವ್ಯಾಸಾಚಲೀಯ ಶಂಕರವಿಜಯ, ಚಿದ್ವಿಲಾಸೀಯ ಶಂಕರವಿಜಯವಿಲಾಸ, ಅನಂತಾನಂದಗಿರೀಯ ಶಂಕರವಿಜಯ, ಸದಾನಂದವ್ಯಾಸಕೃತ ಶಂಕರಮಂದಾರಸೌರಭ, ಸುಷುಮಾಸಹಿತ ಗುರುರತ್ನಮಾಲಾ, ನೀಲಕಂಠಕೃತ ಶಂಕರಮಂದಾರ, ರಾಮಶರ್ಮವಿರಚಿತ ಶಂಕರಕಥಾಸುಧಾನಿಧಿ, ಶಂಕರಚರಿತ್ರಮ್, ಗುರುನಾಥಕೃತ ಶಂಕರವಿಜಯಚೂರ್ಣಿಕಾ, ನೀಲಕಂಠಶಾಸ್ತ್ರಿಕೃತ ಶ್ರೀಶಂಕರಾಭ್ಯುದಯ, ಭಗವತ್ಪಾದಾಭ್ಯುದಯ ಹಾಗೂ ಇತ್ತೀಚಿನ ಶಂಕರದಿಗ್ವಿಜಯಸಾರ. ಇವುಗಳಲ್ಲಿ ಮೊದಲ ನಾಲ್ಕಾದ ಮಾಧವೀಯ, ವ್ಯಾಸಾಚಲೀಯ, ಚಿದ್ವಿಲಾಸೀಯ ಮತ್ತು ಅನಂತಾನಂದಗಿರೀಯಗಳು ಬಹು ಪ್ರಸಿದ್ಧಿ ಮಾತ್ರವಲ್ಲ ಬಹು ಪ್ರಾಚೀನವೆಂದೂ ಪ್ರತೀತಿ. ಉಳಿದವುಗಳೆಲ್ಲ ಈ ಶಂಕರವಿಜಯಗಳ ವ್ಯಾಖ್ಯಾನಕ್ಕಾಗಿಯೋ, ವಿಮರ್ಶೆಗಾಗಿಯೋ, ಸಂಗ್ರಹಕ್ಕಾಗಿಯೋ ಅಥವಾ ಲೆಕ್ಕದ ಭರ್ತಿಗೆ ತಮ್ಮದೂ ಒಂದಿರಲಿ ಎಂಬುದಕ್ಕಾಗಿಯೋ ರಚಿತವಾದವು. ಶಂಕರರ ಕಾಲಮಾನದ ಬಗ್ಗೆ ಭಿನ್ನಾಭಿಪ್ರಾಯಗಳಿರುವ ವಿಷಯವಾಗಿ ಹಿಂದೊಮ್ಮೆ ಬರೆದಿದ್ದೆ. ಮೊನ್ನೆ ಶಂಕರಜಯಂತಿಯನ್ನು ಕೇಂದ್ರಸರ್ಕಾರ ತತ್ತ್ವಜ್ಞಾನಿಗಳ ದಿನವೆಂದು ಘೋಷಿಸಿದಾಗಲೂ ಶೃಂಗೇರಿ ಮಠದ ಕಾಲಮಾನವನ್ನಾಧರಿಸಿ ಕೇಂದ್ರ ಸರ್ಕಾರ ನೀಡಿದ ಶಂಕರರ ಜನ್ಮವರ್ಷದ ಬಗ್ಗೆ ಕಂಚಿಮಠದಿಂದ ತಕರಾರು ಶುರುವಾಗಿತ್ತು. ಶಂಕರಾಚಾರ್ಯರಿಂದ ಸ್ಥಾಪಿತವಾದ ಮಠಗಳ ಬಗ್ಗೆಯೇ ಅಭಿಪ್ರಾಯಭೇದಗಳಿವೆ. ಇಂಥ ತಕರಾರುಗಳು ಹೊಸದಲ್ಲ. ಅಂಥವುಗಳನ್ನು ಮುಂದೆ ನೋಡೋಣ. ಆದರೆ ಶಂಕರರ ಕಾಲಮಾನವನ್ನು, ಚರಿತ್ರೆಯನ್ನು ನಿಷ್ಕರ್ಷಿಸಲು ಸಹಾಯಕವಾಗುವುದೆಂದು ಶಂಕರವಿಜಯಗಳನ್ನು ಆಧಾರವಾಗಿಟ್ಟುಕೊಂಡರೆ ಅವುಗಳ ಕಾಲವನ್ನು ನಿರ್ಣಯಿಸುವುದು ಇನ್ನೂ ಕಷ್ಟದ ವಿಚಾರವಾಗಿದೆ.
ಮೊದಲನೇಯದಾಗಿ, ಮಾಧವೀಯ ಶಂಕರವಿಜಯವನ್ನು ವಿಜಯನಗರದ ಸಂಸ್ಥಾಪಕರಾದ ವಿದ್ಯಾರಣ್ಯ ಸ್ವಾಮಿಗಳು ಪೂರ್ವಾಶ್ರಮದಲ್ಲಿ ಮಾಧವಾಚಾರ್ಯನೆಂಬ ಹೆಸರಿನಿಂದ ಬರೆದದ್ದೆಂದು ಬಹುಜನರ ನಂಬಿಕೆಯಿದೆ. ಇದು ಪ್ರಾಯಶಃ ಸದ್ಯ ಲಭ್ಯವಿರುವ ಹತ್ತಕ್ಕೂ ಹೆಚ್ಚು ಶಂಕರವಿಜಯಗಳಲ್ಲಿ ಅತಿಪ್ರಸಿದ್ಧವಾದುದು. ಮಾಧವೀಯವೆಂದೇ ಹೆಸರಾಗಿರುವ ಈ ಗ್ರಂಥಕ್ಕೆ ಸಂಕ್ಷೇಪ ಶಂಕರವಿಜಯವೆಂದು ಕವಿ ಪ್ರತಿ ಸರ್ಗಾಂತ್ಯದಲ್ಲಿ ಹೆಸರು ಕೊಟ್ಟಿದ್ದಾನೆ. ಇದು ವಿದ್ಯಾರಣ್ಯಕೃತವೆಂಬುದಕ್ಕೆ ಮಂಗಲಶ್ಲೋಕದಲ್ಲಿರುವ ವಿದ್ಯಾತೀರ್ಥರ ಸ್ಮರಣೆಯನ್ನೂ, ’ಇತಿ ಶ್ರೀಮಾಧವೀಯೇ’ ಎಂಬ ಸರ್ಗಸಮಾಪ್ತಿವಾಕ್ಯವನ್ನೂ ಬಿಟ್ಟರೆ ಬೇರೆ ಆಧಾರಗಳಿಲ್ಲ. ಇದು ವಿದ್ಯಾರಣ್ಯಕೃತವಲ್ಲ ಎಂಬುದಕ್ಕೆ ಕಾರಣವೂ ಇದೆ. ಶೃಂಗೇರಿ ಜಗದ್ಗುರುಗಳಾಗಿದ್ದ ಶ್ರೀಸಚ್ಚಿದಾನಂದಭಾರತೀಸ್ವಾಮಿಗಳ ಅಪ್ಪಣೆಯಂತೆ ಕಾಶೀ ಲಕ್ಷ್ಮಣ ಶಾಸ್ತ್ರಿಗಳು ಗುರುವಂಶಕಾವ್ಯ ಅಥವಾ ಶಂಕರವಿಜಯವೆಂಬ ಗ್ರಂಥರಚನೆ ಮಾಡಿದ್ದರು. ಈ ಗ್ರಂಥದ ಶಂಕರಚರಿತ್ರೆಗೂ ಮಾಧವೀಯದಲ್ಲಿರುವ ಶಂಕರಚರಿತ್ರೆಯ ವಿವರಗಳಿಗೂ ತುಂಬ ವ್ಯತ್ಯಾಸವಿದೆ. ಗುರುವಂಶಕಾವ್ಯವು ಶೃಂಗೇರಿಯ ಪುಸ್ತಕಭಂಡಾರದಲ್ಲೇ ದೊರೆತು ಅಚ್ಚಾದ ಕೃತಿ. ಶೃಂಗೇರಿ ಪೀಠಾಧಿಪತಿಗಳಾಗಿದ್ದ ವಿದ್ಯಾರಣ್ಯ ಸ್ವಾಮಿಗಳು ಬರೆದ ವಿವರಗಳಿಗೆ ವಿರುದ್ಧವಾದ ವಿಷಯಗಳನ್ನು ಶೃಂಗೇರಿ ಪೀಠದವರೇ ಬರೆಸಿದರೆಂಬುದು ವಿಶ್ವಸನೀಯವಲ್ಲ. ಜೊತೆಗೆ ಮಾಧವೀಯದಲ್ಲಿ ಕವಿ ತನ್ನನ್ನು ತಾನು ’ಪ್ರೌಢೋಯಂ ನವಕಾಲಿದಾಸಕವಿತಾಸಂತಾನಸಂತಾನಕಃ’ ಮತ್ತು ’ವಾಗೇಷು ನವಕಾಲಿದಾಸವಿದುಷಃ’ ನವಕಾಲಿದಾಸನೆಂದು ಕರೆದುಕೊಂಡಿದ್ದಾನೆ. ಮಾಧವ ಅಥವಾ ವಿದ್ಯಾರಣ್ಯರಿಗೆ ಆ ಬಿರುದಿತ್ತೆಂಬುದಕ್ಕೆ ಆಧಾರವಿಲ್ಲ. ಭಾಗವತಚಂಪೂವನ್ನು ಬರೆದ ಮಾಧವನೆಂಬ ಕವಿಗೆ ಆ ಬಿರುದಿತ್ತು. ಭಾಗವತಚಂಪೂವಿನಲ್ಲಿಯೂ ’ಅಭಿನವಪದಪೂರ್ವಃಕಾಲಿದಾಸಃ’, ’ನವಕಾಲಿದಾಸವಿದುಷಶ್ವ’ ಎಂದು ತನ್ನ ನವಕಾಲಿದಾಸ ಬಿರುದನ್ನು ಹೇಳಿಕೊಂಡಿದ್ದಾನೆ. ಯಮಕಾದಿಗಳಲ್ಲಿ ಆತನ ಶೈಲಿಯೂ ಶಂಕರವಿಜಯದ ಶೈಲಿಯನ್ನೇ ಹೋಲುತ್ತದೆ. ನಾಯಕರಾಜನ ಆಸ್ಥಾನಕವಿಯಾದ ಶ್ರೀರಾಜಚೂಡಾಮಣಿದೀಕ್ಷಿತನ ಶಂಕರಾಭ್ಯುದಯದ ನಾಲ್ಕನೇ ಸರ್ಗದ ಇಪ್ಪತ್ನಾಲ್ಕು ಶ್ಲೋಕಗಳು ಯಥಾವತ್ ಮಾಧವೀಯದ ಹನ್ನೆರಡನೇ ಸರ್ಗದಲ್ಲಿ ಸೇರಿಕೊಂಡಿವೆ. ರಾಜಚೂಡಾಮಣಿ ದೀಕ್ಷಿತ ಹದಿನೇಳನೇ ಶತಮಾನದವನಾದ್ದರಿಂದ ಅವನ ಶ್ಲೋಕಗಳನ್ನು ತೆಗೆದುಕೊಂಡ ಮಾಧವ ಅವನಿಗಿಂತ ಈಚಿನವನಿರಬೇಕು. ಪೂರ್ವಾಶ್ರಮದಲ್ಲಿ ಮಾಧವನೆಂದು ಹೆಸರಾಗಿದ್ದ ವಿಜಯನಗರ ಸ್ಥಾಪಕ ವಿದ್ಯಾರಣ್ಯರು ಹದಿನಾಲ್ಕನೇ ಶತಮಾನಕ್ಕೂ ಚೂರು ಹಿಂದಿನವರು. ಅಥವಾ ಶಂಕರಾಭ್ಯುದಯದ ಶ್ಲೋಕಗಳನ್ನು ಬೇರಾರೋ ಮಾಧವನ ಹೆಸರಿನಲ್ಲಿ ಶಂಕರವಿಜಯದಲ್ಲಿ ಸೇರಿಸಿರಲೂಬಹುದು!. ಅಷ್ಟಾಗಿದ್ದು ಮಾತ್ರವಲ್ಲ. ಮಾಧವೀಯದ ಗ್ರಂಥಕಾರನು ಯಾವ್ಯಾವುದೋ ಕಾಲಕ್ಕೆ ಸೇರಿದ ಬಾಣ, ದಂಡಿ, ಮಯೂರ, ಶ್ರೀಹರ್ಷ, ಭಟ್ಟಭಾಸ್ಕರ, ಉದಯನನ ಜೊತೆ ಆಚಾರ್ಯರು ವಾದಮಾಡಿದಂತೆ ವರ್ಣಿಸಿದ್ದಾನೆ. ಅಂಥ ಕಲ್ಪಿತ ಕತೆಗಳನ್ನೆಲ್ಲ ವಿದ್ಯಾರಣ್ಯ ಸ್ವಾಮಿಗಳು ಬರೆದರೆಂದರೆ ನಂಬಲು ಕಷ್ಟ. ಮಾಧವೀಯವು ವಿದ್ಯಾರಣ್ಯಕೃತವೆಂಬುದಕ್ಕಿರುವ ಏಕೈಕ ಊಹೆ ಅದರ ಮಂಗಲ ಶ್ಲೋಕದಲ್ಲಿ ಬರುವ ’ಪ್ರಣಮ್ಯ ಪರಮಾತ್ಮಾನಾಂ ಶ್ರೀವಿದ್ಯಾತೀರ್ಥರೂಪಿಣಮ್’ ಎಂಬುದು. ವಿದ್ಯಾತೀರ್ಥರೆಂಬುದು ಶೃಂಗೇರಿ ಪರಂಪರೆಯಲ್ಲಿ ವಿದ್ಯಾರಣ್ಯರ ಗುರುಗಳಾದ ವಿದ್ಯಾಶಂಕರರೇ ಎಂಬುದು ಹೌದಾದರೂ ವಿದ್ಯಾರಣ್ಯರು ಶಂಕರವಿಜಯದ ಮಾಧವಾಚಾರ್ಯರಲ್ಲವೇ ಅಲ್ಲ. ಯಾಕೆಂದು ಮುಂದೆ ಶೃಂಗೇರಿ ಮಠದ ವಿಚಾರ ಬಂದಾಗ ನೋಡೋಣ.
ಶಂಕರವಿಜಯ ಮಾಲಿಕೆಯಲ್ಲಿ ಎರಡನೇ ಅತಿಪ್ರಸಿದ್ಧ ಗ್ರಂಥವೆಂದರೆ ವ್ಯಾಸಾಚಲೀಯ. ಇದನ್ನು ’ಪ್ರಾಚೀನ ಶಂಕರವಿಜಯ’ವೆಂದೂ ಕೆಲವೆಡೆ ಕರೆಯಲಾಗಿದೆ. ಕಂಚಿಮಠದ ಆತ್ಮಬೋಧೇಂದ್ರರು ’ಪ್ರಾಚೀನ ಶಂಕರವಿಜಯ’ದ ಕೆಲಭಾಗಗಳನ್ನು ತಮ್ಮ ’ಸುಷುಮಾ’ ಗುರುರತ್ನಮಾಲಿಕಾ ವ್ಯಾಖ್ಯಾನದಲ್ಲಿ ಅಲ್ಲಲ್ಲಿ ಉದಾಹರಿಸಿದ್ದಾರೆ. ಶಂಕರಾಚಾರ್ಯರ ಜನ್ಮಕಾಲದ ಸ್ಪಷ್ಟವಾದ ವಿವರಗಳುಳ್ಳ ಕ್ಚಚಿತ್ ಗ್ರಂಥಗಳಲ್ಲಿ ಇದೂ ಒಂದು. ಮಾಧವನು ತನ್ನ ಮಾಧವೀಯದಲ್ಲಿ ಪ್ರಾಚೀನ ಶಂಕರವಿಜಯವನ್ನು ಹೆಸರಿಸಿದ್ದಾನಾದರೂ ಆತ ಹೇಳುವ ಪ್ರಾಚೀನಶಂಕರವಿಜಯ ಇದಾಗಿರುವ ಸಾಧ್ಯತೆಯಿಲ್ಲ. ಮಾಧವೀಯದ ವಿವರಗಳಿಗೂ ಪ್ರಾಚೀನಶಂಕರವಿಜಯದ ವಿವರಗಳಿಗೂ ಹೆಚ್ಚುಕಡಿಮೆಯಿದೆ. ಈ ಪ್ರಾಚೀನಶಂಕರವಿಜಯವನ್ನು ಕಂಚಿಮಠದ ಹದಿನೆಂಟನೇ ಯತಿಗಳಾದ ಮೂಕಶಂಕರರು ಬರೆದರೆಂದು ಶಂಕರವಿಜಯಗಳ ಕುರಿತು ವಿಸ್ತೃತ ಅಧ್ಯಯನ ನಡೆಸಿದ್ದ ವೆಂಕಟರಾಮನ್ ಎಂಬ ಇತಿಹಾಸಕಾರರ ಹೇಳಿಕೆ. ಜೊತೆಗೆ ಮಾಧವೀಯದಲ್ಲಿ ಉಲ್ಲೇಖಿತ ವ್ಯಾಸಾಚಲೀಯ ಶಂಕರವಿಜಯವೆಂಬ ಗ್ರಂಥವು ಬೇರೆಯೇ ಇದೆಯೆಂಬುದು ಕೃತಿಕಾರನ ಅಂಬೋಣ.
ನೇತಾ ಯತ್ರೋಲ್ಲಸತಿ ಭಗವತ್ಪಾದಸಂಜ್ಞೋ ಮಹೇಶಃ
ಶಾಂತಿರ್ಯತ್ರ ಪ್ರಕಟತಿ ರಸಃ ಶೇಷವಾನುಜ್ವಲಾದ್ಯೈಃ |
ಯತ್ರಾವಿದ್ಯಾಕ್ಷತಿರಪಿ ಫಲಂ ತಸ್ಯ ಕಾವ್ಯಸ್ಯ ಕರ್ತಾ
ಧನ್ಯೋ ವ್ಯಾಸಾಚಲಕವಿವರಸತ್ಕೃತಿಜ್ಞಾಶ್ಚ ಧನ್ಯಾಃ ||

-ಭಗವತ್ಪಾದರೆಂಬ ಹೆಸರಿನ ಮಹೇಶ್ವರನೇ ಯಾವುದಕ್ಕೆ ನಾಯಕನೋ, ಯಾವುದರಲ್ಲಿ ಶೃಂಗಾರಾದಿ ಅಪ್ರಧಾನರಸಗಳಿಂದೊಡಗೂಡಿದ ಶಾಂತಿರಸವೇ ಪ್ರಧಾನವಾಗಿರುವುದೋ, ಯಾವುದರಲ್ಲಿ ಅವಿದ್ಯಾನಾಶವೇ ಫಲವೋ, ಆ ಕಾವ್ಯದ ಕರ್ತೃವಾದ ವ್ಯಾಸಾಚಲಕವಿಯೇ ಧನ್ಯ.
ವ್ಯಾಸಾಚಲವೆಂಬುದು ಹೆಸರೋ ಅಥವಾ ಬಿರುದೋ ಎಂಬುದು ಪ್ರಕೃತ ಕಾವ್ಯದಲ್ಲಿ ಅಸ್ಪಷ್ಟ. ಆದರೆ ಈ ಶ್ಲೋಕದಲ್ಲಿ ಹೇಳಿದ ’ವ್ಯಾಸಾಚಲಕವಿಃ’ ಎಂಬುದಕ್ಕೆ ’ವ್ಯಾಸ ಇವ ಅಚಲಃ ಸ್ಥಿರಶ್ಚಾಸೌ ಕವಿಶ್ರೇಷ್ಟಶ್ಚ ಇತಿ ವ್ಯಾಸಾಚಲಕವಿವರೋ ಮಾಧವೋ’ ವ್ಯಾಸನಂತೆ ಅಚಲನಾಗಿರುವ ಮಾಧವನೇ ವ್ಯಾಸಾಚಲನೆಂದು ಡಿಂಡಿಮವ್ಯಾಖ್ಯಾನಕಾರ ರಾಜಶೇಖರ ಹೇಳುತ್ತಾನೆ. ಅದೆಷ್ಟು ಸತ್ಯವೋ ಸುಳ್ಳೋ ಗೊತ್ತಿಲ್ಲ. ಮಾಧವೀಯಕ್ಕೂ ವ್ಯಾಸಾಚಲೀಯಕ್ಕೂ ಸುಮಾರು ೫೨೦ ಶ್ಲೋಕಗಳಲ್ಲಿ ಸಮಾನತೆಯಿರುವುದರಿಂದ ಡಿಂಡಿಮವ್ಯಾಖ್ಯಾನಕಾರ ಆ ನಿಷ್ಕರ್ಷೆಗೆ ಬಂದಿರಬಹುದು. ತನ್ನನ್ನು ನವಕಾಳಿದಾಸನೆಂದು ಹೇಳಿಕೊಂಡ ಮಾಧವ ತಾನು ವ್ಯಾಸನೆಂದೂ ಹೇಳಿಕೊಂಡಿರಬಹುದೆಂದು ಕಲ್ಪಿಸಬಹುದು. ಆದರೆ ಮಾಧವೀಯದಲ್ಲೊಂದುಕಡೆ
ಅತ್ಯುನ್ನತಸ್ಯ ಕಾವ್ಯರ್ದ್ರೋರ್ವ್ಯಾಸಾದ್ರಿಮುಖಜನ್ಮನಃ
ಸಮಗ್ರಾಣ್ಯರ್ಥಪುಷ್ಪಾಣಿ ಗೃಹೀತುಮಹಕ್ಷಮಃ ||
ಹ್ರಸ್ವಧೀಸೃಣಿನಾ ಯಾವದಾಯಾತ್ತಾವದದಾದದತ್ |
ಸಂಕ್ಷೇಪಶಂಕರಜಯಸ್ರಜಂ ಸಂದರ್ಭಯಾಮ್ಯಹಮ್ ||

-ವ್ಯಾಸಾದ್ರಿಯ ಮುಖದಲ್ಲಿ ಹುಟ್ಟಿದ ಕಾವ್ಯವೃಕ್ಷದ ಎಲ್ಲಾ ಅರ್ಥರೂಪವಾದ ಹೂಗಳನ್ನೂ ಎತ್ತಿಕೊಳ್ಳುವುದಕ್ಕೆ ನಾನು ಅಶಕ್ತನು. ಮೋಟಾಗಿರುವ ಬುದ್ಧಿಯೆಂಬ ದೋಣಿಯಿಂದ ಎಷ್ಟು ಸಿಕ್ಕಿತೋ ಅಷ್ಟನ್ನು ತೆಗೆದುಕೊಂಡು ಸಂಕ್ಷೇಪ ಶಂಕರವಿಜಯವೆಂಬ ಮಾಲಿಕೆಯನ್ನು ಕಟ್ಟುವೆನು.
ಆದ್ದರಿಂದ ವ್ಯಾಸಾಚಲ ಕವಿಯನ್ನು ಮಾಧವನು ಸ್ತುತಿಸಿರುವುದು ಸ್ಪಷ್ಟ. ಹಾಗಾಗಿ ಅವರಿಬ್ಬರೂ ಬೇರೆಬೇರೆಯೇ ಇರಬೇಕು. ಆತ್ಮಬೋಧರು ಗುರುರತ್ನಮಾಲಿಕೆಯಲ್ಲಿ ವ್ಯಾಸಾಚಲೀಯದ ಕೆಲ ಶ್ಲೋಕಗಳನ್ನು ಉಲ್ಲೇಖಿಸಿದ್ದರೂ ಅದು ಮದ್ರಾಸ್ ಗೌರ್ಮೆಂಟ್ ಓರಿಯಂಟಲ್ ಲೈಬ್ರರಿಯಲ್ಲಿ ಅಚ್ಚಾದ ವ್ಯಾಸಾಚಲೀಯದ ಹಸ್ತಪ್ರತಿಯಲ್ಲಿಲ್ಲ. ಹಾಗಾದರೆ ಒಂದಕ್ಕಿಂತ ಹೆಚ್ಚು ವ್ಯಾಸಾಚಲೀಯಗಳು ಚಾಲ್ತಿಯಲ್ಲಿದ್ದವೇ? ಗೋವಿಂದನಾಥನು ಬರೆದಿರುವ ಕೇರಳೀಯ ಶಂಕರವಿಜಯದಲ್ಲೂ ವ್ಯಾಸಾಚಲೀಯದ ಪರಾಮರ್ಶವಿರುವುದರಿಂದ ಅದು ಉಳಿದವುಗಳಿಗಿಂತ ಪ್ರಾಚೀನವಾಗಿರಲೇ ಬೇಕು. ಮಾತ್ರವಲ್ಲ, ವ್ಯಾಸಾಚಲೀಯದಲ್ಲೇ ವ್ಯಾಸಾಚಲ, ವ್ಯಾಸಶೈಲ, ವ್ಯಾಸಾದ್ರಿ, ವ್ಯಾಸಗಿರಿಪ್ರೋಕ್ತವಾದ ಗ್ರಂಥವಿದೆಂದು ಸುಮಾರು ಹನ್ನೆರಡು ಸರ್ಗಗಳ ಕೊನೆಯಲ್ಲಿರುವುದರಿಂದ ಇದು ಹಳೆಯ ವ್ಯಾಸಾಚಲೀಯದಿಂದ ಅದೇ ಹೆಸರಲ್ಲಿ ಇನ್ಯಾರೋ ಸಂಗ್ರಹಿಸಿದ ಗ್ರಂಥವಾಗಿರಬೇಕು. ವೆಂಕಟರಾಮನ್ನರು ಕಂಚಿಮಠದ ಆಚಾರ್ಯರೊಬ್ಬರು ವ್ಯಾಸಾಚಲದಲ್ಲಿ ವಾಸಿಸುತ್ತಿದ್ದುದರಿಂದ ಅವರಿಗೆ ಆ ಹೆಸರಿತ್ತೆಂದು ಬರೆದಿದ್ದಾರೆ. ಆದರೂ ಈ ಗ್ರಂಥದ ಕರ್ತೃವಿನ ಪರಿಚಯವಿರುವುದು ಅಷ್ಟಕ್ಕಷ್ಟೆ.
ಶಂಕರವಿಜಯಗಳ ಪರಂಪರೆಯಲ್ಲಿ ಮೂರನೇಯದು ಚಿದ್ವಿಲಾಸೀಯ ಶಂಕರವಿಜಯ(ಇದು ಮದ್ರಾಸು ವಾವಿಳ್ಳ ರಾಮಶಾಸ್ತ್ರಿಯವರಿಂದ ೧೮೭೫ರಲ್ಲಿ ಪ್ರಕಟಿತಗೊಂಡಿತ್ತು). ಇದರಲ್ಲಿ ಚಿದ್ವಿಲಾಸನೆಂಬ ಗುರು ವಿಜ್ಞಾನಕಂದನೆಂಬ ಶಿಷ್ಯನಿಗೆ ಹೇಳುವ ಕಥೆಯಿದೆ. ೨೫ನೇ ಕಂಚಿ ಪೀಠಾಧಿಪತಿಗಳೊಬ್ಬರು ಇದೇ ಹೆಸರನವರಿರುವರಾದರೂ ಈ ಶಂಕರವಿಜಯದಲ್ಲಿ ಆಚಾರ್ಯರು ಕಂಚಿಯಲ್ಲಿ ಮಠಸ್ಥಾಪಿಸಿದ ವಿವರಗಳಿಲ್ಲ. ಮೂರು ಪಾಠಗಳು ಸಂಪೂರ್ಣವಾಗಿ ಶೃಂಗೇರಿ ಮಠವನ್ನು ಹೊಗಳಲು ಮೀಸಲಾಗಿವೆ. ಒಂದು ಕಡೆ ಕಂಚಿಯಲ್ಲಿ ಸರ್ವಜ್ಞಪೀಠವಿದೆಯೆನ್ನುವ ರಚನಕಾರ ಶಂಕರರ ಕೊನೆಯ ದಿನಗಳನ್ನು ಬದರಿನಾಥದಲ್ಲಿ ಕಳೆಸಿದ್ದಾನೆ. ಕಂಚಿ ಮಠದ ವಿವರಗಳು ಇಲ್ಲವೇ ಇಲ್ಲ. ಹಾಗಾಗಿ ಇದರ ರಚಯಿತನೂ ಅಪರಿಚಿತನೇ.
ನಾಲ್ಕನೇಯದು ಕೃತಕವೆಂದು ಹೆಚ್ಚಿನ ಇತಿಹಾಸಕಾರರಿಂದ ತಿರಸ್ಕೃತವಾಗಿರುವ ಅನಂತಾನಂದಗಿರಿಯ ಪ್ರಾಚೀನ ಶಂಕರವಿಜಯ. ಇದನ್ನು ಬರೆದ ಅನಂತಾನಂದಗಿರಿ ತನ್ನನ್ನು ತಾನು ಆಚಾರ್ಯರ ಶಿಷ್ಯನೆಂದು ಹೇಳಿಕೊಂಡಿದ್ದಾನೆ. ಜೊತೆಗೆ ಮಾಧವನೂ ತನ್ನ ಗ್ರಂಥದಲ್ಲಿ ’ಶಾಙ್ಕರಸ್ಯ ಭಗವತೋ ಭಾಷ್ಯಕಾರಸ್ಯಾಯಂ ಶಾಙ್ಕರಃ ಆನಂದಗಿರ್ಯಭಿದಃ | ತಸ್ಯ ತತ್ಪ್ರಿಯ ಶಿಷ್ಯಸ್ಯ ವಾಕ್ಯಸಾರಃ’ - ಶಾಂಕರನೆಂದರೆ ಭಗವದ್ಭಾಷ್ಯಕಾರರ ಪ್ರಿಯಶಿಷ್ಯ ಆನಂದಗಿರಿಯೇ, ಹೇಗೆ ಸಣ್ಣ ಕನ್ನಡಿಯಲ್ಲಿ ವಿಸ್ತಾರವಾದ ಜಗತ್ತನ್ನು ಕಾಣಬಹುದೋ ಹಾಗೇ ಆತನ ವಾಕ್ಯದ ಸಾರವನ್ನು ತನ್ನ ಲಘುಸಂಗ್ರಹದಲ್ಲಿ ನೋಡಬಹುದು ಎಂದು ವ್ಯಾಖ್ಯಾನಿಸುತ್ತಾನೆ. ಮಾಧವನು ತನ್ನ ಕೃತಿಯನ್ನು ಲಘುಸಂಗ್ರಹವೆಂದು ಕರೆದಿರುವಾಗ ಪ್ರಾಚೀನಶಂಕರವಿಜಯ ವಿಸ್ತಾರವಾಗಿತ್ತೆಂದು ಊಹಿಸಬಹುದು. ಅದಕ್ಕೆ ವ್ಯಾಖ್ಯಾನವನ್ನು ಬರೆದಿರುವ ಅಚ್ಯುತರಾಯನು ತನ್ನ ’ಅದ್ವೈತರಾಜ್ಯಲಕ್ಷ್ಮಿ’ ಟೀಕೆಯಲ್ಲಿ ’ಬೃಹಚ್ಛಂಕರವಿಜಯ ಏವ ಆನಂದಗಿರಿವಿರಚಿತೇ’ - ಆನಂದಗಿರಿಗಳಿಂದ ವಿರಚಿತವಾದ ಬೃಹಚ್ಛಂಕರದಲ್ಲಿ ಎಂದು ಬರೆದಿರುವುದನ್ನು ನೋಡಿದರೆ ಮಾಧವೀಯವೇತ್ಯಾದಿಗಳಿಗಿಂತ ಆನಂದಗಿರೀಯವು ದೊಡ್ಡದೆಂದು ತಿಳಿಯುತ್ತದೆ. ಹಾಗಿದ್ದರೂ ಈ ಆನಂದಗಿರೀಯವನ್ನು ಕೃತಕವೆಂದು ಇತಿಹಾಸಕಾರರು ತಿರಸ್ಕರಿಸಿರಲು ಒಂದು ಕಾರಣವಿದೆ. ಅನಂತಾನಂದಗಿರೀಯವೆಂಬ ಇನ್ನೊಂದು ಶಂಕರವಿಜಯವಿದೆ. ಮಾಧವೀಯದ ವ್ಯಾಖ್ಯಾನಕಾರ ಧನಪತಿಸೂರಿಯು ತನ್ನ ವ್ಯಾಖ್ಯಾನದಲ್ಲಿ ಬಹಳಷ್ಟು ಕಡೆ ಅನಂತಾನಂದಗಿರೀಯದ ಶ್ಲೋಕಗಳನ್ನು ಉದ್ಧರಿಸಿದ್ದಾನೆ. ಆ ಶ್ಲೋಕಗಳಲ್ಲಿ ಕೆಲವು ಆನಂದಗಿರೀಯದಲ್ಲೂ ಇವೆ. ಆದರೆ ಧನಪತಿಸೂರಿ ಉದಾಹರಿಸಿರುವ ಸುಮಾರು ೬೦೦ ಶ್ಲೋಕಗಳು ಈಗಿನ ಆನಂದಗಿರೀಯದಲ್ಲಿ ಇಲ್ಲವೇ ಇಲ್ಲ. ಹಾಗಾಗಿ ಆನಂದಗಿರೀಯವನ್ನು ಹೊರತುಪಡಿಸಿದ ಅನಂತಾನಂದಗಿರೀಯವೆಂಬ ಕೃತಿ ಇದ್ದಿರಬೇಕು. ಆನಂದಗಿರಿಯು ಶಂಕರರ ಸಮಕಾಲೀನನೆಂಬುದಕ್ಕಾಗಲೀ, ಶಿಷ್ಯನೆಂಬುದಕ್ಕಾಗಲೀ ಐತಿಹಾಸಿಕ ಪ್ರಮಾಣವಿಲ್ಲವಾದರೂ ಅನಂತಾನಂದಗಿರಿ ಎಂಬ ಶಂಕರರ ಶಿಷ್ಯನನ್ನು ಮಾಧವ ಮತ್ತವನ ವ್ಯಾಖ್ಯಾನಕಾರರು ಮತ್ತೆ ಮತ್ತೆ ಉಲ್ಲೇಖಿಸಿರುವುದರಿಂದ ಅದೇ ತನ್ನ ಹೆಸರೆಂದು ತೋರಿಸಿಕೊಳ್ಳಲು ಈ ಕೃತ್ರಿಮ ಗ್ರಂಥಕರ್ತ ಪ್ರಯತ್ನಿಸಿರಬಹುದು. ಮೂಲ ಆನಂದಗಿರೀಯವು ಕಾಣೆಯಾಗಿರುವುದರಿಂದ ಅದೇ ಹೆಸರಿನ ಇನ್ನೊಂದು ಹೊತ್ತಿಗೆಯನ್ನು ಬರೆದಿರಬಹುದು. ಅದಕ್ಕೇ ಪ್ರಾಚೀನಶಂಕರವಿಜಯವೆಂದು ಹೆಸರಿಸಿರಬಹುದು. ಇದೇ ಕೃತಿ ಅತಿ ಹಳೆತದೆಂದುಕೊಂಡರೂ ಯಾರೂ ತನ್ನ ಗ್ರಂಥವನ್ನು ’ಪ್ರಾಚೀನ’ವೆಂದು ಕರೆದುಕೊಳ್ಳುವುದಿಲ್ಲವಲ್ಲ. ವಾಲ್ಮೀಕಿ ತನ್ನ ರಾಮಾಯಣವನ್ನು ಪ್ರಾಚೀನರಾಮಾಯಣ ಎಂದು ಕರೆದುಕೊಂಡಂತಾಯ್ತು.
ಚಿತ್ಸುಖಾಚಾರ್ಯರ ಬೃಹತ್ ಶಂಕರವಿಜಯವೆಂಬ ಒಂದು ಶಂಕರವಿಜಯವಿದೆಯೆಂಬ ಪ್ರತೀತಿ ಇದೆಯಾದರೂ ಅದನ್ನು ಸ್ವತಃ ಕಂಡವರು ಯಾರೂ ಇಲ್ಲ. ಚಿತ್ಸುಖರು ಶಂಕರರ ಸಹಪಾಠಿಗಳಾಗಿದ್ದರೆಂದೂ, ಶಂಕರರ ಜೀವನವನ್ನು ಕಣ್ಣಾರೆ ಕಂಡು ಶಂಕರವಿಜಯದಲ್ಲಿ ದಾಖಲಿಸಿದ್ದಾರೆಂದೂ, ಅವರ ಗ್ರಂಥವೇ ಅತ್ಯಂತ ಪ್ರಾಚೀನ ಮತ್ತು ದೊಡ್ಡದೆಂಬ ಪುಂಖಾನುಪುಂಖ ವಾದಗಳಿದ್ದರೂ ಯಾವೊಂದು ಶಂಕರವಿಜಯವೂ ಚಿತ್ಸುಖರೆಂಬ ಶಂಕರರ ಸಹಪಾಠಿಯನ್ನು ಹೆಸರಿಸುವುದಿಲ್ಲ ಅಥವಾ ಶಂಕರರ ಕಾಲದಲ್ಲೇ ಚಿತ್ಸುಖರ ಇರುವಿಕೆಯ  ಬಗ್ಗೆ ಐತಿಹಾಸಿಕ ಸಾಕ್ಷಿಗಳೂ ಇಲ್ಲ. ಅನಂತಾನಂದಗಿರೀಯದ ಹಳೆಯ ಕಲ್ಕತ್ತಾ ಹಸ್ತಪ್ರತಿಯಲ್ಲಿ ಶಂಕರರು ಚಿದಂಬರಂನಲ್ಲಿ ಹುಟ್ಟಿದ್ದೆಂದಿದ್ದರೆ, ಅದೇ ಗ್ರಂಥದ ಮದ್ರಾಸ್ ಪ್ರತಿಯಲ್ಲಿ ಜನ್ಮಸ್ಥಳ ಕಾಲಡಿಯೆಂದಿದೆ. ಕಲ್ಕತ್ತಾದ ಪ್ರತಿಯ ಪ್ರಕಾರ ಶಂಕರರು ಮಠಸ್ಥಾಪನೆ ಮಾಡಿದ್ದು ಶೃಂಗೇರಿಯಲ್ಲಾದರೆ, ಇದಾದ ಕೆಲ ಕಾಲದ ನಂತರ ಅಚ್ಚಾದ ಮದ್ರಾಸ್ ಪ್ರತಿಯಲ್ಲಿ ಮಠಸ್ಥಾಪನೆಯಾದ್ದು ಕಂಚಿಯಲ್ಲಿ.!
ಇವು ನಾಲ್ಕು ಶಂಕರವಿಜಯಗಳಲ್ಲದೇ ಕಂಚೀಪೀಠದ ಸಂಪ್ರದಾಯಕ್ಕನುಗುಣವಾಗಿ ಸರ್ವಜ್ಞಸದಾಶಿವಬೋಧರ ’ಪುಣ್ಯಶ್ಲೋಕಮಂಜರಿ’, ಸದಾಶಿವಬ್ರಹ್ಮೇಂದ್ರರ ’ಗುರುರತ್ನಮಾಲಿಕಾ’ ಮತ್ತು ಅದರ ಮೇಲೆ ಆತ್ಮಬೋಧರು ಬರೆದಿರುವ ’ಸುಷುಮಾ’ ವ್ಯಾಖ್ಯಾನ ಎಂಬು ಮೂರು ಗ್ರಂಥಗಳು ಬಹುಮಟ್ಟಿಗೆ ಪ್ರಾಮಾಣಿಕವೆಂದು ಎಣಿಸುತ್ತಾರೆ. ಆತ್ಮಬೋಧರು ಮಾಧವನಿಗಿಂತ ಈಚಿನವರಾದರೂ ಹಲ ಪ್ರಾಚೀನ ಗ್ರಂಥಗಳನ್ನು ತಮ್ಮ ಸುಷುಮಾವ್ಯಾಖ್ಯಾನದಲ್ಲಿ ಉದಾಹರಿಸಿದ್ದಾರೆ. ಜೊತೆಗೆ ಪ್ರಸ್ತುತ ಲಭ್ಯವಿಲ್ಲದ ಬೃಹಚ್ಛಂಕರವಿಜಯ, ಕೇರಳೀಯ ಶಂಕರವಿಜಯವೇತ್ಯಾದಿ ಗ್ರಂಥಗಳ ಶ್ಲೋಕಗಳೂ ಅದರಲ್ಲುದಾಹರಿತವಾಗಿವೆ.
ಕೇರಳೀಯಶಂಕರವಿಜಯವೆಂದು ಕೇರಳದಲ್ಲಿ ಹೆಸರಾದ ಗೋವಿಂದನಾಥಕೃತ ಶಂಕರಾಚಾರ್ಯಚರಿತ್ರೆಯೆಂಬ ಒಂದು ಗ್ರಂಥವಿದೆ. ಒಂದೇ ಸರ್ಗದಲ್ಲಿ ಸರ್ವಜ್ಞಪೀಠವನ್ನು ಕಾಶ್ಮೀರದಲ್ಲಿಯೂ ಕಾಂಚಿಯಲ್ಲಿಯೂ ಇತ್ತೆಂದು ಬರೆಯಲ್ಪಟ್ಟಿರುವ ಇದೂ ಕೂಡ ಹೆಚ್ಚಿನ ಇತಿಹಾಸಕಾರರಿಂದ ತಿರಸ್ಕರಿಸಲ್ಪಟ್ಟುದೇ. ಕೇರಳೀಯದ ಪ್ರಕಾರ ಶಂಕರರ ಸಮಾಧಿಯಿರುವುದು ಯಾವ ಶಂಕರವಿಜಯಗಳಲ್ಲಿಯೂ ಉಲ್ಲೇಖಿತವಾಗದ ತ್ರಿಚೂರಿನಲ್ಲಿ. ಮತ್ತು ಇದರಲ್ಲಿ ಶಂಕರರಿಂದ ಸ್ಥಾಪಿತ ಯಾವ ಮಠಗಳ ಉಲ್ಲೇಖವೂ ಇಲ್ಲ. ಪ್ರಾಯಶಃ ಇದು ಕೇರಳೀಯ ಆಚಾರಪದ್ಧತಿಗನುಗುಣವಾಗಿ ಶಂಕರರನ್ನು ಹೊಗಳಲು ರಚಿತಗೊಂಡ ಪುಸ್ತಕವಿರಬೇಕು.
ಮೇಲಿನ ಶಂಕರವಿಜಯಗಳಲ್ಲದೇ ಕೆಲವು ಪುರಾಣಗಳಲ್ಲೂ ಶಂಕರರ ಬಗೆಗಿನ ವಿವರಗಳಿವೆ. ಲಿಂಗಪುರಾಣ, ಕೂರ್ಮಪುರಾಣ, ವಾಯುಪುರಾಣ, ಭವಿಷ್ಯೋತ್ತರ, ಮಾರ್ಕಂಡೇಯ, ಸೌರಪುರಾಣ ಮತ್ತು ಶಿವರಹಸ್ಯಗಳಲ್ಲಿ ಆಚಾರ್ಯರ ವಿಷಯವನ್ನು ಪರಾಮರ್ಶಿಸಿರುವ ಭಾಗಗಳಿವೆ. ಸಾಧಾರಣವಾಗಿ ಪುರಾಣಗಳಲ್ಲಿ ಕಲಿಯುಗದಲ್ಲಿ ಹೀಗೆಲ್ಲ ನಡೆಯುವುದೆಂಬುದನ್ನು ದೇವತೆಗಳೋ ಅಥವಾ ಋಷಿಗಳೋ ಹೇಳಿದಂತೆ ಬರೆಯುವುದು ರೂಢಿ. ಪುರಾಣಗಳ ಐತಿಹಾಸಕಾಂಶಗಳೂ ಕಥಾನಕಗಳೂ ಬಹುಮುಖ್ಯವಾದರೂ ಆಯಾ ಮತದ ಅಭಿಮಾನಿಗಳು ತಮಗೆ ಬೇಕಾದವರನ್ನು ಹೊಗಳಲೋ, ಬೇಡದವರನ್ನು ತೆಗಳಲೋ ದೇವತಾವಾಕ್ಯಗಳು, ಋಷಿವಾಕ್ಯಗಳು ಎಂಬ ಭಾವಬರುವಂತೆ ತೋರಿಸಲು ಬೇರೆ ಬೇರೆ ಅತಿರಂಜಿತ ಕಥೆಗಳನ್ನು ರಚಿಸಿರುವುದರಿಂದ ಆಧುನಿಕ ವಿಮರ್ಶಕರು ಪುರಾಣಗಳಲ್ಲಿ ಶ್ರದ್ಧೆಯನ್ನು ಕಳೆದುಕೊಳ್ಳುವಂತಾಗಿದೆ. ಇದೇ ಕಾರಣಕ್ಕೇ ಏನೋ ಪುರಾಣಗಳು ಇಂತಿಷ್ಟೇ ಪ್ರಮಾಣವೆಂದು ಅಥವಾ ಪ್ರಕ್ಷಿಪ್ತವೆಂದು ನಿರ್ಣಯಿಸುವುದು ಕಷ್ಟಸಾಧ್ಯ. ಲೋಕಕಲ್ಯಾಣಕ್ಕಾಗಿ ಶಿವನು ಶಂಕರರಾಗಿ ಹುಟ್ಟುವೆನೆಂದು ಶಿವಪರ ಪುರಾಣಗಳಲ್ಲಿ ಹೇಳಿಕೊಂಡಿರುವಾಗ, ಅದೇ ಶಿವನು ಕಲಿಯುಗದಲ್ಲಿ ಜಗತ್ತನ್ನು ಕೆಡಿಸುವ ಕಾರಣದಿಂದ ಮಾಯಾವಾದವೆಂಬ ಅವೈದಿಕವಾದವನ್ನು ರಚಿಸುವೆನೆಂದು ಹೇಳಿಕೊಂಡಂತೆ ಅರ್ಥವಿರುವ ಪದ್ಮಪುರಾಣಗಳೂ ಇವೆ. ಆಚಾರ್ಯರನ್ನು ಹೊಗಳಿ ಬರೆದವರಿರುವಂತೆ ಅವರನ್ನು ತೆಗಳಿ ಬರೆದವರಿಗೇನೂ ಕಡಿಮೆಯಿಲ್ಲ. ಕೂಷ್ಮಾಂಡಶಂಕರವಿಜಯಗಳಂಥ ಕೆಲಸಕ್ಕೆ ಬಾರದ ಕುಗ್ರಂಥಗಳೂ ಉಂಟು. ಮತದ್ವೇಷವೂ ಅನ್ಯಮತನಿಂದೆಯೂ ಹೆಮ್ಮೆಗೆ ಕಾರಣವೆಂದು ಭಾವಿಸಿದ್ದ ಕಾಲದಲ್ಲಿ ಇಂಥ ಗ್ರಂಥಗಳೂ ಅವುಗಳಿಗೆ ಪ್ರತ್ಯುತ್ತರವಾಗಿ ಇನ್ನೊಂದಿಷ್ಟು ಗ್ರಂಥಗಳೂ ಬೇಕಾದಷ್ಟು ಕಾಣಸಿಗುತ್ತವೆ.(ಪಂಡಿತ ಜ್ವಾಲಾಪ್ರಸಾದ ಮಿಶ್ರ ಎಂಬವರು ಬರೆದ ಅಷ್ಟಾದಶ ಪುರಾಣದರ್ಪಣದಲ್ಲಿ ಇಂಥ ಭಿನ್ನಮತಗಳ ಶ್ಲೋಕಗಳನ್ನು ಸಂಖ್ಯಾಪ್ರಮಾಣದೊಂದಿಗೆ ಕೊಟ್ಟಿದ್ದಾರಂತೆ). ಮಣಿಮಂಜರಿ ಮತ್ತು ಅದಕ್ಕೆ ವಿರುದ್ಧವಾಗಿ ಬಂದ ಮಣಿಮಂಜರಿಬೇಧಿನಿ ಆ ಜಾತಿಗೆ ಸೇರುವವು. ಇರುವ ಶಂಕರವಿಜಯಗಳಲ್ಲಿ ಪ್ರಸಿದ್ಧವೂ, ಜನಮಾನಸದಲ್ಲಿ ಅನುರಾಗಪ್ರಾಪ್ತವೂ ಆಗಿರುವ ಮಾಧವೀಯವನ್ನೇ ಆಚಾರ್ಯರ ಚರಿತ್ರೆಗಾಗಿ ಹೆಚ್ಚಿನೆಲ್ಲ ವಿದ್ವಾಂಸರು, ಇತಿಹಾಸಕಾರರು ಹಾಗೂ ಲೇಖಕರು ಬಹಳಮಟ್ಟಿಗೆ ಆಧರಿಸಿರುವುದರಿಂದ ಮತ್ತು ಈಗ ಇರುವ ಶಂಕರರ ಕುರಿತಾದ ಕಥೆಗಳಿಗೆಲ್ಲ ಅದೇ ಬಹ್ವಂಶ ಮೂಲವಾಗಿರುವುದರಿಂದ ಮಾಧವೀಯವನ್ನೇ ಪ್ರಾಮಾಣ್ಯವೆಂದು ಗ್ರಹಿಸಬೇಕಾಗಿದೆ. ಅವೇ ಶಂಕರವಿಜಯಗಳ ಹಿನ್ನೆಲೆಯಲ್ಲಿ ಭಗವತ್ಪಾದರ ಜನ್ಮ ಮತ್ತು ಕಾಲದ ಕುರಿತಾದ ವಿವರಗಳನ್ನು ಮುಂದಿನ ಲೇಖನದಲ್ಲಿ ನೋಡೋಣ.

(ಹೆಚ್ಚಿನ ಮಾಹಿತಿಗಾಗಿ ಗಮನಿಸಿ: ಬೆಳ್ಳಾವೆ ಸೀತಾರಾಮಯ್ಯನವರ ಶಂಕರಚರಿತ್ರ ಕಾಲವಿಚಾರ ಮತ್ತು ಸಚ್ಚಿದಾನೇಂದ್ರಸರಸ್ವತಿಯವರ ಶಂಕರಭಗವತ್ಪಾದಸಾರಸರ್ವಸ್ವಮ್)

Wednesday, December 9, 2015

ಟಿಪ್ಪುವಿನ ಮಲತಮ್ಮ, ಮಂಜೇರಿ ದಂಗೆ ಮತ್ತು ತ್ರಾವೆಂಕೂರ ಮಹಾಗೋಡೆ

       ಕಥೆ ಶುರುವಾಗೋದು ಸನ್ ೧೭೬೬ರಲ್ಲಿ. ಹೈದರ್ ಅಲಿಯ ಕಣ್ಣು ಬಹುಕಾಲದಿಂದ ಮಲಬಾರಿನ ಮೇಲೆ ನೆಟ್ಟಿತ್ತು. ಮುಸ್ಲಿಂ ರಾಜರ ಕಣ್ಣುಬಿದ್ದ ಮೇಲೆ ಹೇಳಬೇಕೇ ಮುಂದಿನ ಕತೆ? ದಾಳಿ ಮುಗಿಸಿ ವಾಪಸ್ ಬರುವಾಗ ಒಂದಿಷ್ಟು ಜನರನ್ನು ಬಂಧಿಸಿ ಯುದ್ಧಕೈದಿಗಳಾಗಿ, ಇನ್ನೊಂದಿಷ್ಟು ಗಂಡುಮಕ್ಕಳನ್ನು ಗುಲಾಮರಾಗಿ, ಮತ್ತೊಂದಿಷ್ಟು ಹೆಣ್ಣುಮಕ್ಕಳನ್ನು ಜನಾನಾಕ್ಕೆ ಸೇರಿಸಲು ಕರೆತಂದ. ಹಾಗೆ ಹಿಡಿದು ತಂದವರಲ್ಲಿ ಪರಪ್ಪನಾಡಿನ ರಾಜಮನೆತನವೂ ಸೇರಿತ್ತು. ಅವರ ಜೊತೆಗಿದ್ದವ ಕಣ್ಣೂರಿನ ಚಿರಕ್ಕಲ್ ಅರಸು ಮನೆತನಕ್ಕೆ ಸೇರಿದ ೧೦ ವರ್ಷದ ಚಿರಕ್ಕಲ್ ಕುಮಾರನ್ ನಂಬಿಯಾರ್. ಸುಂದರ, ಬುದ್ದಿವಂತ, ಚೂಟಿ ಬಾಲಕನತ್ತ ಹೈದರನ ದೃಷ್ಟಿ ಹರಿಯಲು ತಡವಾಗಲಿಲ್ಲ. ತನ್ನ ಖಾಸಾ ಬಳಗಕ್ಕೆ ಸೇರಿಸಿದವನೇ ಕುಮಾರನ್ ನಂಬಿಯಾರನನ್ನು ಇಸ್ಲಾಮಿಗೆ ಮತಾಂತರಿಸಿ ಮುಹಮ್ಮದ್ ಆಯಾಝ್ ಖಾನ್ ಎಂದು ಹೆಸರಿಟ್ಟ. ಟಿಪ್ಪೂ ಮತ್ತು ಕುಮಾರನ್ ಛೇ, ಅಲ್ಲಲ್ಲ... ಆಯಾಝ್ ಖಾನ್ ಇಬ್ಬರೂ ಒಂದೇ ವಯಸ್ಸಿನವರು. ದಡ್ಡ ಶಿಖಾಮಣಿ ಟಿಪ್ಪುವಿಗಿಂತ ಕುಶಾಗ್ರಮತಿ ಆಯಾಝ್ ಹೈದರನ ಅಚ್ಚುಮೆಚ್ಚಿನ ಬಂಟನಾಗಿ, ದತ್ತುಮಗನಾಗಿ ಬೆಳೆದ. ಮಾತ್ರವಲ್ಲ ಹೈದರನ ಕಷ್ಟಕಾಲದಲ್ಲೆಲ್ಲ ಬಲಗೈಯಾಗಿ ನಿಂತು ಕಾಪಾಡಿದವನು ಅವನೇ. ಒಮ್ಮೆ ಬ್ರಿಟಿಷ್ ಅಧಿಕಾರಿಗೆ ಟಿಪ್ಪು ಸಾರ್ವಜನಿಕವಾಗಿ ಸುನ್ನತ್ ಮಾಡಿಸಿ ಇಸ್ಲಾಮಿಗೆ ಮತಾಂತರಿಸುತ್ತಾನೆ. ಮೊದಲೇ ಟಿಪ್ಪುವಿನ ಹುಚ್ಚಾಟಗಳಿಂದ ರೋಸಿಹೋಗಿದ್ದ ಹೈದರ್ ಈ ಘಟನೆಯ ನಂತರವಂತೂ ಟಿಪ್ಪುವನ್ನು ದೂರವಿಡಲು ಪ್ರಾರಂಭಿಸಿದ. ಜೊತೆಗೆ ಟಿಪ್ಪುವಿಗೆ ಬಲವಂತದ ರಜೆ ಕೊಟ್ಟು ರಾಜಧಾನಿಯಿಂದ ಹೊರಗಿಟ್ಟ. ಹೈದರನಿಗೆ ಆಯಾಝನ ಮೇಲೆ ಪ್ರೀತಿ ಎಷ್ಟಿತ್ತೆಂದರೆ ’ನೀನೊಬ್ಬನಿಲ್ಲದಿದ್ದರೆ ಈ ರಾಜ್ಯಕ್ಕೆ ಆಯಾಝನನ್ನು ವಾರಸುದಾರನನ್ನಾಗಿಸುತ್ತಿದ್ದೆ’ ಎಂದು ಟಿಪ್ಪುವಿಗೆ ಆತ ಬಹಿರಂಗವಾಗಿಯೇ ಎಚ್ಚರಿಕೆ ಕೊಡುತ್ತಾನೆ. ಹಿಸ್ಟೋರಿಕಲ್ ಸ್ಕೆಚಸ್ ಆಫ್ ಇಂಡಿಯಾ - ಮಾರ್ಕ್ಸ್ ವಿಲ್ಕ್ಸ್, ಲೋಗನ್ನಿನ ಮಲಬಾರ್ ಮ್ಯಾನುಯೆಲ್‌ಗಳಲ್ಲಿ ಈ ಬಗ್ಗೆ ಅಧಿಕೃತ ದಾಖಲೆಗಳಿವೆ. ಒಳಗೊಳಗೇ ಆಯಾಝನನ್ನು ಕಂಡರೆ ಅಸಮಾಧಾನದಿಂದ ಕುದಿಯುತ್ತಿದ್ದ ಟಿಪ್ಪುವಿನ ಸಿಟ್ಟು ಇದರ ನಂತರವಂತೂ ದಾಯಾದಿ ದ್ವೇಷಕ್ಕೆ ತಿರುಗಿತು. ಮುಂದೆ ಹೈದರ್ ಆಯಾಝನನ್ನು ತಾನು ಹೊಸದಾಗಿ ಗೆದ್ದಿದ್ದ ಬಿದನೂರಿನ ನವಾಬನನ್ನಾಗಿ ನೇಮಿಸುತ್ತಾನೆ. ಶಿವಮೊಗ್ಗ ಜಿಲ್ಲೆಯ ಮಲೆನಾಡ ತಪ್ಪಲಿನ ಬಿದನೂರನ್ನು ಹೈದರ್ ಗೆದ್ದು ಹೈದರ್ ನಗರ್ ಎಂದು ಮರುನಾಮಕರಣ ಮಾಡಿದ್ದ. ಹಿಂದೊಮ್ಮೆ ಚಿತ್ರದುರ್ಗದ ಗವರ್ನರ್ ಪದವಿಯನ್ನು ತಿರಸ್ಕರಿಸಿದ್ದ ಆಯಾಝ್‌ನಿಗೆ ಬಿದನೂರು ತನ್ನ ತವರು ಚಿರಕ್ಕಲ್ಲಿನ ನೆನಪು ತಂದುಕೊಟ್ಟಿತಂತೆ. ಬಿದನೂರಿನಲ್ಲೇ ಆಯಾಝ್ ವಾಸ ಹೂಡಿದ. ಬ್ರಿಟಿಷ್ ಪ್ರವಾಸಿ ಕಮ್ ಅಧಿಕಾರಿ ಜೊತೆಗೆ ಕೆಲ ಕಾಲ ಹೈದರನ ಯುದ್ಧಕೈದಿಯೂ ಆಗಿದ್ದ ಡೋನಾಲ್ಡ್ ಕ್ಯಾಂಪ್‌ಬೆಲ್ ಆಯಾಝನ ಜೊತೆಗಿದ್ದು ಅವನ ಜೀವನದ ದಾಖಲೆಗಳನ್ನೆಲ್ಲ ತನ್ನ  ‘A narrative of the extraordinary adventure’ ಮತ್ತು ’The Life and Adventures of Donald Cambell' ಗ್ರಂಥಗಳಲ್ಲಿ ದಾಖಲಿಸಿದ್ದಾನೆ. ನಂತರ ಕ್ಯಾಂಪ್‌ಬೆಲ್ ಕಣ್ಣೂರಿನ ಚಿರಕ್ಕಲಿಗೆ ತೆರಳಿದ. ಹಿಂದಿರುಗಿ ಬರುವಾಗ ಕ್ಯಾಂಪ್‌ಬೆಲ್ಲನಿಗೆ ಹೈದರ ಸತ್ತ ಸುದ್ದಿ ಸಿಕ್ಕಿತು. ರಾಜ್ಯ ಕೈಜಾರಬಹುದೆಂಬ ಹೆದರಿಕೆಯಿಂದ ಹೈದರನ ಆಪ್ತವಲಯ ಹೊರಜಗತ್ತಿಗೆ ವಿಷಯ ತಿಳಿಸದೇ ಅವನ ಸಾವನ್ನು ಗುಟ್ಟಾಗಿಟ್ಟಿತು. ಒಂದೆಡೆ ಮೈಸೂರು ಒಡೆಯರು, ಇನ್ನೊಂದೆಡೆ ಬ್ರಿಟಿಷರ ಭಯದ ಟಿಪ್ಪುವಿಗೆ ಮಾತ್ರ ಸಂದೇಶ ಹೋಯಿತು. ಚಿತ್ತೂರನಲ್ಲಿ ಯುದ್ಧಕ್ಕೆ ಹೊರಟಿದ್ದ ಟಿಪ್ಪು ಸಿಂಹಾಸನ ತಪ್ಪಿದರೆ ಎಂಬ ಹೆದರಿಕೆಯಿಂದ ಓಡೋಡಿ ಬಂದು ಕುರ್ಚಿ ಹತ್ತಿ ಕೂತ. ಸರ್ ಅಯರ್ ಕೂಟ್ ನಿವೃತ್ತನಾಗಿ ಹೊಸ ಎಳೆನಿಂಬೆಕಾಯಿ ಬ್ರಿಟಿಷ್ ಅಧಿಕಾರಿ ಬಂದಿದ್ದರಿಂದ ಸಂದರ್ಭವನ್ನುಪಯೋಗಿಸಿಕೊಳ್ಳುವ ಅವಕಾಶ ಬ್ರಿಟಿಷರಿಗೂ ತಪ್ಪಿಹೋಯ್ತು. ಸಿಂಹಾಸನಕ್ಕೇರಿದ ಟಿಪ್ಪು ಮಾಡಿದ ಮೊದಲ ಕೆಲಸವೇ ಆಯಾಜನನ್ನು ಕೊಲ್ಲಲು ಆದೇಶಿಸಿದ್ದು. ಅದರೆ ಹೇಳಿ ಕೇಳಿ ಆಯಾಜ್ ಟಿಪ್ಪೂವಿಗಿಂತ ಬುದ್ಧಿವಂತ. ಇಂಥದ್ದನ್ನೆಲ್ಲ ಮೊದಲೇ ಊಹಿಸಿದ್ದ. ಟಿಪ್ಪುವಿನ ಪಡೆ ಬಿದನೂರು ತಲುಪುವುದರೊಳಗೆ ಬ್ರಿಟಿಷರ ಕ್ಯಾಪ್ಟನ್ ಮ್ಯಾಥ್ಯೂವಿನ ಜೊತೆ ಒಪ್ಪಂದ ಮಾಡಿಕೊಂಡು ಅರಮನೆಯಲ್ಲಿದ್ದ ಸಂಪತ್ತನ್ನೆಲ್ಲ ಬಾಚಿಕೊಂಡು ಬಾಂಬೆಗೆ ಪರಾರಿಯಾದ. ಬಿದನೂರಿನ ಪ್ರದೇಶ ಬ್ರಿಟಿಷರ ಕೈಸೇರಿತು. ಅಲ್ಲಿ ಬ್ರಿಟಿಷರಿಗೆ ಸಿಕ್ಕ ಹಣವೇ ೧೨ ಮಿಲಿಯನ್ ಸ್ಟೆರ್ಲಿಂಗುಗಳಷ್ಟಿತ್ತು. ವಿಷಯ ತಿಳಿದ ಟಿಪ್ಪು ಕೈಕೈ ಹಿಸುಕಿಕೊಂಡ. ಒಂದು ಕಡೆ ಪರಮ ಶತ್ರು ತಪ್ಪಿಸಿಕೊಂಡಿದ್ದರೆ ಇನ್ನೊಂದು ಕಡೆ ಬಿದನೂರಿನಂಥ ಶ್ರೀಮಂತ ಸಂಸ್ಥಾನ ಕೈತಪ್ಪಿತ್ತು. ಮಲಬಾರಿನ ಮಲಯಾಳಿ ಸೇವಕನ ವಿಶ್ವಾಸಘಾತತನ ಟಿಪ್ಪುವಿನ ಹೊಟ್ಟೆಯುರಿ ಹೆಚ್ಚಿಸಿತ್ತು. ಆತನನ್ನು ಹಿಡಿಯೋಣವೆಂದರೆ ಅವನ ಬೆನ್ನಿಗೆ ಬ್ರಿಟಿಷರು ನಿಂತಿದ್ದರು. ಆಯಾಝನನ್ನು ಹಿಡಿದುಕೊಟ್ಟರೆ ಭಾರೀ ಮೊತ್ತದ ಹಣ ಕೊಡುವುದಾಗಿ ಬ್ರಿಟಿಷರ ಜೊತೆಗೆ ಟಿಪ್ಪು ವ್ಯವಹಾರಕ್ಕಿಳಿದ. ಇವನ ನರಿ ಬುದ್ಧಿ ತಿಳಿದಿದ್ದ ಈಸ್ಟ್ ಇಂಡಿಯಾ ಕಂಪನಿ ಅದಕ್ಕೆಲ್ಲ ಸೊಪ್ಪು ಹಾಕಲಿಲ್ಲ. ಆಯಾಜನ ಒಡೆತನದಲ್ಲಿದ್ದ ಬಿದನೂರಿನಂಥ ಶ್ರೀಮಂತ ಸಂಸ್ಥಾನ, ಆತ ಬಿಟ್ಟುಹೋಗಿದ್ದ ಅಪಾರ ಸಂಪತ್ತುಗಳನ್ನು ಟಿಪ್ಪೂವಿನ ಮೂರುಕಾಸಿನಾಸೆಗೆ ಕಳೆದುಕೊಳ್ಳರು ಕಂಪನಿ ಸಿದ್ಧವಿರಲಿಲ್ಲ. ನಂಬಿಕೆ ದ್ರೋಹಿ ಆಯಾಝನ ಮೇಲಿನ ಟಿಪ್ಪುವಿನ ಸಿಟ್ಟು ಮಲಬಾರು ಮತ್ತು ಬಿದನೂರುಗಳ ವಿರುದ್ಧ ದ್ವೇಷಕ್ಕೆ ತಿರುಗುವಂತೆ ಮಾಡಿತು. ಮುಂದಿನದು ಗೊತ್ತಿರುವ ಕಥೆಯೇ.

      ಮುಂದೆ ಆಯಾಝ್ ಒಂದಿಲ್ಲೊಂದು ದಿನ ಬಿದನೂರನ್ನು ತಿರುಗಿ ಪಡೆವ ಆಸೆ ಹೊತ್ತು ಬಾಂಬೆಯಲ್ಲೇ ಬದುಕಿದ್ದ. ಜೊತೆಗೆ ಬ್ರಿಟಿಷರಿಂದ ತಿಂಗಳಿಗೆ ನಾಲ್ಕು ಸಾವಿರ ರಾಜಧನವೂ ಸಿಗುತ್ತಿತ್ತು. ದುರದೃಷ್ಟವಶಾತ್ ಟಿಪ್ಪು ಸತ್ತ ವರ್ಷವಾದ ೧೭೯೯ರಲ್ಲೇ ಆಯಾಝನೂ ಮೃತಪಟ್ಟಿದ್ದು. ತಿಪ್ಪೆ ಟಿಪ್ಪುವಾದಂತೆ ಆಯಾಝನ ಹೆಸರು ಬ್ರಿಟಿಷ್ ದಾಖಲೆಗಳಲ್ಲಿ ಅಪಭೃಂಶವಾಗಿ ಹಯಾತ್ ಎಂದಾಗಿದೆ. ಕಳೆದ ಟಿಪ್ಪುವಿನ ಲೇಖನದಲ್ಲಿ ಉಲ್ಲೇಖಿಸಿದ ’ಕಳತ್ತನಾಡಿನ ನೊಂಬರಂಗಳ್’ ಸೇರಿ ಕೆಲ ದಾಖಲೆಗಳಲ್ಲಿ ಇವನ ಮೂಲ ಹೆಸರು ಕಮ್ಮಾರನ್ ನಂಬಿಯಾರ್ ಎಂಬ ವಾದವೂ ಇದೆ. ಇವನ ಬಗೆಗಿನ ಹೆಚ್ಚಿನ ಮಾಹಿತಿಗೆ ಆಸಕ್ತರು ಫಿಶರಿನ Counterflows to colonialism ಮತ್ತು ಮಾರ್ಕ್ ವಿಲ್ಕ್ಸ್‌ನ Historical sketches ಪರಿಶೀಲಿಸಬಹುದು.
ಹಠಾತ್ತನೆ ಹೈದರ್ ಸಾಯದಿದ್ದರೆ ಟಿಪ್ಪುವಿನ ಬದಲು ಆಯಾತನಿಗೆ ಆ ಸಿಂಹಾಸನವೇರುವ ಅವಕಾಶ ಸಿಗುತ್ತಿತ್ತೇನೋ? ಹಾಗಾಗಿದ್ದೇ ಆದಲ್ಲಿ ಕೇರಳದ ಇತಿಹಾಸದ ಅತಿಕ್ರೂರ ಅಧ್ಯಾಯವೊಂದು ಇಲ್ಲವಾಗುತ್ತಿತ್ತು.
       ಹೈದರ್ ಮಲಬಾರಿನ ಮೇಲೆ ಆಕ್ರಮಣಮಾಡಿದ ಮೇಲೆ ಕೊಯಿಕ್ಕೋಡಿನ ಝಾಮೋರಿನ್ನನ ವಂಶಸ್ಥರು ಸೇರಿ ತುಂಡರಸರೆಲ್ಲ ತಿರುವಾಂಕೂರಿಗೆ ಆಶ್ರಯ ಅರಸಿ ಹೋದರು. ಮಗ್ಗುಲ ಮುಳ್ಳಾಗಿ ಕಾಡುತ್ತಿದ್ದ ಬ್ರಿಟಿಷರ ವಿರುದ್ಧ ಹೋರಾಡಲು ಹೈದರನಿಗೆ ತುರ್ತಾಗಿ ದೊಡ್ಡಮೊತ್ತದ ಹಣದ ಅಗತ್ಯವಿತ್ತು. ರಟ್ಟಿಹಳ್ಳಿಯ ಹತ್ತಿರ ನಡೆದ ಕದನದಲ್ಲಿ ಮರಾಠರಿಗೆ ಸೋತು ೩೫ ಲಕ್ಷ ಕಪ್ಪ ಕೊಡಬೇಕಾಗಿ ಬಂದುದರಿಂದ ಬೊಕ್ಕಸ ಬರಿದಾಗಿತ್ತು. ಪರಿಣಾಮವಾಗಿ ಅತಿಕ್ರೂರ ತೆರಿಗೆ ಪದ್ಧತಿಯನ್ನು ಮಲಬಾರಿನ ಹಿಂದೂಗಳ ಮೇಲೆ ಹೇರಲಾಯಿತು. ಪ್ರಾಯಶಃ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ, ಮಲಬಾರಿನ ಇತಿಹಾಸದಲ್ಲಿ ಮೊದಲ ಬಾರಿ ಅಧಿಕೃತ ಭೂಕಂದಾಯದ ವ್ಯವಸ್ಥೆ ಜಾರಿಯಾಗಿದ್ದು ಹೈದರನ ಕಾಲದಲ್ಲೇ. ಅಲ್ಲಿಯವರೆಗೂ ಕೇರಳ ಅದೆಷ್ಟು ಶ್ರೀಮಂತವಾಗಿತ್ತೆಂದರೆ ಅಲ್ಲಿನ ಸಾಂಬಾರ್ ಪದಾರ್ಥಗಳು, ಮಸ್ಲಿನ್ ಬಟ್ಟೆ, ತೇಗ, ದಂತಗಳಿಗೆ ದೊಡ್ಡ ಅಂತರಾಷ್ಟ್ರೀಯ ಮಾರುಕಟ್ಟೆಯಿತ್ತು. ಭಾರತಕ್ಕೆ ಜಲಮಾರ್ಗ ಕಂಡುಹಿಡಿದವನೆಂಬ ಕಿರೀಟ ತೊಟ್ಟಿರುವ ಭಾರಿ ದೊಡ್ಡ ಸಂಶೋಧಕ ವಾಸ್ಕೋಡಿಗಾಮನಿಗಿಂತ ಸಾವಿರ ವರ್ಷದ ಮೊದಲಿನಿಂದಲೂ ಇಲ್ಲಿನ ಬಂದರುಗಳಲ್ಲಿ ದೇಶವಿದೇಶಗಳ ಹಡಗುಗಳು ಬಿಡುವಿಲ್ಲದಂತೆ ಬಂದುಹೋಗುತ್ತಿದ್ದವು. ಹೇಳಿದ ಬೆಲೆಗೆ ಮರುಮಾತಿಲ್ಲದೇ ಇಲ್ಲಿನ ಸರಕುಗಳನ್ನು ಕೊಳ್ಳಲು ವಿದೇಶಿಗರು ಸಾಲು ಹಚ್ಚಿ ಕಾಯುತ್ತಿದ್ದರು. ಯುರೋಪಿಯನ್ನರಿಗಂತೂ ಕಾಳುಮೆಣಸಿನ ಹುಚ್ಚು ಎಷ್ಟಿತ್ತೆಂದರೆ ಬದಲು ಅಷ್ಟೇ ತೂಕದ ಚಿನ್ನ, ಬೆಳ್ಳಿ, ವಜ್ರ ಸೇರಿ ತಮ್ಮನ್ನು ಮಾರಿಕೊಳ್ಳಲೂ ತಯಾರಿದ್ದರು. ಅಂಥದ್ದರಲ್ಲಿ ಕೇರಳದಲ್ಲಿ ಜನಕ್ಕೆ ತೆರಿಗೆ ಕಟ್ಟುವ ಖರ್ಮವಿರಲಿಲ್ಲವೆಂಬುದು ಆಶ್ಚರ್ಯವಲ್ಲ. ತ್ರಾವೆಂಕೋರ್, ಕೊಚ್ಚಿನ್ ಸಂಸ್ಥಾನಗಳಲ್ಲೆಲ್ಲ ಅಲ್ಲಿನ ಜನ ಗೌರವಪೂರ್ವಕವಾಗಿ ರಾಜನಿಗೆ ಕೊಡುತ್ತಿದ್ದುದು ವರ್ಷಕ್ಕಿಂತಿಷ್ಟೆಂದು ರಕ್ಷಣಾ ನಿಧಿ ಮಾತ್ರ. ಇಂಥದ್ದರಲ್ಲಿ ಇದ್ದಕ್ಕಿದ್ದಂತೆ ಮಲಬಾರಿನಲ್ಲಿ ಭೂಕಂದಾಯ, ಆದಾಯ ತೆರಿಗೆಗಳೆಲ್ಲ ಜಾರಿಗೆ ಬಂದವು. ಮೊದಲು ಹಿಂದೂಗಳು ಆದಾಯದ ೫೦% ಕಂದಾಯ ಕಟ್ಟಬೇಕಾಗಿದ್ದರೆ ಮುಸ್ಲಿಮರಿಗೆ ತೆರಿಗೆ ಕಟ್ಟುವುದರಿಂದ ವಿನಾಯ್ತಿ ನೀಡಲಾಯಿತು. ಆದರೆ ಮಲಬಾರಿನ ಗವರ್ನರ್ ಆಗಿದ್ದ ಹೈದರನ ನಂಬಿಕಸ್ಥ ಅರ್ಷಾದ್ ಬೇಗ್ ಖಾನ್ ಎಂಬ ಅಧಿಕಾರಿಯ ಕೃಪೆಯಿಂದ ಇದು ೨೦%ಕ್ಕೆ ಇಳಿಯಿತು. ಸ್ವಲ್ಪ ಸಮಯದಲ್ಲೇ ಕ್ಯಾನ್ಸರಿನಿಂದ ನರಳಿ ಹೈದರ್ ಸತ್ತ. ಬಿದನೂರನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟ ಆಯಾಝ್ ಟಿಪ್ಪುವಿನ ಕಣ್ತಪ್ಪಿಸಿ ಬಾಂಬೇಗೆ ತೆರಳಿದ್ದ. ಅಧಿಕಾರಕ್ಕೇರಿದ ಟಿಪ್ಪುವಿನ ದ್ವೇಷ ತಿರುಗಿದ್ದು ಮಾತ್ರ ಮಲಬಾರಿನ ಕಡೆ. ಆರ್ಷಾದ್ ಖಾನನನ್ನು ಬರ್ಖಾಸ್ತುಗೊಳಿಸಿ ಮಲಬಾರಿಗೆ ಮೀರ್ ಇಬ್ರಾಹಿಂ ಎಂಬ ಅಧಿಕಾರಿಯನ್ನು ನೇಮಿಸಿದ. ಹೈದರನ ಕಾಲದ ಒಪ್ಪಂದಗಳೆಲ್ಲ ಮೂಲೆ ಸೇರಿದವು. ಮೊದಲು ದೇವಸ್ಥಾನಗಳಿಗಿದ್ದ ತೆರಿಗೆ ವಿನಾಯ್ತಿ ರದ್ದಾಯಿತು. ಆದಾಯದಲ್ಲಿ ಮುಕ್ಕಾಲು ಪಾಲು ಕಡ್ಡಾಯವಾಗಿ ತೆರಿಗೆ ಕಟ್ಟಬೇಕೆಂಬ ಕಟ್ಟಳೆಗಳು ಸಾಧುವೂ ಆಗಿರಲಿಲ್ಲ, ಸಾಧ್ಯವೂ ಆಗಿರಲಿಲ್ಲ. ಕರೆನ್ಸಿ ಮತ್ತು ಕಲ್ಚರ್ ಟಿಪ್ಪುವಿನ ಮುಖ್ಯ ಟಾರ್ಗೆಟ್‌ಗಳಾಗಿದ್ದವು. ಕಂಡಕಂಡವರನ್ನು ಸಿಕ್ಕಸಿಕ್ಕಲ್ಲಿ ಮತಾಂತರಿಸಲಾಯ್ತು. ಜೀವವನ್ನೂ, ಧರ್ಮವನ್ನೂ ಉಳಿಸಿಕೊಳ್ಳಲು ಹೆಚ್ಚಿನ ಶ್ರೀಮಂತ ನಂಬೂದಿರಿ, ನಾಯರುಗಳು ಮನೆಮಾರುಗಳನ್ನು ಬಿಟ್ಟು ತ್ರಾವೆಂಕೋರಿಗೆ ಓಡಿಹೋಗಿ ಧರ್ಮರಾಜ ರಾಜಾರಾಮವರ್ಮನ ಆಶ್ರಯ ಪಡೆದರು. ಜೀವವೊಂದು ಉಳಿದರೆ ಸಾಕೆಂದು ಕೆಲವರು ಮತಾಂತರಗೊಂಡು ಮಲಬಾರಿನಲ್ಲೇ ಉಳಿದರು. ಊರುಬಿಟ್ಟವರ ಭೂಮಿ ಸ್ಥಳೀಯ ಮಾಪಿಳ್ಳೆಗಳ ವಶವಾಯ್ತು. ಮುಸ್ಲೀಮರಿಗೆ ಹೇಗೂ ಹೈದರನ ಕಾಲದಿಂದಲೂ ತೆರಿಗೆ ಮನ್ನಾ ಮಾಡಲಾಗಿತ್ತಲ್ಲ. ಟಿಪ್ಪುವಿನ ಕಾಲದಲ್ಲಿ ಮಲಬಾರಿನಲ್ಲಿ ಮುಸ್ಲಿಮರ ಸಂಖ್ಯೆ ಜಾಸ್ತಿಯಾಗಿದ್ದು ಮಾತ್ರವಲ್ಲ ಅವರೇ ನಂಬೂದಿರಿ ಜಮೀನ್ದಾರರ ಹೆಚ್ಚಿನ ಭೂಮಿಗೆಲ್ಲ ಬೇನಾಮಿ ವಾರಸುದಾರರಾಗಿ ಸರ್ಕಾರಕ್ಕೆ ಬರುವ ತೆರಿಗೆ ನಿಂತುಹೋಯಿತು. ಮೊದಲೇ ಅವರಿವರ ಮೇಲೆ ತೋಳೇರಿಸಿಕೊಂಡು ಹೋಗಿ ನಷ್ಟದಲ್ಲಿದ್ದ ಟಿಪ್ಪುವಿಗೆ ಕೇರಳದಿಂದ ಬರುವ ಕಂದಾಯದ ಹಣವೂ ಕಡಿಮೆಯಾಗಿ ಖಜಾನೆ ದಿವಾಳಿಯಾಗುವ ಹಂತ ತಲುಪಿತು. ದುಡ್ಡಿನೆದುರು ಜಾತಿಮುಖ ನೋಡಲಾದೀತೇ? ಮಲಬಾರಿನ ಮುಸ್ಲೀಮರು ಇನ್ನುಮುಂದೆ ತೆರಿಗೆ ಕಟ್ಟಬೇಕೆಂದು ಆದೇಶ ಹೊರಡಿಸಿದ. ತೆರಿಗೆ ಕಲೆಕ್ಟರ್ ಮೀರ್ ಇಬ್ರಹಿಂನ ಉಪಟಳವೂ ಮಿತಿಮೀರಿತ್ತು. ಕಂದಾಯ ಕಟ್ಟಲು ಸಾಧ್ಯವಾಗದಿದ್ದವರನ್ನು ಕ್ರೂರವಾಗಿ ದಂಡಿಸಲಾಗುತ್ತಿತ್ತು. ಎಂಥ ನಿರ್ಬಲನಾದರೂ ಸಹಿಸಲಾಗದ ಕಷ್ಟ ಕೊಟ್ಟರೆ ತಿರುಗಿ ಬೀಳದೇ ಇರುತ್ತಾನೆಯೇ? ಅತ್ತನ್ ತಂಗಳ್ ಕುರಿಕ್ಕಳ್ ಎಂಬ ಮಂಜೇರಿಯ ಪ್ರತಿಷ್ಟಿತ ಮುಸ್ಲಿಂ ಮುಖಂಡನ ನೇತೃತ್ವದಲ್ಲಿ ಇಬ್ರಾಹಿಂನ ವಿರುದ್ಧ ಮಾಪಿಳ್ಳೆ ಜನ ಬಂಡೆದ್ದರು.(ಈ ತಂಗಳ್ ಎಂಬುದು ಮಲಬಾರಿನ ಮುಸ್ಲೀಮರಲ್ಲೇ ಕುಲೀನ ಜಾತಿಯ ಹೆಸರು. ಇವರು ಮಾಪಿಳ್ಳೆಗಳಲ್ಲದಿದ್ದರೂ ಇಂದಿಗೂ ಇವರಿಗೆ ಮಲಬಾರಿನ ಮುಸ್ಲಿಂ ಸಮಾಜದಲ್ಲೊಂದು ಗೌರವದ ಸ್ಥಾನಮಾನವಿದೆ. ಇವರ ಆಚಾರ, ವಿಚಾರ, ರೂಢಿಗಳೆಲ್ಲ ಬ್ರಾಹ್ಮಣರನ್ನು ಹೋಲುವುದರಿಂದ ಪ್ರಾಯಶಃ ಹೈದರನ ಕಾಲದಲ್ಲಿ ಇವರು ಮತಾಂತರಗೊಂಡಿದ್ದರೆಂದು ಊಹಿಸಲಾಗುತ್ತದೆ). ವಿಶೇಷವೆಂದರೆ ಹಾಗೆ ಬಂಡೆದ್ದವರಲ್ಲಿ ಹೆಚ್ಚಿನವರೆಲ್ಲ ಮಾಪಿಳ್ಳೆ ಮುಸ್ಲಿಮರೇ. ಕರನಿರಾಕರಣೆಯ ನೆಪದಲ್ಲಿ ಪ್ರತಿಭಟನೆ ತೀವ್ರವಾಗತೊಡಗಿತು. ಮಲಬಾರಿನಲ್ಲಿ ಟಿಪ್ಪುವಿನ ವಿರುದ್ಧ ಮೊದಲ ಬಾರಿಗೆ ದೊಡ್ಡಮಟ್ಟಿನ ದಂಗೆ ಶುರುವಾಗಿದ್ದು ಸ್ಥಳೀಯ ಮುಸ್ಲೀಮರಿಂದ ಎಂಬುದೇ ಆಶ್ಚರ್ಯದ ವಿಚಾರ. ಅದೇ ಸಮಯದ ಕಲ್ಲೀಕೋಟೆಯಲ್ಲಿ ಝಾಮೋರಿನ್ನಿನ ಸೋದರಳಿಯ ರವಿವರ್ಮ ಮೈಸೂರು ಪಡೆಯ ವಿರುದ್ಧ ಗೆರಿಲ್ಲಾ ಯುದ್ಧ ಶುರುಮಾಡಿದ. ಇನ್ನೇನು ಮಲಬಾರು ಟಿಪ್ಪುವಿನ ಕೈತಪ್ಪಿಹೋಗುವುದರಲ್ಲಿತ್ತು. ಹೈದರನ ಬಂಟನೆಂಬ ಕಾರಣಕ್ಕೆ ಯಾವ ಅರ್ಶಾದ್ ಖಾನ್‌ನನ್ನು ಟಿಪ್ಪು ಪದಚ್ಯುತಗೊಳಿಸಿದ್ದನೋ ಅದೇ ಅರ್ಷಾದ್ ಫೀಲ್ಡಿಗಿಳಿದ. ರವಿವರ್ಮನಿಗೆ ದೊಡ್ಡಮೊತ್ತದ ಜಹಗೀರು ನೀಡಿ ಮಾಪಿಳ್ಳೆಗಳಿಗೆ ಅವನ ಸಹಾಯ ಸಿಗದಂತೆ ನೋಡಿಕೊಂಡ. ಇಬ್ರಾಹಿಂನನ್ನು ಶಿಕ್ಷಿಸದಿದ್ದರೆ ಮಲಬಾರನ್ನು  ಶಾಶ್ವತವಾಗಿ ದೂರಮಾಡಿಕೊಳ್ಳಬೇಕಾದ ದಿನ ದೂರವಿಲ್ಲವೆಂದು ಪತ್ರ ಬರೆದು ಟಿಪ್ಪೂವಿಗೆ ಎಚ್ಚರಿಕೆ ಕೊಟ್ಟ. ತಂಗಳ್ ಮತ್ತವನ ಮಗನನ್ನು ಬಂಧಿಸಿ ಶ್ರೀರಂಗಪಟ್ಟಣದ ಜೈಲಲ್ಲಿಟ್ಟರೂ ಮಾಪಿಳ್ಳೆಗಳ ದಂಗೆಯೇನೂ ಕಡಿಮೆಯಾಗಲಿಲ್ಲ. ಆ ಹೋರಾಟದಲ್ಲಿ ೯೦ ಜನ ಮಾಪಿಳ್ಳೆಗಳು ಮೃತಪಟ್ಟರು. ತನ್ನ ರಾಜ್ಯದಲ್ಲಿ ಸ್ವಜಾತಿ ಬಾಂಧವರೇ ತಿರುಗಿ ಬಿದ್ದಿದ್ದು ಟಿಪ್ಪಿವಿನ ಸ್ವಾಭಿಮಾನಕ್ಕೆ ದೊಡ್ಡ ಏಟು ಬಿದ್ದಿತ್ತು. ಬೇರೆ ದಾರಿ ಕಾಣದೇ ಮಲಬಾರಿಗೆ ಓಡಿ ಬಂದ ಟಿಪ್ಪು ಇಬ್ರಾಹಿಂನನ್ನು ಜೈಲಿಗಟ್ಟಿದ. ಅರ್ಷದನನ್ನು ಮತ್ತೆ ಮಲಬಾರಿನ ಉಸ್ತುವಾರಿಯಾಗಿ ನೇಮಿಸಿದನಾದರೂ ಟಿಪ್ಪುವಿನ ಅಡಿ ಕೆಲಸ ಮಾಡಲು ಆತ ತಯಾರಿರಲಿಲ್ಲ. ಹಾಗಾಗಿ ಇವನ ಸಹವಾಸವೇ ಸಾಕೆಂದು ಮೆಕ್ಕಾಗೆ ತೆರಳಿದ. ಮಂಜೇರಿ ದಂಗೆಯನ್ನಡಗಿಸಲು ಯಾವ ಟಿಪ್ಪುವಿನ ಬೀಗಿತ್ತಿ ಅರಕ್ಕಲ್ ಬಿವಿ ಸಹಾಯ ಮಾಡಿದಳೋ ಅವಳೇ ೧೭೯೧ರಲ್ಲಿ ಬ್ರಿಟಿಷರ ಪಡೆ ಸೇರಿಕೊಂಡು ಟಿಪ್ಪುವಿಗೆ ಕೈಕೊಟ್ಟಳು.  ಅತ್ತ ಅತ್ತನ್ ತಂಗಳ್ ಜೈಲಿನಿಂದ ತಪ್ಪಿಸಿಕೊಂಡು ಮಲಬಾರಿಗೆ ತಿರುಗಿ ಬಂದು ಇನ್ನೊಂದು ಸುತ್ತಿನ ಹೋರಾಟಕ್ಕೆ ಸಿದ್ಧನಾದನಾದರೂ ಅಷ್ಟರೊಳಗೆ ಬ್ರಿಟಿಷರು ಟಿಪ್ಪೂವನ್ನು ಸೋಲಿಸಿ ಮಲಬಾರನ್ನು ಕೈವಶಮಾಡಿಕೊಂಡಿದ್ದರು. ತಂಗಳಿನ ಸಾಹಸವನ್ನು ಮೆಚ್ಚಿ ಆತನಿಗೆ ಪೋಲಿಸ್ ಸುಪರಿಂಡೆಂಟ್ ಪದವಿಯನ್ನು ಕಂಪನಿ ದಯಪಾಲಿಸಿತು. ಆದರೆ ತಂಗಳ್ ಕನಸು ಕಂಡಿದ್ದು ಸ್ವತಂತ್ರ ಮಲಬಾರನ್ನು. ಟಿಪ್ಪುವನ್ನೇ ಎದುರಿಸಿದವ ಪರದೇಶಿ ಬ್ರಿಟಿಷರ ಗುಲಾಮನಾಗಿ ಬದುಕುವನೇ? ಸ್ವರಾಜ್ಯಕ್ಕೋಸ್ಕರ ಹೋರಾಡಲು ಕಂಪನಿಯ ವಿರುದ್ಧ ಯುದ್ಧ ಘೋಷಿಸಿದ್ದ ಅಪ್ರತಿಮ ಸ್ವಾತಂತ್ರ್ಯವೀರ ಕೇರಳವರ್ಮ ಪಳಸ್ಸಿರಾಜನೊಡನೆ ಕೈಜೋಡಿಸಿ ಬ್ರಿಟಿಷರಿಗೂ ತಿರುಗಿ ಬಿದ್ದ. ಮೈಸೂರಿನವರು, ಅರಕ್ಕಲ್ ಸುಲ್ತಾನರು, ಕೊಡಗು, ಬ್ರಿಟಿಷ್ ಹೀಗೆ ನಾಲ್ಕೂ ಬದಿ ಬರೀ ಶತ್ರುಗಳನ್ನೇ ಇಟ್ಟುಕೊಂಡು ಕೊನೆಯುಸಿರಿನ ತನಕ ಯಾರಿಗೂ ತಲೆಬಾಗದೇ ಹೋರಾಡಿದ ಪಳಸ್ಸಿರಾಜನ ರೋಚಕ ಕಥೆಯನ್ನ ಮುಂದೊಮ್ಮೆ ನೋಡೋಣ.
ಇತಿಹಾಸದಲ್ಲಿ ಸ್ವಲ್ಪ ಹಿಂದೆ ಬರೋಣ. ೧೭೫೭ರ ಸುಮಾರಿಗಿರಬಹುದು. ಹೈದರ್‌‌ ಮೊದಲು ಮಲಬಾರಿನತ್ತ  ದೃಷ್ಟಿ ಹಾಯಿಸಿದ್ದು. ಅದೇ ಕಾಲದಲ್ಲಿ ಹಲವು ಘಟನೆಗಳು ಕೇರಳದ ರಾಜಕೀಯದಲ್ಲಿ ವಿಚಿತ್ರ ತಿರುವುಗಳನ್ನು ನೀಡಿದ್ದವು. ಹಲವು ಶತಮಾನಗಳ ಆಳ್ವಿಕೆಯ ನಂತರ ಝಾಮೋರಿನ್ನರು ಅಧಿಕಾರ ಕಳೆದುಕೊಂಡಿದ್ದರು. ಝಾಮೋರಿನ್ ಅರಸ ಆತ್ಮಹತ್ಯೆ ಮಾಡಿಕೊಂಡಿದ್ದರೆ ಪರಿವಾರದವರು ತಿರುವಾಂಕೂರು ರಾಜರ ಆಶ್ರಯ ಪಡೆದರು. ಕೊಚ್ಚಿ ರಾಜ ಡಚ್ಚರ ಜೊತೆ ಒಪ್ಪಂದ ಮಾಡಿಕೊಂಡಿದ್ದರಿಂದ ಸ್ವಲ್ಪ ಬಲಾಢ್ಯನಾಗಿಯೇ ಇದ್ದ. ಉಳಿದ ರಾಜ್ಯಗಳಿಗೆ ಹೋಲಿಸಿದರೆ ಪದ್ಮನಾಭನ ಕೃಪೆಯಿಂದ ತಿರುವಾಂಕೂರಿನಲ್ಲಿ ಶಾಂತಿ, ಸುಭಿಕ್ಷೆ ನೆಲೆಸಿತ್ತು. ಅದನ್ನು ಸಹಿಸದ ಡಚ್ಚರು ಆಗಾಗ ಕಾಲುಕೆರೆದು ತಿರುವಾಂಕೂರಿನ ಜೊತೆ  ಜಗಳ ಮಾಡಲು ಸಮಯ ಕಾಯುತ್ತಿದ್ದರು. ಕೊಟ್ಟಾರಕ್ಕರ ಅರಸನಿಗೆ ತಿರುವಾಂಕೂರಿನ ವಿರುದ್ಧ ದಂಗೆಯೇಳಲು ಒಳಗಿಂದೊಳಗೇ ಪ್ರೋಸಾಹಿಸಿದರೂ ಆತ ಪದ್ಮನಾಭದಾಸರನ್ನು ಎದುರು ಹಾಕಿಕೊಳ್ಳುವ ಧೈರ್ಯ ಮಾಡಲಿಲ್ಲ. ಕೊನೆಗೊಮ್ಮೆ ಧೈರ್ಯ ಮಾಡಿ ಡಚ್ಚರೇ ತಿರುವಾಂಕೂರಿನ ಮಾರ್ತಾಂಡವರ್ಮನ ವಿರುದ್ಧ ದಂಡೆತ್ತಿ ಹೋದರೂ ಸೋತು ಮುಖಭಂಗ ಅನುಭವಿಸಿದರು. ಇದರ ನಂತರ ಡಚ್ಚರ ಆರ್ಥಿಕ ಪರಿಸ್ಥಿತಿ ಸಾಕಷ್ಟು ಹದಗೆಟ್ಟಿತು. ಸೈನಿಕರಿಗೆ ಸರಿಯಾಗಿ ಸಂಬಳ ಸವಲತ್ತುಗಳಿರಲಿಲ್ಲ. ಉತ್ತರದಲ್ಲಿ ಬ್ರಿಟಿಷರು ಪ್ರಬಲರಾಗುತ್ತಿದ್ದುದರಿಂದ ಬೇರೆ ದಾರಿಕಾಣದೇ ಕ್ಯಾಪ್ಟನ್ ಡಿ ಲ್ಯಾನ್ನೋಯ್‌ನ ನೇತೃತ್ವದಲ್ಲಿ ಡಚ್ಚರ ದೊಡ್ಡದೊಂದು ತುಕಡಿ ತಿರುವಾಂಕೂರಿನೊಡನೆ ವಿಲೀನಗೊಂಡಿತು. ತಿರುವಾಂಕೂರಿನತ್ತ ಸ್ನೇಹಹಸ್ತ ಚಾಚಿಸ ಡಚರು ಕ್ರಾಂಗಾನೂರ್ ಮತ್ತು ಆಯಕ್ಕೊಟ್ಟ ಕೋಟೆಗಳನ್ನು ತಿರುವಾಂಕೂರಿಗೆ ಬಿಟ್ಟುಕೊಟ್ಟರು. ಕೊಚ್ಚಿಯ ರಾಜನೂ ಮಾರ್ತಾಂಡವರ್ಮನೊಡನೆ ಸಂಧಿ ಮಾಡಿಕೊಂಡು ತೆಪ್ಪಗಾದ. ಇಷ್ಟಾದರೂ ಉತ್ತರದಲ್ಲಿ ಶತ್ರುಗಳು ತಿರುವಾಂಕೂರಿನತ್ತ ಮುಗಿಬೀಳಲು ಹೊಂಚು ಹಾಕುತ್ತಿದ್ದರು. ಬ್ರಿಟಿಷರು, ಪೋರ್ಚುಗೀಸರು, ಡಚ್ಚರು ನಂತರ ಮಲಬಾರಿಗೆ ಮೈಸೂರಿನವರ ಆಗಮನವೂ ಆಗಿತ್ತು. ಝಾಮೋರಿನ್ನರು ತಿರುವಾಂಕೂರಿನ ವಿರುದ್ಧ ಕತ್ತಿಮಸೆದರೂ ಕೊನೆಗೆ ಮೈಸೂರಿನವರೆದುರು ಸೋತಾಗ ರಕ್ಷಣೆ ಪಡೆಯಲು ತಿರುವಾಂಕೂರೇ ಬೇಕಾಯಿತು. ೧೭೫೮ರಲ್ಲಿ ಮಾರ್ತಾಂಡವರ್ಮನ ನಂತರ ಪಟ್ಟಕ್ಕೆ ಬಂದ ರಾಜಾ ರಾಮವರ್ಮ ಕ್ಯಾಪ್ಟನ್ ಲ್ಯಾನ್ನೋಯನಿಗೆ ರಾಜ್ಯದ ಉತ್ತರದಲ್ಲೊಂದು ಚೀನಾದ ಮಹಾಗೋಡೆಯ ಮಾದರಿಯ ರಕ್ಷಣಾ ವ್ಯವಸ್ಥೆ ನಿರ್ಮಿಸಲು ಸೂಚಿಸಿದ. ೨೦ ಅಡಿ ಅಗಲ, ೫೦ ಅಡಿ ಎತ್ತರದ ಪಶ್ಚಿಮದಲ್ಲಿ ಪಳ್ಳಿಪುರಂ ಸಮುದ್ರತೀರದಿಂದ ಪೂರ್ವದ ಅಣ್ಣಾಮಲೈ ಪರ್ವತಶ್ರೇಣಿಗಳ ತನಕದ ೪೦ ಮೈಲುದ್ದದ ’ನೆಡುಂಕೊಟ್ಟ’ ಎಂದು ಕರೆಯಲ್ಪಡುವ ತಡೆಗೋಡೆಯೊಂದು ನಿರ್ಮಾಣವಾಯಿತು. ಇದು ಪ್ರತಿ ಕಿಲೋಮೀಟರಿಗೊಂದು ಮದ್ದುಗುಂಡುಗಳನ್ನು ತುಂಬಿಡಲು ಶಸ್ತ್ರಾಗಾರ, ಸೈನಿಕರ ವಾಸಕ್ಕೆ ತಂಗುದಾಣ, ಶತ್ರುಗಳ ಮೇಲೆ ದಾಳಿಮಾಡುವ ವೇಳೆ ಅಡಗಿ ಕೂರಲು ಅಗತ್ಯವಾದ ಬಂಕರ್‌ಗಳಂಥ ಅತ್ಯಾಧುನಿಕ ವ್ಯವಸ್ಥೆಗಳನ್ನು ಹೊಂದಿತ್ತು. ಗೋಡೆಯ ಉತ್ತರ ಭಾಗದಲ್ಲಿ ೧೬ ಅಡಿ ಆಳದ ಹಳ್ಳ ತೋಡಿ ಮುಳ್ಳುಗಂಟಿಗಳು, ವಿಷಸರ್ಪಗಳು, ಚೂಪುಮೊನೆಯ ಆಯುಧಗಳನ್ನು ತುಂಬಿಸಲಾಯ್ತು. ದಕ್ಷಿಣದಲ್ಲಿ ಶಸ್ತ್ರಾಸ್ತ್ರ ಮತ್ತು ಸೈನಿಕರ ತಿರುಗಾಟಕ್ಕನುಕೂಲವಾಗುವಂತೆ ದೊಡ್ಡದೊಂದು ರಸ್ತೆ ನಿರ್ಮಿಸಲಾಯ್ತು. ಚೀನಾದ ಮಹಾಗೋಡೆಯಷ್ಟು ದೊಡ್ಡದಲ್ಲದಿದ್ದರೂ ಅದೇ ಮಾದರಿಯ ಅಭೇದ್ಯ ರಚನೆಯೊಂದು ನಮ್ಮಲ್ಲಿಯೂ ಇತ್ತು ಎಂಬುದು ನಮ್ಮಲ್ಲಿ ಹೆಚ್ಚಿನವರಿಗೆ ತಿಳಿಯದ ವಿಷಯ. ೧೭೭೪ರಲ್ಲಿ ಕಲ್ಲೀಕೋಟೆಯ ಝಾಮೋರಿನ್ ಸಾಮ್ರಾಜ್ಯ ಹೈದರನ ದಾಳಿಯಿಂದ ನಾಶವಾಗಿ ಮಧ್ಯ ಕೇರಳ ಬಲಹೀನಗೊಂಡಿತ್ತು. ಅತ್ತ ಸತತ ಯುದ್ಧಗಳಿಂದ ದಿವಾಳಿಯಾಗಿದ್ದ ಹೈದರಾಲಿ ತ್ರಾವೆಂಕೂರನ್ನು ವಶಪಡಿಸಿಕೊಳ್ಳಲು ನೋಡಿದ. ಅದಷ್ಟು ಸುಲಭದ ಕೆಲಸವಲ್ಲವೆಂದು ಅವನಿಗೂ ಗೊತ್ತು. ಹಾಗಾಗಿಯೇ ೧೫ ಲಕ್ಷ ರೂಪಾಯಿ, ೩೦ ಆನೆಗಳನ್ನು ತನಗೆ ಬಹುಮಾನವಾಗಿ ಕೊಡದಿದ್ದರೆ ಮಲಬಾರಿಗಾದ ಗತಿಯೇ ತಿರುವಾಂಕೂರಿಗೂ ಕಾದಿದೆ ಎಂದು ರಾಮವರ್ಮನಿಗೆ ಬೆದರಿಕೆ ಪತ್ರ ಬರೆದ. ಅದಕ್ಕೆ ತೀಕ್ಷ್ಣ ಪ್ರತ್ಯುತ್ತರ ನೀಡಿದ ರಾಮವರ್ಮ ಬಹುಮಾನ ಪಡೆಯಬೇಕೆಂದಿದ್ದರೆ ಮೊದಲು ಮಲಬಾರಿನ ಸ್ಥಳೀಯ ಆಡಳಿತಗಾರರನ್ನು ಪುನರ್ಸ್ಥಾಪಿಸಿ ಕೇರಳದಿಂದ ತೊಲಗುವಂತೆ ಎಚ್ಚರಿಕೆ ನೀಡಿದ. ಸಿಟ್ಟಿಗೆದ್ದ ಹೈದರ್ ವರ್ಷಗಳ ಕಾಲ ತಿಪ್ಪರಲಾಗ ಹೊಡೆದರೂ ನೆಡುಂಕೊಟ್ಟ ಗೋಡೆಯನ್ನು ದಾಟಿ ತಿರುವಾಂಕೂರನ್ನು ಪ್ರವೇಶಿಸಲಾಗಲಿಲ್ಲ. 
ನೆಡುಂಕೊಟ್ಟ ಗೋಡೆಯ ಅವಶೇಷಗಳು

       ಆ ಗೋಡೆ ಈಗಿಲ್ಲ. ಮುಖ್ಯವಾಗಿ ಕೆಮ್ಮಣ್ಣು, ಕಲ್ಲು, ಸುಣ್ಣದಕಲ್ಲುಗಳನ್ನು ಬಳಸಿ ಕಟ್ಟಿದ ಇದು ಶತ್ರುಗಳಿಗಿಂತಲೂ ಮುಖ್ಯವಾಗಿ ಕಾಲನ ಹೊಡೆತಕ್ಕೆ ಸಿಕ್ಕು ಧರಾಶಾಹಿಯಾಗಿದೆ. ಅದರ ಅವಶೇಷಗಳು ಒಂದೆರಡು ಕಡೆ ಮಾತ್ರ ಈಗ ಕಾಣಸಿಗಬಹುದಷ್ಟೆ. ಕೊಚ್ಚೀನಿನ ದಕ್ಷಿಣಕ್ಕೆ ಮುರಿಂಗೂರ್ ಕೊಟ್ಟಮುರಿ ಎಂಬಲ್ಲಿ ನ್ಯಾಶನಲ್ ಹೈವೆಯ ಹತ್ತಿರದ ದಿಬ್ಬವು ನೆಡುಂಕೋಟದ ಭಾಗವಾಗಿತ್ತೆನ್ನಲಾಗಿದೆ. ಆದರೆ ಕೊಚ್ಚಿ ಮತ್ತು ತ್ರಿವೇಂಡ್ರಮ್ ಮಧ್ಯೆ ನೆಡುಂಕೋಟ ಹಾದು ಹೋದ ಪ್ರದೇಶಗಳೆಲ್ಲ ಅದೇ ಹೆಸರಿನಿಂದ ಇಂದಿಗೂ ಕರೆಯಲ್ಪಡುತ್ತವೆ. ಕೃಷ್ಣಂಕೋಟ(ಕೃಷ್ಣನ್‌ನ ಕೋಟೆ), ಕೊಟ್ಟಮುರಿ(ಕೋಟೆಭಾಗ), ಕೊಟ್ಟಮುಕ್ಕು(ಕೋಟೆಯಂಚು), ಕೊಟ್ಟವಳಿ(ಕೋಟೆದಾರಿ) ಈ ಊರುಗಳೆಲ್ಲ ಒಂದು ಕಾಲದಲ್ಲಿ ನೆಡುಂಕೊಟ್ಟದ ಭಾಗಗಳಾಗಿದ್ದವೇ.
       ೧೭೮೯ರಲ್ಲಿ ಅಪ್ಪ ಮಾಡಲಾಗದ್ದನ್ನು ತಾನು ಮಾಡಿಯೇ ತೀರುತ್ತೇನೆಂಬ ಹಠದಿಂದ ಟಿಪ್ಪು ಹೊರಟ. ತಿರುವಾಂಕೂರಿನ ಮೇಲೆ ಹಗೆ ಸಾಧಿಸಲು ಏಳೇಂಟು ವರ್ಷ ಕಷ್ಟಪಟ್ಟಿದ್ದ ಬೇರೆ. ೨೦೦೦೦ ಸೈನಿಕರ ಪ್ರಚಂಡ ಸೇನಾಬಲದೊಡನೆ ನೆಡುಂಕೊಟ್ಟವನ್ನು ಮುತ್ತಿದ. ಬರೀ ೬ ಫಿರಂಗಿಗಳು ಮತ್ತು ೫೦೦ ಜನರಿದ್ದ ತ್ರಾವೆಂಕೂರಿನ ಪರಯೂರು ಬೆಟಾಲಿಯನ್ನಿನ ಶೌರ್ಯದೆದುರು ಟಿಪ್ಪುವಿನ ಸೈನ್ಯ ನಿಲ್ಲದಾಯ್ತು. ಸೋತರೇನಂತೆ, ನರಿ ಬುದ್ಧಿ ಬಿಡಲಾದೀತೇ? ಟಿಪ್ಪು ಮಹಾನ್ ಚಾಲಾಕಿ.  ಓಡಿ ಹೋದಂತೆ ಮಾಡಿ ೨೮ ಡಿಸೆಂಬರ್ ೧೭೮೯ರ ರಾತ್ರೋರಾತ್ರಿ ರಕ್ಷಣಾವ್ಯವಸ್ಥೆ ಕಡಿಮೆಯಿದ್ದ ವಾಯುವ್ಯ ಭಾಗದಲ್ಲಿ ಈಗಿನ ಚಾಲಕ್ಕುಡಿಯ ಹತ್ತಿರದ ನೆಡುಂಕೊಟ್ಟವನ್ನು ಭೇದಿಸಿ ಒಳನುಗ್ಗಿದ. ಮುರಿಂಗೂರಿನಲ್ಲಿ ಮೈಸೂರು ಮತ್ತು ತಿರುವಾಂಕೂರು ಪಡೆಗಳು ಎದುರುಬದುರಾದವು. ಮೈಸೂರು ಪಡೆಗೆ ಟಿಪ್ಪುವೇ ಮುಂದಾಳತ್ವ ವಹಿಸಿದ್ದರೆ ತಿರುವಾಂಕೂರಿನ ಸೈನ್ಯವನ್ನು ದಿವಾನ್ ಕೇಶವದಾಸ ಪಿಳ್ಳೈ ಮುನ್ನಡೆಸಿದ್ದ. ಈ ಯುದ್ಧ ನೆಡುಂಕೊಟ್ಟ ಕದನವೆಂದೇ ಇತಿಹಾಸ ಪ್ರಸಿದ್ಧವಾಯ್ತು. ತಿರುವಾಂಕೂರಿನ ನಾಯರ್ ಸೈನಿಕರು ಮೈಸೂರಿನವರಿಗೆ ಸಾಯುವಂತೆ ಹಿಡಿದು ಬಡಿದ ಕಥೆ ನೀವು ಹಿಂದಿನ ಲೇಖನದಲ್ಲಿ ಓದಿಯೇ ಇದ್ದೀರಿ. ಸ್ವತಃ ಟಿಪ್ಪುವೇ ಕಾಲುಮುರಿದುಕೊಂಡು ಕುಂಟುನಾಯಿಯಂತೆ ಕುಯ್ಯೋಮರ್ರೋ ಎನ್ನುತ್ತಾ ತಿರುಗಿ ನೋಡದೆ ಮೈಸೂರಿಗೆ ಓಡಿಬಂದ.
       ತ್ರಾವೆಂಕೂರನ್ನು ಗೆದ್ದು ಈಡೀ ದಕ್ಷಿಣ ಭಾರತವನ್ನು ಇಸ್ಲಾಮಿಕ್ ಆಡಳಿತದ ಸುಲ್ತಾನ್-ಎ-ಖುದಾಬಾದ್ ಮಾಡುವ ಟಿಪ್ಪುವಿನ ಆಸೆ ಕೊನೆಗೂ ಈಡೇರಲಿಲ್ಲ. ಅವನಿಗೆ ದೆಹಲಿಯನ್ನೂ ಗೆಲ್ಲುವ ಆಸೆಯಿತ್ತಂತೆ. ಏನು ಮಾಡುವುದು? ಶ್ರೀರಂಗಪಟ್ಟಣದಲ್ಲಿ ಬಾಗಿಲು ಮುಚ್ಚಿ ಕೂತಿದ್ದವನನ್ನು ಬ್ರಿಟೀಷರಂತೂ ಬೋನಲ್ಲಿ ಬಿದ್ದ ಇಲಿಯನ್ನು ಬಡಿಯುವಂತೆ ಬಡಿದೆಸೆದರು. ಆದರೇನಂತೆ, ಇನ್ನೂರು ವರ್ಷಗಳ ನಂತರ ಟಿಪ್ಪುವಿನ ಪುನರುತ್ಥಾನವಾಗಿದೆ. ಔರಂಗಜೇಬ, ಮಹಮ್ಮದ್ ಘೋರಿ, ತೈಮೂರ, ನಾದಿರ್ ಷಾಗಳ ಆತ್ಮಗಳೂ ಗೋರಿಯಿಂದೆದ್ದು ಬಂದು ಸರ್ಕಾರಿ ಜಯಂತಿ ಆಚರಿಸಿಕೊಳ್ಳಲು ಹಪಪಿಸುತ್ತಿವೆ. ರೋಲ್ ಮಾಡೆಲ್ಲುಗಳ ಹುಡುಕಾಟದಲ್ಲಿರುವವರಿಗೆ, ನಾಟಕ ಬರೆಯುವವರಿಗೆ, ಪೀಠದ ಪಡೆಯಬಯಸುವವರಿಗೆ, “ಬಾಂಧವ”ರನ್ನು ತೃಪ್ತಿಪಡಿಸುವವರಿಗೆ ಸುಗ್ಗಿ ಕಾಲ.
ಜೈ ಕರ್ನಾಟಕ ಮಾತೆ, ವಂದೇಮಾತರಂ, ಟಿಪ್ಪೂ ಸುಲ್ತಾನ್.....
(ಹೆಚ್ಚಿನ ಮಾಹಿತಿಗಾಗಿ ಪರಿಶೀಲಿಸಿ: ಕೊಚ್ಚಿಯ ದಿವಾನನಾಗಿದ್ದ ಕೊಟ್ಟಾರತ್ತಿಲ ಶುಂಗೂನಿ ಮೆನನ್‌ನ ಐತಿಹ್ಯಮಾಲಾ, ತಿರುವಾಂಕೂರಿನ ದಿವಾನ್ ಬಹದ್ದೂರ್ ವಿ. ನಾಗಮಯ್ಯನ ತ್ರಾವೆಂಕೂರ್ ಸ್ಟೇಟ್ ಮಾನ್ಯುಯೆಲ್)

Monday, November 16, 2015

ಟಿಪ್ಪುವಿನ ಹೆಂಡತಿ

ಉನ್ನಿಯಾರ್ಚೆಯ ಪೇಂಟಿಂಗ್
   
     ಟಿಪ್ಪುವನ್ನು ಒಂದು ಕಾರಣಕ್ಕಾದರೂ ಮೆಚ್ಚಲೇಬೇಕು. ಸತ್ತ ಇನ್ನೂರು ಚಿಲ್ಲರೆ ವರ್ಷಗಳ ನಂತರವೂ ರಾಜ್ಯಕ್ಕೆ ರಾಜ್ಯವನ್ನೇ ಹೊತ್ತಿ ಉರಿಸುವ ಶಕ್ತಿ ಆ ಹೆಸರಿಗಿದೆಯೆಂದ ಮೇಲೆ ಸುಮ್ಮನೆಯೇ? ಇನ್ನು ಬದುಕಿದ್ದಾಗ ಆತ ಇನ್ನೇನೇನು ಉರಿಸಿರಬಹುದು!
         ಟಿಪ್ಪು ಕನ್ನಡ ಪರವೋ, ವಿರೋಧಿಯೋ? ಹಿಂದೂ ವಿರೋಧಿಯೋ, ಪ್ರೇಮಿಯೋ? ಆತ ಒಡೆದ ಮಂದಿರಗಳ ಸಂಖ್ಯೆ ಎಂಟು ಸಾವಿರವೋ, ಮೂವತ್ತು ಸಾವಿರವೋ ಎಂಬಿತ್ಯಾದಿ ಮುಗಿಯದ ಚರ್ಚೆಗಳು ಲೆಕ್ಕವಿಲ್ಲದಷ್ಟು ಬಾರಿ ನಮ್ಮಲ್ಲಿ ನಡೆದಿವೆ. ನಡೆಯುತ್ತಲೇ ಇವೆ. ಟಿಪ್ಪುವಿನ ಡೇಟ್ ಆಫ್ ಬರ್ತ್ ಕೂಡ ಗೊತ್ತಿಲ್ಲದವರು ಆತ ಶ್ರೀರಂಗಪಟ್ಟಣದ ಹುಣಸೆ ತೋಪಿನಲ್ಲಿ ಬರೋಬ್ಬರಿ ೭೦೦ ಮೇಲುಕೋಟೆ ಬ್ರಾಹ್ಮಣರನ್ನು ನೇತು ಹಾಕಿ ಕೊಂದ ನರಕ ಚತುರ್ದಶಿಯ ದಿನದಂದೇ ಬರ್ತಡೇ ಆಚರಿಸಿಬಿಟ್ಟರಲ್ಲಾ, ಛೇ....ಇಂಥವರೆಲ್ಲ ಆಳುತ್ತಿರುವಾಗ ಟಿಪ್ಪು ಮುಂದೊಂದು ದಿನ ರಾಷ್ಟ್ರೀಯ ಮಾತ್ರವಲ್ಲ ಅಂತರ್ರಾಷ್ಟ್ರೀಯ ನಾಯಕನಾದರೂ ಆಗಬಹುದು. ಆ ಚರ್ಚೆಗಳೆಲ್ಲ ಅತ್ಲಾಗಿರಲಿ. ನಿನ್ನೆಮೊನ್ನೆಯ ಟಿಪ್ಪುವಿನ ಗಲಾಟೆಯ ಮಧ್ಯೆದಲ್ಲಿ ಸಡನ್ನಾಗಿ ನೆನಪಾದವಳು ಅವಳು. ನಾನವಳನ್ನು ಓದಿ ಮರೆತು ಬಹಳ ಕಾಲವಾಗಿತ್ತು. ಆದರೆ ಕಳೆದ ಇನ್ನೂರೈವತ್ತು ವರ್ಷಗಳಲ್ಲಿ ಅವಳ ಹೆಸರು ಕೇಳದ ಮಲಯಾಳಿ ಹುಟ್ಟಿರಲಿಕ್ಕಿಲ್ಲ. ಅವಳ ಕತೆಯನ್ನಿಟ್ಟು ಮಾಡಿದ ಚಿತ್ರಗಳೆಲ್ಲ ಬಾಕ್ಸಾಫೀಸನ್ನು ಚಿಂದಿ ಉಡಾಯಿಸಿವೆ. ಅವಳ ಬಗ್ಗೆ ಬಂದ ಕಾದಂಬರಿಗಳನ್ನೆಲ್ಲ ಕೇರಳಿಗರು ಚಪ್ಪರಿಸಿ ಓದಿದ್ದಾರೆ. ಅವಳ ಕಳರಿಪಟ್ಟಿನ ಹೋರಾಟದ ಐತಿಹ್ಯಗಳು ಇಂದಿಗೂ ಮಲಯಾಳಿಗರ ಮೈರೋಮಾಂಚನಗೊಳಿಸುತ್ತವೆ. ಈಗ್ಗೆರಡು ವರ್ಷಗಳ ಹಿಂದೆ ಬಂದ ಅವಳ ಕುಟುಂಬದ ಆರನೇ ತಲೆಮಾರಿನ ಮಾನಂತೇರಿ ಭಾಸ್ಕರನ್ ಬರೆದ ’ಕಳತ್ತನಾಟನ್ ನೊಂಬರಂಗಳ್’ ಎಂಬ ಕಾದಂಬರಿ ಕೇರಳದಲ್ಲಿ ಮತ್ತೆ ಬಿಸಿಬಿಸಿ ಚರ್ಚೆ ಹುಟ್ಟುಹಾಕಿತ್ತು. ಮಳಯಾಳಿ ಪೆಣ್ಕುಟ್ಟಿಗಳ ಸಾರ್ವಕಾಲಿಕ ಮಹಿಳಾ ಐಕಾನ್ ಆಗಿ ನಿಂತವಳವಳು. ಖ್ಯಾತ ಮಲಯಾಳಿ ಲೇಖಕ MT ವಾಸುದೇವನ್ ನಾಯರ್ ಬರೆದ ಕಥೆಯನ್ನಾಧರಿಸಿ ತಯಾರಾದ ಮಮ್ಮುಟ್ಟಿಯ ಅವಿಸ್ಮರಣೀಯ ಅಭಿನಯದ ’ಒರು ವಡಕ್ಕನ್ ವೀರಗಥಾ’ ಚಿತ್ರ ನೋಡಿದವರಾಗಿದ್ದರೆ ಅವಳ ಪಾತ್ರಮಾಡಿದ ಮಾಧವಿಯನ್ನು ನೀವು ಮರೆಯಲು ಸಾಧ್ಯವೇ ಇಲ್ಲ. ಹೌದು, ಅವಳು ಉನ್ನಿಯಾರ್ಚ. ಚೆಕವರ ಮನೆತನದ ಈ ಶೂರ ವೀರ ಕತ್ತಿರಾಣಿಯ ಕಥೆ ತಲೆಮಾರಿಂದ ತಲೆಮಾರುಗಳಿಗೆ ಮುಂದುವರೆದು ಇಂದಿಗೂ ಅಜ್ಜಿಕಥೆಗಳಲ್ಲಿ, ವಡಕ್ಕನ್ ಪಾಟ್ಟುಗಳೆಂಬ ಹಾಡುಗಬ್ಬಗಳಲ್ಲಿ ಬಂದುಹೋಗುತ್ತವೆ. ಅದರಲ್ಲೆಷ್ಟು ಸತ್ಯ, ಎಷ್ಟು ಸುಳ್ಳೆಂದು ತಲೆಕೆಡಿಸಿಕೊಂಡವರಿಲ್ಲ. ಅಷ್ಟರಮಟ್ಟಿಗೆ ಉನ್ನಿಯಾರ್ಚಾ ಫೇಮಸ್. 
ಕಳತ್ತನಾಟನ್ ನೊಂಬರಂಗಳ್ ಕಾದಂಬರಿ
ಒರು ವಡಕ್ಕನ್ ವೀರಗಥಾ
ಮಲಯಾಳ ಚಿತ್ರರಂಗದ ಮರಯಲಾಗದ ಸ್ತ್ರೀಪಾತ್ರಗಳಲ್ಲೊಂದು, ಉನ್ನಿಯಾರ್ಚೆಯಾಗಿ ಮಾಧವಿ

       MT ವಾಸುದೇವನ್ ನಾಯರ್ ಬರೆದ ಉನ್ನಿಯಾರ್ಚಾ ಮತ್ತವಳ ಪ್ರಿಯಕರ ಚಂದುವಿನ ಪಾತ್ರಗಳನ್ನಾಧರಿಸಿದ ಕಥೆಯಾದ ’ಒರು ವಡಕ್ಕನ್ ವೀರಗಥಾ’ ತುಂಬ ಹಿಂದೆಯೇ ನೋಡಿದ್ದೇನಾದರೂ ಉನ್ನಿಯಾರ್ಚೆಯ ಬಗ್ಗೆ ನನಗಷ್ಟು ಮಾಹಿತಿಯಿರಲಿಲ್ಲ. ಅವಳ ಬಗೆಗಿರುವ ಹಲವು ಹತ್ತು ಕಥೆಗಳಲ್ಲಿ ಅದೂ ಒಂದಷ್ಟೆ. ಕೆಲ ವರ್ಷಗಳ ಹಿಂದೆ ನಡಪುರಮ್ ಎಂಬ ಊರಿಗೆ ಹೋಗಿದ್ದಾಗ ಅಲ್ಲಿಂದ ಕಲ್ಲಾಚಿ ಎಂಬ ಸ್ಥಳಕ್ಕೆ ಹೋಗುವ ರಸ್ತೆಗೆ(ಕಲ್ಲಾಚಿ ಆವೋಲಮ್ ರಸ್ತೆ) ಮುಸ್ಲೀಮರು ಟಿಪ್ಪು ಸುಲ್ತಾನ್ ರಸ್ತೆ ಎಂದು ಕರೆದರೆ ಹಿಂದುಗಳು ಉನ್ನಿಯಾರ್ಚಾ ರಸ್ತೆ ಎಂದು ಕರೆಯುತ್ತಿದ್ದರು. ಅದೇನಪ್ಪಾ ಒಂದೇ ರಸ್ತೆಗೆ ಎರಡೆರಡು ಹೆಸರು ಎಂದುಕೊಂಡು ಊರವರನ್ನು ಕೇಳಿದರೆ ಆ ರಸ್ತೆಯನ್ನು ’ಪುತ್ತೂರಮ್’ ಮನೆತನದ ಮೇಲೆ ದಾಳಿಮಾಡಲು ನಿರ್ಮಿಸಿದವನು ಟಿಪ್ಪು ಸುಲ್ತಾನನಂತೆ. ಹಾಗಾಗಿ ಮುಸ್ಲೀಮರು ಅದಕ್ಕೆ ಟಿಪ್ಪುವಿನ ಹೆಸರಿಟ್ಟರು. ಅವನನ್ನೆದುರಿಸಿ ಹೋರಾಡಿದ ಉನ್ನಿಯಾರ್ಚೆಯ ನೆನಪಿಗೆ ಹಿಂದೂಗಳು ಆ ರಸ್ತೆಯನ್ನು ಅವಳ ಹೆಸರಿನಿಂದ ಕರೆದಳು. ಟಿಪ್ಪುವಿನ ಗಲಾಟೆಯ ಮಧ್ಯೆ ಅವಳು ನೆನಪಾದದ್ದೇಕೆಂದು ತಿಳಿಯಿತಲ್ಲ!
        ಹದಿನಾರನೇ ಶತಮಾನದಿಂದೀಚೆ ಮಲಬಾರಿನ ಚೆಕ್ಕನ್ ಅಥವಾ ಚೆಕವರ ಮನೆತನ ಯುದ್ಧಕಲೆಗಳಲ್ಲಿ ಬಹಳಷ್ಟು ಹೆಸರುವಾಸಿಯಾದುದಾಗಿತ್ತು. ಇದೇ ವೀರ ಮನೆತನದ ಪುತ್ತೂರಮ್ ವೀಡಿನ ಅಯ್ಯಪ್ಪ ಚೆಕವರನಿಗೆ ಅರೊಮಳ್ ಎಂಬ ಮಗ ಮತ್ತು ಉನ್ನಿಯಾರ್ಚ ಎಂಬ ಮಗಳು. ಆಕೆ ಹುಟ್ಟಿದ್ದು ೧೭೬೯ರಲ್ಲಿ ಮತ್ತು ಕುಞಿರಾಮನ್ನನನ್ನು ಮದುವೆಯಾದದ್ದು ೧೭೮೪ರಲ್ಲಿ ಎನ್ನಲಾಗುತ್ತದೆ. ಒಮ್ಮೆ ಅವರಿಬ್ಬರೂ ’ಅಲ್ಲಿಮಲರ್ ಕಾವು’ವಿನಲ್ಲಿ ನಡೆಯುತ್ತಿರುವ ಜಾತ್ರೆಯನ್ನು ನೋಡಲು ಹೋಗುತ್ತಿದ್ದರಂತೆ. ಆಗೆಲ್ಲ ಒಂದೂರಿಂದ ಇನ್ನೊಂದೂರಿಗೆ ತೆರಳಲು ಕಾಡುಹಾದಿಯನ್ನೇ ಹಿಡಿಯಬೇಕಿತ್ತು(ದ್ವಂದ್ವವೆಂದರೆ ಆ ಭಾಗದ ಮೊದಲ ರಸ್ತೆ ನಿರ್ಮಿಸಿದವನು ಟಿಪ್ಪು ಸುಲ್ತಾನ). ದಾರಿಮಧ್ಯದಲ್ಲಿ ಮೋಪ್ಳಾದ ಮಾಪಿಳ್ಳೆ ಡಕಾಯಿತರು ಎದುರಾದರು. ಪುಕ್ಕಲು ಕುಞಿರಾಮ ಹೆಂಡತಿಯೊಬ್ಬಳನ್ನೇ ಬಿಟ್ಟು ಕಾಲಿಗೆ ಬುದ್ಧಿ ಹೇಳಿದ್ದ. ಡಕಾಯಿತರ ವಿರುದ್ಧ ತಿರುಗಿ ಬಿದ್ದ ಉನ್ನಿಯಾರ್ಚ ತನ್ನೊಂದಿಗೆ ಯಾವಾಗಲೂ ಇಟ್ಟುಕೊಳ್ಳುತ್ತಿದ್ದ ಉರುಮಿಯಿಂದ ಒಬ್ಬನನ್ನೂ ಬಿಡದೇ ಸೆದೆಬಡಿದಳಂತೆ. ಆ ಘಟನೆಯ ನಂತರ ಇವಳಿಗೆ ಹೆದರಿ ಸುತ್ತಲಿನ ಊರುಗಳಿಗೆ ನುಗ್ಗಿ ಹಿಂಸಿಸುತ್ತಿದ್ದ ಡಕಾಯಿತರು ಅಲ್ಲಿಂದ ಕಾಲ್ಕಿತ್ತರು. ಜೊತೆಗೆ ಇದೇ ಘಟನೆಯಿಂದ ಮಲಬಾರಿನಲ್ಲೆಲ್ಲ ಅವಳ ಖ್ಯಾತಿ ಹರಡಿತು. ಕುಟ್ಟಿಪುರಂನ ದೇಗುಲದೆದುರು ಬ್ರಿಟಿಷರ ಜೊನಕಂಸ್‌ರ ಪಡೆಯನ್ನು(ಬ್ರಿಟಿಷರಿಗೆ ಶೂದ್ರ ಸ್ತ್ರೀಯರಲ್ಲಿ ಹುಟ್ಟಿದ ಮಕ್ಕಳು) ದೇವಸ್ಥಾನದ ಕೆರೆಯ ನೀರಿನಲ್ಲದ್ದಿದ ರುಮಾಲಿನಿಂದಲೇ ಹೊಡೆದಾಡಿ ಸೋಲಿಸಿದ ಘಟನೆಯನ್ನು ಆ ಊರಿನ ಜನ ಇಂದಿಗೂ ಅಭಿಮಾನದಿಂದ ಹೇಳಿಕೊಳ್ಳುತ್ತಾರೆ.(ಆ ದೇವಸ್ಥಾನ ಟಿಪ್ಪುವಿನ ಕಾಲದಲ್ಲಿ ಮಸೀದಿಯಾಯ್ತು)
ಟಿಪ್ಪುವಿನ ಕಾಲದಲ್ಲಿ ಮಸೀದಿಯಾಗಿ ಪರಿವರ್ತನೆಗೊಂಡ ನಡಪ್ಪುರಮ್ ದೇವಸ್ಥಾನ
        ಅವಳ ಅಣ್ಣ ಆರೋಮಳ್ ಕೂಡ ಅವಳಷ್ಟೆ ದೊಡ್ಡ ವೀರ. ಒಟ್ಟೂ ೪೨ ಕಳರಿ ಶಾಲೆಗಳಲ್ಲಿ ಪುತ್ತೂರಮ್ ಮನೆತನದ ಅಧೀನದಲ್ಲಿ ನಾಲ್ಕು ಕಳರಿ ಶಾಲೆಗಳೂ, ಅರಿಂಗೊಡನ್ ಮನೆತನದಡಿ ೧೮ ಶಾಲೆಗಳೂ ಇದ್ದವು. ಒಮ್ಮೆ ಆರೋಮಳನಿಗೆ ಅರಿಂಗೊಡನ್‌ನ ಕಡೆಯಿಂದ ’ಅಂಕಂ’ ಪಂದ್ಯಕ್ಕೆ ಆಹ್ವಾನ ಹೋಯಿತು. ’ಅಂಕಂ’ ಎಂಬುದು ಎರಡು ಯುದ್ಧಮನೆತನಗಳ ವೀರರ ನಡುವೆ ನಡೆಯುವ ದ್ವಂದ್ವಯುದ್ಧ. ಆ ಯುದ್ಧ ಅವರಲ್ಲೊಬ್ಬ ಸಾಯುವವರೆಗೆ ಮುಂದುವರೆಯುತ್ತದೆ. ಉನ್ನಿಯಾರ್ಚೆಯನ್ನು ಪ್ರೀತಿಸುತ್ತಿದ್ದ ಚಂದು ಅವಳು ಸಿಗದ ಸಿಟ್ಟಿಗೆ ಸ್ನೇಹಿತ ಆರೋಮಳನಿಗೆ ದ್ರೋಹವೆಸಗುತ್ತಾನೆ. ಚಂದುವಿನ ಕುತಂತ್ರದಿಂದ ಅಂಕಂ ಯುದ್ಧದಲ್ಲಿ ಆರೋಮಳ್ ಸಾವನ್ನಪ್ಪುತ್ತಾನೆ. ತನ್ನಣ್ಣನ ಸಾವಿಗೆ ಚಂದುವೇ ಕಾರಣವೆಂದರಿತ ಉನ್ನಿಯಾರ್ಚ ಅವನ ಮೇಲೆ ಸೇಡುತೀರಿಸಿಕೊಳ್ಳುವ ಶಪಥ ಮಾಡಿ ಮುಂದೆ ತನ್ನ ಮಗ ಆರೋಮಳ್ ಉನ್ನಿಯ ಮೂಲಕವೇ ಚಂದುವನ್ನು ಅಂಕಂನಲ್ಲಿ ಕೊಲ್ಲಿಸುತ್ತಾಳೆ. ಇದೇ ಕಥೆಯ ಸ್ವಲ್ಪ ವಿಭಿನ್ನವಾದ version, ಚಂದುವನ್ನು ನಾಯಕನನ್ನಾಗಿಟ್ಟುಕೊಂಡ 'ಒರು ವಡಕ್ಕನ್ ವೀರಗಥಾ'ದಲ್ಲಿದೆ. ಆದರೆ ಉನ್ನಿಯಾರ್ಚೆಗೆ ಕುಞಿರಾಮನಿಂದ ಹುಟ್ಟಿದ ಮಗನೊಬ್ಬನಿರಲಿಲ್ಲ. ಹಾಗಾದರೆ ಈ ಆರೋಮಳ್ ಉನ್ನಿ ಯಾರು? ಆರೋಮಳನಿಂದ ಅವನ ಪ್ರೇಯಸಿ ತುಂಬೊಳಾರ್ಚೆಗೆ ಹುಟ್ಟಿದ ಮಗ ಆರೋಮಳ್ ಉನ್ನಿಯನ್ನೇ ಬೆಳೆಸಿ ಉನ್ನಿಯಾರ್ಚೆ ಸೇಡು ತೀರಿಸಿಕೊಂಡಳೆಂಬ ಕಥೆಯೂ ಇದೆ. ಹಾಡುಗಬ್ಬಗಳು ಬಾಯಿಂದ ಬಾಯಿಗೆ ಹರಡಿ ಒಂದೇ ಘಟನೆ ಹತ್ತಾರು ಮುಖಪಡೆದು ಅವತರಿಸಿದ್ದೂ ಇದಕ್ಕೆ ಕಾರಣವಿರಬಹುದು.
ಇವೆಲ್ಲವನ್ನು ಬಿಟ್ಟು ಉನ್ನಿಯಾರ್ಚೆಯ ಇನ್ನೊಂದು ಮುಖ್ಯ ಕತೆಯೂ ಪ್ರಚಲಿತದಲ್ಲಿದೆ.
       ಕೇರಳದ ಮಟ್ಟಿಗೆ ಹೇಳುವುದಾದರೆ ಹದಿನೆಂಟನೆಯ ಶತಮಾನದಲ್ಲಿ ಎರಡು ಹೊಸ ಘಟನೆಗಳು ನಡೆದವು. ಮಾರ್ತಾಂಡವರ್ಮನ ತಿರುವಾಂಕೂರು ರಾಜ್ಯವು ದಕ್ಷಿಣ ಕೇರಳದಲ್ಲಿ ಪ್ರಾಬಲ್ಯ ಪಡೆದು ಕೊಚ್ಚಿಯ ಗಡಿಯವರೆಗೂ ಉತ್ತರಕ್ಕೆ ವ್ಯಾಪಿಸಿತು. ನಾಡದೊರೆಗಳ ಹಳೆಯ ಪ್ರಭುತ್ವವಾಗಲೇ ಕಾಲದ ಗತಿಯಿಂದಾಗಿ ದುರ್ಬಲವಾಗಿ ಹೋಗಿತ್ತು. ಸಮುದ್ರ ವ್ಯಾಪಾರ, ಆಧುನಿಕ ಯುರೋಪಿಯನ್ ರೀತಿಯಲ್ಲಿ ಸೈನ್ಯ ವ್ಯವಸ್ಥೆ ಮೊದಲಾದವುಗಳ ಆವಿಷ್ಕಾರದ ಮೂಲಕ ತಿರುವಾಂಕೂರ್ ಒಂದು ಹೊಸ ತೆರನ ಏಕಾಧಿಪತ್ಯ ರಾಜ್ಯವಾಯಿತು. ಇದೇ ರೀತಿಯ ಬದಲಾವಣೆಗಳು ಶಕ್ತನ್ ತಂಬುರಾನನ ಕಾಲದಲ್ಲಿ ಕೊಚ್ಚಿಯಲ್ಲೂ ಉಂಟಾಯಿತು. ಆದರೆ ಚಾರಿತ್ರಿಕವಾದ ಕೆಲವು ಕಾರಣಗಳಿಂದಾಗಿ ಆ ರಾಜ್ಯ ತಿರುವಾಂಕೂರಿನಂತೆ ಹೊಸ ದಾರಿಯಲ್ಲಿ ಪ್ರವರ್ಧಮಾನಕ್ಕೆ ಬರಲಿಲ್ಲ. ಕೇರಳದಲ್ಲಿ ಹಲವು ಭಾಗಗಳಾಗಿ ಬೇರೆ ಬೇರೆ ಆಡಳಿತಗಾರರ ಆಳ್ವಿಕೆ ಕಂಡರೂ ಬಂದೂಕುಗಳು ಬರುವವರೆಗೆ ಅಲ್ಲಿನ ವೀರ ಸೇನಾನಿಗಳಾದ ನಾಯರರನ್ನೆದುರಿಸುವ ಧೈರ್ಯವನ್ನು ಯಾವ ಹೊರ ರಾಜ್ಯದವರೂ ಮಾಡಲಿಲ್ಲ. ಹಾಗಾಗಿ ಪೋರ್ಚುಗೀಸರು ಕಾಲಿಡುವವರೆಗೆ ಕೇರಳ ಅತಿ ಸಂಪದ್ಭರಿತ ನಾಡಾದರೂ ಅದರ ಮೇಲಾದ ಆಕ್ರಮಣ ಕಡಿಮೆಯೇ..
       ಅದೇ ಶತಮಾನದ ಉತ್ತರಾರ್ಧದಲ್ಲಿ ನಡೆದ ಒಂದು ದೊಡ್ಡ ರಾಜಕೀಯ ದುರಂತವೆಂದರೆ ದಂಗೆಯ ಮೂಲಕ ಮೈಸೂರಿನಲ್ಲಿ ಅಧಿಕಾರಕ್ಕೇರಿದ್ದ ಹೈದರ್ ಅಲಿ ಸತ್ತು ಅವನ ಮಗ ಟಿಪ್ಪು ಸುಲ್ತಾನ್ ಪಟ್ಟಕ್ಕೆ ಬಂದಿದ್ದು. ಕೊಡಗನ್ನು ದಾಟಿ ಬಂದಿದ್ದ ಟಿಪ್ಪುವಿನ ಕಣ್ಣು ಭಾರತದ ಅತಿ ಶ್ರೀಮಂತ ರಾಜ್ಯವಾಗಿದ್ದ, ವ್ಯಾಪಾರ-ವ್ಯವಹಾರಗಳಲ್ಲಿ ದೇಶವಿದೇಶಗಳಲ್ಲೆಲ್ಲ ಹೆಸರು ಮಾಡಿದ್ದ ಕೇರಳದ ಮೇಲೆ ಬಿದ್ದಿದ್ದು ಸಹಜವೇ. ಶೃಂಗೇರಿ ಮಠಕ್ಕೆ ದಾನಕೊಟ್ಟವನೆಂಬ ಹೆಗ್ಗಳಿಕೆ ಹೊತ್ತವ ಕೇರಳದ ೮೦೦೦ ದೇವಸ್ಥಾನಗಳನ್ನು ನಾಶಮಾಡಿದ್ದು ಆಲ್ಲಿನ ಅಪಾರ ಸಂಪತ್ತಿನ ಆಸೆಗಾಗಿಯೇ. ತಿರುವನಂತಪುರ ಅನಂತಪದ್ಮನಾಭನಲ್ಲೇ ಕೆಲವು ಲಕ್ಷಕೋಟಿಯ ಸಂಪತ್ತಿರಬೇಕಾದರೆ ಆತ ನಾಶ ಮಾಡಿದ ೮ ಸಾವಿರ ಚಿಲ್ಲರೆ ದೇವಸ್ಥಾನಗಳಿಂದ ಇನ್ನೆಷ್ಟು ಸಂಪತ್ತು ಕೊಳ್ಳೆಹೊಡೆದಿರಬಹುದು. ಕಾಸರಗೋಡು, ಕಣ್ಣಾನೂರು ದಾರಿಯಾಗಿ ಸಾಮೂದಿರಿಯ(ಝಾಮೋರಿನ್) ಅಧಿಕಾರದಲ್ಲಿದ್ದ ಕೋಝಿಕೋಡನ್ನು ಆಕ್ರಮಣ ಮಾಡಿದ. ಮಾರ್ತಾಂಡವರ್ಮನಿಗಿದ್ದಂತೆ ಪಾಶ್ಚಾತ್ಯ ವಿರೋಧದ ಹಿನ್ನೆಲೆಯಲ್ಲಿನ ಸಾಮೂದಿರಿಗೆ ಯುರೋಪಿಯನ್ ತರಬೇತಿಯ ದೀರ್ಘಾಲೋಚನೆ ಇದ್ದಿರಲಿಲ್ಲ. ಮೈಸೂರಿನ ಮುಸಲ್ಮಾನ ಆಡಳಿತಾಧಿಕಾರಿಗಳು ಉಪಾಯದಿಂದ ಕಣ್ಣೂರಿನ ಅರಕ್ಕಲ್ ಅಲಿ ರಾಜ ನೊಂದಿಗೆ ಸ್ನೇಹ ಬೆಳೆಸಿದ್ದರಿಂದ ಸಾಮೂದಿರಿಗೆ ಮಾಪಿಳ್ಳೆಯರ ಸಹಾಯವೂ ನಿಂತು ಹೋಯಿತು. ಕೊನೆಗೆ ರಾಜನು ಸೋಲಿನ ಅಪಮಾನಕ್ಕೆ ಹೆದರಿ ಅರಮನೆಯ ಸಿಡಿಮದ್ದು ಭಂಡಾರಕ್ಕೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆ ಮೂಲಕ ಮಲಬಾರಿನಲ್ಲಿ ಮೈಸೂರಿನ ಸೈನಿಕ ಆಡಳಿತ ಸ್ಥಾಪಿತವಾಯಿತು. ಪಾಲ್ಘಾಟನ್ನು ಮಲಬಾರಿನ ಒಳಹೊಕ್ಕಲು ಹೆಬ್ಬಾಗಿಲಾಗಿ ಟಿಪ್ಪು ಬಳಸಿಕೊಂಡರೂ ಅಲ್ಲಿ ಅವನ ಕ್ರೌರ್ಯ ಕೊಡಗಿನಂತೆ ಹೆಚ್ಚು ಪ್ರದರ್ಶನವಾಗಲಿಲ್ಲ. ಅದಕ್ಕೆ ಮುಖ್ಯ ಕಾರಣವೆಂದರೆ ಪಾಲ್ಘಾಟಿನ ದೇವಾಲಯಗಳ ಬಡತನ ಮತ್ತು ಸ್ಥಳೀಯ ಜನಸಂಖ್ಯೆಯಲ್ಲಿ ಹಿಂದೂಗಳ ಪ್ರಾಬಲ್ಯವೇ ಕಾರಣವಿರಬಹುದು. ಮಲಬಾರ್ ಸುಲಭದ ತುತ್ತಾಗಿದ್ದು ಆ ಭಾಗದ ಮಾಪಿಳ್ಳೆ ಮುಸ್ಲೀಮರು ಟಿಪ್ಪುವಿನ ಜೊತೆ ಕೈಜೋಡಿಸಿದ್ದರಿಂದಾಗಿಯೇ.
        ೧೭೯೯ರಲ್ಲಿ ಬ್ರಿಟಷ್ ಈಸ್ಟ್ ಇಂಡಿಯಾ ಕಂಪನಿಯವರು ಟಿಪ್ಪುವನ್ನು ಕೊಂದು ಮಲಬಾರನ್ನು ಅಧೀನಕ್ಕೊಳಪಡಿಸಿದ ಮೇಲೆಯೇ ಅಲ್ಲಿ ಶಾಂತಿ ಪುನಃ ಸ್ಥಾಪಿತವಾದದ್ದು. ಫ್ರೆಂಚ್ ಸಹಾಯವೂ ಕೊನೆಗೆ ಟಿಪ್ಪುವನ್ನು ರಕ್ಷಿಸಲಿಲ್ಲ. ಟಿಪ್ಪುವಿನ ಆಕ್ರಮಣಶೀಲ ಗುಣ, ಅಸಹಿಷ್ಣುತೆಗಳು ಚಿಕ್ಕ ಪುಟ್ಟ ರಾಜರುಗಳನ್ನೆಲ್ಲ ಬ್ರಿಟಿಷರೆಡೆಗೆ ಒಲವು ತೋರುವಂತೆ ಮಾಡಿತು. ಆತನಿಗೆ ಆದ ಸೋಲು ದಕ್ಷಿಣ ಭಾರತದಲ್ಲಿ ಬ್ರಿಟಿಷ್ ಅಧಿಪತ್ಯವನ್ನು ಸುಲಭವಾಗಿಸಿತು. ಇದರಿಂದ ಕೋಝಿಕೋಡ್ ನಾಶವಾದ್ದಷ್ಟೇ ಅಲ್ಲ ಮಲಬಾರಿನ ಪರಂಪರಾಗತ ಸಮಾಜ ಕುಸಿದು ಎರಡು ಶತಮಾನಗಳ ಕಾಲ ಆ ಪ್ರದೇಶ ಪ್ರಗತಿ ಹೊಂದದೇ ಉಳಿಯುವುದಕ್ಕೆ ಕಾರಣವಾಯಿತು. ಅಂದರೆ ಮಲಬಾರಿನ ರಾಜರುಗಳು, ನಾಡದೊರೆಗಳು, ಟಿಪ್ಪುವಿನ ಮತಾಂತರಕ್ಕೆ ಹೆದರಿ ಓಡಿದ ಅನೇಕ ಜನಸಾಮಾನ್ಯರು ಅಂದು ಅಭಯವನ್ನು ಆಶ್ರಯಿಸಿ ಸೇರಿದ್ದು ಕೊಚ್ಚಿ ಮತ್ತು ತಿರುವಾಂಕೂರಿನಲ್ಲಿ. ಮೈಸೂರಿನ ವಿರೋಧವೇ ಮಲಯಾಳಿಗರ ಸೌಹಾರ್ದವನ್ನು ಪ್ರಬಲಗೊಳಿಸಿತು. ೧೭೯೦ರಲ್ಲಿ ಮಲಬಾರನ್ನು ಗೆದ್ದ ಮೇಲೆ ಟಿಪ್ಪೂ ತಿರುವಾಂಕೂರನ್ನಾಕ್ರಮಿಸಲು ನೋಡಿದ. ನಿರಾಶ್ರಿತ ಮಲಬಾರಿಗಳ ರಕ್ಷಣೆ ಮಾಡಿ ಧರ್ಮರಾಜನೆಂದೇ ಹೆಸರಾಗಿದ್ದ ಅಲ್ಲಿನ ಅರಸು ಪದ್ಮನಾಭದಾಸ ರಾಜಾ ರಾಮವರ್ಮನನ್ನು ಗೆದ್ದು ಇಸ್ಲಾಮಿಗೆ ಮತಾಂತರಿಸುವುದಾಗಿ ಬದ್ರೂಸ್ ಸಮಾನ್ ಖಾನಿನ ಹತ್ತಿರ ಕೊಚ್ಚಿಕೊಂಡು ಹೊರಟ ಟಿಪ್ಪು ತಿರುವಾಂಕೂರಿನ ಮೇಲೆ ದಂಡೆತ್ತಿ ಹೋದ. ಅಲ್ಲಿನವರು ಸುಮ್ಮನೆ ಬಿಡುತ್ತಾರೆಯೇ? ಟಿಪ್ಪುವಿನ ಕಾಲುಮುರಿದು ಪಟ್ಟದ ಕತ್ತಿಯನ್ನು ಕಿತ್ತುಕೊಂಡು ಒದ್ದು ಕಳುಹಿಸಿದರು. ಅಲ್ಲಿಂದ ಮುಂದೆ ಟಿಪ್ಪುವಿನ ಒಂದು ಕಾಲು ಶಾಶ್ವತವಾಗಿ ಕುಂಟಾಯಿತು. ಖಡ್ಗ ವಿಜಯ ಮಲ್ಯನ ಕಾಲದಲ್ಲಿ ವಾಪಸ್ ಬಂದಿತು. ಟಿಪ್ಪು ಕನಸು ಮನಸಿನಲ್ಲೂ ಯೋಚಿಸದ ಘೋರ ಸೋಲದು. ಅವನ ಸೇನಾಬಲಕ್ಕೆ ಹೋಲಿಸಿದರೆ ತ್ರಾವೆಂಕೂರಿನ ಶಕ್ತಿ ಕಡಿಮೆಯೇ. ಟಿಪ್ಪು ತ್ರಾವೆಂಕೂರಿನತ್ತ ಬರುತ್ತಿದ್ದುದನ್ನು ತಿಳಿದ ಕೂಡಲೆ ಉಪಾಯ ಹೂಡಿದ ಸೇನಾಪತಿ ಕಳಿಕುಟ್ಟಿ ನಾಯರ್ ಆಲ್ವಾಯ್ ನದಿಗೆ ತಾತ್ಕಾಲಿಕ ಅಣೆಕಟ್ಟೊಂದು ನಿರ್ಮಿಸಿದ. ಮೈಸೂರಿನ ಸೈನ್ಯ ಅಲ್ವಾಯ್ ನದಿದಡದಲ್ಲಿ ಬೀಡುಬಿಟ್ಟಿತ್ತು. ಯುದ್ಧ ಶುರುವಾಗುತ್ತಿದ್ದಂತೆ ತ್ರಾವೆಂಕೋರಿನ ಸೈನಿಕರು ಅಣೆಕಟ್ಟಿನ ಒಡ್ಡನ್ನು ಒಡೆದುಬಿಟ್ಟರು. ಟಿಪ್ಪುವಿನ ಅರ್ಧ ಸೈನ್ಯ ನದಿಯ ಪ್ರವಾಹದಲ್ಲಿ ಕೊಚಿಹೋಗಿತ್ತು. ಗನ್‌ಪೌಡರ್, ಮಿಸೈಲುಗಳೆಲ್ಲ ಒದ್ದೆಯಾಗಿ ಕೆಲಸಕ್ಕೆ ಬಾರದವಾದವು. ಬೇಸಿಗೆಯಲ್ಲಿ ಇಂಥ ಪ್ರವಾಹ ಬಂದುದು ಹೇಗೆಂದು ಪಿಳಿಪಿಳಿ ಕಣ್ಣುಬಿಟ್ಟು ನೋಡುತ್ತಿದ್ದ ಮೈಸೂರಿನ ಸೇನೆಯನ್ನು ಪ್ರಧಾನಮಂತ್ರಿ ರಾಜಾ ಕೇಶವದಾಸ ಮತ್ತು ಸೇನಾನಿ ಕಳಿಕುಟ್ಟಿ ನಾಯರನ ನೇತೃತ್ವದಲ್ಲಿ ಮುಗಿಬಿದ್ದ ತ್ರಾವೆಂಕೂರು ಪಡೆ ಬಗ್ಗುಬಡಿದಿತ್ತು. ಜನವರಿ ೧, ೧೭೯೦ರಂದು ಒಂದು ಕಾಲು ಮುರಿದುಕೊಂಡು ಮೈಯೆಲ್ಲ ಗಾಯವಾಗಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಮೈಸೂರು ಹುಲಿ ಬೋನಿಗೆ ಬಿದ್ದ ಇಲಿಯಂತೆ ಸಿಕ್ಕಿಬಿದ್ದ. ಆ ಜಾಗದಲ್ಲಿ ಯಾರಾದರೂ ಮುಸ್ಲಿಂ ಅರಸರಿದ್ದರೆ ಟಿಪ್ಪುವಿನ ಕಥೆ ಅವತ್ತೇ ಮುಗಿದಿತ್ತು. ಆದರೆ ತಿರುವಾಂಕೂರು ಸಂಸ್ಥಾನದವರು ಕ್ಷಮಾ ಪರಮೋ ಧರ್ಮಃ ಎಂಬುದನ್ನೇ ನಂಬಿದ್ದವರು. ಅವರ ರಕ್ತದ ಕಣಕಣದಲ್ಲೂ ಹರಿಯುತ್ತಿದ್ದುದು ಸನಾತನ ಧರ್ಮದ ಗುಣಗಳು. ಪಟ್ಟದ ಕತ್ತಿ, ಪಟ್ಟದುಂಗುರ, ಡ್ಯಾಗರ್ ಮತ್ತಿತರ ಸಾಮಾನುಗಳನ್ನಿಟ್ಟುಕೊಂಡು ಎಚ್ಚರ ತಪ್ಪಿ ಬಿದ್ದಿದ್ದ ಟಿಪ್ಪುವನ್ನು ರಾತ್ರೋರಾತ್ರಿ ಮೈಸೂರಿನ ಕ್ಯಾಂಪಿಗೆ ಬಿಟ್ಟುಬಂದರು. ಮರುವರ್ಷ ಮೈಸೂರು ಸೈನ್ಯ ಎರಡನೇ ಬಾರಿ ದಾಳಿಮಾಡಲು ಪ್ರಯತ್ನಿಸಿ ಮತ್ತೊಮ್ಮೆ ಕೈಸುಟ್ಟುಕೊಂಡಿತು.
ಟಿಪ್ಪುವಿನ ಅಸಲಿ ಚಿತ್ರ!!!

       ಹೀಗೆ ತಿರುವಾಂಕೂರನ್ನಾಕ್ರಮಿಸುವ ಪ್ರಯತ್ನ ಪ್ರತಿಬಾರಿಯೂ ಫಲಿಸದೇ ಹೋದಾಗಲೂ ಅವನ ಕೈಗೆ ಲೂಟಿ ಹೊಡೆಯಲು ಸಿಕ್ಕಿದ್ದು ಮಲಬಾರೇ. ಮಲಬಾರಿನಲ್ಲಿ ತಿರುವಾಂಕೂರು, ಕೊಚ್ಚಿಯಂತೆ ಸಮರ್ಥ ನಾಯಕರಾಗಲೀ, ಟಿಪ್ಪುವನ್ನೆದುರಿಸುವ ದೊಡ್ಡ ರಾಜರಾಗಲೀ ಇರಲಿಲ್ಲ. ಸಣ್ಣ ಸಣ್ಣ ಪಾಳೆಯಗಾರರಾಗಿದ್ದ ಅನೇಕ ನಾಯನ್ಮಾರರು ಮಾತ್ರ ಶೀತಲ ಸಮರವನ್ನು ಮುಂದುವರೆಸಿದ್ದರು. ಹಾಗೆ ಟಿಪ್ಪುವಿನ ಹೋರಾಡಿದವರಲ್ಲಿ ಪುತ್ತೂರಮ್ ಮನೆತನದವರೂ ಒಬ್ಬರು. ಉನ್ನಿಯಾರ್ಚೆಯ ವೀರಗಾಥೆ ಕೇಳಿದ್ದ ಟಿಪ್ಪು ಅಲ್ಲಿಯೂ ಮುತ್ತಿಗೆ ಹಾಕಿದ. ಆ ಸಣ್ಣ ಗುಂಪು ಟಿಪ್ಪುವಿನ ದೊಡ್ಡ ಸೈನ್ಯದೆದುರು ಎಷ್ಟು ಹೊತ್ತು ಹೋರಾಡೀತು? ಪಟ್ಟು ಬಿಡದ ಉನ್ನಿಯಾರ್ಚ ಸಂಗಡಿಗರೊಂದಿಗೆ ಗೆರಿಲ್ಲಾ ಯುದ್ಧ ಮುಂದುವರೆಸಿದಳು.  ಆದರೆ ಅಷ್ಟರಲ್ಲಿ ಅವಳ ಕುಟುಂಬ ಟಿಪ್ಪುವಿನ ಕೈಲಿ ಸಿಕ್ಕಿಬಿತ್ತು. ಶರಣಾಗದಿದ್ದರೆ ಅವಳ ಇಡೀ ಕುಟುಂಬವನ್ನು ಕತ್ತರಿಸಿ ಎಸೆಯುವುದಾಗಿ ಟಿಪ್ಪು ಬೆದರಿಕೆ ಹಾಕಿದ. ಉನ್ನಿಯಾರ್ಚೆಗೆ ಶರಣಾಗುವುದನ್ನು ಬಿಟ್ಟರೆ ಬೇರೆ ದಾರಿಯಿರಲಿಲ್ಲ. ಅವಳ ಅಪ್ರತಿಮ ಸೌಂದರ್ಯಕ್ಕೆ ಮನಸೋತಿದ್ದ ಟಿಪ್ಪು ಉನ್ನಿಯಾರ್ಚೆಯನ್ನು ಉಪಪತ್ನಿಯಾಗಿಸಿ ಶ್ರೀರಂಗಪಟ್ಟಣದ ತನ್ನ ಜನಾನಾ ಸೇರಿಸಿದ. ಸೆರೆಯಲ್ಲಿದ್ದರೂ ಉನ್ನಿ ಸೇಡು ತೀರಿಸಿಕೊಳ್ಳಲು ಸಮಯ ಕಾಯುತ್ತಲೇ ಇದ್ದಳು. ಇದಾಗಿ ಒಂದೆರಡು ವರ್ಷದಲ್ಲೇ ಟಿಪ್ಪು ಸತ್ತ. ಮರಣಾನಂತರ ಆಕೆ ತಿರುಗಿ ತಲಶ್ಶೇರಿಗೆ ಮರಳಿದಳೆಂದು ಒಂದು ಕತೆ ಹೇಳಿದರೆ, ಆಕೆ ಸಾಯುವವರೆಗೂ ಕೃಷ್ಣರಾಜ ಒಡೆಯರ ಆಸ್ಥಾನದಲ್ಲೇ ಇದ್ದಳೆನ್ನುತ್ತದೆ ಇನ್ನೊಂದು ಕಥೆ(ಹೈದರಾಲಿಯ ಕಾಲದಿಂದಲೂ ಮಲಬಾರು ಪ್ರಾಂತ್ಯದ ವ್ಯವಹಾರ ನೋಡಿಕೊಳ್ಳುತ್ತಿದ್ದ ದಿವಾನ್ ಪೂರ್ಣಯ್ಯನವರ ಸಹಾಯದಿಂದಿರಬಹುದು!). ಟಿಪ್ಪೂವಿನ ಜನಾನಾದಲ್ಲಿ ಆರುನೂರಕ್ಕೂ ಹೆಚ್ಚು ಹೆಂಗಸರಿದ್ದರೆಂದು ದಾಖಲೆಗಳು ಹೇಳುತ್ತವೆ.(ಅಷ್ಟೆಲ್ಲ ಜನ ಯಾಕೆಂದು ನನಗಂತೂ ಗೊತ್ತಿಲ್ಲ!!) ಅವರಲ್ಲಿ ಹೆಚ್ಚಿನವರೆಲ್ಲ ಮೇಲ್ವರ್ಗದ ಹಿಂದೂಗಳು. ಯುದ್ಧದಲ್ಲಿ ಮೃತಪಟ್ಟ ಶತ್ರುಪಕ್ಷದ ಅರಸರ, ಸೈನಿಕರ ಹೆಂಡತಿಯರೆಲ್ಲ ಟಿಪ್ಪುವಿನ ಜನಾನಾಕ್ಕೆ ರವಾನೆಯಾಗುತ್ತಿದ್ದರು.  ಸುಲ್ತಾನನನ್ನು ಮೆಚ್ಚಿಸಲು ಹೆಣ್ಮಕ್ಕಳನ್ನು ಉಡುಗೊರೆಯಾಗಿ ಕೊಡುವ ಪದ್ಧತಿಯೂ ಆಗ ಇತ್ತೆನ್ನಿ. ಕರ್ನಾಟಕ, ಕೇರಳ ಮಾತ್ರವಲ್ಲ  ಪರ್ಷಿಯಾ, ಯುರೋಪ್, ಟರ್ಕಿ, ಆರ್ಕಾಟ್, ಹೈದ್ರಾಬಾದ್, ದೆಹಲಿಯ ಮಹಿಳೆಯರೂ ಟಿಪ್ಪುವಿನ ಜನಾನಾದಲ್ಲಿದ್ದರಂತೆ. ಉನ್ನಿಯಾರ್ಚೆಯೂ ಅವರಲ್ಲೊಬ್ಬಳಾಗಿದ್ದಳೇ? ಮನೋರಮಾ ಪತ್ರಿಕೆಯಲ್ಲಿ ಟಿಪ್ಪುವಿನ ಜನಾನಾದಲ್ಲಿದ್ದ ಉನ್ನಿಯಾರ್ಚೆಯ ಬಗ್ಗೆ ಲೇಖನವೊಂದು ಎರಡ್ಮೂರು ವರ್ಷಗಳ ಹಿಂದೆ ಬಂದ ನೆನಪಿದೆ. ಟಿಪ್ಪುವಿನ ಪ್ರಿಯಪತ್ನಿಯರಲ್ಲಿ ಅವಳೂ ಒಬ್ಬಳಾಗಿದ್ದಳೆಂದು ಅದರುಲ್ಲೇಖವಿತ್ತು.
       ಕೆ.ಕೆ.ಎನ್ ಕುರುಪ್‌ರ ’ನವಾಬ್ ಟಿಪ್ಪು ಸುಲ್ತಾನ್’, ಗಿಡ್ವಾಣಿಯ ’ಸ್ವಾರ್ಡ್ ಆಫ್ ಟಿಪ್ಪು ಸುಲ್ತಾನ್’ ಮುಂತಾದವುಗಳಲ್ಲಿ ಟಿಪ್ಪುವಿನ ನಾಲ್ಕೈದು ಪತ್ನಿಯರ ಹೆಸರು ಮಾತ್ರವಿದೆ. ರುಕಯ್ಯಾ ಬಾನು, ರೊಶಿನಿ ಬೇಗಮ್, ಖದೀಜಾ ಜಮಾನಾ, ಪಾದಶಾ ಬೇಗಮ್ ಮತ್ತು ಇನ್ನಿಬ್ಬಳು ದೆಹಲಿಯ ಬುರಂತಿ ಬೇಗಮ್. ಇವರೆಲ್ಲ ಮೂಲತಃ ಅಥವಾ ಮತಾಂತರಿ ಮುಸ್ಲೀಮರು. ಆ ಪಟ್ಟಿಯಲ್ಲಿ ಉನ್ನಿಯಾರ್ಚೆಯ ಹೆಸರಿಲ್ಲ. ಟಿಪ್ಪುವಿಗೆ ಹಿಂದೂ ಹೆಂಡತಿಯಿಂದ ಅಬ್ದುಲ್ ಖಾಲೀಕ್ ಎಂಬೊಬ್ಬ ಮಗನಿದ್ದನೆಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಈ ಅಬ್ದುಲ್ ಖಾಲೀಕ್ ಮತ್ತು ಫತೇ ಹೈದರ್ ಇಬ್ಬರೂ ಬ್ರಿಟಿಷರ ಒತ್ತೆಯಾಳಾಗಿದ್ದ ಟಿಪ್ಪುವಿನ ಮಕ್ಕಳು. ಅಬ್ದುಲ್ ಖಾಲೀಕ್ ಮುಂದೆ ಕಣ್ಣೂರಿನ ಅರಕ್ಕಲ್ ಬಿಬಿಯ ಮಗಳನ್ನು ಮದುವೆಯಾನಂತೆ. ಹಾಗಾದರೆ ಈ ಅಬ್ದುಲ್ ಖಾಲೀಕ್ ಅದೇ ಕಣ್ಣೂರು ಪ್ರದೇಶದ ಉನ್ನಿಯಾರ್ಚೆಗೆ ಹುಟ್ಟಿದ ಟಿಪ್ಪುವಿನ ಮಗನಾಗಿರಬಹುದೇ? ಟಿಪ್ಪು ಸತ್ತನಂತರ ಬ್ರಿಟಿಷರು ಅವನ ಉಪಪತ್ನಿಯರನ್ನು ಜನಾನಾದಿಂದ ಬಿಡುಗಡೆಗೊಳಿಸಿದರು. ಕೆಲವರು ತಮ್ಮ ಊರುಗಳಿಗೆ ಹಿಂದಿರುಗಿದರೆ ಇನ್ನು ಕೆಲವರನ್ನು ಬ್ರಿಟಿಷರು ವೆಲ್ಲೂರಿಗೆ ಸ್ಥಳಾಂತರಿಸಿದರು. ಹೀಗೆ ಬಿಡುಗಡೆಗೊಂಡವರಲ್ಲಿ ಒಬ್ಬಳು ಮಲಬಾರ್ ಪ್ರದೇಶದವಳಿದ್ದಳೆಂದು ಆ ಕೆಲಸದ ಉಸ್ತುವಾರಿ ವಹಿಸಿದ್ದ ಅರ್ಥರ್ ವೆಲ್ಲೆಸ್ಲಿ ಮತ್ತು ಕರ್ನಲ್ ಥಾಮಸ್ ಮಾರಿಯೋಟ್‌ನ ಬರಹಗಳು ತಿಳಿಸುತ್ತವೆ. ಆಕೆ ಉನ್ನಿಯಾರ್ಚೆಯಾಗಿದ್ದರೂ ಇರಬಹುದೇ? ಆ ನಂತರ ಅವಳು ಮೈಸೂರಿನಲ್ಲೇ ನೆಲೆಸಿದ್ದರೆ  ‘Annals of The Mysore Royal Family’ನಲ್ಲಿ ಆ ಬಗ್ಗೆ ಮಾಹಿತಿ ಸಿಗಬಹುದೇನೋ.
       ಇಡೀ ಕಥೆಯ ಅತಿದೊಡ್ಡ ಮಿಸ್ಸಿಂಗ್ ಲಿಂಕ್ ಎಂದರೆ ಅವಳ ಬಗ್ಗೆ ಇರುವ ಲೆಕ್ಕವಿಲ್ಲದಷ್ಟು ಹಾಡುಗಬ್ಬಗಳೇ. ಅವಳ ಮತ್ತು ಚಂದುವಿನ ಶತೃತ್ವದ ಕಥೆ ನಿಜವಾಗಿದ್ದರೆ ಆಕೆ ತನ್ನ ಮಗನನ್ನು ಬೆಳೆಸಲು ಮಲಬಾರಿನಲ್ಲೇ ಇರಬೇಕಾಯಿತು. ಇಲ್ಲಾ, ಆಕೆ ಟಿಪ್ಪೂವಿನ ಜನಾನಾದಲ್ಲಿದ್ದರೆ ಟಿಪ್ಪು ಸತ್ತ ನಂತರ ಎಲ್ಲಿ ಹೋದಳೆಂಬುದಕ್ಕೆ ಸರಿಯಾದ ಆಧಾರವಿಲ್ಲ. ಟಿಪ್ಪು ಸತ್ತ ನಂತರ ಅವನ ಹೆಂಡತಿ ಮಕ್ಕಳಿಗೆ ಬ್ರಿಟಿಷರ ಕಡೆಯಿಂದ ಪಿಂಚಣಿ ಸಂದಾಯವಾಗುತ್ತಿತ್ತು. ಆ ಹೆಂಡತಿಯರ ಲಿಸ್ಟಿನಲ್ಲಿ ಉನ್ನಿಯಾರ್ಚೆಯ ಹೆಸರಿಲ್ಲದಿರುವುದರಿಂದ ಆಕೆ ವೆಲ್ಲೂರಿಗೆ ಹೋಗಿರಲಿಕ್ಕಂತೂ ಸಾಧ್ಯವಿಲ್ಲ. ಆರೋಮಳ್ ಮತ್ತು ಉನ್ನಿಯಾರ್ಚೆಯ ಕಥೆ ಟಿಪ್ಪು ಮಲಬಾರಿನ ಮೇಲೆ ದಾಳಿ ಮಾಡುವುದಕ್ಕಿಂತ ಹಿಂದೆ ನಡೆದಿದ್ದಿರಬೇಕು. ಅದೊಂದು ನಿರಾಕರಿಸಲಾಗದ ಐತಿಹಾಸಿಕ ಘಟನೆ. ಜೊತೆಗೆ ಜನಪದವೆಂಬುದೂ ಶೂನ್ಯದಿಂದ ಸೃಷ್ಟಿಯಾಗುವುದಿಲ್ಲ. ಆದರೆ ಆಕೆಗೊಬ್ಬ ಮಗನಿದ್ದನೆಂಬ ವಿಷಯ ಪ್ರಶ್ನಾರ್ಹ. ಮುಂದೆ ಆಕೆ ಮಲಬಾರಿಗೆ ತಿರುಗಿ ಬಂದು ಆರೋಮಳನ ಮಗನನ್ನು ಬೆಳೆಸಿ ಚಂದುವಿನ ವಿರುದ್ಧ ಸೇಡು ತೀರಿಸಿಕೊಂಡಿರಬಹುದೇ? ತಿಳಿದುಕೊಳ್ಳುವ ಕುತೂಹಲ ನನಗೂ ಇದೆ.
ಎಲ್ಲೋ ಓದಿದ್ದು: ಹೈದರಾಲಿಗೆ ಬಹಳ ಕಾಲವಾದರೂ ಮಕ್ಕಳಾಗಲಿಲ್ಲವಂತೆ. ಕೊನೆಗೆ ಚಿತ್ರದುರ್ಗದ ನಾಯಕನ ಹಟ್ಟಿಯ ತಿಪ್ಪೇರುದ್ರಸ್ವಾಮಿಯೆಂಬ ಸಾಧುವಿನ ದರ್ಶನ ಮಾಡಿ ಆಶೀರ್ವಾದ ಪಡೆದನಂತೆ. ಇದಾಗಿ ಕೆಲ ಸಮಯದ ನಂತರ ಹೈದರನಿಗೆ ಮಗನೊಬ್ಬ ಹುಟ್ಟಿದ್. ಚಿತ್ರದುರ್ಗದ ಸುತ್ತಮುತ್ತ ಮತ್ತು ಆಂದ್ರದ ಗಡಿಭಾಗದಲ್ಲಿ ತಿಪ್ಪೆಸ್ವಾಮಿ, ತಿಪ್ಪೇಶ್, ತಿಪ್ಪೆರುದ್ರ ಎಂಬುದೆಲ್ಲ ಬಹಳ ಪ್ರಚಲಿತದಲ್ಲಿರುವ ಹೆಸರುಗಳು. ಹಾಗೆ ತಿಪ್ಪೆಸ್ವಾಮಿಯ ಆಶೀರ್ವಾದದಿಂದ ಹುಟ್ಟಿದ ಮಗನಿಗೆ ಹೈದರಾಲಿ ತಿಪ್ಪೆ ಸುಲ್ತಾನನೆಂದು ಹೆಸರಿಟ್ಟ. ಅದೇ ಮುಂದೆ ಬ್ರಿಟಿಷರ ಬಾಯಲ್ಲಿ ಟಿಪ್ಪು ಸುಲ್ತಾನನಾಯಿತು!!!!

Saturday, September 12, 2015

ಕೊಲ್ಕತ್ತಾ ಡೈರಿ: ಪಠಾಣನ ಮಂದಿರ ಪ್ರೇಮ

       ಭಯಂಕರ ಇಂಟರೆಸ್ಟಿಂಗ್ ಪತ್ತೆದಾರಿ ಕಾದಂಬರಿ ಓದುವಾಗ ನಡುವಿನಲ್ಲಿ ಒಂದಿಷ್ಟು ಹಾಳೆಗಳೇ ನಾಪತ್ತೆಯಾದರೆ ಹೇಗಿರುತ್ತೋ ಅದೇ ಅನುಭವ ಇತಿಹಾಸಕಾರನೊಬ್ಬನಿಗೆ ಚಂದ್ರಕೇತುಘರದ ಕಳೆದುಹೋದ ಇತಿಹಾಸ ಕಟ್ಟಿಕೊಡುತ್ತದೆ. ಬೇಡಾಚಂಪಾದಿಂದ ಹಿಂದಿರುಗಿದ ಮೇಲೂ ಅನ್ನಿಸುತ್ತಿದ್ದುದು ಒಂದೇ ಪ್ರಶ್ನೆ. ನಮ್ಮ ಸಂಸ್ಕೃತಿ, ಇತಿಹಾಸ, ಕಲೆಗಳ ಬಗ್ಗೆ ನಮಗೇಕಿಂಥ ಅಸಡ್ಡೆ? ಪ್ರಪಂಚದ ಯಾವ ಮೂಲೆಗಾದರೂ ಹೋಗಿ ಅಲ್ಲಿನ ಜನರಿಗೆ ಹೇಳಿ, ನಿಮ್ಮ ಇತಿಹಾಸ ನೀವಂದುಕೊಂಡದ್ದಕ್ಕಿಂತ ಇಷ್ಟು ಹಳೆ ಹಳೆಯದು, ನಿಮ್ಮ ಪೂರ್ವಿಕರು ಇಷ್ಟು ಭವ್ಯವಾಗಿ ಬಾಳಿಬದುಕಿದ್ದರೆಂದು......ಖುಷಿಯಿಂದೆದ್ದು ಕುಣಿದಾದಿ ಅದನ್ನು ತಲೆಯ ಮೇಲೆತ್ತು ಮೆರೆಸುತ್ತಾರೆ. ಅದೇ ನಮ್ಮವರಿಗೆ ಹೇಳಿನೋಡಿ. ಸತ್ತರೂ ತಲೆಕೆಡಿಸಿಕೊಳ್ಳಲಿಕ್ಕಿಲ್ಲ. ಹಿಟ್ಲರ್ ಒಮ್ಮೆ ಹೇಳಿದ್ದ fight people and they fight back; destroy their culture and they cease to exist. ದೇಶವೊಂದನ್ನು ನಾಶಮಾಡುವುದೆಂದರೆ ಅಲ್ಲಿನ ಜನರೊಡನೆ ಬಡಿದಾಡುವುದಲ್ಲ. ಅವರು ಬಡಿದಷ್ಟೂ ಮತ್ತೆ ಮೇಲೆದ್ದು ಬರುತ್ತಾರೆ. ಬದಲಾಗಿ ಅವರ ಸಂಸ್ಕೃತಿಯನ್ನು ನಾಶಮಾಡಿ, ಆ ದೇಶ ಸ್ವಯಂ ನಾಶವಾಗುತ್ತದೆ. ಮೆಕಾಲೆ ಹೇಳಿದ್ದು, ಬ್ರಿಟಿಷರು ಮಾಡಿದ್ದೂ, ಈಗಿನ ನಮ್ಮದೇ ಸರಕಾರಗಳು ಅನುಸರಿಸುತ್ತಿರುವುದೂ ಅದನ್ನೇ. ಇಂಥ ಅಪವಸ್ಯಗಳ ಮಧ್ಯದಲ್ಲೂ ದಿಲೀಪ್ ಕುಮಾರ್ ಮೈತ್ರೆಯವರಂಥವರಿದ್ದಾರೆಂಬುದೇ ಸಮಾಧಾನದ ಸಂಗತಿ. ತಿರುಗಿ ಬಂದ ಮೇಲೂ ಯಾಕೋ ಚಂದ್ರಕೇತುಘರ್ ಕಾಡುವುದನ್ನು ಬಿಡಲಿಲ್ಲ. ಜೊತೆಜೊತೆಗೆ ಅಷ್ಟೇ ಗಾಢವಾಗಿ ನೆನಪಾದವನು ಆ ಪಠಾಣ.
       ಮುಂದಿನ ವೀಕೆಂಡ್ ಆಪ್ತಮಿತ್ರ ಸಂದೀಪ್ ಸೇನ್‌ಗುಪ್ತನೊಡನೆ ನಮ್ಮ ಸವಾರಿ ಹೊರಟಿದ್ದು ಮೇದಿನಿಪುರ ಅಥವಾ ಮಿಡ್ನಾಪುರದ ಸಮೀಪದ ಒಂದು ಚಿಕ್ಕ ಊರಿಗೆ. ಬಾಂಗಾಲಿ ಕಲೆ, ವಾಸ್ತುಶಿಲ್ಪ, ಪುರಾತತ್ವಗಳ ಸಂಶೋಧಕರಿಗೆ ಆ ಊರೊಂದು ಅಕ್ಷಯಪಾತ್ರೆ. ಆ ಅಕ್ಷಯಪಾತ್ರೆಯನ್ನು ನೋಡಬಹುದೆಂಬ ಕಾರಣ ಒಂದಾದರೆ ಅದರ ಆಪದ್ಭಾಂಧವ ಪಠಾಣ ಸಾಬಿ ಸಿಗಬಹುದೆಂಬುದು ಇನ್ನೊಂದು ಕಾರಣ. ಆ ಊರಿನ ಹೆಸರು ಪಾತ್ರಾ..... ಮಂದಿರ್ ಮೋಯ್ ಪಾತ್ರಾ. ಬಂಗಾಳದ ದೇವಾಲಯಗಳ ಊರದು. ಕಂಗ್ಸಾಬಾಟಿ ನದಿಯ ದಡದಲ್ಲಿರುವ ಈ ಹಳ್ಳಿಗೆ ಕಾಲಿಟ್ಟರೆ ಹೆಜ್ಜೆಗೊಂದು ದೇವಸ್ಥಾನಗಳೆದುರಾಗುತ್ತವೆ. ಬೆಂಗಳೂರಲ್ಲಿ ಒಗೆದ ಕಲ್ಲು ಹೋಗಿ ಬೀಳುವುದು ಇಂಜಿನಿಯರನ ತಲೆಯಮೇಲಾದರೆ ಇಲ್ಲಿ ಬೀಳುವುದು ಯಾವುದಾದರೊಂದು ಗುಡಿಯ ಮೇಲೆ. ಅದೂ ಇಂದುನಿನ್ನೆಯದವುಗಳಲ್ಲ. ಅಲ್ಲಿನ ಇತಿಹಾಸ ಕೆದುಕುತ್ತ ಹೋದರೆ ಹೋಗಿ ನಿಲ್ಲುವುದದು ಗುಪ್ತರ ಕಾಲಕ್ಕೆ. ಗುಪ್ತರ ಆಳ್ವಿಕೆಯೆಂಬುದು ಹೇಳಿಕೇಳಿ ಭಾರತದ ಸ್ವರ್ಣಯುಗ. ತಾಮ್ರಲಿಪ್ತವೆಂದು ಕರೆಯಲ್ಪಡುತ್ತಿದ್ದ ಈ ಸುತ್ತಲಿನ ಪ್ರದೇಶ ಮೌರ್ಯಕಾಲದಿಂದ ಹಿಡಿದು ಗುಪ್ತರವರೆಗೂ ದಕ್ಷಿಣಪೂರ್ವ ಏಶಿಯಾದ ಹೆಬ್ಬಾಗಿಲೆಂದೇ ವಿಶ್ವವಿಖ್ಯಾತವಾಗಿತ್ತು. ಚೀನ, ಗ್ರೀಕ್, ಮಧ್ಯಪ್ರಾಚ್ಯ, ಯುರೋಪ್, ಈಶಾನ್ಯ ಏಶಿಯಾ ಸೇರಿ ವಿಶ್ವದ ಹಲಭಾಗಗಳೊಡನೆ ಬಂಗಾಳದ ವ್ಯಾಪಾರ ವಹಿವಾಟುಗಳನ್ನು ಬೆಸೆದ ಮುಖ್ಯಕೊಂಡಿಯಾಗಿತ್ತಿದು. ಅದಕ್ಕೊಂದು ಕಾರಣವೆಂಬಂತೆ ಗುಪ್ತರ ಮೂಲ ಇಲ್ಲೇ ಪಕ್ಕದ ಮುರ್ಷಿದಾಬಾದ್ ಎಂದೂ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಮಹಾಭಾರತದ ಭೀಷ್ಮಪರ್ವದಲ್ಲಿ ತಾಮ್ರಲಿಪ್ತದ ಉಲ್ಲೇಖವಿದೆ. ಭೀಮ ಈ ಭಾಗವನ್ನು ಗೆದ್ದಿದ್ದನಂತೆ. ಈ ಪ್ರದೇಶವನ್ನಾಳುತ್ತಿದ್ದ ತಾಮ್ರಧ್ವಜನೆಂಬ ಅರಸನಿಂದ ಈ ಹೆಸರು ಬಂದಿತೆಂಬ ಪ್ರತೀತಿಯಿದೆ. ತಾಮ್ರದ ಅದಿರು ಹೇರಳವಾಗಿ ದೊರೆಯುವುದರಿಂದ ತಾಮ್ರಲಿಪ್ತವೆಂದು ಕರೆಯಲ್ಪಟ್ಟಿತೆಂಬ ಮಾತೂ ಇದೆ. ಪುರಾತನ ಸಿಲೋನಿನ ಬೌದ್ಧ ಕಾವ್ಯಗಳಲ್ಲಿ, ಗ್ರೀಕ್, ಚೈನಾದ ಪ್ರವಾಸಿಗರ ದಾಖಲೆಗಳಲ್ಲಿ ತಾಮ್ರಲಿಪ್ತದ ಹೆಸರಿದೆ. ಪ್ಟಾಲೆಮಿ ಇದನ್ನು ತಾಮಲಿಟಿಯೆಂದು ಕರೆದು ಇದನ್ನು ದಕ್ಷಿಣ ಏಷ್ಯಾದ ಅತಿದೊಡ್ಡ ಬಂದರು ಎನ್ನುತ್ತಾನೆ. ಅಶೋಕನ ಕಾಲದಲ್ಲಿ ಇಲ್ಲಿ ಬೌದ್ಧಮತವೂ ಪ್ರಚಾರಕ್ಕೆ ಬಂದಿತು. ಅಶೋಕನ ಇಬ್ಬರು ಮಕ್ಕಳಾದ ಮಹೇಂದ್ರ ಮತ್ತು ಸಂಘಮಿತ್ರರು ಮತಪ್ರಚಾರಕ್ಕಾಗಿ ಸಿಲೋನಿಗೆ ತೆರಳಿದ್ದು ಇದೇ ಸ್ಥಳದಿಂದಂತೆ. ಅಲ್ಲಿಂದ ಕ್ರಿ.ಶ ೧೨ನೇ ಶತಮಾನದವರೆಗೂ ಹಿಂದೂ, ಜೈನ, ಬೌದ್ಧ ಮತಗಳ ಮುಖ್ಯಕೇಂದ್ರವಾಗಿ ತಾಮ್ರಲಿಪ್ತ ಹೆಸರುವಾಸಿಯಾಯಿತು. ೧೯೬೧ರಲ್ಲಿ ಇಲ್ಲಿ ಉತ್ಖನನ ನಡೆದಾಗ ಗುಪ್ತೋತ್ತರ ಕಾಲದ ವಿಷ್ಣು ಲೋಕೇಶ್ವರನ ಎಂಟಡಿ ಎತ್ತರದ ವಿಗ್ರಹವೊಂದು ಸಿಕ್
ಲೋಕೇಶ್ವರ(ಕಲ್ಕತ್ತದ ಇಂಡಿಯನ್ ಮ್ಯೂಸಿಯಂ)
ಕು ತಾಮ್ರಲಿಪ್ತದ ಹಳೆಯ ಇತಿಹಾಸದ ಪುಟಗಳನ್ನು ಮತ್ತೆ ಕೆದಕಿ ಮುನ್ನೆಲೆಗೆ ತಂದಿತ್ತು. ಹಿಂದೂಗಳ ವಿಷ್ಣು, ಬೌದ್ಧರ ಲೋಕೇಶ್ವರನ ಸ್ವರೂಪಗಳ ಸುಂದರ ಮಿಶ್ರಣದ ಈ ವಿಗ್ರಹ ಶತಶತಮಾನಗಳ ಹಿಂದೂ ಬೌದ್ಧ ಸಾಮರಸ್ಯದ ಕಥೆ ಹೇಳುತ್ತದೆ. ತಾಮ್ರಲಿಪ್ತದ ಶ್ರೀಮಂತ ವಾಸ್ತುವೈಭವದ ಕುರುಹುಗಳನ್ನು ನೋಡುವುದಿದ್ದರೆ ಕೋಲ್ಕತ್ತಾಕ್ಕೆ ಭೇಟಿ ನೀಡಿದವರು ಇಂಡಿಯನ್ ಮ್ಯೂಸಿಯಮ್ಮಿಗೆ ಹೋಗುವುದನ್ನು ಮರೆಯಬೇಡಿ. ಮಹಾಭಾರತದ ಸಮಯದಿಂದ ದಕ್ಷಿಣ ಏಷಿಯಾದ ಅತಿದೊಡ್ಡ ವ್ಯಾಪಾರ ಕೇಂದ್ರವಾಗಿದ್ದ ತಾಮ್ರಲಿಪ್ತದ ಪ್ರಸಿದ್ಧಿಯ ಕೊನೆಯ ಉಲ್ಲೇಖ ಸಿಗುವುದು ೯ನೇ ಶತಮಾನದ ಪಾಲರ ಉದಯಮಾನನ ದೂಧ್‌ಪಾನಿ ಶಿಲಾಶಾಸನದಲ್ಲಿ. ನಂತರ ಬಂಗಾಳವನ್ನಾಳಿದವರು ಅಚ್ಚಕನ್ನಡ ಮೂಲದ ಸೇನರು. ಸೇನ ವಂಶದ ಬಲ್ಲಾಳಸೇನ ಅಹಿಚ್ಛತ್ರದಿಂದ(?) ಐದು ಬ್ರಾಹ್ಮಣ ಕುಟುಂಬಗಳನ್ನು ಕರೆಸಿ ಐದು ಗ್ರಾಮಗಳಲ್ಲಿ ನೆಲೆಗೊಳಿಸಿದನಂತೆ. ಮುಖೋಟಿ ಗ್ರಾಮದಲ್ಲಿ ನೆಲೆಸಿದವರು ಮುಖ್ಯೋಪಾಧ್ಯಾಯರಾದರು(ಮುಖರ್ಜಿ), ಚಟ್ಟ ಗ್ರಾಮದವರು ಚಟ್ಟೋಪಾಧ್ಯಾಯ(ಚಟರ್ಜಿ), ಗಂಗರಿದಯದವರು ಗಂಗೋಪಾಧ್ಯಾಯ(ಗಂಗೂಲಿ), ಬಂಡದವರು ಬಂಡೋಪಾಧ್ಯಾಯ(ಬ್ಯಾನರ್ಜಿ) ಎಂದು ಕರೆಯಲ್ಪಟ್ಟರು. ಐದನೇ ಮನೆತನದ ಅರ್ಚಕರಿಗೆ ಭಟ್ಟಾಚಾರ್ಯರೆಂಬ ಹೆಸರು ಬಂದಿತು. ಇವರ ಸಹಾಯಕ್ಕೆ ಬಂದ ಐದು ಕ್ಷತ್ರಿಯ ಕುಟುಂಬಗಳು ಕ್ರಮವಾಗಿ ಬಸು, ದತ್ತ, ಘೋಷ, ಮಿತ್ರ ಮತ್ತು ಪಾಲ್ ಎಂದು ಹೆಸರಾದವಂತೆ. ಬ್ರಾಹ್ಮಣರಿಗೆ ಸಮುದ್ರ ಪ್ರಯಾಣ ನಿಷಿದ್ಧವಾಗಿದ್ದರಿಂದ ಕಟ್ಟಾ ವೈದಿಕರಾಗಿದ್ದ ಸೇನ ಅರಸರ ಕಾಲದಲ್ಲಿ ಸಮುದ್ರವ್ಯಾಪಾರಗಳಿಗೆ ನಿರ್ಭಂಧ ಹೇರಲ್ಪಟ್ಟವು. ಸೇನರ ಕೊನೆಯ ಅರಸು ಲಕ್ಷ್ಮಣ ಸೇನನ ಕಾಲದಲ್ಲಂತೂ ಈ ಹುಚ್ಚಾಟ ಯಾವ ಮಟ್ಟಕ್ಕೆ ಮುಟ್ಟಿತೆಂದರೆ ಶ್ರವಣಮತಾವಲಂಬಿಗಳಾದ ಪಕ್ಕದರಾಜ್ಯಗಳು ಹಾಗೂ ವಿದೇಶಗಳೊಡಗಿನ ವ್ಯವಹಾರಗಳು ಕೂಡ ಬಂದಾದವು. ಹಿಂದಿನ ಪಾಲರ ಕಾಲದಲ್ಲಿ ಬಳಕೆಯಲ್ಲಿದ್ದ ಪಾಲಿ, ಪ್ರಾಕೃತ, ಬಂಗಾಳಿಗಳ ಬದಲಾಗಿ ಸಂಸ್ಕೃತ ಮತ್ತೆ ಪ್ರವರ್ಧಮಾನಕ್ಕೆ ಬಂತು. ಗೀತಗೋವಿಂದವೆಂಬ ಸರ್ವಕಾಲೀನ ಅಮರ ಕೃತಿಯನ್ನು ಬರೆದ ಜಯದೇವ ಇದೇ ಲಕ್ಷ್ಮಣಸೇನನ ಆಸ್ಥಾನದಲ್ಲಿದ್ದವ. ಕಲೆ, ಸಾಹಿತ್ಯ, ಸಂಗೀತಗಳು ಅದ್ಭುತವಾಗಿ ವಿಜೃಂಭಿಸಿದವು. ಆದರೇನು ಫಲ? ಹೊರರಾಜ್ಯಗಳೊಡನೆ ಸಂಪರ್ಕ ಕಡಿದುಕೊಂಡು ರಾಜ್ಯದೊಳಗೆ ಮೂಗು ಮುಚ್ಚಿ ಕೂತಿದ್ದೇ ಸೇನರಿಗೆ ಮುಳುವಾಯಿತು. ಬಿಹಾರವನ್ನು ಧ್ವಂಸಗೊಳಿಸಿದ ಭಕ್ತಿಯಾರ್ ಖಿಲ್ಜಿಯ ಕಣ್ಣು ಬಿದ್ದಿದ್ದು ಸಂಪದ್ಭರಿತ ಬಂಗಾಳದ ಮೇಲೆ. ಲಕ್ಷ್ಮಣ ಸೇನ ತೀರ್ಥಯಾತ್ರೆಗೆ ಹೋಗಿದ್ದ ಸಮಯವನ್ನೇ ನೋಡಿಕೊಂಡು ಖಿಲ್ಜಿ ಬಂಗಾಳದ  ಮೇಲೆ ದಾಳಿಯಿಟ್ಟಾಗ ಸಹಾಯಕ್ಕೆ ಬರುವವರಾರೂ ಇರಲಿಲ್ಲ. ಕಣ್ಮುಚ್ಚಿ ತೆರೆಯುವುದರೊಳಗೆ ಅರ್ಧ ಬಂಗಾಳ ಮುಸ್ಲೀಮರ ವಶವಾಗಿತ್ತು. ಗಂಗಾತೀರದಲ್ಲೆಲ್ಲೋ ತೀರ್ಥಯಾತ್ರೆಯಲ್ಲಿ ಮುಳುಗಿಹೋಗಿದ್ದ ಲಕ್ಷ್ಮಣಸೇನ ವಿಷಯ ತಿಳಿದವನೇ ಜೀವಭಯದಿಂದ ಸಮುದ್ರಮಾರ್ಗವಾಗಿ ಪೂರ್ವಬಂಗಾಳಕ್ಕೆ ಪಲಾಯನಗೈದನಂತೆ ಎಂಬುದು ಕಥೆಯಾದರೂ ವಿಪರ್ಯಾಸವೇ. ನನ್ನ ಗೆಳೆಯ ಸೇನ್‌ಗುಪ್ತಾ ಒಮ್ಮೆ ತಮಾಷೆ ಮಾಡಿದ್ದ. ಮುಸ್ಲೀಮರು ಅರಬ್ಬಿ ಕುದುರೆಗಳೊಂದಿಗೆ ಭಾರತದ ಮೇಲೆ ದಾಳಿ ಮಾಡಲು ತಮ್ಮ ಕತ್ತಿ ಮಸೆದುಕೊಳ್ಳುತ್ತಿರುವಾಗ ನಮ್ಮವರು ಅವರನ್ನೆದುರಿಸಲು ಶತ್ರುಸಂಹಾರ ಯಾಗಕ್ಕೆ ತಯಾರಿ ಮಾಡುವುದರಲ್ಲಿ ಬ್ಯುಸಿಯಾಗಿದ್ದರಂತೆ. ಮುಂದೆ ಬಂದ ಇಸ್ಲಾಮಿಕ್ ಯುಗದಲ್ಲಿ ಸಾವಿರಾರು ವರ್ಷಗಳ ಕಾಲ ಕಾಪಾಡಿಕೊಂಡು ಬಂದಿದ್ದ ಉಚ್ಛ್ರಾಯ ಸಂಸ್ಕೃತಿಯೊಂದು ಪಾತಾಳದ ಬುಡ ಕಂಡಿತು. ಒಂದು ಕಾಲದಲ್ಲಿ ಕಲೆ, ವಾಸ್ತುಶಿಲ್ಪ, ವ್ಯಾಪಾರಗಳಲ್ಲಿ ವಿಶ್ವಪ್ರಸಿದ್ಧವಾಗಿದ್ದ ಬಂಗಾಳವನ್ನು ಖಿಲ್ಜಿಗಳು, ಘೋರಿಗಳು, ಲೋಧಿಗಳು ಮೊಘಲರು, ಬ್ರಿಟೀಷರೆಲ್ಲರೂ ಒಬ್ಬರಾದ ಮೇಲೊಬ್ಬರು ಕಿತ್ತು ತಿಂದರು. ತಾಮ್ರಲಿಪ್ತದ ಕತೆಯೂ ಇದಕ್ಕೇನು ಹೊರತಾಗಿರಲಿಲ್ಲ. ಇಲ್ಲಿನ ಇತಿಹಾಸಕ್ಕೊಂದು ಟರ್ನಿಂಗ್ ಪಾಯಿಂಟ್ ಸಿಕ್ಕಿದ್ದು ೧೭ನೇ ಶತಮಾನದಲ್ಲಿ. ಈ ಭಾಗವನ್ನಾಳುತ್ತಿದ್ದ ನವಾಬ ಅಲಿವರ್ದಿ ಖಾನ್ ರತ್ನಚೌಕ ಪರಗಣದ ಕಂದಾಯ ಇಲಾಖೆಯ ಕಲೆಕ್ಟರನ್ನಾಗಿ ಬಿದ್ಯಾನಂದ ಘೋಷ್ ಎಂಬ ಅಧಿಕಾರಿಯನ್ನು ನೇಮಿಸುತ್ತಾನೆ. ಆತನೋ ಮಹಾನ್ ದೈವಭಕ್ತ. ಒಂದಾದ ಹಿಂದೊಂದರಂತೆ ನೂರಾರು ದೇವಾಲಯಗಳನ್ನು ಬಿದ್ಯಾನಂದ ಈ ಪ್ರದೇಶದಲ್ಲಿ ಕಟ್ಟಿಸಿದ. ಸೇನರ ಕಾಲದ ಹಳೆಯ ದೇವಸ್ಥಾನಗಳನ್ನೆಲ್ಲ ದುರಸ್ಥಿ ಮಾಡಿ ಸುಸ್ಥಿತಿಗೆ ತಂದ. ತಾಮ್ರಲಿಪ್ತದ ಈ ಪ್ರದೇಶ ಹಳೆಯ ಕಳೆಯೆದ್ದು ಕುಣಿಯತೊಡಗಿತು. ತನ್ನ ಕೈಕೆಳಗೆ ಕೆಲಸಕ್ಕಿರುವ ಕಾಫೀರನೊಬ್ಬ ಹೀಗೆ ಪ್ರಸಿದ್ಧನಾಗುವುದನ್ನು ನೋಡಿ ಸಹಿಸಲು ನವಾಬನಿಗಾಗಲಿಲ್ಲ. ಬಿದ್ಯಾನಂದನನ್ನು ಸೆರೆಗೆ ತಳ್ಳಿ ಮರಣದಂಡನೆ ಶಿಕ್ಷೆ ವಿಧಿಸಲಾಯ್ತು. ಸ್ಥಳೀಯರ ಕತೆಯನ್ನೇ ನಂಬುವುದಾದರೆ ಇವನ ತಲೆಯನ್ನು ಮೆಟ್ಟಿ ಅಪ್ಪಚ್ಚಿ ಮಾಡಲು ಬಂದಿದ್ದ ಆನೆ ಯಾರೆಷ್ಟೇ ಸರ್ಕಸ್ ಮಾಡಿದರೂ ಕಾಲನ್ನು ಮೇಲೆತ್ತಲಿಲ್ಲವಂತೆ. ಬಿದ್ಯಾನಂದ ಬಚಾವಾದ. ಪಾ-ಉತ್ರಾ(ಕಾಲಿಂದ ಪಾರಾದ) ಆ ಸ್ಥಳದ ಹೆಸರು ಪೌತ್ರಾ ಎಂದಾಗಿ ಕಾಲಕ್ರಮೇಣ ಪಾತ್ರಾ ಎಂದು ಬಳಕೆಗೆ ಬಂತು. ಘೋಷ್ ಕುಟುಂಬ ಅದರ ನಂತರ ೧೮ನೇ ಶತಮಾನದ ಕೊನೆಯವರೆಗೂ ಮಂದಿರಗಳ ನಿರ್ಮಾಣ ಕಾರ್ಯವನ್ನು ಮುಂದುವರೆಸಿತು. ಇದರಿಂದ ಪ್ರಭಾವಿತವಾದ ಬಂಡೋಪಾಧ್ಯಾಯ ಎಂಬ ಶ್ರೀಮಂತ ವರ್ತಕರ ಕುಟುಂಬವೂ ಹಲವು ಮಂದಿರಗಳನ್ನು ಈ ಭಾಗದಲ್ಲಿ ನಿರ್ಮಿಸಿತು. ಈ ಪರಂಪರೆ ಅಂತ್ಯಕಂಡಿದ್ದು ಆ ಎರಡೂ ಕುಟುಂಬಗಳೂ ವ್ಯಾಪಾರಕ್ಕಾಗಿ ಕಲ್ಕತ್ತಕ್ಕೆ ತಮ್ಮ ನೆಲೆಯನ್ನು ಬದಲಾಯಿಸಿದಾಗಿನಿಂದ. ಮುಂದೆ ದೇವಸ್ಥಾನಗಳು ಪೋಷಕರಿಲ್ಲದೇ ಅನಾಥವಾದವು. ಮೂರ್ತಿಗಳು ಕಳುವಾಗತೊಡಗಿದವು. ನದಿಗೆ ನೆರೆಬಂದ ಕಾಲದಲ್ಲಿ ನದಿದಡದಲ್ಲಿದ್ದ ಒಂದೆರಡು ತೊಳೆದು ಹೋದವು. ಕಳ್ಳರ ನಿಧಿಯಾಸೆಗೆ ಬಲಿಯಾಗಿ ಕೆಲವು ನೆಲಸಮವಾದವು.  ಉದುರಿ ಬಿದ್ದ ಕಟ್ಟಡದ ಗೋಡೆಗಳ ಇಟ್ಟಿಗೆಗಳು ಅಕ್ಕಪಕ್ಕದವರ ಮನೆಕಟ್ಟಲು ಬಳಕೆಯಾದವು. ದೇವಾಲಯಗಳ ಬಗ್ಗೆಯೆಲ್ಲ ತಲೆಕೆಡಿಸಿಕೊಳ್ಳುವ ಜಾಯಮಾನವೆಲ್ಲ ಕಮ್ಯುನಿಸ್ಟ್ ಸರ್ಕಾರದ್ದಾಗಿರಲಿಲ್ಲ ಬಿಡಿ.




ಕಂಗ್ಸಾಬಾಟಿ ನದಿ
ಟೆರಾಕೋಟಾ ಮಾದರಿಗಳು

ದುರ್ಗಾದಲನ್ ಮಂದಿರ
        ಅಷ್ಟು ಯೋಚಿಸುತ್ತಿದ್ದಾಗ ಬರಿ ಹೊಂಡಗಳು ಮಾತ್ರವೇ ತುಂಬಿದ್ದ ಧೂಳು ರಸ್ತೆಯಲ್ಲಿ ದಡಬಡ ಸದ್ದು ಮಾಡುತ್ತ ಸಾಗಿದ್ದ ಲಟಾರಿ ಬಸ್ಸಿಗೆ ಗಕ್ಕನೆ ಬ್ರೇಕು ಬಿತ್ತು. ಬಂಗಾಳಿ ಬಸ್ಸುಗಳಿಗೆ ನಿಲ್ದಾಣಗಳೆಂಬುದಿಲ್ಲ. ಜೊತೆಗೆ ಎಷ್ಟು ಸಪೂರದ ದಾರಿಯಾದರೂ ಅವು ಹೋಗುವುದು ವಿಮಾನದ ಸ್ಪೀಡಿನಲ್ಲೇ. ಜನರ ಕೈ ಕಂಡಲ್ಲೆಲ್ಲ ರಪ್ಪನೆ ಬ್ರೇಕು ಹಾಕಿ ನಿಲ್ಲಿಸುವುದೊಂದೇ ಅಲ್ಲಿನ ಡ್ರೈವರುಗಳಿಗೆ ಗೊತ್ತಿರುವ ವಿದ್ಯೆ. ಅದು ಫ್ಲೈ ಓವರಿನ ಮೇಲಾಗಿರಬಹುದು, ಸಿಗ್ನಲ್ಲಿನ ನಟ್ಟ ನಡುವಾಗಿರಬಹುದು. ಅದಕ್ಕೆಲ್ಲ ಅವರು ಬಂಗಾಳಿಗಳು ಕೆಡಿಸಿಕೊಳ್ಳುವವರಲ್ಲ. ಯಾವುದೋ ಲಹರಿ ಲಹರಿ ಲಹರಿಯಲ್ಲಿದ್ದವ ಹಾಕಿದ ಬ್ರೇಕಿಗೆ ಮೂಗು ಜಜ್ಜಿಕೊಳ್ಳುವುದರಿಂದ ಬಚಾವಾಗಿದ್ದೆ. ಕಿಡಕಿಯಿಂದ ಹೊರನೋಡಿದರೆ ರಸ್ತೆ ಪಕ್ಕದಲ್ಲೇ ಅಲ್ಲಲ್ಲಿ ಸಣ್ಣ ಸಣ್ಣ ಮಂದಿರಗಳು ಕಣ್ಣಿಗೆ
ಬೀಳಲು ಶುರುವಾದವು. ಪಾತ್ರಾ ಹತ್ತಿರ ಬರುತ್ತಿದ್ದುದು ಖಾತ್ರಿಯಾಯ್ತು. ಕಲ್ಕತ್ತದಲ್ಲಿ ಪುಸ್ತಕದೊಳಗೆ ಮುಖ ಸಿಕ್ಕಿಸಿಕೊಂಡು ಕೂತಿದ್ದ ಸೇನ್‌ಗುಪ್ತಾ ಇನ್ನೂ ಮುಖ ಮೇಲೆತ್ತಿರಲಿಲ್ಲ. ಪಕ್ಕಾ orthodox ಬಂಗಾಳಿ ಆತ. TCSನಲ್ಲಿ ಉದ್ಯೋಗಿಯಾಗಿದ್ದರೂ ಶೇಕ್ಸ್‌ಪಿಯರಿನಿಂದ ಹಿಡಿದು ಪ್ರೇಮಚಂದ್ರರ ತನಕ ಒಬ್ಬರನ್ನೂ ಬಿಡದೇ ಓದಿಕೊಂಡಿದ್ದಾನೆ. ಸ್ವಂತ ಬಂಗಾಳಿ rock band ನಡೆಸುತ್ತಿದ್ದರೂ ರವೀಂದ್ರ ಸಂಗೀತದ ಕಟ್ಟಾಭಿಮಾನಿ. ತನ್ನದೇ ಸಂಗೀತದ ಒಂದೆರಡು ಆಲ್ಬಮ್ಮುಗಳನ್ನೂ ಹೊರತಂದಿದ್ದಾನೆ. triathlonನಲ್ಲಿ ರಾಷ್ಟ್ರಮಟ್ಟದ ಚಾಂಪಿಯನ್. ಅರ್ಧ ಭಾರತವನ್ನು ಬರಿ ಸೈಕಲ್ಲಿನಲ್ಲಿಯೇ ಸುತ್ತಿಮುಗಿಸಿದ್ದಾನೆ. ಜೊತೆಗೆ ಅದ್ಭುತ ಪೇಂಟರ್ ಕೂಡ. ರಪ್ಪನೆ ಪುಸ್ತಕದಿಂದ ತಲೆ ಹೊರಗೆ ಹಾಕಿದವನೇ ’ಅಬೇ, ವೋ ದೇಖ್ ಮಂದಿರ್, ಪಾತ್ರಾ ಆಗಯಾ, ಉತರೋ ಉತರೋ’ ಎಂದ. ಮುಂದಿನ ಸ್ಟಾಪಿನಲ್ಲಿ ಇಬ್ಬರೂ ಇಳಿದಾಯ್ತು. ಮೋಟು ಬೀಡಿ ಸೇದಿ ಮುಗಿಸಿದ ಕಂಡಕ್ಟರ್ ರೈಟ್ ಎಂದ. ಇದ್ದೂ ಇಲ್ಲದ ಬಸ್‌ ಸ್ಟಾಪಿನಿಂದ ಬಸ್ಸು ಹೊರಟು ಧೂಳೆಬ್ಬಿಸುತ್ತ ಮುಂದಿನ ತಿರುವಲ್ಲಿ ತಿರುಗುತ್ತಿದ್ದಂತೆ ರಸ್ತೆಯ ಕೆಳಗೆ ಹತ್ತಡಿ ದೂರದಲ್ಲಿ ಕಂಡೂ ಕಾಣದಷ್ಟು ಸಣ್ಣಗಿನ ಹಳದಿ ಪೇಂಟಿನ ಶೆಡ್ಡಿನಂಥ ಮನೆಯೊಂದು ಕಣ್ಣಿಗೆ ಬೀಳುತ್ತದೆ. ’ವಹೀ ಹೈ ದೇಖೋ ಉಸ್ಕಾ ಘರ್’ ಎಂದ ಸೇನ್‌ಗುಪ್ತಾ ಖುಷಿಯಿಂದ. ಹತ್ತಿರ ಹೋಗಿ ನೋಡಿದರೆ ಮನೆಗೆ ಬೀಗ ಹಾಕಿತ್ತು. ಪಕ್ಕದ ಗೂಡಂಗಡಿಯಲ್ಲಿ ಕೇಳಿದರೆ ಮಿಡ್ನಾಪುರದ ಆಸ್ಪತ್ರೆಗೆ ಹೋಗಿರಬಹುದೆಂಬ ಉತ್ತರ ಸಿಕ್ಕಿತು. ಆ ಮನೆಯ ಮಾಲೀಕನೇ ನಾವು ಹುಡುಕಿ ಬಂದ ಪಠಾಣ. ಪೂರ್ತಿ ಹೆಸರು ಮಹಮ್ಮದ್ ಯಾಸಿನ್ ಪಠಾಣ್.  ಹಾಗೆಂದು ಆತನ್ಯಾವ ಸೆಲೆಬ್ರಿಟಿಯೂ ಅಲ್ಲ, ಇತಿಹಾಸಕಾರನೂ ಅಲ್ಲ. ರಾಜಕಾರಣಿಯಾಗಲಿ, NGO ಕಟ್ಟಿ ಹೋರಾಡಿದವನಾಗಲೀ ಅಲ್ಲವೇ ಅಲ್ಲ. ಅರವತ್ತು ದಾಟಿದ ಐದುಕಾಲಡಿ ಮೀರದ ಸಣಕಲು ಕಡ್ಡಿ ದೇಹ, ಹಳೆಯ ಮಾಸಿದ ದೊಗಲೆ ಅಂಗಿ, ನಿರ್ಜೀವ ಮುಖಚರ್ಯೆಯ ಆತ ಮೊದಲ ನೋಟದಲ್ಲಿ ನಿಮ್ಮಲ್ಲೇನೂ ಇಂಟರೆಸ್ಟ್ ಮೂಡಿಸುವುದಿಲ್ಲ. ಮೂಲತಃ ಪಕ್ಕದ ಹಾತಿಹಲ್ಕಾ ಗ್ರಾಮದವನು. ಅಲ್ಲಿನ ಉರ್ದು ಹೈಸ್ಕೂಲೊಂದರಲ್ಲಿ ಪ್ಯೂನ್ ಆಗಿದ್ದು ರಿಟೈರಾದವ. ಸಿಗುವ ಮೂರೂವರೆ ಸಾವಿರ ಪೆನ್ಷನ್ನಿನಲ್ಲಿ ನಾಲ್ಕು ಮಕ್ಕಳ ಸಂಸಾರ ನಿಭಾಯಿಸುವ ಹೊಣೆ ಇವನ ಹೆಗಲ ಮೇಲಿದೆ. ಆದರೆ ಬಂಗಾಳಿ ಪುರಾತತ್ವ ಸಂಶೋಧಕರನ್ನು ರೋಮಾಂಚಿತಗೊಳಿಸುವ ಹೆಸರಿದು. He is a man with mission.
ಸುಮಾರು ಅರವತ್ತರ ದಶಕದ ಮದ್ಯಭಾಗ. ಡೇವಿಡ್ ಮೆಕ್‌ಟನ್ ಎಂಬ ಪ್ರಖ್ಯಾತ ಆಂಗ್ಲ ಇತಿಹಾಸಕಾರ ಪಾತ್ರಾದ ಭಾಗದಲ್ಲಿದ್ದ ಪುರಾತನ ದೇವಾಲಯ ಶಿಲ್ಪಗಳನ್ನು ಸಂದರ್ಶಿಸಿ ಪುಸ್ತಕವೊಂದನ್ನು ಬರೆಯಲು ಬಂದಿದ್ದ. ಬೆಂಗಾಳಿ ವಾಸ್ತುಶಿಲ್ಪದ ಪ್ರಸಿದ್ಧ ಕುರುಹಾದ ಸುಟ್ಟ ಇಟ್ಟಿಗೆಗಳ(ಟೆರಾಕೋಟಾ) ರಚನೆಗಳು ವಿಶ್ವಮಟ್ಟದಲ್ಲಿ ಹೆಸರು ಮಾಡಿದ್ದರ ಹಿಂದೆ ಬಂಗಾಳಿಗಳ ಪ್ರೀತಿಯ ಡೇವಿಡ್‌ಬಾಬುವಿನ ಶ್ರಮವಿದೆ.  ಆತನ  Late Medieval Temples of Bengal ಪುಸ್ತಕ ಮುಂದೆ ವಿಶ್ವಮಟ್ಟದಲ್ಲಿ ಬಂಗಾಳಿ ವಾಸ್ತುಶಿಲ್ಪವನ್ನು ಪರಿಚಯಿಸಿತ್ತು. ಹೀಗೆ ಬಂದಾಗ ಅವನ ಜೊತೆಗೆ ಸಹಾಯಕನಾಗಿ ಚೀಲ ಹೊರಲು ಬಂದ, ಆಚೆಯೂರಿನ ಮದರಸಾದಲ್ಲಿ ಪ್ಯೂನ್ ಕೆಲಸಕ್ಕಿದ್ದ ಇಪ್ಪತ್ತರ ಹರೆಯದ ಒಬ್ಬ ಗುಮಾಸ್ತನೇ ಈ ಪಠಾಣ. ೧೯೭೨ರಲ್ಲಿ ತನ್ನ ೪೨ನೇ ವರ್ಷದಲ್ಲಿ ಡೇವಿಡ್ ಮೆಕ್‌ಟನ್ ಮಲೇರಿಯಾದಿಂದ ಸಾಯದಿದ್ದರೆ ಈ ಪಠಾಣನ ಕೆಲಸವನ್ನು ನೋಡಿ ಎಷ್ಟು ಖುಷಿಪಡುತ್ತಿದ್ದನೋ ಏನೋ. ಮುಸ್ಲೀಮನಾದರೇನು? ಅವನಿಗೆ ತನ್ನ ನೆಲದ ಭವ್ಯ ಇತಿಹಾಸದ ಬಗ್ಗೆ ಅದಮ್ಯ ಹೆಮ್ಮೆಯಿತ್ತು. ಜೊತೆಗೆ ತಮ್ಮ ಜನರ ನಿರಭಿಮಾನದ ಕೊರಗೂ ಕೂಡ. ಪಾತ್ರಾದ ಸುಂದರ ಮಂದಿರಗಳು ಅವನಲ್ಲಿ ವಿಕ್ಷಿಪ್ತ ಪ್ರೀತಿಯೊಂದನ್ನು ಹುಟ್ಟುಹಾಕಿದವು.
ಯಾಸಿನ್ ಪಠಾಣ್(ಸೇನ್‌ಗುಪ್ತನ ಚಿತ್ರಗಳಿಂದ)
ಅನಾಥವಾಗಿ ಉರುಳಿ ಬಿದ್ದಿದ್ದ ರಾಶಿ ರಾಶಿ ಮಂದಿರಗಳು ಅವನಲ್ಲಿ ಎಂಥ ಪ್ರೇರಣೆಯನ್ನು ಹುಟ್ಟುಹಾಕಿದವೋ ಕಾಣೆ, ಏಕಾಂಗಿಯಾಗಿಯಾದರೂ ಸೈ ತನ್ನೂರಿನ ಪರಂಪರೆಯನ್ನು ರಕ್ಷಿಸುವ ಪಣತೊಟ್ಟ. ದೇವಸ್ಥಾನಗಳನ್ನು ಮರುನಿರ್ಮಿಸುವುದೆಂದರೇನು ಹುಡುಗಾಟದ ಮಾತೇ? ಕೈಯಲ್ಲಿ ಲೆಕ್ಕಹಾಕಿ ನಾಲ್ಕು ರೂಪಾಯಿಯೂ ಇರಲಿಲ್ಲ. ಊರಿನ ಮನೆಮನೆಯ ಬಾಗಿಲು ಬಡಿದು ತಮ್ಮೂರಿನ ಮಂದಿರಗಳನ್ನು ರಕ್ಷಿಸಲು ನೆರವಾಗುವಂತೆ ಅಂಗಲಾಚಿದ. ಕರಪತ್ರಗಳನ್ನು ಬರೆದು ಕಂಡವರಿಗೆಲ್ಲ ಹಂಚಿಬಂದ. ದೇವಸ್ಥಾನ ಕಟ್ಟಲು ದುಡ್ಡಿಗಾಗಿ ಸ್ಥಳೀಯ ಮುಖಂಡರ ಕೈಕಾಲು ಹಿಡಿದ. ಒಂದಿಷ್ಟು ಜನ ಹುಚ್ಚನ ಪಟ್ಟಕಟ್ಟಿದರು. ಹಿಂದೂಗಳ ದೇವಾಲಯದ ಉಸಾಬರಿ ಸಾಬಿಗ್ಯಾಕೆ ಬೇಕಿತ್ತು ಎಂದು ಇನ್ನೊಂದಿಷ್ಟು ಜನ ಮೂಗು ಮುರಿದರು. ಕಾಫಿರರ ಜೊತೆ ಸೇರಿ ತಮ್ಮಜಾತಿಯವ ಹಾಳಾಗಿ ಹೋದನೆಂದು ಸಂಬಂಧಿಕರು ಹಿಡಿಶಾಪ ಹಾಕಿದರು. ಶತಮಾನಗಳ ಹಿಂದೆ ಈ ದೇವಸ್ಥಾನಗಳನ್ನು ನಿರ್ಮಿಸಿದ್ದ ಬಂಡೋಪಾಧ್ಯಾಯ ಕುಟುಂಬವನ್ನು ಭೇಟಿಯಾಗಿ ಸಹಾಯ ಕೇಳಲು ಹೋದರೆ ಅವರು ಅವನನ್ನು ಮನೆಯೊಳಕ್ಕೂ ಬಿಟ್ಟುಕೊಳ್ಳಲಿಲ್ಲ. ಘೋಷ್ ಕುಟುಂಬದ ಬೆನ್ನು ಬಿದ್ದರೆ ತಮ್ಮ ಪೂರ್ವಿಕರ ಪೂಜಾಸ್ಥಳಗಳನ್ನೆಲ್ಲ ಮುಟ್ಟಿ ಅಪವಿತ್ರಗೊಳಿಸಬೇಡವೆಂದು ಬುದ್ಧಿವಾದ ಹೇಳಿ ಕಳಿಸಿಬಿಟ್ಟವು. ಪಠಾಣ ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲಿಲ್ಲ. ಊರಿನ ಜನರನ್ನು ನಂಬಿದರೆ ಕೆಲಸವಾಗುವುದಿಲ್ಲವೆಂದು ಮಂತ್ರಿಗಳ ಬೆನ್ನು ಬಿದ್ದ. ಸರ್ಕಾರಿ ಕಛೇರಿಗೆ ತಿರುಗಿ ಚಪ್ಪಲಿ ಸವೆದದ್ದು ಬಿಟ್ಟರೆ ಮತ್ತೇನೂ ಉಪಯೋಗವಾಗಲಿಲ್ಲ. IIT ಖರಗ್‌ಪುರ್, ಇಂಡಿಯನ್ ಮ್ಯೂಸಿಯಮ್ ಕಲ್ಕತ್ತಾ, ಕೇಂದ್ರ ಸರ್ಕಾರದ ಅಧಿಕಾರಿಗಳು, ಮಂತ್ರಿಗಳು, ಪ್ರಧಾನಿ, ರಾಷ್ಟ್ರಪತಿ ಹೀಗೆ ಸಾಧ್ಯವಿದ್ದಲ್ಲೆಲ್ಲ ಸಾವಿರಾರು ಪತ್ರಗಳನ್ನು ಬರೆದು ಅವರ ಗಮನ ಸೆಳೆಯಲು ಯತ್ನಿಸಿದ. ಅಷ್ಟರಲ್ಲಾಗಲೇ ಮುಕ್ಕಾಲು ಪಾಲು ಮಂದಿರಗಳು ಊರಿಂದ ಮಾಯವಾಗಿದ್ದವು. ಪ್ರಭಾವಿಗಳು ಇರುವ ಹಳೆಯ ಕಟ್ಟಡಗಳನ್ನು ಕೆಡವಿ ಅಲ್ಲಿನ ಕೆಂಪುಕಲ್ಲು, ಇಟ್ಟಿಗೆಗಳನ್ನು ತಮ್ಮ ಮನೆಕಟ್ಟಲು ಸಾಗಿಸುವುದು ಸಾಮಾನ್ಯವಾಗಿ ಹೋಯಿತು. ೧೯೮೨ರಲ್ಲಿ ಹೀಗೆಯೇ ಸ್ಥಳೀಯ ಪುಢಾರಿಯೊಬ್ಬ ಹಳೆಯ ಹೆಸರಾಂತ ದುರ್ಗಾದಲನ್ ಮಂದಿರದ ಕಲ್ಲುಗಳನ್ನು ಸಾಗಿಸುತ್ತಿದ್ದ ವಿಷಯ ಗೊತ್ತಾದಕೂಡಲೇ ಪಠಾಣ ಅಲ್ಲೇ ಸತ್ಯಾಗ್ರಹಕ್ಕೆ ಕೂತ. ತಮ್ಮ ಧರ್ಮದ ವಿಷಯದಲ್ಲಿ ಮೂಗುತೂರಿಸುತ್ತಿದ್ದಾನೆಂಬ ಕೋಪದಲ್ಲಿ ಊರಿನ ಹಿಂದೂಗಳೆಲ್ಲ ಸೇರಿ ನಡುಬೀದಿಯಲ್ಲಿ ಸಾಯುವಂತೆ ಹಿಡಿದು ಬಡಿದರು. ೯೨ರಲ್ಲಿ ಅಯೋಧ್ಯೆಯ ಗಲಾಟೆ ತಾರಕಕ್ಕೇರಿದ ಸಂದರ್ಭದಲ್ಲಂತೂ ಪರಿಸ್ಥಿತಿ ಪೂರ್ತಿ ಬಿಗಡಾಯಿಸಿತ್ತು. ಹಿಂದೂಗಳ ಪರವೆಂಬ ಕಾರಣಕ್ಕೆ ಮುಸ್ಲೀಮರೂ ಜಾತಿಯಿಂದ ಬಹಿಷ್ಕಾರ ಹಾಕಿದರು. ಅಷ್ಟರಲ್ಲಾಗಲೇ ಬೇಡಿ ತಂದ ಹಣದಿಂದ ಸುಮಾರು ೩೪ ಸಣ್ಣಪುಟ್ಟ ಗುಡಿಗಳನ್ನು ರಿಪೇರಿ ಮಾಡಿಸಿದ್ದ. ಕೈಲಿದ್ದ ಹಣವೂ ಖರ್ಚಾಗಿ ದೊಡ್ಡ ಮೊತ್ತದ ಸಾಲ ತಲೆಯಮೇಲೇರಿತ್ತು. ಊರಲ್ಲಿರುವ ಹಿಂದೂ ಮುಸ್ಲೀಮರಿಬ್ಬರೂ ಹತ್ತಿರ ಸೇರಿಸುತ್ತಿರಲಿಲ್ಲ. ಕೊನೆಯ ಪ್ರಯತ್ನವೆಂಬಂತೆ ಗ್ರಾಮದಲ್ಲಿ ಹಿಂದೂ ಮುಸ್ಲೀಮರ ಸೌಹಾರ್ದತೆ ಸಾರಲು, ಇರುವ ಕೆಲವೇ ಕೆಲವು ಮಂದಿರಗಳನ್ನು ರಕ್ಷಿಸಲು ದುರ್ಗಾದಲನ್ ಮಂದಿರದಲ್ಲಿ ನವರಾತ್ರಿಯ ದುರ್ಗಾಪೂಜೆಯನ್ನು ಆಯೋಜಿಸಿದ.  ನನಗೆ ಗೊತ್ತಿರುವ ಮಟ್ಟಿಗೆ ಮುಸ್ಲೀಮರಿಂದ ಆಯೋಜಿಸಲ್ಪಡುವ ದುರ್ಗಾಪೂಜೆ ಬಂಗಾಳದಲ್ಲಿ ಸದ್ಯಕ್ಕೆ ಇದೊಂದೇ ಏನೋ. ದೇಶಕ್ಕೆ ದೇಶವೇ ಕೋಮುವಿದ್ವೇಶದಲ್ಲಿ ಹೊತ್ತಿ ಉರಿಯುತ್ತಿದ್ದಾಗ ಮುಸ್ಲೀಮನೊಬ್ಬ ದುರ್ಗಾಪೂಜೆಯನ್ನು ಆರಂಭಿಸಿದ್ದಾನೆಂಬ ಸುದ್ದಿ ಬಂಗಾಳದಲ್ಲಿ ಸಂಚಲನವನ್ನೇ ಮೂಡಿಸಿತು. ಮಾಧ್ಯಮಗಳೆಲ್ಲ ಪಾತ್ರಾದತ್ತ ಓಡಿಬಂದವು. ರಾತ್ರಿಕಳೆದು ಬೆಳಗಾಗುವುದರೊಳಗೆ ಊರವರ ಪಾಲಿಗೆ ವಿಲನ್ ಆಗಿದ್ದ ಪಠಾಣ ಬಂಗಾಳದ ಪಾಲಿಗೆ ಹೀರೋ ಆಗಿಹೋದ. IIT ಖರಗ್‌ಪುರ್ ಮೊದಲಿದ್ದ ಮಾದರಿಯಲ್ಲೇ ದೇವಾಲಯಗಳನ್ನು ಮರುನಿರ್ಮಿಸಲು ತಂತ್ರಜ್ಞಾನದ ನೆರವು ನೀಡುವುದಾಗಿ ಭರವಸೆ ನೀಡಿತು. ಆಷುತೋಷ್ ಮ್ಯೂಸಿಯಮ್ಮಿನ ನೆರವಿನಿಂದ ಇಲ್ಲಿನ ಸ್ಮಾರಕಗಳನ್ನು ರಕ್ಷಿಸಲು ‘Pathra Archaeological Preservation Committee’ ಎಂಬ NGO ಪ್ರಾರಂಭವಾಯ್ತು. ಕೇಂದ್ರದ ಸಂಸ್ಕೃತಿ ಸಚಿವಾಲಯದಿಂದ ೨೦ ಲಕ್ಷ ದೇಣಿಗೆಯೂ ದೊರಕಿತು. ೨೮ ದೇವಾಲಯಗಳನ್ನು ವಹಿಸಿಕೊಂಡ ಪುರಾತತ್ತ್ವ ಇಲಾಖೆ ಅವುಗಳಲ್ಲಿ ೧೪ನ್ನು ಭಾಗಶಃ ರಿಪೇರಿ ಮಾಡಿಸಿಟ್ಟಿದೆ. ಜೊತೆಗೆ ಈ ಎಲ್ಲ ದೇವಾಲಯಗಳೂ ರಾಷ್ಟ್ರೀಯ ಮಹತ್ವವುಳ್ಳ ಸ್ಮಾರಕಗಳೆಂದು ಘೋಷಿಸಲ್ಪಟ್ಟವು. ಇತ್ತೀಚೆಗಷ್ಟೇ ಸರ್ಕಾರದಿಂದ ಪಾತ್ರಾದ ಸ್ಮಾರಕಗಳ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ೪ ಕೋಟಿ ೬೦ ಲಕ್ಷಗಳ ನಿಧಿ ಮಂಜೂರಾಗಿದೆ. ಸ್ವತಃ ರಾಷ್ಟ್ರಪತಿಗಳೇ ಆತನನ್ನು ರಾಷ್ಟ್ರಪತಿ ಭವನಕ್ಕೆ ಕರೆಸಿಕೊಂಡು ಸನ್ಮಾನಿಸಿ ಬೆನ್ನುತಟ್ಟಿದರು. ರಾಷ್ಟ್ರೀಯ ಭಾವೈಕ್ಯತೆಗಾಗಿ ದುಡಿದವರಿಗೆ ನೀಡಲಾಗುವ ಕೇಂದ್ರ ಸರ್ಕಾರದ ಕಬೀರ್ ಪುರಸ್ಕಾರವೂ ಅರಸಿ ಬಂತು.
ಇಂದು ಪಾತ್ರಾ ಪ್ರವಾಸೋದ್ಯಮದಲ್ಲಿ, ವಾಸ್ತುಶಿಲ್ಪದಲ್ಲಿ ಮೊದಲಿನ ವೈಭವ ಪಡೆದಿದ್ದರೆ ಅವೆಲ್ಲವುಗಳ ಹಿಂದಿನ ಪ್ರೇರಕ ಶಕ್ತಿ ಅವನೊಬ್ಬ ಮತ್ತು ಅವನೊಬ್ಬ ಮಾತ್ರ. ಹಿಂದೂ ದೇವಾಲಯಗಳೆಡೆಗಿನ ಅವನ ಆ ನಿಸ್ವಾರ್ಥ ಪ್ರೀತಿ ನಾಲ್ಕೂವರೆ ದಶಕಗಳಾದರೂ ಇನ್ನೂ ಕರಗಿಲ್ಲ. ಆ ದಾರಿಯಲ್ಲಿ ಅವನನುಭವಿಸಿದ ಕಷ್ಟ, ನಷ್ಟ, ಹಲ್ಲೆ, ಅವಮಾನ, ಸಂಕಟಗಳಿಗೆ ಲೆಕ್ಕವಿಲ್ಲ. ಹೆಚ್ಚಿನ ದೇವಾಲಯಗಳೇನೋ ಇವನ ಕಾರಣದಿಂದ ಇಂದು ಒಂದು ಮಟ್ಟಿಗೆ ರಕ್ಷಿಸಲ್ಪಟ್ಟಿವೆ. ಆದರೆ ಆ ಕೆಲಸದಲ್ಲಿ ಯಾವ ಪ್ರತಿಫಲವೂ ಇಲ್ಲದೇ ದುಡಿದ ಪಠಾಣನ ಪರಿಸ್ಥಿತಿಯೇನೂ ಅಂದಿನ ಮಂದಿರಗಳಿಗಿಂತ ಭಿನ್ನವಾಗುಳಿದಿಲ್ಲ. ವಯಸ್ಸು ಅರವತ್ತು ದಾಟಿ ಸಾಗಿದೆ. ದುಡಿದ ದುಡ್ಡಿನ ಹೆಚ್ಚಿನಂಶವೆಲ್ಲ ಮಂದಿರ ನಿರ್ಮಾಣಕ್ಕೇ ಖಾಲಿಯಾಗಿದೆ. ರಸ್ತೆಯ ಕೆಳಗಿನ ನದಿಪಾತ್ರದ ಹತ್ತಿರದ ಸಣ್ಣ ತಗಡಿನ ಮಾಡಿನ ಮುರುಕಲು ಮನೆಯಲ್ಲೇ ಆತನ ವಾಸ. ವರ್ಷಂಪ್ರತಿ ನದಿ ಉಕ್ಕಿ ಬಂದಾಗಲೆಲ್ಲ ಮನೆಯೊಳಗೆ ನೀರು ನುಗ್ಗುತ್ತದೆ. ಕೆಲ ವರ್ಷಗಳ ಹಿಂದೆ ಇಡೀ ಮನೆಗೆ ಮನೆಯೇ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ದೇಶದ ಮೂಲೆಮೂಲೆಗಳಿಂದ ಅರಸಿ ಬಂದ ಪುರಸ್ಕಾರ, ಪ್ರಶಸ್ತಿ, ಸರ್ಟಿಫಿಕೇಟು, ಶಾಲುಗಳು ಸ್ವಂತಕ್ಕೆ ಐದು ಪೈಸೆಯ ಲಾಭವನ್ನೂ ತಂದುಕೊಡಲಿಲ್ಲ. ಜೊತೆಗೆ ಎರಡು  ಬಾರಿ ಹೃದಯಾಘಾತವೂ ಆಗಿದೆ. ಒಂದು ಕಿಡ್ನಿಯೂ ಕೈಕೊಟ್ಟಿದೆ. ಚಿಕಿತ್ಸೆಗೆ ಕೈಯಲ್ಲಿ ಕಾಸಿಲ್ಲದೇ ಮೂವತ್ತು ವರ್ಷಗಳಷ್ಟು ದೀರ್ಘಕಾಲ ಕಷ್ಟಪಟ್ಟು ಸಂಪಾದಿಸಿದ ಪಾತ್ರಾದ ಇತಿಹಾಸದ ಬಗೆಗಿನ ಡಾಕ್ಯುಮೆಂಟರಿಯ ಹಸ್ತಪ್ರತಿ ’ಮಂದಿರ್‌ಮೋಯ್ ಪಾತ್ರಾರ್ ಇತಿಬ್ರಿತಾ’ವನ್ನು ಪುಸ್ತಕವಾಗಿ ಪ್ರಕಟಿಸಲು ಪ್ರಕಾಶಕನೊಬ್ಬನಿಗೆ ಯಕಃಶ್ಚಿತ್ ಹದಿನೈದು ಸಾವಿರಕ್ಕೆ ಮಾರಿದನೆಂದರೆ ಅವನ ಪರಿಸ್ಥಿತಿ ಹೇಗಿರಬಹುದೆಂಬುದು ನಿಮ್ಮ ಊಹೆಗೆ ಬಿಟ್ಟದ್ದು.
ಏಳೆಂಟು ಮಂದಿರಗಳನ್ನು ನೋಡುತ್ತಿದ್ದಂತೆ ನಿಧಾನಕ್ಕೆ ಸಂಜೆಯಾಗಲು ಶುರುವಾಗಿತ್ತು. ಪಾತ್ರಾವನ್ನು ತಲುಪಿದ್ದೇ ತಡವಾದದ್ದರಿಂದ ಅಲ್ಲಿ ಹೆಚ್ಚಿನ ಸಮಯ ಕಳೆಯಲು ಅವಕಾಶವಾಗಲಿಲ್ಲ. ರಾತ್ರಿಯಾಗುವುದರೊಳಗೆ ಹಾವಡಾ ತಲುಪಿ ಅಲ್ಲಿಂದ ಬಾರಾಸಾತಿಗೆ ಸಿಟಿಬಸ್ಸು ಹಿಡಿಯಬೇಕಾಗಿತ್ತು. ಪಾತ್ರಾವನ್ನು ಸುಲಭಕ್ಕೆ ಬಿಟ್ಟುಬರಲು ಮನಸ್ಸಾಗಲಿಲ್ಲ. ಮನಸ್ಸೆಲ್ಲ ಬರೀ ಪಠಾಣನನ್ನೇ ತುಂಬಿಕೊಂಡು ಭಾರವಾಗಿತ್ತು. ಪಾತ್ರಾದ ಕಥೆ ಶುರುವಾಗುವುದು, ಮುಗಿಯುವುದು ಅವನಿಂದಲೇ. ಅವನನ್ನು ಭೇಟಿಯಾಗದೇ ಹಿಂದಿರುಗುವುದೆಂತು! ಮತ್ತೊಮ್ಮೆ ಬರಲು ಸಾಧ್ಯವಾಗುತ್ತೋ ಇಲ್ಲವೋ? ಹಾಗೊಂದು ವೇಳೆ ಬಂದರೂ ಅವನಿರುತ್ತಾನೋ? ಸಿಗುತ್ತಾನೋ?
ಸೂರ್ಯ ನಿಧಾನಕ್ಕೆ ಕೆಂಪಾಗತೊಡಗಿದ್ದ. ಸುಮಾರು ಹೊತ್ತು ಕಾದನಂತರ ದಡಬಡ ಸದ್ದು ಮಾಡುತ್ತ ಬಸ್ಸು ಸುಯ್ಯನೆ ಸುಂಟರಗಾಳಿಯಂತೆ ಬಂದು ನಿಂತಿತು. ಉಸಿರಾಡಲು ಸಾಧ್ಯವಿಲ್ಲದಷ್ಟು ರಶ್ ಇದ್ದರೂ ತೂರಿಕೊಂಡು ಮೆಟ್ಟಿಲಿನ ಮೇಲೆ ಜನರ ಮಧ್ಯೆ ಜಾಗಮಾಡಿಕೊಂಡು ನಿಂತೆ. ಸೇನ್‌ಗುಪ್ತಾ ಫುಟ್‌ಬೋರ್ಡ್ ಮೇಲೆ ನೇತಾಡುತ್ತಿದ್ದ. ಅವರಿವರು ಏನಾದರೂ ಅಂದುಕೊಂಡಾರು ಎಂದೆಲ್ಲಾ ತಲೆಕೆಡಿಸಿಕೊಳ್ಳುವ ಜಾಯಮಾನ ಅವನದಲ್ಲವೇ ಅಲ್ಲ. ಬಸ್ ಹೊರಟಿತ್ತಷ್ಟೆ. ’ಅಬೇ ತೇರಾ ದೋಸ್ತ್ ಇಸೀ ಬಸ್ ಸೆ ಉತ್ರಾ ಹೈ, ಜಲ್ದಿ ದೇಖ್, ಜಲ್ದೀ ದೇಖ್’ ಎಂದು ಕಿರುಚತೊಡಗಿದ. ಪಠಾಣ ಅದೇ ಬಸ್ಸಿನಿಂದ ಇಳಿದನಂತೆ. ಅವನೆಲ್ಲಿಯಾದರೂ ಕಾಣಬಹುದಾ ಎಂದು ಬಗ್ಗಿ ಬಗ್ಗಿ ನೋಡತೊಡಗಿದೆ. ಉಹೂಂ....... ಬಸ್ಸು ಹೊರಟಾಗಿತ್ತು. ’ಅಬೇ ಉತರ್ ಜಾಯೆಂಗೆ ಆಜಾ’ ಎಂದ.  ಏನಾಯಿತೋ ಏನೋ, ಬೇಡವೆಂದು ಕಣ್ಸನ್ನೆ ಮಾಡಿದೆ. ’ಇತ್ನಾ ದೂರ್ ಆಕೆ ಉಸೆ ಬಿನಾ ದೇಖೆ ಜಾಯೇಗಾ ಕ್ಯಾ’ ಎಂದು ಅಲ್ಲಿದ್ದವರ ಮುಂದೆಯೇ ಮಂತ್ರಪುಷ್ಪ ಉದುರಿಸಲು ಶುರುಮಾಡಿದ. ನನ್ನ ಮನಸ್ಸು ಹೇಳುತ್ತಿತ್ತು. ಮುಂದಿನ ಬಾರಿ ಪಾತ್ರಾಕ್ಕೆ ಬಂದಾಗ ಆತ ಖಂಡಿತ ಸಿಕ್ಕೇ ಸಿಗುತ್ತಾನೆ. ಅಂಥವರ ಸಂತತಿ ಸಾವಿರವಾಗಲಿ..