Pages

Tuesday, August 16, 2016

ಶ್ರೀಮಚ್ಛಂಕರಭಗವತ್ಪಾದಚರಿತ್ರ: ಶಾರದಾ ಪೀಠ ಪ್ರಕರಣ

   

    ಶಿವನು ಆಚಾರ್ಯ ಶಂಕರರಿಗೆ ಕಾಶಿಯಲ್ಲಿ ಚಂಡಾಲನ ವೇಷದಲ್ಲಿ ದರ್ಶನವಿತ್ತ ಕಥೆ ಹೆಚ್ಚಿನೆಲ್ಲರೂ ಕೇಳಿದ್ದೇ. ಶಂಕರರ ದಾರಿಗೆ ಚಂಡಾಲನೊಬ್ಬ ಅಡ್ಡಬಂದ. ಅಪಸರ, ಆಚೆ ಹೋಗು ಎಂದರು ಶಂಕರರು. ಅಪಸರತು ಕಃ? ದೇಹಃ ಅಹೋ ಆತ್ಮಾ? ಕಸ್ತಾವದಪಸರತು? ದೂರ ಹೋಗಬೇಕಾದುದು ಒಂದು ಅನ್ನಮಯ ದೇಹದಿಂದ ಇನ್ನೊಂದು ಅನ್ನಮಯ ದೇಹವೋ ಅಥವಾ ಕೇವಲ ಸಾಕ್ಷಿಯಾದ ಒಂದು ಆತ್ಮದಿಂದ ಇನ್ನೊಂದು ಆತ್ಮವೋ? ಎಂದು ಕೇಳಿದ ಚಂಡಾಲ. ಇದು ಮಾಧವೀಯ ಶಂಕರ ವಿಜಯದಲ್ಲಿ ಬರುವ ಸಂಗತಿ. ಶಂಕರಾಚಾರ್ಯರದ್ದು ಎನ್ನುವ ’ಮನೀಷಾ ಪಂಚಕ’ದಲ್ಲೂ ಸರಿಸುಮಾರು ಇಂಥದೇ ಅವತರಣಿಕೆಯಿದೆ('ಚಾಂಡಾಲೋಸ್ತು ಸ ತು ದ್ವಿಜೋಸ್ತು ಗುರುರಿತ್ಯೇಷಾ ಮನೀಷಾ ಮಮ'). ಇದರ ಪ್ರಕಾರ ಚಂಡಾಲನ ಮಾತಿಗೆ ಜ್ಞಾನೋದಯಗೊಂಡ ಆಚಾರ್ಯರು ಆತನನ್ನು ಗುರುವೆಂದು ಒಪ್ಪಿ ನಮಸ್ಕರಿಸಿದರು. ಆಗ ಚಂಡಾಲನ ಜಾಗದಲ್ಲಿ ಸಾಕ್ಷಾತ್ ಶಿವನೇ ಪ್ರತ್ಯಕ್ಷನಾದ. ಆಚಾರ್ಯರು ಭಕ್ತಿಯಿಂದ ಶಿವನನ್ನು ಸ್ತುತಿಸಿದರು. ಶಿವನು ಪ್ರಸನ್ನನಾಗಿ ಬಾದರಾಯಣರು ಬ್ರಹ್ಮಸೂತ್ರಗಳನ್ನು ರಚಿಸಿ ದುರ್ಮತಗಳನ್ನು ಖಂಡಿಸಿದಂತೆ ನೀನು ವೇದಗಳು, ಬ್ರಹ್ಮಸೂತ್ರಾದಿಗಳಿಗೆ ಭಾಷ್ಯವನ್ನು ರಚಿಸಿ, ಕುತ್ಸಿತ ತತ್ತ್ವಗಳನ್ನು ಪ್ರಚಾರ ಮಾಡುತ್ತಿರುವ ಭಾಸ್ಕರ, ನೀಲಕಂಠ, ಅಭಿನವಗುಪ್ತ, ಮಂಡನರನ್ನು ಜಯಿಸಿ, ಅದ್ವೈತ ತತ್ತ್ವವನ್ನು ಖ್ಯಾತಿಗೊಳಿಸಿ ಜನರ ಅಜ್ಞಾನವನ್ನು ತೊಲಗಿಸು ಎಂದು ಆಶೀರ್ವದಿಸಿದ. ಬೇರೆ ಶಂಕರವಿಜಯಗಳಲ್ಲಿ ಈ ಕಥೆಯಿಲ್ಲ. ಭಾಸ್ಕರಾದಿಗಳು ಐತಿಹಾಸಿಕವಾಗಿ ಆಚಾರ್ಯರಿಗಿಂತ ಈಚಿನವರೆಂದು ಮಾಧವೀಯದ ಕವಿಗೆ ಗೊತ್ತಿಲ್ಲವೇನೋ! ಚಂಡಾಲನನ್ನೂ ಗುರುವೆಂದು ಒಪ್ಪಿಕೊಂಡ  ಆಚಾರ್ಯರು ಪರಮ ಸೆಕ್ಯುಲರ್ ಎಂದು ಪ್ರಚುರಪಡಿಸಲೋ ಈ ಕಥೆ ಹುಟ್ಟಿದ್ದೋ ಅಥವಾ ಆಚಾರ್ಯರು ಚಂಡಾಲನನ್ನು ಗುರು ಎಂದರೆ ಅವರಿಗೇ ಅವಮಾನ ಎಂಬ ಭ್ರಾಂತಿಯಿಂದ ಆ ಚಂಡಾಲ ಶಿವನೇ ಎಂದು ಈ ಕಥೆ ಹುಟ್ಟಿತೋ ನಾಕಾಣೆ. ಅದೇನೇ ಇರಲಿ. ತತ್ತ್ವಜ್ಞಾನಿಯೊಬ್ಬ ಜನ್ಮದಿಂದ ಯಾವ ವರ್ಣದವನಾದರೂ ಸದ್ಗುರುವಿನಂತೆ ಗೌರವಕ್ಕೆ ಅರ್ಹನೆಂಬ ಆಸ್ತಿಕ ಅದ್ವೈತಿಗಳ ನಂಬಿಕೆಗೊಂದು ನಮಸ್ಕಾರ.
       ಚಿದ್ವಿಲಾಸೀಯದಂತೆ ಆಚಾರ್ಯರು ಕಾಶಿವಿಶ್ವೇಶನನ್ನು ಪೂಜಿಸಿ ’ಅದ್ವೈತವು ಸತ್ಯವೋ, ದ್ವೈತವು ಸತ್ಯವೋ ಎಂಬ ಸಂಶಯವನ್ನು ತೊಲಗಿಸು’ ಎಂದು ಬೇಡಿಕೊಂಡಾಗ ಲಿಂಗದಿಂದ ಪ್ರತ್ಯಕ್ಷನಾದ ಶಿವನು ಅದ್ವೈತವೇ ಶುದ್ಧಸತ್ಯವೆಂದು ಮೂರು ಬಾರಿ ಕೈಯೆತ್ತಿ ಸಾರಿ, ವೇದಾದಿಗಳಿಗೆ ಅದ್ವೈತಪರ ಭಾಷ್ಯವನ್ನು ಬರೆಯುವಂತೆ ಹೇಳಿದನಂತೆ. ಶಂಕರರು ಸೂತ್ರಭಾಷ್ಯವನ್ನು ರಚಿಸಿದ್ದು ಅವರ ಹನ್ನೆರಡನೇ ವಯಸ್ಸಿನಲ್ಲಿ ಎನ್ನಲಾಗುತ್ತದೆ. ಆಮೇಲೆ ಭಗವದ್ಗೀತೆ ಹಾಗೂ ವೇದಾಂತಗಳಿಗೆ ಭಾಷ್ಯವನ್ನೂ ರಚಿಸಿದರು. ಈ ಭಾಷ್ಯಗಳಿಗೆ ಆಕಾಲದ ಸುಪ್ರಸಿದ್ಧ ವಿದ್ವಾಂಸರಾದ ಕುಮಾರಿಲಭಟ್ಟರಿಂದ ವಾರ್ತಿಕೆಯನ್ನು ಬರೆಯಿಸಬೇಕೆಂದು ಶಂಕರರಿಗೆ ಅಭಿಲಾಷೆಯುಂಟಾಯಿತು. ಭರತಖಂಡದಲ್ಲೆಲ್ಲ ಅವೈದಿಕರು ತಲ್ಲಣಗೊಳ್ಳುವ ಹೆಸರದು. ಕುಮಾರಿಲ ಭಟ್ಟರು ವಾದಕ್ಕೆ ಕರೆದರೆಂದರೆ ಮಹಾಮಹಾ ಬೌದ್ಧ ವಿದ್ವಾಂಸರ ಬಾಯಿಪಸೆ ಒಣಗಿಹೋಗುತ್ತಿತ್ತು. ಆ ಪಾಖಂಡಿಯ ಜೊತೆ ವಾದಕ್ಕೆ ಕೂರುವುದು ತಮ್ಮ ಧರ್ಮಕ್ಕೆ ಮಾಡುವ ಅವಮಾನವೆಂದು ಹೆಚ್ಚಿನವರೆಲ್ಲ ಭಟ್ಟರೆದುರು ಕೂರುವುದನ್ನು ತಪ್ಪಿಸಿಕೊಳ್ಳುತ್ತಿದ್ದರು. ಮಾಧ್ಯಮಿಕರ ನಿರಾಲಂಬವಾದವನ್ನೂ, ಬೌದ್ಧರ ಶೂನ್ಯವಾದವನ್ನೂ ಖಂಡಿಸಿ ವೇದಪ್ರಾಮಣ್ಯವನ್ನು ಸಿದ್ಧಪಡಿಸಿದ ಮಹಾಪುರುಷರಿವರು. ’ವ್ಯವಹಾರೇ ಭಾಟ್ಟನಯಃ’ ಎಂದು ವಿರೋಧಿಗಳಾದ ಅದ್ವೈತಿಗಳೂ ಇವರ ವಾದಕ್ಕೆ ತಲೆದೂಗಿದ್ದರು. ಋಗ್ವೇದಕ್ಕೆ ಭಾಷ್ಯ ಬರೆದ ಸ್ಕಂದಸ್ವಾಮಿಗೂ, ಶತಪಥ ಬ್ರಾಹ್ಮಣದ ಮೇಲೆ ಭಾಷ್ಯ ಬರೆದ ಹರಿಸ್ವಾಮಿಗೂ, ನಿರುಕ್ತದ ಮೇಲೆ ಭಾಷ್ಯವನ್ನು ಬರೆದ ಮಹೇಶ್ವರಾಚಾರ್ಯನಿಗೂ ಕುಮಾರಿಲರ ಅಭಿಪ್ರಾಯಗಳೇ ಆಧಾರ. ಶ್ಲೋಕವಾರ್ತಿಕ, ತಂತ್ರವಾರ್ತಿಕ, ಟುಪ್‍ಟೀಕಾಗಳ ಮೂಲಕ ಶಬರಸ್ವಾಮಿಗಳ ಭಾಷ್ಯಕ್ಕೆ ವಾರ್ತಿಕೆಯನ್ನು ಬರೆದು ಪೂರ್ವಮೀಮಾಂಸಾ ದರ್ಶನವನ್ನು ಜಗದ್ವಿಖ್ಯಾತಗೊಳಿಸಿದ ಕೀರ್ತಿ ಕುಮಾರಿಲರದ್ದು. ಅದ್ವೈತಿಗಳು ಬ್ರಹ್ಮಸತ್ಯವೆಂದರೆ ಮೀಮಾಂಸಕರು ದೇವರ ಬಗ್ಗೆಲ್ಲ ತಲೆಕೆಡಿಸಿಕೊಳ್ಳುವವರಲ್ಲ. ಅವರಿಗೆ ದೇವರಿರಲೀ, ಇಲ್ಲದಿರಲೀ ಎರಡೂ ಒಂದೇ. ಆದರೆ ವೇದಗಳು ಮಾತ್ರ ಸ್ವತಃ ಪ್ರಮಾಣವೆಂದು ಮೀಮಾಂಸಕರ ಅಭಿಮತ. ವೈದಿಕ ದರ್ಶನದ ಮಜವೇ ಅದು. ಷಡ್ದರ್ಶನಗಳಲ್ಲಿ ನ್ಯಾಯ ಮತ್ತು ವೈಶೇಷಿಕ ದರ್ಶನಗಳು ಮೂಲವಾಗಿ ನಿರೀಶ್ವರ ದರ್ಶನಗಳು. ಸಾಂಖ್ಯರೂ ದೇವರನ್ನು ಒಪ್ಪುವುದಿಲ್ಲ. ಯೌಗಿಕರೂ ಸಾಂಖ್ಯರಂತೆಯೇ. ಯೋಗ ಸಾಂಖ್ಯಗಳೆರಡೂ ಮುಂದೆ ಒಂದಾಗಿ ಕಲೆತುಹೋದವು. ಮೀಮಾಂಸಕರು ದೇವರಿಗೆ ತುಂಬ ಸೀಮಿತ ಅಧಿಕಾರವನ್ನು ನೀಡುತ್ತಾರೆ. ಹಾಗಿದ್ದರೂ ಇವೆಲ್ಲ ಅಪ್ಪಟ ಆಸ್ತಿಕ ವೈದಿಕ ದರ್ಶನಗಳು(ವೇದಗಳನ್ನು ಒಪ್ಪಿಕೊಳ್ಳದಿದ್ದವರನ್ನು ನಾಸ್ತಿಕರೆಂದು ಕರೆದರೇ ವಿನಹ ದೇವರನ್ನು ಒಪ್ಪಿಕೊಳ್ಳದಿದ್ದವರನ್ನಲ್ಲ ಎಂಬುದನ್ನು ಗಮನಿಸಬೇಕು). ಪೂರ್ಣಪ್ರಮಾಣದಲ್ಲಿ ದೇವರನ್ನೊಪ್ಪುವವರು ವೈದಿಕ ದರ್ಶನದ ಆರನೇ ಶಾಖೆಯಾದ ವೇದಾಂತಿಗಳೇ. ಪೂರ್ವ ಮೀಮಾಂಸದ ಪದ್ಧತಿಯನ್ನು ಅಳವಡಿಸಿಕೊಂಡು ಉಪನಿಷತ್ತುಗಳು, ಬ್ರಹ್ಮಸೂತ್ರಗಳು ಮತ್ತು ಗೀತೆಯಲ್ಲಿರುವ ಸತ್ಯಗಳನ್ನು ಸಮನ್ವಯಗೊಳಿಸಲು ಪ್ರಯತ್ನಿಸಿದ್ದರಿಂದ ವೇಂದಾತ ದರ್ಶನಕ್ಕೆ ಉತ್ತರ ಮೀಮಾಂಸೆಯೆಂಬ ಹೆಸರೂ ಇದೆ. ನಮ್ಮ ಈಗಿನ ದೇವರುಗಳೆಲ್ಲ ವೇದಾಂತದ ದ್ವೈತಾದ್ವೈತ, ವಿಶಿಷ್ಟಾದ್ವೈತ, ಅಚಿಂತ್ಯ ಅಬೇಧವೇತ್ಯಾದಿ ಶಾಖೋಪಶಾಖೆಗಳಲ್ಲಿ ಸೃಷ್ಟಿಯಾದವೇ. ಅದು ಬೇರೆಯೇ ವಿಚಾರ ಬಿಡಿ. ಬೌದ್ಧಮತದ ಒಳರಹಸ್ಯವನ್ನೆಲ್ಲ ತಿಳಿಯಲು ನಾಲಂದದ ಮುಖ್ಯಸ್ಥ ಧರ್ಮಪಾಲಯಲ್ಲಿ ಶಿಷ್ಯನಾಗಿ ಕುಮಾರಿಲರು ಸೇರಿಕೊಂಡರು. ವೈದಿಕ ಮತವನ್ನು ಖಂಡಿಸಿ ಗುರುಗಳು ಪಾಠಮಾಡಿದಾಗಲೆಲ್ಲ ಕುಮಾರಿಲರ ಕಣ್ಣಂಚು ಒದ್ದೆಯಾಗುತ್ತಿತ್ತು. ಸುತ್ತಲಿದ್ದ ಸಹಪಾಠಿಗಳು, ಗುರುಗಳು ಇದನ್ನು ಗಮನಿಸಿದರು. ಪ್ರಚ್ಛನ್ನ ಬೌದ್ಧನ ವೇಷದಲ್ಲಿ ಸೇರಿಕೊಂಡವನ ನಿಜರೂಪ ತಿಳಿಯಲು ಅವರಿಗೆ ತುಂಬ ಹೊತ್ತೇನೂ ಬೇಕಾಗಲಿಲ್ಲ. ಆದರೆ ಹಾಗೆ ಬಂದವ ಕುಮಾರಿಲಭಟ್ಟರೆಂಬುದು ಗೊತ್ತಾದಾಗ ಮಾತ್ರ ನಾಲಂದದ ಬೌದ್ಧ ಭಿಕ್ಕುಗಳಿಗೆ ಕಾಲಡಿಯ ನೆಲ ಬಿರಿದ ಅನುಭವ. ಎದುರಿಗಿರುವ ಆಸಾಮಿ ಅಂಥಿಂಥವನಲ್ಲ. ವೈದಿಕ ಧರ್ಮದ ವಿರೋದಿಗಳೇ ಪ್ರಬಲರಾಗಿದ್ದ ಕಾಲದಲ್ಲಿ ಬೌದ್ಧಮತವನ್ನು ಖಂಡತುಂಡವಾಗಿ ಖಂಡಿಸಿ ಚೆಂಡಾಡಿ ವೈದಿಕ ಧರ್ಮದ ಪಕ್ಷವನ್ನು ಹಿಡಿದು ಅದನ್ನು ನಾಡಿನಾದ್ಯಂತ ಪ್ರಚಾರ ಮಾಡಿದ ಮಹಾಮೀಮಾಂಸಕ. ಆದರೆ ಒಬ್ಬನೇ ಸಿಕ್ಕಿದಾಗ ಬಿಡುತ್ತಾರೆಯೇ? ಸಮಯ ಸಾಧಿಸಿ ತಲೆಗೊಂದರಂತೆ ಏಟು ಹಾಕಿ ಬೆಟ್ಟದ ತುದಿಯಿಂದ ಕುಮಾರಿಲರನ್ನು ಕೆಳಗೆ ತಳ್ಳಿದರು. ’ವೇದಗಳು ಪ್ರಮಾಣವಾದರೆ ನನಗೆ ಯಾವ ಅಪಾಯವೂ ಆಗದಿರಲಿ’ ಎಂದು ಭಟ್ಟರು ಕೂಗಿಕೊಂಡರಂತೆ. ಬೆಟ್ಟದಿಂದ ಕಂದಕಕ್ಕೆ ಬಿದ್ದರೂ ಕುಮಾರಿಲರಿಗೆ ಏನೂ ಆಗಲಿಲ್ಲ. ಆದರೆ ಸಣ್ಣ ಕಲ್ಲೊಂದು ತಾಗಿ ಕಣ್ಣಿಗೆ ಗಾಯವಾಯಿತಂತೆ. ಮೀಮಾಂಸಕ ಮತದಲ್ಲಿ ವೇದಗಳು ಸ್ವತಃ ಪ್ರಮಾಣವಾದವು. ಅಂಥದ್ದರಲ್ಲಿ ’ಪ್ರಮಾಣವಾದರೆ’ ಎಂಬ ಸಂಶಯವನ್ನು ಸೂಚಿಸಿದ್ದರಿಂದಲೂ ಪ್ರಚ್ಛನ್ನವೇಷದಲ್ಲಿ ಶಾಸ್ತ್ರಶ್ರವಣ ಮಾಡಿದ್ದರಿಂದಲೂ ಒಂದು ಕಣ್ಣಿಗೆ ಗಾಯವಾಯಿತೆಂದು ಕಥೆ. ವೇದ ಮಹಾತ್ಮ್ಯವನ್ನರಿಯದೇ ವೇಷಾಂತರಿಯಾಗಿ ವಿರೋಧಿಯ ರಹಸ್ಯವನ್ನರಿತು ಸೋಲಿಸುವ ಲೌಕಿಕ ಕುತಂತ್ರವನ್ನು ಮಾಡಿದ್ದರಿಂದ, ಶಿಷ್ಯನೆಂದು ನಂಬಿದ ಗುರುವಿಗೆ ವಂಚನೆ ಮಾಡುವಂಥದ ವೇದವಿರೋಧಿ ಕರ್ಮದಲ್ಲಿ ತೊಡಗಿದ್ದರಿಂದ ಕುಮಾರಿಲರು ದೇಹತ್ಯಾಗಕ್ಕೆ ನಿರ್ಧರಿಸಿದರು.
       ಆ ಕಾಲದಲ್ಲಿ ವೈದಿಕರೂ ಬೌದ್ಧರೂ ಒಬ್ಬರ ಶಾಸ್ತ್ರವನ್ನು ಇನ್ನೊಬ್ಬರು ಕಲಿತು ಪರಸ್ಪರ ಖಂಡನೆ ಮಂಡನೆಗಳನ್ನು ಮಾಡುತ್ತಿದ್ದರೆಂಬುದು ಕುಮಾರಿಲರ ಕಥೆಯಿಂದ ಸ್ಪಷ್ಟ. ಆದರೆ ಕುಮಾರಿಲರನ್ನು ಗುಡ್ಡದ ತುದಿಯಿಂದ ತಳ್ಳಿದ, ಪ್ರಾಯಶ್ಚಿತ್ತಕ್ಕೆಣಿಸಿದ ಕಥೆಗಳು ಒಂದೊಂದು ಶಂಕರವಿಜಯದಲ್ಲಿ ಒಂದೊಂದು ತೆರನಾಗಿದೆ. ಬ್ರಾಹ್ಮಣನೆಂದು ತಿಳಿದು ಬೌದ್ಧರು ಕುಮಾರಿಲರನ್ನು ಹೊರಹಾಕಿದಾಗ ಅವರನ್ನೆಲ್ಲ ವಾದದಲ್ಲಿ ಜಯಿಸಿ ಸುಧನ್ವ ರಾಜನ ಸಹಾಯದಿಂದ ಅವರ ತಲೆಕಡಿಸಿದರೆನ್ನುತ್ತದೆ ಚಿದ್ವಿಲಾಸೀಯ. ಅನಂತಾನಂದಗಿರೀಯದ ಒಂದು ಕಥೆಯ ಪ್ರಕಾರ ರಾಜನು ಗಡಿಗೆಯಲ್ಲಿ ಸರ್ಪವನ್ನಿಟ್ಟು ಇದೇನೆಂಬ ಪ್ರಶ್ನೆ ಹಾಕಿದನಂತೆ. ಬೌದ್ಧ ವಿದ್ವಾಂಸರು ’ಇದರಲ್ಲಿ ಹಾವಿದೆ’ ಎಂದರು. ಕುಮಾರಿಲರು ’ಅದರಲ್ಲಿ ಶೇಷಶಾಯಿಯಾದ ವಿಷ್ಣುವಿದ್ದಾನೆ’ ಎಂದರು. ರಾಜನು ಗಡಿಗೆಯನ್ನು ತೆಗೆದು ನೋಡಲಾಗಿ ಸರ್ಪವು ವಿಷ್ಣುವಿನ ವಿಗ್ರಹವಾಗಿ ಬದಲಾಗಿತ್ತು, ರಾಜ ಕುಮಾರಿಲರ ಶಿಷ್ಯನಾಗಿ ಬೌದ್ಧರ ತಲೆಕಡಿಸಿ ಕಾಳ್ಗಿಚ್ಚಿಗಿಟ್ಟ. ಬೆಟ್ಟದಿಂದ ಬಿದ್ದರೂ ಎದ್ದು ಬಂದ ಪವಾಡ ಬೇರೆ. ಬುದ್ಧನ ಪವಾಡಗಳನ್ನು ಶ್ಲೋಕವಾರ್ತಿಕದ ಚೋದನಾಸೂತ್ರದಲ್ಲಿ ಹಾಸ್ಯಮಾಡಿದ ಭಟ್ಟರು ಇಂಥ ಅದ್ಭುತದರ್ಶನಗಳಿಗೆಲ್ಲ ಬೆಲೆಕೊಡುತ್ತಾರೆಂಬುದಕ್ಕೆ ಯಾವ ಆಧಾರವೂ ಇಲ್ಲ. ಇದೆಲ್ಲ ಶಂಕರವಿಜಯಕಾರರ ಕಲ್ಪನಾ ಸಾಮ್ರಾಜ್ಯ ಮಾತ್ರ.
ದ್ವಾರಕಾಮಠದಲ್ಲಿರುವ ಕುಮಾರಿಲ ಶಂಕರ ಸಮಾಗಮದ ಉಬ್ಬುಶಿಲ್ಪ
       ಅದೇನೇ ಆದರೂ ಕುಮಾರಿಲರು ತುಷಾಗ್ನಿ ಪ್ರವೇಶ ಮಾಡಿದ್ದೂ ಹಾಗೂ ಆ ಸಮಯದಲ್ಲಿ ಅವರನ್ನು ಶಂಕರರು ಭೇಟಿಯಾದ ಬಗ್ಗೆ ಎಲ್ಲ ಶಂಕರ ವಿಜಯಗಳಲ್ಲೂ ಸಹಮತವಿದೆ. ವ್ಯಾಸಾಚಲೀಯದ ಪ್ರಕಾರ ಆಚಾರ್ಯರು ತಮ್ಮ ಸೂತ್ರಗಳಿಗೆ ವಾರ್ತಿಕೆಯನ್ನು ಬರೆಸಲು ಕುಮಾರಿಲರನ್ನು ಹುಡುಕಿಕೊಂಡು ಪ್ರಯಾಗಕ್ಕೆ ಬಂದಾಗ ಹೊಟ್ಟಿನ ಮಧ್ಯೆ ಬೇಯುತ್ತಿದ್ದ ಭಟ್ಟಪಾದರನ್ನು ಕಂಡರು. ಅನಂತಾನಂದಗಿರೀಯ, ಚಿದ್ವಿಲಾಸೀಯ ಮತ್ತು ಆನಂದಗಿರೀಯದಂತೆ ಆಚಾರ್ಯರು ಕಾಶಿಯಲ್ಲಿದ್ದಾಗ ಕುಮಾರಿಲರ ಮಹಿಮೆಯನ್ನು ತಿಳಿದು ಅವರನ್ನು ಹುಡುಕಿಕೊಂಡು ದಕ್ಷಿಣದ ರುದ್ಧಪುರಿಗೆ ಬಂದರು. ಈ ರುದ್ದಪುರಿ ಈಗಿನ ಆಂಧ್ರದ ಅನಂತಪುರ ಜಿಲ್ಲೆಯ ರೊದ್ದಂ ಆಗಿರಬೇಕು. ಕುಮಾರಿಲರ ತಂತ್ರವಾರ್ತಿಕದಲ್ಲಿ ಬರುವ ದ್ರಾವಿಡಪದಗಳ ಹೇರಳ ಪ್ರಯೋಗವೂ ಅವರನ್ನು ದಾಕ್ಷಿಣಾತ್ಯನೆಂದೇ ಸೂಚಿಸುತ್ತದೆ. ಶಂಕರರು ಕುಮಾರಿಲರನ್ನು ಭೇಟಿಯಾದದ್ದೂ ಕೂಡ ಇಲ್ಲಿಯೇ .
       ತುಷಾಗ್ನಿಯ ಮಧ್ಯದಲ್ಲಿದ್ದಾಗೆ ಆಚಾರ್ಯರನ್ನು ಭೇಟಿಯಾದ ಭಟ್ಟರು ಮಗಧದಲ್ಲಿ ಮಹಾವೈದಿಕನಾದ ವಿಶ್ವರೂಪನೆಂಬ ತಮ್ಮೊಬ್ಬ ಶಿಷ್ಯನನ್ನು ಜಯಿಸುವಂತೆ ಶಂಕರರಿಗೆ ಸೂಚಿಸುತ್ತಾರೆ(’ಸ ವಿಶ್ವರೂಪಃ ಪ್ರಥಿತೋ ಮಹೀತಲೇ’). ಮಾಧವೀಯದಲ್ಲೂ ಸರಿಸುಮಾರು ಇದೇ ವೃತ್ತಾಂತವಿದೆ. ’ಶಬರಭಾಷ್ಯಕ್ಕೆ ವಾರ್ತಿಕವನ್ನು ಬರೆದಂತೆ ತಮ್ಮ ಭಾಷ್ಯಕ್ಕೂ ಬರೆಯುವ ಭಾಗ್ಯವಿಲ್ಲದೇ ಹೋಯಿತು. ಪ್ರಾಯಶ್ಚಿತ್ತವನ್ನು ಕೈಗೊಳ್ಳದೇ ಇದ್ದಿದ್ದರೆ ತಮ್ಮ ಮೊದಲನೇಯ ಅಧ್ಯಾಸಭಾಷ್ಯಕ್ಕೇ ಎಂಟು ಸಾವಿರ ವಾರ್ತಿಕೆಗಳನ್ನು ಬರೆಯಬಹುದಿತ್ತು. ಮಾಹಿಷ್ಮತಿಯಲ್ಲಿ ವಿಶ್ವರೂಪನೆಂಬ ನನ್ನ ಶಿಷ್ಯನಿದ್ದಾನೆ. ದೂರ್ವಾಸನ ಶಾಪದಿಂದ ಪ್ರಭಾವದಿಂದ ಭುವಿಯ ಮೇಲೆ ಜನಿಸಿದ ಸ್ವತಃ ಸರಸ್ವತಿಯೇ ಉಭಯಭಾರತಿಯೆಂಬ ಹೆಸರಿನಿಂದ ಅವನ ಹೆಂಡತಿಯಾಗಿದ್ದಾಳೆ. ತಮ್ಮ ಸೂತ್ರಭಾಷ್ಯಕ್ಕೆ ವ್ಯಾಖ್ಯಾನವನ್ನು ಬರೆಯಲು ಅವನೇ ಸರಿಯಾದ ವ್ಯಕ್ತಿ’ ಎನ್ನುತ್ತಾರೆ ಕುಮಾರಿಲರು. ಚಿದ್ವಿಲಾಸೀಯದ ಪ್ರಕಾರ ಮಂಡನಮಿಶ್ರರೆಂಬ ಭಟ್ಟಪಾದರ ಶಿಷ್ಯನಿದ್ದುದು ಕಾಶ್ಮೀರದಲ್ಲಿ. ಆತ ಸ್ವತಃ ಬ್ರಹ್ಮನ ಅಂಶದಿಂದ ಹುಟ್ಟಿದವನು. ದೂರ್ವಾಸರ ಸ್ವರಸ್ಖಾಲಿತ್ಯವನ್ನು ಕೇಳಿ ನಕ್ಕ ತಪ್ಪಿಗಾಗಿ ಶಾಪದಿಂದ ಸರಸ್ವತಿಯು ಭಾರತಿಯಾಗಿ ಜನಿಸಿ ಅವನ ಪತ್ನಿಯಾದಳಂತೆ. ಮನುಷ್ಯರೂಪನಾದ ಶಿವನನ್ನು ಕಂಡಕೂಡಲೇ ಅವಳಿಗೆ ಶಾಪಮೋಕ್ಷವೆಂದು ವಿಮೋಚನೆಯ ದಾರಿಯನ್ನೂ ಚಿದ್ವಿಲಾಸಕಾರನೇ ಸೂಚಿಸಿದ್ದಾನೆ. ಆನಂದಗಿರೀಯದಂತೆ ಮಂಡನ ಕುಮಾರಿಲರ ತಂಗಿಯ ಗಂಡ. ಮಾಧವೀಯದಂತೆ ಕುಮಾರಿಲರಿಗೆ ಮಂಡನ ಮತ್ತು ಪ್ರಭಾಕರರೆಂಬ ಇಬ್ಬರು ಶಿಷ್ಯರು. ಈ ಪ್ರಭಾಕರನು ಪೂರ್ವಮೀಮಾಂಸೆಯ ಮಹಾ ಪಂಡಿತ ಪ್ರಾಭಾಕರ ಮತದ ಪ್ರಭಾಕರನೇ ಅಲ್ಲವೇ ಎಂಬುದು ಪ್ರಶ್ನಾರ್ಹ ವಿಚಾರ.
(ಒಂದು ಕೃತಿಯನ್ನು ವಿವರಿಸಿ ಬರೆಯುವುದನ್ನೇ ಭಾಷ್ಯವೆಂದೂ, ಟೀಕಿಸಿ ಬರೆಯುವುದನ್ನೇ ಟೀಕೆಯೆಂದೂ ಹೆಚ್ಚಿನವರು ತಿಳಿದಿದ್ದಾರೆ. ರಾಜಶೇಖರನ ಕಾವ್ಯಮೀಮಾಂಸೆಯನ್ನು ನೋಡಿದರೆ ಅವುಗಳ ವ್ಯತ್ಯಾಸ ಸುಲಭಗ್ರಾಹ್ಯ. "ಸೂತ್ರಾಣಾಂ ಸಕಲಸಾರವಿವರಣಂ ವೃತ್ತಿಃ | ಸೂತ್ರವೃತ್ತಿವಿವೇಚನಂ ಪದ್ಧತಿಃ | ಆಕ್ಷಿಪ್ಯ ಭಾಷಣಾದ್ ಭಾಷ್ಯಮ್ | ಅಂತರ್ಭಾಷ್ಯಂ ಸಮೀಕ್ಷಾ | ಅವಾಂತರಾರ್ಥವಿಚ್ಛೇದಶ್ಚ ಸಾ | ಯಥಾಸಂಭವಮರ್ಥಸ್ಯ ಟೀಕನಂ ಟೀಕಾ | ವಿಷಮಪದಭಂಜಿಕಾ ಪಂಜಿಕಾ | ಅರ್ಥಪ್ರದರ್ಶನಕಾರಿಕಾ ಕಾರಿಕಾ | ಉಕ್ತಾನುಕ್ತದುರುಕ್ತಚಿಂತಾ ವಾರ್ತಿಕಮಿತಿ ಶಾಸ್ತ್ರಭೇದಾಃ |" - ಸೂತ್ರಗಳ ತಾತ್ಪರ್ಯವನ್ನು ವಿವರಿಸುವ ವ್ಯಾಖ್ಯಾನಕ್ಕೆ ವೃತ್ತಿಯೆಂದು ಹೆಸರು. ಇಂತಹ ಸೂತ್ರವೃತ್ತಿಗಳ ವಿವೇಚನೆಯೇ ಪದ್ಧತಿ. ಅನೇಕ ಆಕ್ಷೇಪಗಳನ್ನೆತ್ತಿ ಅದಕ್ಕೆ ಸಮುಚಿತವಾದ ಉತ್ತರವನ್ನು ರೂಪಿಸುವ ಸಿದ್ಧಾಂತವನ್ನು ನಿರ್ಣಯಿಸುವುದೇ ಭಾಷ್ಯ. ಭಾಷ್ಯದ ಅವಾಂತರ ಮತ್ತು ಗರ್ಭಿತ ಅರ್ಥಗಳ ಸ್ಪಷ್ಟೀಕರಣವೇ ಸಮೀಕ್ಷಾ. ಉಚಿತ ಅರ್ಥಗಳ ಪ್ರತಿಪಾದನೆಯೇ ಟೀಕಾ. ಕಠಿಣ ಶಬ್ದಗಳ ಅರ್ಥವನ್ನು ಸರಳ ಶಬ್ದಗಳಿಂದ ವಿವರಿಸುವುದೇ ಪಂಜಿಕಾ. ಸೂತ್ರಾರ್ಥವನ್ನು ಸರಳವಾಗಿ ಪ್ರದರ್ಶಿಸುವುದೇ ಕಾರಿಕಾ. ಸೂತ್ರಗಳಲ್ಲಿ ಹೇಳಿದ, ಹೇಳದ, ಕಠಿಣವಾಗಿ ಹೇಳಿದ ವಿಷಯಗಳ ವಿವೇಅನೆಯೇ ವಾರ್ತಿಕಾ. ಇದು ಶಾಸ್ತ್ರಗಳ ವಿಭಾಗ ಕ್ರಮ.)
ಮಂಡನ ಮಿಶ್ರರೊಡನೆ ಶಂಕರರ ವಾದ
       ಈ ಮಂಡನಮಿಶ್ರ ಅಥವಾ ವಿಶ್ವರೂಪರೇ ಮುಂದೆ ಶಂಕರರಿಂದ ವಾದದಲ್ಲಿ ಸೋತು ಸಂನ್ಯಾಸ ಸ್ವೀಕರಿಸಿ ಸುರೇಶ್ವರರೆಂಬ ಅಭಿದಾನದಿಂದ ವಿಖ್ಯಾತರಾದರು. ಶೃಂಗೇರಿ, ಕಂಚಿ, ದ್ವಾರಕಾಪೀಠಗಳಿಗೆ ಸಾವಿರ ವರ್ಷಗಳಿಗೂ ಮಿಕ್ಕಿ ಕಾಲವ್ಯತ್ಯಾಸದಲ್ಲಿ ಸುರೇಶ್ವರರು ಮೊದಲ ಪೀಠಾಧಿಪತಿಗಳಾಗಿದ್ದ ಆಶ್ಚರ್ಯವನ್ನು ಹಿಂದಿನ ಲೇಖನದಲ್ಲಿ ಗಮನಿಸಿದ್ದೇವೆ. ಆದರೆ ಈ ಮಂಡನಮಿಶ್ರ ಮತ್ತು ಕೆಲ ಶಂಕರವಿಜಯಗಳಲ್ಲಿ ಹೇಳಲಾಗಿರುವ ವಿಶ್ವರೂಪ ಇವರಿಬ್ಬರೂ ಒಬ್ಬರೇ ಅಥವಾ ಬೇರೆಬೇರೆಯೇ? ಮಾಧವೀಯದಲ್ಲೇ ಐದನೇ ಸರ್ಗದಲ್ಲಿ ಮಂಡನನಿಗೆ ಬ್ರಹ್ಮವಾದವನ್ನು ಉಪದೇಶಿಸಿದ ವೃತ್ತಾಂತವಿದ್ದರೆ(’ತ್ಯಕ್ತ್ವಾ ಮಂಡನಭೇದಗೋಚರಧಿಯಂ ಮಿಥ್ಯಾಭಿಮಾನಾತ್ಮಿಕಾ’), ಎಂಟನೇ ಅಧ್ಯಾಯದಲ್ಲಿ ’ಅಥ ಪ್ರತಸ್ಥೇ ಭಗವಾನ್ ಪ್ರಯಾಗಾತ್, ದಿದೃಕ್ಷಮಾಣೋ ಗೃಹಿವಿಶ್ವರೂಪಮ್’ ಎಂದು ಗೃಹಸ್ಥನಾದ ವಿಶ್ವರೂಪನನ್ನು ನೋಡಲು ಆಚಾರ್ಯರು ಯೋಗಬಲದಿಂದ ಅವನ ಮನೆಯಂಗಳದಲ್ಲಿ ಇಳಿಯುತ್ತಾರೆ!. ಗುರುವಂಶಕಾವ್ಯ, ವ್ಯಾಸಾಚಲೀಯದಲ್ಲೂ ಮಂಡನ ವಿಶ್ವರೂಪರನ್ನು ಬೇರೆಬೇರೆಯಾಗಿಯೇ ಉಲ್ಲೇಖಿಸಲಾಗಿದೆ. ಯಾಜ್ಞವಲ್ಕ್ಯಸ್ಮೃತಿಗೆ ಬಾಲಕ್ರೀಡಾ ವ್ಯಾಖ್ಯಾನವನ್ನು ಬರೆದವರು ವಿಶ್ವರೂಪರೆಂದು ಪ್ರಸಿದ್ಧಿ. ಶಂಕರರ ದಕ್ಷಿಣಾಮೂರ್ತಿ ಸ್ತೋತ್ರಕ್ಕೆ ಮಾನಸೋಲ್ಲಾಸ ವ್ಯಾಖ್ಯಾನವನ್ನು ಬರೆದವರೂ ವಿಶ್ವರೂಪರೆಂದು ಅದರ ವ್ಯಾಖ್ಯಾನಕಾರರು ಹೇಳುತ್ತಾರೆ. ಶಾಂಕರಪರಂಪರೆಯಲ್ಲಿ ಸಂನ್ಯಾಸಿಗಳು ಪೂಜಿಸುವ ’ಆಚಾರ್ಯ ಪಂಚಕ’ದಲ್ಲಿ ಸುರೇಶ್ವರರ ಹೆಸರಿಲ್ಲ. ಆದರೆ ಧರ್ಮಸಿಂಧುವೇತ್ಯಾದಿಗಳು ವಿಶ್ವರೂಪಾಚಾರ್ಯರನ್ನೇ ಹೆಸರಿಸಿವೆ. ಗೃಹಸ್ಥನಾಗಿದ್ದ ವಿಶ್ವರೂಪನನ್ನು ಶಾಂಕರ ಪರಂಪರೆಯಲ್ಲಿ ಮಠಾಧಿಪತಿಯ ಪದವಿಯಲ್ಲಿಟ್ಟದ್ದು ಹೇಗೆ ಸರಿಯಾದೀತು?
       ಇನ್ನು ಶಂಕರರು ಮಂಡನಮಿಶ್ರರನ್ನು ಎಲ್ಲಿ ಜಯಿಸಿದರೆಂಬುದೂ ಚರ್ಚಾರ್ಹವೇ. ಮಾಧವೀಯದಲ್ಲಿ ಪ್ರಯಾಗವೆಂದಿದ್ದರೆ, ವ್ಯಾಸಾಚಲೀಯದಲ್ಲಿ ಮಾಹಿಷ್ಮತಿಯೆಂದಿದೆ. ಪ್ರಾಚೀನ ಹಾಗೂ ಬೃಹಚ್ಛಂಕರ ವಿಜಯಗಳಲ್ಲಿ ಮತ್ತು ಗುರುರತ್ನಮಾಲಿಕೆಯಲ್ಲಿರುವಂತೆ ’ಪಟುಮಂಡನಮಿಶ್ರಖಂಡನಾರ್ಥಂ ಪ್ರವಿಶನ್ಪದ್ಮವನಂ ನವಂ ಜಯಾರ್ಥಮ್’ ಮಂಡನಮಿಶ್ರರನ್ನು ಜಯಿಸಿದ್ದು ಪದ್ಮವನವೆಂಬ ಅಗ್ರಹಾರದಲ್ಲಿ. ಅದೇನೆ ಆದರೂ ಮಂಡನರೊಡಗಿನ ಆಚಾರ್ಯರ ವಾದ ವಿವಾದಾತೀತ. ತತ್ತ್ವಶಾಸ್ತ್ರದ ಹಿನ್ನೆಲೆಯಲ್ಲಿ ಅವರಿಬ್ಬರ ವಾದಗಳ ಸೊಬಗನ್ನು ಭೈರಪ್ಪನವರ ’ಸಾರ್ಥ’ದಲ್ಲಿ ಓದಿ ಆಸ್ವಾದಿಸುವ ಸೊಗಸೇ ಬೇರೆ!. ಮಂಡನರ ಸೋಲು ಅರಿತ ಪತ್ನಿ ಉಭಯಭಾರತಿ ಬಾಲಸನ್ಯಾಸಿ ಆಚಾರ್ಯರಿಗೆ ಕಾಮಶಾಸ್ತ್ರದ ಮೇಲಿನ ಪ್ರಶ್ನೆಯನ್ನು ಹಾಕುತ್ತಾಳೆ. ಒಂದು ತಿಂಗಳ ಸಮಯಾವಕಾಶ ಕೋರಿದ ಶಂಕರರು ಅಮರುಕ ರಾಜನ ಶರೀರದೊಳಗೆ ಪರಕಾಶಪ್ರವೇಶ ಮಾಡಿಬಂದು ಈ ಪ್ರಶ್ನೆಗೆ ಉತ್ತರಿಸಿದರೆಂದು ಮಾಧವೀಯ ಮೂಲದ ಪ್ರಸಿದ್ಧ ಪ್ರತೀತಿ.(ಹೀಗೆ ಪರಕಾಯ ಪ್ರವೇಶದ ಸಂದರ್ಭದಲ್ಲಿಯೇ ಅಮರುಕ ಸಂಸ್ಕೃತದ ಸಾರ್ವಕಾಲಿಕ ಶ್ರೇಷ್ಟ ಶೃಂಗಾರ ಕೃತಿ ಅಮರುಶತಕವನ್ನು ಬರೆದನೆಂದು ಹೇಳಲಾಗುವುದಾದರೂ ಅದಕ್ಕೆ ಐತಿಹಾಸಿಕ ಆಧಾರಗಳು ಲಭ್ಯವಿಲ್ಲ). ಇದೇ ಕಥೆ ವ್ಯಾಸಾಚಲೀಯದಲ್ಲಿ ಸ್ವಲ್ಪ ಭಿನ್ನವಾಗಿದೆ. ಒಮ್ಮೆ ಶಂಕರರು ಗಂಗೆಯಲ್ಲಿ ನಿತ್ಯಾನುಷ್ಟಾನದಲ್ಲಿದ್ದಾಗ ಅವರಿಗೆ ಕಾಶ್ಮೀರದ ಶಾರದಾಪೀಠದ ಮಾಹಿತಿ ಕಿವಿಗೆ ಬಿತ್ತು. ಕಾಶ್ಮೀರದಲ್ಲಿ ಶಾರದಾದೇವಿಯ ಒಂದು ಪೀಠವಿದೆ. ಅದಿರುವ ಆಲಯಕ್ಕೆ ನಾಲ್ಕು ಬಾಗಿಲುಗಳು. ಸರ್ವಜ್ಞನಾದವನು ಮಾತ್ರ ಅದನ್ನೇರಬಹುದಾದುದರಿಂದ ಅದನ್ನು ಸರ್ವಜ್ಞ ಪೀಠವೆಂದೂ ಕರೆಯುತ್ತಾರೆ. ಈಗಾಗಲೇ ಪೂರ್ವ,ಪಶ್ಚಿಮ, ಉತ್ತರ ದೇಶದ ವಿದ್ವಾಂಸರು ಆ ಮೂರು ಬಾಗಿಲುಗಳನ್ನು ತೆರೆಸಿದ್ದಾರೂ, ದಕ್ಷಿಣದ ಬಾಗಿಲನ್ನು ದಕ್ಷಿಣದವರ್ಯಾರೂ ತೆರೆಸಲು ಸಾಧ್ಯವಾಗಿಲ್ಲ. ಇದನ್ನು ಕೇಳಿದ ಆಚಾರ್ಯರು ಆ ಬಾಗಿಲನ್ನು ತೆರೆಸಬೇಕೆಂದು ಶಾರದಾಲಯದ ದಕ್ಷಿಣ ದ್ವಾರಕ್ಕೆ ಬಂದರು. ಎದುರು ಬಂದ ಕಣಾದ, ನೈಯಾಯಿಕ, ಸಾಂಖ್ಯ, ಜೈಮಿನೀಯ, ಬೌದ್ಧ, ಜೈನ ವಿದ್ವಾಂಸರನ್ನೆಲ್ಲ ವಾದದಲ್ಲಿ ಸೋಲಿಸಿ ಸರ್ವಜ್ಞಪೀಠವನ್ನು ಹತ್ತಲು ಪ್ರಾರಂಭಿಸಿದಾಗ ಸ್ವತಃ ಶಾರದೆಯೇ ಆಚಾರ್ಯರೊಡನೆ ವಾದಕ್ಕೆ ಬಂದಳು. ಆಕೆ ಕೇಳಿದ ವಾತ್ಸಾಯನಯಂತ್ರದ ಪ್ರಶ್ನೆಗೆ ಉತ್ತರಿಸಲಾಗದೇ ಶಂಕರರು ಏಳು ದಿನಗಳ ಗಡುವು ಕೇಳಿ ಪರಕಾಯಪ್ರವೇಶಗೈದು ಎಂಟನೇ ದಿನ ತಿರುಗಿ ಬಂದು ಪ್ರಶ್ನೆಗಳಿಗೆಲ್ಲ ಉತ್ತರ ನೀಡಿದರಂತೆ. ಸ್ತ್ರೀಸಂಗವನ್ನು ಮಾಡಿ ಕಲಾರಾಸ್ಯವನ್ನು ಅರಿತುಕೊಂಡೆಯಾದ್ದರಿಂದ ನೀನು ಪರಿಶುದ್ಧನೇ ಎಂದು ಶಾರದೆ ತಿರುಗಿ ಪ್ರಶ್ನಿಸಿದಳಂತೆ. ಆಗ ಶಂಕರರು ಅನ್ಯದೇಹದಿಂದುಂಟಾದ ಕರ್ಮದಿಂದ ದೇಹಾಂತರಕ್ಕೆ ಪಾಪಲೇಪವಿಲ್ಲವೆಂದು ಹೇಳಿ ಆಕೆಯನ್ನು ನಿರುತ್ತರಳನ್ನಾಗಿಸಿ ಸರ್ವಜ್ಞಪೀಠವನ್ನು ಏರಿದರು. ಈ ಸಂಭಾಷಣೆ ಮಾಧವೀಯದಲ್ಲಿ ಹಾಗೂ ಸಾರ್ಥದಲ್ಲಿ ಉಭಯಭಾರತಿಯೊಡಗಿನ ವಾದದಲ್ಲಿ ಮೂಡಿಬಂದಿದೆ. ಕರ್ಮ ಫಲವು ಜನ್ಮಾಂತರದಲ್ಲಿಯೂ ಲೋಕಾಂತರದಲ್ಲಿಯೂ ಆಗುವುದೆಂದು ಶಾಸ್ತ್ರಾಧಾರವಿರುವಾಗ ಒಂದೇ ಜನ್ಮದಲ್ಲಿ ಒಂದು ದೇಹದಲ್ಲಿ ಮಾಡಿದ ಕರ್ಮವು ಇನ್ನೊಂದು ದೇಹದಲ್ಲಿರುವಾಗ ಅಂಟುವುದಿಲ್ಲವೆಂದು ಆಚಾರ್ಯರು ವಾದಿಸಿದರೆಂದು ಹೇಳುವುದು ಮಾತ್ರ ವಿಚಿತ್ರವಾಗಿದೆ. ಜೊತೆಗೆ ಸರ್ವಜ್ಞಪೀಠದ ಮೂರು ದಿಗ್ಭಾಗಗಳ ಬಾಗಿಲು ತೆರೆಯಿಸಲು ಕಾಶ್ಮೀರದ  ಪೂರ್ವೋತ್ತರ ಪಶ್ಚಿಮಗಳಲ್ಲಿ ಎಷ್ಟರ ಮಟ್ಟಿಗೆ ವೈದಿಕಮತ ವ್ಯಾಪಿಸಿತ್ತು? ವೈದಿಕ ಧರ್ಮದ ಮಹಾನ್ ಆಚಾರ್ಯರು, ವಿದ್ವಾಂಸರೆಲ್ಲ ಜನ್ಮತಳೆದಿದ್ದು ತೆರೆಯದೇ ಉಳಿದ ದಕ್ಷಿಣ ಭಾಗದಲ್ಲೇ ಅಲ್ಲವೇ! ಹಾಗೆಂದು ಈ ಕಥೆ ಪೂರ್ತಿ ಅತಾರ್ಕಿಕವಲ್ಲ. ಕಾಶ್ಮೀರದ ಶಾರದಾಮಂದಿರ ಬರಿಯ ಕವಿಕಲ್ಪನೆಯೂ ಅಲ್ಲ. ಶ್ರೀನಗರದಿಂದ ೧೩೦ ಕಿ.ಮೀ ದೂರದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರ್‌ಬಾದ್‌ ಪ್ರದೇಶದಲ್ಲಿ LOCಯಿಂದ ಕೆಲವೇ ಕಿಲೋಮೀಟರ್‌ಗಳಷ್ಟು ಸಮೀಪದ ಕಿಷನ್‌ಗಂಗಾ ಮೇಲ್ಭಾಗದ ನೀಲಂಕೊಲ್ಲಿ ಎಂಬಲ್ಲಿ ಶಾರದಿ ಎಂಬ ಗ್ರಾಮವಿದೆ. ಇದು ಸರಸ್ವತಿ ಅಥವಾ ಕಲ್ನೋತ್ರಿ ಹಾಗೂ ಮಧುಮತಿ ನದಿಗಳ ಸಂಗಮಸ್ಥಾನ. ಲೋಲಬ್‌ವ್ಯಾಲಿಯ ಉತ್ತರ ಮತ್ತು ಉಲಾರ್ ಸರೋವರದ ವಾಯುವ್ಯಕ್ಕೆ ಈ ಗ್ರಾಮವಿದೆ. ಝೀಲಂ ಅನ್ನು ಸೇರುವ ಬಳಿ ಕಿಷನ್‌ಗಂಗಾ ನದಿಯನ್ನು ದಾಟಿ ಹೋದರೆ ಈ ಸ್ಥಳ ಸಿಗುತ್ತದೆ. ೧೨ನೇ ಶತಮಾದಲ್ಲಿ ಕಲ್ಹಣ ಸರ್ಹಸಿಲ ಕೋಟೆಯ ವಿವರಣೆ ನೀಡುವಾಗ ಸಮೀಪದ ಶಾರದಾ ಮಂದಿರವನ್ನು ಕವಿಗಳು ಹಾಡಿಹೊಗಳುವ ಪುಣ್ಯಸ್ಥಾನವೆಂದು ಬಣ್ಣಿಸುತ್ತಾನೆ. ಮಾತ್ರವಲ್ಲ ರಾಜತರಂಗಿಣಿಯ ಪ್ರಕಾರ ಗೌಡ ದೇಶದ ರಾಜ ಲಲಿತಾದಿತ್ಯ ಬಂಗಾಳದಿಂದ ಕಾಶ್ಮೀರಕ್ಕೆ ಬಂದು ಈ ಮಂದಿರವನ್ನು ಸಂದರ್ಶಿಸಿದ್ದನಂತೆ. ಬಿಲ್ಹಣನ ವಿಕ್ರಮಾಂಕದೇವಚರಿತದಲ್ಲಿ ಶಾರದಾ ಮಂದಿರ ಮತ್ತು ಶಾರದಾ ತೀರ್ಥಗಳ ಪ್ರಸ್ತಾಪವಿದೆ. ಅವರಿಗಿಂತ ಹಿಂದಿನ ಅಲ್ಬೆರುನಿ ಲಢಾಕ್ ಮತ್ತು ಗಿಲ್ಗಿಟ್‌ನ ನಡುಮಧ್ಯದಲ್ಲಿರುವ ಶಾರದಾಸ್ಥಾನ ಹಿಂದೂಗಳಿಗೆ ಸೋಮನಾಥದಷ್ಟೇ ಪವಿತ್ರಸ್ಥಳವೆಂದು ಹೊಗಳಿದ್ದಾನೆ. ೧೧ನೇ ಶತಮಾನದಲ್ಲಿ ಗುಜರಾತಿನ ಜಯಸಿಂಗನ ಆಸ್ಥಾನದಲ್ಲಿದ್ದ ಹೆಸರಾಂತ ವಯ್ಯಾಕರಣಿ ಹೇಮಚಂದ್ರಸೂರಿಯು ’ಸಿದ್ಧಹೇಮಖಂಡ’ವೆಂಬ ಸುಪ್ರಸಿದ್ಧ ವ್ಯಾಕರಣ ಗ್ರಂಥವೊಂದನ್ನು ಬರೆಯಲುದ್ದೇಶಿಸಿದಾಗ ಅದರ ನೆರವಿಗೆ ಜಯಸಿಂಗ ಶಾರದಾಮಂದಿರದ ಗ್ರಂಥಾಲಯದಿಂದ ಭಾರತದ ಎಂಟು ಹೆಸರಾಂತ ವ್ಯಾಕರಣಶಾಸ್ತ್ರದ ಉದ್ಗ್ರಂಥಗಳನ್ನು ತರಿಸಿಕೊಟ್ಟಿದ್ದನಂತೆ. ಅಕ್ಬರನ ಆಸ್ಥಾನ ಕವಿ ಅಬುಲ್ ಫಜಲ್ ತನ್ನ ಐನ್-ಎ-ಅಕ್ಬರಿಯಲ್ಲಿ ಹೀಗೆ ದಾಖಲಿಸುತ್ತಾನೆ. ’ಆಯಾ ಹೋಂನಿಂದ ಎರಡು ದಿನಗಳಷ್ಟು ಕಾಲ್ನಡಿಗೆಯಲ್ಲಿ ಕ್ರಮಿಸಿದ ಮೇಲೆ ದುರ್ದೇಶ ಪ್ರದೇಶದಲ್ಲಿ ಹರಿಯುವ ಮಧುಮತಿ ಎಂಬ  ನದಿ ಸಿಗುತ್ತದೆ. ಈ ನದಿಯ ದಡದ ಮೇಲೆ ಶಾರದೆಯ ಒಂದು ವಿಶ್ವವಿಖ್ಯಾತ ಮಂದಿರವಿದೆ. ಪ್ರತಿ ಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದು ಇಲ್ಲಿ ಜರುಗುವ ಅದ್ಭುತ ಪವಾಡಗಳನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಸಾವಿರಾರು ಜನ ಇಲ್ಲಿ ಬಂದು ಸೇರುತ್ತಾರೆ’. ವಸಿಷ್ಟನ ಮಗ ಶಾಂಡಿಲ್ಯ ಬ್ರಾಹ್ಮಣರಿಂದ ಬಹಿಷ್ಕೃತನಾಗಲು ಕಾಶ್ಮೀರಕ್ಕೆ ಬಂದು ಇದೇ ಸ್ಥಳದಲ್ಲಿ ಶಾರದೆಯನ್ನು ತಪಸ್ಸಿನ ಮೂಲಕ ಒಲಿಸಿಕೊಂಡನಂತೆ. ಈತ ರಚಿಸಿದ ಶಾರದಾ ಮಹಾತ್ಮ್ಯಮ್‌ನಲ್ಲಿ ಶಾರದಾಪೀಠ ವಿಸ್ತೃತ ಮಾಹಿತಿಯಿದೆ. ಈಗಲೂ ಕಾಶ್ಮೀರಿ ಪಂಡಿತರಲ್ಲಿ ಶಾಂಡಿಲ್ಯ ಗೋತ್ರದವರೇ ಅಧಿಕ. ಕಾಶ್ಮೀರಿ ಮತ್ತು ಪಂಜಾಬಿನ ಗುರುಮುಖಿ ಲಿಪಿಗಳ ತಾಯಿಯಾದ ಶಾರದಾ ಲಿಪಿ ಹುಟ್ಟಿದ್ದು ಇಲ್ಲಿಂದಲೇ. ಹದಿನಾಲ್ಕು-ಹದಿನೈದನೇ ಶತಮಾನದಲ್ಲಿದ್ದ ಕಾಶ್ಮೀರದ ಸುಲ್ತಾನ ಜೈ-ಉಲ್-ಅಬಿದ್ದೀನ್ ಈ ಶಾರದೆಯ ಕಟ್ಟಾ ಭಕ್ತನಾಗಿದ್ದನಂತೆ. ಮಾತ್ರವಲ್ಲ ಪ್ರತಿವರ್ಷ ಕಾಲ್ನಡಿಗೆಯಲ್ಲಿ ಶಾರದಾ ಮಂದಿರಕ್ಕೆ ತಪ್ಪದೇ ಭೇಟಿಕೊಡುತ್ತಿದ್ದ. ಲಕ್ಷಾಂತರ ಯಾತ್ರಿಕರು ಸಹಸ್ರಾರು ವರ್ಷಗಳಿಂದ ಭಾರತ ಮತ್ತು ಬೇರೆ ಬೇರೆ ದೇಶಗಳಿಂದ ಇಲ್ಲಿಗೆ ಬಂದು ಹೋದ ದಾಖಲೆಗಳಿವೆ. ಶತಮಾನಗಳ ಕಾಲ ವೈದಿಕ ಸಂಸ್ಕೃತಿಯ ಅತ್ಯುಚ್ಚ ಕೇಂದ್ರವಾಗಿ ಬೆಳೆದ ಶಾರದಾ ಪೀಠಕ್ಕೆ ಮೊದಲ ಹೊಡೆತ ಬಿದ್ದಿದ್ದು ಹದಿನೈದನೇ ಶತಮಾನದಲ್ಲಿ ಕಾಶ್ಮೀರದ ಮೇಲಾದ ಅಫ್ಘನ್ನರ ದಾಳಿಯಿಂದ. ಸತತ ಮೂರು ಶತಮಾನ ಇಸ್ಲಾಮಿನ ದಾಳಿಗೆ ತತ್ತರಿಸಿದ ಇದು ಪುನಃ ವೈಭವದಿಂದ ತಲೆಯೆತ್ತಿದ್ದು ೧೮೪೬ರಲ್ಲಿ ಪಂಜಾಬಿನ ಮಹಾರಾಜ ಗುಲಾಬ್ ಸಿಂಗ್‌ನ ಕಾಲದಲ್ಲಿ. ಆದರೇನು ಫಲ? ೧೯೪೭ರಲ್ಲಿ ಈ ಪ್ರದೇಶ ಪಾಕಿಸ್ತಾನದ ವಶವಾಯ್ತು. ಪಾಕಿನ ಹಿಂದೂಗಳ ಪಾಲಿಗೆ ಪರಮ ಶ್ರದ್ಧಾಕೇಂದ್ರವಾಗಿಯೇ ಕೆಲಕಾಲ ಇದು ಮುಂದುವರೆಯಿತಾದರೂ ಇತ್ತೀಚೆಗೆ ಈ ಸ್ಥಳ ಹೆಚ್ಚುಕಡಿಮೆ ಹೊರಜಗತ್ತಿಗೆ ಮುಚ್ಚಿದ ಸ್ಥಿತಿಯಲ್ಲಿಯೇ ಇದೆ. ಮುಂದೆ ಅಕ್ಟೋಬರ್ ೨೦೦೫ರಲ್ಲಿ ನಡೆದ ಭೀಕರ ಭೂಕಂಪದಲ್ಲಿ ಈ ಮಂದಿರ ಸಂಪೂರ್ಣವಾಗಿ ಭಗ್ನಗೊಂಡಿತಂತೆ. ಭಾರತದ ಅಜ್ಮೇರ್ ದರ್ಗಾಕ್ಕೆ ಬರಲು ಪಾಕಿಸ್ತಾನಿಯರಿಗೂ, ಲಹೋರಿನ ನಾನಕಾನಾ ಸಾಹೇಬ್ ಗುರುದ್ವಾರಕ್ಕೆ ಹೋಗಲು ಭಾರತೀಯ ಸಿಖ್ಖರಿಗೂ ಉಭಯ ದೇಶಗಳು ಅವಕಾಶ ಕಲ್ಪಿಸಿದಂತೆ ಕಾಶ್ಮೀರದ ಹಿಂದೂಗಳಿಗೆ ಇಲ್ಲಿ ಭೇಟಿನೀಡಲು ಅವಕಾಶ ಮಾಡಿಕೊಡಬೇಕೆಂಬ ಕಳೆದ ಎಪ್ಪತ್ತು ಚಿಲ್ಲರೆ ವರ್ಷಗಳ ಕೂಗು ಇನ್ನೂ ನಮ್ಮ ಸರ್ಕಾರಗಳ ಕಿವಿ ತಲುಪಿಲ್ಲ. ಪಾಕಿಸ್ತಾನ ಸರ್ಕಾರ ಇಲ್ಲಿಗೆ ಭೇಟಿ ಕೊಡಲು ಭಕ್ತಾದಿಗಳನ್ನು ಪದೇ ಪದೇ ನಿಷೇಧಿಸುತ್ತ ಬಂದಿರುವುದಕ್ಕೂ ಒಂದು ಕಾರಣವಿದೆ. ಝೀಲಂ ವ್ಯಾಲಿ ಕಾಶ್ಮೀರದ ಅತಿಸೂಕ್ಷ್ಮ ಪ್ರದೇಶಗಳಲ್ಲೊಂದು. ಜೊತೆಗೆ ಭಾರತದ ಕುಪ್ವಾರಾ ಪ್ರದೇಶಕ್ಕೆ ಪಾಕಿಸ್ತಾನಿ ಭಯೋತ್ಪಾದಕರು ಒಳನುಗ್ಗುವುದು ಇದೇ ಕಡೆಯಿಂದ ಎಂಬ ಕುಖ್ಯಾತಿಯೂ ಇದೆ. ಆಯಕಟ್ಟಿನ ಜಾಗವೊಂದರ ಒಳಗೆ ಶತ್ರು ದೇಶದವರನ್ನು ಬಿಟ್ಟುಕೊಳ್ಳವಷ್ಟು ಉದಾರ ಮನಸ್ಸು ಪಾಕಿಸ್ತಾನಕ್ಕೂ ಇದ್ದಂತಿಲ್ಲ. ಇಷ್ಟಾದರೂ ಇತ್ತೀಚೆಗೆ ಮುಜಫರಾಬಾದ್ ವಿಶ್ವವಿದ್ಯಾಲಯದ ಕುಕ್ಷಾನಾ ಖಾನ್‌ರಂಥ ಕೆಲ ಸಂಶೋಧಕರ ನೆರವಿನಿಂದ ಅಲ್ಪಸ್ವಲ್ಪ ಪ್ರಮಾಣದಲ್ಲಿ ಶಾರದಾ ಸಂಸ್ಕೃತಿಯನ್ನು ಹರಡುವ ಕಾರ್ಯ ಶುರುವಾಗಿದೆ. ಕಟ್ಟಡಗಳನ್ನು ಎಷ್ಟೇ ಮರುನಿರ್ಮಿಸಿದರೂ ಅದು ಶ್ರದ್ಧಾಳುಗಳ ಶ್ರದ್ಧೆಗೆ. ಭಾವನೆಗಳಿಗೆ ಸರಿಸಾಟಿಯಲ್ಲವೇ ಅಲ್ಲ. ವರ್ಷಕ್ಕೆ ಕೆಲವೇ ಕೆಲ ಕಾಶ್ಮೀರಿ ಹಿಂದೂಗಳಿಗಾದರೂ ಶಾರದಾ ಪೀಠದ ದರ್ಶನಕ್ಕೆ ಪಾಕಿಸ್ತಾನ ಅವಕಾಶ ಕಲ್ಪಿಸಿದರೆ, ಭಾರತ ಸರ್ಕಾರ ಆ ದಿಶೆಯಲ್ಲಿ ಪ್ರಯತ್ನಿಸಿದರೆ ಅದಕ್ಕಿಂತ ದೊಡ್ಡ ಖುಶಿಯ ಮಾತೇನಿದೆ ಹೇಳಿ?
       ಹಾಗೆಂದು ಶಂಕರವಿಜಯಕಾರರ ಸರ್ವಜ್ಞಪೀಠದೆಡೆಗಿನ ಗೊಂದಲ ಪೂರ್ತಿ ಬಗೆಹರಿದಿಲ್ಲ. ಚಿದ್ವಿಲಾಸೀಯದಲ್ಲಿ, ಪ್ರಾಚೀನಶಂಕರ ವಿಜಯದಲ್ಲಿ ಸರ್ವಜ್ಞಪೀಠವಿರುವುದು ಕಾಂಚಿಯಲ್ಲಿ ಎನ್ನಲಾಗಿದೆ. ಶೃಂಗೇರಿ ಸಂಪ್ರದಾಯದ ಆತ್ಮಬೋಧರ ಗುರುರತ್ನಮಾಲಿಕೆಯೂ ಸರ್ವಜ್ಞಪೀಠವಿರುವುದು ಕಂಚಿ ಎಂದೇ ಹೇಳುತ್ತದೆ. ಅಲ್ಲಿಗೆ ಶಂಕರವಿಜಯಕಾರರಲ್ಲೇ ಕಾಶ್ಮೀರಸರ್ವಜ್ಞಪೀಠವಾದಿಗಳು ಹಾಗೂ ಕಾಂಚೀಸರ್ವಜ್ಞಪೀಠವಾದಿಗಳು ಎಂಬ ಎರಡು ಪಂಗಡಗಳಿವೆ ಎಂದಾಯ್ತು. ಕಾಶ್ಮೀರವು ಶಾರದಾಸ್ಥಾನವೆಂಬ ಪ್ರಸಿದ್ಧಿಯ ಮೇಲೆ ಮೊದಲನೇಯವರೂ, ಸರ್ವಜ್ಞಾತ್ಮರು ಕಂಚಿಯ ಮೊದಲನೇ ಪೀಠಾಧಿಪತಿಗಳಾಗಿದ್ದರೆಂಬ ಆಧಾರದಲ್ಲಿ ಎರಡನೇಯವರೂ ಸರ್ವಜ್ಞಪೀಠವನ್ನು ತಮ್ಮತಮ್ಮಲ್ಲಿ ಕಲ್ಪಿಸಿಕೊಂಡಿರಬಹುದೇ!!!

ಕೊನೆಹನಿ:
ಆಚಾರ್ಯರು ಗೋಕರ್ಣದಿಂದ ಕೊಲ್ಲೂರಿಗೆ ತೆರಳುತ್ತಿದ್ದಾಗ ಶ್ರೀವಲ್ಲಿ ಎಂಬ ಅಗ್ರಹಾರಕ್ಕೆ ಬಂದರು. ಅಲ್ಲಿ ಎರಡು ಸಾವಿರ ಅಗ್ನಿಹೋತ್ರಿ ಬ್ರಾಹ್ಮಣರಿದ್ದರು. ಅವರಲ್ಲಿ ಪ್ರಭಾಕರನೆಂಬವನೊಬ್ಬ. ಇರುವ ಒಬ್ಬನೇ ಮಗ ಹುಟ್ಟಿದಾಗಿನಿಂದ ಮೂಕನಾಗಿದ್ದರಿಂದ ತಂದೆತಾಯಂದಿರು ಚಿಂತಿತರಾಗಿದ್ದರು. ಶಂಕರರಲ್ಲಿ ಕರೆತಂದು ಮಗನ ಸ್ಥಿತಿಯನ್ನು ವಿವರಿಸಿದರು. ಶಂಕರರು ಕರುಣೆಯಿಂದ ’ಯಾರಪ್ಪಾ ನೀನು? ಏಕೆ ಮಾತಾಡದೇ ಜಡನಂತಿರುವೆ?’ ಎಂದು ಕೇಳಿದರು. ಕೂಡಲೇ ಬಾಲಕ
ನಿಮಿತ್ತಂ ಮನಶ್ಚಕ್ಷುರಾದಿಪ್ರವೃತ್ತೌ
ನಿರಸ್ತಾಖಿಲೋಪಾಧಿರಾಕಾಶಕಲ್ಪಃ |
ರವಿರ್ಲೋಕಚೇಷ್ಟಾನಿಮಿತ್ತಂ ಯಥಾ ಯಃ
ಸ ನಿತ್ಯೋಪಲಬ್ಧಿ ಸ್ವರೂಪೋಹಮಾತ್ಮಾ ||
- ’ಸೂರ್ಯನು ಲೋಕದ ವ್ಯವಹಾರಕ್ಕೆ ನಿಮಿತ್ತನಾಗಿರುವಂತೆ ಯಾವ ಉಪಾಧಿಯೂ ಇಲ್ಲದ ಯಾವನು ಮನಸ್ಚಕ್ಷೆರೇತ್ಯಾದಿಗಳ ಪ್ರವೃತ್ತಿಗೆ ನಿಮಿತ್ತನಾಗಿರುವನೋ ಆ ನಿತ್ಯಸ್ವರೂಪನಾದ ಆತ್ಮನೇ ನಾನು’ ಎಂದು ನುಡಿದನಂತೆ. ಪರತತ್ತ್ವವನ್ನು ಅಂಗೈನ ನೆಲ್ಲಿಕಾಯಿಯಂತೆ ಹೇಳಿದ ಬಾಲಕನಿಗೆ ಆಚಾರ್ಯರು ಹಸ್ತಾಮಲಕನೆಂದು(ಹಸ್ತ- ಅಂಗೈ, ಆಮಲಕ - ನೆಲ್ಲಿ) ನಾಮಕರಣ ಮಾಡಿ ಶಿಷ್ಯನನ್ನಾಗಿ ಸ್ವೀಕರಿಸಿದರು. ’ನಿತ್ಯೋಪಲಬ್ಧಿ ಸ್ವರೂಪೋಹಮಾತ್ಮಾ’ ಎಂಬ ಪಲ್ಲವಿಯುಳ್ಳ ಹನ್ನೆರಡು ಶ್ಲೋಕಗಳು ’ಹಸ್ತಾಮಲಕೀಯ’ ಪ್ರಕರಣವೆಂದು ಪ್ರಸಿದ್ಧವಾದವು. ’ಅಗ್ರಹಾರಕಂ ಶ್ರೀವಲಿಸಂಜ್ಞಮ್’ ಎಂದು ಮಾಧವೀಯದಲ್ಲೂ, ವ್ಯಾಸಾಚಲೀಯದಲ್ಲೂ ಈ ಘಟನೆಯ ಉಲ್ಲೇಖವಿದೆ. ಶ್ರೀವಲಿ ಅಗ್ರಹಾರವೆಂದು ಪುರಾಣಪ್ರಸಿದ್ಧ ಈ ಸ್ಥಳ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿ. ಸಾರಸ್ವತ ಬ್ರಾಹ್ಮಣ ಸಮಾಜದ ಶಾಂಕರ ಪರಂಪರೆಯ ಚಿತ್ರಾಪುರ ಮಠವೂ ಇದೇ ಊರಿನಲ್ಲಿದೆ. ಜೊತೆಗೆ ಇದು ನನ್ನ ಊರೂ ಹೌದು.
ಧನ್ಯೋಸ್ಮಿ ಶ್ರೀಶಂಕರಭಗವತ್ಪಾದಪ್ರಭೋ



ಶಾರದಾಪೀಠದ ಪಳೆಯುಳಿಕೆಗಳು

ಶ್ರೀಮಚ್ಛಂಕರಭಗವತ್ಪಾದಚರಿತ್ರದ ಹಿಂದಿನ ಭಾಗಗಳು

ಭಾಗ ೩- ಜನ್ಮ ಪ್ರಕರಣ

ಭಾಗ ೨- ಕಾಲಪ್ರಕರಣ 

ಭಾಗ ೧ - ಶಂಕರವಿಜಯ ಪ್ರಕರಣ


Wednesday, July 20, 2016

ರಾಜಶೇಖರನ ಕಾವ್ಯಮೀಮಾಂಸೆಯೂ ಸಂಸ್ಕೃತ ಕಾವ್ಯಶೈಲಿಯೂ


       ಸಂಸ್ಕೃತ ಸಾಹಿತ್ಯದಲ್ಲಿ ಪ್ರೌಢಮಹಾಕವಿಗಳಲ್ಲಿ ಮೂರ್ಧನ್ಯನೂ, ಗಂಭೀರ ಸಾಹಿತ್ಯ ವಿದ್ವಾಂಸನೂ, ಅಲಂಕಾರಿಕರಲ್ಲಿ ಅಗ್ರಿಮನೂ ಆದವನು ರಾಜಶೇಖರ. ಬಾಲಭಾರತವೆಂಬ ನಾಟಕವನ್ನೂ, ವಿದ್ದಸಾಲಭಂಜಿಕಾ ಎಂಬ ನಾಟಿಕೆಯನ್ನೂ, ಕರ್ಪೂರಮಂಜರಿ ಎಂಬ ಪ್ರಾಕೃತ ಭಾಷೆಯಲ್ಲಿ ಸಟ್ಟಿಕೆಯನ್ನೂ ರಚಿಸಿದ ರಾಜಶೇಖರ ಪ್ರಖ್ಯಾತನಾಗಿರುವುದು ಹರವಿಲಾಸವೆಂಬ ಅನುಪಲಬ್ಧ ಮಹಾಕಾವ್ಯ ಮತ್ತು ಕಾವ್ಯಮೀಮಾಂಸೆಯೆಂಬ ಸಂಸ್ಕೃತದ ಅಪ್ರತಿಮ ಅಲಂಕಾರಿಕ ಶಾಸ್ತ್ರೀಯ ಗ್ರಂಥದಿಂದ.
       ಕಾವ್ಯಮೀಮಾಂಸೆಯ ಪ್ರಕಾರ ಪರಮೇಶ್ವರನು ಕಾವ್ಯವಿದ್ಯೆಯನ್ನು ಪ್ರಪ್ರಥಮವಾಗಿ ತನ್ನ ಮೊದಲ ಶಿಷ್ಯನಾದ ಸ್ವಯಂಭೂ ಬ್ರಹ್ಮನ ಮಾನಸಪುತ್ರನಾದ ಕಾವ್ಯಪುರುಷನಿಗೆ ಉಪದೇಶಿಸಿದನು. ಈ ಕಾವ್ಯಪುರುಷನನ್ನು ಕಾವ್ಯವಿದ್ಯೆಯ ಪ್ರವರ್ತಕನೆಂದು ಭಾವಿಸಲಾಗುತ್ತದೆ. ಕಾವ್ಯಪುರುಷನು ಕಾವ್ಯವಿದ್ಯೆಯನ್ನು ಸ್ವರ್ಗದಲ್ಲಿರುವ ತನ್ನ ಹದಿನೆಂಟು ಶಿಷ್ಯರಿಗೆ ಹದಿನೆಂಟು ಭಾಗವಾಗಿ ಉಪದೇಶಿಸಿದನು. ಈ ಶಿಷ್ಯರು ಹದಿನೆಂಟು ಭಾಗವುಳ್ಳ ಕಾವ್ಯವಿದ್ಯೆಯ ಒಂದೊಂದು ಭಾಗದಲ್ಲಿ ವಿಶೇಷಜ್ಞಾನವನ್ನು ಪಡೆದು ಪ್ರತ್ಯೇಕವಾದ ಗ್ರಂಥಗಳನ್ನು ರಚಿಸಿದರು. ಅವರಲ್ಲಿ ಸಹಸ್ರಾಕ್ಷನು ’ಕವಿರಹಸ್ಯ’ ಎಂಬ ಗ್ರಂಥವನ್ನೂ, ಉಕ್ತಿಗರ್ಭನು ’ಉಕ್ತಿವಿಚಾರ’ವನ್ನೂ, ಸುವರ್ಣನಾಭನು ’ರೀತಿನಿರ್ಣಯ’ವನ್ನೂ, ಪ್ರಚೇತನು ’ಅನುಪ್ರಾಸ’ವನ್ನೂ, ಚಿತ್ರಾಂಗನು ’ಯಮಕ ಮತ್ತು ಚಿತ್ರಕಾವ್ಯ’ವನ್ನೂ, ಆದಿಶೇಷನು ’ಶಬ್ದಶ್ಲೇಷ’ವನ್ನೂ, ಪುಲಸ್ತ್ಯನು ’ಸ್ವಭಾವೋಕ್ತಿ’ಯನ್ನೂ, ಔಪಕಾಯನನು ’ಉಪಮೆ’ಯನ್ನೂ, ಪಾರಾಶರನು ’ಅತಿಶಯೋಕ್ತಿ’ಯನ್ನೂ, ಉತಥ್ಯನು ’ಅರ್ಥಶ್ಲೇಷ’ವನ್ನೂ, ಕುಬೇರನು ’ಉಭಯಾಲಂಕಾರ’ವನ್ನೂ, ಕಾಮದೇವನು ’ವಿನೋದ ತತ್ತ್ವ’ವನ್ನೂ, ಭರತನು ’ನಾಟ್ಯಶಾಸ್ತ್ರ’ವನ್ನೂ, ನಂದಿಕೇಶ್ವರನು ’ರಸಸಿದ್ಧಾಂತ’ವನ್ನೂ, ಬೃಹಸ್ಪತಿಯು ’ದೋಷಪ್ರಕರಣ’ವನ್ನೂ, ಉಪಮನ್ಯುವು ’ಗುಣಸಿದ್ಧಾಂತ’ವನ್ನೂ, ಕುಚುಮಾರನು ’ರಹಸ್ಯತಂತ್ರ’ವನ್ನೂ ರಚಿಸಿದರು. ವಿಭಿನ್ನ ವಿಷಯಗಳನ್ನು ನಿರೂಪಿಸುವ ಗ್ರಂಥ ರಚನೆಗಳಿಂದ ಕಾವ್ಯವಿದ್ಯೆಯು ಅನೇಕ ವಿಭಾಗಗಳಲ್ಲಿ ವಿಭಕ್ತವಾಗಿರುವುದರಿಂದ ನಿರೂಪಣೆ ವಿಚ್ಛಿದ್ರವಾಯಿತು. ಆದ್ದರಿಂದ ಕಾವ್ಯಶಾಸ್ತ್ರದ ಎಲ್ಲಾ ವಿಚಾರಗಳನ್ನೂ ಸಂಕ್ಷೇಪಿಸಿ ಹದಿನೆಂಟು ಅಧಿಕರಣಗಳುಳ್ಳ ಕಾವ್ಯಮೀಮಾಂಸೆಯನ್ನು ರಚಿಸಿರುವುದಾಗಿ ರಾಜಶೇಖರ ಹೇಳಿಕೊಂಡಿದ್ದಾನೆ.
       ಕಾವ್ಯಮೀಮಾಂಸೆಯ ಹದಿನೆಂಟು ಭಾಗಗಳಲ್ಲಿ ಮೊದಲನೇಯದಾದ ಕಾವ್ಯಪುರುಷೋತ್ಪತ್ತಿ ಪ್ರಕರಣದಲ್ಲಿ ಒಂದು ಕಥಾನಕವಿದೆ. ಬ್ರಹ್ಮನ ವರದಿಂದ ಸರಸ್ವತಿಯು ಕಾವ್ಯಪುರುಷನಿಗೆ ಜನ್ಮವಿತ್ತಳಂತೆ. ಹುಟ್ಟಿದ ಕೂಡಲೇ ಕಾವ್ಯಪುರುಷನು ಸರಸ್ವತಿಯ ಪಾದಗಳಿಗೆ ನಮಸ್ಕರಿಸಿ ಛಂದೋಬದ್ಧವಾದ ವಾಣಿಯಲ್ಲಿ ಹೀಗೆ ಹೇಳಿದನು.
ಯದೇತದ್ವಾಙ್ಮಯಂ ವಿಶ್ವಮರ್ಥಮೂರ್ತ್ಯಾ ವಿವರ್ತತೇ |
ಸೋಽಸ್ಮಿ ಕಾವ್ಯಪುಮಾನಂಬ ಪಾದೌ ವಂದೇಯ ತಾವಕೌ ||

- ಮಾತೇ, ಸಕಲ ವಾಞ್ಮಯ ಪ್ರಪಂಚವನ್ನು ಅರ್ಥರೂಪದಲ್ಲಿ ಪರಿಣಿತವನ್ನಾಗಿ ಮಾಡುವ ಕಾವ್ಯಪುರುಷನು ನಿನ್ನ ಚರಣಗಳಿಗೆ ವಂದಿಸುತ್ತಾನೆ.
       ಈ ರೀತಿಯ ಛಂದೋಬದ್ಧವಾದ ವಾಣಿಯು ಇಲ್ಲಿಯವರೆಗೆ ವೇದಗಳಲ್ಲಿ ಮಾತ್ರ ಉಪಲಬ್ಧವಿದ್ದರೂ, ಈಗ ಅದಕ್ಕೆ ಸಮಾನವಾಗಿ ಸಂಸ್ಕೃತದಲ್ಲಿ ಶ್ರುತವಾದುದಕ್ಕೆ ಸರಸ್ವತಿ ಹರ್ಷಗೊಂಡು ಕಾವ್ಯಪುರುಷನನ್ನು ಛಂದೋಬದ್ಧವಾಣಿಯ ಆದ್ಯಪ್ರವರ್ತಕನಾಗೆಂದು ಹರಸಿದಳು. ಹೀಗೆ ಸರಸ್ವತಿಯು ತನ್ನ ಪುತ್ರನಿಗೆ ಆಶೀರ್ವದಿಸಿ ಒಂದು ವೃಕ್ಷದ ಕೆಳಗೆ ಶಿಶುವನ್ನು ಮಲಗಿಸಿ ಆಕಾಶಗಂಗೆಯಲ್ಲಿ ಸ್ನಾನಕ್ಕೆ ತೆರಳಿದಳಂತೆ.(ಪಾರ್ವತಿಯ ಕಥೆಯೂ ಅದೇ. ಮಣ್ಣಿನಿಂದ ಬಾಲಕನನ್ನು ಸೃಷ್ಟಿಸಿ ಸೀದಾ ಮೀಯಲು ಹೋದಳು. ಪುರಾಣಕಾಲದ ಸ್ಕ್ರಿಪ್ಟ್ ರೈಟರುಗಳು ಬೇರೇನಾದರೂ ಬರೆಯಬೇಕಿತ್ತೆಂದು ನನಗಾಗಾಗ ಅನಿಸುವುದುಂಟು). ಆ ವೇಳೆಗೆ ನಿತ್ಯಕರ್ಮಾಚರಣೆಗಾಗಿ ಹೊರಟಿದ್ದ ಶುಕ್ರಾಚಾರ್ಯನು ಸೂರ್ಯತಾಪದಿಂದ ಬಳಲಿದ್ದ ಅನಾಥ ಶಿಶುವನ್ನು ಕಂಡು ತನ್ನ ಆಶ್ರಮಕ್ಕೆ ತೆಗೆದುಕೊಂಡು ಹೋದನು. ಕಾವ್ಯಪುರುಷನ ಪ್ರೇರಣೆಯಿಂದ ಶುಕ್ರನ ಹೃದಯದಿಂದ ಸ್ತುತಿಯೊಂದು ಹೊರಟಿತಂತೆ.
ಯಾ ದುಗ್ಧಾಪಿ ನ ದುಗ್ಧೇನ ಕವಿದೋಗ್ಧೃಭಿರನ್ವಹಮ್ |
ಹೃದಿ ನಃ ಸನ್ನಿಧತ್ತಾಂ ಸಾ ಸೂಕ್ತಿಧೇನುಃ ಸರಸ್ವತೀ ||

- ಪ್ರತಿನಿತ್ಯವೂ ಕವಿಗಳೆಂಬ ಗೋಪಾಲಕರು ಹಾಲು ಕರೆಯುವ ಸೂಕ್ತಿಗಳೆಂಬ ಕಾಮಧೇನುವಾದ ಸರಸ್ವತಿಯು ನಮ್ಮ ಹೃದಯದಲ್ಲಿ ವಾಸಿಸಲಿ.
       ಅದು ಆ ಕಡೆಯ ಕಥೆಯಾದರೆ, ಈಚೆ ಸರಸ್ವತಿಯು ಮಿಂದು ಬಂದಾಗ ತನ್ನ ಪುತ್ರನನ್ನು ಕಾಣದೇ ದುಃಖದಿಂದ ಪರಿತಪಿಸಿದಳು. ಆ ವೇಳೆಗೆ ಅಲ್ಲಿಗಾಗಮಿಸಿದ ವಾಲ್ಮೀಕಿಯು ನಡೆದ ವಿಷಯವನ್ನು ತಿಳಿಸಿ ಭಾರ್ಗವನ ಆಶ್ರಮದ ಮಾರ್ಗವನ್ನು ಸರಸ್ವತಿಗೆ ತಿಳಿಸಿದ. ತನ್ನ ಪುತ್ರನಿರುವ ಸ್ಥಾನವನ್ನು ಹೇಳಿರುವ ಕಾರಣದಿಂದ, ಸರಸ್ವತಿ ಕೃತಜ್ಞತಾಭಾವದಿಂದ ವಾಲ್ಮೀಕಿಗೆ ಛಂದೋಮಯ ವಾಣಿಯಲ್ಲಿ ಕಾವ್ಯರಚನೆ ಮಾಡಲು ವರವಿತ್ತಳು. ಸರಸ್ವತಿಯ ಆದೇಶವನ್ನು ಪಡೆದು ತನ್ನ ಆಶ್ರಮಕ್ಕೆ ಬರುತ್ತಿರುವಾಗ ಬೇಡನೊಬ್ಬನ ಬಾಣದಿಂದ ಹೆಣ್ಣು ಕ್ರೌಂಚ ಪಕ್ಷಿ ಹತವಾದದ್ದನ್ನೂ, ಅದನ್ನು ನೋಡಿ ದುಃಖದಿಂದ ಆಕ್ರಂದಿಸುವ ಗಂಡುಪಕ್ಷಿಯನ್ನು ಕಂಡು ಶೋಕತಪ್ತಗೊಂಡ ವಾಲ್ಮೀಕಿಯ ಮುಖದಿಂದ ಶೋಕಮಯ ವಾಣಿಯು ಹೊರಹೊಮ್ಮಿತು.
ಮಾ ನಿಷಾದ ಪ್ರತಿಷ್ಠಾಂ ತ್ವಮಾಗಮಃ ಶಾಶ್ವತೀಃ ಸಮಾಃ |
ಯತ್ ಕ್ರೌಂಚಮಿಥುನಾದೇಕಮವಧಿಃಕಾಮಮೋಹಿತಮ್ ||

      ಇದು ಛಂದಸ್ಸಿನ ದೃಷ್ಟಿಯಿಂದ ನಿರ್ದುಷ್ಟವೆನಿಸಿದರೂ, ಅರ್ಥದ ದೃಷ್ಟಿಯಿಂದ ಅಪೂರ್ವ ಮಹತ್ವದ್ದೆಂದೇನೂ ಭಾಸವಾಗುವುದಿಲ್ಲ. ಗೋವಿಂದರಾಜನೇ ಇತ್ಯಾದಿ ಕೆಲ ವ್ಯಾಖ್ಯಾನಕಾರರು ’ಮಾ’ ಎಂದರೆ ಲಕ್ಷ್ಮಿಯೆಂದೂ, ಮಾನಿಷಾದ ಎಂದರೆ ಲಕ್ಷ್ಮಿನಿವಾಸನಾದ ವಿಷ್ಣುವೆಂದೂ ಬಗೆಬಗೆಯ ಅರ್ಥಗಳನ್ನು ತೋರಿಸಿ ರಾಮಾಯಣಕ್ಕೆ ಮಂಗಳಶ್ಲೋಕವೆನಿಸುವ ಔಚಿತ್ಯ ಅದರಲ್ಲುಂಟೆಂದು ವಿವರಣೆ ನೀಡಿದ್ದಾರೆ. ಇದು ಪಂಡಿತರ ವ್ಯಾಖ್ಯಾನಕೌಶಲವೇ ಹೊರತೂ ಮತ್ತೇನೂ ಅಲ್ಲ. ಅದೇನೇ ಇದ್ದರೂ ಹೀಗೆ ಸ್ವಾಭಾವಿಕ ವಾಣಿಯು ಹೊರಹೊಮ್ಮಿದ ನಂತರ ವಾಲ್ಮೀಕಿ ಭೂಲೋಕದಲ್ಲಿ ಕಾವ್ಯಪರಂಪರೆಯ ಪ್ರಥಮ ಪ್ರವರ್ತಕನೆಂದು ಹೆಸರಾಗಿ ಆದಿಕವಿಯೆಂದು ಪ್ರಸಿದ್ಧನಾದನು.
       ಇದೇ ವೇಳೆ ಅತ್ತ ಬ್ರಹ್ಮಲೋಕದಲ್ಲಿ ಋಷಿಗಳಿಗೂ ದೇವತೆಗಳಿಗೂ ಯಾವುದೋ ವಿಷಯದಲ್ಲಿ ವಿವಾದವುಂಟಾಯಿತಂತೆ. ಆಗ ಬ್ರಹ್ಮನು ಸರಸ್ವತಿಯನ್ನು ವಿವಾದ ನಿರ್ಣಾಯಕಳಾಗಿ ನೇಮಿಸಲುದ್ದೇಶಿಸಿದ. ಕಾರಣ, ಸರಸ್ವತಿಯು ಕಾವ್ಯಪುರುಷನನ್ನು ಭೂಲೋಕದಲ್ಲಿಯೇ ಬಿಟ್ಟು ಬ್ರಹ್ಮಲೋಕಕ್ಕೆ ಹೊರಟಳು. ತನ್ನನ್ನು ಒಬ್ಬಂಟಿಯಾಗಿ ಬಿಟ್ಟುಹೋದುದರಿಂದ ಸಿಟ್ಟಿಗೆದ್ದ ಕಾವ್ಯಪುರುಷ ತನ್ನ ಸ್ಥಾನವನ್ನು ಬಿಟ್ಟು ಹೊರಟು ಹೋದನಂತೆ.
       ಕಾವ್ಯಪುರುಷ ಮರ್ತ್ಯಲೋಕವನ್ನು ತೊರೆದು ಹೋಗುತ್ತಿರುವುದನ್ನು ಕಂಡ ಪಾರ್ವತಿ ಅವನನ್ನು ವಶಪಡಿಸಿಕೊಳ್ಳಲು ಸಾಹಿತ್ಯವಧುವೆಂಬ ಸ್ತ್ರೀಯನ್ನು ಸೃಷ್ಟಿಸಿ ಕಾವ್ಯಪುರುಷನನ್ನು ಮರಳಿ ತಿರುಗಿ ಬರುವಂತೆ ಮಾಡೆಂದು ಆದೇಶಿಸಿದಳು. ಇನ್ನೊಂದೆಡೆ ಮುನಿಗಳನ್ನು ಕುರಿತು ಕಾವ್ಯಪುರುಷನನ್ನು ತೃಪ್ತಗೊಳಿಸಲು ಅವನನ್ನು ಹಿಂಬಾಲಿಸಿ ಸ್ತುತಿಸುವಂತೆ ಹೇಳಿದಳು.
ಸಾಹಿತ್ಯವಧುವಿನಿಂದ ಹಿಂಬಾಲಿಸಲ್ಪಟ್ಟ ಕಾವ್ಯಪುರುಷನು ಪೂರ್ವ ದಿಕ್ಕಿಗೆ ಸಂಚರಿಸಿದನು. ಅಂಗ, ವಂಗ, ಬ್ರಹ್ಮ, ಪುಂಡ್ರ ಮೊದಲಾದ ಜನಪದಗಳು ಈ ದಿಕ್ಕಿನಲ್ಲಿದ್ದವು. ಕಾವ್ಯಪುರುಷನನ್ನು ಪ್ರಸನ್ನಗೊಳಿಸಲು ಸಾಹಿತ್ಯವಧುವು ಆಯಾ ಜನಪದಗಳ ವೇಷವನ್ನು ಧರಿಸಿದಳು. ಈ ಪ್ರಾಂತ್ಯದ ರಚನಾ ಪ್ರವೃತ್ತಿ ’ಓಢ್ರಮಾಗಧಿ’ ಎಂದು ಹೆಸರು ಪಡೆಯಿತು. ಸಾಹಿತ್ಯ ವಧುವು ಈ ದೇಶದಲ್ಲಿ ಪ್ರದರ್ಶಿಸಿದ ನೃತ್ಯಗಾನಾದಿಗಳು ’ಭಾರತೀ ವೃತ್ತಿ’ ಎಂದು ಹೆಸರಾದವು. ಪೂರ್ವದೇಶದಲ್ಲಿ ಸಾಹಿತ್ಯವಧುವು ವೇಷರಚನಾದಿಗಳ ಮೂಲಕ ಎಷ್ಟೇ ಪ್ರಯತ್ನಪಟ್ಟರೂ ಕಾವ್ಯಪುರುಷ ಅವಳೆಡೆ ಆಕರ್ಷಿತನಾಗಲಿಲ್ಲ. ಆಗ ಅವಳು ದೀರ್ಘಸಮಾಸ, ಅನುಪ್ರಾಸ, ಯೋಗವೃತ್ತಿಗಳಿಂದ ಹೇಳಿದ ವಚನವು ’ಗೌಡೀ’ ಶೈಲಿಯೆಂದು ಪ್ರಸಿದ್ಧವಾಯಿತು. ಆಯಾ ದೇಶದ ವೇಷವಿನ್ಯಾಸ ಕ್ರಮವನ್ನು ’ಪ್ರವೃತ್ತಿ’ ಎಂದೂ, ನೃತ್ಯಗಾನಾದಿ ವಿನ್ಯಾಸಗಳನ್ನು ’ವೃತ್ತಿ’ ಎಂದೂ, ಕಾವ್ಯರಚನಾವಿನ್ಯಾಸವನ್ನು ’ರೀತಿ ಅಥವಾ ಶೈಲಿ’ ಎಂದೂ ಅಲಂಕಾರಿಕರು ಕರೆದಿದ್ದಾರೆ.
       ಅನಂತರ ಕಾವ್ಯಪುರುಷನು ಪಾಂಚಾಲ ದೇಶದೆಡೆ ಹೊರಟ. ಇಲ್ಲಿ ಪಾಂಚಾಲ, ಶೌರಸೇನ, ಕಾಶ್ಮೀರ, ಬಾಹ್ಲೀಕ ಮುಂತಾದ ಜನಪದಗಳಿದ್ದವು. ಅವನನ್ನು ಹಿಂಬಾಲಿಸಿ ಬಂದ ಸಾಹಿತ್ಯವಧುವು ಅನುಸರಿಸಿದ ವೇಷವು ’ಪಾಂಚಾಲಮಧ್ಯಮಾ’ ಪ್ರವೃತ್ತಿಯೆಂದು, ಪ್ರದರ್ಶಿಸಿದ ನೃತ್ಯಗೀತಾದಿಗಳನ್ನು ’ಸಾತ್ವತೀ’ವೃತ್ತಿಯೆಂದು ಪ್ರಸಿದ್ಧವಾದವು. ಈ ದೇಶಕ್ಕಾಗಮಿಸಿದ ನಂತರ ಕಾವ್ಯಪುರುಷನ ಮನಸ್ಸು ಸಾಹಿತ್ಯವಧುವಿನೆಡೆಗೆ ಅಲ್ಪಸ್ವಲ್ಪ ಆಕರ್ಷಿತವಾಯಿತು. ಕಾವ್ಯಪುರುಷನು ಸರಸಹೃದಯಿಯಾಗಿ ಲಘುಸಮಾಸ ಮತ್ತು ಅಲ್ಪ ಅನುಪ್ರಾಸಗಳಿಂದ ಯುಕ್ತವಾದ ಲಾಕ್ಷಣಿಕ ವಾಕ್ಯಗಳನ್ನು ಪ್ರಯೋಗಿಸಿದ. ಇದೇ ’ಪಾಂಚಾಲೀ’ಶೈಲಿಯೆಂದು ಹೆಸರಾಯಿತು.
       ನಂತರ ಕಾವ್ಯಪುರುಷ ಆವಂತೀ ದೇಶಕ್ಕೆ ಹೋದನು. ಅಲ್ಲಿ ಆವಂತೀ, ವೈದಿಶ, ಸೌರಾಷ್ಟ್ರ, ಮಾಲವ, ಭೃಗುಕಚ್ಛ ಮೊದಲಾದ ಜನಪದಗಳಿದ್ದವು. ಅಲ್ಲಿ ಸಾಹಿತ್ಯವಧುವು ಅನುಕರಿಸಿದ ವೇಷವನ್ನು ’ಆವಂತೀ’ ಪ್ರವೃತ್ತಿಯೆಂದು ಮುನಿಗಳು ಕರೆದರು. ಇದು ಪಾಂಚಾಲಮಾಧ್ಯಮ ಮತ್ತು ದಾಕ್ಷಿಣಾತ್ಯದ ನಡುವಿನ ಪ್ರವೃತ್ತಿಯಾಗಿದೆ, ಆದ್ದರಿಂದ ಪಾಂಚಾಲದ ’ಸಾತ್ವತೀ’ ಹಾಗೂ ದಾಕ್ಷಿಣಾತ್ಯದ ’ಕೈಶಿಕೀ’ ಇವೆರಡೂ ಆವಂತಿಯ ವೃತ್ತಿಗಳೆನಿಸಿದವು. ಪಾಂಚಾಲ ಮತ್ತು ದಕ್ಷಿಣ ದೇಶದ ವೇಷ, ಭೂಷಣ, ವ್ಯವಹಾರಾದಿಗಳ ಸಮ್ಮಿಶ್ರಣವು ಆವಂತೀದೇಶದಲ್ಲಿ ಕಂಡುಬರುವುದಂತೆ.
       ಅನಂತರ, ಕಾವ್ಯಪುರುಷನು ದಕ್ಷಿಣ ದೇಶಕ್ಕೆ ತೆರಳಿದನು. ಅಲ್ಲಿ ಮಲಯ, ಮೇಖಲ, ಕೇರಳ, ಮಂಜರಾದಿ ದೇಶಗಳಿದ್ದವು. ಈ ದಕ್ಷಿಣ ದೇಶಕ್ಕೆ ಬರುವವರೆಗೆ ಕಾವ್ಯಪುರುಷನು ಸಾಹಿತ್ಯವಧುವಲ್ಲಿ ಪೂರ್ಣವಾಗಿ ಅನುರಕ್ತನಾದನು. ಅನುರಾಗವಶನಾಗಿ ಕಾವ್ಯಪುರುಷನು ಧರಿಸಿದ ವೇಷವನ್ನು ಅಲ್ಲಿಯ ಜನ ಅನುಕರಿಸಿದರು. ಇದು ’ದಾಕ್ಷಿಣಾತ್ಯ’ ಪ್ರವೃತ್ತಿಯೆಂದು ಕರೆಯಲ್ಪಟ್ಟಿತು. ಅದರಂತೆ ಸಾಹಿತ್ಯವಧುವು ಅಲ್ಲಿ ಪ್ರದರ್ಶಿಸಿದ ನೃತ್ಯಗಾನಾದಿಗಳನ್ನು ’ಕೈಶಿಕೀ’ ವೃತ್ತಿಯೆಂದು ಮುನಿಗಳು ಕರೆದರು. ಕಾವ್ಯಪುರುಷನು ಪ್ರಸನ್ನಚಿತ್ತನಾಗಿ ಅನುಪ್ರಾಸಯುಕ್ತವಾದ, ಸಮಾಸರಹಿತವಾದ, ಅಭಿದಾವೃತ್ತಿಪೂರ್ಣವಾದ ಮಾತುಗಳನ್ನಾಡಿದನು. ಇದನ್ನು ’ವೈದರ್ಭೀ’ ರೀತಿ ಎಂದು ಕರೆಯಲಾಯಿತು. ಕಾವ್ಯಪುರುಷನು ಪೂರ್ಣವಾಗಿ ಸಾಹಿತ್ಯವಧುವಿನಲ್ಲಿ ಅನುರಕ್ತನಾದಾಗ ನುಡಿದ ವೈದರ್ಭೀ ಶೈಲಿಯನ್ನು ಕಾವ್ಯಾರಚನೆಯಲ್ಲಿ ಸರ್ವೋತ್ಕೃಷ್ಟ ಶೈಲಿಯೆಂದು ಪರಿಗಣಿಸಲಾಗಿದೆ. ಇದರ ತಾತ್ಪರ್ಯವೆಂದರೆ ಭಾರತದ ಪೂರ್ವಭಾಗದ ಕಾವ್ಯರಚನೆಯಲ್ಲಿ ಔಢ್ರಮಾಗಧಿ ಪ್ರವೃತ್ತಿ, ಭಾರತೀ ವೃತ್ತಿ, ಗೌಡೀಯ ಶೈಲಿಗಳು ಕಂಡುಬರುತ್ತವೆ. ಪಶ್ಚಿಮೋತ್ತರೀಯ ಭಾಗದಲ್ಲಿ ಪಾಂಚಾಲಮಾಧ್ಯಮಾ ಪ್ರವೃತ್ತಿ, ಸಾತ್ವತೀ ವೃತ್ತಿ ಮತ್ತು ಪಾಂಚಾಲಿ ಶೈಲಿಗಳು ಕಂಡುಬರುತ್ತವೆ. ದಕ್ಷಿಣ ಭಾಗದಲ್ಲಿ ದಾಕ್ಷಿಣಾತ್ಯ ಪ್ರವೃತ್ತಿಯೂ, ಕೈಶಿಕೀ ವೃತ್ತಿಯೂ, ವೈದರ್ಭೀ ಶೈಲಿಯೂ ಕಾಣಸಿಗುತ್ತದೆ.
       ಸಂಸ್ಕೃತ ಕಾವ್ಯಶೈಲಿಗಳ ಆದ್ಯ ಪ್ರವರ್ತಕ ವಾಮನ. ಇವನಿಗಿಂತ ಮುಂಚೆ ವೈದರ್ಭೀ, ಗೌಡೀ ಎಂಬ ಮಾರ್ಗಭೇದಗಳನ್ನು ದಂಡಿ ಒಪ್ಪಿದ್ದರೂ ಭಾಮಹನು ಅವುಗಳ ಭೇದ ಅಸ್ಪಷ್ಟವೆಂದು ಕಡೆಗಣಿಸಿದ್ದಾನೆ. ಈ ಎರಡಕ್ಕೆ ಪಾಂಚಾಲಿಯೆಂಬ ಮೂರನೇಯದನ್ನು ಕೂಡಿಸಿ ಮೂರೂ ರೀತಿಗಳಿಗೂ ಸ್ಪಷ್ಟವಾದ ಗುಣವೈಶಿಷ್ಟ್ಯವನ್ನು ಎತ್ತಿ ತೋರಿಸಿ ಶೈಲಿ ಅಥವಾ ರೀತಿಯೇ ಕಾವ್ಯದ ಆತ್ಮವೆಂದು ವಾಮನ ತೀರ್ಮಾನಿಸಿದ್ದಾನೆ. ವಾಮನನ ನಂತರ ಬಂದ ರುದ್ರಟ ತನ್ನ ಕಾವ್ಯಾಲಂಕಾರದಲ್ಲಿ ಆವಂತಿಯ ಶೈಲಿಯನ್ನು ಬೇರ್ಪಡಿಸಿ ಲಾಟೀಯ ಎಂಬ ನಾಲ್ಕನೇ ರೀತಿಯನ್ನು ಹೇಳುತ್ತಾನೆ. ಆದರೆ ರಾಜಶೇಖರ ಸಂಪೂರ್ಣವಾಗಿ ’ರೀತಿರಾತ್ಮಾ ಕಾವ್ಯಸ್ಯ’ ಎಂದ ವಾಮನನ ಸಿದ್ಧಾಂತವನ್ನೇ ಅಂಗೀಕರಿಸಿದ್ದಾನೆ. ಅಲಂಕಾರ, ಗುಣ, ರಸ ಇವುಗಳ ಪ್ರಾಧ್ಯಾನ್ಯವನ್ನು ಹೇಳಿದ ರಾಜಶೇಖರನೇ ಭಾಷೆಯ ದೃಷ್ಟಿಯಿಂದ ’ರೀತಿ’ಗೆ ಪರಮಪ್ರಾಶಸ್ತ್ಯವನ್ನು ಕೊಟ್ಟಿರುವುದನ್ನು ನಮ್ಮ ಈ ಕಾಲದ ಹೆಚ್ಚಿನ ಕವಿಪುಂಗವರೆಲ್ಲ ಮೆರತಂತಿದೆ. ಅರ್ಥಬೋಧಕತ್ವವಿದ್ದರೆ ಅದು ಲೌಕಿಕ ಭಾಷೆಯಾಗುತ್ತದೆಯೇ ಹೊರತೂ ಕಾವ್ಯಭಾಷೆಯಾಗುವುದಿಲ್ಲ. ಕಾವ್ಯಭಾಷೆಯೆನಿಸಿಕೊಳ್ಳಲು ಶಬ್ದಾರ್ಥಗಳಲ್ಲಿ ರಸಿಕವೇದ್ಯವಾದ ಕೆಲ ಗುಣಗಳಿರಬೇಕು. ಶಬ್ದಾಡಂಬರ, ಪಾಂಡಿತ್ಯಪ್ರದರ್ಶನ, ಕೃತಿಮಾಲಂಕಾರಗಳು ಒಂದು ರೀತಿಯಾದರೆ, ಲಲಿತ-ಪ್ರಸನ್ನ-ಮಧುರವಾದ ಸಹಜಾಭಿವ್ಯಕ್ತಿಯ ಕಾವ್ಯಗಳದ್ದು ಎರಡನೇಯ ರೀತಿ, ಇವೆರಡರ ಸಮ್ಮಿಶ್ರಣವೇ ಮೂರನೇಯದು. ಸಂಸ್ಕೃತ ಕಾವ್ಯಭಾಷೆಯನ್ನು ಸಮಗ್ರವಾಗಿ ಮೂರು ರೀತಿಗಳಿಂದ ವಿವರಿಸಲು ಬರುತ್ತದೆಂದು ವಾಮನನ ಅಭಿಪ್ರಾಯ. ಹೀಗೆ ಕಾವ್ಯಭಾಷೆಯ ಸೌಂದರ್ಯ ವ್ಯಕ್ತವಾಗುವ ಮೂರು ವಿಧಗಳೇ ಗೌಡೀ, ಪಾಂಚಾಲೀ, ವೈದರ್ಭೀ ಎಂಬ ಮೂರು ರೀತಿಗಳು.
       ಸರಳ ಉದಾಹರಣೆಯೆಂದರೆ ಕಾಳಿದಾಸನ ಕಾವ್ಯಗಳದ್ದು ವೈದರ್ಭೀ ಶೈಲಿ. ಅವನು ಸುಕುಮಾರಗಂಭೀರ. ಸ್ನಿಗ್ಧಪ್ರಶಾಂತ. ಶಾಂತದಲ್ಲಿ ಪರ್ಯವಸಿಸುವ ಶೃಂಗಾರ ಅವನ ಪ್ರಿಯವಾದ ರಸ. ಪಾತ್ರಗಳ ಸ್ವಭಾವೋನ್ನತಿ, ರಸಾವಿಷ್ಕಾರಗಳ ಚರಮಸೀಮೆಯನ್ನು ಕಾಳಿದಾಸನ ಕಾಲದಲ್ಲಾಗಲೇ ಸಂಸ್ಕೃತ ಸಾಹಿತ್ಯ ತಲುಪಿದ್ದರಿಂದ ಅನಂತರದ ಕವಿಗಳಿಗೆ ತಮ್ಮ ಅನನ್ಯತೆಯನ್ನು ಸ್ಥಾಪಿಸಲು ನೂತನ ಮಾರ್ಗಗಳನ್ನು ಆವಿಷ್ಕರಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಯಿತು. ಮಜದ ವಿಷಯವೆಂದರೆ ಕಾಳಿದಾಸೋತ್ತರ ಕಾಲದಲ್ಲಿ ಅಂಥ ಯಾವ ಕವಿಗಳೂ ನೂತನ ಕಥಾವಸ್ತುವಿನ ಆವಿಷ್ಕಾರ ಮಾಡದೇ ಪಾರಂಪರಿಕವಾಗಿ ಉಪಲಬ್ಧವಿರುವ ವಸ್ತುವಿನಲ್ಲೇ ಕಾವ್ಯರಚಿಸಿಕೊಂಡು ಹೋದರು. ರಾಮಾಯಣಾದಿಗಳೂ, ಪುರಾಣ ಕತೆಗಳೂ ಜನರಿಗೇನು ಹೊಸದಾಗಿರಲಿಲ್ಲ. ಕಾಳಿದಾಸನಂಥವರೇ ಬರೆದಿಟ್ಟ ಮೇಲೆ ಅದನ್ನು ಮೀರಿಸಿ ಬರೆಯುವ ಪ್ರಶ್ನೆಯೇ ಇರಲಿಲ್ಲ. ಹೀಗಾಗಿ ಕವಿಗಳು ತಮ್ಮ ಕಾವ್ಯದಲ್ಲಿ ಅವಕಾಶವಿರುವೆಡೆಯಲ್ಲೆಲ್ಲ ತಮ್ಮ ಪಾಂಡಿತ್ಯವನ್ನೂ ಅತಿಕ್ಲಿಷ್ಟ ಶೈಲಿಯನ್ನೂ ಪ್ರಕಟಿಸತೊಡಗಿದ್ದರಿಂದ ಸಂಸ್ಕೃತ ಕಾವ್ಯಸ್ವರೂಪ ಪೂರ್ತಿ ಭಿನ್ನವಾದ ಆಯಾಮವನ್ನು ಪಡೆದುಕೊಂಡಿತು. ಸಹಜಾಭಿವ್ಯಕ್ತಿ ಮೂಲೆಗುಂಪಾಗಿ ಪಾಂಡಿತ್ಯಪ್ರದರ್ಶನವೇ ಪ್ರಧಾನವಾಯಿತು.(ಕನ್ನಡದ ರಿಮೇಕ್ ಶೂರ ನಿರ್ದೇಶಕರು ಹೇಳುವಂತೆ ಈ ಚಿತ್ರವು ಆ ಚಿತ್ರದ ರಿಮೇಕ್ ಆದರೂ ಕಥೆಯನ್ನು ನೇಟಿವಿಟಿಗೆ ತಕ್ಕಂತೆ ಬದಲಾಯಿಸಲಾಗಿದೆ. ಮೂರು ಹಾಡುಗಳನ್ನು ಸ್ವಿಜರ್ಲೆಂಡಿನಲ್ಲೂ, ಎರಡು ಹಾಡುಗಳನ್ನು ಅಂಟಾರ್ಟಿಕಾದಲ್ಲೂ ಶೂಟಿಂಗ್ ಮಾಡಲಾಗಿದೆ. ಮೂಲ ಚಿತ್ರಕ್ಕಿಂತ ಮೂರು ಪಟ್ಟು ಹೆಚ್ಚು ಹಣ ಸುರಿಯಲಾಗಿದೆ. ಎರಡು ಹೊಸ ಹೊಡೆದಾಟದ ದೃಶ್ಯಗಳಿವೆ ವಗೈರೆ ವಗೈರೆ!!!)  ಕಾಳಿದಾಸನಂಥ ದರ್ಶನ ಮರೆಯಾಗಿ ಯಮಕ, ಮುರಜ-ಖಡ್ಗ-ಗೋಮೂತ್ರಿಕಾದಿ ಬಂಧಗಳು, ಏಕಾಕ್ಷರಿ-ದ್ವೈಕ್ಷರಿಗಳಂಥ ಶಬ್ದಚಮತ್ಕಾರಗಳು ತುಂಬಿದ ಮಹಾಕಾವ್ಯಗಳು, ದ್ವಿಸಂಧಾನ-ತ್ರಿಸಂಧಾನಾದಿ ಕಾವ್ಯಗಳು ಒಡಮೂಡತೊಡಗಿದವು. ಕಾಳಿದಾಸನ ಕಾವ್ಯಗಳ ವಿರಕ್ತಿಪೂರ್ಣ ಜೀವನಶ್ರದ್ಧೆ, ಅಂತರ್ಮುಖಿ ಒಳನೋಟಗಳ ಬದಲು ಕಾವ್ಯದ ಪಾತ್ರಗಳು ಬಹಿರ್ಮುಖವಾಗಿ ರಾಜನೀತಿ, ಶೃಂಗಾರ, ವಿಲಾಸ ಮುಂತಾದ ಐಹಿಕಮೌಲ್ಯಗಳಿಗೆ ಪ್ರಾಶಸ್ತ್ಯ ಹೆಚ್ಚುತ್ತ ಹೋಯಿತು. ಸಹಜತೆ ಕ್ಷೀಣವಾಗಿ ಕೃತ್ರಿಮತೆ ಪ್ರಧಾನವಾಯಿತು. ಇಷ್ಟಾದರೂ ಸಂಸ್ಕೃತ ಭಾಷೆಯ ಅನಂತಸಾಧ್ಯತೆಗಳ ಭಾಂಡಾರವನ್ನು ಜಗದೆದುರು ತೆರೆದಿಟ್ಟ ಕೀರ್ತಿ ಕಾಳಿದಾಸೋತ್ತರ ಕಾಲದಲ್ಲಿ ಮಾಘ, ಭಾರವಿಯೇ ಇತ್ಯಾದಿ ಕವಿಗಳಿಗೆ ಸಲ್ಲಲೇಬೇಕು. ಅದಾಗಿಯೂ ವಿದ್ವತ್ಕಾವ್ಯದ ಪಾಂಡಿತ್ಯ ಪ್ರದರ್ಶನವನ್ನು ತ್ಯಜಿಸಿ ಸಹಜ ಪ್ರಸನ್ನ ಶೈಲಿಯಲ್ಲಿ ಕಾವ್ಯವನ್ನು ರಚಿಸುವುದರ ಮೂಲಕ ಕಾಳಿದಾಸನ ವೈದರ್ಭೀ ರೀತಿಯನ್ನು ಪುನರುಜ್ಜೀವಿಸುವಂತೆ ಮಾಡಿದವರಲ್ಲಿ ಜಾನಕೀಹರಣವನ್ನು ಬರೆದ ಕುಮಾರದಾಸ, ನವಸಾಹಸಾಂಕದ ಪದ್ಮಗುಪ್ತ, ಚಂಪೂರಾಮಾಯಣದ ಮೂಲಕ ವಾಲ್ಮೀಕಿರಾಮಾಯಣವನ್ನು ಪುನರ್ನಿರ್ಮಿಸಿದ ಭೋಜರಾಜ ಮುಂತಾದವರು ಪ್ರಮುಖರು.
      ಇನ್ನು ಸಮಾಸಭೂಯಿಷ್ಠವಾದ, ಆಂಡಬರದ ಪದಸಮೂಹಗಳಿಂದ ಕೂಡಿದ ಜಟಿಲವಾದ ಗೌಡೀಶೈಲಿಯಲ್ಲಿ ಪ್ರಮುಖವಾಗಿ ನೆನಪಾಗುವವರಲ್ಲಿ ಒಬ್ಬ ವಾಸವದತ್ತಾದ ಸುಬಂಧು. ’ಪ್ರತ್ಯಕ್ಷರಶ್ಲೇಷಮಯಪ್ರಬಂಧವಿನ್ಯಾಸವೈದಗ್ಧನಿಧಿ’ಯೆಂದು ತನ್ನ ವಿಶಿಷ್ಟತೆಯನ್ನೂ ಉದ್ದಕ್ಕೆ ಲೇಖಿಸಿದವನವನು. ಶ್ಲೇಷಮೂಲವಾದ ಉಪಮೆ, ಉತ್ಪ್ರೇಕ್ಷೆ, ವಿರೋಧಾಭಾಸ, ಅನುಪ್ರಾಸಮಿಶ್ರಿತ  ಸಮಾಸಬಂಧಗಳ ವರ್ಣನೆಯಲ್ಲಿ ಗದ್ಯಸಾಹಿತ್ಯದಲ್ಲಿ ಸುಬಂಧುವನ್ನು ಸರಿಗಟ್ಟುವವರು ಕಡಿಮೆ. ಆತ ವಾಸವದತ್ತಾದಲ್ಲಿ ರೇವಾ ನದಿಯನ್ನು ವರ್ಣಿಸುವ ಒಂದು ಸಾಲನ್ನು ನೋಡಿದರೆ ಸಾಕು, ಅವನಿಗೂ ವೈದರ್ಭೀ ಶೈಲಿಯ ಕಾಳಿದಾಸನಿಗೂ ಇರುವ ವ್ಯತ್ಯಾಸ ಸುಲಭಗ್ರಾಹ್ಯ.
'ಮದಕಲಕಲಹಂಸಸಾರಸರಸಿತೋದ್ಭ್ರಾಂತಭಾಃಕೂಟವಿಕಟಪುಚ್ಛಛಟಾವ್ಯಾಧೂತವಿಕಟಕಮಲಖಂಡವಿಗಲಿತಮಕರಂದಬಿಂದುಸಂದೋಹಸುರಭಿತಸಲಿಲಯಾ.....'
      ಸುಬಂಧುವಿನಂತೆ ಕಾವ್ಯಕಲೆಯ ಪರಮ ಸೌಂದರ್ಯವನ್ನು ಗದ್ಯದಲ್ಲಿ ಅನರ್ಘ್ಯವಾಗಿ ಕಟ್ಟಿಕೊಟ್ಟವ ಬಾಣ. ಅವನದ್ದು ಪಾಂಚಾಲೀ ಶೈಲಿ. ಅವನ ವಾಕ್ಯವಿನ್ಯಾಸ ಮೊದಲು ದೀರ್ಘ, ಬಳಿಕ ಮಧ್ಯಮ, ಆಮೇಲೆ ಹೃಸ್ವ, ಮತ್ತೆ ಮಧ್ಯಮ, ಕೊನೆಗೆ ದೀರ್ಘ ಹೀಗೆ ಆರೋಹಣ-ಅವರೋಹಣ ಕ್ರಮದಲ್ಲಿ ಚಲಿಸುತ್ತ ಭಾಷೆಯ ಸಕಲಸಾಧ್ಯತೆಗಳನ್ನು ತೆರೆದಿಡುತ್ತ ಹೋಗುವುದು ಬಾಣನ ಜಾಯಮಾನ. ’ಉದ್ದಾಮದರ್ಪಭಟಸಹಸ್ರೋಲ್ಲಾಸಿತಾಸಿಲತಾಪಂಜರವಿಧೃತಾಪ್ಯಪಕ್ರಾಮತಿ’ ಎಂದು ಗೌಡೀ ಶೈಲಿಯಲ್ಲಿ ಆಡಂಬರಪೂರ್ಣವಾಗಿ ಬರೆದಷ್ಟೇ ಸಲೀಸಾಗಿ 'ಕಿಂ ಮೇ ಗೃಹೇಣ? ಕಿಮಂಬಯಾ? ಕಿಂ ವಾ ತಾತೇನ?’ ಎಂದು ಸಣ್ಣ ಸಣ್ಣ ವಾಕ್ಯಗಳಲ್ಲಿ ಮನಕರಗುವಂತೆಯೂ ಬರೆಯಬಲ್ಲ.
       ಇಡಿಯ ಜಗತ್ಪ್ರಕೃತಿಯನ್ನೇ ಸತ್ವ, ರಜ, ತಮಗಳೆಂಬ ಮೂರು ಗುಣಗಳಿಂದ ವಿವರಿಸುವಂತೆ ಸಂಸ್ಕೃತ ಕಾವ್ಯಭಾಷೆಯನ್ನು ಕೂಡ ಸಮಗ್ರವಾಗಿ ಮೂರು ರೀತಿಗಳಿಂದ ವಿವರಿಸಲು ಬರುತ್ತದೆಯೆಂದು ವಾಮನ ಅಭಿಪ್ರಾಯ. ಒಂದೊಂದು ರೀತಿಯ ಉದಯಕ್ಕೆ ವಿಶಿಷ್ಟವಾದ ಗುಣ, ಕಾರಣಗಳಿವೆ. ಕಾವ್ಯಭಾಷೆಯ ಸಹಜ ಸೌಂದರ್ಯಾಂಶವನ್ನು ರೀತಿ ಪ್ರತಿಪಾದಿಸಿದರೆ, ರೀತಿಸಿದ್ಧ ಸೌಂದರ್ಯಕ್ಕೆ ಅತಿಶಯವನ್ನು ತರಬಲ್ಲ ವಾಕ್ಯವಿನ್ಯಾಸ ವಿಶೇಷಗಳನ್ನು ಅಲಂಕಾರಗಳೆನ್ನಬಹುದು. ಕಾವ್ಯದಲ್ಲಿ ಇವೆರಡರ ಪರಿಣಾಮವಾಗಿ ರಸಿಕರಲ್ಲಿ ಉಂಟಗುವ ಆನಂದವೇ ರಸ. ಹೀಗೆ ರೀತಿ, ರಸಗಳೆರಡೂ ಕಾವ್ಯದಲ್ಲಿ ಕೂಡಿ ನಡೆಯುತ್ತವೆ. ವಾಗರ್ಥದಂತೆ, ಪಾರ್ವತೀ ಪರಮೇಶ್ವರರಂತೆ.
       ಸೌ೦ದರ್ಯವನ್ನನ್ವೇಷಿಸುವ, ಕಾಣುವ ಮತ್ತು ಪ್ರಕಟಿಸುವ ಶಕ್ತಿಸ೦ಪನ್ನನನ್ನು ಕವಿಯೆ೦ದೂ, ಅದರಿ೦ದ ಆಸ್ವಾದವನ್ನು ಹೊ೦ದುವವನನ್ನು ಸಹೃದಯನೆ೦ದೂ ನಮ್ಮ ಪರ೦ಪರೆ ಕರೆದಿದೆ. ನಮ್ಮೊಳಗೆ ಜಾಗೃತವಾಗಿದ್ದರೂ ನಮ್ಮದಾಗಿರದ ಭಾವದ ಸ್ಥಿತಿಗೆ ರಸವೆ೦ದು ಹೆಸರು. ರಸಾನುಭೂತಿಯನ್ನು ಉ೦ಟುಮಾಡುವ ಕಾವ್ಯ ಉತ್ತಮಕಾವ್ಯ. ಸಹೃದಯನ ಚಿತ್ತ ಶಬ್ದಸೌ೦ದರ್ಯದಲ್ಲಿ ಅಥವಾ ವಾಚ್ಯಾರ್ಥ ಸೌ೦ದರ್ಯದಲ್ಲಿ ವಿಶ್ರಾ೦ತವಾದರೆ ಅದು ಮಧ್ಯಮ ಕಾವ್ಯ. ಅದೆರಡೂ ಅಲ್ಲದ್ದು ಇತ್ತೀಚೆಗೆ ಬರುತ್ತಿರುವ ಮೂರನೇ ದರ್ಜೆಯ ಕಾವ್ಯಗಳು. ಕಾವ್ಯವೆ೦ದರೇನೆ೦ದರಿಯದವರೂ ಕವಿಗಳಾಗುತ್ತಿರುವುದು ಸ೦ಖ್ಯೆ ಜಾಸ್ತಿಯಾಗುತ್ತಿರುವುದರಿ೦ದ ಸಹೃದಯರ ಸ೦ಖ್ಯೆ ಕಡಿಮೆಯಾಗಿದೆಯಷ್ಟೇ. ನಿಸ್ಸ೦ಗದ ಸ್ಥಿತಿಯಲ್ಲಿ ಪ್ರಪ೦ಚವನ್ನು ಪರಿಭಾವಿಸುವ ಕವಿಗೆ ಪ್ರಪ೦ಚದ ವಸ್ತುವೈವಿಧ್ಯದ ಅ೦ತರ೦ಗದಲ್ಲಿ ನಿಹಿತವಾದ ಏಕತೆ ಗೋಚರವಾದೀತು. ಅಥವಾ ಬಾಹ್ಯ ಪ್ರಪ೦ಚ ತನ್ನ ಅ೦ತರ೦ಗದ ಭಾವಕ್ಕೆ ಸ೦ವಾದಿಯಾಗಿರುವುದು ಕ೦ಡೀತು. ಆ ಹೊಳಹನ್ನೇ ಪ್ರತಿಭೆಯೆನ್ನುವುದು. ಪ್ರತಿಭಾನೇತ್ರದಿ೦ದ ಅವರೇನನ್ನು ಕಾಣುವರೋ ಅದು ದರ್ಶನ. ಸ೦ಸ್ಕೃತದಲ್ಲಿ ದಾರ್ಶನಿಕತೆಯನ್ನು ಕವಿತ್ವದ ಅನಿವಾರ್ಯ ಮತ್ತು ಅವಿಭಾಜ್ಯ ಅ೦ಗವೆ೦ದೇ ಪರಿಗಣಿಸಲಾಗಿದೆ. ಪ್ರತಿಭೆಯಿ೦ದ ಕ೦ಡ ದರ್ಶನವನ್ನು ಸಮುಚಿತವಾಗಿ ಪ್ರಕಟಿಸಲು ಕವಿಗೆ ಶಬ್ದಸ೦ಪತ್ತು, ಶಾಸ್ತ್ರಜ್ಞಾನ, ಇತಿಹಾಸದ ಅಧ್ಯಯನವೆಲ್ಲ ತು೦ಬ ಅಗತ್ಯ. ದರ್ಶನದಿ೦ದ ಪ್ರಕಟಗೊ೦ಡಿದ್ದು ವರ್ಣನ. ಪ್ರತಿಭೆ, ಲೋಕಶಾಸ್ತ್ರಾದಿ ಕಾವ್ಯಗಳ ಅಧ್ಯಯನ, ಮತ್ತು ಅಭ್ಯಾಸ ಈ ಮೂರೂ ಹದವಾಗಿ ಪಾಕವಾಗಿ ಸೇರಿ ದರ್ಶನ-ವರ್ಣನಗಳು೦ಟಾಗುವುದರಿ೦ದ ಕವಿತ್ವ ಎ೦ಬುದು ತು೦ಬ ಹೊಣೆಗಾರಿಕೆಯ ಸಾಧನೆಯ ಪದವಿ.
ಪುರಾ ಕವೀನಾಂ ಗಣನಾಪ್ರಸಂಗೇ
ಕನಿಷ್ಠಿಕಾಧಿಷ್ಠಿತಕಾಲಿದಾಸಃ |
ಅದ್ಯಾಪಿ ತತ್ತುಲ್ಯಕವೇರಭಾವಾದ್
ಅನಾಮಿಕಾ ಸಾರ್ಥವತೀ ಬಭೂವ ||

- ನಮ್ಮ ದೇಶದಲ್ಲಿ ಎಷ್ಟು ಕವಿಗಳಿದ್ದಾರೆಂಬ ಎಣಿಕೆ ಕಿರುಬೆರಳಿನಿಂದ ಶುರುವಾಯ್ತಂತೆ. ಮೊದಲು ಕಾಳಿದಾಸ ಎಂದು ಕಿರುಬೆರಳನ್ನು ಮಡಿಸಲಾಯ್ತು. ಆಮೇಲೆ ಅವನಿಗೆ ಸಮಾನನಾದ ಇನ್ನೊಬ್ಬ ಕವಿ ಸಿಗದುದರಿಂದ ಎರಡನೇ ಬೆರಳು ’ಅನಾಮಿಕಾ’(ಹೆಸರಿಲ್ಲದ್ದು) ಎಂದೇ ಸಾರ್ಥಕವಾಯ್ತು. ಕಾಳಿದಾಸ ಮಹಾಕವಿಯ ಪದವಿಗೇರಿದ್ದು ಸುಮ್ಮನೆಯೇ! ಇಂದು ನೋಡಿ. ಟಾಮ್, ಡಿಕ್ ಎಂಡ್ ಮೊಯ್ಲಿ ಎಲ್ಲರೂ ಕವಿಗಳೇ.

Sunday, June 5, 2016

ಆಂಧ್ರಕಾವ್ಯ ಪರಂಪರೆ ಹಾಗೂ ಕವಿಸಾರ್ವಭೌಮ ಶ್ರೀನಾಥ


आन्ध्रत्वमान्ध्रभाषा च प्राभाकरपरिश्रम: |
तत्रापि याजुषी शाखा नाಽल्पस्य तपस: फलम् ||
      ಆ೦ಧ್ರದಲ್ಲಿ ಜನಿಸುವುದು, ಆಂಧ್ರಭಾಷೆಯನ್ನು ಮಾತನಾಡುವುದು, ಜೊತೆಗೆ ಯಜುರ್ವೇದ ಶಾಖೆಗೆ ಸೇರಿದವನಾಗುವುದು ಇವೆಲ್ಲ ಸಣ್ಣಪುಟ್ಟ ತಪಸ್ಸಿಗೆಲ್ಲ ಒಲಿಯುವ ಫಲವಲ್ಲವೆಂದಿದ್ದಾರೆ ಖ್ಯಾತ ಕವಿ, ತತ್ತ್ವಜ್ಞಾನಿ ಅಪ್ಪಯ್ಯದೀಕ್ಷಿತರು. ’ತ್ರಿಮೂರ್ತಿಶಾಂ ಸ೦ಸ್ಕೃತಾ೦ಧ್ರ ಪ್ರಾಕ್ರತ ಪ್ರಿಯ೦ಕರಾ: ’ ತ್ರಿಮೂರ್ತಿಗಳಲ್ಲಿ ಬ್ರಹ್ಮನಿಗೆ ಸಂಸ್ಕೃತವೂ, ವಿಷ್ಣುವಿಗೆ ತೆಲುಗೂ, ಶಿವನಿಗೆ ಪ್ರಾಕೃತವು ಪ್ರಿಯವಾದ ಭಾಷೆಗಳೆಂದು ತೆಲುಗರ ಆರಾಧ್ಯದೈವ ಶ್ರೀಕಾಕುಳಾಂಧ್ರ ಮಹಾವಿಷ್ಣು ಹೇಳಿದ್ದಾನಂತೆ.
ಆ೦ಧ್ರಕ್ಕೆ ಹಿಂದೆ ತ್ರಿಲಿ೦ಗ ಕ್ಷೇತ್ರವೆ೦ಬ ಹೆಸರೂ ಇತ್ತು. ದ್ರಾಕ್ಷಾರಾಮ, ಶ್ರೀಶೈಲ, ಕಳೇಶ್ವರಗಳೆ೦ಬ ಮೂರು ಪ್ರಸಿದ್ಧ ಶಿವಕ್ಷೇತ್ರಗಳಿ೦ದ ಈ ಹೆಸರು ಬ೦ದಿದ್ದು. ಈ ತ್ರಿಲಿಂಗವೇ ತೆನುಂಗುವಾಗಿ ಕೊನೆಗೆ ತೆಲುಗು ಆಯಿತಂತೆ. ಪುರಾಣಕಾಲದ ಛಪ್ಪನ್ನೈವತ್ತಾರು ದೇಶಗಳಲ್ಲಿ ಆಂಧ್ರವೂ ಒಂದು. ರಾಮಾಯಣ, ಮಹಾಭಾರತ, ಐತರೇಯ ಬ್ರಾಹ್ಮಣ, ಸ್ಕಾಂದಪುರಾಣ ಸೇರಿ ಆಂಧ್ರದ ಉಲ್ಲೇಖವಿಲ್ಲದ ಪುರಾಣ ಗ್ರಂಥಗಳಿಲ್ಲ. ಕಾವೇರಿಯಿ೦ದ ಮಾ ಗೋದಾವರಿಪರ್ಯ೦ತವೆ೦ಬ ಕನ್ನಡನಾಡಿನ ಸೀಮೆಯ ಬಗೆಗೆ ಮಾರ್ಗಕಾರನು ಹೇಳಿದ೦ತೆ ಆ೦ಧ್ರದ ಸೀಮೆಯನ್ನು ಕಾಕತೀಯರ ಪ್ರತಾಪರುದ್ರನ ಆಸ್ಥಾನಕವಿಯಾಗಿದ್ದ ವಿದ್ಯಾನ೦ದ ಹೀಗೆ ವಿವರಿಸುತ್ತಾನೆ.
पश्चात्पुरस्तादपि यस्य देशौ
ख्यातौ महाराष्ट्रकळिंगदेशौ |
अवागुदक्पाण्ड्यककन्यकुब्जौ
देशस्स तत्रास्ति त्रिलिंगनामा || 
       ಆಗಿನ ಆ೦ಧ್ರ ಪಶ್ಚಿಮದಲ್ಲಿ ಮಹಾರಾಷ್ಟ್ರವನ್ನೂ, ಪೂರ್ವದಲ್ಲಿ ಕಳಿ೦ಗವನ್ನೂ, ದಕ್ಷಿಣದಲ್ಲಿ ಪಾ೦ಡ್ಯವನ್ನ್ಪೂ ಉತ್ತರದಲ್ಲಿ ಕನ್ಯಕುಬ್ಜವನ್ನೂ ಒಳಗೊ೦ಡಿತ್ತ೦ತೆ. ಗೋದಾವರಿ ಕೃಷ್ಣೆಯರ ಮಧ್ಯದ ಅಚ್ಚತೆಲುಗಿನ ಆಂಧ್ರನೆಲ ಹಿಂದೆ ವೆಂಗಿನಾಡೆಂದು ಹೆಸರಾಗಿತ್ತು, ವೆಂಗಿ ಅಥವಾ ರಾಜಮಹೇಂದ್ರಪುರ(ಈಗಿನ ರಾಜಮಂಡ್ರಿ) ಅದರ ರಾಜಧಾನಿ.  ಕಡಪದಿಂದ ನಂದಿಬೆಟ್ಟದವರೆಗಿನ ಪೊಟ್ಟಿಪಿನಾಡು, ಕರ್ನೂಲಿನಿಂದ ಬಳ್ಳಾರಿಯವರೆಗಿನ ರೇನಾಡು, ಗುಂಟೂರು-ಪ್ರಕಾಶಂಗಳ ಪಾಲ್ನಾಡು, ಮದ್ರಾಸಿನಿಂದ ಕೃಷ್ಣೆಯವರೆಗಿನ ಪಾಕನಾಡು, ಗುಂಟೂರಿನ ಪೂರ್ವೋತ್ತರದ ಕಮ್ಮನಾಡುಗಳೆಲ್ಲ ಆಗಿನ ಆಂಧ್ರನಾಡಿನ ವಿವಿಧ ಭಾಗಗಳು.
       ರಾವಣ ಬರೆದ ’ರಾವಣೀಯಂ’ ತೆಲುಗಿನ ಮೊದಲ ವ್ಯಾಕರಣ ಗ್ರಂಥವೆಂದೇ ಪ್ರಸಿದ್ಧಿ. ಪೈಥಾಗೋರಸ್ಸಿನ ಪ್ರಮೇಯದ ಮೂಲರೂಪವಾದ ಶುಲ್ಬಸೂತ್ರಗಳನ್ನು ರಚಿಸಿದ ಬೋಧಾಯನ, ಆಪಸ್ಥ೦ಭ ಸೂತ್ರವೆ೦ದೇ ಪ್ರಸಿದ್ಧವಾದ ಗೃಹ್ಯಸೂತ್ರಗಳನ್ನು ರಚಿಸಿದ ಆಪಸ್ಥ೦ಭ ಇವರಿಬ್ಬರೂ ಆ೦ಧ್ರದವರೇ. ಅಲ್ಲಿ೦ದ ಶುರುವಾದ ಆ೦ಧ್ರದ ಕಾವ್ಯಪರ೦ಪರೆ ಮು೦ದುವರೆದದ್ದು ಪ್ರತಾಪರುದ್ರೀಯವನ್ನು ಬರೆದ ಖ್ಯಾತ ಅಲ೦ಕಾರಶಾಸ್ತ್ರಜ್ಞ ವಿದ್ಯಾನಾಥನಿ೦ದ. ಸಾಯಣರ ಭಾಷ್ಯವಿಲ್ಲದೇ ವೇದಗಳ ಅಧ್ಯಯನ ಪೂರ್ತಿಗೊಳ್ಳುವುದೆ೦ತು? ಪ೦ಚಾದಶಿ, ಜೀವನ್ಮುಕ್ತಿವಿವೇಕಗಳಿಲ್ಲದ ಅದ್ವೈತ ವೇದಾ೦ತವೆಲ್ಲಿ? ಅನ್ನಮಭಟ್ಟನ ತರ್ಕಸ೦ಗ್ರಹದೀಪಿಕೆಯಿಲ್ಲದೆ ತರ್ಕಶಾಸ್ತ್ರವನ್ನು ಪ್ರಾರ೦ಭಿಸುವುದೆ೦ತು? ಪ೦ಡಿತರಾಜ ಜಗನ್ನಾಥ ಕೈಯಾಡಿಸದೇ ಬಿಟ್ಟ ಕಾವ್ಯಕ್ಷೇತ್ರವಾವುದು? ವ್ಯಾಖ್ಯಾನರ೦ಗದ ಚಕ್ರವರ್ತಿ ಮಲ್ಲಿನಾಥನ ವ್ಯಾಖ್ಯಾವಿಲ್ಲದೇ ಪ೦ಚಮಹಾಕಾವ್ಯಗಳೆಲ್ಲಿ?
ವೇದಾ೦ತದರ್ಶನ ಪರ೦ಪರೆಯ ಎಲ್ಲ ದಾರ್ಶನಿಕರೂ, ಅಚಾರ್ಯರೂ ಹುಟ್ಟಿದ್ದು ದಕ್ಷಿಣದಲ್ಲೇ. ಅದು ಶ೦ಕರರಿರಬಹುದು, ರಾಮಾನುಜರಿರಬಹುದು, ಮಧ್ವ, ನಿ೦ಬಾರ್ಕ, ಶ್ರೀಕ೦ಠ ಅಥವಾ ವಲ್ಲಭರಿರಬಹುದು. ಬ್ರಹ್ಮಸೂತ್ರಗಳಿಗೆ ಭಾಷ್ಯವಾದ ವೇದಾ೦ತಪಾರಿಜಾತಸೌರಭವನ್ನು ಬರೆದ ನಿ೦ಬಾರ್ಕಾಚರ್ಯರು ಆ೦ಧ್ರ-ಬಳ್ಳಾರಿ ಗಡಿಯ ನಿ೦ಬಪುರದವರು. ರಾಮಾನುಜರ ಮನೆತನದ ಹೆಸರಾದ ’ಆಸುರಿ’ ಮೂಲತಃ ಆ೦ಧ್ರದ್ದು. ಮನೆತನದ ಹೆಸರಿನಿ೦ದ ಗುರುತಿಸಿಕೊಳ್ಳುವುದು ಆ೦ಧ್ರಬ್ರಾಹ್ಮಣರಲ್ಲಿ ಸಾಮಾನ್ಯ ಸ೦ಗತಿ. ತೆಲುಗಿನ ನಡುಮಿ೦ಟಿಯ ತುಳು ರೂಪವೇ ಮಧ್ವಾಚಾರ್ಯರ ಮನೆತನದ ಹೆಸರಾದ ನಡಿಲ್ಲಾಯ. ಕನ್ನಡ ಕರಾವಳಿಯ ಹವ್ಯಕ, ಶಿವಳ್ಳಿ, ಕೇರಳದ ನಂಬೂದಿರಿಗಳೆಲ್ಲ ಮಯೂರವರ್ಮನ ಕಾಲದಲ್ಲಿ ವಲಸೆ ಬಂದ ಗೋದಾವರಿ ಸೀಮೆಯ ಅಹಿಚ್ಛತ್ರದವರು. ಅಚ್ಚಕನ್ನಡದ ಮೊದಲ ರಾಜವಂಶ ಕದಂಬರ ಸ್ಥಾಪಕ ಮಯೂರನ ಮೊದಲ ರಾಜಧಾನಿಯಾಗಿದ್ದುದು ಆಂಧ್ರದ ಶ್ರೀಶೈಲ. ಕದಂಬರು, ಪಲ್ಲವರು, ಸೇನ, ವಿಷ್ಣುಕೌಂಡಿನ್ಯ, ಬೃಹತ್ಪಾಲ, ಬಾಣ, ರಾಜಪುತ್ರ, ಸಾಲಂಖ್ಯಾಯನ, ವಕಟಕ, ವಲ್ಲಭೀ, ವೈದುಂಬ, ನೊಳಂಬರೆಲ್ಲರ ಮೂಲ ಆಂಧ್ರಶಾತವಾಹನರು. ಶಾತವಾಹನ ವಂಶಸ್ಥರು ಕಾಶ್ಮೀರವನ್ನೂ ಆಳಿದ್ದರೆಂದು ಕಲ್ಹಣನ ರಾಜತರಂಗಿಣಿ ತಿಳಿಸುತ್ತದೆ. ಪಲ್ಲವರು ಮುಂದೆ ಕಂಚಿಯನ್ನು ರಾಜಧಾನಿಯನ್ನಾಗಿಸಿಕೊಂಡರೂ ಅವರ ಮೂಲ ತೆಲುಗು ನಾಡೇ. ಅವರು ಮೊದಲು ಆಳಿದ್ದು ಕೃಷ್ಣಾ ಮತ್ತು ಗುಂಟೂರು ವಲಯವನ್ನು. ’ಆಂಧ್ರಭೃತ್ಯಾಸ್ಸಪ್ತಃ’ಎಂದು ವಿಷ್ಣುಪುರಾಣವೂ, ’ಆಂಧ್ರಾಣಾಂ ಸಂಸ್ಥಿತಾರಾಜ್ಯೇತೇಷಾಂ ಭೃತ್ಯಾನ್ವಯೇ ಸಪ್ತೈವಾಂಧ್ರಾ ಭವಿಷ್ಯಂತಿ’ಎಂದು ಮತ್ಸ್ಯ ಪುರಾಣವೂ ಹೊಗಳಿದ ಭಾರತದ ಸ್ವರ್ಣಯುಗದ ನಿರ್ಮಾತೃರಾದ ಗುಪ್ತರು ಮೂಲತಃ ಆಂಧ್ರಭೃತ್ಯರೆಂದೇ ಹೆಸರಾದವರು. ಅದ್ವೈತ ದರ್ಶನದ ಪರ೦ಪರೆಯಲ್ಲ೦ತೂ ಆ೦ಧ್ರದ ಕೊಡುಗೆ ಕೊನೆಯಿಲ್ಲದ್ದು. ಕಾಕತೀಯರ ಕಾಲದ ಖ್ಯಾತ ಕವಿ ಅಚಿ೦ತೇ೦ದ್ರದೇವನು ಅದ್ವೈತಾಮೃತಯತಿಗಳ ಶಿಷ್ಯ. ಅದ್ವೈತಾಚಾರ್ಯತಿರುಮಲನೆ೦ದು ಪ್ರಾಖ್ಯಾತಿಗಳಿಸಿದವ ಅನ್ನಮಭಟ್ಟನ ತ೦ದೆ ಮೇಲಿಗಿರಿ ಮಲ್ಲಿನಾಥ. ಅದ್ವೈತ ದರ್ಶನದ ಮೇಲಿನ ’ತತ್ತ್ವಪ್ರದೀಪಿಕ’ದ ಕರ್ತೃ ಚಿತ್ಸುಖಾಚಾರ್ಯರು, ಅದ್ವೈತದ ಅತಿಕ್ಲಿಷ್ಟ ಭಾಷ್ಯಗಳಲ್ಲೊ೦ದಾದ ಶ್ರೀಹರ್ಶನ ’ಖ೦ಡನಖ೦ಡಖಾದ್ಯ’ದ ಮೇಲಿನ ಟೀಕೆಯನ್ನು ರಚಿಸಿದ ಗು೦ಡಯ್ಯಭಟ್ಟರು ಪುನಃ ಆ೦ಧ್ರದೇಶದವರೇ. 
       ಅಬ್ಬ, ಆಂಧ್ರವನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದಾನೆಂದು ತೆಗಳಬೇಡಿ. ಇಷ್ಟೆಲ್ಲ ಪೀಠಿಕೆ ನನ್ನ ಮೂಲ ಗೋದಾವರಿ ಸೀಮೆಯ ಅಹಿಚ್ಛತ್ರದ ಆಂಧ್ರನಾಡಿನ ಮೇಗಣ ಅಭಿಮಾನವಷ್ಟೇ. 
       ತೆಲುಗಿನ ಮೊತ್ತಮೊದಲ ಕಾವ್ಯವೆಂದು ಪರಿಗಣಿತವಾಗಿರುವುದು ಸುಮಾರು ಕ್ರಿ.ಶ ೧೦೨೦ರಲ್ಲಿ ಚಂಪೂಶೈಲಿಯಲ್ಲಿ ರಚಿತವಾದ ನನ್ನಯನ ಮಹಾಭಾರತ. ತೆಲುಗಿನಲ್ಲಿ ಮಾರ್ಗೀ ಶೈಲಿಯ ಪ್ರವರ್ತಕನೆಂಬ, ಆದಿಕವಿಯೆಂಬ ಹೆಗ್ಗಳಿಕೆ ನನ್ನಯ ಭಟ್ಟಾರಕನಿಗಿದೆ. ತೆಲುಗಿನ ಮೊದಲ ವ್ಯಾಕರಣ ಗ್ರಂಥ ಆಂಧ್ರಶಬ್ದಚಿಂತಾಮಣಿಯನ್ನು ಸಂಸ್ಕೃತದಲ್ಲಿ ರಚಿಸಿದವನೂ ಇವನೇ. ನನ್ನಯ ಭಾರತದ ಅತ್ಯುತ್ಕೃಷ್ಟ ಮತ್ತು ಸುವ್ಯವಸ್ಥಿತ ಶೈಲಿಯನ್ನು ಗಮನಿಸಿದರೆ ಅವನಿಗಿಂತ ಮೊದಲೇ ತೆಲುಗು ಸಾಹಿತ್ಯ ಸಮೃದ್ಧವಾಗಿಯೇ ಬೆಳೆದಿರಬೇಕು. ದುರದೃಷ್ಟವೆಂದರೆ ನನ್ನಯನ ಹಿಂದೆ ತೆಲುಗಿನಲ್ಲಿ ರಚಿತವಾದ ಯಾವ ಕೃತಿಯೂ ಲಭ್ಯವಿಲ್ಲ. ಈತನದೇ ಆದ ’ವಾಗಾನುಶಾಸನ’ದಲ್ಲಿಯೂ ಪೂರ್ವಸೂರಿಗಳ ಸ್ಮೃತಿಯಿಲ್ಲ. ವಿಜಯವಾಡದ ’ಯುದ್ಧಮಲ್ಲ ಶಾಸನಮು’ ಮತ್ತು ಮೋಪೂರ್ ಶಾಸನವೇತ್ಯಾದಿ ನನ್ನಯನ ಪೂರ್ವದ ಶಾಸನಗಳು ದೊರೆತಿದ್ದರೂ ತೆಲುಗು ಸಾಹಿತ್ಯದ ಗತದ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಲಾಗಿಲ್ಲ. ನನ್ನಯನಿಂದ ಶುರುವಾಗಿತ್ತೆನ್ನಬಹುದಾದ ಆಂಧ್ರಸಾಹಿತ್ಯ ಪರಂಪರೆ ಮುಂದುವರೆದದ್ದು ಹದಿಮೂರನೇ ಶತಮಾನದಲ್ಲಿ ತಿಕ್ಕನ ಹಾಗೂ ಯರ್ರನರಿಂದ. ನನ್ನಯ ಮಹಾಭಾರತದ ಆದಿ, ಸಭಾ ಮತ್ತು ವನಪರ್ವದ ೧೪೨ ಶ್ಲೋಕಗಳನ್ನು ರಚಿಸಿದ್ದ. ನನ್ನಯ ಬಿಟ್ಟ ಉಳಿದ ಪರ್ವಗಳನ್ನು ಮುಗಿಸಿದವನು ಕವಿಬ್ರಹ್ಮ ತಿಕ್ಕನ ಸೋಮಯಾಜಿ. ತಿಕ್ಕನನ ರಚನೆಯ ಐವತ್ತು ವರ್ಷಗಳ ತರುವಾಯ ಆತ ಅರ್ಧ ಬರೆದು ಬಿಟ್ಟ ವನಪರ್ವವನ್ನು ಸಂಪೂರ್ಣಗೊಳಿಸಿದವನು ಯೆರ್ರನ. ಅದಲ್ಲದೇ ತೆಲುಗಿನಲ್ಲಿ ಮೊದಲ ಬಾರಿ ಪ್ರಬಂಧ ಶೈಲಿಯಲ್ಲಿ ತನ್ನದೇ ಸ್ವತಂತ್ರ ಮಹಾಭಾರತವನ್ನು ಹರಿವಂಶವೆಂಬ ಹೆಸರಲ್ಲಿ ರಚಿಸಿ ಪ್ರಬಂಧ ಪರಮೇಶ್ವರನೆಂದು ಹೆಸರಾದವನಿವನು. ಮೊದಲ ಮಹಾಭಾರತವನ್ನು ತೆಲುಗಿನಲ್ಲಿ ರಚಿಸಿದ ಈ ಮೂವರೂ ಆಂಧ್ರದ ಕವಿತ್ರಯರೆಂದೇ ಹೆಸರಾದವರು. ಹನ್ನೊಂದು ಹನ್ನೆರಡನೇಯ ಶತಮಾನದ ನಂತರ ತೆಲುಗಿನಲ್ಲಿ ಅಸಂಖ್ಯ ಸಂಖ್ಯೆಯ ಮಹಾಕವಿಗಳುದಿಸಿದರು. ಆಂಧ್ರದ ದಕ್ಷಿಣದಲ್ಲಿ ರಾಮಾನುಜರಿಂದ ಬೆಳೆಯುತ್ತಿದ್ದ ವೈಷ್ಣವಮತ, ಕರ್ನಾಟಕದ ಬಸವಪಂಥದ ಪ್ರಭಾವ, ಕೃಷ್ಣೆ-ಗೋದಾವರಿಯ ಮಧ್ಯದ ಅಚ್ಚವೈದಿಕ ಧರ್ಮಗಳು ತೆಲುಗಿನಲ್ಲಿ ವಿವಿಧ ಮಾದರಿಯ ಕೃತಿಗಳ ಹುಟ್ಟಿಗೆ ಕಾರಣವಾದವು. ತೆಲುಗು ಮತ್ತು ಸಂಸ್ಕೃತದಲ್ಲಿ ’ನೀತಿಸೂತ್ರ’ವನ್ನು ರಚಿಸಿದ ಮೊದಲನೇ ಪ್ರತಾಪರುದ್ರ, ’ಪಂಡಿತಾರಾಧ್ಯ ಚರಿತ’, ’ಬಸವ ಪುರಾಣ’ಗಳ ಪಾಲ್ಕುರಿಕೆ ಸೋಮನಾಥ, ’ಕುಮಾರಸಂಭವ’ದ ತೆಂಕಣಾಮಾತ್ಯರ ಮೇಲೆ ವೀರಶೈವ ಮತದ ಗಾಢ ಪ್ರಭಾವವನ್ನು ಕಾಣಬಹುದು. ಕವಿತ್ರಯರಿಂದ ಮೂರು ಶತಮಾನದಲ್ಲಿ ಪೂರ್ಣಗೊಂಡ ಮಹಾಭಾರತ, ರಾಮಾನುಜರ ಭಕ್ತಿಪಂಥದ ಪ್ರಭಾವ, ತೆಲುಗಿನಲ್ಲಿ ಇನ್ನೂ ರಚನೆಯಾಗದ ರಾಮಾಯಣ ಹದಿಮೂರನೇ ಶತಮಾನದಲ್ಲಿ ರಂಗನಾಥಕವಿಯನ್ನು ತೆಲುಗು ರಾಮಾಯಣವನ್ನು ರಚಿಸುವಂತೆ ಪ್ರೇರೇಪಿಸಿದವು(ಯರ್ರನ ಚಂಪೂರಾಮಾಯಣವನ್ನು ಬರೆದಿದ್ದನೆನ್ನಲಾಗುವುದಾದರೂ ಅದಿಂದು ಲಭ್ಯವಿಲ್ಲ). ರಂಗನಾಥ ರಾಮಾಯಣದಿಂದ ನಿನ್ನೆಮೊನ್ನೆಯ ಮಲ್ಲೆಮಾಲಾ ರಾಮಾಯಣದವರೆಗೆ ತೆಲುಗಿನಲ್ಲಿ ಪ್ರತಿ ಶತಮಾನವೂ ರಚನೆಯಾದ ರಾಮಾಯಣದ ಸಂಖ್ಯೆ ಲೆಕ್ಕವಿಟ್ಟವರಿಲ್ಲ. ರಾಮಾಯಣ ಕವಿಭಾರದಲಿ ಫಣಿರಾಯ ಇನ್ನಷ್ಟು ತಿಣುಕಿರಬಹುದು. ನನ್ನಯನ ನಂತರ ಎರಡನೇ ತೆಲುಗು ವ್ಯಾಕರಣ ಗ್ರಂಥ ತ್ರಿಲಿಂಗ ಶಬ್ದಾನುಶಾಸನದ ಕರ್ತೃ ಅಥರ್ವಣ. ನನ್ನಯ ಬರೆಯದೇ ಬಿಟ್ಟ ಮಹಾಭಾರತದ ವಿರಾಟ, ಉದ್ಯೋಗ, ಭೀಶ್ಮ ಪರ್ವಗಳನ್ನು ಅಥರ್ವಣ ಪೂರ್ತಿಗೊಳಿಸಿದ್ದನಂತೆ. ಅಪ್ಪಾಕವಿ ತನ್ನ ಕೃತಿಯಲ್ಲಿ ಉದ್ಧರಿಸಿದ ಅಥರ್ವಣನ ಭಾರತದ ಕೆಲ ಶ್ಲೋಕಗಳನ್ನು ಬಿಟ್ಟರೆ ಆ ಗ್ರಂಥ ಸಿಕ್ಕಿಲ್ಲ. ಪ್ರಾಯಃ ಪ್ರಥಮಾಚಾರ್ಯ ಆದಿಕವಿ ನನ್ನಯನ ನಂತರ ತೆಲುಗು ವ್ಯಾಕರಣವನ್ನೂ, ಭಾರತವನ್ನೂ ಮುಂದುವರೆಸಿದವನೆಂಬ ಕಾರಣಕ್ಕಾಗಿ ಅಥರ್ವಣನಿಗೆ ದ್ವಿತೀಯಾಚಾರ್ಯನೆಂಬ ವಿಶೇಷಣವೂ ಇದೆ. ತೆಲುಗಿನಲ್ಲಿ ದಶಕುಮಾರಚರಿತೆಯನ್ನು ಬರೆದ ಕೇತನ, ನೀತಿಶಾಸ್ತ್ರವನ್ನು ಬರೆದ ಬೆದ್ದನ, ಮಾರ್ಕಂಡೇಯ ಪುರಾಣದ ಮಾರನ್ನ, ಕೇಯೂರಬಾಹುಚರಿತದ ಮಂಚನ್ನ, ಚಂಪೂರಾಮಾಯಣದ ಹುಲ್ಲಂಕಿ ಭಾಸ್ಕರರೆಲ್ಲ ಹದಿಮೂರು ಹದಿನಾಲ್ಕನೇ ಶತಮಾನದಲ್ಲಿ ಆಂಧ್ರದ ಕವ್ಯಾಗಸವನ್ನು ಬೆಳಗಿದವರೇ.(ಕನ್ನಡದ ರನ್ನ-ಜನ್ನ-ಪೊನ್ನ, ಕಾಶ್ಮೀರದ ಕಲ್ಹಣ-ಜಲ್ಹಣ-ಮಲ್ಹಣ-ಶಿಲ್ಹಣರು, ಭಲ್ಹಟ-ಉದ್ಭಟ-ಮಮ್ಮಟರು, ತೆಲುಗಿನ ತಿಕ್ಕನ-ಯರ್ರನ-ಪೋತನ-ಕೇತನರ ಹೆಸರಿನ ಪ್ರಾಸವೇ ವಿಚಿತ್ರ.). ಇವರ ನಂತರ ಬಂದವನು ಆಂಧ್ರ ಸಾಹಿತ್ಯದ ಸ್ವರ್ಣಯುಗದ ನಿರ್ಮಾತೃ, ಕವಿಸಾರ್ವಭೌಮ ಶ್ರೀನಾಥ ಭಟ್ಟ. ಹದಿನಾಲ್ಕನೇ ಶತಮಾನದ ಅಂತ್ಯ, ಹದಿನೈದನೇ ಶತಮಾನದ ಆರಂಭಕಾಲದಲ್ಲಿ ಕೊಂಡವೀಡು ರೆಡ್ಡಿ ವಂಶವೆಂಬ ಚಿಕ್ಕ ಸಾಮ್ರಾಜ್ಯದಲ್ಲಿ ಪದಕೋಮಟಿ ವೇಮಭೂಪಾಲ ರೆಡ್ಡಿಯ ಅಸ್ಥಾನಕವಿಯಾಗಿದ್ದ ಶ್ರೀನಾಥನಿಗೆ ತೆಲುಗು ಕವಿವರ್ಯರಲ್ಲೇ ಅಪ್ರತಿಮನೂ, ಅಸಮನಾನೂ ಎಂಬ ಕೀರ್ತಿಯಿದೆ. ’ದೇಶಭಾಷಲಂದು ತೆಲುಗು ಲೆಸ್ಸ’ ಎಂದು ಕನ್ನಡರಾಜ್ಯರಮಾರಮಣ ಶ್ರೀಕೃಷ್ಣದೇವರಾಯ ಉದ್ಘೋಷಿಸುವ ಶತಮಾನಕಾಲ ಮುನ್ನವೇ ಕರ್ನಾಟಕ ರಾಜ್ಯಸಭೆಯಲ್ಲಿ ತೆಲುಗು ಝಂಡಾ ರಾರಾಜಿಸುವಂತೆ ಮಾಡಿದವ ಈ ಕವಿಚಕ್ರವರ್ತಿ. ಕನ್ಯೆಮೈಯ ಪರಿಮಳದಿಂದ ಕರಿಬೇವಿನೆಲೆಯೆ ಸುವಾಸನೆಯವರೆಗೆ ಆತ ರಚಿಸದ ಪದ್ಯಗಳಿಲ್ಲ, ಶೃಂಗಾರದಿಂದ ವೈರಾಗ್ಯದವರೆಗೆ ಆತ ಬಣ್ಣಿಸದ ರಸಗಳಿಲ್ಲ, ಪುರಾಣದಿಂದ ವ್ಯಾಕರಣದವರೆಗೆ, ಚಂಪುವಿನಿಂದ ಚಾಟುವಿನವರೆಗೆ ಆತ ಕೈಯಾಡಿಸದ ಕ್ಷೇತ್ರಗಳಿಲ್ಲ. ತೆಲುಗಿನಲ್ಲಿ ಶಾಲಿವಾಹನ ಸಪ್ತಶತಿ, ಪಂಡಿತಾರಾಧ್ಯಚರಿತ, ಶಿವರಾತ್ರಿ ಮಾಹಾತ್ಯ್ಮಂ, ಮಾನಸೋಲ್ಲಾಸ, ಹರಿವಿಲಾಸ, ಭೀಮಖಂಡಂ, ಕಾಶಿಕಾಖಂಡಂ, ಪಾಲಾಂಟಿ ವೀರಚರಿತ್ರ, ಧನಂಜಯ ವಿಜಯ, ಶೃಂಗಾರದೀಪಿಕಾ, ಕೃತಾಭಿರಾಮಂ, ಶೃಂಗಾರ ನೈಷಧಂ, ವಲ್ಲಭಾಭ್ಯುದಯ, ವಿಧಿನಾಟಕ ಹೀಗೆ ಶ್ರೀನಾಥನ ಕೃತಿಗಳು ಅವೆಷ್ಟೋ. ಶ್ರೀಹರ್ಷನ ನೈಷಧದ ತೆಲುಗು ಅವತರಣಿಕೆ ಶೃಂಗಾರ ನೈಷಧಕ್ಕಂತೂ ಕಾವ್ಯಸೌಂದರ್ಯದಲ್ಲಿ ಮೂಲವನ್ನು ಮೀರಿಸಿದ ಖ್ಯಾತಿಯಿದೆ. ತನ್ನ ಅಪಾರ ವಿದ್ವತ್ತಿನಿಂದ ಸಮಕಾಲೀನ, ಪ್ರಾಚೀನ ಕವಿಗಳನ್ನೂ ಮೀರಿಬೆಳೆದವನೆಂಬ ಕೀರ್ತಿ ಈತನದು. 
       ಕೊಂಡವೀಡಿನ ರೆಡ್ಡಿಗಳಲ್ಲಿ, ರಾಚಕೊಂಡದ ವೇಲಮರಲ್ಲಿ, ವಿಜಯನಗರ ಸಾಮ್ರಾಜ್ಯದಲ್ಲಿ ತನ್ನ ಕವಿತ್ವಕ್ಕಾಗಿ ಬಹುಪರಾಕು ಹೇಳಿಸಿಕೊಂಡವನು. ಕೊಂಡವೀಡಿನ ಕುಲದೈವ ಪೋತರಾಜು ಕಟಾರಿಯನ್ನು ದೇವರಕಂಡ ಪಾಳೇಗರರು ಹೊತ್ತೊಯ್ದಾದ ತನ್ನ ವಿದ್ವದ್ಬಲದಿಂದ ಅವರನ್ನು ಗೆದ್ದು ಕಟಾರಿಯನ್ನು ವಾಪಸ್ ತಂದವನು. ವಿಜಯನಗರದ ಗೌಡಡಿಂಡಿಮ ಕವಿಯನ್ನು ಸೋಲಿಸಿ ಎರಡನೇ ದೇವರಾಯನಿಂದ ಕನಕಾಭಿಷೇಕ ಮಾಡಿಸಿಕೊಂಡವನು. ಹೀಗಿಪ್ಪ ಶ್ರೀನಾಥ ಕವಿ ಮಹಾ ರಸಿಕ. ಭಾರೀ ಸುಖಜೀವಿ. ಸಂಸ್ಕೃತದ ಜಗನ್ನಾಥ ಪಂಡಿತನಂತೆ ಅಹಂಕಾರಿಯೆಂದೂ, ಕಾಲಕಾಲಕ್ಕೆ ರಾಜರುಗಳನ್ನು ಹೊಗಳಿ ಕಪ್ಪಕಾಣಿಕೆ ಪಡೆದು ರಾಜವೈಭೋಗ ನಡೆಸಿದನೆಂಬ  ಪುಕಾರು ಶ್ರೀನಾಥನ ಬಗೆಗಿರುವುದಾದರೂ ಕವಿತ್ವದಲ್ಲಿ, ಭಾಷಾಪ್ರೌಢಿಮೆಯಲ್ಲಿ ತೆಲುಗು ನಾಡಿನಲ್ಲೇ ಅವನನ್ನು ಸರಿಗಟ್ಟುವ ಇನ್ನೊಬ್ಬ ಕವಿ ಬರಲಿಲ್ಲವೆಂಬುದೇ ಅವನ ಅಗ್ಗಳಿಕೆಗೆ ಸಾಕ್ಷಿ. ತೆಲುಗಿನಲ್ಲಿ ಚಾಟುಪದ್ಯಗಳ, ಆಶುಕವಿತೆಗಳ ಪರಂಪರೆಯನ್ನೇ ಶುರುಮಾಡಿದವನೂ ಇವನೇ. ಕೂತಲ್ಲಿ ನಿಂತಲ್ಲಿ ಪದ್ಯಹೇಳುವ ಈ ಕವಿಗೆ ಸ್ವತಃ ವಿದ್ವಾಂಸರಾಗಿದ್ದ ಕಾವ್ಯಪ್ರಿಯ ಕೊಂಡವೀಡು ರೆಡ್ಡಿಗಳು ವಿಶೇಷ ಗೌರವ ಕೊಡುತ್ತಿದ್ದರಲ್ಲಿ ಆಶ್ಚರ್ಯವಿಲ್ಲ.
ಎಷ್ಟೆಂದರೂ ಶೄಂಗಾರ ನೈಷದದ ಕರ್ತೃವಲ್ಲವೇ! ಶ್ರೀನಾಥ ರಸಿಕ ಶಿಖಾಮಣಿ. ರಾಜಮಂಡ್ರಿಯ ಬೀದಿಗಳಲ್ಲಿ ತಾನು ಭೇಟಿಯಾದ ಹೆಣ್ಮಕ್ಕಳ ಸೌಂದರ್ಯವನ್ನೆಲ್ಲ ತನ್ನ ವಿಧಿನಾಟಕದಲ್ಲಿ ಬಾಯ್ತುಂಬ ಹೊಗಳಿದ್ದಾನೆ. ರಾಜನರ್ತಕಿಯರಿಂದ ಹಿಡಿದು ಬೀದಿಯಲ್ಲಿ ಹೂಮಾರುವವಳು, ನೀರು ತರಲು ಬಂದವಳು, ಹೊಲಕ್ಕೆ ಬುತ್ತಿ ಒಯ್ಯುವವಳು ಈಗೆ ಒಬ್ಬರನ್ನೂ ಶ್ರೀನಾಥ ತನ್ನ ಕಾವ್ಯದಲ್ಲಿ ಬಿಟ್ಟಿಲ್ಲ.  
ಸೊಗಸು ಕೀಲ್ಜಡ ದಾನ ಸೋಗ ಕನ್ನುಲ ದಾನ
ವಜ್ರಾಲ ವಂಟಿ ಪಲ್ಚರುಸ ದಾನ.............
ತಿರಿಗಿಚೂಡವೇ ಮುತ್ಯಾಲ ಸರುಲ ದಾನ
ಚೇರಿ ಮಾಟಾಡು ಚಂಗಾವಿ ಚೀರದಾನ |
- ಸೊಗಸು ನೀಽಳ್ಜಡೆಯವಳೆ, ಕೋಲ್ಮಿಂಚು ಕಣ್ಣವಳೆ
ಬೆಳ್ ಹಾಲನೊರೆಯ ನಗುವಿನೆಳೆಯವಳೆಽಽಽಽ
ತಿರುಗಿ ನೋಡೆಲೇ, ನೋಡೆಲೇ.....ಮುತ್ತ ಮಣಿ ಮಾಲೆಯವಳೆ
ಸೇರಿ ಮಾತಾಡಲು ಬಾ ಕೆಂಪು ಸೀರೆಯವಳೇಽಽಽಽ
ಎಂದು ಶ್ರೀನಾಥನಿಂದ ಹೊಗಳಿಸಿಕೊಳ್ಳದ ಸುಂದರಿ ಕೊಂಡವೀಡಿನಲ್ಲಿರಲಿಲ್ಲ.

ವಿಧಿನಾಟಕದಲ್ಲಿ ಬರುವ ಆತನ ಒಂದು ಚಾಟುಪದ್ಯವನ್ನು ನೋಡಿ.
ಪೂಜಾರಿವಾರಿ ಕೋಡಲು ತಾಜಾರಗ
ಬಿಂದೆ ಜಾರಿ ಡಬ್ಬುನ ಬಡಿಯನ್
ಮೈಜಾರಿಕೊಂಬು ತಡಿಸಿನ ಬಾಜಾರೆ
ತಿರುಗಿ ಚೂಚಿ ಪಕ್ಕನ ನವ್ವುನ್
-ಪೂಜಾರಿಯಾ ಮಗಳು ತಾಜಾರಲು
ಬಿಂದಿ ಜಾರಿ ಡಬ್ಬನೆ ಬಡಿಯಲ್
ಮೈಜಾರಿಕೊಂಡರು ಸಾವರಿಸಿ ಬಾಜಾರಿ 
ತಿರುಗಿ ನೋಡಿ, ಪಕ್ಕುನೆ ನಕ್ಕಳ್

ರಾಮಾಯಣ, ಮಹಾಭಾರತ, ಸಂಸ್ಕೃತ ಕಾವ್ಯಗಳ ಪ್ರಭಾವದಾಚೆ ತಾನು ದಿನನಿತ್ಯ ನೋಡುವ ವಸ್ತುವನ್ನಿಟ್ಟುಕೊಂಡು ಕಾವ್ಯಗಳ ರಚನೆ ಮಾಡಿದ್ದು ಶ್ರೀನಾಥನ ವೈಶಿಷ್ಟ್ಯ.
       ತೆಲುಗಿನಲ್ಲಿ ಭಾಗವತವನ್ನು ಬರೆದ ಮಹಾಕವಿ ಬಮ್ಮೆರ ಪೋತನ ಶ್ರೀನಾಥನ ಭಾವ. ಆತ ಶ್ರೀಮಂತನಲ್ಲ. ಹೊಟ್ಟೆಪಾಡಿಗಾಗಿ ವ್ಯವಸಾಯ ಮಾಡುತ್ತಿದ್ದವನು. ಶ್ರೀನಾಥನಿಗೆ ಬಡವನಾದ ಪೋತನನ್ನು ಕಂಡರೆ ಹಾಸ್ಯ. ಒಂದು ದಿನ ಶ್ರೀನಾಥ ಪಲ್ಲಕ್ಕಿಯಲ್ಲಿ ಕುಳಿತು ಬರುತ್ತಿದ್ದಾಗ ಉಳುತ್ತಿದ್ದ ಪೋತನನನ್ನು ಕಂಡು ’ಹಾಲಿಕರು ಸುಖವಾಗಿದ್ದೀರಾ?’ ಎಂದು ತಮಾಶೆ ಮಾಡಿದನಂತೆ. ಅದಕ್ಕೆ ಪೋತನರಾಜು ಕೊಟ್ಟ ಉತ್ತರ ಹೀಗಿದೆ.
ಬಾಲರಸಾಲನವಪಲ್ಲವ ಕೋಮಲ ಕಾವ್ಯಕನ್ನಿಕನ್
ಗೂಳುಲಕಿಚ್ಚಿ ಯಪ್ಪುಡುಪುಕೂಡು ಭುಜಿಂಚುಟಕಂಟಿ ಸತ್ಕವುಲ್ |
ಹಾಲಿಕಲೈನನೇಮಿ ಗಹನಾಂತರಸೀಮಲ ಕಂದಮೂಲಿಕೌ
ದ್ದಾಲಿಕು ಲೈನ ನೇಮಿ ನಿಜದಾರಸುತೋದರ ಪೋಷಣಾರ್ಥಮೈ ||
- ಎಳೆಮಾವಿನಾ ಚಿಗುರಂಥ ಕೋಮಲ ಕಾವ್ಯಕನ್ನಿಕೆಯನ್ನು,
ಖೂಳರಿಗೆ ಕೊಟ್ಟು ನೀಚ ಕೂಳ ತಿನ್ನುವುದಕಿಂತ 
ಸತ್ಕವಿಗಳು ತಮ್ಮ ಹೆಂಡತಿ ಮಕ್ಕಳ ಪೋಷಣೆಗಾಗಿ 
ಹಾಲಿಕರಾದರೂ ಸರಿಯೆ, ಕಂದಮೂಲಗಳ ಕಿತ್ತು ತಿಂದರೂ ಸರಿಯೆ.

       ಇನ್ನೊಮ್ಮೆ ಶ್ರೀನಾಥನು ಬಡತನದಲ್ಲಿ ಬೇಯುವುದಕ್ಕಿಂತ ಭಾಗವತಕಾವ್ಯವನ್ನು ಯಾವನಾದರೂ ಅರಸನಿಗೆ ಅಂಕಿತಕೊಟ್ಟರೆ ಬೇಕಾದ ಭಾಗ್ಯ ಲಭಿಸುವುದೆಂದು ಹೇಳಿ ಪೋತನನನ್ನು ರಾಜಾಸ್ಥಾನಕ್ಕೆ ಕರೆದುಕೊಂಡು ಹೋಗಲೆತ್ನಿಸಿದನಂತೆ. ಶ್ರೀನಾಥ ಹೇಳಿದ ಮಾತುಗಳು ಪೋತನನಿಗೆ ಚಿಂತೆಯನ್ನು ಉಂಟುಮಾಡಿದವು. ತನ್ನ ಬಡತನದ ಬಗ್ಗೆ ಚಿಂತಿಸುತ್ತ ಮಲಗಿದ್ದ ಪೋತನನನಿಗೆ ಆ ರಾತ್ರಿ ಬಿಳಿಯ ಉಡುಪನ್ನು ಧರಿಸಿದ, ಹೊಳೆಯುವ ಕಿರೀಟವನ್ನು ಹಾಕಿಕೊಂಡ, ತೇಜೋಮೂರ್ತಿಯಾದ ದೇವಿಯೊಬ್ಬಳನ್ನು ಕಂಡಂತೆ ಆಯಿತು. ಸ್ವಲ್ಪ ಗಮನವಿಟ್ಟು ನೋಡಿದಾಗ ಅವಳು ಸರಸ್ವತಿ ಎಂದು ಗುರುತಿಸಿದ. ಆದರೆ ಸರಸ್ವತಿ ಅಳುತ್ತಿದ್ದಾಳೆ! ಪೋತನನಿಗೆ ಆಶ್ಚರ್ಯವಾಯಿತು. ಇದೇನು ಬ್ರಹ್ಮನ ರಾಣಿ, ವಿದ್ಯಾಭಿಮಾನಿ ದೇವತೆಯ ಕಣ್ಣುಗಳಲ್ಲಿ ನೀರು! ಇದಕ್ಕೆ ಕಾರಣವೇನು? ತಾನು ಎಲ್ಲಿ ಭಾಗವತವನ್ನು ರಾಜನಿಗೆ ಅಂಕಿತ ಮಾಡಿಬಿಡುತ್ತೇನೆಯೋ ಎಂದು ಸರಸ್ವತಿ ಅಳುತ್ತಿದ್ದಾಳೆ ಎನ್ನಿಸಿತು. ಆಗ ಪೋತನ ಅವಳಿಗೆ ಹೇಳಿದ:
ಕಾಟುಕಕಂಟಿನೀರು ಚನುಕಟ್ಟುಪಯಿ ಬಡ ನೇಲ ಯೇಡ್ಚೆದೋ
ಕೈಟಭದೈತ್ಯಮರ್ದನುನಿ ಗಾದಿಲಿಕೋಡಲ! ಯೋಮದಂಬ! ಯೋ 
ಹಾಟಕುಗರ್ಭುರಾಣಿ! ನಿನು ನಾಕಟಿಕಿಂಗೊನಿಪೋಯಿ ಯಲ್ಲ ಕ
ರ್ಣಾಟ ಕಿರಾಟ ಕೀಚಕುಲ ಕಮ್ಮಿ ದ್ರಿಶುದ್ಧಿಗೆ ನಮ್ಮು ಭಾರತೀ ||
ತಾಯೇ, ರಾಕ್ಷಸರನ್ನು ಕೊಂದ ವಿಷ್ಣುವಿನ ಸೊಸೆ ಭಾರತೀಯೆ,, ಕಣ್ಣಿಗೆ ಹಚ್ಚಿದ ಕಾಡಿಗೆ ಕರಗುವಂತೆ ಏಕೆ ಕಣ್ಣೀರು ಹರಿಸುತ್ತಿರುವೆ? ಹಸಿವನ್ನು ಕಳೆದುಕೊಳ್ಳುವುದಕ್ಕಾಗಿ ನಾನು ನಿನ್ನನ್ನು ದುಷ್ಟರಾದ ರಾಜರಿಗೆ ಮಾರುವುದಿಲ್ಲ. ನನ್ನ ಮಾತುಗಳನ್ನು ನಂಬು.

       ಒಮ್ಮೆ ಶ್ರೀನಾಥ ವಿಜಯನಗರದ ಆಹ್ವಾನದ ಮೇರೆಗೆ ಪ್ರೌಢದೇವರಾಯನನ್ನು ನೋಡಬಯಸಿ ಕನ್ನಡ ರಾಜ್ಯಕ್ಕೆ ಬಂದನಂತೆ. ಆದರೆ ಎಷ್ಟು ದಿನ ಕಾದರೂ ರಾಜನ ದರ್ಶನ ಲಭಿಸಲಿಲ್ಲ. ಆಗ ಆತನು ಬೇಸರಗೊಂಡು ಹೇಳಿದ ಪದ್ಯವಿದು.
ಕುಲ್ಲಾಯುಂಚಿತಿ ಗೋಕಸುಟ್ಟಿತಿ ಮಹಾಕೂರ್ಪಾಸಮುನ್ದೊಡಗಿತಿನ್
ವೆಲ್ಲುಲ್ಲಿನ್ ತಿಲಪಿಷ್ಟಮುನ್ ಪಿಸಿಕಿತಿನ್ ವಿಶ್ವಸ್ತ ವಡ್ಡಿಂಪಗಾ
ಸಲ್ಲಾನಂಬಲಿ ದ್ರಾವಿತಿನನ್ ರುಚುಲು ದೋಸಂಬಂಚು ಬೋನಾಡಿತಿನ್
ತಲ್ಲೀ ಕನ್ನಡರಾಜ್ಯಲಕ್ಷ್ಮೀ ದಯಲೇದಾ ನೇನು ಶ್ರೀನಾಥುಡನ್ !
ಕುಲಾವಿಯನ್ನಿಟ್ಟುಕೊಂಡೆ. ರುಮಾಲನ್ನು ತಲೆಗೆ ಸುತ್ತಿದೆ. ನಿಲುವಂಗಿಯನ್ನು ತೊಟ್ಟುಕೊಂಡೆ. ಬೆಳ್ಳುಳ್ಳಿ-ಎಳ್ಳುಗಳ ಚಟ್ಣಿಯನ್ನು ತಿನ್ನಲಾಗದೇ ಹಿಸುಕಿ ಬಿಸಾಟೆ. ಗಂಜಿಯನ್ನು ಕುಡಿದೆ. ರುಚಿಗಳು ದೋಷವೆಂದು ಬಿಟ್ಟುಬಿಟ್ಟೆ. ತಾಯೀ, ಕನ್ನಡ ರಾಜ್ಯಲಕ್ಷ್ಮೀ, ಇಷ್ಟಾದರೂ ನಿನಗೆ ದಯೆ ಬರಲಿಲ್ಲವೇ! ನಾನು ಶ್ರೀ’ನಾಥ’.
ಇದನ್ನು ಕೇಳಿಸಿಕೊಂಡ ದೇವರಾಯ ಮುಜುಗರಪಟ್ಟುಕೊಂಡು ರಾಜಸಂದರ್ಶನ ನೀಡಿದ್ದಲ್ಲದೇ ಕನಕಾಭಿಷೇಕವನ್ನೂ ನೆರವೇರಿಸಿದನಂತೆ.
ಕನಕಾಭಿಷೇಕ ಮಾಡಿಸಿಕೊಂಡ ಮೇಲೆ ಶ್ರೀನಾಥ ’ನಾ ಕವಿತ್ವಂಬು ನಿಜಮು ಕರ್ನಾಟ ಭಾಷಾ’ ಕವಿತ್ವದ ನಿಜಭಾಷೆಯೆಂದರೆ ಕನ್ನಡಭಾಷೆಯೇ ಎಂದು ಕನ್ನಡವನ್ನು ಹೊಗಳದೇ ಇರಲಿಲ್ಲ.

       ವಿಜಯನಗರದ ವಿದ್ವಾಂಸರನ್ನೆಲ್ಲ ವಾದದಲ್ಲಿ ಸೋಲಿಸಿದ ಶ್ರೀನಾಥ ಕನ್ನಡರಾಜ್ಯದಲ್ಲಿ ವಿಜಯೋತ್ಸವವನ್ನಾಚರಿಸಿ ತನ್ನ ನಾಡಿದೆ ಹಿಂದಿರುಗುವಷ್ಟರಲ್ಲಿ ಕೊಂಡವೀಡನ್ನು ಮೋಸದಿಂದ ಆಕ್ರಮಿಸಿದ ರಾಚಕೊಂಡದ ರಾವುಸಿಂಗಭೂಪಲನು ಕೊಂಡವೀಡಿನ ವೇಮರೆಡ್ಡಿಯನ್ನು ಕೊಂದು ಕುಲದೈವ ಪುತರಾಜು ಕಟಾರಿಯನ್ನು ಕದ್ದೊಯ್ದನಂತೆ. ಶ್ರೀನಾಥ ತನ್ನ ಅಪ್ರತಿಮ ವಿದ್ವದ್ಬಲದಿಂದ ರಾಜಕೊಂಡ ಅರಸನ ಮನಗೆದ್ದು ಕೊಂಡವೀಡಿನ ಕುಲದೈವವನ್ನು ರಾಜ್ಯಕ್ಕೆ ತಂದು ಪುನರ್ಪ್ರತಿಷ್ಟಾಪಿಸಿದನೆಂದು ಐತಿಹ್ಯವಿದೆ. ಮುಂದೆ ತನ್ನ ಪ್ರಭು ವೇಮನಾಥನಿಲ್ಲದ ರಾಜ್ಯದಲ್ಲಿರಲಾಗದೇ ಶ್ರೀನಾಥ ಕೊಂಡವೀಡನ್ನು ತೊರೆದ. ಅವಕಾಶಕ್ಕಾಗಿ ಕಾಯುತ್ತಿದ್ದ ಗಜಪತಿ ರಾಜರು ಕೊಂಡವೀಡನ್ನಾಕ್ರಮಿಸಿದರು.
ಬಹುರಾಜ ಸಮ್ಮಾನಿತನಾಗಿ ವೈಭವದ ಜೀವನವನ್ನು ನಡೆಸಿದ್ದ ಶ್ರೀನಾಥ ತನ್ನ ಕೊನೆಯ ಕಾಲಕ್ಕೆ ಬಹಳ ಕಷ್ಟಕ್ಕೀಡಾದ. ರಾಜಾಶ್ರಯ ತಪ್ಪಿಹೋಗಿತ್ತು. ಕೊಂಡವೀಡಿನಲ್ಲಿರಲಾರದೇ ಗುಂಟೂರು ಪ್ರಾಂತ್ಯದ ಪಾಲ್ನಾಡಿಗೆ ವಲಸೆ ಹೋದ. ’ಚಿನ್ನ ಚಿನ್ನ ಗುಳ್ಳು, ಚಿಲ್ಲರೆ ದೇವುಳ್ಳು, ನಾಕು ಲೇನಿ ನೀಳ್ಳು, ಸಜ್ಜ ಜೊನ್ನ ಕೂಳ್ಳು’(ಸಣ್ಣ ಸಣ್ಣ ಗುಡಿಗಳು, ಚಿಲ್ಲರೆ ದೇವರುಗಳು, ನೀರಿಲ್ಲದ ಊರುಗಳು, ಸಜ್ಜೆ ಜೋಳದೂಟಗಳು) ಎಂದು ಪಾಲ್ನಾಡನ್ನು ತಾತ್ಸಾರ ಮಾಡುತ್ತಿದ್ದವ ಕೊನೆಗೆ ಅಲ್ಲಿಯೇ ಇರಬೇಕಾಯಿತು.
ಭೋಜನಪ್ರಿಯ ಶ್ರೀನಾಥ ಪಾಲ್ನಾಡಿಗೆ ಹೋದಾಗ ಹೇಳಿದ ಪದ್ಯವಿದು.
ಗರಳಮು ಮ್ರಿಂಗಿತಿ ನಂಚುಂ
ಮುರಹರ! ಗರ್ವಿಂಚಬೋಕು ಪೋಪೋ ನೀ
ಬಿರುದಿಂಕ ಗಾನವಚ್ಚೆಡಿ 
ಮೆರೆಸೆಡಿ ರೇನಾಟಿಜೊನ್ನಮೆದುಕುಲು ತಿನುಮೀ
ಗರಲವ ನುಂಗಿದೆನೆಂದು ಗರ್ವಿಸಬೇಡವೋ 
ಮುರಹರ! ಆ ಬಿರುದಿನ್ನು ಅಳಿಸು 
ರೇನಾಡಿನ ಜೋಳದಗುಳನ್ನು ತಿಂದು ನೋಡೆಲೋ
ಆಮೇಲೆ ನಿನ್ನ ಮಹಿಮೆಯನು ತಿಳಿಸು

ಪಲ್ನಾಡಿನಲ್ಲಿ ಭಾರೀ ಜಲಕ್ಷಾಮ. ಜೊತೆಗೆ ಬಡತನ. ಅಲ್ಲಿನ ದುರವಸ್ಥೆಯನ್ನು ಎಷ್ಟು ಹೇಳಿದರೂ ಶ್ರೀನಾಥನಿಗೆ ತೃಪ್ತಿಯಿಲ್ಲ.
ರಸಿಕುಡು ಪೋವಡು ಪಲ್ನಾಡು 
ಎಸಗಂಗಾ ರಂಭಯೈನ ನೇಕುಲೆವಡುಕುನ್
ವಸುಧೇಶುಡೈನ ದುನ್ನುನು 
ಕುಸುಮಾಸ್ತ್ರುಂಡೈನ ಜೊನ್ನಕೂಡೇ ಕುಡುಚುನ್ |
- ರಸಿಕನಾದವನು ಪಲ್ನಾಡಿಗೆ ಹೋಗಬಾರದು. ಅಲ್ಲಿ ರಂಭೆಯಾದರೂ ಹತ್ತಿ ನೂಲಬೇಕು. ರಾಜನಾದರೂ ಉಳಬೇಕು. ಸಾಕ್ಷಾತ್ ಮನ್ಮಥನಾದರೂ ಜೋಳದ ಕೂಳನ್ನೇ ತಿನ್ನಬೇಕು.

ಒಮ್ಮೆ ಪಾಲ್ನಾಡಿನಲ್ಲಿ ದಾಹ ತಾಳಲಾರದೇ ಶ್ರೀನಾಥ ತನ್ನ ಇಷ್ಟದೈವ ಶಿವನನ್ನು ಕುರಿತು ಹೀಗೆ ನುಡಿದನಂತೆ.
ಸಿರಿಗಲವಾನಿಕಿ ಜೆಲ್ಲುನು 
ತರುಣುಲ ಬದಿಯಾರುವೇಲ ತಗ ಪೆಂಡ್ಲಾಡನ್ 
ತಿರಿಪೆಮುನಕಿದ್ದರಾಂಡ್ರಾ ಪರಮೇಶಾ ! 
ಗಂಗ ವಿಡುಮು ಪಾರ್ವತಿ ಚಾಲು
- ಸಿರಿತನದಲ್ಲಿ ಮುಳುಗೆದ್ದ ಶ್ರೀಕೃಷ್ಣನಂಥವರು ಹದಿನಾರು ಸಾವಿರ ಮದುವೆಯಾದರೂ ನಡೆದೀತು. ನಿನ್ನಂಥ ತಿರುಪೆಯವನಿಗೇಕಯ್ಯ ಎರಡು ಹೆಂಡತಿಯರು ಪರಮೇಶಾ! ಗಂಗೆಯನ್ನು ಬಿಟ್ಟುಕೊಡಯ್ಯ. ಪಾರ್ವತಿ ಸಾಕು. (ಈ ಶ್ಲೋಕವನ್ನು ಕೇಳಿದ ಶಿವ ಶ್ರೀನಾಥನೂರಿನಲ್ಲಿ ಮಳೆಯನ್ನೇ ಸುರಿಸಿದನಂತೆ ಎಂಬುದು ಕಥೆಯಷ್ಟೆ) 

       ರಾಜಾಶ್ರಯವಿಲ್ಲದೇ ಹೋದಾಗ ಶ್ರೀನಾಥ ಕೃಷ್ಣಾ ತೀರದ ಬೊಡ್ಡುಪಲ್ಲಿಯೆಂಬ ಗ್ರಾಮವನ್ನು ಗುತ್ತಿಗೆಗೆ ತೆಗೆದುಕೊಂಡ. ದುರ್ದೈವದಿಂದ ಮೂರು ವರ್ಷ ಪ್ರವಾಹ ಬಂದು ಬೆಳೆಯೆಲ್ಲ ನಾಶವಾಯಿತು. ಗುತ್ತಿಗೆ ಕಾಸು ಹೊರಡುವುದೇ ಅಸಾಧ್ಯವಾಯಿತು. ಶ್ರೀನಾಥನನ್ನು ಕಂಡರಾಗದವರು ಗಜಪತಿ ರಾಜನಿಗೆ ದೂರಿತ್ತರು. ಜಮೀನ್ದಾರ ಕವಿರಾಜನಿಗೆ ಕೋಳ ತೊಡಿಸಿ, ಕಲ್ಗುಂಡು ಹೊರಿಸಿ ಮೆರವಣಿಗೆ ಮಾಡಿ ಅವಮಾನಪಡಿಸಿದನಂತೆ. ಕನ್ನಡರಾಯನ ಮುತ್ತಿನ ಸಾಲೆಯಲ್ಲಿ ಕನಕಸ್ನಾನ ಮಾಡಿದ ಕವಿ ತನ್ನ ಪೂರ್ವವೈಭವವನ್ನು ನೆನೆಸಿಕೊಂಡು ಪ್ರಲಾಪಿಸುತ್ತಾನೆ.
ಕವಿರಾಉಕಂಠಂಬು ಕೌಗಿಲಿಂಚೆನು ಗದಾ
ಪುರವೀಧಿನೆದುರೇಗ ಬೊಗಡದಂಡ
ಸಾರ್ವಭೌಮುನಿ ಭುಜಾಸ್ತಂಭಮೆಕ್ಕೆನುಗದಾ
ನಗರಿವಾಕಿಟಿನುಂಡು ನಲ್ಲಗುಂಡು ||
ವೀರಭದ್ರಾರೆಡ್ಡಿ ವಿದ್ವಾಂಸು ಮುಂಜೇತ
ವಿಯ್ಯಮಂದೆನುಗದಾ ವೆದುರುಗೊಡಿಯ
ಆಂಧ್ರನೈಷಧಕರ್ತ ಯಂಘ್ರಿಯುಗ್ಮಂಬುನ
ದಗಿಲಿಯುಂಡೆನುಗದಾ ನಿಗಳಯುಗಮು ||
ಕೃಷ್ಣವೇಣಮ್ಮ ಗೊನಿಪೋಯೆನಿಂತ ಫಲಮು
ವಿಲವಿಲಾಕ್ಷುಲು ದಿನಿಪೋಯೆ ತಿಲಲುಪೆಸಲು
ಬೊಡ್ಡುಪಲ್ಲೆನು ಗೊಡ್ಡೇರಿ ಮೋಸಪೋತಿ
ನೆಟ್ಟು ಚೆಲ್ಲಿಂತು ಡಂಕಂಬುಲೇಡುನೂರ್ಲು ?
- ಕವಿರಾಜನ ಕೊರಳಿಗೂ  ಅಪಮಾನಕರ ದಂಡೆ ಬಿತ್ತಲ್ಲವೇ? ಕವಿಸಾರ್ವಭೌಮನ ಭುಜದಿಂದ ಊರ ಬಾಗಿಲ ಕರಿಗುಂಡನ್ನು ಎತ್ತಿಸಿದರಲ್ಲವೇ? ವೀರಭದ್ರಾರೆಡ್ಡಿಯ ಆಸ್ಥಾನ ವಿದ್ವಾಂಸನ ಮುಂಗೈಗೆ ಬಿದಿರ ಕೋಳವನ್ನು ಹಾಕಿದರೇ? ಆಂಧ್ರನೈಷಧಕರ್ತನ ಅಂಘ್ರಿಯುಗ್ಮಕ್ಕೆ ಸಂಕೋಲೆ ತೊಡಿಸಿದರೆ! ಕೃಷ್ಣಮ್ಮ ಫಲವನೆಲ್ಲ ಕೊಂಡುಹೋದಳು. ಬೊಡ್ಡುಪಲ್ಲಿಯ ಕುಗ್ರಾಮಕ್ಕೆ ಬಂದು ಮೋಸಹೋದೆ. ಏಳುನೂರು ಟಂಕಗಳ ಕಂದಾಯವನ್ನೆಂತು ಸಲ್ಲಿಸಲಿ?

       ಶ್ರೀನಾಥನ ಕಷ್ಟವನ್ನು ನೋಡಲಾಗದೇ ದುಃಖಪಟ್ಟ ಊರಜನ ತಾವೇ ಒಂದಕ್ಕೆರಡು ಕಂದಾಯಕೊಟ್ಟು ಅವನನ್ನು ಸೆರೆಯಿಂದ ಬಿಡಿಸಿದರಂತೆ. ಸಂಸ್ಕೃತದ ಜಗನ್ನಾಥ ಪಂಡಿತನಿಗೂ, ಈ ಶ್ರೀನಾಥನಿಗೂ ಎಷ್ಟೆಲ್ಲ ಸಾಮ್ಯಗಳಿವೆ. ಇಬ್ಬರೂ ಪೂರ್ವಮೀಮಾ೦ಸ ತರ್ಕವಿತರ್ಕ ವೈಯಾಕರಣ ವೇದಾ೦ತ ವೈಶೇಷಿಕ ವಿಶೇಷಣನ್ಯಾಯ ಶಾಸ್ತ್ರಾಲ೦ಕಾರಗಳ ಅದ್ವಿತೀಯ ವಿದ್ವನ್ಮಣಿಗಳು. ಒಬ್ಬ ಸ೦ಸ್ಕೃತ ವಿದ್ವತ್ಸಾಹಿತ್ಯದ ಅ೦ತಿಮಯುಗದ ಅತಿಪ್ರಸಿದ್ಧ ಪ್ರತಿನಿಧಿಯಾದರೆ ಇನೊಬ್ಬ ಆಂಧ್ರಭಾಷೆಯ ಕವಿತ್ವವನ್ನು ಮುಗಿಲೆತ್ತರಕ್ಕೆ ಬೆಳೆಸಿದ ಮೊದಲಿಗ. ಇಬ್ಬರೂ ಪರಮ ರಸಿಕ ಶಿಖಾಮಣಿಗಳು. ರಾಜಾಧಿರಾಜರುಗಳನ್ನು ಹೊಗಳಿ ಜೀವನಪೂರ್ತಿ ವೈಭವದ ಸುಪ್ಪತ್ತಿಗೆಯಲ್ಲಿ ಬದುಕಿದವರೇ. ಪಂಡಿತಕುಲವನ್ನೆಲ್ಲ ಚೆಂಡಾಡಿ ಪಾಖಂಡಿಗಳೆನಿಸಿದರೂ ಒಬ್ಬ ಪರಮ ವೈಷ್ಣವ, ಇನ್ನೊಬ್ಬ ಮಹಾ ಶಿವಭಕ್ತ. ಆದರೆ ಕೊನೆಗಾಲದಲ್ಲಿ ಇಬ್ಬರೂ ಪಡಬಾರದ ಕಷ್ಟಪಡಬೇಕಾಯಿತು. ಜಗನ್ನಾಥ ಗಂಗೆಯಲ್ಲಿ ಐಕ್ಯಗೊಂಡರೆ ಶ್ರೀನಾಥ ಕೃಷ್ಣಾನದಿಯನ್ನು ಪ್ರವೇಶಿಸಿ ಪ್ರಾಣತ್ಯಾಗಕ್ಕೆ ಮುಂದಾದ. ಆ ಅವಸಾನಕಾಲದಲ್ಲೂ ಸಹ ಆತ ತನ್ನ ಆತ್ಮಪ್ರತ್ಯಯವನ್ನು ಬಿಡಲಿಲ್ಲ.
ಕಾಶಿಕಾವಿಶ್ವೇಷು ಗಲಿಸೆ ವೀರಾರೆಡ್ಡಿ
ರತ್ನಾಂಬರಂಬು ಲೇರಾಯಡಿಚ್ಚು
ರಂಭಗೂಡೆ ತೆನುಂಗುರಾಯರಾಹತ್ತುಂಡು
ಕಸ್ತೂರಿ ಕೇರಾಜು ಪ್ರಸ್ತುತಿಂತು |
ಸ್ವರ್ಗಸ್ಥುಡಯ್ಯೆ ವಿಸನಮಂತ್ರಿ ಮರಿ ಹೇಮ
ಪಾತ್ರಾನ್ನ ಮೆವ್ವನಿಪಂಕ್ತಿ ಗಲದು
ಕೈಲಾಸಗಿರಿ ಬಂದೆ ಮೈಲಾರುವಿಭುಡೇಗಿ
ದಿನವೆಚ್ಚ ಮೇರಾಜು ತೀರ್ಪಗಲಡು |
ಭಾಸ್ಕರುಡು ಮುನ್ನೆ ದೇವುನಿಪಾಲಿ ಕರಿಗೆ
ಗಲಿಯುಗಂಬುನ ನಿಕನುಂಡ ಗಷ್ಟಮನುಚು
ದಿವಿಜಕವಿವರು ಗುಂಡಿಯಲ್ ದಿಗ್ಗುರನಗ
ನರುಗುಚುನ್ನಾಡು ಶ್ರೀನಾಥುಡಮರಪುರಿಕಿ |
- ವೀರಾರೆಡ್ಡಿ ಕಾಶಿ ವಿಶ್ವೇಶ್ವರನನ್ನು ಸೇರಿಬಿಟ್ಟ. ಇನ್ನು ರತ್ರಾಂಬರಗಳನ್ನು ಯಾವ ರಾಯ ಕೊಡುತ್ತಾನೆ? ತೆಲುಗುರಾಯ ರಂಭೆಯನ್ನು ಕೂಡಿದ. ಕಸ್ತೂರಿಗಾಗಿ ಇನ್ಯಾರನ್ನು ಹೊಗಳಲಿ? ವಿಸನ ಮಂತ್ರಿ ಸ್ವರ್ಗಸ್ಥನಾದ. ಹೇಮಪಾತ್ರಾನ್ನವಿನ್ನು ಯಾರ ಪಂಕ್ತಿಯಲ್ಲಿ ಲಭಿಸೀತು? ಮೈಲಾರ ವಿಭುವು ಕೈಲಾಸಗಿರಿಯನ್ನು ಹತ್ತಿದ. ಇನ್ನು ನನ್ನ ದಿನದ ವೆಚ್ಚವನ್ನು ಯಾವ ರಾಜ ತೀರಿಸುತ್ತಾನೆ? ಭಾಸ್ಕರನು ಮೊದಲೇ ದೇವರ ಬಳಿ ಸೇರಿದ. ಇನ್ನು ಕಲಿಯುಗದಲ್ಲಿರುವುದು ಕಷ್ಟವೆಂದು ಯೋಚಿಸಿ ಶ್ರೀನಾಥನೂ ಅಮರಪುರಿಗೆ ಹೋಗುತ್ತಿದ್ದಾನೆ. ಅಯ್ಯೋ ಶ್ರೀನಾಥ ಸ್ವರ್ಗಕ್ಕೆ ಬಂದರೆ ನನ್ನ ಸ್ಥಾನಕ್ಕೆ ಸಂಚಕಾರವೆಂದು ದೇವಕವಿ ಶುಕ್ರನ ಎದೆ ದಿಗ್ಗೆಂದು ಹೊಡೆದುಕೊಳ್ಳುತ್ತಿದೆ.

       ಶ್ರೀನಾಥನ ಕಾವ್ಯವೈದೂಷ್ಯಕ್ಕೆ ಆತನ ಮಾನಸೋಲ್ಲಾಸವೊಂದು ಅದ್ಭುತ ಉದಾಹರಣೆ. ಈ ಚತುಷ್ಪಾದ ಯಮಕಚಿತ್ರಕವಿತೆಯನ್ನು ನೋಡಿ. ಇದು ಶುರುವಾಗುವುದು ಈ ಸೀಸಪದ್ಯ ಮತ್ತದರ ತೇಟಗೀತದಿಂದ
ರಾಜನಂದನರಾಜ ರಾಜಾತ್ಮಜುಲು ಸಾಟಿ ತಲಪನಲ್ಲಯವೇಮ ಧರಣಿಪತಿಕಿ
ರಾಜನಂದನರಾಜ ರಾಜಾತ್ಮಜುಲು ಸಾಟಿ ತಲಪನಲ್ಲಯವೇಮ ಧರಣಿಪತಿಕಿ |
ರಾಜನಂದನರಾಜ ರಾಜಾತ್ಮಜುಲು ಸಾಟಿ ತಲಪನಲ್ಲಯವೇಮ ಧರಣಿಪತಿಕಿ
ರಾಜನಂದನರಾಜ ರಾಜಾತ್ಮಜುಲು ಸಾಟಿ ತಲಪನಲ್ಲಯವೇಮ ಧರಣಿಪತಿಕಿ ||
ಭಾವಭವಭೋಗ ಸತ್ಕಳಾ ಭಾವಮುಲನು
ಭಾವಭವಭೋಗ ಸತ್ಕಳಾ ಭಾವಮುಲನು |
ಭಾವಭವಭೋಗ ಸತ್ಕಳಾ ಭಾವಮುಲನು
ಭಾವಭವಭೋಗ ಸತ್ಕಳಾ ಭಾವಮುಲನು ||
ಸೀಸಗೀತದ ಮತ್ತು ತೇಟಗೀತೆಯ ಮೊಲನೇ ಸಾಲಿನ ಅರ್ಥ ರಾಜ=ಚಂದ್ರನಿಗೆ, ನಂದನ=ಮಗನಾದ ಬುಧನು, ರಾಜ, ರ=ಸಮರ್ಥನಾದ, ಅಜ=ಈಶ್ವರನು, ರಾಜ=ದೇವೇಂದ್ರನು, ಆತ್ಮಜ=ಬ್ರಹ್ಮ, ಇವರು ಸಾಟಿ. ಯಾವುದರಲ್ಲೆಂದರೆ, ಭಾವ=ಬುದ್ಧಿಯಲ್ಲಿ, ಭವ= ಐಶ್ವರ್ಯದಲ್ಲಿ, ಭೋಗ=ವೈಭವದಲ್ಲಿ, ಸತ್ಕಳಾ= ಶ್ರೇಷ್ಠವಾದ ವಿದ್ಯೆಗಳ, ಭಾವ=ಅತಿಶಯದಲ್ಲಿ.
ಅದೇ ಎರಡನೆಯಪಾದದಲ್ಲಿ
ರಾಜನಂದನ, ರ=ಮನೋಹರವಾದ, ಅಜ=ಶಿವನಿಗೆ, ನಂದನ=ಮಗನಾದ ಕುಮಾರಸ್ವಾಮಿ, ರಾಜ=ಕುಬೇರ, ರಾಜ ರ=ಶ್ರೇಷ್ಠನಾದ ಅಜ= ರಘುಕುಮಾರನಾದ ಅಜ, ಆತ್ಮಜ = ಚಂದ್ರ, ಇವರು ಸಾಟಿ. ಯಾವುದರಲ್ಲಿ ಎಂದರೆ, ಭಾವ=ಕ್ರಿಯೆಯಲ್ಲಿ, ಭವ=ಧನದಲ್ಲಿ, ಭೋಗ=ಪಾಲನೆಯಲ್ಲಿ, ಸತ್ಕಳಾ, ಸತ್=ಯೋಗ್ಯವಾದ, ಕಳಾ=ಕಾಂತಿಯ, ಭಾವ=ಬೃಂದದಲ್ಲಿ.
ಅದೇ ಮೂರನೆಯಪಾದ
ರಾಜನಂದನ, ರ= ಚಿನ್ನದಂಥ ದೀಪ್ತಿಯುಳ್ಳ, ಅಜ=ಬ್ರಹ್ಮನಿಗೆ, ನಂದನ=ಪುತ್ರನಾದ ಸನತ್ಕುಮಾರನೂ, ರಾಜ= ಕ್ಷತ್ರಿಯನು, ರಾಜ ರ=ಶ್ರೇಷ್ಠನಾದ ಅ=ಬ್ರಹ್ಮನ ಜ=ಮಗ ವಸಿಷ್ಠನೂ, ಆತ್ಮ= ಬೃಹಸ್ಪತಿಯಲ್ಲಿ ಜ=ಹುಟ್ಟಿದ ಕಚನೂ ಸಾಟಿ. ಯಾವವಿಷಯಗಳಲ್ಲಿ ಎಂದರೆ, ಭಾವ=ಆತ್ಮಜ್ಞಾನದಲ್ಲಿ, ಭವ=ಜನನದಲ್ಲಿ, ಭೋಗ=ಅನುಭವದಲ್ಲಿ, ಸತ್ಕಳಾ=ಅಭಿವೃದ್ಧಿಹೊಂದುವ, ಭಾವ=ಪದ್ಧತಿಯಲ್ಲಿ. 
ನಾಲ್ಕನೆಯಪಾದದಲ್ಲಿ
ರಾಜನಂದನ, ರ=ಗೌರವಯುಕ್ತನಾದ ಅಜ=ಮನ್ಮಥನಿಗೆ ನಂದನ=ಕುಮಾರನಾದ ಅನಿರುದ್ಧನು, ರಾಜ, ರ= ಎಲ್ಲೆಡೆ ವ್ಯಾಪಿಸಿರುವ ಅಜ= ವಿಷ್ಣು, ರಾಜ=ಯಕ್ಷ, ಆತ್ಮಜ=ಮನ್ಮಥ, ಇವರು ಸಾಟಿ. ಯಾವುದರಲ್ಲೆಂದರೆ, ಭಾವ=ಆಕಾರದಲ್ಲಿ, ಭವ=ಸಂಸಾರದಲ್ಲಿ, ಭೋಗ= ಸಂಭೋಗದಲ್ಲಿ, ಸತ್ಕಳಾ= ಸೌಂದರ್ಯದ ಒಂದು ಭಾವ=ರೀತಿಯಲ್ಲಿ.
ಶ್ರೀನಾಥ ಕಾವ್ಯಪ್ರೌಢಿಮೆಗೆ ಬೇರೆ ಉದಾಹರಣೆ ಬೇಕೇ?

Tuesday, May 24, 2016

ಶ್ರೀಮಚ್ಛಂಕರಭಗವತ್ಪಾದ ಚರಿತ್ರ: ಜನ್ಮ ಪ್ರಕರಣ


       ಆಚಾರ್ಯ ಶಂಕರರ ಚರಿತ್ರವಿಮರ್ಶೆಗೆ ಶಂಕರ ವಿಜಯಗಳಿಗಿಂತ ಅವರದೇ ಗ್ರಂಥಗಳ ಅಂತರಂಗಪರೀಕ್ಷೆ ಮುಖ್ಯ. ಆದರೆ ದುರದೃಷ್ಟವೆಂದರೆ ಶಂಕರರ ನಿಶ್ಚಿತ ಗ್ರಂಥಗಳು ಯಾವವು ಎಂದು ನಿಶ್ಚಯಿಸುವುದೇ ದೊಡ್ಡ ಕಷ್ಟವಾಗಿದೆ. ಶೈಲಿಯನ್ನು ಗಮನಿಸಿದರೆ ಬ್ರಹ್ಮಸೂತ್ರಗಳಿಗೆ ವ್ಯಾಖ್ಯಾನ ಬರೆದ ಶಂಕರರೇ ಸೌಂದರ್ಯಲಹರಿಯನ್ನು ಬರೆದರೆಂಬುವುದನ್ನು ನಂಬುವುದು ಕಷ್ಟವೆಂದೇ ಕೆಲ ವಿದ್ವಾಂಸರ ಅಭಿಮತ. ಯಾರ್ಯಾರೋ ಬರೆದ ಗ್ರಂಥಗಳು, ಸ್ತೋತ್ರಗಳೆಲ್ಲ ಇಂದು ಶಂಕರರ ಹೆಸರಿನಲ್ಲಿ ಪ್ರಚಲಿತದಲ್ಲಿವೆ. ಆದರೆ ಪ್ರಸ್ಥಾನತ್ರಯ ಭಾಷ್ಯಗಳು ನಿಸ್ಸಂಶಯವಾಗಿ ಆಚಾರ್ಯಕೃತವೆಂಬುದು ಬಹುಜನರ ನಂಬಿಕೆ. ಇಲ್ಲಿಯೂ ಕೂಡ ತೊಡಕಿಲ್ಲದೇ ಇಲ್ಲ. ಆಚಾರ್ಯರಿಂದ ರಚಿತವಾದ ಸಾಹಿತ್ಯಗಳಲ್ಲಿ ಸೂತ್ರಭಾಷ್ಯಗಳಿಗೇ ಅಗ್ರಸ್ಥಾನ. ನೈಷ್ಕರ್ಮಸಿದ್ಧಿಯನ್ನು ಬರೆದ ಸುರೇಶ್ವರಾಚಾರ್ಯರು ’ಶ್ರೀಮಚ್ಛಂಕರಪಾದಯುಗಲಂ ಸಂಸೇವ್ಯ’ ಈ ಗ್ರಂಥವನ್ನು ಬರೆದುರುವೆನೆಂದು ಬಾಯಿಬಿಟ್ಟು ಹೇಳಿಕೊಂಡಿರುವರಾದರೂ ಸೂತ್ರಭಾಷ್ಯದ ಯಾವ ವಾಕ್ಯವನ್ನೂ ಅಲ್ಲಿ ಅವತರಿಸಿಲ್ಲ. ’ತಸ್ಮೈ ಶಂಕರಭಾನವೇ’ ಎಂದು ಗುರುಗಳನ್ನು ಕೊಂಡಾಡಿರುವ ಬ್ರಹದಾರಣ್ಯವಾರ್ತಿಕದಲ್ಲಿಯೂ ಸೂತ್ರಭಾಷ್ಯದ ಪರಾಮರ್ಶವಿಲ್ಲ. ಸೂತ್ರಭಾಷ್ಯ ಮತ್ತು ಬ್ರಹದಾರಣ್ಯಕಭಾಷ್ಯಗಳನ್ನು ಒಬ್ಬರೇ ಶಂಕರಾಚಾರ್ಯರು ಬರೆದಿರುವರೆಂದು ತೋರಿಸಲು ಈಗಿನ ಶೋಧಕರಿಗೆ ದೃಷ್ಟವಾದ ಆಧಾರವಿಲ್ಲ. ಬ್ರಹದಾರಣ್ಯಕಭಾಷ್ಯದ ಶೈಲಿಗೂ ಸೂತ್ರಭಾಷ್ಯದ ಶೈಲಿಗೂ ವ್ಯತ್ಯಾಸಗಳಿವೆಯೆಂಬ ವ್ಯಾಖ್ಯಾನವೂ ಇದೆ. ಅದು ಮಾತ್ರವಲ್ಲ.
ಅತಸ್ತದ್ವಶಾತ್ಸ್ವಭಾವತಃ ಸರ್ವಗತಾನಾಮನನ್ತಾಮಪಿ ಪ್ರಾಣಾನಾಂ ಕರ್ಮಜ್ಞಾನವಾಸನಾರೂಪೇಣೈವ ದೇಹಾರಮ್ಭವಶಾತ್ ಪ್ರಾಣಾನಾಂ ವೃತ್ತಿಃ ಸಂಕುಚತಿ ವಿಕಸತಿ ಚ’ (ಬೃ. ೪-೪-೩) - ಸ್ವಭಾವದಿಂದ ಸರ್ವಗತವಾಗಿರುವ ಅನಂತವಾದ ಪ್ರಾಣಗಳಿಗೆ ಕರ್ಮಜ್ಞಾನವಾಸನೆಗಳಿಗೆ ತಕ್ಕಂತೆ ದೇಹಾಂತರವಾಗುವಾಗ ವೃತ್ತಿಯು ಸಂಕೋಚವಿಕಾಸಗಳನ್ನು ಪಡೆಯುತ್ತದೆ ಎಂದು ಹೇಳಿರುವ ಮತವನ್ನು ಸೂತ್ರಭಾಷ್ಯದಲ್ಲಿ ’ಏವಂ ಶ್ರುತ್ಯುತ್ಕೇ ದೇಹಾನ್ತರಪ್ರತಿಪತ್ತಿ ಪ್ರಕಾರೇ ಸತಿ ಯಾಃ ಪುರುಷಮತಿಪ್ರಭವಾಃ ಕಲ್ಪನಾಃ ವ್ಯಾಪಿನಾಂ ಕರಣಾನಾಮಾತ್ಮನಶ್ಚ ದೇಹಾನ್ತರಪ್ರತಿಪತ್ತೌ ಕರ್ಮವಶಾದ್  ವೃತ್ತಿಲಾಭಸ್ತತ್ರ ಭವತಿ, ಇತ್ಯೇವಮಾದ್ಯಾಃ ಸರ್ವಾ ಏವಾನಾದರ್ತವ್ಯಾಃ ಶ್ರುತಿವಿರೋಧಾತ್’(ಸೂತ್ರಭಾಷ್ಯ ೩-೧-೩) ಎಂದು ಖಂಡಿಸಲಾಗಿದೆ.
       ಬೃಹದಾರಣ್ಯಕದಲ್ಲಿ ’ಪುತ್ತಿಕಾದಿಶರೀರೇಷು ಗೋತ್ವಾದಿವತ್ ಕಾರ್ತ್ಸೈನ ಪರಿಸಮಾಪ್ತ ಇತಿ ಸಮತ್ವಂ ಪ್ರಾಣಸ್ಯ | ನ ಪುನಃ ಶರೀರಪರಿಮಾಣೇನೈವ ಅಮೂರ್ತತ್ವಾತ್ಸರ್ವಗತತ್ವಾಚ್ಛಃ....ತ ಏತೇ ಸರ್ವ ಏವ ಸಮಾಃ ಸರ್ವೇ ಅನನ್ತಾಃ ಇತಿ ಶ್ರುತೇಃ ’ ಪುತ್ತಿಕಾದಿಪ್ರಾಣಿಗಳ ಶರೀರದಲ್ಲಿ ಗೋತ್ವವೇ ಮುಂತಾದವುಗಳಿಗೆ ಸಂಪೂರ್ಣವಾಗಿ ತುಂಬಿಕೊಂಡಿರುತ್ತಾನೆಂಬುದೇ ಪ್ರಾಣನ ಸಮತ್ವವು, ಇಷ್ಟೇ ಹೊರತೂ ಶರೀರದ ಪರಮಾಣವೇ ಸರ್ವಗತನೂ ಆಗಿರುತ್ತಾನೆ...ಇವರೆಲ್ಲರೂ ಸಮರು, ಎಲ್ಲರೂ ಅನಂತರು’ ಎಂಬ ಶ್ರುತಿ ಇದಕ್ಕೆ ಪ್ರಮಾಣವು ಎಂದು ಸೂತ್ರಭಾಷ್ಯದಲ್ಲಿ ಖಂಡಿಸಿರುವ ಈ ಪಕ್ಷವನ್ನೇ ಅವಲಂಬಿಸಿ ’ಸರ್ವಗತಸ್ಯ ತು ಶರೀರಪರಿಮಾಣವೃತ್ತಿಲಾಭೋ ನ ವಿರುಧ್ಯತೇ’ ಸರ್ವಗತನಾದರೂ ಶರೀರಪರಿಮಾಣಕ್ಕೆ ತಕ್ಕಂತೆ ವೃತ್ತಿಲಾಭವಾಗುವುದೇನೂ ವಿರುದ್ಧವಲ್ಲ ಎನ್ನಲಾಗಿದೆ. ಈ ರೀತಿ ಎರಡರಲ್ಲಿ ಯಾವುದನ್ನು ತೆಗೆದುಕೊಳ್ಳಬೇಕೆನ್ನುವ ಬಗ್ಗೆ ವೇದಾಂತಿಗಳಲ್ಲಿ ಮತಭೇದವು ಮೊದಲಿನಿಂದಲೂ ಇತ್ತೆಂದು ಅವುಗಳಲ್ಲಿ ಒಂದನ್ನು ಬ್ರಹದಾರಣ್ಯಕಭಾಷ್ಯವೂ ಇನ್ನೊಂದನ್ನು ಸೂತ್ರಭಾಷ್ಯವೂ ಸ್ವೀಕರಿಸುವವೆಂದು ’ನ ವಿರುಧ್ಯತೇ’(ಬೃ) ’ಅದೋಷಃ’(ಸೂ) ಎಂಬ ಮಾತುಗಳಿಂದ ಸೂಚಿತವಾಗಿವೆಯೆಂದು ವಿಮರ್ಶಕರು ಒಪ್ಪಬೇಕಾಗುತ್ತದೆ. ಇದನ್ನೇ ಆಧರಿಸಿ ಎರಡೂ ಭಾಷ್ಯಗಳಿಗೂ ಕರ್ತೃರು ಒಬ್ಬರೇ ಶಂಕರಾಚಾರ್ಯರಲ್ಲ ಎಂದು ವಾದಿಸುವವರಿಗೂ ಅವಕಾಶವಿದೆ. ಬೃಹದಾರಣ್ಯದ ಭಾಷ್ಯಕಾರರು ತಮ್ಮ ಗುರುಗಳೆಂದು ಸುರೇಶ್ವರರೇ ಅದರ ಮೇಲಿನ ವಾರ್ತಿಕೆಯಲ್ಲಿ ಹೇಳಿರುವುದರಿಂದ ಅದು ಆಚಾರ್ಯ ಶಂಕರರ ರಚನೆಯೇ. ಇನ್ನು ಸೂತ್ರಭಾಷ್ಯದಲ್ಲಿ ದಿಙ್ನಾಗನ ಕಾರಿಕೆಯ ಉಲ್ಲೇಖವಿದೆ. ಆತ ವಸುಬಂಧುವಿನ ಶಿಷ್ಯ. ವಸುಬಂಧು ಕ್ರಿ.ಶ ೫ನೇ ಶತಮಾನದವ. ಹಾಗಾಗಿ ಸೂತ್ರಭಾಷ್ಯದ ಕಾಲ ಅದಕ್ಕೂ ಹಿಂದಿನದಲ್ಲ. ಸೂತ್ರಭಾಷ್ಯದಲ್ಲಿ ’ಬುಧ್ಧಿಬೋಧ್ಯಂ ತ್ರಯಾದನ್ಯತ್ ಸಂಸ್ಕೃತಂ ಕ್ಷಣಿಕಂ ಚ’ ಪ್ರತಿಸಂಖ್ಯಾನಿರೋಧ, ಅಪ್ರತಿಸಂಖ್ಯಾನಿರೋಧ, ಆಕಾಶ ಈ ಮೂರನ್ನು ಬಿಟ್ಟರೆ ಉಳಿದವೆಲ್ಲ ಕಾರ್ಯವೂ ಕ್ಷಣಿಕವೂ ಆಗಿದೆ ಎಂಬ ವಾಕ್ಯದ ಮೂಲ ಗುಣಮತಿಯ ಅಭಿಧರ್ಮಕೋಶವ್ಯಾಖ್ಯಾನದ್ದು. ಗುಣಮತಿಯ ಕಾಲ ಏಳನೇ ಶತಮಾನದ ಮಧ್ಯಭಾಗ. ಹಾಗಾಗಿ ಸೂತ್ರಭಾಷ್ಯ ಅದಕ್ಕೂ ನಂತರದ್ದಾಯಿತು. ಪಂಚಪಾದಿಕೆ ಎಂಬ ಖಂಡವ್ಯಾಖ್ಯಾನವನ್ನು ಬಿಟ್ಟರೆ ವಾಚಸ್ಪತಿಮಿಶ್ರನ ಭಾಮತೀವ್ಯಾಖ್ಯಾನವೇ ಸೂತ್ರಭಾಷ್ಯಕ್ಕೆ ಪೂರ್ಣವಾಗಿ ಬರೆದದ್ದೆಂದು ನಮಗೆ ಸಿಕ್ಕಿರುವ ಅತ್ಯಂತ ಪ್ರಾಚೀನ ವ್ಯಾಖ್ಯಾನ. ಇದನ್ನು ಬರೆದದ್ದು ವಿಕ್ರಮಶಕ ೯೦೬ನೇ ವರ್ಷದಲ್ಲಿ ಎಂಬು ವಾಚಸ್ಪತಿಮಿಶ್ರನೇ ಹೇಳಿಕೊಂಡಿದ್ದಾನೆ. ಜೊತೆಗೆ ವಾಚಸ್ಪತಿ ಮಿಶ್ರನು ಭಾಮತಿಯಲ್ಲಿ ಭಾಸ್ಕರಾಚಾರ್ಯರು ಶಂಕರಭಾಷ್ಯದ ಮೇಲೆ ಎತ್ತಿರುವ ಆಕ್ಷೇಪಗಳಿಗೆ ಸಮಾಧಾನವನ್ನು ಬರೆದಿದ್ದಾನೆ. ಭಾಮತಿಯ ಕೊನೆಯಲ್ಲಿ ’ಮಹನೀಯಕೀರ್ತೌ ಶ್ರೀಮನೃಗೇಕಾಽರಿ ಮಾಯಾನಿಬಂಧಃ’ ನೃಗನೆಂಬ ರಾಜನ ಕಾಲದಲ್ಲಿ ತಾನಿದ್ದುದಾಗಿ ಹೇಳಿಕೊಂಡಿರುವುದರಿಂದ ಅವನ ಕಾಲ ಕ್ರಿ.ಶ ೯ನೇ ಶತಮಾನದ ಮದ್ಯಭಾಗವಾಯಿತು. ಈ ನೃಗನು ಈಗಿನ ಬಿಹಾರ ಮತ್ತು ನೇಪಾಳ ಭಾಗವನ್ನಾಳಿದ ಅಚ್ಚಕನ್ನಡಿಗ ನಾನ್ಯದೇವನಿಗಿಂತ ಪೂರ್ವದಲ್ಲಿ ಸುಮಾರು ಕ್ರಿ.ಶ ೯೬೨ರಲ್ಲಿ ಮಿಥಿಲೆಯಲ್ಲಿದ್ದವನು. ಆದ್ದರಿಂದ ಸೂತ್ರಭಾಷ್ಯವು ಅದಕ್ಕಿಂತ ಮೊದಲು ಕ್ರಿ.ಶ ೭ ಅಥವಾ ೮ನೇ ಶತಮಾನದಲ್ಲಿ ಬಂದಿದ್ದಾಗಿರಬೇಕು.
       ಇಲ್ಲಿ ಇನ್ನೂ ಒಂದು ತೊಡಕಿದೆ. ಸೂತ್ರಭಾಷ್ಯದಲ್ಲಿ ಸ್ರುಘ್ನ, ಮಥುರಾ ಮತ್ತು ಪಾಟಲೀಪುತ್ರಗಳ ಪರಾಮರ್ಶೆಯಿದೆ. ಅಂದರೆ ಅವು ಆಚಾರ್ಯರ ಕಾಲದಲ್ಲಿ ಇದ್ದವೆಂದು ತಿಳಿಯಬೇಕಾಯಿತು. ಆದರೆ ಪಾಟಲೀಪುತ್ರವು ಕ್ರಿ.ಶ ೭೫೬ರಲ್ಲಿ ನದಿಯ ಪ್ರವಾಹದಲ್ಲಿ ಮುಳುಗಿ ಹೋಯಿತೆಂದು ಇತಿಹಾಸಕಾರರ ಅಭಿಮತ. ಹಾಗಾದರೆ ಆಚಾರ್ಯರ ಕಾಲ ಅದಕ್ಕೂ ಮೊದಲಾಯಿತು. ಇದೇ ಭಾಷ್ಯದಲ್ಲಿ ಪೂರ್ಣವರ್ಮನೆಂಬ ರಾಜನ ವಿಮರ್ಶೆಯಿದೆ. ಹ್ಯೂಯಾನ್ಸಾಂಗ್ ೬೩೭-೩೮ರಲ್ಲಿ ಮಗಧದ ಪೂರ್ಣವರ್ಮನ ಕುರಿತು ಬರೆದಿದ್ದಾನೆ.  ಅವನ ಕಾಲಕ್ಕೆ ಪೂರ್ಣವರ್ಮನ ಆಳ್ವಿಕೆ ಮುಗಿದಿರಬೇಕು. ಹಾಗಾಗಿ ಆಚಾರ್ಯರೂ ಅದೇ ಕಾಲದವರಾಗಬೇಕಾಯಿತು.
        ಆಚಾರ್ಯರು ಕ್ರಿ.ಪೂದವರೆಂಬುದಕ್ಕೆ ಬಹಳಷ್ಟು ದಾಖಲೆಗಳನ್ನು ನಾವು ಹಿಂದಿನ ಮಾಲಿಕೆಯಲ್ಲಿ ನೋಡಿದ್ದೇವೆ. ಹಾಗಿದ್ದಲ್ಲಿ ಸೂತ್ರಭಾಷ್ಯದ ಕಾಲಕ್ಕೂ ಆಚಾರ್ಯರ ಕಾಲಕ್ಕೂ ಹೊಂದಿಕೆಯಾಗದಿರುವುದು ಸಮಸ್ಯೆಯನ್ನು ಇನ್ನಷ್ಟು ಜಟಿಲವಾಗಿಸುತ್ತದೆಯೇ ಹೊರತೂ ಇನ್ನೇನಿಲ್ಲ.
       ಶಂಕರರ ಕಾಲದ ಕುರಿತಾಗಿ ಇರುವಷ್ಟು ಗೊಂದಲಗಳು ಅವರ ಹುಟ್ಟಿದ ಸ್ಥಳ ಮತ್ತು ತಂದೆತಾಯಿಯರ ಬಗ್ಗೆ ಇಲ್ಲವೆನ್ನುವುದು ಸಂತೋಷ. ಎಲ್ಲ ಶಂಕರವಿಜಯಗಳೂ ಕೇರಳದ ’ಕಾಲಟಿ’ ಅಥವಾ ಶಶಲ ಎಂಬ ಸ್ಥಳದಲ್ಲೇ ಶಂಕರರ ಜನನವಾಯಿತೆಂದು ಒಪ್ಪುತ್ತವೆ. ಕಾಲಟಿಯೇ ಶಂಕರರ ಜನ್ಮಸ್ಥಳವೆಂಬ ಪ್ರತೀತಿ ಮೊದಲಿನಿಂದಲೂ ಇತ್ತಾದರೂ ಅದು ಹೊರಜಗತ್ತಿಗೆ ತೆರೆದುಕೊಂಡಿದ್ದು ೧೯೧೦ ರಲ್ಲಿ. ೧೮೬೬ರಿಂದ ೧೯೧೨ರವರೆಗೆ ಶೃಂಗೇರಿಯ ೩೩ನೇ ಜಗದ್ಗುರುಗಳಾಗಿದ್ದ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಗುರುಗಳ ಸಮಯದಲ್ಲಿ ಕಾಲಗರ್ಭದಲ್ಲಿ ಹೆಸರೊಂದನ್ನು ಮಾತ್ರ ಉಳಿಸಿ ಕಳೆದುಹೋಗಿದ್ದ ಕಾಲಡಿ ಪುನಃಶ್ಚೇತನಗೊಂಡಿದ್ದು. ಶೃಂಗೇರಿಯವರು ಶಂಕರ ಸ್ಥಳವನ್ನು ಕಂಡುಹಿಡಿಯಲು ಬಂದಾಗ ಕಾಡಿನ ಮಧ್ಯೆ ಚಿಕ್ಕ ಗುಡಿ ಕಾಣಿಸಿತು. ವಿಚಾರಿಸಲಾಗಿ ಈ ಸ್ಥಳವೇ ಶಂಕರರ ಮನೆಯೆಂದೂ, ಆ ಮನೆಯ ಆವರಣದಲ್ಲಿದ್ದ ಅಶೋಕ ವೃಕ್ಷ ಅವರ ತಾಯಿಯ ದಹನಸ್ಥಳವೆಂದೂ ಆಕೆಯ ಅಂತ್ಯಕ್ರಿಯೆಗೆ ಸಹಾಯಮಾಡಿದ ತಮ್ಮ ಪೂರ್ವಜರಿಗೆ ಆ ಸ್ಥಳವನ್ನು ದಾನಕೊಟ್ಟು ಅಲ್ಲಿ ಪೂಜೆಮಾಡಿಕೊಂಡಿರಬೇಕೆಂದು ಹೇಳಿದರೆಂದೂ ಅಲ್ಲಿಯ ಅರ್ಚಕರು ನುಡಿದರು. ಮುಂದೆ ಸರ್ಕಾರದ ಸಹಾಯದಿಂದ ಆಚಾರ್ಯರ ಜನ್ಮಸ್ಥಳವನ್ನು ಅಭಿವೃದ್ಧಿಗೊಳಿಸಿದ ಸಕಲ ಶ್ರೇಯಗಳೂ ಶೃಂಗೇರಿ ಮಠಕ್ಕೆ ಸಲ್ಲಬೇಕು. ಶೃಂಗೇರಿ ಪೀಠದಿಂದ ಅಲ್ಲಿ ಶಂಕರ ಮತ್ತು ಶಾರದೆಯರಿಗೆ ಎರಡು ಮಂದಿರಗಳು ನಿರ್ಮಾಣವಾದವು. ಜನವಾರ್ತೆಯಂತೆ ಶಂಕರರು ಮನೆಯ ಒಳಗೆ ತಾಯಿಯ ದೇಹವನ್ನು ತುಂಡುಮಾಡಿ ಚಿತೆಯಲ್ಲಿ ಹಾಕಿದರಂತೆ. ಬ್ರಾಹ್ಮಣರು ಬಹಿಷ್ಕಾರ ಹಾಕಿದ್ದರಿಂದ ಚಿತೆಗೆ ಬೇಕಾದ ಅಡಿಕೆಪಟ್ಟೆ, ಬಾಳೆಪಟ್ಟೆಗಳನ್ನು ಒದಗಿಸಿದವರು ಸೀದಾ ಅಥವಾ ನಂಬ್ಯಾದಿಗಳಂತೆ. ಇಂದಿಗೂ ನಂಬೂದಿರಿ ಬ್ರಾಹ್ಮಣರಿಗೆ ಪ್ರತ್ಯೇಕ ದಹನಸ್ಥಳವಿಲ್ಲ. ತಮ್ಮ ಮನೆಯ ಹಿಂಭಾಗದಲ್ಲೋ ಅಥವಾ ಆವರಣದಲ್ಲೋ ಕೆಲವೊಂದು ಬಾಳೆಪಟ್ಟೆಗಳನ್ನು ಶಾಸ್ತ್ರವಾಗಿ ಹಾಕಿ ದಹನಕ್ರಿಯೆ ಮಾಡುತ್ತಾರೆ. ನಂಬಿಯಾದಿಗಳು ಬಂದು ಬಾಳೆಪಟ್ಟೆ ಕೊಡುವವರೆಗೂ ಕಾದಿರಬೇಕು. ಅವರಿಲ್ಲದೇ ನಂಬೂದಿರಿಗಳಲ್ಲಿ ಪಿತೃಕರ್ಮ ನಡೆಯುವುದೇ ಇಲ್ಲ. ಪರಂಪರೆಯ ಅನುಸಾರವಾಗಿ ಈಗಲೂ ಬ್ರಾಹ್ಮಣರು ಮೃತದೇಹಕ್ಕೆ ಕತ್ತಿಯಿಂದ ಅಲ್ಲಲ್ಲಿ ಮುಟ್ಟಿಸುತ್ತಾರೆ. ನಂಬೂದಿರಿಗಳು ಋಕ್-ಯಜುಃ-ಸಾಮವೇದಗಳಲ್ಲಿ ಪಾರಂಗತರಾದರೂ ಅವರಲ್ಲಿ ಹೆಚ್ಚು ಮಂತ್ರಗಳಿಲ್ಲ. ಕೈಕರಣಗಳಿಗೇ ಹೆಚ್ಚು ಪ್ರಾಧಾನ್ಯ. ಇವರ ಗುರುಮಠವಿರುವುದು ತ್ರಿಶೂರಿನಲ್ಲಿ. ಶಂಕರರ ವಿದ್ಯಾಭ್ಯಾಸ ನಡೆದದ್ದೂ ಅಲ್ಲಿಯೇ ಅಂತೆ.
        ಶಂಕರರು ಯಜುರ್ವೇದಿಗಳು. ಮನೆತನದ ಹೆಸರು ’ಕೈಪಳ್ಳಿ ಇಲ್ಲಂ’. ಇಲ್ಲಿ ’ಕಾಪಳ್ಳಿ ಇಲ್ಲಂ’ ಮತ್ತು ’ತಲೆಯಾತ್ತ ಇಲ್ಲಂ’ ಎಂದು ಎರಡು ಮನೆಗಳಿವೆ. ಶಂಕರರ ತಾಯಿಯ ಅವಸಾನಕಾಲದಲ್ಲಿ ತಲೆಯಕಡೆ ಒಬ್ಬ, ಕಾಲಕಡೆ ಒಬ್ಬ ನಿಂತಿದ್ದರಿಂದ ಅವರ ಮನೆಗಳಿಗೆ ಆ ಹೆಸರು ಬಂದಿದೆಯಂತೆ. ಶಂಕರರ ತಾಯಿ ’ಪಾಲುಪನೈ ಇಲ್ಲಂ’ ಅಥವಾ ’ಪಜುರಪನೈ ಇಲ್ಲಂ’ ಎಂಬ ನಂಬೂದಿರಿ ಕುಟುಂಬದವಳೆಂದು ಆ ಕುಲದವರರೆಂದು ಹೇಳಿಕೊಳ್ಳುವವರು ಈಗಲೂ ತ್ರಿಶೂರಿನಲ್ಲಿದ್ದಾರೆ.  ಕಾಲಡಿಗೆ ಸಮೀಪದಲ್ಲೇ ಪೊನ್ನರ್ ಎಂಬ ಊರಿದೆ. ಇಲ್ಲಿ ಬಾಲಶಂಕರರು ಭಿಕ್ಷೆಗೆ ಹೋದಾಗ ನೆಲ್ಲಿಕಾಯಿ ಹಾಕಿದ ಮನೆಯಿದೆ. ಕನಕಧಾರಾ ಸ್ತೋತ್ರಮಾಡಿ ಈ ಮನೆಯೆದುರು ಹೊನ್ನಿನ ನೆಲ್ಲಿಕಾಯಿಯ ಮಳೆಸುರಿಸಿದರೆಂದು ಪ್ರತೀತಿ. ಇಂದಿಗೂ ಈ ಮನೆ ’ಸ್ವರ್ಣತ್ತಿಲ್ಲಂ’ ಎಂದು ಕರೆಯಲ್ಪಡುತ್ತಿದೆ.
       ಶಂಕರರ ಜನ್ಮಸಂದರ್ಭವನ್ನು ಸ್ವಲ್ಪ ಗಮನಿಸೋಣ. ಬೇರೆಲ್ಲ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಹೆಚ್ಚಿನ ಶಂಕರವಿಜಯಗಳ ಐಕ್ಯಮತ್ಯವಿರುವುದು ಶಂಕರರ ಹುಟ್ಟು, ಸ್ಥಳ ಮತ್ತು ಮಾತಾಪಿತೃರ ಕುರಿತಾಗಿಯೇ. ಮಾಧವೀಯದಲ್ಲಿ, ಚಿದ್ವಿಲಾಸೀಯದಲ್ಲಿ, ಆನಂದಗಿರೀಯದಲ್ಲಿ ಮತ್ತು ಆತ್ಮಬೋಧರ ಪ್ರಾಚೀನಶಂಕರವಿಜಯಗಳ ಪ್ರಕಾರ ಭೂಲೋಕದಲ್ಲಿ ಬೌದ್ಧರ ಕಾರಣದಿಂದ ಜನ ವರ್ಣಾಶ್ರಮ ಧರ್ಮಗಳನ್ನು ಬಿಟ್ಟು ಅನಾಚಾರಗಳನ್ನವಲಂಬಿಸಿದ್ದಾರೆ. ಧರ್ಮವನ್ನು ಸ್ಥಾಪನೆಮಾಡಿ ಎಲ್ಲರನ್ನೂ ಉದ್ಧಾರಮಾಡಬೇಕೆಂದು ದೇವತೆಗಳು ಶಿವನನ್ನು ಪ್ರಾರ್ಥಿಸಲಾಗಿ ಬ್ರಹ್ಮನು ಮಂಡನನಾಗಿ, ವಾಯುವು ಹಸ್ತಾಮಲಕನಾಗಿ, ಅಗ್ನಿಯು ಉದಂಕನಾಗಿ, ಬೃಹಸ್ಪತಿಯು ಆನಂದಗಿರಿಯಾಗಿ, ಗುಹನು ಭಟ್ಟನಾಗಿ, ವರುಣನು ಚಿತ್ಸುಖನಾಗಿ, ಯಮನು ವಿಶ್ವರೂಪನಾಗಿ ಹೀಗೆ ಬೇರೆ ಬೇರೆ ದೇವತೆಗಳು ಬೇರೆಬೇರೆ ರೂಪದಲ್ಲಿ ಅವತರಿಸಿ ವೈದಿಕಮಾರ್ಗವನ್ನು ಖಂಡನೆಗಳಿಂದಲೂ ಮಂಡನೆಗಳಿಂದಲೂ ಪ್ರಖ್ಯಾತಗೊಳಿಸಲು ಸಾಕ್ಷಾತ್ ಶಿವನೇ ’ಶಂಕರ’ನಾಗಿ ಕೇರಳದ ಪೂರ್ಣಾನದಿ ದಡದಲ್ಲಿ ಅವತರಿಸಿದನಂತೆ. ವಿದ್ಯಾರಣ್ಯರ ಮಾಧವೀಯದಲ್ಲಿ ರಾಜಶೇಖರನೆಂಬ ಅರಸು ಕನಸಿನಲ್ಲಾದ ಈಶ್ವರನ ಪ್ರೇರಣೆಯಂತೆ ವೃಷಭಾದ್ರಿಯಲ್ಲಿ ಒಂದು ದೇವಾಲಯವನ್ನು ಕಟ್ಟಿಸಿದನೆಂದೂ ಅದರ ಸಮೀಪದ ಕಾಲಡಿಯಲ್ಲಿ ವಿದ್ಯಾಧಿರಾಜನೆಂಬ ಪಂಡಿತನಿಗೆ ಶಿವಗುರುವೆಂಬ ಮಗನಿದ್ದನೆಂದೂ ಹೇಳಿದೆ. ಕೇರಳದಲ್ಲಿ ರಾಜಶೇಖರನೆಂಬ ಅರಸನಿದ್ದನೋ ಅಥವಾ ಇದು ರಾಜಶ್ರೇಷ್ಟನೆಂಬ ಅರ್ಥದಲ್ಲಿ ಪ್ರಯೋಗಿಸಿದ ಅನ್ವರ್ಥನಾಮವೋ ಗೊತ್ತಿಲ್ಲ. ಶಂಕರರ ಅಜ್ಜನ ಹೆಸರು ವಿದ್ಯಾಧಿರಾಜ. ಇದೂ ಶ್ರೇಷ್ಟಪಂಡಿತನೆಂಬರ್ಥದ ಅನ್ವರ್ಥನಾಮವೇ. ಪ್ರಾಚೀನಶಂಕರವಿಜಯದಲ್ಲಿ
ಈಶೋಽಷ್ಯಭೂತ್ಸಮದವಿದ್ವದಭೇದ್ಯದರ್ಪ
ಸರ್ಪಾಹಿತುಣ್ದಿಕವಿದಗ್ಧಸಹಸ್ರಸೇವ್ಯೇ |
ವಿದ್ಯಾಧಿಪತ್ಯಪರನ್ನಾಮ್ನಿ ಕುಲೇ ಶಿವಾಖ್ಯಾ
ದಾರ್ಯಾಪತೇ ರವಿಸಹಸ್ರರುಚಿಃ ಕುಮಾರಃ ||
(ದಾರ್ಯಾಸತೀ ಎಂಬ ಪಾಠಾಂತರವೂ ಇದೆ)
ಅಹಂಕಾರದಿಂದ ಮದಿಸಿದ ವಿದ್ವಾಂಸರೆಂಬ ಸರ್ಪಗಳಿಗೆ ಹಾವಾಡಿಗನಂತಿರುವ ವಿದ್ಯಾಧಿಪತಿಯೆಂಬ ಕುಲದಲ್ಲಿ ಶಿವಗುರುವೆಂಬ ಆರ್ಯಾಪತಿಯಿಂದ ಸಾವಿರ ಸೂರ್ಯರ ಪ್ರಕಾಶವುಳ್ಳ ಕುಮಾರನು ಹುಟ್ಟಿದನು.
        ಈ ಶ್ಲೋಕ ಸ್ವಲ್ಪಮಟ್ಟಿಗೆ ವಿಶೇಷವಾದುದು. ಶಂಕರರ ತಂದೆಯ ಹೆಸರು ಶಿವಗುರು. ಇದಕ್ಕೆ ಶಿವನ ತಂದೆ ಎಂಬರ್ಥವೂ ಇದೆ. ಇವನ ಹೆಂಡತಿ ಆರ್ಯಾಸತೀ. ಮಾಧವೀಯದಲ್ಲೇ ಇನ್ನೊಂದು ಕಡೆ ಜಾಯಾಸತೀ ಎಂದೂ ಕರೆಯಲಾಗಿದೆ. ಡಿಂಡಿಮವ್ಯಾಖ್ಯಾನದಲ್ಲೂ ’ಶಿವಗುರೋಭಾರ್ಯಾ ಸತೀ’ ಎಂದಿದೆ. ಸದಾನಂದೀಯದಲ್ಲೂ ’ಸಾ ಸತೀ ಸುಷುವೇ’ ಎಂದೇ ಇದೆ. ’ಆರ್ಯಾ’ ’ಸತಿ’ ಎಂಬುದು ಆಕೆಯ ಹೆಸರು. ಇದಕ್ಕೂ ಕೂಡ ಪೂಜ್ಯಳು, ಸಾಧ್ವಿ ಎಂಬ ಅನ್ವರ್ಥನಾಮಗಳನ್ನು ಕಲ್ಪಿಸಬಹುದು. ಅಂತೂ ಶಂಕರರ ತಂದೆ, ತಾಯಿ, ಅಜ್ಜನಿಗೆ ಈಗ ಪ್ರಖ್ಯಾತವಾಗಿರುವ ಶಿವಗುರು, ಅರ್ಯಾ, ವಿದ್ಯಾಧಿರಾಜ ಎಂಬ ಹೆಸರುಗಳು ಅಂಕಿತನಾಮಗಳೋ ಅಥವಾ ಕವಿಕಲ್ಪಿತ ಅನ್ವರ್ಥನಾಮಗಳೋ ಹೇಳಲು ಬರುವಂತಿಲ್ಲ.
        ಶಂಕರರ ಜನ್ಮವೃತ್ತಾಂತದ ಕುರಿತು ಮಾಧವೀಯ, ವ್ಯಾಸಾಚಲೀಯ ಮತ್ತು ಚಿದ್ವಿಲಾಸೀಯಗಳಲ್ಲಿ ಸುಮಾರಿಗೆ ಒಂದೇ ತೆರನಾದ ಕಥೆಗಳಿವೆ. ಶಿವಗುರುವಿಗೆ ಬಹಳ ವರ್ಷಗಳ ಕಾಲ ಪುತ್ರಸಂತತಿಯಾಗಲಿಲ್ಲವೆಂದು ವೃಷಭಾಚಲನನ್ನು ಪೂಜಿಸಿದಾಗ ಸ್ವಪ್ನದಲ್ಲಿ ವಿಪ್ರವೇಷದಲ್ಲಿ ಕಾಣಿಸಿಕೊಂಡ ಶಿವನು ಕೇಳಿದ ವರವನ್ನು ನೆರವೇರಿಸಿಕೊಡುವುದಾಗಿ ಹೇಳಿದನಂತೆ. ಶಿವಗುರುವು ತಾನು ಪುತ್ರೇಚ್ಛೇಯಿಂದ ತಪಸ್ಸು ಮಾಡುತ್ತಿದ್ದೇನೆಂದು  ಹೇಳಿದನು. ಆಗ ಶಿವನು ’ದೇವೋಽಪ್ಯಪೃಚ್ಛದಥ ತಂ ದ್ವಜ ವಿದ್ಧಿ ಸತ್ಯಂ ಸರ್ವಜ್ಞ ಮೇವಮಪಿ ಸರ್ವಗುಣೋಪಪನ್ನಮ್ | ಪುತ್ರಂ ದದಾಮ್ಯಥ ಬಹೂನ್ ಪರೀತಕಾಂಸ್ತೆ ಭೂರ್ಯಾಯುಷಸ್ತನುಗುಣಾನವದಿದ್ದ್ವಿಜೇಶಃ’ ಸರ್ವಜ್ಞನಾದ ಸರ್ವಗುಣೋಪೇತನಾದ ಅಲ್ಪಾಯುವಿನ ಒಬ್ಬನೇ ಮಗನು ಬೇಕೋ ಅಥವಾ ಅದಕ್ಕೆ ವಿಪರೀತವಾದ ದೀರ್ಘಾಯುವಿನ ಸ್ವಲ್ಪಗುಣಗಳುಳ್ಳ ಬಹಳ ಪುತ್ರರು ಬೇಕೋ? ಎನ್ನಲು ಶಿವಗುರುವು ಸರ್ವಜ್ಞನಾದ ಒಬ್ಬನೇ ಮಗನನ್ನು ಕೇಳಿಕೊಂಡನಂತೆ. ಹೀಗೆ ಹುಟ್ಟಿದ ಮಗುವೇ ಶಂಕರ. ನೋಡಿದವರಿಗೆ ಸುಖವಾಗುತ್ತದೆಂಬ ಕಾರಣದಿಂದ(ಶಂ ಕರೋತಿ ಇತಿ ಶಂಕರಃ) ಅಥವಾ ಶಂಕರನ ಪ್ರಸಾದದಿಂದ ಹುಟ್ಟಿದವನೆಂಬ ಕಾರಣಕ್ಕೆ ತಂದೆಯು ಮಗುವಿಗೆ ಶಂಕರನೆಂಬ ಹೆಸರಿಟ್ಟ. ಬೃಹಚ್ಛಂಕರವಿಜಯದ ಶಂಕರಪ್ರಾದುರ್ಭಾವ ಪ್ರಕರಣವೂ ಇದೇ ಕಥೆಯನ್ನು ಹೊಂದಿರುವುದರಿಂದ ಈ ಕೃತಿಗಳೆಲ್ಲ ಪರಸ್ಪರ ನಿಕಟಸಂಬಂಧವನ್ನು ಹೊಂದಿರಬೇಕು. ಆಚಾರ್ಯರು ಕೇರಳದ ಕಾಲಡಿಯಲ್ಲಿ ಶಿವಗುರು-ಆರ್ಯಾ ದಂಪತಿಗೆ ಹುಟ್ಟಿದರೆಂಬ ವಿಷಯಕ್ಕೆ ಎಲ್ಲಾ ವಿಜಯಗಳಿಗೂ ಸಮ್ಮತಿಯಿದ್ದರೆ ಅನಂತಾನಂದಗಿರೀಯದ ಕಥೆಯೇ ಬೇರೆ. ಅದರ ಪ್ರಕಾರ ಸರ್ವಜ್ಞನೆಂಬ ಬ್ರಾಹ್ಮಣ ಕಾಮಾಕ್ಷಿಯೆಂಬ ಪತ್ನಿಯೊಡಗೂಡಿ ಚಿರಕಾಲ ಚಿದಂಬರಂನ ಆಕಾಶಲಿಂಗವನ್ನು ಧ್ಯಾನಮಾಡಿದ ಫಲವಾಗಿ ವಿಶಿಷ್ಟಾ ಎಂಬ ಮಗಳನ್ನು ಪಡೆದರು. ಅವಳಿಗೆ ಎಂಟು ವರ್ಷಕ್ಕೆ ವಿಶ್ವಜಿತು ಎಂಬವನ ಜೊತೆ ಮದುವೆಯಾದರೂ ಕೆಲವೇ ಕಾಲದಲ್ಲಿ ಅವಳ ಗಂಡ ಅವಳನ್ನು ಬಿಟ್ಟು ತಪಸ್ಸುಮಾಡಲು ಅರಣ್ಯಕ್ಕೆ ಹೋದನು. ಅಲ್ಲಿಂದ ಮುಂದೆ ಆಕೆ ಚಿದಂಬರೇಶ್ವರನನ್ನೇ ಆರಾಧಿಸುತ್ತಿದ್ದಳು. ಒಂದು ದಿನ ಚಿದಂಬರನಿಂದ ಹೊರಟ ಬೆಳಕೊಂದು ಆಕೆಯ ಮುಖವನ್ನು ಹೊಕ್ಕಿದ್ದನ್ನು ಕಂಡು ಅಲ್ಲಿ ಬಂದಿದ್ದ ಜನರು ವಿಸ್ಮಿತರಾದರು. ಅದಾದ ಬಳಿಕ ಪಾರ್ವತಿಯಂತೆ ಮಹಾತೇಜಸ್ವಿನಿಯಾದ ಆಕೆ ಗರ್ಭವತಿಯಾದಳು. ಬ್ರಾಹ್ಮಣರು ಚಿದಂಬರನನ್ನೇ ಯಜಮಾನನನ್ನಾಗಿ ಮಾಡಿಕೊಂಡು ಮೂರನೇ ತಿಂಗಳಿಂದಲೂ ಆಕೆಗೆ ವೇದೋಕ್ತ ಸಂಸ್ಕಾರ ಮಾಡಿದರು. ಹತ್ತನೇ ತಿಂಗಳಲ್ಲಿ ವಿಶಿಷ್ಟೆಯ ಗರ್ಭದಿಂದ ಮಹಾದೇವನು ಶಂಕರನೆಂಬ ನಾಮದಿಂದ ಜನಿಸಿದನು. ಇದನ್ನು ಬರೆದ ಅನಂತಾನಂದಗಿರಿ ತನ್ನನ್ನು ಶಂಕರರ ಸಾಕ್ಷಾತ್ ಶಿಷ್ಯನೆಂದು ಕರೆದುಕೊಂಡಿದ್ದಾನೆ. ಆದರೂ ಶಂಕರರ ತಂದೆತಾಯಿಯನ್ನು ಬೇರೆ ಹೆಸರಿನಿಂದ ಕರೆಯುವ ಧೈರ್ಯ ಹೇಗೆ ಮಾಡಿದನೆಂಬುದೇ ಆಶ್ಚರ್ಯ. ಇದಲ್ಲದೇ ಶಂಕರರು ಪುರುಷನ ಹಂಗಿಲ್ಲದೇ ಶಿವನ ತೇಜಸ್ಸು ವಿಶಿಷ್ಟೆಯ ಮುಖ ಪ್ರವೇಶಿಸಿದ ಕಾರಣ ಹುಟ್ಟಿದರೆಂಬ ಕಥೆ ಅತ್ಯಂತ ಅಸ್ವಾಭಾವಿಕವಾದದ್ದು. ಆಚಾರ್ಯರ ಜನ್ಮಸ್ಥಳ ಕಾಲಡಿ ಎಂದು ಮಿಕ್ಕವರು ಹೇಳುವಾಗ ಈತ ಮಾತ್ರ ಚಿದಂಬರಂ ಎನ್ನುತ್ತಿರುವುದು ನೋಡಿದರೆ ಆತನ ಶ್ರದ್ಧೆ ಪೂರ್ತಿ ಶಂಕರರ ಮೇಲಿರದೇ ಚಿದಂಬರದಲ್ಲಿತ್ತು ಎನ್ನುವುದು ಸ್ಪಷ್ಟ. ಮುಂದೆ ಶಂಕರರು ದೇಹತ್ಯಾಗದ ಕಾಲದಲ್ಲಿ ಸುರೇಶ್ವರಾಚಾರ್ಯರ ಮೂಲಕ ಮೋಕ್ಷಲಿಂಗವನ್ನು ಚಿದಂಬರಕ್ಕೆ ಕಳುಹಿಸಿಕೊಟ್ಟರೆನ್ನುವುದೂ ಇದರದ್ದೇ ಮುಂದುವರೆದ ಭಾಗ. ಹಾಗೆಂದು ಈ ಕಥೆ ಪೂರ್ತಿ ಅತಾರ್ಕಿಕವಲ್ಲ. ಕಾಶ್ಮೀರದ ರಾಜ ಜಯಾಪೀಡನ ಆಸ್ಥಾನಕವಿಯಾದ ವಾಕ್ಪತಿಮಿಶ್ರ ತನ್ನ ಶಂಕರೇಂದ್ರವಿಲಾಸದಲ್ಲಿ ಇಂಥಹುದೇ ಕಥೆಯನ್ನು ಬರೆದಿದ್ದಾನೆ. ಆದರೆ ಅದು ಆದಿಶಂಕರರ ಕುರಿತಾಗಿರದೇ ಕಾಂಚೀಪೀಠದ ೩೬ನೇ ಪೀಠಾಧಿಪತಿಗಳಾದ ಅಭಿನವ ಶಂಕರರ ಬಗ್ಗೆಯಾಗಿದೆ. ವಿಶ್ವಜಿತ್ತು ಸ್ವರ್ಗಸ್ಥನಾಗಲು ಅವನ ಹೆಂಡತಿ ಸಹಗಮನಕ್ಕೆ ಮುಂದಾದಳು. ಆ ಸಮಯ ಆಕೆಯಲ್ಲಿ ಗರ್ಭಿಣಿಯ ಚಿಹ್ನೆಯನ್ನು ಕಂಡು ಅವಳ ಸಂಬಂಧಿಗಳು ಅದನ್ನು ತಡೆದರು. ಆದರೆ ಆಕೆ ಗರ್ಭಿಣಿಯಾಗಿ ಮೂರು ವರ್ಷಗಳ ನಂತರ ಪ್ರಸವವಾಯಿತು. ಜನಾಪವಾದಕ್ಕಂಜಿ ಆ ಮಗುವನ್ನು ಆಕೆ ಕಾಡಿನಲ್ಲಿ ಬಿಟ್ಟುಬಂದಳಂತೆ. ಅಲ್ಲಿ ವ್ಯಾಘ್ರಪಾದಮುನಿಗಳ ಪತ್ನಿಯಾದ ಹೆಣ್ಣು ಹುಲಿಯೊಂದು ಅದನ್ನು ಪೋಷಿಸಿತು. ಐದು ವರ್ಷಕ್ಕೆ ಋಷಿಯೇ ಉಪನಯನವನ್ನು ನೆರವೇರಿಸಿ ವೇದಪಾಠವನ್ನೂ ಮಾಡಿದರು. ಕಂಚೀಮಠದ ವಿದ್ಯಾಘನರು ಚಿದಂಬರದಲ್ಲಿದ್ದಾಗ ಶಿವನು ಅವರಿಗೆ ಸ್ವಪ್ನದರ್ಶನವಿತ್ತು ಶಂಕರರ ಮಹಿಮೆಯನ್ನು ತಿಳಿಸಿದನಂತೆ. ಅದರಿಂದಲೇ ವಿದ್ಯಾಘನರು ಅಭಿನವ ಶಂಕರರೆಂಬ ಹೆಸರಿನಿಂದ ಅವರ ಪೀಠಾರೋಹಣವನ್ನು ನೆರವೇರಿಸಿದರು.
ಹಾಯನೇಽಥ ವಿಭವೇ ವೃಷಮಾಸೇ ಶುಕ್ಲಪಕ್ಷದಶಮೀದಿನಮಧ್ಯೆ |
ಶೇವಧಿದ್ವಿಪದಿಶಾನಲವರ್ಷೇ ತಿಷ್ಯ ಏನಮುದಸೋಷ್ಟ ವಿಶಿಷ್ಟಾ ||

ಕಲಿಯ ೩೮೮೯ನೇ ವಿಭವಸಂವತ್ಸರದ(ಕ್ರಿ.ಶ ೭೮೮) ವೃಷಭಮಾಸದ ದಶಮಿಯಂದು ವಿಶಿಷ್ಟಾದೇವಿಯನ್ನು ಈತನನ್ನು ಹಡೆದಳು. ಇದೇ ರೀತಿಯ ಶ್ಲೋಕಗಳು ಅಭಿನವ ಶಂಕರರ ಬಗ್ಗೆ ಆತ್ಮಬೋಧರ ಗುರುರತ್ನಮಾಲಿಕೆಯಲ್ಲೂ ಇದೆ. ಈ ಕಥೆಯನ್ನೆಲ್ಲ ಎಷ್ಟರಮಟ್ಟಿಗೆ ನಂಬಬಹುದೆಂಬುದು ವಿಮರ್ಶಕರಿಗೆ ಬಿಟ್ಟ ವಿಚಾರ.
        ಕೂಷ್ಮಾಂಡಶಂಕರವಿಜಯವೆಂಬ ಹೆಸರಿನ ಒಂದು ಕುಗ್ರಂಥವುಂಟು. ಅನಂತಾನಂದಗಿರೀಯಕ್ಕಿಂತ ಅದ್ಭುತಕತೆಯನ್ನು ಕಟ್ಟಬೇಕೆಂಬ ಮಹದಭಿಲಾಶೆ ಇದರ ಲೇಖಕನಿಗಿರಬೇಕು. ಇದರ ಪ್ರಕಾರ ಕೇರಳದೇಶದಲ್ಲಿ ಚೂರ್ಣಾ ನದಿಯ ದಡದಲ್ಲಿ ಪದ್ಮನಾಭನ ಮಂದಿರವಿದೆ. ಅಲ್ಲಿ ಕಾಲಟಿಯೆಂಬ ಕ್ಷೇತ್ರವೂ ಇದೆ. ಈ ಕಾಲಟಿಯಲ್ಲಿ ವಿಧವೆ ನೆಟ್ಟ ಕುಂಬಳಬಳ್ಳಿಯಲ್ಲಿ ಶಿವನ ಅನುಗ್ರಹದಿಂದ ಕುಂಬಳಕಾಯೊಂದು ಬಿಟ್ಟು ಅದು ತೊಟ್ಟು ಕಳಚಿ ಬಿದ್ದಾಗ ಅದರಲ್ಲಿ ಮಗುವೊಂದು ಇತ್ತಂತೆ. ಶಂಕರರು ಅಯೋನಿಜರೆಂದು ತೋರಿಸಲು ಲೇಖಕ ಇಷ್ಟೆಲ್ಲ ಸರ್ಕಸ್ ಮಾಡಬೇಕಾಯ್ತು. ಜೊತೆಗೆ ಆತನಿಗೆ ಚೂರ್ಣಾ ನದಿದಡದ ಮೇಲೆ ಪದ್ಮನಾಭ ದೇವಾಲಯವಿದೆ ಎನ್ನುವಷ್ಟು ಭಯಂಕರ ಭೂಗೋಳ ಜ್ಞಾನವಿದೆ. ಕಾಲಡಿ ಎಂಬ ಹೆಸರನ್ನು ಎಲ್ಲೋ ಕೇಳಿ ತನ್ನ ಕುಗ್ರಂಥದಲ್ಲೂ ತಂದು ಸೇರಿಸಿದ್ದಾನೆ. ಶಂಕರರ ಜನ್ಮಸ್ಥಳಕ್ಕೆ ಕಾಲಡಿಯೆಂದು ಹೆಸರು ಬರಲೂ ಒಂದು ಕಾರಣವಿದೆ.
        ಆರ್ಯಾಂಬೆ ವೃದ್ಧಾಪ್ಯದ ಕಾರಣದಿಂದ ಪೂಣಾ ನದಿಯವರೆಗೆ ಹೋಗಲಾರದೇ ಇದ್ದಾಗ ಬಾಲಶಂಕರರು ತಮ್ಮ ತಪೋಶಕ್ತಿಯಿಂದ ನದಿಯನ್ನು ಸ್ತುತಿಸಿದರಂತೆ. ಇದರಿಂದ ಸಂತುಷ್ಟಳಾದ ನದಿಯು ತನ್ನ ಪಥವನ್ನು ಬಿಟ್ಟು ಆಚಾರ್ಯರ ಮನೆಯವರೆಗೆ ಬಂದು ಅವರ ಕಾಲಡಿಗೇ ಹರಿದಿದ್ದರಿಂದ ಆ ಸ್ಥಳ ಕಾಲಡಿ ಎಂದು ಹೆಸರಾಯ್ತು. ಈ ನದಿಯನ್ನು ಕೇರಳದವರು ಈಗಲೂ ಅಂಬಾನದೀ ಎನ್ನುತ್ತಾರೆ. ’ಅಂಬಾರ್ಥಂ ಯದಿಯಂ ನೀತಾ ತಟನೀ ಸದ್ಮ ಸಂನಿಧಮ್, ಅಮ್ಬಾ ತರಙ್ಗಣೀತ್ಯೇವ ಕಥ್ಯತೇಽದ್ಯಾಪಿ ಸಾ ಖಲು’ ಎಂಬ ಶ್ಲೋಕವೊಂದು ಚಿದ್ವಿಲಾಸೀಯದಲ್ಲಿದೆ. ಜೊತೆಗೆ ಆಚಾರ್ಯರು ನದಿಯನ್ನು ಸ್ತುತಿಸಿದ ’ಮಹಾಪಗಾಸ್ತವ’ ಎಂಬ ಸ್ತೋತ್ರವೊಂದು ಇರುವುದಾಗಿ ಸಂಕ್ಷೇಪಶಂಕರದಿಗ್ವಿಜಯದಲ್ಲಿ ಉಲ್ಲೇಖಿಸಲಾಗಿದೆ. ಆ ಸ್ತೋತ್ರ ಈಗ ಲಭ್ಯವಿದೆಯೋ ಇಲ್ಲವೋ ತಿಳಿದಿಲ್ಲ. ’ಚೂರ್ಣೀಮನ್ತಿಕಮಾನಿನಾಯ ಜನನೀಧಾಮ್ನಃ ಸ್ವರಾಜಃ ಪ್ರಭೋ’ ಎಂದು ಪ್ರಾಚೀನಶಂಕರವಿಜಯದಲ್ಲೂ ಹೇಳಲಾಗಿದೆ. ಹೀಗೆ ನದಿಯನ್ನು ತಿರುಗಿಸಿದ ಕಥೆ ಹಿಂದಿನಿಂದಲೂ ಇದೆಯೆಂದಾಯ್ತು. 
ಶಂಕರ ಜನ್ಮಸ್ಥಾನ, ಕಾಲಡಿ
ಕಂಚಿ ಮಠದ ಶಂಕರಕೀರ್ತಿ ಸ್ಥಂಭ, ಕಾಲಡಿ

ಶಂಕರರ ಆರಾಧ್ಯದೈವ ಶ್ರೀಕೃಷ್ಣನ ಮಂದಿರ, ಕಾಲಡಿ

        ಕೂಷ್ಮಾಂಡ ಶಂಕರವಿಜಯವನ್ನೇ ನೆಪಮಾಡಿಕೊಂಡು ತ್ರಿವಿಕ್ರಮ ಪಂಡಿತನೆಂಬ ಮಧ್ವಾಚಾರ್ಯರ ಶಿಷ್ಯರ ಮಗನಾದ ನಾರಾಯಣಪಂಡಿತನು ಮಧ್ವವಿಜಯ, ಮಣಿಮಂಜರಿ ಎಂಬೆರಡು ಗ್ರಂಥಗಳಲ್ಲಿ ಶಂಕರರ ವಿಷಯದ ಅಪಪ್ರಚಾರವನ್ನು ಪ್ರಯತ್ನಪೂರ್ವಕವಾಗಿ ತಂದು ತುರುಕಿದ್ದಾನೆ.
ಯೋ ಭೂರಿವೈರೋ ಮಣಿಮಾನ್ ಮೃತಃ ಪ್ರಾಗ್ |
ವಾಗ್ಮೀ ಬುಭೂಷುಃ ಪರಿತೋಷಿತೇಶಃ |
ಸ ಸಂಕರಾಖ್ಯೋಙ್ಘ್ರತಲೇಷು ಜಜ್ಞೇ |
ಸ್ಪೃಧಾ ಪರೇಪ್ಯಾಸುರಿಹಾಸುತೇಂದ್ರಾಃ ||

’ಹಿಂದೆ ಭೀಮನಿಂದ ಹತನಾದ ಮಣಿಮಂತನೆಂಬ ದೈತ್ಯನು ಈಶ್ವರನನ್ನು ಸಂತೋಷಗೊಳಿಸಿ ಕಾಲಡಿಯಲ್ಲಿ ಸಂಕರನೆಂಬ ಹೆಸರಿನಿಂದ ಹುಟ್ಟಿದನು,’ ಶಂಕರ ಎಂಬ ಹೆಸರನ್ನು ’ಸಂಕರ’ ಎಂದು ಬರೆದಿರುವುದು ವಿಧವಾಪುತ್ರತ್ವವನ್ನು ತಿಳಿಸುವುದಕ್ಕೇ ಎಂಬುದು ಇದರಿಂದ ಸ್ಪಷ್ಟ.
ತಮೇವ ಸಮಯಂ ದೈತ್ಯೋ ಮಣಿಮಾನಪ್ಯಜಾಯತ |
ಮನೋರಥೇನ ಮಹತಾ ಬ್ರಾಹ್ಮಣ್ಯಾಂ ಜಾರತಃ ಖಲಾತ್ |
ಉತ್ಪನ್ನಃ ಸಂಕರಾತ್ಮಾಯಂ ಸರ್ವಕರ್ಮಬಹಿಷ್ಕೃತಃ |
ಇತ್ಯುಕ್ತಃ ಸ್ವಜನೈರ್ಮಾತಾ ಸಂಕರೇತ್ಯಾಜುಹಾವ ತಮ್ ||

ಅದೇ ಕಾಲದಲ್ಲಿ ಮಣಿಮಂತನೆಂಬ ದೈತ್ಯನೂ ಬ್ರಾಹ್ಮಣಿಯಲ್ಲಿ ದುಷ್ಟನಾದ ಜಾರನಿಂದ ಹುಟ್ಟಿದನು. ಸಂಕರಾತ್ಮನಾಗಿ ಹುಟ್ಟಿದ ಇವನು ಸರ್ವಕರ್ಮಬಹಿಷ್ಕೃತನೆಂದು ನೆಂಟರು ಹೇಳಿದ್ದರಿಂದ ತಾಯಿ ಅವನಿಗೆ ಸಂಕರ ಎಂದು ಹೆಸರಿಟ್ಟಳು.
        ತಾನು ಜಾರೆಯೆಂದು ಯಾವಾಗಲೂ ನೆನೆಪಿಗೆ ಬರುವಂತೆ ತಾಯಿ ಮಗನಿಗೆ ಸಂಕರನೆಂದು ಹೆಸರಿಟ್ಟಳು ಎಂದು ನಾರಾಯಣ ಪಂಡಿತ ಹೇಳುವುದು ನೋಡಿದರೆ ಎಲ್ಲಿಂದ ನಗಬೇಕೆಂಬುದೇ ಅರ್ಥವಾಗುತ್ತಿಲ್ಲ. ಇದೇ ಮಣಿಮಂಜರಿಯಲ್ಲಿ ಶಂಕರರು ತಾಮಸಾಹಾರಗಳನ್ನು ತಿನ್ನುತ್ತಿದ್ದರೆಂದೂ, ಬೊಡ್ಡು ಬುದ್ಧಿಯವರಾಗಿದ್ದರೆಂದೂ, ಗೋವಿಂದ ಭಗವತ್ಪಾದರ ಗುರುಗಳಾದ ಗೌಡಪಾದರು ಪ್ರಚ್ಛನ್ನಬೌದ್ಧರೆಂದೂ ಬಗೆಬಗೆಯ ಕತೆಗಳನ್ನು ಕವಿ ಹೆಣೆದಿದ್ದಾನೆ. ಬಕ್ಕಸ್ವಾಮಿ ಎಂಬ ಬೌದ್ಧನೊಬ್ಬ ಗೌಡಪಾದರನ್ನು ಹೇಗೋ ಮೋಸದಿಂದ ಸಂನ್ಯಾಸವನ್ನು ಕೊಟ್ಟು ’ಶೂನ್ಯವೇ ಬ್ರಹ್ಮ’ ಎಂದು ಧ್ಯಾನಮಾಡುವಂತೆ ಉಪದೇಶಿಸಿದನಂತೆ. ಮುಂದೆ ಗೋವಿಂದಭಗವತ್ಪಾದರೂ, ಅವರ ಶಿಷ್ಯರಾದ ಶಂಕರರೂ ಈ ಮತವನ್ನೇ ವೈದಿಕಮತವೆಂದು ಬೋಧಿಸಿದ್ದಲ್ಲದೇ ಸಂನ್ಯಾಸಿಗಳನ್ನು ಹಿಂಸಿಸಿ ಬಲಾತ್ಕಾರದಿಂದ ಅವರನ್ನು ಅದ್ವೈತಕ್ಕೆ ಮತಾಂತರಿಸುತ್ತಿದ್ದರಂತೆ(ಎರಡೂ ಒಂದೇ ಆದಮೇಲೆ ಮತಾಂತರಿಸುವುದ್ಯಾಕೋ!).  ಅದ್ವೈತಿಗಳು ಹೇಳುವ ನಿರ್ವಿಶೇಷಬ್ರಹ್ಮವೂ ಬೌದ್ಧರ ಶೂನ್ಯವೂ ಒಂದೇ ಎಂಬ ಈ ಘನಪಂಡಿತನ ಪಾಂಡಿತ್ಯಕ್ಕೆ ಎಷ್ಟು ಅಡ್ಡಬಿದ್ದರೂ ಸಾಲದು. ಶಾಂಕರವೇದಾಂತಪ್ರಕ್ರಿಯೆಯನ್ನು ಅರಿತುಕೊಳ್ಳಲಾಗದೇ ನಮ್ಮದೇ ಮತಾಂಧರು ಎಂಥೆಂಥ ಕಲ್ಪನೆಗಳನ್ನು ಮನಃಪೂರ್ವಕವಾಗಿ ಹುಟ್ಟಿಸಿ ಅಪಪ್ರಚಾರ ಮಾಡುತ್ತಿದ್ದಾರೆಂಬುದನ್ನು ನೋಡಿದರೇ ಆಶ್ಚರ್ಯವಾಗುತ್ತದೆ.

Tuesday, May 17, 2016

ಪಂಜಾಬ್ ಡೈರಿ: ಬಲಿದಾನದ ನಾಡಲ್ಲಿ

        

        ಅಮೃತಸರಕ್ಕೆ ನಾನು ಅದೆಷ್ಟೋ ಬಾರಿ ಹೋದದ್ದಿದೆ. ಅಲ್ಲಿ ಕಾಲಿಟ್ಟ ಪ್ರತಿಬಾರಿಯೂ ಅನಿರ್ವಚನೀಯವಾದ ಒಂದು ರೋಮಾಂಚನವುಂಟಾಗುತ್ತದೆ. ಆ ಮಣ್ಣಿನ ಗುಣವೇ ಅಂಥದ್ದು. ಚಂಡೀಗಢ್ ನನಗಿನ್ನೊಂದು ಮನೆಯಿದ್ದಂತೆ. ಅಲ್ಲಿನ ಸ್ವರ್ಣಮಂದಿರ, ಜಲಿಯನ್ ವಾಲಾ ಬಾಘ್, ವಾಘಾ-ಅಟ್ಟಾರಿ..... ಇಡಿಯ ಪಂಜಾಬೇ ಒಂದು ಪುಣ್ಯಭೂಮಿ. ಅದೊಂದು ಬಲಿದಾನದ ನೆಲ. ಶತಶತಮಾನಗಳ ಕಾಲ ಕ್ರೌರ್ಯಕ್ಕೆ ಸಿಕ್ಕು ನಲುಗಿದ್ದರೂ ಶೌರ್ಯ, ಸೌಹಾರ್ದತೆ, ಶಾಂತಿಯನ್ನು ಜಗತ್ತಿಗೆ ಬೋಧಿಸಿದ ನಾಡದು. ಭಾರತದ ಮೇಲಿನ ವಿದೇಶಿ ಆಕ್ರಮಣಕಾರರಿಗೆಲ್ಲ ದಾರಿಯಾಗಿದ್ದು ಇದೇ ಪಂಜಾಬ್. ಗಝನಿಯಿಂದ ಔರಂಗಜೇಬನ ತನಕ ಮುಸ್ಲಿಮರ ಸಾಮ್ರಾಜ್ಯದಾಹಕ್ಕೆ, ಮಹಾತ್ಮಾ ಗಾಂಧಿಯಿಂದ ಇಂದಿರಾಗಾಂಧಿಯ ತನಕ ರಾಜಕಾರಣಿಗಳ ಅಧಿಕಾರದಾಹಕ್ಕೆ ಹೆಜ್ಜೆಹೆಜ್ಜೆಗೆ ಇಲ್ಲಿನ ನೆಲ, ಜನ, ಮನಗಳು ನುಚ್ಚುನೂರಾಗಿವೆ. ಅಷ್ಟಾಗಿಯೂ ಅವುಗಳನ್ನೆದುರಿಸಲು ಒಂದಕ್ಕೆ ನೂರಾಗಿ ಫಿನಿಕ್ಸಿನಂತೆ ಮತ್ತೆ ಪಂಜಾಬ್ ಮೇಲೆದ್ದು ಬಂದಿದೆ. ನಲವತ್ತೇಳರಲ್ಲಿ ದೇಶಕ್ಕೆ ದೇಶವೇ ಸ್ವಾತಂತ್ರ್ಯ ಸಿಕ್ಕ ಖುಷಿಯಲ್ಲಿದ್ದರೆ ತಾಯ್ನಾಡಿನ ವಿಭಜನೆಯ ಬರೆ ಬಿದ್ದದ್ದು ಪಂಜಾಬಿಗೆ. ವಿಭಜನೆ ಸೃಷ್ಟಿಸಿದ ಸಾಂಸ್ಕೃತಿಕ, ರಾಜಕೀಯ ಬಿಕ್ಕಟ್ಟು, ಜನಾಂಗೀಯ ಘರ್ಷಣೆ, ರಕ್ತಪಾತಗಳು ಅಮೃತಾ ಪ್ರೀತಂಳ ’ಪಿಂಜರ್’, ಭೀಷಮ್ ಸಾಹ್ನಿಯ ’ತಮಸ್’, ಸದಾತ್ ಹಸನ್ ಮಂಟೋರ ’ಖೋಲ್ ದೋ’ ಮತ್ತು ’ತೋಬಾ ಟೇಕ್ ಸಿಂಗ್’, ಕ್ರಿಶನ್ ಚಂದರ್ ಅವರ ’ಪೆಶಾವರ್ ಎಕ್ಸ್‌ಪ್ರೆಸ್’, ರಾಜೀಂದರ್ ಸಿಂಗ್ ಬೇಡಿಯ ’ಲಾಜವಂತಿ’ ಹೀಗೆ ಲೆಕ್ಕವಿಲ್ಲದಷ್ಟು ಪ್ರಸಿದ್ಧ ಕಥೆ-ಕಾದಂಬರಿಗಳಿಗೆ ವಸ್ತುವಾಗಿವೆ. ಸ್ವಾತಂತ್ರ್ಯ ಸಿಕ್ಕನಂತರವೂ ಪಂಜಾಬ್ ಭಾರೀ ಶಾಂತಿಯುತವೇನೂ ಆಗಿರಲಿಲ್ಲ. ಇಂದಿರಾಗಾಂಧಿ ಪವಿತ್ರ ಸ್ವರ್ಣಮಂದಿರದೊಳಗೇ ಸೇನೆ ನುಗ್ಗಿಸಿದಾಗ ೭೦೦ ಯೋಧರು, ೪೦೦ ಉಗ್ರಗಾಮಿಗಳು ಸೇರಿ ೩೦೦೦ ನಾಗರಿಕರು ಪ್ರಾಣ ಕಳೆದುಕೊಂಡರೆ ೮೪ರ ದೆಹಲಿಯ ಸಿಖ್ ಹತ್ಯಾಕಾಂಡದಲ್ಲಿ ಇನ್ನೂ ಕೆಲ ಸಾವಿರ ಸಿಖ್ಖರು ಕೊಲ್ಲಲ್ಪಟ್ಟರು.
ಪಂಜಾಬ್ ಪುರಾಣ ಕಾಲದಿಂದ ಇಂದಿನವರೆಗೂ ಬಹುಚರ್ಚಿತ ದೇಶ. ಪಂಜಾಬಿನ ಇತಿಹಾಸವನ್ನು ಗಮನಿಸುತ್ತ ಸಾಗಿದರೆ ಅದು ಹೋಗಿ ನಿಲ್ಲುವುದು ವೇದಕಾಲದಲ್ಲಿ. ಋಗ್ವೇದದಲ್ಲುಲ್ಲೇಖಿಸಲ್ಪಟ್ಟ ಸಪ್ತಸಿಂಧುಗಳೆಂದು ಹೆಸರಾದ ಶತದ್ರು(ಸಟ್ಲೇಜ್), ಪರೂಷ್ಣಿ(ರಾವಿ), ವಿತಸ್ತ(ಝಿಲಂ), ಅಸಿಕ್ನಿ(ಚಿನಾಬ್), ವಿಪಾಶ(ಬಿಯಾಸ್), ಸಿಂಧೂ, ಮತ್ತು ಬತ್ತಿಹೋದ ಸರಸ್ವತಿಗಳಲ್ಲಿ ಮೊದಲ ಐದು ನದಿಗಳಿಂದಲೇ ಪಂಜಾಬಿನ ಹೆಸರು ಉಧೃತವಾಗಿದ್ದು.
       ೧೯೫೦ರ ಸುಮಾರಿಗೆ ಅಮೇರಿಕದ ಸಂಶೋಧಕ ಹ್ಯಾರಿ ಫಿಕ್ಸ್ ದೆಹಲಿ ಮಾರ್ಕೇಟಿನಲ್ಲಿ ತಿರುಗುತ್ತಿದ್ದಾಗ ಗುಜರಿ ಅಂಗಡಿಯಲ್ಲಿ ಆತನಿಗೊಂದು ಹಳೆಯ ತಾಮ್ರದ ಮೂರ್ತಿ ಕಣ್ಣಿಗೆ ಬಿತ್ತು. ಕುತೂಹಲಗೊಂಡು ಅದನ್ನು ಆತ ಜಗತ್ಪ್ರಸಿದ್ಧ ಮೆಟಲರ್ಜಿಸ್ಟ್ ರಾಕ್ ಎಂಡರ್ಸನ್ನಿಗೆ ಕಳುಹಿಸಿಕೊಟ್ಟ. ಕ್ಯಾಲಿಫೋರ್ನಿಯಾ, ಸ್ವಿಜರ್ಲೆಂಡುಗಳ ವಿವಿಧ ಲ್ಯಾಬೋರೇಟರಿಗಳಲ್ಲಿ ಕಾರ್ಬನ್ ಡೇಟಿಂಗ್, ಸ್ಪೆಕ್ಟ್ರೋಗ್ರಾಫಿಚ್, ಎಕ್ಸ್-ರೇ ಪರೀಕ್ಷೆಗಳನ್ನು ಮಾಡಿ ಆ ಮೂರ್ತಿ ಕ್ರಿ.ಪೂ ೩೭೦೦ರಕ್ಕಿಂತ ಹಿಂದಿನದ್ದೆಂದು ವಿವಾದೀತವಾಗಿ ನಿರ್ಧರಿಸಲಾಯ್ತು. ಆ ಮೂರ್ತಿ ಋಗ್ವೇದದ ಏಳನೇ ಮಂಡಲದಲ್ಲಿ ವರ್ಣಿಸಿರುವ ವಸಿಷ್ಟನದ್ದು. ಇದರ ಕುರಿತು ’ಅನಾಲಿಸಿಸ್ ಆಫ್ ಇಂಡೋ ಯುರೋಪಿಯನ್ ವೇದಿಕ್ ಹೆಡ್’ ಎಂಬ ಪ್ರಬಂಧದಲ್ಲಿ ೧೯೯೦ರ ’ಜರ್ನಲ್ ಆಫ್ ಇಂಡೋ ಯುರೋಪಿಯನ್ ಸ್ಟಡೀಸ್’ ನಲ್ಲಿ ಹಿಕ್ಸ ಮತ್ತು ಎಂಡರ್ಸನ್ ಪ್ರಕಟಿಸಿದ್ದಾರೆ. ಋಗ್ವೇದದ  ಏಳನೇ ಮಂಡಲದ ದಶರಾಜ್ಞ ಯುದ್ಧದಲ್ಲಿ ವರ್ಣಿಸಿರುವಂತೆ ವಸಿಷ್ಟರ ಸಹಾಯದಿಂದ ಭರತನ ಹದಿನಾರನೇ ಪೀಳಿಗೆಯ ಸುದಾಸ ಹತ್ತು ಆರ್ಯ ರಾಜರನ್ನು ಪಂಜಾಬಿನ 
 ಹ್ಯಾರಿ ಫಿಕ್ಸಿಗೆ ಸಿಕ್ಕ ವಸಿಷ್ಟನ ಶಿರ
ರಾವಿ ನದಿಯ ದಡದಲ್ಲಿ ಸೋಲಿಸಿದ. ಹೀಗೆ ಸೋತ ರಾಜರು ಭಾರತದಿಂದ ಹೊರಗೆ ವಾಯುವ್ಯ ಭಾಗಕ್ಕೆ ಪಲಾಯನಗೈದು ಬೇರೆ ಬೇರೆ ಆರ್ಯಕುಲಗಳ ಬೆಳವಣಿಗೆಗೆ ಕಾರಣರಾದರು. ವೇದಗಳಲ್ಲಿ ಮಾಡಿದ ವರ್ಣನೆಗೆ ಸರಿಹೊಂದುವಂತ ಮೂರ್ತಿಯೊಂದು  ಕ್ರಿ.ಪೂ ೩೭೦೦ರ ಕಾಲದಲ್ಲೇ ಇತ್ತೆಂದಮೇಲೆ ವೇದಗಳು ರಚನೆಗೊಂಡಿದ್ದು, ಮತ್ತು ಆರ್ಯರ ವಾಸ ಅದೇ ಕಾಲಕ್ಕಿಂತ ಹಿಂದೇ ಇದ್ದಿರಬೇಕಲ್ಲ? ಆರ್ಯಸಂಸ್ಕೃತಿಯನ್ನು ಪ್ರಪಂಚದಾದ್ಯಂತ ಹರಡಿದ ಕೀರ್ತಿ ಈ ಪಂಜಾಬಿನ ಮಣ್ಣಿಗಿದೆ.
ವಾಲ್ಮೀಕಿ ಆಶ್ರಮ, ಧೂನಾಸಾಹೇಬ್
        ಹತ್ತು ಸಾವಿರ ವರ್ಷಗಳ ಹಿಂದೆ ವೇದ ಕಾಲದ ಸಿಂಧೂ-ಸರಸ್ವತೀ ನಾಗರೀಕತೆಗಳ ತೊಟ್ಟಿಲೆನಿಸಿದ ಹರಪ್ಪಾ-ಮೊಹಂಜೋದಾರೋಗಳು ಬಾಳಿದ್ದು ಇದೇ ಜಾಗದಲ್ಲಿ. ಪಂಜಾಬಿಗಳ ಪ್ರಕಾರ ಕೌಸಲ್ಯೆಯ ಮೊದಲ ಹೆರಿಗೆಯಾಗಿದ್ದು ಅವಳ ತವರುಮನೆಯಲ್ಲಿ. ರಾಮ ಹುಟ್ಟಿದ್ದೂ ಅಲ್ಲೇ. ಕೌಸಲ್ಯೆಯ ತವರೂರು ಪಟಿಯಾಲದ ಸಮೀಪದ ’ಘುರಾಂ’. ರಾಮ ಹುಟ್ಟಿದ ಸ್ಥಳವೆಂದು ನಂಬಲ್ಪಡುವ ಇಲ್ಲಿ ಕೌಸಲ್ಯೆಗೆ ಒಂದು ಮಂದಿರವೂ ಇದೆ. ರಾಮಾಯಣದ ಬಹುಭಾಗ ನಡೆದಿದ್ದು ಪಂಜಾಬಿನ ಆಸುಪಾಸು. ಕೈಕಯಿಯ ಕೇಕಯ ರಾಜ್ಯವಿದ್ದುದು ರಾವಲ್ಪಿಂಡಿಯಲ್ಲಿ. ವಾಲ್ಮೀಕಿಯ ಆಶ್ರಮವಿರುವುದು ಅಮೃತಸರದ ಧೂನಾಸಾಹೇಬಿನಲ್ಲಿ. ಲವ-ಕುಶರ ಜನ್ಮವಾಗಿದ್ದೂ ಅಲ್ಲೇ. ಲವ ಸ್ಥಾಪನೆ ಮಾಡಿದ್ದ ಲವಪುರ ಲಾಹೋರ್ ಆಗಿಯೂ, ಕುಶನು ರಾಜ್ಯವಾಳಿದ್ದ ಕುಶಪುರಿ ಕಸೂರ್ ಆಗಿಯು ಇಂದು ಕರೆಯಲ್ಪಡುತ್ತಿದೆ. ಭರತನ ಮಕ್ಕಳಾದ ತಕ್ಷ ಮತ್ತು ಪುಷ್ಕಲರು ತಕ್ಷಶಿಲೆ ಮತ್ತು ಪೇಶಾವರದ ಬಳಿಯ ಪುಷ್ಕಲವತಿಯ ಸ್ಥಾಪಕರು. ಲವ ಮತ್ತು ಕುಶರ ಸಂತತಿಯಲ್ಲಿ ರಾಜ್ಯಕ್ಕಾಗಿ ಜಗಳವಾದಾಗ ಲವನ ಸಂತತಿಯವರು ಸೋತು ಕಾಶಿಗೆ ತೆರಳಿ ವೇದಾಭ್ಯಾಸ ನಿರತರಾದರಂತೆ. ನಾಲ್ಕು ವೇದಗಳಲ್ಲಿ ಪರಿಣಿತರಾದ್ದರಿಂದ ಅವರ ಹೆಸರು ವೇದಿ ಅಥವಾ ಬೇದಿ ಎಂದಾಯಿತು. ಗುರುನಾನಕರು ಇದೇ ಬೇದಿ ವಂಶದವರು. ಕುಶನ ಮಗ ಸೋಧಿರಾಯನ ವಂಶಜರು ಸೋಧಿ ಹೆಸರಿನಿಂದ ಪಂಜಾಬನ್ನಾಳಿದರು. ಮುಂದೆ ಸೋಧಿ ವಂಶದ ರಾಜನೊಬ್ಬ ಕಾಶಿಯಿಂದ ವೇದಿಗಳನ್ನು ಕರೆತಂದು ಅವರ ಪಾಂಡಿತ್ಯಕ್ಕೆ ಮೆಚ್ಚಿ ಅವರ ರಾಜ್ಯವನ್ನು ಹಿಂದಿರುಗಿಸಿದ. ನಾನಕರು ಲವನ ವೇದಿ ವಂಶಸ್ಥರಾದರೆ ಗುರು ರಾಮದಾಸರಿಂದ ಗೋವಿಂದಸಿಂಗರ ತನಕ ಹೆಚ್ಚಿನ ಸಿಖ್ಖರ ಗುರುಗಳೆಲ್ಲ ಕುಶನ ಸೋಧಿ ವಂಶಜರು.
ಅವೆಲ್ಲ ಪುರಾಣದ ಕತೆಯಾಯಿತು.
       ಇತಿಹಾಸದ ಪುಸ್ತಕಗಳು ಹೇಳುವಂತೆ ಭಾರತದ ಮೇಲೆ ಇಸ್ಲಾಂನ ದಾಳಿ ಪ್ರಾರಂಭವಾದದ್ದು ಗಜನಿಯಿಂದ. ಆದರೆ ಅಂದಿಗೆ ಮುನ್ನೂರು ವರ್ಷಗಳಿಗಿಂತಲೂ ಹಿಂದೆಯೇ ಕ್ರಿ.ಶ ೬೩೭ರಲ್ಲಿ ಎರಡನೇ ಖಲೀಫಾ ಉಮರ್‌ನ ನೌಕಾದಳ ಮಹಾರಾಷ್ಟ್ರದ ಥಾನೆಯ ಮೇಲೆ ದಾಳಿ ಮಾಡಿತ್ತು. ಇಮ್ಮಡಿ ಪುಲಿಕೇಶಿಯ ಸೈನ್ಯ ಅರಬ್ಬೀ ದಾಳಿಕಾರರನ್ನು ತಿರುಗಿ ಹೋಗದಂತೆ ಕೊಚ್ಚಿಹಾಕಿತ್ತು. ಅದರಾಚೆ ಎರಡು, ಮೂರು ಮತ್ತು ನಾಲ್ಕನೇ ಖಲೀಫರ ಕಾಲದಲ್ಲಿ ಗುಜರಾತಿನ ಭರೂಚ್, ಸಿಂಧ್‌ನ ದೇವಳ ಹಾಗೂ ದಕ್ಷಿಣ ಸಿಂಧ್‌ನ ಮಕ್ರಾನ್, ಕೀಕಾನುಗಳ ಮೇಲಿನ ಆಕ್ರಮಣಗಳಾದಾಗಲೂ ಸಿಂಧಿಯರು ಅವರನ್ನು ಒದ್ದೋಡಿಸಿದ್ದರು. ನೌಕಾದಳದ ಆಕ್ರಮಣಗಳೆಲ್ಲ ವಿಫಲವಾಗುವುದರೊಂದಿಗೆ ಅರಬ್ಬರು ಸಮುದ್ರ ಮಾರ್ಗದ ಮೂಲಕ ಭಾರತವನ್ನು ಗೆಲ್ಲುವ ಆಸೆ ಕೈಬಿಟ್ಟರು. ಮುಂದೆ ಒಂಭತ್ತು ಖಲೀಫರು ವಿಶ್ವಪ್ರಯತ್ನ ಮಾಡಿದರೂ ಸಿಂಧ‌ನ ನೆಲದ ಒಂದಿಂಚೂ ಗೆಲ್ಲಲಾಗಲಿಲ್ಲ. ಕೊನೆಗೆ ಅರಬ್ಬರ ಆ ಆಸೆ ಕೈಗೂಡಿದ್ದು ಕ್ರಿ.ಶ ೭೧೨ರಂದು ಮಹಮ್ಮದ್ ಬಿನ್ ಕಾಸಿಂನ ಕಾಲದಲ್ಲಿ. ಸಿಂಧಿನ ರಾಜ ದಾಹಿರಸೇನನ ಆಶ್ರಯ ಬೇಡಿ ಅಲಾಫಿ ಎಂಬ ಅರಬ್ಬಿ ಬಂದ. ಗುಜರಾತಿಗೆ ಬಂದ ಪಾರ್ಸಿಗಳು ಹಾಲಲ್ಲಿ ಬೆರೆತ ಸಕ್ಕರೆಯಾದಂತೆ ಇವರೂ ಆಗಬಹುದೆಂದು ದಾಹಿರಸೇನ ಉದಾರಮನಸ್ಸಿನಿಂದ ಆಶ್ರಯವಿತ್ತ. ಅಲಾಫಿ ಸಕ್ಕರೆಯಾಗುವ ಬದಲು ವಿಷವಾದ. ಇವನ ದ್ರೋಹದಿಂದಲೇ ದಾಹಿರನ ರಾಜ್ಯ ಕಾಸಿಂನ ವಶವಾಯಿತು.
       ಅಲ್ಲಿಂದ ಶುರುವಾಯ್ತು ನೋಡಿ  ಭಾರತದ ಇತಿಹಾಸದ ಕರಾಳ ಅಧ್ಯಾಯಗಳು. ಮುಂದೆ ಬಂದ ಗಜನಿ ಮಹಮ್ಮದನ ಹದಿನೇಳು ’ದಂಡ’ಯಾತ್ರೆಗಳ ಕಥೆ ಎಲ್ಲರೂ ಓದಿದ್ದೇ. ಸೋಮನಾಥ, ಮಥುರಾದ ದೇವಾಲಯಗಳು ಇವನ ಆಕ್ರಮಣಕಾಲದಲ್ಲೇ ನಾಶವಾದವು. ಹೀಗಿದ್ದರೂ ಗಜನಿ ಒಬ್ಬ ಅಪ್ರತಿಮ ಯೋಧನೆಂದೂ, ಅವನೆದುರು ನಿಲ್ಲುವ ಭಾರತೀಯ ರಾಜರ್ಯಾರೂ ಇರಲಿಲ್ಲವೆಂದೂ, ಕಲಾಪೋಷಕನೆಂದೂ, ಸೆಕ್ಯುಲರ್ ಮರ್ಯಾದೆಗಳನ್ನು ಪಾಲಿಸಿದವನೆಂದೂ, ಭಾರತೀಯ ನಗರಗಳಿಗೆ ಸರಿಸಮಾನವಾಗಿ ಗಜನಿ ನಗರವನ್ನು ನಿರ್ಮಿಸಲು ಬಯಸಿದ್ದನೆಂದೂ, ಹಿಂದೂ ದೇವಾಲಯಗಳಲ್ಲಿ ಅಡಗಿದ್ದ ಅಪಾರ ಸಂಪತ್ತಿಗಾಗಿ ಮಾತ್ರ ಅವುಗಳನ್ನು ಒಡೆದನೆಂದೂ ಪಂಡಿತ್ ನೆಹರೂರಿಂದ ಹಿಡಿದು ಎಲ್ಲ ಇತಿಹಾಸಕಾರರು ಗಜನಿಗೆ ಭೇಷ್ ಭೇಷ್ ಎಂದಿದ್ದಾರೆ. ಪರದೇಶಿಗನೊಬ್ಬ ಬರೋಬ್ಬರಿ ಒಂದೂವರೆ ಡಜನ್ ಬಾರಿ ದಂಡೆತ್ತಿ ಬಂದು ಬೃಹದ್ದೇವಾಲಯಗಳನ್ನು ನೆಲಕ್ಕುರುಳಿಸಿ, ಲಕ್ಷಾಂತರ ನರಸಂಹಾರ ಮಾಡಿ, ಇಲ್ಲಿನ ಸಂಪತ್ತನ್ನೆಲ್ಲ ದೋಚಿಕೊಂಡು ಹೋಗುತ್ತಿದ್ದರೆ ತಡೆಯಲು ಶಕ್ತಿಯಿದ್ದ ಒಬ್ಬನೇ ಒಬ್ಬ ರಾಜ ಇಲ್ಲಿರಲಿಲ್ಲವೇ ಈ ನೆಲದಲ್ಲಿ? ಹದಿನೇಳು ದಂಡಯಾತ್ರೆಗಳ ಕಥೆ ಹೇಳುವ ಇತಿಹಾಸಕಾರರ್ಯಾರೂ ಒಂದು ಕಥೆ ಹೇಳುವುದಿಲ್ಲ.
       ಪಂಜಾಬಿನ ರಾಜನಾಗಿದ್ದ ಆನಂದಪಾಲ ಗಜನಿ ಮಹಮ್ಮದನಿಗೆ ಒಂದು ಪತ್ರ ಬರೆಯುತ್ತಾನೆ. ’ನಿನ್ನನ್ನು ನಾನು ಸೋಲಿಸಿದೆ. ಆ ಗೌರವ ನನ್ನನ್ನು ಬಿಟ್ಟು ಇನ್ನೊಬ್ಬನಿಗೆ ಸಿಗುವುದು ನನಗಿಷ್ಟವಿಲ್ಲ. ನಿನ್ನ ಮೇಲೆ ದಂಡೆತ್ತಿ ಯಾರೇ ಬಂದರೂ ಅವರನ್ನು ಸೋಲಿಸಲು ನಾನು ಸಹಾಯ ಮಾಡುತ್ತೇನೆ’, ಇದೇ ಪತ್ರವನ್ನುಲ್ಲೇಖಿಸಿ ಅಲ್ಬೆರೂನಿ ತನ್ನ ’ತಾರಿಖ್ ಉಲ್ ಹಿಂದ್‌’ನಲ್ಲಿ ಗಜನಿ ಮೊಹಮ್ಮದನನ್ನು ನೆಲಕ್ಕಚ್ಚುವಂತೆ ಸೋಲಿಸಿದ ಏಕೈಕ ಭಾರತೀಯ ರಾಜನೆಂದು ಆನಂದಪಾಲನನ್ನು ಬಾಯ್ತುಂಬ ಹೊಗಳಿದ್ದಾನೆ.
       ಈ ಆನಂದಪಾಲ ಬದುಕಿರುವವರೆಗೂ ಅರಬ್ಬಿಗಳು ಕಮಕ್ ಕಿಮಕ್ ಎನ್ನಲಿಲ್ಲ. ಅವನ ಮರಣಾನಂತರ ಮಗ ಜಯಪಾಲನ ಕಾಲದಲ್ಲೇ ಗಜನಿಯ ಹೆಚ್ಚಿನೆಲ್ಲ ಆಕ್ರಮಣಗಳು ನಡೆದಿದ್ದು. ಒಂದೇ ದಿನ ಐವತ್ತು ಸಾವಿರ ಹಿಂದೂಗಳನ್ನು ಕೊಂದ ಸುಲ್ತಾನ ಇಡೀ ಸೋಮನಾಥ ದೇವಾಲಯವನ್ನು ಲೂಟಿ ಹೊಡೆದದ್ದಲ್ಲದೇ ಶಿವಲಿಂಗವನ್ನು ಜಾಮಿ ಮಸೀದಿಯ ಮೆಟ್ಟಿಲಲ್ಲಿ ಬಳಸುವಂತೆ ಆಜ್ಞಾಪಿಸಿದ. ಮುಂದೆ ಪಂಜಾಬಿನ ಹಿಂದೂ ಮಹಾರಾಜ ರಣಜೀತ್ ಸಿಂಗ್ ಅಪ್ಘಾನಿಸ್ತಾನವನ್ನು ಗೆದ್ದು ಗಜನಿ ಕದ್ದೊಯ್ದ ಸೋಮನಾಥ ಮಂದಿರದ ದ್ವಾರಗಳನ್ನೂ, ಚಿನ್ನವನ್ನೂ ವಾಪಸ್ ತಂದ. ಸೋಮನಾಥ ಇನ್ನಿಲ್ಲದಂತೆ ವಿಧ್ವಂಸಗೊಂಡಿರುವುದರಿಂದ ಕೊನೆಗೆ ಈ ಚಿನ್ನವನ್ನು ಈಗ ಸ್ವರ್ಣಮಂದಿರವೆಂದು ಕರೆಯಲ್ಪಡುವ ಅಮೃತಸರದ ಹರಿಮಂದಿರವನ್ನು ಅಲಂಕರಿಸಿ ಸೋಮನಾಥನ ಬಾಗಿಲುಗಳನ್ನು ಅದಕ್ಕೆ ಅಳವಡಿಸಲಾಯಿತು. ಈ ಸ್ವರ್ಣಮಂದಿರದ ಇತಿಹಾಸ ಇನ್ನೂ ಕುತೂಹಲಕಾರಿ. ಇದು ಮೂಲತಃ ಕೃತಯುಗದಲ್ಲಿ ಸೂರ್ಯವಂಶದ ಇಕ್ಷ್ವಾಕು ಮಹಾರಾಜ ನಿರ್ಮಿಸಿದ್ದ ವಿಷ್ಣುಕುಂಡ ಅಥವಾ ಅಮೃತ ಸರೋವರ. ಇಲ್ಲಿ ಗುರು ರಾಮದಾಸರ ಕಾಲದಲ್ಲಿ ಚಿಕ್ಕ ವಿಷ್ಣುವಿನ ಮಂದಿರದ ನಿರ್ಮಾಣವಾಯಿತು. ಅವರ ತರುವಾಯ ಗುರು ಅರ್ಜುನದೇವರು ಅಮೃತ ಸರಸ್ಸನ್ನು ವಿಸ್ತರಿಸಿ ಅದರ ಮಧ್ಯದಲ್ಲಿ ದೊಡ್ಡದೊಂದು ಮಂದಿರವನ್ನು ನಿರ್ಮಿಸಿದರು. ಆಗ ಇದಕ್ಕಿದ್ದ ಹೆಸರು ಹರಿಮಂದಿರ ಸಾಹೇಬ್. ಅಲ್ಲೊಂದು ವಿಶೇಷವಿದೆ. ನಮ್ಮಲ್ಲಿ ಹೆಚ್ಚಿನ ದೇವಾಲಯಗಳು ನಿರ್ಮಾಣವಾಗುವುದು ಬೆಟ್ಟದ ಮೇಲೆ. ಜನ ಕಷ್ಟಪಟ್ಟು ಮೇಲೇರಿ ದರ್ಶನ ಪಡೆಯಲಿ ಎಂದಿರಬಹುದು. ಆದರೆ ಸ್ವರ್ಣಮಂದಿರವಿರುವುದು ತಗ್ಗಿನಲ್ಲಿ. ಮೆಟ್ಟಿಲಿಳಿದು ಕೆಳಗೆ ಹೋಗಿಯೇ ನೋಡಬೇಕು. ಎಷ್ಟೇ ಎತ್ತರದಲ್ಲಿದ್ದರೂ ನೀರು ತಗ್ಗಿನತ್ತ ಹರಿಯಬೇಕು. ನೀರಿನಂತೆ ಮನುಷ್ಯ ಎಷ್ಟು ದೊಡ್ಡವನಾದರೂ ತನ್ನ ಅಹಂಕಾರ ಬಿಟ್ಟು ಕೆಳಗಿಳಿದು ದೇವರತ್ತ ಬರಲಿ ಎಂಬುದು ಅದರ ಹಿಂದಿನ ಮರ್ಮವಂತೆ.  ಮುಸ್ಲಿಂ ಆಕ್ರಮಣಕಾರರು ಪಂಜಾಬಿನ ಮೇಲೆ ದಾಳಿ ಮಾಡಿದಷ್ಟೂ ಸಲ ಈ ಹರಿಮಂದಿರ ನಾಶವಾಗಿದೆ. ನಾದಿರ್ ಷಾ, ಅಹ್ಮದ್ ಅಲಿ ಅಬ್ದಾಲಿ, ಮೊಘಲ ಸುಲ್ತಾನರ ಕಾಲದಲ್ಲೆಲ್ಲ ಬಾರಿ ಬಾರಿ ಮಂದಿರ ನೆಲಸಮವಾದರೂ ಅಷ್ಟೇ ವೇಗವಾಗಿ ಮೊದಲಿಗಿಂತ ಸುಂದರವಾಗಿ, ಭವ್ಯವಾಗಿ ಪುನರ್ನಿರ್ಮಾಣಗೊಂಡು ತಲೆ ಎತ್ತಿನಿಂತಿದೆ. ಈಗಿರುವ ಭವ್ಯ ಕಟ್ಟಡ ತಲೆ ಎತ್ತಿದ್ದು ೧೮೦೩ರಲ್ಲಿ ರಣಜೀತ್ ಸಿಂಗನ ಕಾಲದಲ್ಲೇ. ಆತ ಸಾವಿರಾರು ಕೇ.ಜಿ ಚಿನ್ನವನ್ನು ಇದರ ನಿರ್ಮಾಣಕ್ಕೆ ಬಳಸಿದ್ದರಿಂದ ಹರಿಮಂದಿರ ಸ್ವರ್ಣಮಂದಿರವೆಂದು ಕರೆಯಲ್ಪಟ್ಟಿತು. ಇದೊಂದು ಅಪ್ಪಟ ಹಿಂದೂ ದೇವಾಲಯ. ಗುರುನಾನಕರು ಸಿಖ್ ಪಂಥದ ಸ್ಥಾಪಕರು, ಹಿಂದೂ, ಮುಸ್ಲಿಮರ ಭಾವೈಕ್ಯತೆಗಾಗಿ ದುಡಿದ ಮಹನೀಯರು, ಸಿಖ್ಖರು ಹಿಂದೂಗಳಲ್ಲ ಎಂದು ಇತಿಹಾಸಕಾರಾಗಲೀ ಸರ್ಕಾರಗಳಾಗಲೀ ಪುಸ್ತಕಗಳಲ್ಲಿ ಎಷ್ಟೇ ಪುಂಗಿ ಊದಿದರೂ (ಕನ್ನಡ ಪುಸ್ತಕ ಪ್ರಾಧಿಕಾರ ಜಾಗತಿಕ ಚಿಂತಕರ ಮಾಲೆಯಡಿ ೨೦೦೧ ರಲ್ಲಿ ಹೊರತಂದ ಗುರುನಾನಕ್ ಪುಸ್ತಕ ನೋಡಿ) ಅವರೊಬ್ಬ ಅಪ್ಪಟ ಹಿಂದೂ ವೈಷ್ಣವ ಸಂತ. ನಾನಕರು ಬಳಸುತ್ತಿದ್ದ ರುದ್ರಾಕ್ಷಿಮಾಲೆ, ಸೇಲಿ ಟೋಪಿ, ಪೂಜಿಸುತ್ತಿದ್ದ ಸಾಲಿಗ್ರಾಮ ಇಂದಿಗೂ ಕರ್ತಾರ್‌ಪುರ್ ಕೋಟೆಯಲ್ಲಿ ಸುರಕ್ಷಿತವಾಗಿವೆ. ’ತತ್ ಖಾಲ್ಸಾ’ ಸ್ಥಾಪನೆಯಾಗುವವರೆಗೂ ಬರೆಯಲ್ಪಟ್ಟ ನಾನಕರ ಚಿತ್ರಗಳಲ್ಲೆಲ್ಲ ಅವರನ್ನು ಜಪಮಾಲೆ,ಕಮಂಡಲ ಹಿಡಿದ, ಹಣೆಯಲ್ಲಿ ವೈಷ್ಣವರ ನಾಮ, ಭಕ್ತಿಪಂಥದ ಸೇಲಿ ಟೋಪಿ ಧರಿಸಿದವರಾಗಿಯೇ ಚಿತ್ರಿಸಲಾಗಿದೆ. ತತ್ ಖಾಲ್ಸಾದಂಥ ಸಂಘಟನೆಗಳು ಪ್ರವರ್ಧಮಾನಕ್ಕೆ ಬಂದಂತೆ ನಾಮ ಮರೆಯಾಯ್ತು, ಟೋಪಿ ಹೋಗಿ ಟರ್ಬನ್ ಬಂದಿತು. ತಾವು ಹಿಂದೂಗಳಲ್ಲ ಎಂದು ಒಪ್ಪಿಕೊಳ್ಳುವಂತೆ ಸಿಖ್ಖರನ್ನು ಬಲವಂತವಾಗಿ ಬ್ರೇನ್ ವಾಶ್ ಮಾಡಲಾಯ್ತು. ಹಿಂದೂ ಇಸ್ಲಾಂಗಳೆರಡನ್ನೂ ಸೇರಿಸಿ ’ಸಿಖ್’ ಎಂಬ ಹೊಸ ಧರ್ಮವನ್ನು ಸ್ಥಾಪಿಸಿದರು ಎಂದು ಶಾಲೆಯ ಇತಿಹಾಸದ ಪುಸ್ತಕಗಳು ಒದರಿಕೊಂಡರೂ ಯಾವ ನಾನಕ ಪಂಥದ ಗುರುಗಳೂ ತಾವು ಅಹಿಂದೂಗಳೆಂದು ಹೇಳಿಕೊಂಡಿಲ್ಲ. ನಾನಕರಿಗೆ ವೈಷ್ಣವ ದೀಕ್ಷೆ ನೀಡಿದ್ದು ಬಂಗಾಳದ ಭಕ್ತಿ ಪಂಥದ ಸರ್ವೋಚ್ಚ ಸಂತರಲ್ಲೊಬ್ಬರಾದ ಪ್ರಭು ನಿತ್ಯಾನಂದರು. ಪುರಿಯಲ್ಲಿ ನಾನಕ ಮತ್ತು ಚೈತನ್ಯ ಮಹಾಪ್ರಭುಗಳಿಬ್ಬರೂ ಭೇಟಿಯಾಗಿ ಜಗನ್ನಾಥನನ್ನು ಕೀರ್ತಿಸಿದ ಬಗ್ಗೆ ಚೈತನ್ಯರ ಶಿಷ್ಯ ಬರೆದ ಚೈತನ್ಯ ಭಾಗವತದಲ್ಲಿ ಉಲ್ಲೇಖವಿದೆ. ಶ್ರೀಲಂಕಾಕ್ಕೆ ಭೇಟಿ ನೀಡಿದಾಗ ಅಲ್ಲಿನ ಶೈವ ರಾಜ ಸಿಯೋನಾಥ ನಾನಕರನ್ನು ’ನಾನಕಾಚಾರ್ಯ’ರೆಂದು ಕರೆದು ಬರೆಸಿದ ಶಾಸನ ಲಭ್ಯವಿದೆ. ಇಷ್ಟಿದ್ದರೂ ನಾನಕರನ್ನು ಸೂಫಿ ಸಂತನ ಪದವಿಗಿಳಿಸುವ ಕೆಲಸವಿನ್ನೂ ನಿಂತಿಲ್ಲ. ಹಾಗೆ ಮಾಡುತ್ತಿರುವವರ್ಯಾರೂ ಗುರುಗ್ರಂಥಸಾಹೇಬ ಓದಿಲ್ಲ.
गुरमुखि नादं गुरमुखि वेदं गुरमुखि रहिआ समाई ॥
गुरु ईसरु गुरु गोरखु बरमा गुरु पारबती माई ॥
ಗುರುವೇ ನಾದ, ಗುರುವೇ ವೇದ, ಗುರು ಈಶ್ವರ, ಗುರು ಶಿವ-ವಿಷ್ಣು, ಗುರುವೇ ಪಾರ್ವತಿ ಲಕ್ಷ್ಮಿ.
 ಹಿಂದೂ ಧರ್ಮದಿಂದ ಸಿಖ್ಖರನ್ನು ಬೇರ್ಪಡಿಸಿ ಅವರನ್ನು ಮೂರ್ಖರನ್ನಾಗಿಸುವಲ್ಲಿ ಬ್ರಿಟಿಷರ ಡಿವೈಡ್ ಎಂಡ್ ರೂಲ್ ತುಂಬ ಅಚ್ಚುಕಟ್ಟಾಗಿ ಕೆಲಸ ಮಾಡಿದೆ. ೧೯೦೫ರಲ್ಲಿ ಕ್ರಿಶ್ಚಿಯನ್ ಮಿಶನರಿಯ ’ಮ್ಯಾಕ್ಸ್ ಅರ್ಥರ್ ಮೆಕಾಲ್ಲಿಫ್‌’ ಎಂಬ ಇತಿಹಾಸಕಾರನಿಂದ ಬ್ರೇನ್ ವಾಶ್‌ಗೊಳಪಟ್ಟ ’ತತ್ ಖಾಲ್ಸಾ ಸಿಂಗ್ ಸಭಾ’ ಸ್ವರ್ಣಮಂದಿರದೊಳಗಿದ್ದ ವಿಷ್ಣು ಮತ್ತು ಶಿವನ  ಮೂರ್ತಿಗಳನ್ನು ಹೊರಕ್ಕೆಸೆಯಿತು. ಈ ಮಹಾಶಯ ಬರೆದ ಸಿಖ್ ಇತಿಹಾಸದ ಗ್ರಂಥಗಳೇ ಇಂದಿನವರಿಗೆ ಪೂಜ್ಯ ಗ್ರಂಥ. ಸಿಖ್ಖರ ಬಗ್ಗೆ ಇರುವ ಇತಿಹಾಸವನ್ನೆಲ್ಲ ಮೂಲೆಗೆ ಸರಿಸಿ ಹೊಸ ಸೃಷ್ಟಿಯನ್ನೇ ಮಾಡಿದ ಮೆಕಾಲ್ಲಿಫ್ ಯಾವ ಮ್ಯಾಕ್ಸ್ ಮುಲ್ಲರಿಗೂ ಕಡಿಮೆಯಿಲ್ಲದಷ್ಟು ಪ್ರತಿಭಾವಂತ. ಇವನಿಂದ ಪ್ರೇರೇಪಿತಗೊಂಡ ಕಾಹನ್ ಸಿಂಗ್ ನಭಾ ರಚಿಸಿದ ’ಹಮ್ ಹಿಂದೂ ನಹೀ’ ಖಾಲ್ಸಾಗಳಿಗೆ ಅಧಿಕೃತ ಇತಿಹಾಸ. ಸಿಖ್ಖರ ದಾರಿ ತಪ್ಪಿಸಲು ನಾನಕದೇವರ ಜನ್ಮವೃತ್ತಾಂತ ’ಜನಮ್‌ಸಾಖಿ’ಯ ಬೇರೆ ಬೇರೆ ವರ್ಷನ್ನುಗಳು ಹುಟ್ಟಿಕೊಂಡವು. ಓಂಕಾರ ಇಕ್‌ಓನ್ಕಾರವಾಯ್ತು. ನಾನಕರು ಸೂಫಿಗಳಾಗಿದ್ದರೆಂದೂ, ಸ್ವರ್ಣಮಂದಿರವನ್ನು ನಿರ್ಮಿಸಲು ಪ್ರೇರೇಪಿಸಿದ್ದು ’ಮಿಯಾನ್ ಮೀರ್’ ಎಂಬ ಸೂಫಿ ಸಂತರೆಂಬ ಹೊಸ ಕತೆ ಶುರುವಾಯ್ತು. ’ಹರಿಮಂದಿರ’ವು ’ದರ್ಬಾರ್ ಸಾಹೇಬ್’ ಆಗಿಯೂ, ನಾನಕರ ’ಶ್ರೀಆದಿಗ್ರಂಥಜಿ’ಯು ’ಗುರು ಗ್ರಂಥ್ ಸಾಹೇಬ್’ ಆಗಿಯೂ ನಾಮಾಂತರಗೊಂಡವು. ಇವತ್ತಿಗೂ ಖಾಲ್ಸಾದಿಂದ ಪ್ರಭಾವಿತರಾದ ಸಿಖ್ಖರ್ಯಾರೂ ತಾವು ಹಿಂದೂಗಳೆಂದು ಒಪ್ಪಲು ತಯಾರಿಲ್ಲ. ಪಾಪ, ಹೀಗೆನ್ನುವವರಿಗ್ಯಾರೂ ಅವರ ಇತಿಹಾಸವೇ ಗೊತ್ತಿಲ್ಲ. 
ನಾನಕರ ಸೇಲಿ ಟೋಪಿ, ತಿಲಕ, ಜಪಮಾಲೆ ಗಮನಿಸಿ
ನಾನಕರು ಬಳಸುತ್ತಿದ್ದ ಸಾಲಿಗ್ರಾಮ, ಜಪಮಾಲೆ

ಕ್ರಿ.ಶ ೧೬೭೫ ಜುಲೈ,
        ದೇವಸ್ಥಾನಗಳನ್ನು ಬೀಳಿಸಿಯಾಯ್ತು, ವಿದ್ಯಾಸಂಸ್ಥೆಗಳನ್ನು ಕೆಡವಿಯಾಯ್ತು, ಹಿಂದೂಗಳಾಗಿ ಬದುಕುವುದಕ್ಕೂ ತೆರಿಗೆ ಕಟ್ಟುವ ಪರಿಸ್ಥಿತಿ. ಹಣೆಯಲ್ಲಿ ತಿಲಕ, ಭುಜದ ಮೇಲೆ ಜನಿವಾರ ಕಂಡಕೂಡಲೆ ಅಂಥವರನ್ನು ಕತ್ತರಿಸಿ ಹಾಕುವಂತೆ ಔರಂಗಜೇಬ ಆಪ್ಪಣೆ ಹೊರಡಿಸಿದ್ದ. ಕಾಶ್ಮೀರವೊಂದರಲ್ಲೇ ದಿನಕ್ಕೆ ಒಂದು ಮಣಭಾರದ ಜನಿವರಾಗಳ ರಾಶಿ ಬೀಳುತ್ತಿತ್ತಂತೆ. ಇನ್ನು ಮೊಘಲರ ಆಳ್ವಿಕೆಯಲ್ಲಿ ಬದುಕಲು ಸಾಧ್ಯವೇ ಇಲ್ಲವೆಂಬಷ್ಟು ಹಿಂಸೆ ಅತಿಯಾದಾಗ ಕಾಶ್ಮೀರಿ ಪಂಡಿತರ ಗುಂಪೊಂದು ಸಿಖ್ ಗುರು ತೇಜಬಹದ್ದೂರರ ಶರಣು ಬಂತು. ಕಾಶ್ಮೀರಿ ಬ್ರಾಹ್ಮಣರಿಗೆ ಸಿಖ್ ಮತದಲ್ಲಿ ವಿಶಿಷ್ಟವಾದ ಸ್ಥಾನವಿದೆ. ಆದಿಗ್ರಂಥದ ಮೂರು ಭಾಗಗಳಾದ ಗುರ್ಬಾನಿ, ಭಟ್ಟಬಾನಿ, ಭಗತ್‌ವಾನಿಗಳಲ್ಲಿ ’ಭಟ್ಟವಾಣಿ’ಯನ್ನು ರಚಿಸಿದ್ದು ಕಾಶ್ಮೀರಿ ಬ್ರಾಹ್ಮಣರೇ. ಆದಿಗ್ರಂಥದ ೩೬ ರಚನಕಾರರಲ್ಲಿ ೧೯ ಜನ ಬ್ರಾಹ್ಮಣರು. ಹೀಗಿರುವಾಗ ಶರಣು ಬಂದವರ ಕೈಬಿಡಲು ತೇಜಬಹದ್ದೂರರಿಗೆ ಮನಸ್ಸಾಗಲಿಲ್ಲ. ಇದೇ ಔರಂಗಜೇಬನ ಅಜ್ಜ ಜಹಾಂಗೀರ್ ಹಿಂದೂ ಮತದ್ವೇಷದ ಕಾರಣದಿಂದ ಗುರು ಅರ್ಜುನದೇವರನ್ನು ರಾವಿ ನಡಿದಡದಲ್ಲಿ ಕೊತಕೊತ ಕುದಿಯುತ್ತಿದ್ದ ಮರಳು ತುಂಬಿದ ಹಂಡೆಯಲ್ಲಿ ಕೂರಿಸಿ ಕ್ರೂರವಾಗಿ ಹತ್ಯೆಗೈದಿದ್ದ. ಆದರೂ ತೇಜಬಹದ್ದೂರರು ಹೆದರಲಿಲ್ಲ. ೧೬೭೫ ಜುಲೈ ೮ರಂದು ಆನಂದಪುರದಲ್ಲಿ ’ಸಿಖ್ ಸಂಗತ್’ನ್ನು ಸಮಾವೇಶಗೊಳಿಸಿ ತಮ್ಮ ಮಗ ಗೋವಿಂದನನ್ನು ಉತ್ತರಾಧಿಕಾರಿಯನ್ನಾಗಿಸಿ ಮೂರು ಶಿಷ್ಯರೊಂದಿಗೆ ದೆಹಲಿಗೆ ಪ್ರಯಾಣಿಸಿದರು. ತನ್ನನ್ನು ಮತಾಂತರಗೊಳಿಸಿದರೆ ಇಡೀ ಹಿಂದೂ ಸಮುದಾಯವೇ ಇಸ್ಲಾಂ ಸ್ವೀಕರಿಸುವುದಾಗಿ ಜೇಬನಿಗೆ ಸಂದೇಶ ಕಳುಹಿಸಿದರು. ಹಿಂದೂಗಳಲ್ಲಿ ಬಂಡಾಯವನ್ನು ಪ್ರೇರೇಪಿಸುತ್ತಿದ್ದಾನೆಂದು ಆರೋಪಿಸಿ ಸಟ್ಲೇಝ್ ನದಿಯನ್ನು ದಾಟುತ್ತಿದ್ದಂತೆ ರೂಪಾರ್‌ನಲ್ಲಿ ದಾರಿಮಧ್ಯದಲ್ಲೇ ತೇಜಬಹದ್ದೂರರನ್ನು ಬಂಧಿಸಲಾಯ್ತು. ಮೂರು ತಿಂಗಳು ಸೆರೆಯಲ್ಲಿ ಚಿತ್ರಹಿಂಸೆ ನೀಡಿದರೂ, ಅವರ ಅನುಯಾಯಿಗಳನ್ನೆಲ್ಲ ಚಿತ್ರಹಿಂಸೆ ಕೊಟ್ಟು ಕೊಂದರೂ ಆ ಸಾಧು ಮತಾಂತರಕ್ಕೆ ಒಪ್ಪಲಿಲ್ಲ. ಅವರ ಅನುಯಾಯಿ ಭಾಯಿ ಮತಿದಾಸನನ್ನು ತಲೆಯಿಂದ ಕಾಲಿನವರೆಗೆ ಗರಗಸದಿಂದ ಸೀಳಿ ಜರಾಸಂಧನಂತೆ ಕತ್ತರಿಸಲಾಯ್ತು, ಭಾಯಿ ದಯಾಳ ದಾಸನನ್ನು ಕುದಿವ ನೀರಲ್ಲಿ ಮುಳುಗಿಸಿಲಾಯ್ತು. ಸತಿದಾಸನನ್ನು ಹತ್ತಿಯ ರಾಶಿಯಲ್ಲಿ ಕೂರಿಸಿ ಬೆಂಕಿ ಹಚ್ಚಿದರು. ತೇಜಬಹದ್ದೂರರ ಮನಸ್ಸು ಒಂದಿಂಚೂ ವಿಚಲಿತವಾಗಲಿಲ್ಲ. ಕೊನೆಗೆ ಜೈಲಿನಿಂದ ರಾಣಿಯ ಅಂತಃಪುರದತ್ತ ನೋಡುತ್ತಿದ್ದ ಎಂಬಂಥ ತಲೆಬುಡವಿಲ್ಲದ ಆರೋಪಗಳನ್ನೆಲ್ಲ ಹೊರಿಸಿ ನವೆಂಬರ್ ೧೧ರಂದು ಚಾಂದನೀ ಚೌಕದಲ್ಲಿ ಎಲ್ಲರೆದುರು ಗುರುದೇವರ ತಲೆ ಕಡಿದರು. ತೇಜಬಹದ್ದೂರರ ತಲೆಯನ್ನು ಆನೆಯ ಮೇಲಿರಿಸಿ ದೆಹಲಿಯ ಬಾಜಾರುಗಳಲ್ಲಿ ಮೆರವಣಿಗೆ ಮಾಡಿಸಿ ಸಾರ್ವಜನಿಕ ಪ್ರದರ್ಶನಕ್ಕಿಡಲಾಯಿತು. ಆ ಬರ್ಬರ ಕ್ರೌರ್ಯವನ್ನು ನೋಡಿ ದೆಹಲಿಗರ ಉಸಿರಡಗಿಹೋಯಿತು. ಸೊಲ್ಲೆತ್ತುವ ಧೈರ್ಯವಿರುವವರೊಬ್ಬನೂ ಇರಲಿಲ್ಲ. ಲಕ್ಷಾಂತರ ಅನುಯಾಯಿಗಳಿರುವ ಗುರುಗಳಿಗೇ ಈ ಗತಿಯಾದರೆ ಸಾಮಾನ್ಯರ ಪಾಡೇನು! ಔರಂಗಜೇಬ ಎಲ್ಲಿ ತಮ್ಮನ್ನೇನಾದರೂ ಮಾಡಿಬಿಟ್ಟಾನೆಂಬ ಹೆದರಿಕೆಯಿಂದ ಕತ್ತರಿಸಿ ಬಿದ್ದಿದ್ದ ದೇಹದ ಹತ್ತಿರ ಹೋಗುವ ಸಾಹಸವನ್ನೂ ಯಾರೊಬ್ಬರೂ ಮಾಡಲಿಲ್ಲ. ಆದರೆ ಶಿಷ್ಯರು ಸುಮ್ಮನಿರುತ್ತಾರೆಯೇ!  ಭಾಯಿ ಜೈತಾ ಎಂಬ ಶಿಷ್ಯನೊಬ್ಬ ಸಮಯಕಾದು ರಾತ್ರೋರಾತ್ರಿ ತೇಜಬಹದ್ದೂರರ ತಲೆಯನ್ನು ಜೋಳಿಗೆಯಲ್ಲಿ ಹಾಕಿಕೊಂಡು ಮಾರುವೇಷದಲ್ಲಿ ಆನಂದಪುರ್ ಸಾಹಿಬ್‌ಗೆ ಪ್ರಯಾಣ ಬೆಳೆಸಿದ. ಇನ್ನೊಬ್ಬ ಶಿಷ್ಯ ಲಖಿ ಷಾ ಬಂಜಾರಾ ಅದೇ ರಾತ್ರಿ ತೇಜಬಹದ್ದೂರರ ಮುಂಡವನ್ನು ಮನೆಗೆ ಹೊತ್ತು ತಂದಿಟ್ಟುಕೊಂಡ. ರಾತ್ರಿ ಕಳೆದು ಬೆಳಗಾದರೆ ಮುಘಲ್ ಸೈನಿಕರು ಕಳೆದು ಹೋದ ದೇಹವನ್ನು ಹುಡುಕಿಕೊಂಡು ಬರುತ್ತಿದ್ದರು. ಆಧ್ಯಾತ್ಮಗುರುವೊಬ್ಬನ ದೇಹವನ್ನು ದಫನ ಮಾಡದೇ ಹಾಗೆ ಬಿಡಲು ಅವನಿಗೆ ಮನಸ್ಸಾಗಲಿಲ್ಲ. ಲಖಿ ಷಾ ಗುರುವಿನ ಮುಂಡವನ್ನು ತಬ್ಬಿಕೊಂಡು ತನ್ನ ಮನೆಗೇ ಬೆಂಕಿಹಚ್ಚಿಕೊಂಡು ಬೂದಿಯಾದ. ೧೭೮೩ರಲ್ಲಿ ದೆಹಲಿಯನ್ನಾಕ್ರಮಿಸಿ ಮುಘಲರನ್ನು ಬಗ್ಗುಬಡಿದ ಸಿಖ್ಖರ ಮಿಲಿಟರಿ ನಾಯಕ ’ಬಾಘಲ್ ಸಿಂಘ್’ ತೇಜಬಹದ್ದೂರರನ್ನು ಹತ್ಯೆಗೈದ ಅದೇ ಸ್ಥಳದಲ್ಲಿ ಸ್ಮಾರಕವಾಗಿ ಗುರುದ್ವಾರ ’ಶೀಷ್(ಶೀಷ್ = ತಲೆ) ಗಂಜ್ ಸಾಹೇಬ’ನ್ನೂ, ದೇಹವನ್ನು ದಹನಮಾಡಿದ ಮನೆಯಿದ್ದ ಜಾಗದಲ್ಲಿ ಗುರುದ್ವಾರ ’ರಕಬ್ ಗಂಜ್ ಸಾಹೇಬ್‌’ನ್ನೂ ನಿರ್ಮಿಸಿದ. ದೆಹಲಿಯ ಅತ್ಯಂತ ಹಳೆಯ ಗುರುದ್ವಾರಗಳಲ್ಲೊಂದಿವು. ಇಂಥ ತೇಜಬಹದ್ದೂರರನ್ನು ದಾರಿಹೋಕರ ದರೋಡೆಕೋರನೆಂದು, ಔರಂಗಜೇಬನನ್ನು ಹಿಂದೂದ್ವೇಷವಿಲ್ಲದ ಸೆಕ್ಯುಲರ್ ಮನುಷ್ಯನೆಂದು ಜುದಾನಾಥ್ ಸರ್ಕಾರ್ ಸೇರಿ ಬಹಳಷ್ಟು ಮಾರ್ಕ್ಸಿಸ್ಟ್ ಬ್ರಹ್ಮರು ಚಿತ್ರಿಸಿದ್ದಾರೆ. ಗುರು ಗ್ರಂಥ ಸಾಹೇಬದ ಭಟ್ಟ ವಾಹಿಗಳಲ್ಲಿ, ಭಟ್ಟ ವಾಣಿಗಳಲ್ಲಿ. ಗುರು ಕಿಯಾಂ ಸಖಿಯಾಂಗಳಂಥ ಪ್ರಾಮಾಣಿಕ ಸಿಖ್ ಗ್ರಂಥಗಳಲ್ಲಿ ತೇಜಬಹದ್ದೂರರ ಅಮರಗಾಥೆಯ ಸವಿಸ್ತಾರ ಚಿತ್ರಣವಿಲ್ಲದಿದ್ದರೆ ಇಷ್ಟೊತ್ತಿಗಾಗಲೇ ಮಾರ್ಕ್ಸಿಸ್ಟ್ ಇತಿಹಾಸಕಾರರು ಸಿಖ್ ಗುರುಗಳನ್ನು ಹುರಿದು ಮುಕ್ಕಿ ಬಿಡುತ್ತಿದ್ದರೇನೋ. 
ರಕಬ್ ಗಂಜ್ ಸಾಹೇಬ್‌,
ಶೀಷ್ ಗಂಜ್ ಸಾಹೇಬ, ಚಾಂದನೀ ಚೌಕ್
        ತೇಜಬಹದ್ದೂರರ ಬಲಿದಾನ ಪಂಜಾಬ್ ಸೇರಿ ಇಡೀ ಉತ್ತರ ಭಾರತದಲ್ಲಿ ಮೊಘಲರ ವಿರುದ್ಧ ಹೋರಾಡಲು ದೊಡ್ಡ ರಾಜಕೀಯ ಚೈತನ್ಯವೊಂದನ್ನು ಹುಟ್ಟುಹಾಕಲು ಕಾರಣವಾಯ್ತು. ಒಂಭತ್ತನೇ ವರ್ಷಕ್ಕೆ ಪೀಠವೇರಿದ ಗುರು ಗೋವಿಂದ ಸಿಂಗರು ತನ್ನ ಹತ್ತೊಂಭತ್ತನೇ ವರ್ಷಕ್ಕೆ ಬಲಿಷ್ಟ ಸೇನೆಯನ್ನು ಕಟ್ಟಿಕೊಂಡು ಆನಂದಪುರವನ್ನು ರಾಜಧಾನಿಯನ್ನಾಗಿಸಿಕೊಂಡು ಸಿಖ್ ಸಾಮ್ರಾಜ್ಯವನ್ನು ಸ್ವತಂತ್ರವಾಗಿ ಆಳಲಾರಂಭಿಸಿದರು. ಅಲ್ಲಿಯವರೆಗೂ ಶಾಂತಿ, ಸೌಹಾರ್ದತೆಯ ಪ್ರತೀಕವಾಗಿದ್ದ ಸಿಖ್ಖರು ಕತ್ತಿ ಹಿಡಿದು ಹೋರಾಟಗಾರರಾದರು. ಮತಾಂಧತೆಗೆ ಪ್ರತಿ ಮತಾಂಧತೆಯ ರೋಶದಲ್ಲಿ ಸಿಖ್ಖರ ಸೇನಾಬಲ ಸುಮಾರು ಒಂದು ಲಕ್ಷದಷ್ಟಾಯಿತು. ಎರಡೇ ವರ್ಷದಲ್ಲಿ ಆನಂದಗಢ್, ಕೇಶಗಢ್, ಲೋಹಗಢ್ ಮತ್ತು ಫತೇಗಢ್‌ಗಳಲ್ಲಿ ಕೋಟೆಗಳ ನಿರ್ಮಾಣವಾಯಿತು. ಪಂಜಾಬ್ ಪ್ರಾಂತ್ಯದ ರಾಜ ಭೀಮಚಂದ್, ಪಂಜಾಬ್ ಮತ್ತು ಕಾಶ್ಮೀರ ಪ್ರಾಂತ್ಯದ ಮರಿಕಿರಿ ರಾಜರುಗಳೆಲ್ಲ ಒಟ್ಟಾಗಿ ಒಂದೇ ಸಾರಿ ಸಿಖ್ಖರ ಮೇಲೆ ಮುಗಿಬಿದ್ದರೂ ಭಂಗಾನಿ ಎಂಬ ಸ್ಥಳದಲ್ಲಿ ನಡೆದ ಐತಿಹಾಸಿಕ ಯುದ್ಧದಲ್ಲಿ ಗೋವಿಂದ ಸಿಂಗರು ಘನವಿಜಯ ಸಾಧಿಸುವುದರೊಂದಿಗೆ ಅವರ ಕೀರ್ತಿ ಭಾರತದಾದ್ಯಂತ ಹಬ್ಬಿತು. ಆಗವರಿಗೆ ಬರೀ ಹತ್ತೊಂಬತ್ತು ವರ್ಷ. ಸೋತ ವೈರಿಗಳು ದೆಹಲಿ ಬಾದಷಾ ಔರಂಗಜೇಬನಿಗೆ ದೂರಿತ್ತರು. ಪಂಜಾಬಿನ ಕಡೆಯಿಂದ ಕಪ್ಪ ಸರಿಯಾಗಿ ಬರುತ್ತಿಲ್ಲವೆಂಬ ನೆವ ಮುಂದಿಟ್ಟುಕೊಂಡು ದಿಲ್ಲಿ ಸುಲ್ತಾನರು ಪಂಜಾಬ್ ಪ್ರಾಂತ್ಯದ ಮೇಲೆ ಯುದ್ಧ ಸಾರಿದರು. ನಾದೌನ್‌ನಲ್ಲಿ ನಡೆದ ಯುದ್ಧದಲ್ಲಿ ಮುಘಲರ ಸೇನಾಪತಿ ಅಲಿಫ್‌ಖಾನನೂ ಪರಾಭಗೊಂಡ. ಗುರುಗೋವಿಂದ ಸಿಂಗರು ರಚಿಸಿದ ಅವನ ಜೀವನಕಥೆ ’ಬಿಚಿತ್ರ ನಾಟಕ’ದಲ್ಲಿ ಈ ಎಲ್ಲ ಯುದ್ಧಗಳ ವಿವರಣೆಯಿದೆ. ಸೂರ್ಯವಂಶದ ವರ್ಣನೆಯಿಂದ ಶುರುವಾಗಿ ರಾಮ, ಲವ-ಕುಶರ ಸ್ತುತಿ, ಹತ್ತು ಗುರುಗಳ ವರ್ಣನೆ, ಗೋವಿಂದರ ಜೀವನಗಾಥೆಗಳ ಸಂಗ್ರಹ ಈ ಬೃಜ್ ಭಾಷೆಯ ಬಿಚಿತ್ರ ನಾಟಕದಲ್ಲಿದೆ.
       ೧೬೯೯ರ ಬೈಸಾಕಿ ಹಬ್ಬದ ದಿನ ಕೇಶ್‌ಗಢ್‌ನಲ್ಲಿ ನಡೆದ ದೊಡ್ಡ ದರ್ಬಾರಿನಲ್ಲಿ ಖಾಲ್ಸಾವನ್ನು ಸ್ಥಾಪನೆ ಮಾಡಿ ಪಂಚಪ್ಯಾರೆಗಳಿಗೆ ದೀಕ್ಷೆ ನೀಡುವುದರೊಂದಿಗೆ ಸಿಖ್ಖರು ಪ್ರಚಂಡವಾದ ಮತಾಭಿಮಾನದಿಂದ ಪಂಥದ ರಕ್ಷಣೆಗೆ ಆಯುಧಗಳನ್ನು ಧರಿಸಿ ವೀರಭದ್ರರಂತೆ ವಿಜೃಂಭಿಸಿದರು. ಜಾತಿಮತವನ್ನು ಮೀರಿ ಎಲ್ಲರೂ ’ಸಿಂಹ(ಸಿಂಗ್)’ಗಳಾದರು. ಸರ್ವಸಮಾನತೆಯ ಹೊಸ ಹಾದಿ ಸಮಾಜದ ಎಲ್ಲ ವರ್ಗಗಳನ್ನೂ ಬಹುವಾಗಿ ಆಕರ್ಷಿಸಿತು. ಮೊದಲೇ ಪೂರ್ವದಲ್ಲಿ ರಜಪೂತರು, ದಕ್ಷಿಣದಲ್ಲಿ ಮರಾಠರ ಪೆಟ್ಟಿಗೆ ಕಂಗಾಲಾಗಿದ್ದ ಔರಂಗಜೇಬ ಉತ್ತರದಲ್ಲಿ ಸಿಖ್ಖರ ಪ್ರಾಬಲ್ಯದಿಂದ ತತ್ತರಿಸಿಹೋದ. ಹೇಳಿಕೇಳಿ ಆವ ಔರಂಗಜೇಬ. ಕುಯುಕ್ತಿಯಲ್ಲಿ ಇಡೀ ಇತಿಹಾಸದಲ್ಲಿ ಅವನನ್ನು ಮೀರಿಸಿದವರಿಲ್ಲ. ಹಿಂದೆ ಗೋವಿಂದಸಿಂಗರಿಂದ ಉಪಕ್ರತರಾದ ಅರಸರೆಲ್ಲ ಅವರ ವಿರುದ್ಧ ತಿರುಗಿ ಬೀಳುವಂತೆ ಮಾಡಿದ. ಇನ್ನೊಂದು ಕಡೆ ಗವರ್ನರ್ ವಾಜಿರ್ ಖಾನ್ ಭಾರೀ ಸೈನ್ಯದೊಂದಿಗೆ ಕಣಕ್ಕಿಳಿದ. ಹಾಗೆ ನಡೆದ ನಾಲ್ಕೂ ದಂಡಯಾತ್ರೆಗಳಲ್ಲೂ ಮುಘಲರ ಕೈಲಿ ಸಿಖ್ಖರನ್ನು ಗೆಲ್ಲಲಾಗಲಿಲ್ಲ. ಕೊನೆಗೆ ಜೇಬ ಒಂದು ಪತ್ರ ಕಳುಹಿಸಿದ. ಆನಂದಪುರವನ್ನು ಬಿಟ್ಟುಹೋದರೆ ಕುರಾನಿನ ಆಣೆಯಾಗಿ ಯಾರಿಗೂ ತೊಂದರೆ ಕೊಡುವುದಿಲ್ಲವೆಂದು. ಈ ಮಾತನ್ನು ನಂಬಿ ಗೋವಿಂದ ಸಿಂಗರು ತಮ್ಮವರೊಡನೆ ಆನಂದಪುರವನ್ನು ತೊರೆದರೆ ಮರುರಾತ್ರಿಯೇ ಮುಘಲರ ಬಣ್ಣ ಬದಲಾಯ್ತು. ಜೇಬನ ಸೈನಿಕರು ಕೋಟೆಯನ್ನು ಬಿಟ್ಟು ಬಯಲಿಗೆ ಬಂದ ಜನರ ಮೇಲೆ ಮುಗಿಬಿದ್ದು ಬೇಟೆಯಾಡಿದರು. ಸಿರ್ಸಾ ನದಿದಡದಲ್ಲಿ ನಡೆದ ಸಂಗ್ರಾಮದಲ್ಲಿ ಗುರುಗೋವಿಂದರ ಹೆಚ್ಚಿನ ಅನುಚರರೆಲ್ಲ ಒಂದೇ ಪ್ರಾಣ ಕಳೆದುಕೊಂಡರು ಇಲ್ಲವೇ ಮೊಘಲರ ಕೈಲಿ ಸಿಕ್ಕಿಬಿದ್ದರು. ಹಾಗೆ ಸಿಕ್ಕಿಬಿದ್ದವರಲ್ಲಿ ಗುರುಗೋವಿಂದರ ತಾಯಿ ಮಾತಾ ಗುಜ್ರಿ ಮತ್ತು ಇಬ್ಬರು ಕಿರಿಯ ಮಕ್ಕಳು ಬಾಬಾ ಜೋರಾವರ್ ಸಿಂಗ್ ಮತ್ತು ಬಾಬಾ ಫತೇ ಸಿಂಗ್ ಸೇರಿದ್ದರು. ಮತಾಂತರಕ್ಕೆ ಒಪ್ಪದ ಎಂಟು ವರ್ಷದ ಇಬ್ಬರು ಮಕ್ಕಳ ತಲೆಗಳನ್ನು ಕತ್ತರಿಸಿ ಕೆಡವಿದ ವಾಜಿರ್ ಖಾನ್. ಇನ್ನಿಬ್ಬರು ಮಕ್ಕಳಾದ ಅಜಿತ್ ಸಿಂಗ್ ಮತ್ತು ಜುಝಾರ್ ಸಿಂಗ್ ರೋಪಾರಿನ ಸಮೀಪ ನಡೆದ ಯುದ್ಧದಲ್ಲಿ ವೀರಮರಣವನ್ನಪ್ಪಿದ್ದರು. ಅಂದಿನ ಯುದ್ಧದಲ್ಲಿ ಜೀವಸಹಿತ ಉಳಿದು ಬಚಾವಾದವರು ಗುರುಗೋವಿಂದಸಿಂಗರ ಜೊತೆ ಐದು ಜನ ಮಾತ್ರ. ಅವರೆಲ್ಲ ಚಮಕೂರಿನ ಕೋಟೆಯಲ್ಲಿ ಆಶ್ರಯ ಪಡೆದರು. ಹಿಂದೆ ಬಿದ್ದ ಮುಘಲ್ ಪಡೆಗಳಿಂದ ತಪ್ಪಿಸಿಕೊಳ್ಳಲು ಸಂಗತ್ ಸಿಂಗ್ ಎಂಬ ಅನುಚರನೊಬ್ಬ ಗುರುಗೋವಿಂದರಂತೆ ವೇಷ ಧರಿಸಿದ. ಚಮಕೂರಿನ ಮೇಲೆ ದಾಳಿಮಾಡಿದ ಮುಘಲ್ ಸೈನ್ಯ ಗೋವಿಂದರೆಂಬ ಕಲ್ಪನೆಯಲ್ಲಿ ಸಂಗತ್ ಸಿಂಗ ಮತ್ತು ಸಂಗಡಿಗರನ್ನು ಕೊಂದು ಕೇಕೆ ಹಾಕಿತು. ಇದರ ಮಧ್ಯೆ ನಬಿ ಖಾನ್ ಮತ್ತು ಘನಿ ಖಾನ್ ಎಂಬಿಬ್ಬರು ಪಠಾಣರ ಜೊತೆ ಸೇರಿ ಆಲಂಗಿರ್‌ನ ಜಮೀನ್ದಾರನ ಸಹಾಯದಿಂದ ಸೂಫಿ ವೇಶ ಧರಿಸಿ ಗುರು ಗೋವಿಂದರು ರಾಯಕೋಟಕ್ಕೆ ಸ್ಥಳಾಂತರಗೊಂಡಾಗಿತ್ತು. ತನ್ನ ಅಪ್ರತಿಮ ನೆನಪಿನ ಶಕ್ತಿಯಿಂದಲೇ ಕಳೆದು ಹೋದ ’ಆದಿಗ್ರಂಥ’ವನ್ನು ಗುರುಗ್ರಂಥಸಾಹೇಬ ಹೆಸರಿನಲ್ಲಿ ಪುನರ್ರಚಿಸಿದರು. ಮಚ್ಛೀವಾರಾದ ಅರಣ್ಯಗಳಲ್ಲಿ ತಂಗಿದ್ದಾದ ಔರಂಗಜೇಬನ ಪರಮತದ್ವೇಷವನ್ನು ಖಂಡಿಸಿ ರ್ಶಿಯನ್ ಭಾಷೆಯ ಕಾವ್ಯಶೈಲಿಯಲ್ಲಿ ’ಜಾಫರ್ ನಾಮಾ’ ಎಂಬ  ದೀರ್ಘಪತ್ರವನ್ನು ಬರೆದರು. ಹಿಂದೆ ಬೇರೆಬೇರೆ ಕಾರಣಕ್ಕೆ ಇವರನ್ನು ತೊರೆದು ಹೋಗಿದ್ದ ನಲವತ್ತು ಸಿಖ್ ಪ್ರಮುಖರು ಗುರುಗಳ ದೀರ್ಘಕಾಲದ ಸಹವರ್ತಿ ಮಾಯಿ ಭಾಗೋ ಎಂಬ ಮಹಿಳೆಯ ನೇತೃತ್ವದಲ್ಲಿ ಪುನಃ ಗೋವಿಂದಸಿಂಗರನ್ನು ಖಿರ್ದಾನಾ ಎಂಬ ಸ್ಥಳದಲ್ಲಿ ಕೂಡಿಕೊಂಡರು. ಇದರ ವಾಸನೆ ಹಿಡಿದು ಬಂದ ಮೊಘಲ್ ಸೈನ್ಯದೊಂದಿಗೆ ಅಂತಿಮ ಯುದ್ಧ ನಡೆದದ್ದು ಅಲ್ಲಿಯೇ. ನಲವತ್ತೊಂದು ಮಂದಿಯ ಶೌರ್ಯದೆದುರು ಇಡೀ ಮೊಘಲ್ ಸೈನ್ಯ ನುಚ್ಚುನೂರಾಯಿತು. ಯುದ್ಧದಲ್ಲಿ ಮುಕ್ತಿಪಡೆದ ಸಿಖ್ ಯೋಧರ ಸ್ಮರಣಾರ್ಥ ಆ ಸ್ಥಳ ಮುಕ್ತಸರ್ ಎಂದು ಗೋವಿಂದಸಿಂಗರಿಂದ ನಾಮಕರಣಗೊಂಡಿತು. ಮುಕ್ತಸರ್‌ನ ಕದನದಲ್ಲಿ ಮಡಿದ ಹುತಾತ್ಮ ಯೋಧರ ನೆನಪಿನಲ್ಲಿ ಪ್ರತಿವರ್ಷ ಡಿಸೆಂಬರಿನಲ್ಲಿ ನಡೆಯುವ ’ಮಾಘಿ ಮೇಳ’ ಪಂಜಾಬಿನಲ್ಲಿ ನಡೆಯುವ ಅತಿದೊಡ್ಡ ಸಿಖ್ಖರ ಸಮಾವೇಶ ಮತ್ತು ಭಾರತದ ಅತಿದೊಡ್ಡ ಮೇಳಗಳಲ್ಲೊಂದು. ಗುರುಗೋವಿಂದಸಿಂಗರ ಜೊತೆ ಮುಕ್ತಸರ್ ಯುದ್ಧದ ನೇತೃತ್ವ ವಹಿಸಿದ್ದ ಮಾಯಿ ಭಾಗೋ ಮುಂದೆ ಪುರುಷವೇಷದಲ್ಲಿ ಅವರ ಅಂಗರಕ್ಷಕಳಾಗಿದ್ದಳಂತೆ. ೧೭೦೮ರಲ್ಲಿ ನಾಂದೇಡದಲ್ಲಿ ಗೋವಿಂದಸಿಂಗರ ದೇಹಾಂತ್ಯವಾದ ನಂತರ ಮಾಯಿ ಭಾಗೋ ಕರ್ನಾಟಕದ ಬೀದರಿನಲ್ಲಿ ನೆಲೆಸಿ ತಪಸ್ಸನ್ನಾಚರಿಸಿ ಅಲ್ಲೇ ದೇಹತ್ಯಾಗ ಮಾಡಿದಳು. ಇನ್ನೊಂದು ವಿಶೇಷವೆಂದರೆ ಮೊತ್ತಮೊದಲು ಗುರುಗೋವಿಂದಸಿಂಗರಿಂದ ಖಾಲ್ಸಾ ದೀಕ್ಷೆ ಪಡೆದ ಪಂಚ್‌ಪ್ಯಾರೆಗಳಲ್ಲೊಬ್ಬನಾದ ’ಸಾಹಿಬ್ ಸಿಂಗ್’ ಇದೇ ಬೀದರಿನ ಅಚ್ಚಕನ್ನಡಿಗ. ಹಿಂದೊಮ್ಮೆ ನಾನಕರು ಶಿಷ್ಯ ಮರ್ದಾನಾನ ಸಂಗಡ ಬೀದರ್‌ಗೆ ಬಂದಿದ್ದಾಗ ಇಲ್ಲಿನ ಜನ ಕುಡಿಯುವ ನೀರಿಲ್ಲದೇ ಪರಿತಪಿಸುತ್ತಿದ್ದರಂತೆ. ಇದನ್ನು ಕಂಡ ನಾನಕರು ತಮ್ಮ ಪಾದುಕೆಯನ್ನು ಕಲ್ಲೊಂದಕ್ಕೆ ಬಡಿದಾಗ ಕಲ್ಲು ಸೀಳಿ ಜಲಧಾರೆಯೊಂದು ಉಕ್ಕಿ ಹರಿಯಿತು. ಈ ನಾನಕ ಝೀರಾ(ಝರಿ)ಯನ್ನು ಬೀದರಿನಲ್ಲಿ ನಾನಕರ ನೆನಪಿನಲ್ಲಿ ಕಟ್ಟಿದ ನಾನಕ ಝೀರಾ ಸಾಹೇಭ್ ಗುರುದ್ವಾರದ ಪಕ್ಕ ಇಂದಿಗೂ ನೋಡಬಹುದು.
        ಗುರು ಗೋವಿಂದ ಸಿಂಗರ ಪ್ರಯತ್ನ ವ್ಯರ್ಥವಾಗಲಿಲ್ಲ. ಖಾಲ್ಸಾ ರಾಜ್ಯ ಸ್ಥಾಪನೆಯ ಕನಸು ಅವರ ಜೀವಸಮಾಧಿಯ ಹದಿನೆಂಟು ತಿಂಗಳಿಗೇ ಅವರ ಮಿತ್ರ ವೈಷ್ಣವ ಬೈರಾಗಿ ’ಬಂದಾ ಸಿಂಗ್ ಬಹದ್ದೂರ್’ನ ನೇತೃತ್ವದಲ್ಲಿ ಸಾಕಾರಗೊಂಡಿತು. ೧೭೧೦ರಲ್ಲಿ ವಜೀರ್ ಖಾನನ ನಂತರ ಪೂರ್ವದ ಸಟ್ಲೇಜಿನಿಂದ ಪಶ್ಚಿಮದ ಯಮುನೆಯವರೆಗೆ  ಸಿರ್ಹಿಂದ್ ರಾಜ್ಯ ಖಾಲ್ಸಾಗಳ ವಶವಾಗಿ ಮುಂದಿನ ನೂರು ವರ್ಷಗಳ ಕಾಲ ಸಿಖ್ಖರ ಕೀರ್ತಿ ಪತಾಕೆ ಹಾರಾಡಿತು.ಅದು ಇನ್ನೊಂದು ಮಹಾದ್ಭುತ.
ಹೋಶಿಯಾರಪುರದ ಬೈರಾಗಿ ಮಂದಿರದಲ್ಲಿನ ಪಂಚಪ್ಯಾರೆಗಳ ವರ್ಣಚಿತ್ರ