Pages

Sunday, June 5, 2016

ಆಂಧ್ರಕಾವ್ಯ ಪರಂಪರೆ ಹಾಗೂ ಕವಿಸಾರ್ವಭೌಮ ಶ್ರೀನಾಥ


आन्ध्रत्वमान्ध्रभाषा च प्राभाकरपरिश्रम: |
तत्रापि याजुषी शाखा नाಽल्पस्य तपस: फलम् ||
      ಆ೦ಧ್ರದಲ್ಲಿ ಜನಿಸುವುದು, ಆಂಧ್ರಭಾಷೆಯನ್ನು ಮಾತನಾಡುವುದು, ಜೊತೆಗೆ ಯಜುರ್ವೇದ ಶಾಖೆಗೆ ಸೇರಿದವನಾಗುವುದು ಇವೆಲ್ಲ ಸಣ್ಣಪುಟ್ಟ ತಪಸ್ಸಿಗೆಲ್ಲ ಒಲಿಯುವ ಫಲವಲ್ಲವೆಂದಿದ್ದಾರೆ ಖ್ಯಾತ ಕವಿ, ತತ್ತ್ವಜ್ಞಾನಿ ಅಪ್ಪಯ್ಯದೀಕ್ಷಿತರು. ’ತ್ರಿಮೂರ್ತಿಶಾಂ ಸ೦ಸ್ಕೃತಾ೦ಧ್ರ ಪ್ರಾಕ್ರತ ಪ್ರಿಯ೦ಕರಾ: ’ ತ್ರಿಮೂರ್ತಿಗಳಲ್ಲಿ ಬ್ರಹ್ಮನಿಗೆ ಸಂಸ್ಕೃತವೂ, ವಿಷ್ಣುವಿಗೆ ತೆಲುಗೂ, ಶಿವನಿಗೆ ಪ್ರಾಕೃತವು ಪ್ರಿಯವಾದ ಭಾಷೆಗಳೆಂದು ತೆಲುಗರ ಆರಾಧ್ಯದೈವ ಶ್ರೀಕಾಕುಳಾಂಧ್ರ ಮಹಾವಿಷ್ಣು ಹೇಳಿದ್ದಾನಂತೆ.
ಆ೦ಧ್ರಕ್ಕೆ ಹಿಂದೆ ತ್ರಿಲಿ೦ಗ ಕ್ಷೇತ್ರವೆ೦ಬ ಹೆಸರೂ ಇತ್ತು. ದ್ರಾಕ್ಷಾರಾಮ, ಶ್ರೀಶೈಲ, ಕಳೇಶ್ವರಗಳೆ೦ಬ ಮೂರು ಪ್ರಸಿದ್ಧ ಶಿವಕ್ಷೇತ್ರಗಳಿ೦ದ ಈ ಹೆಸರು ಬ೦ದಿದ್ದು. ಈ ತ್ರಿಲಿಂಗವೇ ತೆನುಂಗುವಾಗಿ ಕೊನೆಗೆ ತೆಲುಗು ಆಯಿತಂತೆ. ಪುರಾಣಕಾಲದ ಛಪ್ಪನ್ನೈವತ್ತಾರು ದೇಶಗಳಲ್ಲಿ ಆಂಧ್ರವೂ ಒಂದು. ರಾಮಾಯಣ, ಮಹಾಭಾರತ, ಐತರೇಯ ಬ್ರಾಹ್ಮಣ, ಸ್ಕಾಂದಪುರಾಣ ಸೇರಿ ಆಂಧ್ರದ ಉಲ್ಲೇಖವಿಲ್ಲದ ಪುರಾಣ ಗ್ರಂಥಗಳಿಲ್ಲ. ಕಾವೇರಿಯಿ೦ದ ಮಾ ಗೋದಾವರಿಪರ್ಯ೦ತವೆ೦ಬ ಕನ್ನಡನಾಡಿನ ಸೀಮೆಯ ಬಗೆಗೆ ಮಾರ್ಗಕಾರನು ಹೇಳಿದ೦ತೆ ಆ೦ಧ್ರದ ಸೀಮೆಯನ್ನು ಕಾಕತೀಯರ ಪ್ರತಾಪರುದ್ರನ ಆಸ್ಥಾನಕವಿಯಾಗಿದ್ದ ವಿದ್ಯಾನ೦ದ ಹೀಗೆ ವಿವರಿಸುತ್ತಾನೆ.
पश्चात्पुरस्तादपि यस्य देशौ
ख्यातौ महाराष्ट्रकळिंगदेशौ |
अवागुदक्पाण्ड्यककन्यकुब्जौ
देशस्स तत्रास्ति त्रिलिंगनामा || 
       ಆಗಿನ ಆ೦ಧ್ರ ಪಶ್ಚಿಮದಲ್ಲಿ ಮಹಾರಾಷ್ಟ್ರವನ್ನೂ, ಪೂರ್ವದಲ್ಲಿ ಕಳಿ೦ಗವನ್ನೂ, ದಕ್ಷಿಣದಲ್ಲಿ ಪಾ೦ಡ್ಯವನ್ನ್ಪೂ ಉತ್ತರದಲ್ಲಿ ಕನ್ಯಕುಬ್ಜವನ್ನೂ ಒಳಗೊ೦ಡಿತ್ತ೦ತೆ. ಗೋದಾವರಿ ಕೃಷ್ಣೆಯರ ಮಧ್ಯದ ಅಚ್ಚತೆಲುಗಿನ ಆಂಧ್ರನೆಲ ಹಿಂದೆ ವೆಂಗಿನಾಡೆಂದು ಹೆಸರಾಗಿತ್ತು, ವೆಂಗಿ ಅಥವಾ ರಾಜಮಹೇಂದ್ರಪುರ(ಈಗಿನ ರಾಜಮಂಡ್ರಿ) ಅದರ ರಾಜಧಾನಿ.  ಕಡಪದಿಂದ ನಂದಿಬೆಟ್ಟದವರೆಗಿನ ಪೊಟ್ಟಿಪಿನಾಡು, ಕರ್ನೂಲಿನಿಂದ ಬಳ್ಳಾರಿಯವರೆಗಿನ ರೇನಾಡು, ಗುಂಟೂರು-ಪ್ರಕಾಶಂಗಳ ಪಾಲ್ನಾಡು, ಮದ್ರಾಸಿನಿಂದ ಕೃಷ್ಣೆಯವರೆಗಿನ ಪಾಕನಾಡು, ಗುಂಟೂರಿನ ಪೂರ್ವೋತ್ತರದ ಕಮ್ಮನಾಡುಗಳೆಲ್ಲ ಆಗಿನ ಆಂಧ್ರನಾಡಿನ ವಿವಿಧ ಭಾಗಗಳು.
       ರಾವಣ ಬರೆದ ’ರಾವಣೀಯಂ’ ತೆಲುಗಿನ ಮೊದಲ ವ್ಯಾಕರಣ ಗ್ರಂಥವೆಂದೇ ಪ್ರಸಿದ್ಧಿ. ಪೈಥಾಗೋರಸ್ಸಿನ ಪ್ರಮೇಯದ ಮೂಲರೂಪವಾದ ಶುಲ್ಬಸೂತ್ರಗಳನ್ನು ರಚಿಸಿದ ಬೋಧಾಯನ, ಆಪಸ್ಥ೦ಭ ಸೂತ್ರವೆ೦ದೇ ಪ್ರಸಿದ್ಧವಾದ ಗೃಹ್ಯಸೂತ್ರಗಳನ್ನು ರಚಿಸಿದ ಆಪಸ್ಥ೦ಭ ಇವರಿಬ್ಬರೂ ಆ೦ಧ್ರದವರೇ. ಅಲ್ಲಿ೦ದ ಶುರುವಾದ ಆ೦ಧ್ರದ ಕಾವ್ಯಪರ೦ಪರೆ ಮು೦ದುವರೆದದ್ದು ಪ್ರತಾಪರುದ್ರೀಯವನ್ನು ಬರೆದ ಖ್ಯಾತ ಅಲ೦ಕಾರಶಾಸ್ತ್ರಜ್ಞ ವಿದ್ಯಾನಾಥನಿ೦ದ. ಸಾಯಣರ ಭಾಷ್ಯವಿಲ್ಲದೇ ವೇದಗಳ ಅಧ್ಯಯನ ಪೂರ್ತಿಗೊಳ್ಳುವುದೆ೦ತು? ಪ೦ಚಾದಶಿ, ಜೀವನ್ಮುಕ್ತಿವಿವೇಕಗಳಿಲ್ಲದ ಅದ್ವೈತ ವೇದಾ೦ತವೆಲ್ಲಿ? ಅನ್ನಮಭಟ್ಟನ ತರ್ಕಸ೦ಗ್ರಹದೀಪಿಕೆಯಿಲ್ಲದೆ ತರ್ಕಶಾಸ್ತ್ರವನ್ನು ಪ್ರಾರ೦ಭಿಸುವುದೆ೦ತು? ಪ೦ಡಿತರಾಜ ಜಗನ್ನಾಥ ಕೈಯಾಡಿಸದೇ ಬಿಟ್ಟ ಕಾವ್ಯಕ್ಷೇತ್ರವಾವುದು? ವ್ಯಾಖ್ಯಾನರ೦ಗದ ಚಕ್ರವರ್ತಿ ಮಲ್ಲಿನಾಥನ ವ್ಯಾಖ್ಯಾವಿಲ್ಲದೇ ಪ೦ಚಮಹಾಕಾವ್ಯಗಳೆಲ್ಲಿ?
ವೇದಾ೦ತದರ್ಶನ ಪರ೦ಪರೆಯ ಎಲ್ಲ ದಾರ್ಶನಿಕರೂ, ಅಚಾರ್ಯರೂ ಹುಟ್ಟಿದ್ದು ದಕ್ಷಿಣದಲ್ಲೇ. ಅದು ಶ೦ಕರರಿರಬಹುದು, ರಾಮಾನುಜರಿರಬಹುದು, ಮಧ್ವ, ನಿ೦ಬಾರ್ಕ, ಶ್ರೀಕ೦ಠ ಅಥವಾ ವಲ್ಲಭರಿರಬಹುದು. ಬ್ರಹ್ಮಸೂತ್ರಗಳಿಗೆ ಭಾಷ್ಯವಾದ ವೇದಾ೦ತಪಾರಿಜಾತಸೌರಭವನ್ನು ಬರೆದ ನಿ೦ಬಾರ್ಕಾಚರ್ಯರು ಆ೦ಧ್ರ-ಬಳ್ಳಾರಿ ಗಡಿಯ ನಿ೦ಬಪುರದವರು. ರಾಮಾನುಜರ ಮನೆತನದ ಹೆಸರಾದ ’ಆಸುರಿ’ ಮೂಲತಃ ಆ೦ಧ್ರದ್ದು. ಮನೆತನದ ಹೆಸರಿನಿ೦ದ ಗುರುತಿಸಿಕೊಳ್ಳುವುದು ಆ೦ಧ್ರಬ್ರಾಹ್ಮಣರಲ್ಲಿ ಸಾಮಾನ್ಯ ಸ೦ಗತಿ. ತೆಲುಗಿನ ನಡುಮಿ೦ಟಿಯ ತುಳು ರೂಪವೇ ಮಧ್ವಾಚಾರ್ಯರ ಮನೆತನದ ಹೆಸರಾದ ನಡಿಲ್ಲಾಯ. ಕನ್ನಡ ಕರಾವಳಿಯ ಹವ್ಯಕ, ಶಿವಳ್ಳಿ, ಕೇರಳದ ನಂಬೂದಿರಿಗಳೆಲ್ಲ ಮಯೂರವರ್ಮನ ಕಾಲದಲ್ಲಿ ವಲಸೆ ಬಂದ ಗೋದಾವರಿ ಸೀಮೆಯ ಅಹಿಚ್ಛತ್ರದವರು. ಅಚ್ಚಕನ್ನಡದ ಮೊದಲ ರಾಜವಂಶ ಕದಂಬರ ಸ್ಥಾಪಕ ಮಯೂರನ ಮೊದಲ ರಾಜಧಾನಿಯಾಗಿದ್ದುದು ಆಂಧ್ರದ ಶ್ರೀಶೈಲ. ಕದಂಬರು, ಪಲ್ಲವರು, ಸೇನ, ವಿಷ್ಣುಕೌಂಡಿನ್ಯ, ಬೃಹತ್ಪಾಲ, ಬಾಣ, ರಾಜಪುತ್ರ, ಸಾಲಂಖ್ಯಾಯನ, ವಕಟಕ, ವಲ್ಲಭೀ, ವೈದುಂಬ, ನೊಳಂಬರೆಲ್ಲರ ಮೂಲ ಆಂಧ್ರಶಾತವಾಹನರು. ಶಾತವಾಹನ ವಂಶಸ್ಥರು ಕಾಶ್ಮೀರವನ್ನೂ ಆಳಿದ್ದರೆಂದು ಕಲ್ಹಣನ ರಾಜತರಂಗಿಣಿ ತಿಳಿಸುತ್ತದೆ. ಪಲ್ಲವರು ಮುಂದೆ ಕಂಚಿಯನ್ನು ರಾಜಧಾನಿಯನ್ನಾಗಿಸಿಕೊಂಡರೂ ಅವರ ಮೂಲ ತೆಲುಗು ನಾಡೇ. ಅವರು ಮೊದಲು ಆಳಿದ್ದು ಕೃಷ್ಣಾ ಮತ್ತು ಗುಂಟೂರು ವಲಯವನ್ನು. ’ಆಂಧ್ರಭೃತ್ಯಾಸ್ಸಪ್ತಃ’ಎಂದು ವಿಷ್ಣುಪುರಾಣವೂ, ’ಆಂಧ್ರಾಣಾಂ ಸಂಸ್ಥಿತಾರಾಜ್ಯೇತೇಷಾಂ ಭೃತ್ಯಾನ್ವಯೇ ಸಪ್ತೈವಾಂಧ್ರಾ ಭವಿಷ್ಯಂತಿ’ಎಂದು ಮತ್ಸ್ಯ ಪುರಾಣವೂ ಹೊಗಳಿದ ಭಾರತದ ಸ್ವರ್ಣಯುಗದ ನಿರ್ಮಾತೃರಾದ ಗುಪ್ತರು ಮೂಲತಃ ಆಂಧ್ರಭೃತ್ಯರೆಂದೇ ಹೆಸರಾದವರು. ಅದ್ವೈತ ದರ್ಶನದ ಪರ೦ಪರೆಯಲ್ಲ೦ತೂ ಆ೦ಧ್ರದ ಕೊಡುಗೆ ಕೊನೆಯಿಲ್ಲದ್ದು. ಕಾಕತೀಯರ ಕಾಲದ ಖ್ಯಾತ ಕವಿ ಅಚಿ೦ತೇ೦ದ್ರದೇವನು ಅದ್ವೈತಾಮೃತಯತಿಗಳ ಶಿಷ್ಯ. ಅದ್ವೈತಾಚಾರ್ಯತಿರುಮಲನೆ೦ದು ಪ್ರಾಖ್ಯಾತಿಗಳಿಸಿದವ ಅನ್ನಮಭಟ್ಟನ ತ೦ದೆ ಮೇಲಿಗಿರಿ ಮಲ್ಲಿನಾಥ. ಅದ್ವೈತ ದರ್ಶನದ ಮೇಲಿನ ’ತತ್ತ್ವಪ್ರದೀಪಿಕ’ದ ಕರ್ತೃ ಚಿತ್ಸುಖಾಚಾರ್ಯರು, ಅದ್ವೈತದ ಅತಿಕ್ಲಿಷ್ಟ ಭಾಷ್ಯಗಳಲ್ಲೊ೦ದಾದ ಶ್ರೀಹರ್ಶನ ’ಖ೦ಡನಖ೦ಡಖಾದ್ಯ’ದ ಮೇಲಿನ ಟೀಕೆಯನ್ನು ರಚಿಸಿದ ಗು೦ಡಯ್ಯಭಟ್ಟರು ಪುನಃ ಆ೦ಧ್ರದೇಶದವರೇ. 
       ಅಬ್ಬ, ಆಂಧ್ರವನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದಾನೆಂದು ತೆಗಳಬೇಡಿ. ಇಷ್ಟೆಲ್ಲ ಪೀಠಿಕೆ ನನ್ನ ಮೂಲ ಗೋದಾವರಿ ಸೀಮೆಯ ಅಹಿಚ್ಛತ್ರದ ಆಂಧ್ರನಾಡಿನ ಮೇಗಣ ಅಭಿಮಾನವಷ್ಟೇ. 
       ತೆಲುಗಿನ ಮೊತ್ತಮೊದಲ ಕಾವ್ಯವೆಂದು ಪರಿಗಣಿತವಾಗಿರುವುದು ಸುಮಾರು ಕ್ರಿ.ಶ ೧೦೨೦ರಲ್ಲಿ ಚಂಪೂಶೈಲಿಯಲ್ಲಿ ರಚಿತವಾದ ನನ್ನಯನ ಮಹಾಭಾರತ. ತೆಲುಗಿನಲ್ಲಿ ಮಾರ್ಗೀ ಶೈಲಿಯ ಪ್ರವರ್ತಕನೆಂಬ, ಆದಿಕವಿಯೆಂಬ ಹೆಗ್ಗಳಿಕೆ ನನ್ನಯ ಭಟ್ಟಾರಕನಿಗಿದೆ. ತೆಲುಗಿನ ಮೊದಲ ವ್ಯಾಕರಣ ಗ್ರಂಥ ಆಂಧ್ರಶಬ್ದಚಿಂತಾಮಣಿಯನ್ನು ಸಂಸ್ಕೃತದಲ್ಲಿ ರಚಿಸಿದವನೂ ಇವನೇ. ನನ್ನಯ ಭಾರತದ ಅತ್ಯುತ್ಕೃಷ್ಟ ಮತ್ತು ಸುವ್ಯವಸ್ಥಿತ ಶೈಲಿಯನ್ನು ಗಮನಿಸಿದರೆ ಅವನಿಗಿಂತ ಮೊದಲೇ ತೆಲುಗು ಸಾಹಿತ್ಯ ಸಮೃದ್ಧವಾಗಿಯೇ ಬೆಳೆದಿರಬೇಕು. ದುರದೃಷ್ಟವೆಂದರೆ ನನ್ನಯನ ಹಿಂದೆ ತೆಲುಗಿನಲ್ಲಿ ರಚಿತವಾದ ಯಾವ ಕೃತಿಯೂ ಲಭ್ಯವಿಲ್ಲ. ಈತನದೇ ಆದ ’ವಾಗಾನುಶಾಸನ’ದಲ್ಲಿಯೂ ಪೂರ್ವಸೂರಿಗಳ ಸ್ಮೃತಿಯಿಲ್ಲ. ವಿಜಯವಾಡದ ’ಯುದ್ಧಮಲ್ಲ ಶಾಸನಮು’ ಮತ್ತು ಮೋಪೂರ್ ಶಾಸನವೇತ್ಯಾದಿ ನನ್ನಯನ ಪೂರ್ವದ ಶಾಸನಗಳು ದೊರೆತಿದ್ದರೂ ತೆಲುಗು ಸಾಹಿತ್ಯದ ಗತದ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಲಾಗಿಲ್ಲ. ನನ್ನಯನಿಂದ ಶುರುವಾಗಿತ್ತೆನ್ನಬಹುದಾದ ಆಂಧ್ರಸಾಹಿತ್ಯ ಪರಂಪರೆ ಮುಂದುವರೆದದ್ದು ಹದಿಮೂರನೇ ಶತಮಾನದಲ್ಲಿ ತಿಕ್ಕನ ಹಾಗೂ ಯರ್ರನರಿಂದ. ನನ್ನಯ ಮಹಾಭಾರತದ ಆದಿ, ಸಭಾ ಮತ್ತು ವನಪರ್ವದ ೧೪೨ ಶ್ಲೋಕಗಳನ್ನು ರಚಿಸಿದ್ದ. ನನ್ನಯ ಬಿಟ್ಟ ಉಳಿದ ಪರ್ವಗಳನ್ನು ಮುಗಿಸಿದವನು ಕವಿಬ್ರಹ್ಮ ತಿಕ್ಕನ ಸೋಮಯಾಜಿ. ತಿಕ್ಕನನ ರಚನೆಯ ಐವತ್ತು ವರ್ಷಗಳ ತರುವಾಯ ಆತ ಅರ್ಧ ಬರೆದು ಬಿಟ್ಟ ವನಪರ್ವವನ್ನು ಸಂಪೂರ್ಣಗೊಳಿಸಿದವನು ಯೆರ್ರನ. ಅದಲ್ಲದೇ ತೆಲುಗಿನಲ್ಲಿ ಮೊದಲ ಬಾರಿ ಪ್ರಬಂಧ ಶೈಲಿಯಲ್ಲಿ ತನ್ನದೇ ಸ್ವತಂತ್ರ ಮಹಾಭಾರತವನ್ನು ಹರಿವಂಶವೆಂಬ ಹೆಸರಲ್ಲಿ ರಚಿಸಿ ಪ್ರಬಂಧ ಪರಮೇಶ್ವರನೆಂದು ಹೆಸರಾದವನಿವನು. ಮೊದಲ ಮಹಾಭಾರತವನ್ನು ತೆಲುಗಿನಲ್ಲಿ ರಚಿಸಿದ ಈ ಮೂವರೂ ಆಂಧ್ರದ ಕವಿತ್ರಯರೆಂದೇ ಹೆಸರಾದವರು. ಹನ್ನೊಂದು ಹನ್ನೆರಡನೇಯ ಶತಮಾನದ ನಂತರ ತೆಲುಗಿನಲ್ಲಿ ಅಸಂಖ್ಯ ಸಂಖ್ಯೆಯ ಮಹಾಕವಿಗಳುದಿಸಿದರು. ಆಂಧ್ರದ ದಕ್ಷಿಣದಲ್ಲಿ ರಾಮಾನುಜರಿಂದ ಬೆಳೆಯುತ್ತಿದ್ದ ವೈಷ್ಣವಮತ, ಕರ್ನಾಟಕದ ಬಸವಪಂಥದ ಪ್ರಭಾವ, ಕೃಷ್ಣೆ-ಗೋದಾವರಿಯ ಮಧ್ಯದ ಅಚ್ಚವೈದಿಕ ಧರ್ಮಗಳು ತೆಲುಗಿನಲ್ಲಿ ವಿವಿಧ ಮಾದರಿಯ ಕೃತಿಗಳ ಹುಟ್ಟಿಗೆ ಕಾರಣವಾದವು. ತೆಲುಗು ಮತ್ತು ಸಂಸ್ಕೃತದಲ್ಲಿ ’ನೀತಿಸೂತ್ರ’ವನ್ನು ರಚಿಸಿದ ಮೊದಲನೇ ಪ್ರತಾಪರುದ್ರ, ’ಪಂಡಿತಾರಾಧ್ಯ ಚರಿತ’, ’ಬಸವ ಪುರಾಣ’ಗಳ ಪಾಲ್ಕುರಿಕೆ ಸೋಮನಾಥ, ’ಕುಮಾರಸಂಭವ’ದ ತೆಂಕಣಾಮಾತ್ಯರ ಮೇಲೆ ವೀರಶೈವ ಮತದ ಗಾಢ ಪ್ರಭಾವವನ್ನು ಕಾಣಬಹುದು. ಕವಿತ್ರಯರಿಂದ ಮೂರು ಶತಮಾನದಲ್ಲಿ ಪೂರ್ಣಗೊಂಡ ಮಹಾಭಾರತ, ರಾಮಾನುಜರ ಭಕ್ತಿಪಂಥದ ಪ್ರಭಾವ, ತೆಲುಗಿನಲ್ಲಿ ಇನ್ನೂ ರಚನೆಯಾಗದ ರಾಮಾಯಣ ಹದಿಮೂರನೇ ಶತಮಾನದಲ್ಲಿ ರಂಗನಾಥಕವಿಯನ್ನು ತೆಲುಗು ರಾಮಾಯಣವನ್ನು ರಚಿಸುವಂತೆ ಪ್ರೇರೇಪಿಸಿದವು(ಯರ್ರನ ಚಂಪೂರಾಮಾಯಣವನ್ನು ಬರೆದಿದ್ದನೆನ್ನಲಾಗುವುದಾದರೂ ಅದಿಂದು ಲಭ್ಯವಿಲ್ಲ). ರಂಗನಾಥ ರಾಮಾಯಣದಿಂದ ನಿನ್ನೆಮೊನ್ನೆಯ ಮಲ್ಲೆಮಾಲಾ ರಾಮಾಯಣದವರೆಗೆ ತೆಲುಗಿನಲ್ಲಿ ಪ್ರತಿ ಶತಮಾನವೂ ರಚನೆಯಾದ ರಾಮಾಯಣದ ಸಂಖ್ಯೆ ಲೆಕ್ಕವಿಟ್ಟವರಿಲ್ಲ. ರಾಮಾಯಣ ಕವಿಭಾರದಲಿ ಫಣಿರಾಯ ಇನ್ನಷ್ಟು ತಿಣುಕಿರಬಹುದು. ನನ್ನಯನ ನಂತರ ಎರಡನೇ ತೆಲುಗು ವ್ಯಾಕರಣ ಗ್ರಂಥ ತ್ರಿಲಿಂಗ ಶಬ್ದಾನುಶಾಸನದ ಕರ್ತೃ ಅಥರ್ವಣ. ನನ್ನಯ ಬರೆಯದೇ ಬಿಟ್ಟ ಮಹಾಭಾರತದ ವಿರಾಟ, ಉದ್ಯೋಗ, ಭೀಶ್ಮ ಪರ್ವಗಳನ್ನು ಅಥರ್ವಣ ಪೂರ್ತಿಗೊಳಿಸಿದ್ದನಂತೆ. ಅಪ್ಪಾಕವಿ ತನ್ನ ಕೃತಿಯಲ್ಲಿ ಉದ್ಧರಿಸಿದ ಅಥರ್ವಣನ ಭಾರತದ ಕೆಲ ಶ್ಲೋಕಗಳನ್ನು ಬಿಟ್ಟರೆ ಆ ಗ್ರಂಥ ಸಿಕ್ಕಿಲ್ಲ. ಪ್ರಾಯಃ ಪ್ರಥಮಾಚಾರ್ಯ ಆದಿಕವಿ ನನ್ನಯನ ನಂತರ ತೆಲುಗು ವ್ಯಾಕರಣವನ್ನೂ, ಭಾರತವನ್ನೂ ಮುಂದುವರೆಸಿದವನೆಂಬ ಕಾರಣಕ್ಕಾಗಿ ಅಥರ್ವಣನಿಗೆ ದ್ವಿತೀಯಾಚಾರ್ಯನೆಂಬ ವಿಶೇಷಣವೂ ಇದೆ. ತೆಲುಗಿನಲ್ಲಿ ದಶಕುಮಾರಚರಿತೆಯನ್ನು ಬರೆದ ಕೇತನ, ನೀತಿಶಾಸ್ತ್ರವನ್ನು ಬರೆದ ಬೆದ್ದನ, ಮಾರ್ಕಂಡೇಯ ಪುರಾಣದ ಮಾರನ್ನ, ಕೇಯೂರಬಾಹುಚರಿತದ ಮಂಚನ್ನ, ಚಂಪೂರಾಮಾಯಣದ ಹುಲ್ಲಂಕಿ ಭಾಸ್ಕರರೆಲ್ಲ ಹದಿಮೂರು ಹದಿನಾಲ್ಕನೇ ಶತಮಾನದಲ್ಲಿ ಆಂಧ್ರದ ಕವ್ಯಾಗಸವನ್ನು ಬೆಳಗಿದವರೇ.(ಕನ್ನಡದ ರನ್ನ-ಜನ್ನ-ಪೊನ್ನ, ಕಾಶ್ಮೀರದ ಕಲ್ಹಣ-ಜಲ್ಹಣ-ಮಲ್ಹಣ-ಶಿಲ್ಹಣರು, ಭಲ್ಹಟ-ಉದ್ಭಟ-ಮಮ್ಮಟರು, ತೆಲುಗಿನ ತಿಕ್ಕನ-ಯರ್ರನ-ಪೋತನ-ಕೇತನರ ಹೆಸರಿನ ಪ್ರಾಸವೇ ವಿಚಿತ್ರ.). ಇವರ ನಂತರ ಬಂದವನು ಆಂಧ್ರ ಸಾಹಿತ್ಯದ ಸ್ವರ್ಣಯುಗದ ನಿರ್ಮಾತೃ, ಕವಿಸಾರ್ವಭೌಮ ಶ್ರೀನಾಥ ಭಟ್ಟ. ಹದಿನಾಲ್ಕನೇ ಶತಮಾನದ ಅಂತ್ಯ, ಹದಿನೈದನೇ ಶತಮಾನದ ಆರಂಭಕಾಲದಲ್ಲಿ ಕೊಂಡವೀಡು ರೆಡ್ಡಿ ವಂಶವೆಂಬ ಚಿಕ್ಕ ಸಾಮ್ರಾಜ್ಯದಲ್ಲಿ ಪದಕೋಮಟಿ ವೇಮಭೂಪಾಲ ರೆಡ್ಡಿಯ ಅಸ್ಥಾನಕವಿಯಾಗಿದ್ದ ಶ್ರೀನಾಥನಿಗೆ ತೆಲುಗು ಕವಿವರ್ಯರಲ್ಲೇ ಅಪ್ರತಿಮನೂ, ಅಸಮನಾನೂ ಎಂಬ ಕೀರ್ತಿಯಿದೆ. ’ದೇಶಭಾಷಲಂದು ತೆಲುಗು ಲೆಸ್ಸ’ ಎಂದು ಕನ್ನಡರಾಜ್ಯರಮಾರಮಣ ಶ್ರೀಕೃಷ್ಣದೇವರಾಯ ಉದ್ಘೋಷಿಸುವ ಶತಮಾನಕಾಲ ಮುನ್ನವೇ ಕರ್ನಾಟಕ ರಾಜ್ಯಸಭೆಯಲ್ಲಿ ತೆಲುಗು ಝಂಡಾ ರಾರಾಜಿಸುವಂತೆ ಮಾಡಿದವ ಈ ಕವಿಚಕ್ರವರ್ತಿ. ಕನ್ಯೆಮೈಯ ಪರಿಮಳದಿಂದ ಕರಿಬೇವಿನೆಲೆಯೆ ಸುವಾಸನೆಯವರೆಗೆ ಆತ ರಚಿಸದ ಪದ್ಯಗಳಿಲ್ಲ, ಶೃಂಗಾರದಿಂದ ವೈರಾಗ್ಯದವರೆಗೆ ಆತ ಬಣ್ಣಿಸದ ರಸಗಳಿಲ್ಲ, ಪುರಾಣದಿಂದ ವ್ಯಾಕರಣದವರೆಗೆ, ಚಂಪುವಿನಿಂದ ಚಾಟುವಿನವರೆಗೆ ಆತ ಕೈಯಾಡಿಸದ ಕ್ಷೇತ್ರಗಳಿಲ್ಲ. ತೆಲುಗಿನಲ್ಲಿ ಶಾಲಿವಾಹನ ಸಪ್ತಶತಿ, ಪಂಡಿತಾರಾಧ್ಯಚರಿತ, ಶಿವರಾತ್ರಿ ಮಾಹಾತ್ಯ್ಮಂ, ಮಾನಸೋಲ್ಲಾಸ, ಹರಿವಿಲಾಸ, ಭೀಮಖಂಡಂ, ಕಾಶಿಕಾಖಂಡಂ, ಪಾಲಾಂಟಿ ವೀರಚರಿತ್ರ, ಧನಂಜಯ ವಿಜಯ, ಶೃಂಗಾರದೀಪಿಕಾ, ಕೃತಾಭಿರಾಮಂ, ಶೃಂಗಾರ ನೈಷಧಂ, ವಲ್ಲಭಾಭ್ಯುದಯ, ವಿಧಿನಾಟಕ ಹೀಗೆ ಶ್ರೀನಾಥನ ಕೃತಿಗಳು ಅವೆಷ್ಟೋ. ಶ್ರೀಹರ್ಷನ ನೈಷಧದ ತೆಲುಗು ಅವತರಣಿಕೆ ಶೃಂಗಾರ ನೈಷಧಕ್ಕಂತೂ ಕಾವ್ಯಸೌಂದರ್ಯದಲ್ಲಿ ಮೂಲವನ್ನು ಮೀರಿಸಿದ ಖ್ಯಾತಿಯಿದೆ. ತನ್ನ ಅಪಾರ ವಿದ್ವತ್ತಿನಿಂದ ಸಮಕಾಲೀನ, ಪ್ರಾಚೀನ ಕವಿಗಳನ್ನೂ ಮೀರಿಬೆಳೆದವನೆಂಬ ಕೀರ್ತಿ ಈತನದು. 
       ಕೊಂಡವೀಡಿನ ರೆಡ್ಡಿಗಳಲ್ಲಿ, ರಾಚಕೊಂಡದ ವೇಲಮರಲ್ಲಿ, ವಿಜಯನಗರ ಸಾಮ್ರಾಜ್ಯದಲ್ಲಿ ತನ್ನ ಕವಿತ್ವಕ್ಕಾಗಿ ಬಹುಪರಾಕು ಹೇಳಿಸಿಕೊಂಡವನು. ಕೊಂಡವೀಡಿನ ಕುಲದೈವ ಪೋತರಾಜು ಕಟಾರಿಯನ್ನು ದೇವರಕಂಡ ಪಾಳೇಗರರು ಹೊತ್ತೊಯ್ದಾದ ತನ್ನ ವಿದ್ವದ್ಬಲದಿಂದ ಅವರನ್ನು ಗೆದ್ದು ಕಟಾರಿಯನ್ನು ವಾಪಸ್ ತಂದವನು. ವಿಜಯನಗರದ ಗೌಡಡಿಂಡಿಮ ಕವಿಯನ್ನು ಸೋಲಿಸಿ ಎರಡನೇ ದೇವರಾಯನಿಂದ ಕನಕಾಭಿಷೇಕ ಮಾಡಿಸಿಕೊಂಡವನು. ಹೀಗಿಪ್ಪ ಶ್ರೀನಾಥ ಕವಿ ಮಹಾ ರಸಿಕ. ಭಾರೀ ಸುಖಜೀವಿ. ಸಂಸ್ಕೃತದ ಜಗನ್ನಾಥ ಪಂಡಿತನಂತೆ ಅಹಂಕಾರಿಯೆಂದೂ, ಕಾಲಕಾಲಕ್ಕೆ ರಾಜರುಗಳನ್ನು ಹೊಗಳಿ ಕಪ್ಪಕಾಣಿಕೆ ಪಡೆದು ರಾಜವೈಭೋಗ ನಡೆಸಿದನೆಂಬ  ಪುಕಾರು ಶ್ರೀನಾಥನ ಬಗೆಗಿರುವುದಾದರೂ ಕವಿತ್ವದಲ್ಲಿ, ಭಾಷಾಪ್ರೌಢಿಮೆಯಲ್ಲಿ ತೆಲುಗು ನಾಡಿನಲ್ಲೇ ಅವನನ್ನು ಸರಿಗಟ್ಟುವ ಇನ್ನೊಬ್ಬ ಕವಿ ಬರಲಿಲ್ಲವೆಂಬುದೇ ಅವನ ಅಗ್ಗಳಿಕೆಗೆ ಸಾಕ್ಷಿ. ತೆಲುಗಿನಲ್ಲಿ ಚಾಟುಪದ್ಯಗಳ, ಆಶುಕವಿತೆಗಳ ಪರಂಪರೆಯನ್ನೇ ಶುರುಮಾಡಿದವನೂ ಇವನೇ. ಕೂತಲ್ಲಿ ನಿಂತಲ್ಲಿ ಪದ್ಯಹೇಳುವ ಈ ಕವಿಗೆ ಸ್ವತಃ ವಿದ್ವಾಂಸರಾಗಿದ್ದ ಕಾವ್ಯಪ್ರಿಯ ಕೊಂಡವೀಡು ರೆಡ್ಡಿಗಳು ವಿಶೇಷ ಗೌರವ ಕೊಡುತ್ತಿದ್ದರಲ್ಲಿ ಆಶ್ಚರ್ಯವಿಲ್ಲ.
ಎಷ್ಟೆಂದರೂ ಶೄಂಗಾರ ನೈಷದದ ಕರ್ತೃವಲ್ಲವೇ! ಶ್ರೀನಾಥ ರಸಿಕ ಶಿಖಾಮಣಿ. ರಾಜಮಂಡ್ರಿಯ ಬೀದಿಗಳಲ್ಲಿ ತಾನು ಭೇಟಿಯಾದ ಹೆಣ್ಮಕ್ಕಳ ಸೌಂದರ್ಯವನ್ನೆಲ್ಲ ತನ್ನ ವಿಧಿನಾಟಕದಲ್ಲಿ ಬಾಯ್ತುಂಬ ಹೊಗಳಿದ್ದಾನೆ. ರಾಜನರ್ತಕಿಯರಿಂದ ಹಿಡಿದು ಬೀದಿಯಲ್ಲಿ ಹೂಮಾರುವವಳು, ನೀರು ತರಲು ಬಂದವಳು, ಹೊಲಕ್ಕೆ ಬುತ್ತಿ ಒಯ್ಯುವವಳು ಈಗೆ ಒಬ್ಬರನ್ನೂ ಶ್ರೀನಾಥ ತನ್ನ ಕಾವ್ಯದಲ್ಲಿ ಬಿಟ್ಟಿಲ್ಲ.  
ಸೊಗಸು ಕೀಲ್ಜಡ ದಾನ ಸೋಗ ಕನ್ನುಲ ದಾನ
ವಜ್ರಾಲ ವಂಟಿ ಪಲ್ಚರುಸ ದಾನ.............
ತಿರಿಗಿಚೂಡವೇ ಮುತ್ಯಾಲ ಸರುಲ ದಾನ
ಚೇರಿ ಮಾಟಾಡು ಚಂಗಾವಿ ಚೀರದಾನ |
- ಸೊಗಸು ನೀಽಳ್ಜಡೆಯವಳೆ, ಕೋಲ್ಮಿಂಚು ಕಣ್ಣವಳೆ
ಬೆಳ್ ಹಾಲನೊರೆಯ ನಗುವಿನೆಳೆಯವಳೆಽಽಽಽ
ತಿರುಗಿ ನೋಡೆಲೇ, ನೋಡೆಲೇ.....ಮುತ್ತ ಮಣಿ ಮಾಲೆಯವಳೆ
ಸೇರಿ ಮಾತಾಡಲು ಬಾ ಕೆಂಪು ಸೀರೆಯವಳೇಽಽಽಽ
ಎಂದು ಶ್ರೀನಾಥನಿಂದ ಹೊಗಳಿಸಿಕೊಳ್ಳದ ಸುಂದರಿ ಕೊಂಡವೀಡಿನಲ್ಲಿರಲಿಲ್ಲ.

ವಿಧಿನಾಟಕದಲ್ಲಿ ಬರುವ ಆತನ ಒಂದು ಚಾಟುಪದ್ಯವನ್ನು ನೋಡಿ.
ಪೂಜಾರಿವಾರಿ ಕೋಡಲು ತಾಜಾರಗ
ಬಿಂದೆ ಜಾರಿ ಡಬ್ಬುನ ಬಡಿಯನ್
ಮೈಜಾರಿಕೊಂಬು ತಡಿಸಿನ ಬಾಜಾರೆ
ತಿರುಗಿ ಚೂಚಿ ಪಕ್ಕನ ನವ್ವುನ್
-ಪೂಜಾರಿಯಾ ಮಗಳು ತಾಜಾರಲು
ಬಿಂದಿ ಜಾರಿ ಡಬ್ಬನೆ ಬಡಿಯಲ್
ಮೈಜಾರಿಕೊಂಡರು ಸಾವರಿಸಿ ಬಾಜಾರಿ 
ತಿರುಗಿ ನೋಡಿ, ಪಕ್ಕುನೆ ನಕ್ಕಳ್

ರಾಮಾಯಣ, ಮಹಾಭಾರತ, ಸಂಸ್ಕೃತ ಕಾವ್ಯಗಳ ಪ್ರಭಾವದಾಚೆ ತಾನು ದಿನನಿತ್ಯ ನೋಡುವ ವಸ್ತುವನ್ನಿಟ್ಟುಕೊಂಡು ಕಾವ್ಯಗಳ ರಚನೆ ಮಾಡಿದ್ದು ಶ್ರೀನಾಥನ ವೈಶಿಷ್ಟ್ಯ.
       ತೆಲುಗಿನಲ್ಲಿ ಭಾಗವತವನ್ನು ಬರೆದ ಮಹಾಕವಿ ಬಮ್ಮೆರ ಪೋತನ ಶ್ರೀನಾಥನ ಭಾವ. ಆತ ಶ್ರೀಮಂತನಲ್ಲ. ಹೊಟ್ಟೆಪಾಡಿಗಾಗಿ ವ್ಯವಸಾಯ ಮಾಡುತ್ತಿದ್ದವನು. ಶ್ರೀನಾಥನಿಗೆ ಬಡವನಾದ ಪೋತನನ್ನು ಕಂಡರೆ ಹಾಸ್ಯ. ಒಂದು ದಿನ ಶ್ರೀನಾಥ ಪಲ್ಲಕ್ಕಿಯಲ್ಲಿ ಕುಳಿತು ಬರುತ್ತಿದ್ದಾಗ ಉಳುತ್ತಿದ್ದ ಪೋತನನನ್ನು ಕಂಡು ’ಹಾಲಿಕರು ಸುಖವಾಗಿದ್ದೀರಾ?’ ಎಂದು ತಮಾಶೆ ಮಾಡಿದನಂತೆ. ಅದಕ್ಕೆ ಪೋತನರಾಜು ಕೊಟ್ಟ ಉತ್ತರ ಹೀಗಿದೆ.
ಬಾಲರಸಾಲನವಪಲ್ಲವ ಕೋಮಲ ಕಾವ್ಯಕನ್ನಿಕನ್
ಗೂಳುಲಕಿಚ್ಚಿ ಯಪ್ಪುಡುಪುಕೂಡು ಭುಜಿಂಚುಟಕಂಟಿ ಸತ್ಕವುಲ್ |
ಹಾಲಿಕಲೈನನೇಮಿ ಗಹನಾಂತರಸೀಮಲ ಕಂದಮೂಲಿಕೌ
ದ್ದಾಲಿಕು ಲೈನ ನೇಮಿ ನಿಜದಾರಸುತೋದರ ಪೋಷಣಾರ್ಥಮೈ ||
- ಎಳೆಮಾವಿನಾ ಚಿಗುರಂಥ ಕೋಮಲ ಕಾವ್ಯಕನ್ನಿಕೆಯನ್ನು,
ಖೂಳರಿಗೆ ಕೊಟ್ಟು ನೀಚ ಕೂಳ ತಿನ್ನುವುದಕಿಂತ 
ಸತ್ಕವಿಗಳು ತಮ್ಮ ಹೆಂಡತಿ ಮಕ್ಕಳ ಪೋಷಣೆಗಾಗಿ 
ಹಾಲಿಕರಾದರೂ ಸರಿಯೆ, ಕಂದಮೂಲಗಳ ಕಿತ್ತು ತಿಂದರೂ ಸರಿಯೆ.

       ಇನ್ನೊಮ್ಮೆ ಶ್ರೀನಾಥನು ಬಡತನದಲ್ಲಿ ಬೇಯುವುದಕ್ಕಿಂತ ಭಾಗವತಕಾವ್ಯವನ್ನು ಯಾವನಾದರೂ ಅರಸನಿಗೆ ಅಂಕಿತಕೊಟ್ಟರೆ ಬೇಕಾದ ಭಾಗ್ಯ ಲಭಿಸುವುದೆಂದು ಹೇಳಿ ಪೋತನನನ್ನು ರಾಜಾಸ್ಥಾನಕ್ಕೆ ಕರೆದುಕೊಂಡು ಹೋಗಲೆತ್ನಿಸಿದನಂತೆ. ಶ್ರೀನಾಥ ಹೇಳಿದ ಮಾತುಗಳು ಪೋತನನಿಗೆ ಚಿಂತೆಯನ್ನು ಉಂಟುಮಾಡಿದವು. ತನ್ನ ಬಡತನದ ಬಗ್ಗೆ ಚಿಂತಿಸುತ್ತ ಮಲಗಿದ್ದ ಪೋತನನನಿಗೆ ಆ ರಾತ್ರಿ ಬಿಳಿಯ ಉಡುಪನ್ನು ಧರಿಸಿದ, ಹೊಳೆಯುವ ಕಿರೀಟವನ್ನು ಹಾಕಿಕೊಂಡ, ತೇಜೋಮೂರ್ತಿಯಾದ ದೇವಿಯೊಬ್ಬಳನ್ನು ಕಂಡಂತೆ ಆಯಿತು. ಸ್ವಲ್ಪ ಗಮನವಿಟ್ಟು ನೋಡಿದಾಗ ಅವಳು ಸರಸ್ವತಿ ಎಂದು ಗುರುತಿಸಿದ. ಆದರೆ ಸರಸ್ವತಿ ಅಳುತ್ತಿದ್ದಾಳೆ! ಪೋತನನಿಗೆ ಆಶ್ಚರ್ಯವಾಯಿತು. ಇದೇನು ಬ್ರಹ್ಮನ ರಾಣಿ, ವಿದ್ಯಾಭಿಮಾನಿ ದೇವತೆಯ ಕಣ್ಣುಗಳಲ್ಲಿ ನೀರು! ಇದಕ್ಕೆ ಕಾರಣವೇನು? ತಾನು ಎಲ್ಲಿ ಭಾಗವತವನ್ನು ರಾಜನಿಗೆ ಅಂಕಿತ ಮಾಡಿಬಿಡುತ್ತೇನೆಯೋ ಎಂದು ಸರಸ್ವತಿ ಅಳುತ್ತಿದ್ದಾಳೆ ಎನ್ನಿಸಿತು. ಆಗ ಪೋತನ ಅವಳಿಗೆ ಹೇಳಿದ:
ಕಾಟುಕಕಂಟಿನೀರು ಚನುಕಟ್ಟುಪಯಿ ಬಡ ನೇಲ ಯೇಡ್ಚೆದೋ
ಕೈಟಭದೈತ್ಯಮರ್ದನುನಿ ಗಾದಿಲಿಕೋಡಲ! ಯೋಮದಂಬ! ಯೋ 
ಹಾಟಕುಗರ್ಭುರಾಣಿ! ನಿನು ನಾಕಟಿಕಿಂಗೊನಿಪೋಯಿ ಯಲ್ಲ ಕ
ರ್ಣಾಟ ಕಿರಾಟ ಕೀಚಕುಲ ಕಮ್ಮಿ ದ್ರಿಶುದ್ಧಿಗೆ ನಮ್ಮು ಭಾರತೀ ||
ತಾಯೇ, ರಾಕ್ಷಸರನ್ನು ಕೊಂದ ವಿಷ್ಣುವಿನ ಸೊಸೆ ಭಾರತೀಯೆ,, ಕಣ್ಣಿಗೆ ಹಚ್ಚಿದ ಕಾಡಿಗೆ ಕರಗುವಂತೆ ಏಕೆ ಕಣ್ಣೀರು ಹರಿಸುತ್ತಿರುವೆ? ಹಸಿವನ್ನು ಕಳೆದುಕೊಳ್ಳುವುದಕ್ಕಾಗಿ ನಾನು ನಿನ್ನನ್ನು ದುಷ್ಟರಾದ ರಾಜರಿಗೆ ಮಾರುವುದಿಲ್ಲ. ನನ್ನ ಮಾತುಗಳನ್ನು ನಂಬು.

       ಒಮ್ಮೆ ಶ್ರೀನಾಥ ವಿಜಯನಗರದ ಆಹ್ವಾನದ ಮೇರೆಗೆ ಪ್ರೌಢದೇವರಾಯನನ್ನು ನೋಡಬಯಸಿ ಕನ್ನಡ ರಾಜ್ಯಕ್ಕೆ ಬಂದನಂತೆ. ಆದರೆ ಎಷ್ಟು ದಿನ ಕಾದರೂ ರಾಜನ ದರ್ಶನ ಲಭಿಸಲಿಲ್ಲ. ಆಗ ಆತನು ಬೇಸರಗೊಂಡು ಹೇಳಿದ ಪದ್ಯವಿದು.
ಕುಲ್ಲಾಯುಂಚಿತಿ ಗೋಕಸುಟ್ಟಿತಿ ಮಹಾಕೂರ್ಪಾಸಮುನ್ದೊಡಗಿತಿನ್
ವೆಲ್ಲುಲ್ಲಿನ್ ತಿಲಪಿಷ್ಟಮುನ್ ಪಿಸಿಕಿತಿನ್ ವಿಶ್ವಸ್ತ ವಡ್ಡಿಂಪಗಾ
ಸಲ್ಲಾನಂಬಲಿ ದ್ರಾವಿತಿನನ್ ರುಚುಲು ದೋಸಂಬಂಚು ಬೋನಾಡಿತಿನ್
ತಲ್ಲೀ ಕನ್ನಡರಾಜ್ಯಲಕ್ಷ್ಮೀ ದಯಲೇದಾ ನೇನು ಶ್ರೀನಾಥುಡನ್ !
ಕುಲಾವಿಯನ್ನಿಟ್ಟುಕೊಂಡೆ. ರುಮಾಲನ್ನು ತಲೆಗೆ ಸುತ್ತಿದೆ. ನಿಲುವಂಗಿಯನ್ನು ತೊಟ್ಟುಕೊಂಡೆ. ಬೆಳ್ಳುಳ್ಳಿ-ಎಳ್ಳುಗಳ ಚಟ್ಣಿಯನ್ನು ತಿನ್ನಲಾಗದೇ ಹಿಸುಕಿ ಬಿಸಾಟೆ. ಗಂಜಿಯನ್ನು ಕುಡಿದೆ. ರುಚಿಗಳು ದೋಷವೆಂದು ಬಿಟ್ಟುಬಿಟ್ಟೆ. ತಾಯೀ, ಕನ್ನಡ ರಾಜ್ಯಲಕ್ಷ್ಮೀ, ಇಷ್ಟಾದರೂ ನಿನಗೆ ದಯೆ ಬರಲಿಲ್ಲವೇ! ನಾನು ಶ್ರೀ’ನಾಥ’.
ಇದನ್ನು ಕೇಳಿಸಿಕೊಂಡ ದೇವರಾಯ ಮುಜುಗರಪಟ್ಟುಕೊಂಡು ರಾಜಸಂದರ್ಶನ ನೀಡಿದ್ದಲ್ಲದೇ ಕನಕಾಭಿಷೇಕವನ್ನೂ ನೆರವೇರಿಸಿದನಂತೆ.
ಕನಕಾಭಿಷೇಕ ಮಾಡಿಸಿಕೊಂಡ ಮೇಲೆ ಶ್ರೀನಾಥ ’ನಾ ಕವಿತ್ವಂಬು ನಿಜಮು ಕರ್ನಾಟ ಭಾಷಾ’ ಕವಿತ್ವದ ನಿಜಭಾಷೆಯೆಂದರೆ ಕನ್ನಡಭಾಷೆಯೇ ಎಂದು ಕನ್ನಡವನ್ನು ಹೊಗಳದೇ ಇರಲಿಲ್ಲ.

       ವಿಜಯನಗರದ ವಿದ್ವಾಂಸರನ್ನೆಲ್ಲ ವಾದದಲ್ಲಿ ಸೋಲಿಸಿದ ಶ್ರೀನಾಥ ಕನ್ನಡರಾಜ್ಯದಲ್ಲಿ ವಿಜಯೋತ್ಸವವನ್ನಾಚರಿಸಿ ತನ್ನ ನಾಡಿದೆ ಹಿಂದಿರುಗುವಷ್ಟರಲ್ಲಿ ಕೊಂಡವೀಡನ್ನು ಮೋಸದಿಂದ ಆಕ್ರಮಿಸಿದ ರಾಚಕೊಂಡದ ರಾವುಸಿಂಗಭೂಪಲನು ಕೊಂಡವೀಡಿನ ವೇಮರೆಡ್ಡಿಯನ್ನು ಕೊಂದು ಕುಲದೈವ ಪುತರಾಜು ಕಟಾರಿಯನ್ನು ಕದ್ದೊಯ್ದನಂತೆ. ಶ್ರೀನಾಥ ತನ್ನ ಅಪ್ರತಿಮ ವಿದ್ವದ್ಬಲದಿಂದ ರಾಜಕೊಂಡ ಅರಸನ ಮನಗೆದ್ದು ಕೊಂಡವೀಡಿನ ಕುಲದೈವವನ್ನು ರಾಜ್ಯಕ್ಕೆ ತಂದು ಪುನರ್ಪ್ರತಿಷ್ಟಾಪಿಸಿದನೆಂದು ಐತಿಹ್ಯವಿದೆ. ಮುಂದೆ ತನ್ನ ಪ್ರಭು ವೇಮನಾಥನಿಲ್ಲದ ರಾಜ್ಯದಲ್ಲಿರಲಾಗದೇ ಶ್ರೀನಾಥ ಕೊಂಡವೀಡನ್ನು ತೊರೆದ. ಅವಕಾಶಕ್ಕಾಗಿ ಕಾಯುತ್ತಿದ್ದ ಗಜಪತಿ ರಾಜರು ಕೊಂಡವೀಡನ್ನಾಕ್ರಮಿಸಿದರು.
ಬಹುರಾಜ ಸಮ್ಮಾನಿತನಾಗಿ ವೈಭವದ ಜೀವನವನ್ನು ನಡೆಸಿದ್ದ ಶ್ರೀನಾಥ ತನ್ನ ಕೊನೆಯ ಕಾಲಕ್ಕೆ ಬಹಳ ಕಷ್ಟಕ್ಕೀಡಾದ. ರಾಜಾಶ್ರಯ ತಪ್ಪಿಹೋಗಿತ್ತು. ಕೊಂಡವೀಡಿನಲ್ಲಿರಲಾರದೇ ಗುಂಟೂರು ಪ್ರಾಂತ್ಯದ ಪಾಲ್ನಾಡಿಗೆ ವಲಸೆ ಹೋದ. ’ಚಿನ್ನ ಚಿನ್ನ ಗುಳ್ಳು, ಚಿಲ್ಲರೆ ದೇವುಳ್ಳು, ನಾಕು ಲೇನಿ ನೀಳ್ಳು, ಸಜ್ಜ ಜೊನ್ನ ಕೂಳ್ಳು’(ಸಣ್ಣ ಸಣ್ಣ ಗುಡಿಗಳು, ಚಿಲ್ಲರೆ ದೇವರುಗಳು, ನೀರಿಲ್ಲದ ಊರುಗಳು, ಸಜ್ಜೆ ಜೋಳದೂಟಗಳು) ಎಂದು ಪಾಲ್ನಾಡನ್ನು ತಾತ್ಸಾರ ಮಾಡುತ್ತಿದ್ದವ ಕೊನೆಗೆ ಅಲ್ಲಿಯೇ ಇರಬೇಕಾಯಿತು.
ಭೋಜನಪ್ರಿಯ ಶ್ರೀನಾಥ ಪಾಲ್ನಾಡಿಗೆ ಹೋದಾಗ ಹೇಳಿದ ಪದ್ಯವಿದು.
ಗರಳಮು ಮ್ರಿಂಗಿತಿ ನಂಚುಂ
ಮುರಹರ! ಗರ್ವಿಂಚಬೋಕು ಪೋಪೋ ನೀ
ಬಿರುದಿಂಕ ಗಾನವಚ್ಚೆಡಿ 
ಮೆರೆಸೆಡಿ ರೇನಾಟಿಜೊನ್ನಮೆದುಕುಲು ತಿನುಮೀ
ಗರಲವ ನುಂಗಿದೆನೆಂದು ಗರ್ವಿಸಬೇಡವೋ 
ಮುರಹರ! ಆ ಬಿರುದಿನ್ನು ಅಳಿಸು 
ರೇನಾಡಿನ ಜೋಳದಗುಳನ್ನು ತಿಂದು ನೋಡೆಲೋ
ಆಮೇಲೆ ನಿನ್ನ ಮಹಿಮೆಯನು ತಿಳಿಸು

ಪಲ್ನಾಡಿನಲ್ಲಿ ಭಾರೀ ಜಲಕ್ಷಾಮ. ಜೊತೆಗೆ ಬಡತನ. ಅಲ್ಲಿನ ದುರವಸ್ಥೆಯನ್ನು ಎಷ್ಟು ಹೇಳಿದರೂ ಶ್ರೀನಾಥನಿಗೆ ತೃಪ್ತಿಯಿಲ್ಲ.
ರಸಿಕುಡು ಪೋವಡು ಪಲ್ನಾಡು 
ಎಸಗಂಗಾ ರಂಭಯೈನ ನೇಕುಲೆವಡುಕುನ್
ವಸುಧೇಶುಡೈನ ದುನ್ನುನು 
ಕುಸುಮಾಸ್ತ್ರುಂಡೈನ ಜೊನ್ನಕೂಡೇ ಕುಡುಚುನ್ |
- ರಸಿಕನಾದವನು ಪಲ್ನಾಡಿಗೆ ಹೋಗಬಾರದು. ಅಲ್ಲಿ ರಂಭೆಯಾದರೂ ಹತ್ತಿ ನೂಲಬೇಕು. ರಾಜನಾದರೂ ಉಳಬೇಕು. ಸಾಕ್ಷಾತ್ ಮನ್ಮಥನಾದರೂ ಜೋಳದ ಕೂಳನ್ನೇ ತಿನ್ನಬೇಕು.

ಒಮ್ಮೆ ಪಾಲ್ನಾಡಿನಲ್ಲಿ ದಾಹ ತಾಳಲಾರದೇ ಶ್ರೀನಾಥ ತನ್ನ ಇಷ್ಟದೈವ ಶಿವನನ್ನು ಕುರಿತು ಹೀಗೆ ನುಡಿದನಂತೆ.
ಸಿರಿಗಲವಾನಿಕಿ ಜೆಲ್ಲುನು 
ತರುಣುಲ ಬದಿಯಾರುವೇಲ ತಗ ಪೆಂಡ್ಲಾಡನ್ 
ತಿರಿಪೆಮುನಕಿದ್ದರಾಂಡ್ರಾ ಪರಮೇಶಾ ! 
ಗಂಗ ವಿಡುಮು ಪಾರ್ವತಿ ಚಾಲು
- ಸಿರಿತನದಲ್ಲಿ ಮುಳುಗೆದ್ದ ಶ್ರೀಕೃಷ್ಣನಂಥವರು ಹದಿನಾರು ಸಾವಿರ ಮದುವೆಯಾದರೂ ನಡೆದೀತು. ನಿನ್ನಂಥ ತಿರುಪೆಯವನಿಗೇಕಯ್ಯ ಎರಡು ಹೆಂಡತಿಯರು ಪರಮೇಶಾ! ಗಂಗೆಯನ್ನು ಬಿಟ್ಟುಕೊಡಯ್ಯ. ಪಾರ್ವತಿ ಸಾಕು. (ಈ ಶ್ಲೋಕವನ್ನು ಕೇಳಿದ ಶಿವ ಶ್ರೀನಾಥನೂರಿನಲ್ಲಿ ಮಳೆಯನ್ನೇ ಸುರಿಸಿದನಂತೆ ಎಂಬುದು ಕಥೆಯಷ್ಟೆ) 

       ರಾಜಾಶ್ರಯವಿಲ್ಲದೇ ಹೋದಾಗ ಶ್ರೀನಾಥ ಕೃಷ್ಣಾ ತೀರದ ಬೊಡ್ಡುಪಲ್ಲಿಯೆಂಬ ಗ್ರಾಮವನ್ನು ಗುತ್ತಿಗೆಗೆ ತೆಗೆದುಕೊಂಡ. ದುರ್ದೈವದಿಂದ ಮೂರು ವರ್ಷ ಪ್ರವಾಹ ಬಂದು ಬೆಳೆಯೆಲ್ಲ ನಾಶವಾಯಿತು. ಗುತ್ತಿಗೆ ಕಾಸು ಹೊರಡುವುದೇ ಅಸಾಧ್ಯವಾಯಿತು. ಶ್ರೀನಾಥನನ್ನು ಕಂಡರಾಗದವರು ಗಜಪತಿ ರಾಜನಿಗೆ ದೂರಿತ್ತರು. ಜಮೀನ್ದಾರ ಕವಿರಾಜನಿಗೆ ಕೋಳ ತೊಡಿಸಿ, ಕಲ್ಗುಂಡು ಹೊರಿಸಿ ಮೆರವಣಿಗೆ ಮಾಡಿ ಅವಮಾನಪಡಿಸಿದನಂತೆ. ಕನ್ನಡರಾಯನ ಮುತ್ತಿನ ಸಾಲೆಯಲ್ಲಿ ಕನಕಸ್ನಾನ ಮಾಡಿದ ಕವಿ ತನ್ನ ಪೂರ್ವವೈಭವವನ್ನು ನೆನೆಸಿಕೊಂಡು ಪ್ರಲಾಪಿಸುತ್ತಾನೆ.
ಕವಿರಾಉಕಂಠಂಬು ಕೌಗಿಲಿಂಚೆನು ಗದಾ
ಪುರವೀಧಿನೆದುರೇಗ ಬೊಗಡದಂಡ
ಸಾರ್ವಭೌಮುನಿ ಭುಜಾಸ್ತಂಭಮೆಕ್ಕೆನುಗದಾ
ನಗರಿವಾಕಿಟಿನುಂಡು ನಲ್ಲಗುಂಡು ||
ವೀರಭದ್ರಾರೆಡ್ಡಿ ವಿದ್ವಾಂಸು ಮುಂಜೇತ
ವಿಯ್ಯಮಂದೆನುಗದಾ ವೆದುರುಗೊಡಿಯ
ಆಂಧ್ರನೈಷಧಕರ್ತ ಯಂಘ್ರಿಯುಗ್ಮಂಬುನ
ದಗಿಲಿಯುಂಡೆನುಗದಾ ನಿಗಳಯುಗಮು ||
ಕೃಷ್ಣವೇಣಮ್ಮ ಗೊನಿಪೋಯೆನಿಂತ ಫಲಮು
ವಿಲವಿಲಾಕ್ಷುಲು ದಿನಿಪೋಯೆ ತಿಲಲುಪೆಸಲು
ಬೊಡ್ಡುಪಲ್ಲೆನು ಗೊಡ್ಡೇರಿ ಮೋಸಪೋತಿ
ನೆಟ್ಟು ಚೆಲ್ಲಿಂತು ಡಂಕಂಬುಲೇಡುನೂರ್ಲು ?
- ಕವಿರಾಜನ ಕೊರಳಿಗೂ  ಅಪಮಾನಕರ ದಂಡೆ ಬಿತ್ತಲ್ಲವೇ? ಕವಿಸಾರ್ವಭೌಮನ ಭುಜದಿಂದ ಊರ ಬಾಗಿಲ ಕರಿಗುಂಡನ್ನು ಎತ್ತಿಸಿದರಲ್ಲವೇ? ವೀರಭದ್ರಾರೆಡ್ಡಿಯ ಆಸ್ಥಾನ ವಿದ್ವಾಂಸನ ಮುಂಗೈಗೆ ಬಿದಿರ ಕೋಳವನ್ನು ಹಾಕಿದರೇ? ಆಂಧ್ರನೈಷಧಕರ್ತನ ಅಂಘ್ರಿಯುಗ್ಮಕ್ಕೆ ಸಂಕೋಲೆ ತೊಡಿಸಿದರೆ! ಕೃಷ್ಣಮ್ಮ ಫಲವನೆಲ್ಲ ಕೊಂಡುಹೋದಳು. ಬೊಡ್ಡುಪಲ್ಲಿಯ ಕುಗ್ರಾಮಕ್ಕೆ ಬಂದು ಮೋಸಹೋದೆ. ಏಳುನೂರು ಟಂಕಗಳ ಕಂದಾಯವನ್ನೆಂತು ಸಲ್ಲಿಸಲಿ?

       ಶ್ರೀನಾಥನ ಕಷ್ಟವನ್ನು ನೋಡಲಾಗದೇ ದುಃಖಪಟ್ಟ ಊರಜನ ತಾವೇ ಒಂದಕ್ಕೆರಡು ಕಂದಾಯಕೊಟ್ಟು ಅವನನ್ನು ಸೆರೆಯಿಂದ ಬಿಡಿಸಿದರಂತೆ. ಸಂಸ್ಕೃತದ ಜಗನ್ನಾಥ ಪಂಡಿತನಿಗೂ, ಈ ಶ್ರೀನಾಥನಿಗೂ ಎಷ್ಟೆಲ್ಲ ಸಾಮ್ಯಗಳಿವೆ. ಇಬ್ಬರೂ ಪೂರ್ವಮೀಮಾ೦ಸ ತರ್ಕವಿತರ್ಕ ವೈಯಾಕರಣ ವೇದಾ೦ತ ವೈಶೇಷಿಕ ವಿಶೇಷಣನ್ಯಾಯ ಶಾಸ್ತ್ರಾಲ೦ಕಾರಗಳ ಅದ್ವಿತೀಯ ವಿದ್ವನ್ಮಣಿಗಳು. ಒಬ್ಬ ಸ೦ಸ್ಕೃತ ವಿದ್ವತ್ಸಾಹಿತ್ಯದ ಅ೦ತಿಮಯುಗದ ಅತಿಪ್ರಸಿದ್ಧ ಪ್ರತಿನಿಧಿಯಾದರೆ ಇನೊಬ್ಬ ಆಂಧ್ರಭಾಷೆಯ ಕವಿತ್ವವನ್ನು ಮುಗಿಲೆತ್ತರಕ್ಕೆ ಬೆಳೆಸಿದ ಮೊದಲಿಗ. ಇಬ್ಬರೂ ಪರಮ ರಸಿಕ ಶಿಖಾಮಣಿಗಳು. ರಾಜಾಧಿರಾಜರುಗಳನ್ನು ಹೊಗಳಿ ಜೀವನಪೂರ್ತಿ ವೈಭವದ ಸುಪ್ಪತ್ತಿಗೆಯಲ್ಲಿ ಬದುಕಿದವರೇ. ಪಂಡಿತಕುಲವನ್ನೆಲ್ಲ ಚೆಂಡಾಡಿ ಪಾಖಂಡಿಗಳೆನಿಸಿದರೂ ಒಬ್ಬ ಪರಮ ವೈಷ್ಣವ, ಇನ್ನೊಬ್ಬ ಮಹಾ ಶಿವಭಕ್ತ. ಆದರೆ ಕೊನೆಗಾಲದಲ್ಲಿ ಇಬ್ಬರೂ ಪಡಬಾರದ ಕಷ್ಟಪಡಬೇಕಾಯಿತು. ಜಗನ್ನಾಥ ಗಂಗೆಯಲ್ಲಿ ಐಕ್ಯಗೊಂಡರೆ ಶ್ರೀನಾಥ ಕೃಷ್ಣಾನದಿಯನ್ನು ಪ್ರವೇಶಿಸಿ ಪ್ರಾಣತ್ಯಾಗಕ್ಕೆ ಮುಂದಾದ. ಆ ಅವಸಾನಕಾಲದಲ್ಲೂ ಸಹ ಆತ ತನ್ನ ಆತ್ಮಪ್ರತ್ಯಯವನ್ನು ಬಿಡಲಿಲ್ಲ.
ಕಾಶಿಕಾವಿಶ್ವೇಷು ಗಲಿಸೆ ವೀರಾರೆಡ್ಡಿ
ರತ್ನಾಂಬರಂಬು ಲೇರಾಯಡಿಚ್ಚು
ರಂಭಗೂಡೆ ತೆನುಂಗುರಾಯರಾಹತ್ತುಂಡು
ಕಸ್ತೂರಿ ಕೇರಾಜು ಪ್ರಸ್ತುತಿಂತು |
ಸ್ವರ್ಗಸ್ಥುಡಯ್ಯೆ ವಿಸನಮಂತ್ರಿ ಮರಿ ಹೇಮ
ಪಾತ್ರಾನ್ನ ಮೆವ್ವನಿಪಂಕ್ತಿ ಗಲದು
ಕೈಲಾಸಗಿರಿ ಬಂದೆ ಮೈಲಾರುವಿಭುಡೇಗಿ
ದಿನವೆಚ್ಚ ಮೇರಾಜು ತೀರ್ಪಗಲಡು |
ಭಾಸ್ಕರುಡು ಮುನ್ನೆ ದೇವುನಿಪಾಲಿ ಕರಿಗೆ
ಗಲಿಯುಗಂಬುನ ನಿಕನುಂಡ ಗಷ್ಟಮನುಚು
ದಿವಿಜಕವಿವರು ಗುಂಡಿಯಲ್ ದಿಗ್ಗುರನಗ
ನರುಗುಚುನ್ನಾಡು ಶ್ರೀನಾಥುಡಮರಪುರಿಕಿ |
- ವೀರಾರೆಡ್ಡಿ ಕಾಶಿ ವಿಶ್ವೇಶ್ವರನನ್ನು ಸೇರಿಬಿಟ್ಟ. ಇನ್ನು ರತ್ರಾಂಬರಗಳನ್ನು ಯಾವ ರಾಯ ಕೊಡುತ್ತಾನೆ? ತೆಲುಗುರಾಯ ರಂಭೆಯನ್ನು ಕೂಡಿದ. ಕಸ್ತೂರಿಗಾಗಿ ಇನ್ಯಾರನ್ನು ಹೊಗಳಲಿ? ವಿಸನ ಮಂತ್ರಿ ಸ್ವರ್ಗಸ್ಥನಾದ. ಹೇಮಪಾತ್ರಾನ್ನವಿನ್ನು ಯಾರ ಪಂಕ್ತಿಯಲ್ಲಿ ಲಭಿಸೀತು? ಮೈಲಾರ ವಿಭುವು ಕೈಲಾಸಗಿರಿಯನ್ನು ಹತ್ತಿದ. ಇನ್ನು ನನ್ನ ದಿನದ ವೆಚ್ಚವನ್ನು ಯಾವ ರಾಜ ತೀರಿಸುತ್ತಾನೆ? ಭಾಸ್ಕರನು ಮೊದಲೇ ದೇವರ ಬಳಿ ಸೇರಿದ. ಇನ್ನು ಕಲಿಯುಗದಲ್ಲಿರುವುದು ಕಷ್ಟವೆಂದು ಯೋಚಿಸಿ ಶ್ರೀನಾಥನೂ ಅಮರಪುರಿಗೆ ಹೋಗುತ್ತಿದ್ದಾನೆ. ಅಯ್ಯೋ ಶ್ರೀನಾಥ ಸ್ವರ್ಗಕ್ಕೆ ಬಂದರೆ ನನ್ನ ಸ್ಥಾನಕ್ಕೆ ಸಂಚಕಾರವೆಂದು ದೇವಕವಿ ಶುಕ್ರನ ಎದೆ ದಿಗ್ಗೆಂದು ಹೊಡೆದುಕೊಳ್ಳುತ್ತಿದೆ.

       ಶ್ರೀನಾಥನ ಕಾವ್ಯವೈದೂಷ್ಯಕ್ಕೆ ಆತನ ಮಾನಸೋಲ್ಲಾಸವೊಂದು ಅದ್ಭುತ ಉದಾಹರಣೆ. ಈ ಚತುಷ್ಪಾದ ಯಮಕಚಿತ್ರಕವಿತೆಯನ್ನು ನೋಡಿ. ಇದು ಶುರುವಾಗುವುದು ಈ ಸೀಸಪದ್ಯ ಮತ್ತದರ ತೇಟಗೀತದಿಂದ
ರಾಜನಂದನರಾಜ ರಾಜಾತ್ಮಜುಲು ಸಾಟಿ ತಲಪನಲ್ಲಯವೇಮ ಧರಣಿಪತಿಕಿ
ರಾಜನಂದನರಾಜ ರಾಜಾತ್ಮಜುಲು ಸಾಟಿ ತಲಪನಲ್ಲಯವೇಮ ಧರಣಿಪತಿಕಿ |
ರಾಜನಂದನರಾಜ ರಾಜಾತ್ಮಜುಲು ಸಾಟಿ ತಲಪನಲ್ಲಯವೇಮ ಧರಣಿಪತಿಕಿ
ರಾಜನಂದನರಾಜ ರಾಜಾತ್ಮಜುಲು ಸಾಟಿ ತಲಪನಲ್ಲಯವೇಮ ಧರಣಿಪತಿಕಿ ||
ಭಾವಭವಭೋಗ ಸತ್ಕಳಾ ಭಾವಮುಲನು
ಭಾವಭವಭೋಗ ಸತ್ಕಳಾ ಭಾವಮುಲನು |
ಭಾವಭವಭೋಗ ಸತ್ಕಳಾ ಭಾವಮುಲನು
ಭಾವಭವಭೋಗ ಸತ್ಕಳಾ ಭಾವಮುಲನು ||
ಸೀಸಗೀತದ ಮತ್ತು ತೇಟಗೀತೆಯ ಮೊಲನೇ ಸಾಲಿನ ಅರ್ಥ ರಾಜ=ಚಂದ್ರನಿಗೆ, ನಂದನ=ಮಗನಾದ ಬುಧನು, ರಾಜ, ರ=ಸಮರ್ಥನಾದ, ಅಜ=ಈಶ್ವರನು, ರಾಜ=ದೇವೇಂದ್ರನು, ಆತ್ಮಜ=ಬ್ರಹ್ಮ, ಇವರು ಸಾಟಿ. ಯಾವುದರಲ್ಲೆಂದರೆ, ಭಾವ=ಬುದ್ಧಿಯಲ್ಲಿ, ಭವ= ಐಶ್ವರ್ಯದಲ್ಲಿ, ಭೋಗ=ವೈಭವದಲ್ಲಿ, ಸತ್ಕಳಾ= ಶ್ರೇಷ್ಠವಾದ ವಿದ್ಯೆಗಳ, ಭಾವ=ಅತಿಶಯದಲ್ಲಿ.
ಅದೇ ಎರಡನೆಯಪಾದದಲ್ಲಿ
ರಾಜನಂದನ, ರ=ಮನೋಹರವಾದ, ಅಜ=ಶಿವನಿಗೆ, ನಂದನ=ಮಗನಾದ ಕುಮಾರಸ್ವಾಮಿ, ರಾಜ=ಕುಬೇರ, ರಾಜ ರ=ಶ್ರೇಷ್ಠನಾದ ಅಜ= ರಘುಕುಮಾರನಾದ ಅಜ, ಆತ್ಮಜ = ಚಂದ್ರ, ಇವರು ಸಾಟಿ. ಯಾವುದರಲ್ಲಿ ಎಂದರೆ, ಭಾವ=ಕ್ರಿಯೆಯಲ್ಲಿ, ಭವ=ಧನದಲ್ಲಿ, ಭೋಗ=ಪಾಲನೆಯಲ್ಲಿ, ಸತ್ಕಳಾ, ಸತ್=ಯೋಗ್ಯವಾದ, ಕಳಾ=ಕಾಂತಿಯ, ಭಾವ=ಬೃಂದದಲ್ಲಿ.
ಅದೇ ಮೂರನೆಯಪಾದ
ರಾಜನಂದನ, ರ= ಚಿನ್ನದಂಥ ದೀಪ್ತಿಯುಳ್ಳ, ಅಜ=ಬ್ರಹ್ಮನಿಗೆ, ನಂದನ=ಪುತ್ರನಾದ ಸನತ್ಕುಮಾರನೂ, ರಾಜ= ಕ್ಷತ್ರಿಯನು, ರಾಜ ರ=ಶ್ರೇಷ್ಠನಾದ ಅ=ಬ್ರಹ್ಮನ ಜ=ಮಗ ವಸಿಷ್ಠನೂ, ಆತ್ಮ= ಬೃಹಸ್ಪತಿಯಲ್ಲಿ ಜ=ಹುಟ್ಟಿದ ಕಚನೂ ಸಾಟಿ. ಯಾವವಿಷಯಗಳಲ್ಲಿ ಎಂದರೆ, ಭಾವ=ಆತ್ಮಜ್ಞಾನದಲ್ಲಿ, ಭವ=ಜನನದಲ್ಲಿ, ಭೋಗ=ಅನುಭವದಲ್ಲಿ, ಸತ್ಕಳಾ=ಅಭಿವೃದ್ಧಿಹೊಂದುವ, ಭಾವ=ಪದ್ಧತಿಯಲ್ಲಿ. 
ನಾಲ್ಕನೆಯಪಾದದಲ್ಲಿ
ರಾಜನಂದನ, ರ=ಗೌರವಯುಕ್ತನಾದ ಅಜ=ಮನ್ಮಥನಿಗೆ ನಂದನ=ಕುಮಾರನಾದ ಅನಿರುದ್ಧನು, ರಾಜ, ರ= ಎಲ್ಲೆಡೆ ವ್ಯಾಪಿಸಿರುವ ಅಜ= ವಿಷ್ಣು, ರಾಜ=ಯಕ್ಷ, ಆತ್ಮಜ=ಮನ್ಮಥ, ಇವರು ಸಾಟಿ. ಯಾವುದರಲ್ಲೆಂದರೆ, ಭಾವ=ಆಕಾರದಲ್ಲಿ, ಭವ=ಸಂಸಾರದಲ್ಲಿ, ಭೋಗ= ಸಂಭೋಗದಲ್ಲಿ, ಸತ್ಕಳಾ= ಸೌಂದರ್ಯದ ಒಂದು ಭಾವ=ರೀತಿಯಲ್ಲಿ.
ಶ್ರೀನಾಥ ಕಾವ್ಯಪ್ರೌಢಿಮೆಗೆ ಬೇರೆ ಉದಾಹರಣೆ ಬೇಕೇ?

Tuesday, May 24, 2016

ಶ್ರೀಮಚ್ಛಂಕರಭಗವತ್ಪಾದ ಚರಿತ್ರ: ಜನ್ಮ ಪ್ರಕರಣ


       ಆಚಾರ್ಯ ಶಂಕರರ ಚರಿತ್ರವಿಮರ್ಶೆಗೆ ಶಂಕರ ವಿಜಯಗಳಿಗಿಂತ ಅವರದೇ ಗ್ರಂಥಗಳ ಅಂತರಂಗಪರೀಕ್ಷೆ ಮುಖ್ಯ. ಆದರೆ ದುರದೃಷ್ಟವೆಂದರೆ ಶಂಕರರ ನಿಶ್ಚಿತ ಗ್ರಂಥಗಳು ಯಾವವು ಎಂದು ನಿಶ್ಚಯಿಸುವುದೇ ದೊಡ್ಡ ಕಷ್ಟವಾಗಿದೆ. ಶೈಲಿಯನ್ನು ಗಮನಿಸಿದರೆ ಬ್ರಹ್ಮಸೂತ್ರಗಳಿಗೆ ವ್ಯಾಖ್ಯಾನ ಬರೆದ ಶಂಕರರೇ ಸೌಂದರ್ಯಲಹರಿಯನ್ನು ಬರೆದರೆಂಬುವುದನ್ನು ನಂಬುವುದು ಕಷ್ಟವೆಂದೇ ಕೆಲ ವಿದ್ವಾಂಸರ ಅಭಿಮತ. ಯಾರ್ಯಾರೋ ಬರೆದ ಗ್ರಂಥಗಳು, ಸ್ತೋತ್ರಗಳೆಲ್ಲ ಇಂದು ಶಂಕರರ ಹೆಸರಿನಲ್ಲಿ ಪ್ರಚಲಿತದಲ್ಲಿವೆ. ಆದರೆ ಪ್ರಸ್ಥಾನತ್ರಯ ಭಾಷ್ಯಗಳು ನಿಸ್ಸಂಶಯವಾಗಿ ಆಚಾರ್ಯಕೃತವೆಂಬುದು ಬಹುಜನರ ನಂಬಿಕೆ. ಇಲ್ಲಿಯೂ ಕೂಡ ತೊಡಕಿಲ್ಲದೇ ಇಲ್ಲ. ಆಚಾರ್ಯರಿಂದ ರಚಿತವಾದ ಸಾಹಿತ್ಯಗಳಲ್ಲಿ ಸೂತ್ರಭಾಷ್ಯಗಳಿಗೇ ಅಗ್ರಸ್ಥಾನ. ನೈಷ್ಕರ್ಮಸಿದ್ಧಿಯನ್ನು ಬರೆದ ಸುರೇಶ್ವರಾಚಾರ್ಯರು ’ಶ್ರೀಮಚ್ಛಂಕರಪಾದಯುಗಲಂ ಸಂಸೇವ್ಯ’ ಈ ಗ್ರಂಥವನ್ನು ಬರೆದುರುವೆನೆಂದು ಬಾಯಿಬಿಟ್ಟು ಹೇಳಿಕೊಂಡಿರುವರಾದರೂ ಸೂತ್ರಭಾಷ್ಯದ ಯಾವ ವಾಕ್ಯವನ್ನೂ ಅಲ್ಲಿ ಅವತರಿಸಿಲ್ಲ. ’ತಸ್ಮೈ ಶಂಕರಭಾನವೇ’ ಎಂದು ಗುರುಗಳನ್ನು ಕೊಂಡಾಡಿರುವ ಬ್ರಹದಾರಣ್ಯವಾರ್ತಿಕದಲ್ಲಿಯೂ ಸೂತ್ರಭಾಷ್ಯದ ಪರಾಮರ್ಶವಿಲ್ಲ. ಸೂತ್ರಭಾಷ್ಯ ಮತ್ತು ಬ್ರಹದಾರಣ್ಯಕಭಾಷ್ಯಗಳನ್ನು ಒಬ್ಬರೇ ಶಂಕರಾಚಾರ್ಯರು ಬರೆದಿರುವರೆಂದು ತೋರಿಸಲು ಈಗಿನ ಶೋಧಕರಿಗೆ ದೃಷ್ಟವಾದ ಆಧಾರವಿಲ್ಲ. ಬ್ರಹದಾರಣ್ಯಕಭಾಷ್ಯದ ಶೈಲಿಗೂ ಸೂತ್ರಭಾಷ್ಯದ ಶೈಲಿಗೂ ವ್ಯತ್ಯಾಸಗಳಿವೆಯೆಂಬ ವ್ಯಾಖ್ಯಾನವೂ ಇದೆ. ಅದು ಮಾತ್ರವಲ್ಲ.
ಅತಸ್ತದ್ವಶಾತ್ಸ್ವಭಾವತಃ ಸರ್ವಗತಾನಾಮನನ್ತಾಮಪಿ ಪ್ರಾಣಾನಾಂ ಕರ್ಮಜ್ಞಾನವಾಸನಾರೂಪೇಣೈವ ದೇಹಾರಮ್ಭವಶಾತ್ ಪ್ರಾಣಾನಾಂ ವೃತ್ತಿಃ ಸಂಕುಚತಿ ವಿಕಸತಿ ಚ’ (ಬೃ. ೪-೪-೩) - ಸ್ವಭಾವದಿಂದ ಸರ್ವಗತವಾಗಿರುವ ಅನಂತವಾದ ಪ್ರಾಣಗಳಿಗೆ ಕರ್ಮಜ್ಞಾನವಾಸನೆಗಳಿಗೆ ತಕ್ಕಂತೆ ದೇಹಾಂತರವಾಗುವಾಗ ವೃತ್ತಿಯು ಸಂಕೋಚವಿಕಾಸಗಳನ್ನು ಪಡೆಯುತ್ತದೆ ಎಂದು ಹೇಳಿರುವ ಮತವನ್ನು ಸೂತ್ರಭಾಷ್ಯದಲ್ಲಿ ’ಏವಂ ಶ್ರುತ್ಯುತ್ಕೇ ದೇಹಾನ್ತರಪ್ರತಿಪತ್ತಿ ಪ್ರಕಾರೇ ಸತಿ ಯಾಃ ಪುರುಷಮತಿಪ್ರಭವಾಃ ಕಲ್ಪನಾಃ ವ್ಯಾಪಿನಾಂ ಕರಣಾನಾಮಾತ್ಮನಶ್ಚ ದೇಹಾನ್ತರಪ್ರತಿಪತ್ತೌ ಕರ್ಮವಶಾದ್  ವೃತ್ತಿಲಾಭಸ್ತತ್ರ ಭವತಿ, ಇತ್ಯೇವಮಾದ್ಯಾಃ ಸರ್ವಾ ಏವಾನಾದರ್ತವ್ಯಾಃ ಶ್ರುತಿವಿರೋಧಾತ್’(ಸೂತ್ರಭಾಷ್ಯ ೩-೧-೩) ಎಂದು ಖಂಡಿಸಲಾಗಿದೆ.
       ಬೃಹದಾರಣ್ಯಕದಲ್ಲಿ ’ಪುತ್ತಿಕಾದಿಶರೀರೇಷು ಗೋತ್ವಾದಿವತ್ ಕಾರ್ತ್ಸೈನ ಪರಿಸಮಾಪ್ತ ಇತಿ ಸಮತ್ವಂ ಪ್ರಾಣಸ್ಯ | ನ ಪುನಃ ಶರೀರಪರಿಮಾಣೇನೈವ ಅಮೂರ್ತತ್ವಾತ್ಸರ್ವಗತತ್ವಾಚ್ಛಃ....ತ ಏತೇ ಸರ್ವ ಏವ ಸಮಾಃ ಸರ್ವೇ ಅನನ್ತಾಃ ಇತಿ ಶ್ರುತೇಃ ’ ಪುತ್ತಿಕಾದಿಪ್ರಾಣಿಗಳ ಶರೀರದಲ್ಲಿ ಗೋತ್ವವೇ ಮುಂತಾದವುಗಳಿಗೆ ಸಂಪೂರ್ಣವಾಗಿ ತುಂಬಿಕೊಂಡಿರುತ್ತಾನೆಂಬುದೇ ಪ್ರಾಣನ ಸಮತ್ವವು, ಇಷ್ಟೇ ಹೊರತೂ ಶರೀರದ ಪರಮಾಣವೇ ಸರ್ವಗತನೂ ಆಗಿರುತ್ತಾನೆ...ಇವರೆಲ್ಲರೂ ಸಮರು, ಎಲ್ಲರೂ ಅನಂತರು’ ಎಂಬ ಶ್ರುತಿ ಇದಕ್ಕೆ ಪ್ರಮಾಣವು ಎಂದು ಸೂತ್ರಭಾಷ್ಯದಲ್ಲಿ ಖಂಡಿಸಿರುವ ಈ ಪಕ್ಷವನ್ನೇ ಅವಲಂಬಿಸಿ ’ಸರ್ವಗತಸ್ಯ ತು ಶರೀರಪರಿಮಾಣವೃತ್ತಿಲಾಭೋ ನ ವಿರುಧ್ಯತೇ’ ಸರ್ವಗತನಾದರೂ ಶರೀರಪರಿಮಾಣಕ್ಕೆ ತಕ್ಕಂತೆ ವೃತ್ತಿಲಾಭವಾಗುವುದೇನೂ ವಿರುದ್ಧವಲ್ಲ ಎನ್ನಲಾಗಿದೆ. ಈ ರೀತಿ ಎರಡರಲ್ಲಿ ಯಾವುದನ್ನು ತೆಗೆದುಕೊಳ್ಳಬೇಕೆನ್ನುವ ಬಗ್ಗೆ ವೇದಾಂತಿಗಳಲ್ಲಿ ಮತಭೇದವು ಮೊದಲಿನಿಂದಲೂ ಇತ್ತೆಂದು ಅವುಗಳಲ್ಲಿ ಒಂದನ್ನು ಬ್ರಹದಾರಣ್ಯಕಭಾಷ್ಯವೂ ಇನ್ನೊಂದನ್ನು ಸೂತ್ರಭಾಷ್ಯವೂ ಸ್ವೀಕರಿಸುವವೆಂದು ’ನ ವಿರುಧ್ಯತೇ’(ಬೃ) ’ಅದೋಷಃ’(ಸೂ) ಎಂಬ ಮಾತುಗಳಿಂದ ಸೂಚಿತವಾಗಿವೆಯೆಂದು ವಿಮರ್ಶಕರು ಒಪ್ಪಬೇಕಾಗುತ್ತದೆ. ಇದನ್ನೇ ಆಧರಿಸಿ ಎರಡೂ ಭಾಷ್ಯಗಳಿಗೂ ಕರ್ತೃರು ಒಬ್ಬರೇ ಶಂಕರಾಚಾರ್ಯರಲ್ಲ ಎಂದು ವಾದಿಸುವವರಿಗೂ ಅವಕಾಶವಿದೆ. ಬೃಹದಾರಣ್ಯದ ಭಾಷ್ಯಕಾರರು ತಮ್ಮ ಗುರುಗಳೆಂದು ಸುರೇಶ್ವರರೇ ಅದರ ಮೇಲಿನ ವಾರ್ತಿಕೆಯಲ್ಲಿ ಹೇಳಿರುವುದರಿಂದ ಅದು ಆಚಾರ್ಯ ಶಂಕರರ ರಚನೆಯೇ. ಇನ್ನು ಸೂತ್ರಭಾಷ್ಯದಲ್ಲಿ ದಿಙ್ನಾಗನ ಕಾರಿಕೆಯ ಉಲ್ಲೇಖವಿದೆ. ಆತ ವಸುಬಂಧುವಿನ ಶಿಷ್ಯ. ವಸುಬಂಧು ಕ್ರಿ.ಶ ೫ನೇ ಶತಮಾನದವ. ಹಾಗಾಗಿ ಸೂತ್ರಭಾಷ್ಯದ ಕಾಲ ಅದಕ್ಕೂ ಹಿಂದಿನದಲ್ಲ. ಸೂತ್ರಭಾಷ್ಯದಲ್ಲಿ ’ಬುಧ್ಧಿಬೋಧ್ಯಂ ತ್ರಯಾದನ್ಯತ್ ಸಂಸ್ಕೃತಂ ಕ್ಷಣಿಕಂ ಚ’ ಪ್ರತಿಸಂಖ್ಯಾನಿರೋಧ, ಅಪ್ರತಿಸಂಖ್ಯಾನಿರೋಧ, ಆಕಾಶ ಈ ಮೂರನ್ನು ಬಿಟ್ಟರೆ ಉಳಿದವೆಲ್ಲ ಕಾರ್ಯವೂ ಕ್ಷಣಿಕವೂ ಆಗಿದೆ ಎಂಬ ವಾಕ್ಯದ ಮೂಲ ಗುಣಮತಿಯ ಅಭಿಧರ್ಮಕೋಶವ್ಯಾಖ್ಯಾನದ್ದು. ಗುಣಮತಿಯ ಕಾಲ ಏಳನೇ ಶತಮಾನದ ಮಧ್ಯಭಾಗ. ಹಾಗಾಗಿ ಸೂತ್ರಭಾಷ್ಯ ಅದಕ್ಕೂ ನಂತರದ್ದಾಯಿತು. ಪಂಚಪಾದಿಕೆ ಎಂಬ ಖಂಡವ್ಯಾಖ್ಯಾನವನ್ನು ಬಿಟ್ಟರೆ ವಾಚಸ್ಪತಿಮಿಶ್ರನ ಭಾಮತೀವ್ಯಾಖ್ಯಾನವೇ ಸೂತ್ರಭಾಷ್ಯಕ್ಕೆ ಪೂರ್ಣವಾಗಿ ಬರೆದದ್ದೆಂದು ನಮಗೆ ಸಿಕ್ಕಿರುವ ಅತ್ಯಂತ ಪ್ರಾಚೀನ ವ್ಯಾಖ್ಯಾನ. ಇದನ್ನು ಬರೆದದ್ದು ವಿಕ್ರಮಶಕ ೯೦೬ನೇ ವರ್ಷದಲ್ಲಿ ಎಂಬು ವಾಚಸ್ಪತಿಮಿಶ್ರನೇ ಹೇಳಿಕೊಂಡಿದ್ದಾನೆ. ಜೊತೆಗೆ ವಾಚಸ್ಪತಿ ಮಿಶ್ರನು ಭಾಮತಿಯಲ್ಲಿ ಭಾಸ್ಕರಾಚಾರ್ಯರು ಶಂಕರಭಾಷ್ಯದ ಮೇಲೆ ಎತ್ತಿರುವ ಆಕ್ಷೇಪಗಳಿಗೆ ಸಮಾಧಾನವನ್ನು ಬರೆದಿದ್ದಾನೆ. ಭಾಮತಿಯ ಕೊನೆಯಲ್ಲಿ ’ಮಹನೀಯಕೀರ್ತೌ ಶ್ರೀಮನೃಗೇಕಾಽರಿ ಮಾಯಾನಿಬಂಧಃ’ ನೃಗನೆಂಬ ರಾಜನ ಕಾಲದಲ್ಲಿ ತಾನಿದ್ದುದಾಗಿ ಹೇಳಿಕೊಂಡಿರುವುದರಿಂದ ಅವನ ಕಾಲ ಕ್ರಿ.ಶ ೯ನೇ ಶತಮಾನದ ಮದ್ಯಭಾಗವಾಯಿತು. ಈ ನೃಗನು ಈಗಿನ ಬಿಹಾರ ಮತ್ತು ನೇಪಾಳ ಭಾಗವನ್ನಾಳಿದ ಅಚ್ಚಕನ್ನಡಿಗ ನಾನ್ಯದೇವನಿಗಿಂತ ಪೂರ್ವದಲ್ಲಿ ಸುಮಾರು ಕ್ರಿ.ಶ ೯೬೨ರಲ್ಲಿ ಮಿಥಿಲೆಯಲ್ಲಿದ್ದವನು. ಆದ್ದರಿಂದ ಸೂತ್ರಭಾಷ್ಯವು ಅದಕ್ಕಿಂತ ಮೊದಲು ಕ್ರಿ.ಶ ೭ ಅಥವಾ ೮ನೇ ಶತಮಾನದಲ್ಲಿ ಬಂದಿದ್ದಾಗಿರಬೇಕು.
       ಇಲ್ಲಿ ಇನ್ನೂ ಒಂದು ತೊಡಕಿದೆ. ಸೂತ್ರಭಾಷ್ಯದಲ್ಲಿ ಸ್ರುಘ್ನ, ಮಥುರಾ ಮತ್ತು ಪಾಟಲೀಪುತ್ರಗಳ ಪರಾಮರ್ಶೆಯಿದೆ. ಅಂದರೆ ಅವು ಆಚಾರ್ಯರ ಕಾಲದಲ್ಲಿ ಇದ್ದವೆಂದು ತಿಳಿಯಬೇಕಾಯಿತು. ಆದರೆ ಪಾಟಲೀಪುತ್ರವು ಕ್ರಿ.ಶ ೭೫೬ರಲ್ಲಿ ನದಿಯ ಪ್ರವಾಹದಲ್ಲಿ ಮುಳುಗಿ ಹೋಯಿತೆಂದು ಇತಿಹಾಸಕಾರರ ಅಭಿಮತ. ಹಾಗಾದರೆ ಆಚಾರ್ಯರ ಕಾಲ ಅದಕ್ಕೂ ಮೊದಲಾಯಿತು. ಇದೇ ಭಾಷ್ಯದಲ್ಲಿ ಪೂರ್ಣವರ್ಮನೆಂಬ ರಾಜನ ವಿಮರ್ಶೆಯಿದೆ. ಹ್ಯೂಯಾನ್ಸಾಂಗ್ ೬೩೭-೩೮ರಲ್ಲಿ ಮಗಧದ ಪೂರ್ಣವರ್ಮನ ಕುರಿತು ಬರೆದಿದ್ದಾನೆ.  ಅವನ ಕಾಲಕ್ಕೆ ಪೂರ್ಣವರ್ಮನ ಆಳ್ವಿಕೆ ಮುಗಿದಿರಬೇಕು. ಹಾಗಾಗಿ ಆಚಾರ್ಯರೂ ಅದೇ ಕಾಲದವರಾಗಬೇಕಾಯಿತು.
        ಆಚಾರ್ಯರು ಕ್ರಿ.ಪೂದವರೆಂಬುದಕ್ಕೆ ಬಹಳಷ್ಟು ದಾಖಲೆಗಳನ್ನು ನಾವು ಹಿಂದಿನ ಮಾಲಿಕೆಯಲ್ಲಿ ನೋಡಿದ್ದೇವೆ. ಹಾಗಿದ್ದಲ್ಲಿ ಸೂತ್ರಭಾಷ್ಯದ ಕಾಲಕ್ಕೂ ಆಚಾರ್ಯರ ಕಾಲಕ್ಕೂ ಹೊಂದಿಕೆಯಾಗದಿರುವುದು ಸಮಸ್ಯೆಯನ್ನು ಇನ್ನಷ್ಟು ಜಟಿಲವಾಗಿಸುತ್ತದೆಯೇ ಹೊರತೂ ಇನ್ನೇನಿಲ್ಲ.
       ಶಂಕರರ ಕಾಲದ ಕುರಿತಾಗಿ ಇರುವಷ್ಟು ಗೊಂದಲಗಳು ಅವರ ಹುಟ್ಟಿದ ಸ್ಥಳ ಮತ್ತು ತಂದೆತಾಯಿಯರ ಬಗ್ಗೆ ಇಲ್ಲವೆನ್ನುವುದು ಸಂತೋಷ. ಎಲ್ಲ ಶಂಕರವಿಜಯಗಳೂ ಕೇರಳದ ’ಕಾಲಟಿ’ ಅಥವಾ ಶಶಲ ಎಂಬ ಸ್ಥಳದಲ್ಲೇ ಶಂಕರರ ಜನನವಾಯಿತೆಂದು ಒಪ್ಪುತ್ತವೆ. ಕಾಲಟಿಯೇ ಶಂಕರರ ಜನ್ಮಸ್ಥಳವೆಂಬ ಪ್ರತೀತಿ ಮೊದಲಿನಿಂದಲೂ ಇತ್ತಾದರೂ ಅದು ಹೊರಜಗತ್ತಿಗೆ ತೆರೆದುಕೊಂಡಿದ್ದು ೧೯೧೦ ರಲ್ಲಿ. ೧೮೬೬ರಿಂದ ೧೯೧೨ರವರೆಗೆ ಶೃಂಗೇರಿಯ ೩೩ನೇ ಜಗದ್ಗುರುಗಳಾಗಿದ್ದ ಶ್ರೀ ಸಚ್ಚಿದಾನಂದ ಶಿವಾಭಿನವ ನೃಸಿಂಹಭಾರತೀ ಗುರುಗಳ ಸಮಯದಲ್ಲಿ ಕಾಲಗರ್ಭದಲ್ಲಿ ಹೆಸರೊಂದನ್ನು ಮಾತ್ರ ಉಳಿಸಿ ಕಳೆದುಹೋಗಿದ್ದ ಕಾಲಡಿ ಪುನಃಶ್ಚೇತನಗೊಂಡಿದ್ದು. ಶೃಂಗೇರಿಯವರು ಶಂಕರ ಸ್ಥಳವನ್ನು ಕಂಡುಹಿಡಿಯಲು ಬಂದಾಗ ಕಾಡಿನ ಮಧ್ಯೆ ಚಿಕ್ಕ ಗುಡಿ ಕಾಣಿಸಿತು. ವಿಚಾರಿಸಲಾಗಿ ಈ ಸ್ಥಳವೇ ಶಂಕರರ ಮನೆಯೆಂದೂ, ಆ ಮನೆಯ ಆವರಣದಲ್ಲಿದ್ದ ಅಶೋಕ ವೃಕ್ಷ ಅವರ ತಾಯಿಯ ದಹನಸ್ಥಳವೆಂದೂ ಆಕೆಯ ಅಂತ್ಯಕ್ರಿಯೆಗೆ ಸಹಾಯಮಾಡಿದ ತಮ್ಮ ಪೂರ್ವಜರಿಗೆ ಆ ಸ್ಥಳವನ್ನು ದಾನಕೊಟ್ಟು ಅಲ್ಲಿ ಪೂಜೆಮಾಡಿಕೊಂಡಿರಬೇಕೆಂದು ಹೇಳಿದರೆಂದೂ ಅಲ್ಲಿಯ ಅರ್ಚಕರು ನುಡಿದರು. ಮುಂದೆ ಸರ್ಕಾರದ ಸಹಾಯದಿಂದ ಆಚಾರ್ಯರ ಜನ್ಮಸ್ಥಳವನ್ನು ಅಭಿವೃದ್ಧಿಗೊಳಿಸಿದ ಸಕಲ ಶ್ರೇಯಗಳೂ ಶೃಂಗೇರಿ ಮಠಕ್ಕೆ ಸಲ್ಲಬೇಕು. ಶೃಂಗೇರಿ ಪೀಠದಿಂದ ಅಲ್ಲಿ ಶಂಕರ ಮತ್ತು ಶಾರದೆಯರಿಗೆ ಎರಡು ಮಂದಿರಗಳು ನಿರ್ಮಾಣವಾದವು. ಜನವಾರ್ತೆಯಂತೆ ಶಂಕರರು ಮನೆಯ ಒಳಗೆ ತಾಯಿಯ ದೇಹವನ್ನು ತುಂಡುಮಾಡಿ ಚಿತೆಯಲ್ಲಿ ಹಾಕಿದರಂತೆ. ಬ್ರಾಹ್ಮಣರು ಬಹಿಷ್ಕಾರ ಹಾಕಿದ್ದರಿಂದ ಚಿತೆಗೆ ಬೇಕಾದ ಅಡಿಕೆಪಟ್ಟೆ, ಬಾಳೆಪಟ್ಟೆಗಳನ್ನು ಒದಗಿಸಿದವರು ಸೀದಾ ಅಥವಾ ನಂಬ್ಯಾದಿಗಳಂತೆ. ಇಂದಿಗೂ ನಂಬೂದಿರಿ ಬ್ರಾಹ್ಮಣರಿಗೆ ಪ್ರತ್ಯೇಕ ದಹನಸ್ಥಳವಿಲ್ಲ. ತಮ್ಮ ಮನೆಯ ಹಿಂಭಾಗದಲ್ಲೋ ಅಥವಾ ಆವರಣದಲ್ಲೋ ಕೆಲವೊಂದು ಬಾಳೆಪಟ್ಟೆಗಳನ್ನು ಶಾಸ್ತ್ರವಾಗಿ ಹಾಕಿ ದಹನಕ್ರಿಯೆ ಮಾಡುತ್ತಾರೆ. ನಂಬಿಯಾದಿಗಳು ಬಂದು ಬಾಳೆಪಟ್ಟೆ ಕೊಡುವವರೆಗೂ ಕಾದಿರಬೇಕು. ಅವರಿಲ್ಲದೇ ನಂಬೂದಿರಿಗಳಲ್ಲಿ ಪಿತೃಕರ್ಮ ನಡೆಯುವುದೇ ಇಲ್ಲ. ಪರಂಪರೆಯ ಅನುಸಾರವಾಗಿ ಈಗಲೂ ಬ್ರಾಹ್ಮಣರು ಮೃತದೇಹಕ್ಕೆ ಕತ್ತಿಯಿಂದ ಅಲ್ಲಲ್ಲಿ ಮುಟ್ಟಿಸುತ್ತಾರೆ. ನಂಬೂದಿರಿಗಳು ಋಕ್-ಯಜುಃ-ಸಾಮವೇದಗಳಲ್ಲಿ ಪಾರಂಗತರಾದರೂ ಅವರಲ್ಲಿ ಹೆಚ್ಚು ಮಂತ್ರಗಳಿಲ್ಲ. ಕೈಕರಣಗಳಿಗೇ ಹೆಚ್ಚು ಪ್ರಾಧಾನ್ಯ. ಇವರ ಗುರುಮಠವಿರುವುದು ತ್ರಿಶೂರಿನಲ್ಲಿ. ಶಂಕರರ ವಿದ್ಯಾಭ್ಯಾಸ ನಡೆದದ್ದೂ ಅಲ್ಲಿಯೇ ಅಂತೆ.
        ಶಂಕರರು ಯಜುರ್ವೇದಿಗಳು. ಮನೆತನದ ಹೆಸರು ’ಕೈಪಳ್ಳಿ ಇಲ್ಲಂ’. ಇಲ್ಲಿ ’ಕಾಪಳ್ಳಿ ಇಲ್ಲಂ’ ಮತ್ತು ’ತಲೆಯಾತ್ತ ಇಲ್ಲಂ’ ಎಂದು ಎರಡು ಮನೆಗಳಿವೆ. ಶಂಕರರ ತಾಯಿಯ ಅವಸಾನಕಾಲದಲ್ಲಿ ತಲೆಯಕಡೆ ಒಬ್ಬ, ಕಾಲಕಡೆ ಒಬ್ಬ ನಿಂತಿದ್ದರಿಂದ ಅವರ ಮನೆಗಳಿಗೆ ಆ ಹೆಸರು ಬಂದಿದೆಯಂತೆ. ಶಂಕರರ ತಾಯಿ ’ಪಾಲುಪನೈ ಇಲ್ಲಂ’ ಅಥವಾ ’ಪಜುರಪನೈ ಇಲ್ಲಂ’ ಎಂಬ ನಂಬೂದಿರಿ ಕುಟುಂಬದವಳೆಂದು ಆ ಕುಲದವರರೆಂದು ಹೇಳಿಕೊಳ್ಳುವವರು ಈಗಲೂ ತ್ರಿಶೂರಿನಲ್ಲಿದ್ದಾರೆ.  ಕಾಲಡಿಗೆ ಸಮೀಪದಲ್ಲೇ ಪೊನ್ನರ್ ಎಂಬ ಊರಿದೆ. ಇಲ್ಲಿ ಬಾಲಶಂಕರರು ಭಿಕ್ಷೆಗೆ ಹೋದಾಗ ನೆಲ್ಲಿಕಾಯಿ ಹಾಕಿದ ಮನೆಯಿದೆ. ಕನಕಧಾರಾ ಸ್ತೋತ್ರಮಾಡಿ ಈ ಮನೆಯೆದುರು ಹೊನ್ನಿನ ನೆಲ್ಲಿಕಾಯಿಯ ಮಳೆಸುರಿಸಿದರೆಂದು ಪ್ರತೀತಿ. ಇಂದಿಗೂ ಈ ಮನೆ ’ಸ್ವರ್ಣತ್ತಿಲ್ಲಂ’ ಎಂದು ಕರೆಯಲ್ಪಡುತ್ತಿದೆ.
       ಶಂಕರರ ಜನ್ಮಸಂದರ್ಭವನ್ನು ಸ್ವಲ್ಪ ಗಮನಿಸೋಣ. ಬೇರೆಲ್ಲ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಹೆಚ್ಚಿನ ಶಂಕರವಿಜಯಗಳ ಐಕ್ಯಮತ್ಯವಿರುವುದು ಶಂಕರರ ಹುಟ್ಟು, ಸ್ಥಳ ಮತ್ತು ಮಾತಾಪಿತೃರ ಕುರಿತಾಗಿಯೇ. ಮಾಧವೀಯದಲ್ಲಿ, ಚಿದ್ವಿಲಾಸೀಯದಲ್ಲಿ, ಆನಂದಗಿರೀಯದಲ್ಲಿ ಮತ್ತು ಆತ್ಮಬೋಧರ ಪ್ರಾಚೀನಶಂಕರವಿಜಯಗಳ ಪ್ರಕಾರ ಭೂಲೋಕದಲ್ಲಿ ಬೌದ್ಧರ ಕಾರಣದಿಂದ ಜನ ವರ್ಣಾಶ್ರಮ ಧರ್ಮಗಳನ್ನು ಬಿಟ್ಟು ಅನಾಚಾರಗಳನ್ನವಲಂಬಿಸಿದ್ದಾರೆ. ಧರ್ಮವನ್ನು ಸ್ಥಾಪನೆಮಾಡಿ ಎಲ್ಲರನ್ನೂ ಉದ್ಧಾರಮಾಡಬೇಕೆಂದು ದೇವತೆಗಳು ಶಿವನನ್ನು ಪ್ರಾರ್ಥಿಸಲಾಗಿ ಬ್ರಹ್ಮನು ಮಂಡನನಾಗಿ, ವಾಯುವು ಹಸ್ತಾಮಲಕನಾಗಿ, ಅಗ್ನಿಯು ಉದಂಕನಾಗಿ, ಬೃಹಸ್ಪತಿಯು ಆನಂದಗಿರಿಯಾಗಿ, ಗುಹನು ಭಟ್ಟನಾಗಿ, ವರುಣನು ಚಿತ್ಸುಖನಾಗಿ, ಯಮನು ವಿಶ್ವರೂಪನಾಗಿ ಹೀಗೆ ಬೇರೆ ಬೇರೆ ದೇವತೆಗಳು ಬೇರೆಬೇರೆ ರೂಪದಲ್ಲಿ ಅವತರಿಸಿ ವೈದಿಕಮಾರ್ಗವನ್ನು ಖಂಡನೆಗಳಿಂದಲೂ ಮಂಡನೆಗಳಿಂದಲೂ ಪ್ರಖ್ಯಾತಗೊಳಿಸಲು ಸಾಕ್ಷಾತ್ ಶಿವನೇ ’ಶಂಕರ’ನಾಗಿ ಕೇರಳದ ಪೂರ್ಣಾನದಿ ದಡದಲ್ಲಿ ಅವತರಿಸಿದನಂತೆ. ವಿದ್ಯಾರಣ್ಯರ ಮಾಧವೀಯದಲ್ಲಿ ರಾಜಶೇಖರನೆಂಬ ಅರಸು ಕನಸಿನಲ್ಲಾದ ಈಶ್ವರನ ಪ್ರೇರಣೆಯಂತೆ ವೃಷಭಾದ್ರಿಯಲ್ಲಿ ಒಂದು ದೇವಾಲಯವನ್ನು ಕಟ್ಟಿಸಿದನೆಂದೂ ಅದರ ಸಮೀಪದ ಕಾಲಡಿಯಲ್ಲಿ ವಿದ್ಯಾಧಿರಾಜನೆಂಬ ಪಂಡಿತನಿಗೆ ಶಿವಗುರುವೆಂಬ ಮಗನಿದ್ದನೆಂದೂ ಹೇಳಿದೆ. ಕೇರಳದಲ್ಲಿ ರಾಜಶೇಖರನೆಂಬ ಅರಸನಿದ್ದನೋ ಅಥವಾ ಇದು ರಾಜಶ್ರೇಷ್ಟನೆಂಬ ಅರ್ಥದಲ್ಲಿ ಪ್ರಯೋಗಿಸಿದ ಅನ್ವರ್ಥನಾಮವೋ ಗೊತ್ತಿಲ್ಲ. ಶಂಕರರ ಅಜ್ಜನ ಹೆಸರು ವಿದ್ಯಾಧಿರಾಜ. ಇದೂ ಶ್ರೇಷ್ಟಪಂಡಿತನೆಂಬರ್ಥದ ಅನ್ವರ್ಥನಾಮವೇ. ಪ್ರಾಚೀನಶಂಕರವಿಜಯದಲ್ಲಿ
ಈಶೋಽಷ್ಯಭೂತ್ಸಮದವಿದ್ವದಭೇದ್ಯದರ್ಪ
ಸರ್ಪಾಹಿತುಣ್ದಿಕವಿದಗ್ಧಸಹಸ್ರಸೇವ್ಯೇ |
ವಿದ್ಯಾಧಿಪತ್ಯಪರನ್ನಾಮ್ನಿ ಕುಲೇ ಶಿವಾಖ್ಯಾ
ದಾರ್ಯಾಪತೇ ರವಿಸಹಸ್ರರುಚಿಃ ಕುಮಾರಃ ||
(ದಾರ್ಯಾಸತೀ ಎಂಬ ಪಾಠಾಂತರವೂ ಇದೆ)
ಅಹಂಕಾರದಿಂದ ಮದಿಸಿದ ವಿದ್ವಾಂಸರೆಂಬ ಸರ್ಪಗಳಿಗೆ ಹಾವಾಡಿಗನಂತಿರುವ ವಿದ್ಯಾಧಿಪತಿಯೆಂಬ ಕುಲದಲ್ಲಿ ಶಿವಗುರುವೆಂಬ ಆರ್ಯಾಪತಿಯಿಂದ ಸಾವಿರ ಸೂರ್ಯರ ಪ್ರಕಾಶವುಳ್ಳ ಕುಮಾರನು ಹುಟ್ಟಿದನು.
        ಈ ಶ್ಲೋಕ ಸ್ವಲ್ಪಮಟ್ಟಿಗೆ ವಿಶೇಷವಾದುದು. ಶಂಕರರ ತಂದೆಯ ಹೆಸರು ಶಿವಗುರು. ಇದಕ್ಕೆ ಶಿವನ ತಂದೆ ಎಂಬರ್ಥವೂ ಇದೆ. ಇವನ ಹೆಂಡತಿ ಆರ್ಯಾಸತೀ. ಮಾಧವೀಯದಲ್ಲೇ ಇನ್ನೊಂದು ಕಡೆ ಜಾಯಾಸತೀ ಎಂದೂ ಕರೆಯಲಾಗಿದೆ. ಡಿಂಡಿಮವ್ಯಾಖ್ಯಾನದಲ್ಲೂ ’ಶಿವಗುರೋಭಾರ್ಯಾ ಸತೀ’ ಎಂದಿದೆ. ಸದಾನಂದೀಯದಲ್ಲೂ ’ಸಾ ಸತೀ ಸುಷುವೇ’ ಎಂದೇ ಇದೆ. ’ಆರ್ಯಾ’ ’ಸತಿ’ ಎಂಬುದು ಆಕೆಯ ಹೆಸರು. ಇದಕ್ಕೂ ಕೂಡ ಪೂಜ್ಯಳು, ಸಾಧ್ವಿ ಎಂಬ ಅನ್ವರ್ಥನಾಮಗಳನ್ನು ಕಲ್ಪಿಸಬಹುದು. ಅಂತೂ ಶಂಕರರ ತಂದೆ, ತಾಯಿ, ಅಜ್ಜನಿಗೆ ಈಗ ಪ್ರಖ್ಯಾತವಾಗಿರುವ ಶಿವಗುರು, ಅರ್ಯಾ, ವಿದ್ಯಾಧಿರಾಜ ಎಂಬ ಹೆಸರುಗಳು ಅಂಕಿತನಾಮಗಳೋ ಅಥವಾ ಕವಿಕಲ್ಪಿತ ಅನ್ವರ್ಥನಾಮಗಳೋ ಹೇಳಲು ಬರುವಂತಿಲ್ಲ.
        ಶಂಕರರ ಜನ್ಮವೃತ್ತಾಂತದ ಕುರಿತು ಮಾಧವೀಯ, ವ್ಯಾಸಾಚಲೀಯ ಮತ್ತು ಚಿದ್ವಿಲಾಸೀಯಗಳಲ್ಲಿ ಸುಮಾರಿಗೆ ಒಂದೇ ತೆರನಾದ ಕಥೆಗಳಿವೆ. ಶಿವಗುರುವಿಗೆ ಬಹಳ ವರ್ಷಗಳ ಕಾಲ ಪುತ್ರಸಂತತಿಯಾಗಲಿಲ್ಲವೆಂದು ವೃಷಭಾಚಲನನ್ನು ಪೂಜಿಸಿದಾಗ ಸ್ವಪ್ನದಲ್ಲಿ ವಿಪ್ರವೇಷದಲ್ಲಿ ಕಾಣಿಸಿಕೊಂಡ ಶಿವನು ಕೇಳಿದ ವರವನ್ನು ನೆರವೇರಿಸಿಕೊಡುವುದಾಗಿ ಹೇಳಿದನಂತೆ. ಶಿವಗುರುವು ತಾನು ಪುತ್ರೇಚ್ಛೇಯಿಂದ ತಪಸ್ಸು ಮಾಡುತ್ತಿದ್ದೇನೆಂದು  ಹೇಳಿದನು. ಆಗ ಶಿವನು ’ದೇವೋಽಪ್ಯಪೃಚ್ಛದಥ ತಂ ದ್ವಜ ವಿದ್ಧಿ ಸತ್ಯಂ ಸರ್ವಜ್ಞ ಮೇವಮಪಿ ಸರ್ವಗುಣೋಪಪನ್ನಮ್ | ಪುತ್ರಂ ದದಾಮ್ಯಥ ಬಹೂನ್ ಪರೀತಕಾಂಸ್ತೆ ಭೂರ್ಯಾಯುಷಸ್ತನುಗುಣಾನವದಿದ್ದ್ವಿಜೇಶಃ’ ಸರ್ವಜ್ಞನಾದ ಸರ್ವಗುಣೋಪೇತನಾದ ಅಲ್ಪಾಯುವಿನ ಒಬ್ಬನೇ ಮಗನು ಬೇಕೋ ಅಥವಾ ಅದಕ್ಕೆ ವಿಪರೀತವಾದ ದೀರ್ಘಾಯುವಿನ ಸ್ವಲ್ಪಗುಣಗಳುಳ್ಳ ಬಹಳ ಪುತ್ರರು ಬೇಕೋ? ಎನ್ನಲು ಶಿವಗುರುವು ಸರ್ವಜ್ಞನಾದ ಒಬ್ಬನೇ ಮಗನನ್ನು ಕೇಳಿಕೊಂಡನಂತೆ. ಹೀಗೆ ಹುಟ್ಟಿದ ಮಗುವೇ ಶಂಕರ. ನೋಡಿದವರಿಗೆ ಸುಖವಾಗುತ್ತದೆಂಬ ಕಾರಣದಿಂದ(ಶಂ ಕರೋತಿ ಇತಿ ಶಂಕರಃ) ಅಥವಾ ಶಂಕರನ ಪ್ರಸಾದದಿಂದ ಹುಟ್ಟಿದವನೆಂಬ ಕಾರಣಕ್ಕೆ ತಂದೆಯು ಮಗುವಿಗೆ ಶಂಕರನೆಂಬ ಹೆಸರಿಟ್ಟ. ಬೃಹಚ್ಛಂಕರವಿಜಯದ ಶಂಕರಪ್ರಾದುರ್ಭಾವ ಪ್ರಕರಣವೂ ಇದೇ ಕಥೆಯನ್ನು ಹೊಂದಿರುವುದರಿಂದ ಈ ಕೃತಿಗಳೆಲ್ಲ ಪರಸ್ಪರ ನಿಕಟಸಂಬಂಧವನ್ನು ಹೊಂದಿರಬೇಕು. ಆಚಾರ್ಯರು ಕೇರಳದ ಕಾಲಡಿಯಲ್ಲಿ ಶಿವಗುರು-ಆರ್ಯಾ ದಂಪತಿಗೆ ಹುಟ್ಟಿದರೆಂಬ ವಿಷಯಕ್ಕೆ ಎಲ್ಲಾ ವಿಜಯಗಳಿಗೂ ಸಮ್ಮತಿಯಿದ್ದರೆ ಅನಂತಾನಂದಗಿರೀಯದ ಕಥೆಯೇ ಬೇರೆ. ಅದರ ಪ್ರಕಾರ ಸರ್ವಜ್ಞನೆಂಬ ಬ್ರಾಹ್ಮಣ ಕಾಮಾಕ್ಷಿಯೆಂಬ ಪತ್ನಿಯೊಡಗೂಡಿ ಚಿರಕಾಲ ಚಿದಂಬರಂನ ಆಕಾಶಲಿಂಗವನ್ನು ಧ್ಯಾನಮಾಡಿದ ಫಲವಾಗಿ ವಿಶಿಷ್ಟಾ ಎಂಬ ಮಗಳನ್ನು ಪಡೆದರು. ಅವಳಿಗೆ ಎಂಟು ವರ್ಷಕ್ಕೆ ವಿಶ್ವಜಿತು ಎಂಬವನ ಜೊತೆ ಮದುವೆಯಾದರೂ ಕೆಲವೇ ಕಾಲದಲ್ಲಿ ಅವಳ ಗಂಡ ಅವಳನ್ನು ಬಿಟ್ಟು ತಪಸ್ಸುಮಾಡಲು ಅರಣ್ಯಕ್ಕೆ ಹೋದನು. ಅಲ್ಲಿಂದ ಮುಂದೆ ಆಕೆ ಚಿದಂಬರೇಶ್ವರನನ್ನೇ ಆರಾಧಿಸುತ್ತಿದ್ದಳು. ಒಂದು ದಿನ ಚಿದಂಬರನಿಂದ ಹೊರಟ ಬೆಳಕೊಂದು ಆಕೆಯ ಮುಖವನ್ನು ಹೊಕ್ಕಿದ್ದನ್ನು ಕಂಡು ಅಲ್ಲಿ ಬಂದಿದ್ದ ಜನರು ವಿಸ್ಮಿತರಾದರು. ಅದಾದ ಬಳಿಕ ಪಾರ್ವತಿಯಂತೆ ಮಹಾತೇಜಸ್ವಿನಿಯಾದ ಆಕೆ ಗರ್ಭವತಿಯಾದಳು. ಬ್ರಾಹ್ಮಣರು ಚಿದಂಬರನನ್ನೇ ಯಜಮಾನನನ್ನಾಗಿ ಮಾಡಿಕೊಂಡು ಮೂರನೇ ತಿಂಗಳಿಂದಲೂ ಆಕೆಗೆ ವೇದೋಕ್ತ ಸಂಸ್ಕಾರ ಮಾಡಿದರು. ಹತ್ತನೇ ತಿಂಗಳಲ್ಲಿ ವಿಶಿಷ್ಟೆಯ ಗರ್ಭದಿಂದ ಮಹಾದೇವನು ಶಂಕರನೆಂಬ ನಾಮದಿಂದ ಜನಿಸಿದನು. ಇದನ್ನು ಬರೆದ ಅನಂತಾನಂದಗಿರಿ ತನ್ನನ್ನು ಶಂಕರರ ಸಾಕ್ಷಾತ್ ಶಿಷ್ಯನೆಂದು ಕರೆದುಕೊಂಡಿದ್ದಾನೆ. ಆದರೂ ಶಂಕರರ ತಂದೆತಾಯಿಯನ್ನು ಬೇರೆ ಹೆಸರಿನಿಂದ ಕರೆಯುವ ಧೈರ್ಯ ಹೇಗೆ ಮಾಡಿದನೆಂಬುದೇ ಆಶ್ಚರ್ಯ. ಇದಲ್ಲದೇ ಶಂಕರರು ಪುರುಷನ ಹಂಗಿಲ್ಲದೇ ಶಿವನ ತೇಜಸ್ಸು ವಿಶಿಷ್ಟೆಯ ಮುಖ ಪ್ರವೇಶಿಸಿದ ಕಾರಣ ಹುಟ್ಟಿದರೆಂಬ ಕಥೆ ಅತ್ಯಂತ ಅಸ್ವಾಭಾವಿಕವಾದದ್ದು. ಆಚಾರ್ಯರ ಜನ್ಮಸ್ಥಳ ಕಾಲಡಿ ಎಂದು ಮಿಕ್ಕವರು ಹೇಳುವಾಗ ಈತ ಮಾತ್ರ ಚಿದಂಬರಂ ಎನ್ನುತ್ತಿರುವುದು ನೋಡಿದರೆ ಆತನ ಶ್ರದ್ಧೆ ಪೂರ್ತಿ ಶಂಕರರ ಮೇಲಿರದೇ ಚಿದಂಬರದಲ್ಲಿತ್ತು ಎನ್ನುವುದು ಸ್ಪಷ್ಟ. ಮುಂದೆ ಶಂಕರರು ದೇಹತ್ಯಾಗದ ಕಾಲದಲ್ಲಿ ಸುರೇಶ್ವರಾಚಾರ್ಯರ ಮೂಲಕ ಮೋಕ್ಷಲಿಂಗವನ್ನು ಚಿದಂಬರಕ್ಕೆ ಕಳುಹಿಸಿಕೊಟ್ಟರೆನ್ನುವುದೂ ಇದರದ್ದೇ ಮುಂದುವರೆದ ಭಾಗ. ಹಾಗೆಂದು ಈ ಕಥೆ ಪೂರ್ತಿ ಅತಾರ್ಕಿಕವಲ್ಲ. ಕಾಶ್ಮೀರದ ರಾಜ ಜಯಾಪೀಡನ ಆಸ್ಥಾನಕವಿಯಾದ ವಾಕ್ಪತಿಮಿಶ್ರ ತನ್ನ ಶಂಕರೇಂದ್ರವಿಲಾಸದಲ್ಲಿ ಇಂಥಹುದೇ ಕಥೆಯನ್ನು ಬರೆದಿದ್ದಾನೆ. ಆದರೆ ಅದು ಆದಿಶಂಕರರ ಕುರಿತಾಗಿರದೇ ಕಾಂಚೀಪೀಠದ ೩೬ನೇ ಪೀಠಾಧಿಪತಿಗಳಾದ ಅಭಿನವ ಶಂಕರರ ಬಗ್ಗೆಯಾಗಿದೆ. ವಿಶ್ವಜಿತ್ತು ಸ್ವರ್ಗಸ್ಥನಾಗಲು ಅವನ ಹೆಂಡತಿ ಸಹಗಮನಕ್ಕೆ ಮುಂದಾದಳು. ಆ ಸಮಯ ಆಕೆಯಲ್ಲಿ ಗರ್ಭಿಣಿಯ ಚಿಹ್ನೆಯನ್ನು ಕಂಡು ಅವಳ ಸಂಬಂಧಿಗಳು ಅದನ್ನು ತಡೆದರು. ಆದರೆ ಆಕೆ ಗರ್ಭಿಣಿಯಾಗಿ ಮೂರು ವರ್ಷಗಳ ನಂತರ ಪ್ರಸವವಾಯಿತು. ಜನಾಪವಾದಕ್ಕಂಜಿ ಆ ಮಗುವನ್ನು ಆಕೆ ಕಾಡಿನಲ್ಲಿ ಬಿಟ್ಟುಬಂದಳಂತೆ. ಅಲ್ಲಿ ವ್ಯಾಘ್ರಪಾದಮುನಿಗಳ ಪತ್ನಿಯಾದ ಹೆಣ್ಣು ಹುಲಿಯೊಂದು ಅದನ್ನು ಪೋಷಿಸಿತು. ಐದು ವರ್ಷಕ್ಕೆ ಋಷಿಯೇ ಉಪನಯನವನ್ನು ನೆರವೇರಿಸಿ ವೇದಪಾಠವನ್ನೂ ಮಾಡಿದರು. ಕಂಚೀಮಠದ ವಿದ್ಯಾಘನರು ಚಿದಂಬರದಲ್ಲಿದ್ದಾಗ ಶಿವನು ಅವರಿಗೆ ಸ್ವಪ್ನದರ್ಶನವಿತ್ತು ಶಂಕರರ ಮಹಿಮೆಯನ್ನು ತಿಳಿಸಿದನಂತೆ. ಅದರಿಂದಲೇ ವಿದ್ಯಾಘನರು ಅಭಿನವ ಶಂಕರರೆಂಬ ಹೆಸರಿನಿಂದ ಅವರ ಪೀಠಾರೋಹಣವನ್ನು ನೆರವೇರಿಸಿದರು.
ಹಾಯನೇಽಥ ವಿಭವೇ ವೃಷಮಾಸೇ ಶುಕ್ಲಪಕ್ಷದಶಮೀದಿನಮಧ್ಯೆ |
ಶೇವಧಿದ್ವಿಪದಿಶಾನಲವರ್ಷೇ ತಿಷ್ಯ ಏನಮುದಸೋಷ್ಟ ವಿಶಿಷ್ಟಾ ||

ಕಲಿಯ ೩೮೮೯ನೇ ವಿಭವಸಂವತ್ಸರದ(ಕ್ರಿ.ಶ ೭೮೮) ವೃಷಭಮಾಸದ ದಶಮಿಯಂದು ವಿಶಿಷ್ಟಾದೇವಿಯನ್ನು ಈತನನ್ನು ಹಡೆದಳು. ಇದೇ ರೀತಿಯ ಶ್ಲೋಕಗಳು ಅಭಿನವ ಶಂಕರರ ಬಗ್ಗೆ ಆತ್ಮಬೋಧರ ಗುರುರತ್ನಮಾಲಿಕೆಯಲ್ಲೂ ಇದೆ. ಈ ಕಥೆಯನ್ನೆಲ್ಲ ಎಷ್ಟರಮಟ್ಟಿಗೆ ನಂಬಬಹುದೆಂಬುದು ವಿಮರ್ಶಕರಿಗೆ ಬಿಟ್ಟ ವಿಚಾರ.
        ಕೂಷ್ಮಾಂಡಶಂಕರವಿಜಯವೆಂಬ ಹೆಸರಿನ ಒಂದು ಕುಗ್ರಂಥವುಂಟು. ಅನಂತಾನಂದಗಿರೀಯಕ್ಕಿಂತ ಅದ್ಭುತಕತೆಯನ್ನು ಕಟ್ಟಬೇಕೆಂಬ ಮಹದಭಿಲಾಶೆ ಇದರ ಲೇಖಕನಿಗಿರಬೇಕು. ಇದರ ಪ್ರಕಾರ ಕೇರಳದೇಶದಲ್ಲಿ ಚೂರ್ಣಾ ನದಿಯ ದಡದಲ್ಲಿ ಪದ್ಮನಾಭನ ಮಂದಿರವಿದೆ. ಅಲ್ಲಿ ಕಾಲಟಿಯೆಂಬ ಕ್ಷೇತ್ರವೂ ಇದೆ. ಈ ಕಾಲಟಿಯಲ್ಲಿ ವಿಧವೆ ನೆಟ್ಟ ಕುಂಬಳಬಳ್ಳಿಯಲ್ಲಿ ಶಿವನ ಅನುಗ್ರಹದಿಂದ ಕುಂಬಳಕಾಯೊಂದು ಬಿಟ್ಟು ಅದು ತೊಟ್ಟು ಕಳಚಿ ಬಿದ್ದಾಗ ಅದರಲ್ಲಿ ಮಗುವೊಂದು ಇತ್ತಂತೆ. ಶಂಕರರು ಅಯೋನಿಜರೆಂದು ತೋರಿಸಲು ಲೇಖಕ ಇಷ್ಟೆಲ್ಲ ಸರ್ಕಸ್ ಮಾಡಬೇಕಾಯ್ತು. ಜೊತೆಗೆ ಆತನಿಗೆ ಚೂರ್ಣಾ ನದಿದಡದ ಮೇಲೆ ಪದ್ಮನಾಭ ದೇವಾಲಯವಿದೆ ಎನ್ನುವಷ್ಟು ಭಯಂಕರ ಭೂಗೋಳ ಜ್ಞಾನವಿದೆ. ಕಾಲಡಿ ಎಂಬ ಹೆಸರನ್ನು ಎಲ್ಲೋ ಕೇಳಿ ತನ್ನ ಕುಗ್ರಂಥದಲ್ಲೂ ತಂದು ಸೇರಿಸಿದ್ದಾನೆ. ಶಂಕರರ ಜನ್ಮಸ್ಥಳಕ್ಕೆ ಕಾಲಡಿಯೆಂದು ಹೆಸರು ಬರಲೂ ಒಂದು ಕಾರಣವಿದೆ.
        ಆರ್ಯಾಂಬೆ ವೃದ್ಧಾಪ್ಯದ ಕಾರಣದಿಂದ ಪೂಣಾ ನದಿಯವರೆಗೆ ಹೋಗಲಾರದೇ ಇದ್ದಾಗ ಬಾಲಶಂಕರರು ತಮ್ಮ ತಪೋಶಕ್ತಿಯಿಂದ ನದಿಯನ್ನು ಸ್ತುತಿಸಿದರಂತೆ. ಇದರಿಂದ ಸಂತುಷ್ಟಳಾದ ನದಿಯು ತನ್ನ ಪಥವನ್ನು ಬಿಟ್ಟು ಆಚಾರ್ಯರ ಮನೆಯವರೆಗೆ ಬಂದು ಅವರ ಕಾಲಡಿಗೇ ಹರಿದಿದ್ದರಿಂದ ಆ ಸ್ಥಳ ಕಾಲಡಿ ಎಂದು ಹೆಸರಾಯ್ತು. ಈ ನದಿಯನ್ನು ಕೇರಳದವರು ಈಗಲೂ ಅಂಬಾನದೀ ಎನ್ನುತ್ತಾರೆ. ’ಅಂಬಾರ್ಥಂ ಯದಿಯಂ ನೀತಾ ತಟನೀ ಸದ್ಮ ಸಂನಿಧಮ್, ಅಮ್ಬಾ ತರಙ್ಗಣೀತ್ಯೇವ ಕಥ್ಯತೇಽದ್ಯಾಪಿ ಸಾ ಖಲು’ ಎಂಬ ಶ್ಲೋಕವೊಂದು ಚಿದ್ವಿಲಾಸೀಯದಲ್ಲಿದೆ. ಜೊತೆಗೆ ಆಚಾರ್ಯರು ನದಿಯನ್ನು ಸ್ತುತಿಸಿದ ’ಮಹಾಪಗಾಸ್ತವ’ ಎಂಬ ಸ್ತೋತ್ರವೊಂದು ಇರುವುದಾಗಿ ಸಂಕ್ಷೇಪಶಂಕರದಿಗ್ವಿಜಯದಲ್ಲಿ ಉಲ್ಲೇಖಿಸಲಾಗಿದೆ. ಆ ಸ್ತೋತ್ರ ಈಗ ಲಭ್ಯವಿದೆಯೋ ಇಲ್ಲವೋ ತಿಳಿದಿಲ್ಲ. ’ಚೂರ್ಣೀಮನ್ತಿಕಮಾನಿನಾಯ ಜನನೀಧಾಮ್ನಃ ಸ್ವರಾಜಃ ಪ್ರಭೋ’ ಎಂದು ಪ್ರಾಚೀನಶಂಕರವಿಜಯದಲ್ಲೂ ಹೇಳಲಾಗಿದೆ. ಹೀಗೆ ನದಿಯನ್ನು ತಿರುಗಿಸಿದ ಕಥೆ ಹಿಂದಿನಿಂದಲೂ ಇದೆಯೆಂದಾಯ್ತು. 
ಶಂಕರ ಜನ್ಮಸ್ಥಾನ, ಕಾಲಡಿ
ಕಂಚಿ ಮಠದ ಶಂಕರಕೀರ್ತಿ ಸ್ಥಂಭ, ಕಾಲಡಿ

ಶಂಕರರ ಆರಾಧ್ಯದೈವ ಶ್ರೀಕೃಷ್ಣನ ಮಂದಿರ, ಕಾಲಡಿ

        ಕೂಷ್ಮಾಂಡ ಶಂಕರವಿಜಯವನ್ನೇ ನೆಪಮಾಡಿಕೊಂಡು ತ್ರಿವಿಕ್ರಮ ಪಂಡಿತನೆಂಬ ಮಧ್ವಾಚಾರ್ಯರ ಶಿಷ್ಯರ ಮಗನಾದ ನಾರಾಯಣಪಂಡಿತನು ಮಧ್ವವಿಜಯ, ಮಣಿಮಂಜರಿ ಎಂಬೆರಡು ಗ್ರಂಥಗಳಲ್ಲಿ ಶಂಕರರ ವಿಷಯದ ಅಪಪ್ರಚಾರವನ್ನು ಪ್ರಯತ್ನಪೂರ್ವಕವಾಗಿ ತಂದು ತುರುಕಿದ್ದಾನೆ.
ಯೋ ಭೂರಿವೈರೋ ಮಣಿಮಾನ್ ಮೃತಃ ಪ್ರಾಗ್ |
ವಾಗ್ಮೀ ಬುಭೂಷುಃ ಪರಿತೋಷಿತೇಶಃ |
ಸ ಸಂಕರಾಖ್ಯೋಙ್ಘ್ರತಲೇಷು ಜಜ್ಞೇ |
ಸ್ಪೃಧಾ ಪರೇಪ್ಯಾಸುರಿಹಾಸುತೇಂದ್ರಾಃ ||

’ಹಿಂದೆ ಭೀಮನಿಂದ ಹತನಾದ ಮಣಿಮಂತನೆಂಬ ದೈತ್ಯನು ಈಶ್ವರನನ್ನು ಸಂತೋಷಗೊಳಿಸಿ ಕಾಲಡಿಯಲ್ಲಿ ಸಂಕರನೆಂಬ ಹೆಸರಿನಿಂದ ಹುಟ್ಟಿದನು,’ ಶಂಕರ ಎಂಬ ಹೆಸರನ್ನು ’ಸಂಕರ’ ಎಂದು ಬರೆದಿರುವುದು ವಿಧವಾಪುತ್ರತ್ವವನ್ನು ತಿಳಿಸುವುದಕ್ಕೇ ಎಂಬುದು ಇದರಿಂದ ಸ್ಪಷ್ಟ.
ತಮೇವ ಸಮಯಂ ದೈತ್ಯೋ ಮಣಿಮಾನಪ್ಯಜಾಯತ |
ಮನೋರಥೇನ ಮಹತಾ ಬ್ರಾಹ್ಮಣ್ಯಾಂ ಜಾರತಃ ಖಲಾತ್ |
ಉತ್ಪನ್ನಃ ಸಂಕರಾತ್ಮಾಯಂ ಸರ್ವಕರ್ಮಬಹಿಷ್ಕೃತಃ |
ಇತ್ಯುಕ್ತಃ ಸ್ವಜನೈರ್ಮಾತಾ ಸಂಕರೇತ್ಯಾಜುಹಾವ ತಮ್ ||

ಅದೇ ಕಾಲದಲ್ಲಿ ಮಣಿಮಂತನೆಂಬ ದೈತ್ಯನೂ ಬ್ರಾಹ್ಮಣಿಯಲ್ಲಿ ದುಷ್ಟನಾದ ಜಾರನಿಂದ ಹುಟ್ಟಿದನು. ಸಂಕರಾತ್ಮನಾಗಿ ಹುಟ್ಟಿದ ಇವನು ಸರ್ವಕರ್ಮಬಹಿಷ್ಕೃತನೆಂದು ನೆಂಟರು ಹೇಳಿದ್ದರಿಂದ ತಾಯಿ ಅವನಿಗೆ ಸಂಕರ ಎಂದು ಹೆಸರಿಟ್ಟಳು.
        ತಾನು ಜಾರೆಯೆಂದು ಯಾವಾಗಲೂ ನೆನೆಪಿಗೆ ಬರುವಂತೆ ತಾಯಿ ಮಗನಿಗೆ ಸಂಕರನೆಂದು ಹೆಸರಿಟ್ಟಳು ಎಂದು ನಾರಾಯಣ ಪಂಡಿತ ಹೇಳುವುದು ನೋಡಿದರೆ ಎಲ್ಲಿಂದ ನಗಬೇಕೆಂಬುದೇ ಅರ್ಥವಾಗುತ್ತಿಲ್ಲ. ಇದೇ ಮಣಿಮಂಜರಿಯಲ್ಲಿ ಶಂಕರರು ತಾಮಸಾಹಾರಗಳನ್ನು ತಿನ್ನುತ್ತಿದ್ದರೆಂದೂ, ಬೊಡ್ಡು ಬುದ್ಧಿಯವರಾಗಿದ್ದರೆಂದೂ, ಗೋವಿಂದ ಭಗವತ್ಪಾದರ ಗುರುಗಳಾದ ಗೌಡಪಾದರು ಪ್ರಚ್ಛನ್ನಬೌದ್ಧರೆಂದೂ ಬಗೆಬಗೆಯ ಕತೆಗಳನ್ನು ಕವಿ ಹೆಣೆದಿದ್ದಾನೆ. ಬಕ್ಕಸ್ವಾಮಿ ಎಂಬ ಬೌದ್ಧನೊಬ್ಬ ಗೌಡಪಾದರನ್ನು ಹೇಗೋ ಮೋಸದಿಂದ ಸಂನ್ಯಾಸವನ್ನು ಕೊಟ್ಟು ’ಶೂನ್ಯವೇ ಬ್ರಹ್ಮ’ ಎಂದು ಧ್ಯಾನಮಾಡುವಂತೆ ಉಪದೇಶಿಸಿದನಂತೆ. ಮುಂದೆ ಗೋವಿಂದಭಗವತ್ಪಾದರೂ, ಅವರ ಶಿಷ್ಯರಾದ ಶಂಕರರೂ ಈ ಮತವನ್ನೇ ವೈದಿಕಮತವೆಂದು ಬೋಧಿಸಿದ್ದಲ್ಲದೇ ಸಂನ್ಯಾಸಿಗಳನ್ನು ಹಿಂಸಿಸಿ ಬಲಾತ್ಕಾರದಿಂದ ಅವರನ್ನು ಅದ್ವೈತಕ್ಕೆ ಮತಾಂತರಿಸುತ್ತಿದ್ದರಂತೆ(ಎರಡೂ ಒಂದೇ ಆದಮೇಲೆ ಮತಾಂತರಿಸುವುದ್ಯಾಕೋ!).  ಅದ್ವೈತಿಗಳು ಹೇಳುವ ನಿರ್ವಿಶೇಷಬ್ರಹ್ಮವೂ ಬೌದ್ಧರ ಶೂನ್ಯವೂ ಒಂದೇ ಎಂಬ ಈ ಘನಪಂಡಿತನ ಪಾಂಡಿತ್ಯಕ್ಕೆ ಎಷ್ಟು ಅಡ್ಡಬಿದ್ದರೂ ಸಾಲದು. ಶಾಂಕರವೇದಾಂತಪ್ರಕ್ರಿಯೆಯನ್ನು ಅರಿತುಕೊಳ್ಳಲಾಗದೇ ನಮ್ಮದೇ ಮತಾಂಧರು ಎಂಥೆಂಥ ಕಲ್ಪನೆಗಳನ್ನು ಮನಃಪೂರ್ವಕವಾಗಿ ಹುಟ್ಟಿಸಿ ಅಪಪ್ರಚಾರ ಮಾಡುತ್ತಿದ್ದಾರೆಂಬುದನ್ನು ನೋಡಿದರೇ ಆಶ್ಚರ್ಯವಾಗುತ್ತದೆ.

Tuesday, May 17, 2016

ಪಂಜಾಬ್ ಡೈರಿ: ಬಲಿದಾನದ ನಾಡಲ್ಲಿ

        

        ಅಮೃತಸರಕ್ಕೆ ನಾನು ಅದೆಷ್ಟೋ ಬಾರಿ ಹೋದದ್ದಿದೆ. ಅಲ್ಲಿ ಕಾಲಿಟ್ಟ ಪ್ರತಿಬಾರಿಯೂ ಅನಿರ್ವಚನೀಯವಾದ ಒಂದು ರೋಮಾಂಚನವುಂಟಾಗುತ್ತದೆ. ಆ ಮಣ್ಣಿನ ಗುಣವೇ ಅಂಥದ್ದು. ಚಂಡೀಗಢ್ ನನಗಿನ್ನೊಂದು ಮನೆಯಿದ್ದಂತೆ. ಅಲ್ಲಿನ ಸ್ವರ್ಣಮಂದಿರ, ಜಲಿಯನ್ ವಾಲಾ ಬಾಘ್, ವಾಘಾ-ಅಟ್ಟಾರಿ..... ಇಡಿಯ ಪಂಜಾಬೇ ಒಂದು ಪುಣ್ಯಭೂಮಿ. ಅದೊಂದು ಬಲಿದಾನದ ನೆಲ. ಶತಶತಮಾನಗಳ ಕಾಲ ಕ್ರೌರ್ಯಕ್ಕೆ ಸಿಕ್ಕು ನಲುಗಿದ್ದರೂ ಶೌರ್ಯ, ಸೌಹಾರ್ದತೆ, ಶಾಂತಿಯನ್ನು ಜಗತ್ತಿಗೆ ಬೋಧಿಸಿದ ನಾಡದು. ಭಾರತದ ಮೇಲಿನ ವಿದೇಶಿ ಆಕ್ರಮಣಕಾರರಿಗೆಲ್ಲ ದಾರಿಯಾಗಿದ್ದು ಇದೇ ಪಂಜಾಬ್. ಗಝನಿಯಿಂದ ಔರಂಗಜೇಬನ ತನಕ ಮುಸ್ಲಿಮರ ಸಾಮ್ರಾಜ್ಯದಾಹಕ್ಕೆ, ಮಹಾತ್ಮಾ ಗಾಂಧಿಯಿಂದ ಇಂದಿರಾಗಾಂಧಿಯ ತನಕ ರಾಜಕಾರಣಿಗಳ ಅಧಿಕಾರದಾಹಕ್ಕೆ ಹೆಜ್ಜೆಹೆಜ್ಜೆಗೆ ಇಲ್ಲಿನ ನೆಲ, ಜನ, ಮನಗಳು ನುಚ್ಚುನೂರಾಗಿವೆ. ಅಷ್ಟಾಗಿಯೂ ಅವುಗಳನ್ನೆದುರಿಸಲು ಒಂದಕ್ಕೆ ನೂರಾಗಿ ಫಿನಿಕ್ಸಿನಂತೆ ಮತ್ತೆ ಪಂಜಾಬ್ ಮೇಲೆದ್ದು ಬಂದಿದೆ. ನಲವತ್ತೇಳರಲ್ಲಿ ದೇಶಕ್ಕೆ ದೇಶವೇ ಸ್ವಾತಂತ್ರ್ಯ ಸಿಕ್ಕ ಖುಷಿಯಲ್ಲಿದ್ದರೆ ತಾಯ್ನಾಡಿನ ವಿಭಜನೆಯ ಬರೆ ಬಿದ್ದದ್ದು ಪಂಜಾಬಿಗೆ. ವಿಭಜನೆ ಸೃಷ್ಟಿಸಿದ ಸಾಂಸ್ಕೃತಿಕ, ರಾಜಕೀಯ ಬಿಕ್ಕಟ್ಟು, ಜನಾಂಗೀಯ ಘರ್ಷಣೆ, ರಕ್ತಪಾತಗಳು ಅಮೃತಾ ಪ್ರೀತಂಳ ’ಪಿಂಜರ್’, ಭೀಷಮ್ ಸಾಹ್ನಿಯ ’ತಮಸ್’, ಸದಾತ್ ಹಸನ್ ಮಂಟೋರ ’ಖೋಲ್ ದೋ’ ಮತ್ತು ’ತೋಬಾ ಟೇಕ್ ಸಿಂಗ್’, ಕ್ರಿಶನ್ ಚಂದರ್ ಅವರ ’ಪೆಶಾವರ್ ಎಕ್ಸ್‌ಪ್ರೆಸ್’, ರಾಜೀಂದರ್ ಸಿಂಗ್ ಬೇಡಿಯ ’ಲಾಜವಂತಿ’ ಹೀಗೆ ಲೆಕ್ಕವಿಲ್ಲದಷ್ಟು ಪ್ರಸಿದ್ಧ ಕಥೆ-ಕಾದಂಬರಿಗಳಿಗೆ ವಸ್ತುವಾಗಿವೆ. ಸ್ವಾತಂತ್ರ್ಯ ಸಿಕ್ಕನಂತರವೂ ಪಂಜಾಬ್ ಭಾರೀ ಶಾಂತಿಯುತವೇನೂ ಆಗಿರಲಿಲ್ಲ. ಇಂದಿರಾಗಾಂಧಿ ಪವಿತ್ರ ಸ್ವರ್ಣಮಂದಿರದೊಳಗೇ ಸೇನೆ ನುಗ್ಗಿಸಿದಾಗ ೭೦೦ ಯೋಧರು, ೪೦೦ ಉಗ್ರಗಾಮಿಗಳು ಸೇರಿ ೩೦೦೦ ನಾಗರಿಕರು ಪ್ರಾಣ ಕಳೆದುಕೊಂಡರೆ ೮೪ರ ದೆಹಲಿಯ ಸಿಖ್ ಹತ್ಯಾಕಾಂಡದಲ್ಲಿ ಇನ್ನೂ ಕೆಲ ಸಾವಿರ ಸಿಖ್ಖರು ಕೊಲ್ಲಲ್ಪಟ್ಟರು.
ಪಂಜಾಬ್ ಪುರಾಣ ಕಾಲದಿಂದ ಇಂದಿನವರೆಗೂ ಬಹುಚರ್ಚಿತ ದೇಶ. ಪಂಜಾಬಿನ ಇತಿಹಾಸವನ್ನು ಗಮನಿಸುತ್ತ ಸಾಗಿದರೆ ಅದು ಹೋಗಿ ನಿಲ್ಲುವುದು ವೇದಕಾಲದಲ್ಲಿ. ಋಗ್ವೇದದಲ್ಲುಲ್ಲೇಖಿಸಲ್ಪಟ್ಟ ಸಪ್ತಸಿಂಧುಗಳೆಂದು ಹೆಸರಾದ ಶತದ್ರು(ಸಟ್ಲೇಜ್), ಪರೂಷ್ಣಿ(ರಾವಿ), ವಿತಸ್ತ(ಝಿಲಂ), ಅಸಿಕ್ನಿ(ಚಿನಾಬ್), ವಿಪಾಶ(ಬಿಯಾಸ್), ಸಿಂಧೂ, ಮತ್ತು ಬತ್ತಿಹೋದ ಸರಸ್ವತಿಗಳಲ್ಲಿ ಮೊದಲ ಐದು ನದಿಗಳಿಂದಲೇ ಪಂಜಾಬಿನ ಹೆಸರು ಉಧೃತವಾಗಿದ್ದು.
       ೧೯೫೦ರ ಸುಮಾರಿಗೆ ಅಮೇರಿಕದ ಸಂಶೋಧಕ ಹ್ಯಾರಿ ಫಿಕ್ಸ್ ದೆಹಲಿ ಮಾರ್ಕೇಟಿನಲ್ಲಿ ತಿರುಗುತ್ತಿದ್ದಾಗ ಗುಜರಿ ಅಂಗಡಿಯಲ್ಲಿ ಆತನಿಗೊಂದು ಹಳೆಯ ತಾಮ್ರದ ಮೂರ್ತಿ ಕಣ್ಣಿಗೆ ಬಿತ್ತು. ಕುತೂಹಲಗೊಂಡು ಅದನ್ನು ಆತ ಜಗತ್ಪ್ರಸಿದ್ಧ ಮೆಟಲರ್ಜಿಸ್ಟ್ ರಾಕ್ ಎಂಡರ್ಸನ್ನಿಗೆ ಕಳುಹಿಸಿಕೊಟ್ಟ. ಕ್ಯಾಲಿಫೋರ್ನಿಯಾ, ಸ್ವಿಜರ್ಲೆಂಡುಗಳ ವಿವಿಧ ಲ್ಯಾಬೋರೇಟರಿಗಳಲ್ಲಿ ಕಾರ್ಬನ್ ಡೇಟಿಂಗ್, ಸ್ಪೆಕ್ಟ್ರೋಗ್ರಾಫಿಚ್, ಎಕ್ಸ್-ರೇ ಪರೀಕ್ಷೆಗಳನ್ನು ಮಾಡಿ ಆ ಮೂರ್ತಿ ಕ್ರಿ.ಪೂ ೩೭೦೦ರಕ್ಕಿಂತ ಹಿಂದಿನದ್ದೆಂದು ವಿವಾದೀತವಾಗಿ ನಿರ್ಧರಿಸಲಾಯ್ತು. ಆ ಮೂರ್ತಿ ಋಗ್ವೇದದ ಏಳನೇ ಮಂಡಲದಲ್ಲಿ ವರ್ಣಿಸಿರುವ ವಸಿಷ್ಟನದ್ದು. ಇದರ ಕುರಿತು ’ಅನಾಲಿಸಿಸ್ ಆಫ್ ಇಂಡೋ ಯುರೋಪಿಯನ್ ವೇದಿಕ್ ಹೆಡ್’ ಎಂಬ ಪ್ರಬಂಧದಲ್ಲಿ ೧೯೯೦ರ ’ಜರ್ನಲ್ ಆಫ್ ಇಂಡೋ ಯುರೋಪಿಯನ್ ಸ್ಟಡೀಸ್’ ನಲ್ಲಿ ಹಿಕ್ಸ ಮತ್ತು ಎಂಡರ್ಸನ್ ಪ್ರಕಟಿಸಿದ್ದಾರೆ. ಋಗ್ವೇದದ  ಏಳನೇ ಮಂಡಲದ ದಶರಾಜ್ಞ ಯುದ್ಧದಲ್ಲಿ ವರ್ಣಿಸಿರುವಂತೆ ವಸಿಷ್ಟರ ಸಹಾಯದಿಂದ ಭರತನ ಹದಿನಾರನೇ ಪೀಳಿಗೆಯ ಸುದಾಸ ಹತ್ತು ಆರ್ಯ ರಾಜರನ್ನು ಪಂಜಾಬಿನ 
 ಹ್ಯಾರಿ ಫಿಕ್ಸಿಗೆ ಸಿಕ್ಕ ವಸಿಷ್ಟನ ಶಿರ
ರಾವಿ ನದಿಯ ದಡದಲ್ಲಿ ಸೋಲಿಸಿದ. ಹೀಗೆ ಸೋತ ರಾಜರು ಭಾರತದಿಂದ ಹೊರಗೆ ವಾಯುವ್ಯ ಭಾಗಕ್ಕೆ ಪಲಾಯನಗೈದು ಬೇರೆ ಬೇರೆ ಆರ್ಯಕುಲಗಳ ಬೆಳವಣಿಗೆಗೆ ಕಾರಣರಾದರು. ವೇದಗಳಲ್ಲಿ ಮಾಡಿದ ವರ್ಣನೆಗೆ ಸರಿಹೊಂದುವಂತ ಮೂರ್ತಿಯೊಂದು  ಕ್ರಿ.ಪೂ ೩೭೦೦ರ ಕಾಲದಲ್ಲೇ ಇತ್ತೆಂದಮೇಲೆ ವೇದಗಳು ರಚನೆಗೊಂಡಿದ್ದು, ಮತ್ತು ಆರ್ಯರ ವಾಸ ಅದೇ ಕಾಲಕ್ಕಿಂತ ಹಿಂದೇ ಇದ್ದಿರಬೇಕಲ್ಲ? ಆರ್ಯಸಂಸ್ಕೃತಿಯನ್ನು ಪ್ರಪಂಚದಾದ್ಯಂತ ಹರಡಿದ ಕೀರ್ತಿ ಈ ಪಂಜಾಬಿನ ಮಣ್ಣಿಗಿದೆ.
ವಾಲ್ಮೀಕಿ ಆಶ್ರಮ, ಧೂನಾಸಾಹೇಬ್
        ಹತ್ತು ಸಾವಿರ ವರ್ಷಗಳ ಹಿಂದೆ ವೇದ ಕಾಲದ ಸಿಂಧೂ-ಸರಸ್ವತೀ ನಾಗರೀಕತೆಗಳ ತೊಟ್ಟಿಲೆನಿಸಿದ ಹರಪ್ಪಾ-ಮೊಹಂಜೋದಾರೋಗಳು ಬಾಳಿದ್ದು ಇದೇ ಜಾಗದಲ್ಲಿ. ಪಂಜಾಬಿಗಳ ಪ್ರಕಾರ ಕೌಸಲ್ಯೆಯ ಮೊದಲ ಹೆರಿಗೆಯಾಗಿದ್ದು ಅವಳ ತವರುಮನೆಯಲ್ಲಿ. ರಾಮ ಹುಟ್ಟಿದ್ದೂ ಅಲ್ಲೇ. ಕೌಸಲ್ಯೆಯ ತವರೂರು ಪಟಿಯಾಲದ ಸಮೀಪದ ’ಘುರಾಂ’. ರಾಮ ಹುಟ್ಟಿದ ಸ್ಥಳವೆಂದು ನಂಬಲ್ಪಡುವ ಇಲ್ಲಿ ಕೌಸಲ್ಯೆಗೆ ಒಂದು ಮಂದಿರವೂ ಇದೆ. ರಾಮಾಯಣದ ಬಹುಭಾಗ ನಡೆದಿದ್ದು ಪಂಜಾಬಿನ ಆಸುಪಾಸು. ಕೈಕಯಿಯ ಕೇಕಯ ರಾಜ್ಯವಿದ್ದುದು ರಾವಲ್ಪಿಂಡಿಯಲ್ಲಿ. ವಾಲ್ಮೀಕಿಯ ಆಶ್ರಮವಿರುವುದು ಅಮೃತಸರದ ಧೂನಾಸಾಹೇಬಿನಲ್ಲಿ. ಲವ-ಕುಶರ ಜನ್ಮವಾಗಿದ್ದೂ ಅಲ್ಲೇ. ಲವ ಸ್ಥಾಪನೆ ಮಾಡಿದ್ದ ಲವಪುರ ಲಾಹೋರ್ ಆಗಿಯೂ, ಕುಶನು ರಾಜ್ಯವಾಳಿದ್ದ ಕುಶಪುರಿ ಕಸೂರ್ ಆಗಿಯು ಇಂದು ಕರೆಯಲ್ಪಡುತ್ತಿದೆ. ಭರತನ ಮಕ್ಕಳಾದ ತಕ್ಷ ಮತ್ತು ಪುಷ್ಕಲರು ತಕ್ಷಶಿಲೆ ಮತ್ತು ಪೇಶಾವರದ ಬಳಿಯ ಪುಷ್ಕಲವತಿಯ ಸ್ಥಾಪಕರು. ಲವ ಮತ್ತು ಕುಶರ ಸಂತತಿಯಲ್ಲಿ ರಾಜ್ಯಕ್ಕಾಗಿ ಜಗಳವಾದಾಗ ಲವನ ಸಂತತಿಯವರು ಸೋತು ಕಾಶಿಗೆ ತೆರಳಿ ವೇದಾಭ್ಯಾಸ ನಿರತರಾದರಂತೆ. ನಾಲ್ಕು ವೇದಗಳಲ್ಲಿ ಪರಿಣಿತರಾದ್ದರಿಂದ ಅವರ ಹೆಸರು ವೇದಿ ಅಥವಾ ಬೇದಿ ಎಂದಾಯಿತು. ಗುರುನಾನಕರು ಇದೇ ಬೇದಿ ವಂಶದವರು. ಕುಶನ ಮಗ ಸೋಧಿರಾಯನ ವಂಶಜರು ಸೋಧಿ ಹೆಸರಿನಿಂದ ಪಂಜಾಬನ್ನಾಳಿದರು. ಮುಂದೆ ಸೋಧಿ ವಂಶದ ರಾಜನೊಬ್ಬ ಕಾಶಿಯಿಂದ ವೇದಿಗಳನ್ನು ಕರೆತಂದು ಅವರ ಪಾಂಡಿತ್ಯಕ್ಕೆ ಮೆಚ್ಚಿ ಅವರ ರಾಜ್ಯವನ್ನು ಹಿಂದಿರುಗಿಸಿದ. ನಾನಕರು ಲವನ ವೇದಿ ವಂಶಸ್ಥರಾದರೆ ಗುರು ರಾಮದಾಸರಿಂದ ಗೋವಿಂದಸಿಂಗರ ತನಕ ಹೆಚ್ಚಿನ ಸಿಖ್ಖರ ಗುರುಗಳೆಲ್ಲ ಕುಶನ ಸೋಧಿ ವಂಶಜರು.
ಅವೆಲ್ಲ ಪುರಾಣದ ಕತೆಯಾಯಿತು.
       ಇತಿಹಾಸದ ಪುಸ್ತಕಗಳು ಹೇಳುವಂತೆ ಭಾರತದ ಮೇಲೆ ಇಸ್ಲಾಂನ ದಾಳಿ ಪ್ರಾರಂಭವಾದದ್ದು ಗಜನಿಯಿಂದ. ಆದರೆ ಅಂದಿಗೆ ಮುನ್ನೂರು ವರ್ಷಗಳಿಗಿಂತಲೂ ಹಿಂದೆಯೇ ಕ್ರಿ.ಶ ೬೩೭ರಲ್ಲಿ ಎರಡನೇ ಖಲೀಫಾ ಉಮರ್‌ನ ನೌಕಾದಳ ಮಹಾರಾಷ್ಟ್ರದ ಥಾನೆಯ ಮೇಲೆ ದಾಳಿ ಮಾಡಿತ್ತು. ಇಮ್ಮಡಿ ಪುಲಿಕೇಶಿಯ ಸೈನ್ಯ ಅರಬ್ಬೀ ದಾಳಿಕಾರರನ್ನು ತಿರುಗಿ ಹೋಗದಂತೆ ಕೊಚ್ಚಿಹಾಕಿತ್ತು. ಅದರಾಚೆ ಎರಡು, ಮೂರು ಮತ್ತು ನಾಲ್ಕನೇ ಖಲೀಫರ ಕಾಲದಲ್ಲಿ ಗುಜರಾತಿನ ಭರೂಚ್, ಸಿಂಧ್‌ನ ದೇವಳ ಹಾಗೂ ದಕ್ಷಿಣ ಸಿಂಧ್‌ನ ಮಕ್ರಾನ್, ಕೀಕಾನುಗಳ ಮೇಲಿನ ಆಕ್ರಮಣಗಳಾದಾಗಲೂ ಸಿಂಧಿಯರು ಅವರನ್ನು ಒದ್ದೋಡಿಸಿದ್ದರು. ನೌಕಾದಳದ ಆಕ್ರಮಣಗಳೆಲ್ಲ ವಿಫಲವಾಗುವುದರೊಂದಿಗೆ ಅರಬ್ಬರು ಸಮುದ್ರ ಮಾರ್ಗದ ಮೂಲಕ ಭಾರತವನ್ನು ಗೆಲ್ಲುವ ಆಸೆ ಕೈಬಿಟ್ಟರು. ಮುಂದೆ ಒಂಭತ್ತು ಖಲೀಫರು ವಿಶ್ವಪ್ರಯತ್ನ ಮಾಡಿದರೂ ಸಿಂಧ‌ನ ನೆಲದ ಒಂದಿಂಚೂ ಗೆಲ್ಲಲಾಗಲಿಲ್ಲ. ಕೊನೆಗೆ ಅರಬ್ಬರ ಆ ಆಸೆ ಕೈಗೂಡಿದ್ದು ಕ್ರಿ.ಶ ೭೧೨ರಂದು ಮಹಮ್ಮದ್ ಬಿನ್ ಕಾಸಿಂನ ಕಾಲದಲ್ಲಿ. ಸಿಂಧಿನ ರಾಜ ದಾಹಿರಸೇನನ ಆಶ್ರಯ ಬೇಡಿ ಅಲಾಫಿ ಎಂಬ ಅರಬ್ಬಿ ಬಂದ. ಗುಜರಾತಿಗೆ ಬಂದ ಪಾರ್ಸಿಗಳು ಹಾಲಲ್ಲಿ ಬೆರೆತ ಸಕ್ಕರೆಯಾದಂತೆ ಇವರೂ ಆಗಬಹುದೆಂದು ದಾಹಿರಸೇನ ಉದಾರಮನಸ್ಸಿನಿಂದ ಆಶ್ರಯವಿತ್ತ. ಅಲಾಫಿ ಸಕ್ಕರೆಯಾಗುವ ಬದಲು ವಿಷವಾದ. ಇವನ ದ್ರೋಹದಿಂದಲೇ ದಾಹಿರನ ರಾಜ್ಯ ಕಾಸಿಂನ ವಶವಾಯಿತು.
       ಅಲ್ಲಿಂದ ಶುರುವಾಯ್ತು ನೋಡಿ  ಭಾರತದ ಇತಿಹಾಸದ ಕರಾಳ ಅಧ್ಯಾಯಗಳು. ಮುಂದೆ ಬಂದ ಗಜನಿ ಮಹಮ್ಮದನ ಹದಿನೇಳು ’ದಂಡ’ಯಾತ್ರೆಗಳ ಕಥೆ ಎಲ್ಲರೂ ಓದಿದ್ದೇ. ಸೋಮನಾಥ, ಮಥುರಾದ ದೇವಾಲಯಗಳು ಇವನ ಆಕ್ರಮಣಕಾಲದಲ್ಲೇ ನಾಶವಾದವು. ಹೀಗಿದ್ದರೂ ಗಜನಿ ಒಬ್ಬ ಅಪ್ರತಿಮ ಯೋಧನೆಂದೂ, ಅವನೆದುರು ನಿಲ್ಲುವ ಭಾರತೀಯ ರಾಜರ್ಯಾರೂ ಇರಲಿಲ್ಲವೆಂದೂ, ಕಲಾಪೋಷಕನೆಂದೂ, ಸೆಕ್ಯುಲರ್ ಮರ್ಯಾದೆಗಳನ್ನು ಪಾಲಿಸಿದವನೆಂದೂ, ಭಾರತೀಯ ನಗರಗಳಿಗೆ ಸರಿಸಮಾನವಾಗಿ ಗಜನಿ ನಗರವನ್ನು ನಿರ್ಮಿಸಲು ಬಯಸಿದ್ದನೆಂದೂ, ಹಿಂದೂ ದೇವಾಲಯಗಳಲ್ಲಿ ಅಡಗಿದ್ದ ಅಪಾರ ಸಂಪತ್ತಿಗಾಗಿ ಮಾತ್ರ ಅವುಗಳನ್ನು ಒಡೆದನೆಂದೂ ಪಂಡಿತ್ ನೆಹರೂರಿಂದ ಹಿಡಿದು ಎಲ್ಲ ಇತಿಹಾಸಕಾರರು ಗಜನಿಗೆ ಭೇಷ್ ಭೇಷ್ ಎಂದಿದ್ದಾರೆ. ಪರದೇಶಿಗನೊಬ್ಬ ಬರೋಬ್ಬರಿ ಒಂದೂವರೆ ಡಜನ್ ಬಾರಿ ದಂಡೆತ್ತಿ ಬಂದು ಬೃಹದ್ದೇವಾಲಯಗಳನ್ನು ನೆಲಕ್ಕುರುಳಿಸಿ, ಲಕ್ಷಾಂತರ ನರಸಂಹಾರ ಮಾಡಿ, ಇಲ್ಲಿನ ಸಂಪತ್ತನ್ನೆಲ್ಲ ದೋಚಿಕೊಂಡು ಹೋಗುತ್ತಿದ್ದರೆ ತಡೆಯಲು ಶಕ್ತಿಯಿದ್ದ ಒಬ್ಬನೇ ಒಬ್ಬ ರಾಜ ಇಲ್ಲಿರಲಿಲ್ಲವೇ ಈ ನೆಲದಲ್ಲಿ? ಹದಿನೇಳು ದಂಡಯಾತ್ರೆಗಳ ಕಥೆ ಹೇಳುವ ಇತಿಹಾಸಕಾರರ್ಯಾರೂ ಒಂದು ಕಥೆ ಹೇಳುವುದಿಲ್ಲ.
       ಪಂಜಾಬಿನ ರಾಜನಾಗಿದ್ದ ಆನಂದಪಾಲ ಗಜನಿ ಮಹಮ್ಮದನಿಗೆ ಒಂದು ಪತ್ರ ಬರೆಯುತ್ತಾನೆ. ’ನಿನ್ನನ್ನು ನಾನು ಸೋಲಿಸಿದೆ. ಆ ಗೌರವ ನನ್ನನ್ನು ಬಿಟ್ಟು ಇನ್ನೊಬ್ಬನಿಗೆ ಸಿಗುವುದು ನನಗಿಷ್ಟವಿಲ್ಲ. ನಿನ್ನ ಮೇಲೆ ದಂಡೆತ್ತಿ ಯಾರೇ ಬಂದರೂ ಅವರನ್ನು ಸೋಲಿಸಲು ನಾನು ಸಹಾಯ ಮಾಡುತ್ತೇನೆ’, ಇದೇ ಪತ್ರವನ್ನುಲ್ಲೇಖಿಸಿ ಅಲ್ಬೆರೂನಿ ತನ್ನ ’ತಾರಿಖ್ ಉಲ್ ಹಿಂದ್‌’ನಲ್ಲಿ ಗಜನಿ ಮೊಹಮ್ಮದನನ್ನು ನೆಲಕ್ಕಚ್ಚುವಂತೆ ಸೋಲಿಸಿದ ಏಕೈಕ ಭಾರತೀಯ ರಾಜನೆಂದು ಆನಂದಪಾಲನನ್ನು ಬಾಯ್ತುಂಬ ಹೊಗಳಿದ್ದಾನೆ.
       ಈ ಆನಂದಪಾಲ ಬದುಕಿರುವವರೆಗೂ ಅರಬ್ಬಿಗಳು ಕಮಕ್ ಕಿಮಕ್ ಎನ್ನಲಿಲ್ಲ. ಅವನ ಮರಣಾನಂತರ ಮಗ ಜಯಪಾಲನ ಕಾಲದಲ್ಲೇ ಗಜನಿಯ ಹೆಚ್ಚಿನೆಲ್ಲ ಆಕ್ರಮಣಗಳು ನಡೆದಿದ್ದು. ಒಂದೇ ದಿನ ಐವತ್ತು ಸಾವಿರ ಹಿಂದೂಗಳನ್ನು ಕೊಂದ ಸುಲ್ತಾನ ಇಡೀ ಸೋಮನಾಥ ದೇವಾಲಯವನ್ನು ಲೂಟಿ ಹೊಡೆದದ್ದಲ್ಲದೇ ಶಿವಲಿಂಗವನ್ನು ಜಾಮಿ ಮಸೀದಿಯ ಮೆಟ್ಟಿಲಲ್ಲಿ ಬಳಸುವಂತೆ ಆಜ್ಞಾಪಿಸಿದ. ಮುಂದೆ ಪಂಜಾಬಿನ ಹಿಂದೂ ಮಹಾರಾಜ ರಣಜೀತ್ ಸಿಂಗ್ ಅಪ್ಘಾನಿಸ್ತಾನವನ್ನು ಗೆದ್ದು ಗಜನಿ ಕದ್ದೊಯ್ದ ಸೋಮನಾಥ ಮಂದಿರದ ದ್ವಾರಗಳನ್ನೂ, ಚಿನ್ನವನ್ನೂ ವಾಪಸ್ ತಂದ. ಸೋಮನಾಥ ಇನ್ನಿಲ್ಲದಂತೆ ವಿಧ್ವಂಸಗೊಂಡಿರುವುದರಿಂದ ಕೊನೆಗೆ ಈ ಚಿನ್ನವನ್ನು ಈಗ ಸ್ವರ್ಣಮಂದಿರವೆಂದು ಕರೆಯಲ್ಪಡುವ ಅಮೃತಸರದ ಹರಿಮಂದಿರವನ್ನು ಅಲಂಕರಿಸಿ ಸೋಮನಾಥನ ಬಾಗಿಲುಗಳನ್ನು ಅದಕ್ಕೆ ಅಳವಡಿಸಲಾಯಿತು. ಈ ಸ್ವರ್ಣಮಂದಿರದ ಇತಿಹಾಸ ಇನ್ನೂ ಕುತೂಹಲಕಾರಿ. ಇದು ಮೂಲತಃ ಕೃತಯುಗದಲ್ಲಿ ಸೂರ್ಯವಂಶದ ಇಕ್ಷ್ವಾಕು ಮಹಾರಾಜ ನಿರ್ಮಿಸಿದ್ದ ವಿಷ್ಣುಕುಂಡ ಅಥವಾ ಅಮೃತ ಸರೋವರ. ಇಲ್ಲಿ ಗುರು ರಾಮದಾಸರ ಕಾಲದಲ್ಲಿ ಚಿಕ್ಕ ವಿಷ್ಣುವಿನ ಮಂದಿರದ ನಿರ್ಮಾಣವಾಯಿತು. ಅವರ ತರುವಾಯ ಗುರು ಅರ್ಜುನದೇವರು ಅಮೃತ ಸರಸ್ಸನ್ನು ವಿಸ್ತರಿಸಿ ಅದರ ಮಧ್ಯದಲ್ಲಿ ದೊಡ್ಡದೊಂದು ಮಂದಿರವನ್ನು ನಿರ್ಮಿಸಿದರು. ಆಗ ಇದಕ್ಕಿದ್ದ ಹೆಸರು ಹರಿಮಂದಿರ ಸಾಹೇಬ್. ಅಲ್ಲೊಂದು ವಿಶೇಷವಿದೆ. ನಮ್ಮಲ್ಲಿ ಹೆಚ್ಚಿನ ದೇವಾಲಯಗಳು ನಿರ್ಮಾಣವಾಗುವುದು ಬೆಟ್ಟದ ಮೇಲೆ. ಜನ ಕಷ್ಟಪಟ್ಟು ಮೇಲೇರಿ ದರ್ಶನ ಪಡೆಯಲಿ ಎಂದಿರಬಹುದು. ಆದರೆ ಸ್ವರ್ಣಮಂದಿರವಿರುವುದು ತಗ್ಗಿನಲ್ಲಿ. ಮೆಟ್ಟಿಲಿಳಿದು ಕೆಳಗೆ ಹೋಗಿಯೇ ನೋಡಬೇಕು. ಎಷ್ಟೇ ಎತ್ತರದಲ್ಲಿದ್ದರೂ ನೀರು ತಗ್ಗಿನತ್ತ ಹರಿಯಬೇಕು. ನೀರಿನಂತೆ ಮನುಷ್ಯ ಎಷ್ಟು ದೊಡ್ಡವನಾದರೂ ತನ್ನ ಅಹಂಕಾರ ಬಿಟ್ಟು ಕೆಳಗಿಳಿದು ದೇವರತ್ತ ಬರಲಿ ಎಂಬುದು ಅದರ ಹಿಂದಿನ ಮರ್ಮವಂತೆ.  ಮುಸ್ಲಿಂ ಆಕ್ರಮಣಕಾರರು ಪಂಜಾಬಿನ ಮೇಲೆ ದಾಳಿ ಮಾಡಿದಷ್ಟೂ ಸಲ ಈ ಹರಿಮಂದಿರ ನಾಶವಾಗಿದೆ. ನಾದಿರ್ ಷಾ, ಅಹ್ಮದ್ ಅಲಿ ಅಬ್ದಾಲಿ, ಮೊಘಲ ಸುಲ್ತಾನರ ಕಾಲದಲ್ಲೆಲ್ಲ ಬಾರಿ ಬಾರಿ ಮಂದಿರ ನೆಲಸಮವಾದರೂ ಅಷ್ಟೇ ವೇಗವಾಗಿ ಮೊದಲಿಗಿಂತ ಸುಂದರವಾಗಿ, ಭವ್ಯವಾಗಿ ಪುನರ್ನಿರ್ಮಾಣಗೊಂಡು ತಲೆ ಎತ್ತಿನಿಂತಿದೆ. ಈಗಿರುವ ಭವ್ಯ ಕಟ್ಟಡ ತಲೆ ಎತ್ತಿದ್ದು ೧೮೦೩ರಲ್ಲಿ ರಣಜೀತ್ ಸಿಂಗನ ಕಾಲದಲ್ಲೇ. ಆತ ಸಾವಿರಾರು ಕೇ.ಜಿ ಚಿನ್ನವನ್ನು ಇದರ ನಿರ್ಮಾಣಕ್ಕೆ ಬಳಸಿದ್ದರಿಂದ ಹರಿಮಂದಿರ ಸ್ವರ್ಣಮಂದಿರವೆಂದು ಕರೆಯಲ್ಪಟ್ಟಿತು. ಇದೊಂದು ಅಪ್ಪಟ ಹಿಂದೂ ದೇವಾಲಯ. ಗುರುನಾನಕರು ಸಿಖ್ ಪಂಥದ ಸ್ಥಾಪಕರು, ಹಿಂದೂ, ಮುಸ್ಲಿಮರ ಭಾವೈಕ್ಯತೆಗಾಗಿ ದುಡಿದ ಮಹನೀಯರು, ಸಿಖ್ಖರು ಹಿಂದೂಗಳಲ್ಲ ಎಂದು ಇತಿಹಾಸಕಾರಾಗಲೀ ಸರ್ಕಾರಗಳಾಗಲೀ ಪುಸ್ತಕಗಳಲ್ಲಿ ಎಷ್ಟೇ ಪುಂಗಿ ಊದಿದರೂ (ಕನ್ನಡ ಪುಸ್ತಕ ಪ್ರಾಧಿಕಾರ ಜಾಗತಿಕ ಚಿಂತಕರ ಮಾಲೆಯಡಿ ೨೦೦೧ ರಲ್ಲಿ ಹೊರತಂದ ಗುರುನಾನಕ್ ಪುಸ್ತಕ ನೋಡಿ) ಅವರೊಬ್ಬ ಅಪ್ಪಟ ಹಿಂದೂ ವೈಷ್ಣವ ಸಂತ. ನಾನಕರು ಬಳಸುತ್ತಿದ್ದ ರುದ್ರಾಕ್ಷಿಮಾಲೆ, ಸೇಲಿ ಟೋಪಿ, ಪೂಜಿಸುತ್ತಿದ್ದ ಸಾಲಿಗ್ರಾಮ ಇಂದಿಗೂ ಕರ್ತಾರ್‌ಪುರ್ ಕೋಟೆಯಲ್ಲಿ ಸುರಕ್ಷಿತವಾಗಿವೆ. ’ತತ್ ಖಾಲ್ಸಾ’ ಸ್ಥಾಪನೆಯಾಗುವವರೆಗೂ ಬರೆಯಲ್ಪಟ್ಟ ನಾನಕರ ಚಿತ್ರಗಳಲ್ಲೆಲ್ಲ ಅವರನ್ನು ಜಪಮಾಲೆ,ಕಮಂಡಲ ಹಿಡಿದ, ಹಣೆಯಲ್ಲಿ ವೈಷ್ಣವರ ನಾಮ, ಭಕ್ತಿಪಂಥದ ಸೇಲಿ ಟೋಪಿ ಧರಿಸಿದವರಾಗಿಯೇ ಚಿತ್ರಿಸಲಾಗಿದೆ. ತತ್ ಖಾಲ್ಸಾದಂಥ ಸಂಘಟನೆಗಳು ಪ್ರವರ್ಧಮಾನಕ್ಕೆ ಬಂದಂತೆ ನಾಮ ಮರೆಯಾಯ್ತು, ಟೋಪಿ ಹೋಗಿ ಟರ್ಬನ್ ಬಂದಿತು. ತಾವು ಹಿಂದೂಗಳಲ್ಲ ಎಂದು ಒಪ್ಪಿಕೊಳ್ಳುವಂತೆ ಸಿಖ್ಖರನ್ನು ಬಲವಂತವಾಗಿ ಬ್ರೇನ್ ವಾಶ್ ಮಾಡಲಾಯ್ತು. ಹಿಂದೂ ಇಸ್ಲಾಂಗಳೆರಡನ್ನೂ ಸೇರಿಸಿ ’ಸಿಖ್’ ಎಂಬ ಹೊಸ ಧರ್ಮವನ್ನು ಸ್ಥಾಪಿಸಿದರು ಎಂದು ಶಾಲೆಯ ಇತಿಹಾಸದ ಪುಸ್ತಕಗಳು ಒದರಿಕೊಂಡರೂ ಯಾವ ನಾನಕ ಪಂಥದ ಗುರುಗಳೂ ತಾವು ಅಹಿಂದೂಗಳೆಂದು ಹೇಳಿಕೊಂಡಿಲ್ಲ. ನಾನಕರಿಗೆ ವೈಷ್ಣವ ದೀಕ್ಷೆ ನೀಡಿದ್ದು ಬಂಗಾಳದ ಭಕ್ತಿ ಪಂಥದ ಸರ್ವೋಚ್ಚ ಸಂತರಲ್ಲೊಬ್ಬರಾದ ಪ್ರಭು ನಿತ್ಯಾನಂದರು. ಪುರಿಯಲ್ಲಿ ನಾನಕ ಮತ್ತು ಚೈತನ್ಯ ಮಹಾಪ್ರಭುಗಳಿಬ್ಬರೂ ಭೇಟಿಯಾಗಿ ಜಗನ್ನಾಥನನ್ನು ಕೀರ್ತಿಸಿದ ಬಗ್ಗೆ ಚೈತನ್ಯರ ಶಿಷ್ಯ ಬರೆದ ಚೈತನ್ಯ ಭಾಗವತದಲ್ಲಿ ಉಲ್ಲೇಖವಿದೆ. ಶ್ರೀಲಂಕಾಕ್ಕೆ ಭೇಟಿ ನೀಡಿದಾಗ ಅಲ್ಲಿನ ಶೈವ ರಾಜ ಸಿಯೋನಾಥ ನಾನಕರನ್ನು ’ನಾನಕಾಚಾರ್ಯ’ರೆಂದು ಕರೆದು ಬರೆಸಿದ ಶಾಸನ ಲಭ್ಯವಿದೆ. ಇಷ್ಟಿದ್ದರೂ ನಾನಕರನ್ನು ಸೂಫಿ ಸಂತನ ಪದವಿಗಿಳಿಸುವ ಕೆಲಸವಿನ್ನೂ ನಿಂತಿಲ್ಲ. ಹಾಗೆ ಮಾಡುತ್ತಿರುವವರ್ಯಾರೂ ಗುರುಗ್ರಂಥಸಾಹೇಬ ಓದಿಲ್ಲ.
गुरमुखि नादं गुरमुखि वेदं गुरमुखि रहिआ समाई ॥
गुरु ईसरु गुरु गोरखु बरमा गुरु पारबती माई ॥
ಗುರುವೇ ನಾದ, ಗುರುವೇ ವೇದ, ಗುರು ಈಶ್ವರ, ಗುರು ಶಿವ-ವಿಷ್ಣು, ಗುರುವೇ ಪಾರ್ವತಿ ಲಕ್ಷ್ಮಿ.
 ಹಿಂದೂ ಧರ್ಮದಿಂದ ಸಿಖ್ಖರನ್ನು ಬೇರ್ಪಡಿಸಿ ಅವರನ್ನು ಮೂರ್ಖರನ್ನಾಗಿಸುವಲ್ಲಿ ಬ್ರಿಟಿಷರ ಡಿವೈಡ್ ಎಂಡ್ ರೂಲ್ ತುಂಬ ಅಚ್ಚುಕಟ್ಟಾಗಿ ಕೆಲಸ ಮಾಡಿದೆ. ೧೯೦೫ರಲ್ಲಿ ಕ್ರಿಶ್ಚಿಯನ್ ಮಿಶನರಿಯ ’ಮ್ಯಾಕ್ಸ್ ಅರ್ಥರ್ ಮೆಕಾಲ್ಲಿಫ್‌’ ಎಂಬ ಇತಿಹಾಸಕಾರನಿಂದ ಬ್ರೇನ್ ವಾಶ್‌ಗೊಳಪಟ್ಟ ’ತತ್ ಖಾಲ್ಸಾ ಸಿಂಗ್ ಸಭಾ’ ಸ್ವರ್ಣಮಂದಿರದೊಳಗಿದ್ದ ವಿಷ್ಣು ಮತ್ತು ಶಿವನ  ಮೂರ್ತಿಗಳನ್ನು ಹೊರಕ್ಕೆಸೆಯಿತು. ಈ ಮಹಾಶಯ ಬರೆದ ಸಿಖ್ ಇತಿಹಾಸದ ಗ್ರಂಥಗಳೇ ಇಂದಿನವರಿಗೆ ಪೂಜ್ಯ ಗ್ರಂಥ. ಸಿಖ್ಖರ ಬಗ್ಗೆ ಇರುವ ಇತಿಹಾಸವನ್ನೆಲ್ಲ ಮೂಲೆಗೆ ಸರಿಸಿ ಹೊಸ ಸೃಷ್ಟಿಯನ್ನೇ ಮಾಡಿದ ಮೆಕಾಲ್ಲಿಫ್ ಯಾವ ಮ್ಯಾಕ್ಸ್ ಮುಲ್ಲರಿಗೂ ಕಡಿಮೆಯಿಲ್ಲದಷ್ಟು ಪ್ರತಿಭಾವಂತ. ಇವನಿಂದ ಪ್ರೇರೇಪಿತಗೊಂಡ ಕಾಹನ್ ಸಿಂಗ್ ನಭಾ ರಚಿಸಿದ ’ಹಮ್ ಹಿಂದೂ ನಹೀ’ ಖಾಲ್ಸಾಗಳಿಗೆ ಅಧಿಕೃತ ಇತಿಹಾಸ. ಸಿಖ್ಖರ ದಾರಿ ತಪ್ಪಿಸಲು ನಾನಕದೇವರ ಜನ್ಮವೃತ್ತಾಂತ ’ಜನಮ್‌ಸಾಖಿ’ಯ ಬೇರೆ ಬೇರೆ ವರ್ಷನ್ನುಗಳು ಹುಟ್ಟಿಕೊಂಡವು. ಓಂಕಾರ ಇಕ್‌ಓನ್ಕಾರವಾಯ್ತು. ನಾನಕರು ಸೂಫಿಗಳಾಗಿದ್ದರೆಂದೂ, ಸ್ವರ್ಣಮಂದಿರವನ್ನು ನಿರ್ಮಿಸಲು ಪ್ರೇರೇಪಿಸಿದ್ದು ’ಮಿಯಾನ್ ಮೀರ್’ ಎಂಬ ಸೂಫಿ ಸಂತರೆಂಬ ಹೊಸ ಕತೆ ಶುರುವಾಯ್ತು. ’ಹರಿಮಂದಿರ’ವು ’ದರ್ಬಾರ್ ಸಾಹೇಬ್’ ಆಗಿಯೂ, ನಾನಕರ ’ಶ್ರೀಆದಿಗ್ರಂಥಜಿ’ಯು ’ಗುರು ಗ್ರಂಥ್ ಸಾಹೇಬ್’ ಆಗಿಯೂ ನಾಮಾಂತರಗೊಂಡವು. ಇವತ್ತಿಗೂ ಖಾಲ್ಸಾದಿಂದ ಪ್ರಭಾವಿತರಾದ ಸಿಖ್ಖರ್ಯಾರೂ ತಾವು ಹಿಂದೂಗಳೆಂದು ಒಪ್ಪಲು ತಯಾರಿಲ್ಲ. ಪಾಪ, ಹೀಗೆನ್ನುವವರಿಗ್ಯಾರೂ ಅವರ ಇತಿಹಾಸವೇ ಗೊತ್ತಿಲ್ಲ. 
ನಾನಕರ ಸೇಲಿ ಟೋಪಿ, ತಿಲಕ, ಜಪಮಾಲೆ ಗಮನಿಸಿ
ನಾನಕರು ಬಳಸುತ್ತಿದ್ದ ಸಾಲಿಗ್ರಾಮ, ಜಪಮಾಲೆ

ಕ್ರಿ.ಶ ೧೬೭೫ ಜುಲೈ,
        ದೇವಸ್ಥಾನಗಳನ್ನು ಬೀಳಿಸಿಯಾಯ್ತು, ವಿದ್ಯಾಸಂಸ್ಥೆಗಳನ್ನು ಕೆಡವಿಯಾಯ್ತು, ಹಿಂದೂಗಳಾಗಿ ಬದುಕುವುದಕ್ಕೂ ತೆರಿಗೆ ಕಟ್ಟುವ ಪರಿಸ್ಥಿತಿ. ಹಣೆಯಲ್ಲಿ ತಿಲಕ, ಭುಜದ ಮೇಲೆ ಜನಿವಾರ ಕಂಡಕೂಡಲೆ ಅಂಥವರನ್ನು ಕತ್ತರಿಸಿ ಹಾಕುವಂತೆ ಔರಂಗಜೇಬ ಆಪ್ಪಣೆ ಹೊರಡಿಸಿದ್ದ. ಕಾಶ್ಮೀರವೊಂದರಲ್ಲೇ ದಿನಕ್ಕೆ ಒಂದು ಮಣಭಾರದ ಜನಿವರಾಗಳ ರಾಶಿ ಬೀಳುತ್ತಿತ್ತಂತೆ. ಇನ್ನು ಮೊಘಲರ ಆಳ್ವಿಕೆಯಲ್ಲಿ ಬದುಕಲು ಸಾಧ್ಯವೇ ಇಲ್ಲವೆಂಬಷ್ಟು ಹಿಂಸೆ ಅತಿಯಾದಾಗ ಕಾಶ್ಮೀರಿ ಪಂಡಿತರ ಗುಂಪೊಂದು ಸಿಖ್ ಗುರು ತೇಜಬಹದ್ದೂರರ ಶರಣು ಬಂತು. ಕಾಶ್ಮೀರಿ ಬ್ರಾಹ್ಮಣರಿಗೆ ಸಿಖ್ ಮತದಲ್ಲಿ ವಿಶಿಷ್ಟವಾದ ಸ್ಥಾನವಿದೆ. ಆದಿಗ್ರಂಥದ ಮೂರು ಭಾಗಗಳಾದ ಗುರ್ಬಾನಿ, ಭಟ್ಟಬಾನಿ, ಭಗತ್‌ವಾನಿಗಳಲ್ಲಿ ’ಭಟ್ಟವಾಣಿ’ಯನ್ನು ರಚಿಸಿದ್ದು ಕಾಶ್ಮೀರಿ ಬ್ರಾಹ್ಮಣರೇ. ಆದಿಗ್ರಂಥದ ೩೬ ರಚನಕಾರರಲ್ಲಿ ೧೯ ಜನ ಬ್ರಾಹ್ಮಣರು. ಹೀಗಿರುವಾಗ ಶರಣು ಬಂದವರ ಕೈಬಿಡಲು ತೇಜಬಹದ್ದೂರರಿಗೆ ಮನಸ್ಸಾಗಲಿಲ್ಲ. ಇದೇ ಔರಂಗಜೇಬನ ಅಜ್ಜ ಜಹಾಂಗೀರ್ ಹಿಂದೂ ಮತದ್ವೇಷದ ಕಾರಣದಿಂದ ಗುರು ಅರ್ಜುನದೇವರನ್ನು ರಾವಿ ನಡಿದಡದಲ್ಲಿ ಕೊತಕೊತ ಕುದಿಯುತ್ತಿದ್ದ ಮರಳು ತುಂಬಿದ ಹಂಡೆಯಲ್ಲಿ ಕೂರಿಸಿ ಕ್ರೂರವಾಗಿ ಹತ್ಯೆಗೈದಿದ್ದ. ಆದರೂ ತೇಜಬಹದ್ದೂರರು ಹೆದರಲಿಲ್ಲ. ೧೬೭೫ ಜುಲೈ ೮ರಂದು ಆನಂದಪುರದಲ್ಲಿ ’ಸಿಖ್ ಸಂಗತ್’ನ್ನು ಸಮಾವೇಶಗೊಳಿಸಿ ತಮ್ಮ ಮಗ ಗೋವಿಂದನನ್ನು ಉತ್ತರಾಧಿಕಾರಿಯನ್ನಾಗಿಸಿ ಮೂರು ಶಿಷ್ಯರೊಂದಿಗೆ ದೆಹಲಿಗೆ ಪ್ರಯಾಣಿಸಿದರು. ತನ್ನನ್ನು ಮತಾಂತರಗೊಳಿಸಿದರೆ ಇಡೀ ಹಿಂದೂ ಸಮುದಾಯವೇ ಇಸ್ಲಾಂ ಸ್ವೀಕರಿಸುವುದಾಗಿ ಜೇಬನಿಗೆ ಸಂದೇಶ ಕಳುಹಿಸಿದರು. ಹಿಂದೂಗಳಲ್ಲಿ ಬಂಡಾಯವನ್ನು ಪ್ರೇರೇಪಿಸುತ್ತಿದ್ದಾನೆಂದು ಆರೋಪಿಸಿ ಸಟ್ಲೇಝ್ ನದಿಯನ್ನು ದಾಟುತ್ತಿದ್ದಂತೆ ರೂಪಾರ್‌ನಲ್ಲಿ ದಾರಿಮಧ್ಯದಲ್ಲೇ ತೇಜಬಹದ್ದೂರರನ್ನು ಬಂಧಿಸಲಾಯ್ತು. ಮೂರು ತಿಂಗಳು ಸೆರೆಯಲ್ಲಿ ಚಿತ್ರಹಿಂಸೆ ನೀಡಿದರೂ, ಅವರ ಅನುಯಾಯಿಗಳನ್ನೆಲ್ಲ ಚಿತ್ರಹಿಂಸೆ ಕೊಟ್ಟು ಕೊಂದರೂ ಆ ಸಾಧು ಮತಾಂತರಕ್ಕೆ ಒಪ್ಪಲಿಲ್ಲ. ಅವರ ಅನುಯಾಯಿ ಭಾಯಿ ಮತಿದಾಸನನ್ನು ತಲೆಯಿಂದ ಕಾಲಿನವರೆಗೆ ಗರಗಸದಿಂದ ಸೀಳಿ ಜರಾಸಂಧನಂತೆ ಕತ್ತರಿಸಲಾಯ್ತು, ಭಾಯಿ ದಯಾಳ ದಾಸನನ್ನು ಕುದಿವ ನೀರಲ್ಲಿ ಮುಳುಗಿಸಿಲಾಯ್ತು. ಸತಿದಾಸನನ್ನು ಹತ್ತಿಯ ರಾಶಿಯಲ್ಲಿ ಕೂರಿಸಿ ಬೆಂಕಿ ಹಚ್ಚಿದರು. ತೇಜಬಹದ್ದೂರರ ಮನಸ್ಸು ಒಂದಿಂಚೂ ವಿಚಲಿತವಾಗಲಿಲ್ಲ. ಕೊನೆಗೆ ಜೈಲಿನಿಂದ ರಾಣಿಯ ಅಂತಃಪುರದತ್ತ ನೋಡುತ್ತಿದ್ದ ಎಂಬಂಥ ತಲೆಬುಡವಿಲ್ಲದ ಆರೋಪಗಳನ್ನೆಲ್ಲ ಹೊರಿಸಿ ನವೆಂಬರ್ ೧೧ರಂದು ಚಾಂದನೀ ಚೌಕದಲ್ಲಿ ಎಲ್ಲರೆದುರು ಗುರುದೇವರ ತಲೆ ಕಡಿದರು. ತೇಜಬಹದ್ದೂರರ ತಲೆಯನ್ನು ಆನೆಯ ಮೇಲಿರಿಸಿ ದೆಹಲಿಯ ಬಾಜಾರುಗಳಲ್ಲಿ ಮೆರವಣಿಗೆ ಮಾಡಿಸಿ ಸಾರ್ವಜನಿಕ ಪ್ರದರ್ಶನಕ್ಕಿಡಲಾಯಿತು. ಆ ಬರ್ಬರ ಕ್ರೌರ್ಯವನ್ನು ನೋಡಿ ದೆಹಲಿಗರ ಉಸಿರಡಗಿಹೋಯಿತು. ಸೊಲ್ಲೆತ್ತುವ ಧೈರ್ಯವಿರುವವರೊಬ್ಬನೂ ಇರಲಿಲ್ಲ. ಲಕ್ಷಾಂತರ ಅನುಯಾಯಿಗಳಿರುವ ಗುರುಗಳಿಗೇ ಈ ಗತಿಯಾದರೆ ಸಾಮಾನ್ಯರ ಪಾಡೇನು! ಔರಂಗಜೇಬ ಎಲ್ಲಿ ತಮ್ಮನ್ನೇನಾದರೂ ಮಾಡಿಬಿಟ್ಟಾನೆಂಬ ಹೆದರಿಕೆಯಿಂದ ಕತ್ತರಿಸಿ ಬಿದ್ದಿದ್ದ ದೇಹದ ಹತ್ತಿರ ಹೋಗುವ ಸಾಹಸವನ್ನೂ ಯಾರೊಬ್ಬರೂ ಮಾಡಲಿಲ್ಲ. ಆದರೆ ಶಿಷ್ಯರು ಸುಮ್ಮನಿರುತ್ತಾರೆಯೇ!  ಭಾಯಿ ಜೈತಾ ಎಂಬ ಶಿಷ್ಯನೊಬ್ಬ ಸಮಯಕಾದು ರಾತ್ರೋರಾತ್ರಿ ತೇಜಬಹದ್ದೂರರ ತಲೆಯನ್ನು ಜೋಳಿಗೆಯಲ್ಲಿ ಹಾಕಿಕೊಂಡು ಮಾರುವೇಷದಲ್ಲಿ ಆನಂದಪುರ್ ಸಾಹಿಬ್‌ಗೆ ಪ್ರಯಾಣ ಬೆಳೆಸಿದ. ಇನ್ನೊಬ್ಬ ಶಿಷ್ಯ ಲಖಿ ಷಾ ಬಂಜಾರಾ ಅದೇ ರಾತ್ರಿ ತೇಜಬಹದ್ದೂರರ ಮುಂಡವನ್ನು ಮನೆಗೆ ಹೊತ್ತು ತಂದಿಟ್ಟುಕೊಂಡ. ರಾತ್ರಿ ಕಳೆದು ಬೆಳಗಾದರೆ ಮುಘಲ್ ಸೈನಿಕರು ಕಳೆದು ಹೋದ ದೇಹವನ್ನು ಹುಡುಕಿಕೊಂಡು ಬರುತ್ತಿದ್ದರು. ಆಧ್ಯಾತ್ಮಗುರುವೊಬ್ಬನ ದೇಹವನ್ನು ದಫನ ಮಾಡದೇ ಹಾಗೆ ಬಿಡಲು ಅವನಿಗೆ ಮನಸ್ಸಾಗಲಿಲ್ಲ. ಲಖಿ ಷಾ ಗುರುವಿನ ಮುಂಡವನ್ನು ತಬ್ಬಿಕೊಂಡು ತನ್ನ ಮನೆಗೇ ಬೆಂಕಿಹಚ್ಚಿಕೊಂಡು ಬೂದಿಯಾದ. ೧೭೮೩ರಲ್ಲಿ ದೆಹಲಿಯನ್ನಾಕ್ರಮಿಸಿ ಮುಘಲರನ್ನು ಬಗ್ಗುಬಡಿದ ಸಿಖ್ಖರ ಮಿಲಿಟರಿ ನಾಯಕ ’ಬಾಘಲ್ ಸಿಂಘ್’ ತೇಜಬಹದ್ದೂರರನ್ನು ಹತ್ಯೆಗೈದ ಅದೇ ಸ್ಥಳದಲ್ಲಿ ಸ್ಮಾರಕವಾಗಿ ಗುರುದ್ವಾರ ’ಶೀಷ್(ಶೀಷ್ = ತಲೆ) ಗಂಜ್ ಸಾಹೇಬ’ನ್ನೂ, ದೇಹವನ್ನು ದಹನಮಾಡಿದ ಮನೆಯಿದ್ದ ಜಾಗದಲ್ಲಿ ಗುರುದ್ವಾರ ’ರಕಬ್ ಗಂಜ್ ಸಾಹೇಬ್‌’ನ್ನೂ ನಿರ್ಮಿಸಿದ. ದೆಹಲಿಯ ಅತ್ಯಂತ ಹಳೆಯ ಗುರುದ್ವಾರಗಳಲ್ಲೊಂದಿವು. ಇಂಥ ತೇಜಬಹದ್ದೂರರನ್ನು ದಾರಿಹೋಕರ ದರೋಡೆಕೋರನೆಂದು, ಔರಂಗಜೇಬನನ್ನು ಹಿಂದೂದ್ವೇಷವಿಲ್ಲದ ಸೆಕ್ಯುಲರ್ ಮನುಷ್ಯನೆಂದು ಜುದಾನಾಥ್ ಸರ್ಕಾರ್ ಸೇರಿ ಬಹಳಷ್ಟು ಮಾರ್ಕ್ಸಿಸ್ಟ್ ಬ್ರಹ್ಮರು ಚಿತ್ರಿಸಿದ್ದಾರೆ. ಗುರು ಗ್ರಂಥ ಸಾಹೇಬದ ಭಟ್ಟ ವಾಹಿಗಳಲ್ಲಿ, ಭಟ್ಟ ವಾಣಿಗಳಲ್ಲಿ. ಗುರು ಕಿಯಾಂ ಸಖಿಯಾಂಗಳಂಥ ಪ್ರಾಮಾಣಿಕ ಸಿಖ್ ಗ್ರಂಥಗಳಲ್ಲಿ ತೇಜಬಹದ್ದೂರರ ಅಮರಗಾಥೆಯ ಸವಿಸ್ತಾರ ಚಿತ್ರಣವಿಲ್ಲದಿದ್ದರೆ ಇಷ್ಟೊತ್ತಿಗಾಗಲೇ ಮಾರ್ಕ್ಸಿಸ್ಟ್ ಇತಿಹಾಸಕಾರರು ಸಿಖ್ ಗುರುಗಳನ್ನು ಹುರಿದು ಮುಕ್ಕಿ ಬಿಡುತ್ತಿದ್ದರೇನೋ. 
ರಕಬ್ ಗಂಜ್ ಸಾಹೇಬ್‌,
ಶೀಷ್ ಗಂಜ್ ಸಾಹೇಬ, ಚಾಂದನೀ ಚೌಕ್
        ತೇಜಬಹದ್ದೂರರ ಬಲಿದಾನ ಪಂಜಾಬ್ ಸೇರಿ ಇಡೀ ಉತ್ತರ ಭಾರತದಲ್ಲಿ ಮೊಘಲರ ವಿರುದ್ಧ ಹೋರಾಡಲು ದೊಡ್ಡ ರಾಜಕೀಯ ಚೈತನ್ಯವೊಂದನ್ನು ಹುಟ್ಟುಹಾಕಲು ಕಾರಣವಾಯ್ತು. ಒಂಭತ್ತನೇ ವರ್ಷಕ್ಕೆ ಪೀಠವೇರಿದ ಗುರು ಗೋವಿಂದ ಸಿಂಗರು ತನ್ನ ಹತ್ತೊಂಭತ್ತನೇ ವರ್ಷಕ್ಕೆ ಬಲಿಷ್ಟ ಸೇನೆಯನ್ನು ಕಟ್ಟಿಕೊಂಡು ಆನಂದಪುರವನ್ನು ರಾಜಧಾನಿಯನ್ನಾಗಿಸಿಕೊಂಡು ಸಿಖ್ ಸಾಮ್ರಾಜ್ಯವನ್ನು ಸ್ವತಂತ್ರವಾಗಿ ಆಳಲಾರಂಭಿಸಿದರು. ಅಲ್ಲಿಯವರೆಗೂ ಶಾಂತಿ, ಸೌಹಾರ್ದತೆಯ ಪ್ರತೀಕವಾಗಿದ್ದ ಸಿಖ್ಖರು ಕತ್ತಿ ಹಿಡಿದು ಹೋರಾಟಗಾರರಾದರು. ಮತಾಂಧತೆಗೆ ಪ್ರತಿ ಮತಾಂಧತೆಯ ರೋಶದಲ್ಲಿ ಸಿಖ್ಖರ ಸೇನಾಬಲ ಸುಮಾರು ಒಂದು ಲಕ್ಷದಷ್ಟಾಯಿತು. ಎರಡೇ ವರ್ಷದಲ್ಲಿ ಆನಂದಗಢ್, ಕೇಶಗಢ್, ಲೋಹಗಢ್ ಮತ್ತು ಫತೇಗಢ್‌ಗಳಲ್ಲಿ ಕೋಟೆಗಳ ನಿರ್ಮಾಣವಾಯಿತು. ಪಂಜಾಬ್ ಪ್ರಾಂತ್ಯದ ರಾಜ ಭೀಮಚಂದ್, ಪಂಜಾಬ್ ಮತ್ತು ಕಾಶ್ಮೀರ ಪ್ರಾಂತ್ಯದ ಮರಿಕಿರಿ ರಾಜರುಗಳೆಲ್ಲ ಒಟ್ಟಾಗಿ ಒಂದೇ ಸಾರಿ ಸಿಖ್ಖರ ಮೇಲೆ ಮುಗಿಬಿದ್ದರೂ ಭಂಗಾನಿ ಎಂಬ ಸ್ಥಳದಲ್ಲಿ ನಡೆದ ಐತಿಹಾಸಿಕ ಯುದ್ಧದಲ್ಲಿ ಗೋವಿಂದ ಸಿಂಗರು ಘನವಿಜಯ ಸಾಧಿಸುವುದರೊಂದಿಗೆ ಅವರ ಕೀರ್ತಿ ಭಾರತದಾದ್ಯಂತ ಹಬ್ಬಿತು. ಆಗವರಿಗೆ ಬರೀ ಹತ್ತೊಂಬತ್ತು ವರ್ಷ. ಸೋತ ವೈರಿಗಳು ದೆಹಲಿ ಬಾದಷಾ ಔರಂಗಜೇಬನಿಗೆ ದೂರಿತ್ತರು. ಪಂಜಾಬಿನ ಕಡೆಯಿಂದ ಕಪ್ಪ ಸರಿಯಾಗಿ ಬರುತ್ತಿಲ್ಲವೆಂಬ ನೆವ ಮುಂದಿಟ್ಟುಕೊಂಡು ದಿಲ್ಲಿ ಸುಲ್ತಾನರು ಪಂಜಾಬ್ ಪ್ರಾಂತ್ಯದ ಮೇಲೆ ಯುದ್ಧ ಸಾರಿದರು. ನಾದೌನ್‌ನಲ್ಲಿ ನಡೆದ ಯುದ್ಧದಲ್ಲಿ ಮುಘಲರ ಸೇನಾಪತಿ ಅಲಿಫ್‌ಖಾನನೂ ಪರಾಭಗೊಂಡ. ಗುರುಗೋವಿಂದ ಸಿಂಗರು ರಚಿಸಿದ ಅವನ ಜೀವನಕಥೆ ’ಬಿಚಿತ್ರ ನಾಟಕ’ದಲ್ಲಿ ಈ ಎಲ್ಲ ಯುದ್ಧಗಳ ವಿವರಣೆಯಿದೆ. ಸೂರ್ಯವಂಶದ ವರ್ಣನೆಯಿಂದ ಶುರುವಾಗಿ ರಾಮ, ಲವ-ಕುಶರ ಸ್ತುತಿ, ಹತ್ತು ಗುರುಗಳ ವರ್ಣನೆ, ಗೋವಿಂದರ ಜೀವನಗಾಥೆಗಳ ಸಂಗ್ರಹ ಈ ಬೃಜ್ ಭಾಷೆಯ ಬಿಚಿತ್ರ ನಾಟಕದಲ್ಲಿದೆ.
       ೧೬೯೯ರ ಬೈಸಾಕಿ ಹಬ್ಬದ ದಿನ ಕೇಶ್‌ಗಢ್‌ನಲ್ಲಿ ನಡೆದ ದೊಡ್ಡ ದರ್ಬಾರಿನಲ್ಲಿ ಖಾಲ್ಸಾವನ್ನು ಸ್ಥಾಪನೆ ಮಾಡಿ ಪಂಚಪ್ಯಾರೆಗಳಿಗೆ ದೀಕ್ಷೆ ನೀಡುವುದರೊಂದಿಗೆ ಸಿಖ್ಖರು ಪ್ರಚಂಡವಾದ ಮತಾಭಿಮಾನದಿಂದ ಪಂಥದ ರಕ್ಷಣೆಗೆ ಆಯುಧಗಳನ್ನು ಧರಿಸಿ ವೀರಭದ್ರರಂತೆ ವಿಜೃಂಭಿಸಿದರು. ಜಾತಿಮತವನ್ನು ಮೀರಿ ಎಲ್ಲರೂ ’ಸಿಂಹ(ಸಿಂಗ್)’ಗಳಾದರು. ಸರ್ವಸಮಾನತೆಯ ಹೊಸ ಹಾದಿ ಸಮಾಜದ ಎಲ್ಲ ವರ್ಗಗಳನ್ನೂ ಬಹುವಾಗಿ ಆಕರ್ಷಿಸಿತು. ಮೊದಲೇ ಪೂರ್ವದಲ್ಲಿ ರಜಪೂತರು, ದಕ್ಷಿಣದಲ್ಲಿ ಮರಾಠರ ಪೆಟ್ಟಿಗೆ ಕಂಗಾಲಾಗಿದ್ದ ಔರಂಗಜೇಬ ಉತ್ತರದಲ್ಲಿ ಸಿಖ್ಖರ ಪ್ರಾಬಲ್ಯದಿಂದ ತತ್ತರಿಸಿಹೋದ. ಹೇಳಿಕೇಳಿ ಆವ ಔರಂಗಜೇಬ. ಕುಯುಕ್ತಿಯಲ್ಲಿ ಇಡೀ ಇತಿಹಾಸದಲ್ಲಿ ಅವನನ್ನು ಮೀರಿಸಿದವರಿಲ್ಲ. ಹಿಂದೆ ಗೋವಿಂದಸಿಂಗರಿಂದ ಉಪಕ್ರತರಾದ ಅರಸರೆಲ್ಲ ಅವರ ವಿರುದ್ಧ ತಿರುಗಿ ಬೀಳುವಂತೆ ಮಾಡಿದ. ಇನ್ನೊಂದು ಕಡೆ ಗವರ್ನರ್ ವಾಜಿರ್ ಖಾನ್ ಭಾರೀ ಸೈನ್ಯದೊಂದಿಗೆ ಕಣಕ್ಕಿಳಿದ. ಹಾಗೆ ನಡೆದ ನಾಲ್ಕೂ ದಂಡಯಾತ್ರೆಗಳಲ್ಲೂ ಮುಘಲರ ಕೈಲಿ ಸಿಖ್ಖರನ್ನು ಗೆಲ್ಲಲಾಗಲಿಲ್ಲ. ಕೊನೆಗೆ ಜೇಬ ಒಂದು ಪತ್ರ ಕಳುಹಿಸಿದ. ಆನಂದಪುರವನ್ನು ಬಿಟ್ಟುಹೋದರೆ ಕುರಾನಿನ ಆಣೆಯಾಗಿ ಯಾರಿಗೂ ತೊಂದರೆ ಕೊಡುವುದಿಲ್ಲವೆಂದು. ಈ ಮಾತನ್ನು ನಂಬಿ ಗೋವಿಂದ ಸಿಂಗರು ತಮ್ಮವರೊಡನೆ ಆನಂದಪುರವನ್ನು ತೊರೆದರೆ ಮರುರಾತ್ರಿಯೇ ಮುಘಲರ ಬಣ್ಣ ಬದಲಾಯ್ತು. ಜೇಬನ ಸೈನಿಕರು ಕೋಟೆಯನ್ನು ಬಿಟ್ಟು ಬಯಲಿಗೆ ಬಂದ ಜನರ ಮೇಲೆ ಮುಗಿಬಿದ್ದು ಬೇಟೆಯಾಡಿದರು. ಸಿರ್ಸಾ ನದಿದಡದಲ್ಲಿ ನಡೆದ ಸಂಗ್ರಾಮದಲ್ಲಿ ಗುರುಗೋವಿಂದರ ಹೆಚ್ಚಿನ ಅನುಚರರೆಲ್ಲ ಒಂದೇ ಪ್ರಾಣ ಕಳೆದುಕೊಂಡರು ಇಲ್ಲವೇ ಮೊಘಲರ ಕೈಲಿ ಸಿಕ್ಕಿಬಿದ್ದರು. ಹಾಗೆ ಸಿಕ್ಕಿಬಿದ್ದವರಲ್ಲಿ ಗುರುಗೋವಿಂದರ ತಾಯಿ ಮಾತಾ ಗುಜ್ರಿ ಮತ್ತು ಇಬ್ಬರು ಕಿರಿಯ ಮಕ್ಕಳು ಬಾಬಾ ಜೋರಾವರ್ ಸಿಂಗ್ ಮತ್ತು ಬಾಬಾ ಫತೇ ಸಿಂಗ್ ಸೇರಿದ್ದರು. ಮತಾಂತರಕ್ಕೆ ಒಪ್ಪದ ಎಂಟು ವರ್ಷದ ಇಬ್ಬರು ಮಕ್ಕಳ ತಲೆಗಳನ್ನು ಕತ್ತರಿಸಿ ಕೆಡವಿದ ವಾಜಿರ್ ಖಾನ್. ಇನ್ನಿಬ್ಬರು ಮಕ್ಕಳಾದ ಅಜಿತ್ ಸಿಂಗ್ ಮತ್ತು ಜುಝಾರ್ ಸಿಂಗ್ ರೋಪಾರಿನ ಸಮೀಪ ನಡೆದ ಯುದ್ಧದಲ್ಲಿ ವೀರಮರಣವನ್ನಪ್ಪಿದ್ದರು. ಅಂದಿನ ಯುದ್ಧದಲ್ಲಿ ಜೀವಸಹಿತ ಉಳಿದು ಬಚಾವಾದವರು ಗುರುಗೋವಿಂದಸಿಂಗರ ಜೊತೆ ಐದು ಜನ ಮಾತ್ರ. ಅವರೆಲ್ಲ ಚಮಕೂರಿನ ಕೋಟೆಯಲ್ಲಿ ಆಶ್ರಯ ಪಡೆದರು. ಹಿಂದೆ ಬಿದ್ದ ಮುಘಲ್ ಪಡೆಗಳಿಂದ ತಪ್ಪಿಸಿಕೊಳ್ಳಲು ಸಂಗತ್ ಸಿಂಗ್ ಎಂಬ ಅನುಚರನೊಬ್ಬ ಗುರುಗೋವಿಂದರಂತೆ ವೇಷ ಧರಿಸಿದ. ಚಮಕೂರಿನ ಮೇಲೆ ದಾಳಿಮಾಡಿದ ಮುಘಲ್ ಸೈನ್ಯ ಗೋವಿಂದರೆಂಬ ಕಲ್ಪನೆಯಲ್ಲಿ ಸಂಗತ್ ಸಿಂಗ ಮತ್ತು ಸಂಗಡಿಗರನ್ನು ಕೊಂದು ಕೇಕೆ ಹಾಕಿತು. ಇದರ ಮಧ್ಯೆ ನಬಿ ಖಾನ್ ಮತ್ತು ಘನಿ ಖಾನ್ ಎಂಬಿಬ್ಬರು ಪಠಾಣರ ಜೊತೆ ಸೇರಿ ಆಲಂಗಿರ್‌ನ ಜಮೀನ್ದಾರನ ಸಹಾಯದಿಂದ ಸೂಫಿ ವೇಶ ಧರಿಸಿ ಗುರು ಗೋವಿಂದರು ರಾಯಕೋಟಕ್ಕೆ ಸ್ಥಳಾಂತರಗೊಂಡಾಗಿತ್ತು. ತನ್ನ ಅಪ್ರತಿಮ ನೆನಪಿನ ಶಕ್ತಿಯಿಂದಲೇ ಕಳೆದು ಹೋದ ’ಆದಿಗ್ರಂಥ’ವನ್ನು ಗುರುಗ್ರಂಥಸಾಹೇಬ ಹೆಸರಿನಲ್ಲಿ ಪುನರ್ರಚಿಸಿದರು. ಮಚ್ಛೀವಾರಾದ ಅರಣ್ಯಗಳಲ್ಲಿ ತಂಗಿದ್ದಾದ ಔರಂಗಜೇಬನ ಪರಮತದ್ವೇಷವನ್ನು ಖಂಡಿಸಿ ರ್ಶಿಯನ್ ಭಾಷೆಯ ಕಾವ್ಯಶೈಲಿಯಲ್ಲಿ ’ಜಾಫರ್ ನಾಮಾ’ ಎಂಬ  ದೀರ್ಘಪತ್ರವನ್ನು ಬರೆದರು. ಹಿಂದೆ ಬೇರೆಬೇರೆ ಕಾರಣಕ್ಕೆ ಇವರನ್ನು ತೊರೆದು ಹೋಗಿದ್ದ ನಲವತ್ತು ಸಿಖ್ ಪ್ರಮುಖರು ಗುರುಗಳ ದೀರ್ಘಕಾಲದ ಸಹವರ್ತಿ ಮಾಯಿ ಭಾಗೋ ಎಂಬ ಮಹಿಳೆಯ ನೇತೃತ್ವದಲ್ಲಿ ಪುನಃ ಗೋವಿಂದಸಿಂಗರನ್ನು ಖಿರ್ದಾನಾ ಎಂಬ ಸ್ಥಳದಲ್ಲಿ ಕೂಡಿಕೊಂಡರು. ಇದರ ವಾಸನೆ ಹಿಡಿದು ಬಂದ ಮೊಘಲ್ ಸೈನ್ಯದೊಂದಿಗೆ ಅಂತಿಮ ಯುದ್ಧ ನಡೆದದ್ದು ಅಲ್ಲಿಯೇ. ನಲವತ್ತೊಂದು ಮಂದಿಯ ಶೌರ್ಯದೆದುರು ಇಡೀ ಮೊಘಲ್ ಸೈನ್ಯ ನುಚ್ಚುನೂರಾಯಿತು. ಯುದ್ಧದಲ್ಲಿ ಮುಕ್ತಿಪಡೆದ ಸಿಖ್ ಯೋಧರ ಸ್ಮರಣಾರ್ಥ ಆ ಸ್ಥಳ ಮುಕ್ತಸರ್ ಎಂದು ಗೋವಿಂದಸಿಂಗರಿಂದ ನಾಮಕರಣಗೊಂಡಿತು. ಮುಕ್ತಸರ್‌ನ ಕದನದಲ್ಲಿ ಮಡಿದ ಹುತಾತ್ಮ ಯೋಧರ ನೆನಪಿನಲ್ಲಿ ಪ್ರತಿವರ್ಷ ಡಿಸೆಂಬರಿನಲ್ಲಿ ನಡೆಯುವ ’ಮಾಘಿ ಮೇಳ’ ಪಂಜಾಬಿನಲ್ಲಿ ನಡೆಯುವ ಅತಿದೊಡ್ಡ ಸಿಖ್ಖರ ಸಮಾವೇಶ ಮತ್ತು ಭಾರತದ ಅತಿದೊಡ್ಡ ಮೇಳಗಳಲ್ಲೊಂದು. ಗುರುಗೋವಿಂದಸಿಂಗರ ಜೊತೆ ಮುಕ್ತಸರ್ ಯುದ್ಧದ ನೇತೃತ್ವ ವಹಿಸಿದ್ದ ಮಾಯಿ ಭಾಗೋ ಮುಂದೆ ಪುರುಷವೇಷದಲ್ಲಿ ಅವರ ಅಂಗರಕ್ಷಕಳಾಗಿದ್ದಳಂತೆ. ೧೭೦೮ರಲ್ಲಿ ನಾಂದೇಡದಲ್ಲಿ ಗೋವಿಂದಸಿಂಗರ ದೇಹಾಂತ್ಯವಾದ ನಂತರ ಮಾಯಿ ಭಾಗೋ ಕರ್ನಾಟಕದ ಬೀದರಿನಲ್ಲಿ ನೆಲೆಸಿ ತಪಸ್ಸನ್ನಾಚರಿಸಿ ಅಲ್ಲೇ ದೇಹತ್ಯಾಗ ಮಾಡಿದಳು. ಇನ್ನೊಂದು ವಿಶೇಷವೆಂದರೆ ಮೊತ್ತಮೊದಲು ಗುರುಗೋವಿಂದಸಿಂಗರಿಂದ ಖಾಲ್ಸಾ ದೀಕ್ಷೆ ಪಡೆದ ಪಂಚ್‌ಪ್ಯಾರೆಗಳಲ್ಲೊಬ್ಬನಾದ ’ಸಾಹಿಬ್ ಸಿಂಗ್’ ಇದೇ ಬೀದರಿನ ಅಚ್ಚಕನ್ನಡಿಗ. ಹಿಂದೊಮ್ಮೆ ನಾನಕರು ಶಿಷ್ಯ ಮರ್ದಾನಾನ ಸಂಗಡ ಬೀದರ್‌ಗೆ ಬಂದಿದ್ದಾಗ ಇಲ್ಲಿನ ಜನ ಕುಡಿಯುವ ನೀರಿಲ್ಲದೇ ಪರಿತಪಿಸುತ್ತಿದ್ದರಂತೆ. ಇದನ್ನು ಕಂಡ ನಾನಕರು ತಮ್ಮ ಪಾದುಕೆಯನ್ನು ಕಲ್ಲೊಂದಕ್ಕೆ ಬಡಿದಾಗ ಕಲ್ಲು ಸೀಳಿ ಜಲಧಾರೆಯೊಂದು ಉಕ್ಕಿ ಹರಿಯಿತು. ಈ ನಾನಕ ಝೀರಾ(ಝರಿ)ಯನ್ನು ಬೀದರಿನಲ್ಲಿ ನಾನಕರ ನೆನಪಿನಲ್ಲಿ ಕಟ್ಟಿದ ನಾನಕ ಝೀರಾ ಸಾಹೇಭ್ ಗುರುದ್ವಾರದ ಪಕ್ಕ ಇಂದಿಗೂ ನೋಡಬಹುದು.
        ಗುರು ಗೋವಿಂದ ಸಿಂಗರ ಪ್ರಯತ್ನ ವ್ಯರ್ಥವಾಗಲಿಲ್ಲ. ಖಾಲ್ಸಾ ರಾಜ್ಯ ಸ್ಥಾಪನೆಯ ಕನಸು ಅವರ ಜೀವಸಮಾಧಿಯ ಹದಿನೆಂಟು ತಿಂಗಳಿಗೇ ಅವರ ಮಿತ್ರ ವೈಷ್ಣವ ಬೈರಾಗಿ ’ಬಂದಾ ಸಿಂಗ್ ಬಹದ್ದೂರ್’ನ ನೇತೃತ್ವದಲ್ಲಿ ಸಾಕಾರಗೊಂಡಿತು. ೧೭೧೦ರಲ್ಲಿ ವಜೀರ್ ಖಾನನ ನಂತರ ಪೂರ್ವದ ಸಟ್ಲೇಜಿನಿಂದ ಪಶ್ಚಿಮದ ಯಮುನೆಯವರೆಗೆ  ಸಿರ್ಹಿಂದ್ ರಾಜ್ಯ ಖಾಲ್ಸಾಗಳ ವಶವಾಗಿ ಮುಂದಿನ ನೂರು ವರ್ಷಗಳ ಕಾಲ ಸಿಖ್ಖರ ಕೀರ್ತಿ ಪತಾಕೆ ಹಾರಾಡಿತು.ಅದು ಇನ್ನೊಂದು ಮಹಾದ್ಭುತ.
ಹೋಶಿಯಾರಪುರದ ಬೈರಾಗಿ ಮಂದಿರದಲ್ಲಿನ ಪಂಚಪ್ಯಾರೆಗಳ ವರ್ಣಚಿತ್ರ




Monday, April 11, 2016

ಕಲ್ಕತ್ತ ಡೈರಿ: ಬಂಗಾಳವನ್ನಾಳಿದ ಕನ್ನಡ ವಂಶ

       ಮೊದಲು ಕಲ್ಕತ್ತಾದಲ್ಲಿ ಹಾರ್ಟ್ ಸರ್ಜನ್ ಆಗಿದ್ದು ಈಗ ಗೋವಾದಲ್ಲಿ ಸೆಟಲ್ ಆಗಿರುವ ಆತ್ಮೀಯರಾದ ಡಾ. ಬ್ಯಾನರ್ಜಿ ತಲೆಯಲ್ಲೊಂದು ಹುಳ ಬಿಟ್ಟಿದ್ದರು. ಬಂಗಾಳವನ್ನಾಳಿದವರಲ್ಲಿ ಕನ್ನಡಿಗರೂ ಇದ್ದಾರೆ, ಸಾಧ್ಯವಾದರೆ ಅವರ ಸ್ಥಳ ಒಮ್ಮೆ ನೋಡಿ ಬಾ ಎಂದು. ಹೌದು, ಬಂಗಾಳವನ್ನಾಳಿದ ಕೊಟ್ಟಕೊನೆಯ ಹಿಂದೂ ರಾಜವಂಶವಾದ ಸೇನರು ಅಚ್ಚಕನ್ನಡಿಗರು. ಕರ್ನಾಟಕದಿಂದ ಬಂಗಾಳಕ್ಕೆ ವಲಸೆ ಬಂದು ಬಂಗಾಳವನ್ನಾಳುತ್ತಿದ್ದ ಪಾಲರನ್ನು ಸೋಲಿಸಿ ರಾಜ್ಯಸ್ಥಾಪನೆ ಮಾಡಿದ ಸೇನ ಅರಸರ ಧೈರ್ಯ ಮೆಚ್ಚಲೇಬೇಕು. ಇವರ ರಾಜಧಾನಿ ನದಿಯಾ ಆಗಿತ್ತಂತೆ. ಈ ನದಿಯಾ ಎಲ್ಲಿದೆಯೆಂದು ನನಗಂತೂ ತಿಳಿದಿರಲಿಲ್ಲ. ಸೇನ್‌ಗುಪ್ತಾನಿಗೆ ಕೇಳಿದೆ. ಅವನೂ ಅಡ್ಡಡ್ಡ ತಲೆ ಅಲ್ಲಾಡಿಸಿದ. ಮೂರ್ನಾಲ್ಕು ಜನರನ್ನು ಕೇಳಿದರೂ ಉತ್ತರ ಸಿಗಲಿಲ್ಲ. ತಿರುಗಿ ಬ್ಯಾನರ್ಜಿಗೆ ಫೋನಾಯಿಸಿದೆ. ಆ ಜನ ಓರಿಸ್ಸಾದ ಕಂಧಮಲ್ಲಿನ ಡಾರಿಂಗ್‌ಬಾಟಿಯ ಕಡೆ ಹೊರಟಿದ್ದರು. ಅದು ಭಾರತದಲ್ಲಿ ಹಿಮಾಲಯದ ಪ್ರದೇಶಗಳನ್ನು ಬಿಟ್ಟು ಹಿಮ ಬೀಳುವ ಏಕೈಕ ಪ್ರದೇಶವಂತೆ. ನದಿಯಾ ಎಂಬ ಜಿಲ್ಲೆಯೊಂದು ಬಂಗಾಳದಲ್ಲಿದೆ. ಆದರೆ ಇದು ಆ ನದಿಯಾ ಆಗಿರಲಿಕ್ಕಿಲ್ಲ, ಪ್ರಾಯಶಃ ನಬೋದ್ವೀಪ್ ನದಿಯಾ ಎಂದು ಕರೆಯಲ್ಪಡುತ್ತಿತ್ತೇನೋ, ಆರ್.ಸಿ ಮಂಜೂಂದಾರರ Ancient History of Bengal ನೋಡು ಎಂದರು. ಆ ಪುಸ್ತಕ ಕಲ್ಕತ್ತದಲ್ಲೆಲ್ಲೂ ಸಿಗಲಿಲ್ಲ. S.M.Deenರ A Brief History of Bengal for Diaspora Bangladeshis ಓದಿದ್ದೆನಾದರೂ ಸೇನರ ಕುರಿತು ಹೆಚ್ಚಿನದೇನೂ ಅದರಲ್ಲಿರಲಿಲ್ಲ. ನವದ್ವೀಪ್ ಎಂಬ ಊರು ಬಾಂಗ್ಲಾದ ನವಾಬ್‌ಗಂಜಿನಲ್ಲೂ ಒಂದಿದೆ. ಸೇನ್‌ಗುಪ್ತಾ ಬ್ರಿಟಿಷ್ ಕೌನ್ಸಿಲ್ ಲೈಬ್ರರಿಯಿಂದ ಪುಸ್ತಕವೊಂದು ತಂದುಕೊಟ್ಟ. ನಿತಿಶ್ ಸೇನಗುಪ್ತಾ ಬರೆದ Land of Two Rivers: A History of Bengal from the Mahabharata to Mujib. ಅದರಲ್ಲಿ ಸೇನರ ಬಗ್ಗೆ ಕೆಲ ಮಾಹಿತಿಯಿತ್ತು. ನಬೋದ್ವೀಪಿಗೆ ಹೋಗುವುದೇನೂ ಕಷ್ಟದ ಕೆಲಸವಲ್ಲ. ಆದರೆ ಹೋಗಿ ಮಾಡುವುದೇನು ಎಂಬುದು ಸ್ಪಷ್ಟವಾಗಿರಲಿಲ್ಲ. ಚೈತನ್ಯ ಮಹಾಪ್ರಭುಗಳ ಜನ್ಮಸ್ಥಾನವಾದ್ದರಿಂದ ಬೇರೇನೂ ಸಿಕ್ಕದಿದ್ದರೂ ಅಲ್ಲಿನ ಇಸ್ಕಾನ್ ಮಂದಿರ ಬಹಳ ಪ್ರಸಿದ್ಧವಾದುದು. ಅದನ್ನಾದರೂ ನೋಡಬಹುದು. ಏನೇ ಆಗಲಿ ಒಂದು ಕೈ ನೋಡಿಯೇ ಬಿಡೋಣ ಎಂದು ಗೂಗಲ್ ಮ್ಯಾಪ್ ಹರಡಿ ಕೂತೆ. ಬಾರಾಸಾತ್‌ನಿಂದ ರಾಣಾಘಾಟಿಗೆ ಸೀದಾ ಬಸ್ಸು ಮತ್ತು ರೈಲಿನ ಸೌಕರ್ಯವಿದೆ. ಅಲ್ಲಿಂದ ನವದ್ವೀಪ್ ತುಂಬ ದೂರವೇನಲ್ಲ. ಆ ವಾರಾಂತ್ಯ ನವದ್ವೀಪಕ್ಕೆ ಹೋಗುವುದೆಂದು ನಾನೂ, ಸೇನ್‌ಗುಪ್ತಾ ಇಬ್ಬರೂ ನಿರ್ಧರಿಸಿಯಾಗಿತ್ತು. ಶನಿವಾರ ಬೆಳಗ್ಗೆ ಬೆಳಗ್ಗೆ ಬಾರಾಸಾತಿನಿಂದ ಮೈತ್ರಿ ಎಕ್ಸ್‌ಪ್ರೆಸ್ ಟ್ರೇನು ಹತ್ತಿ ಸೀದಾ ರಾಣಾಘಾಟ್ ತಲುಪಿದೆವು. ಬೆಳಿಗ್ಗಿನ ತಿಂಡಿ ತಿನ್ನಲಿಲ್ಲವೆಂದು ನೆನಪಾಯ್ತು. ಬದ್ಧ ಬಿಪ್ಲವಕಾರಿ(ಕಮ್ಯುನಿಸ್ಟ್) ಸೇನ್‌ಗುಪ್ತಾನದ್ದೊಂದು ಪ್ರಿನ್ಸಿಪಲ್ ಆತ ಯಾವ ಊರಿನಲ್ಲಿದ್ದರೂ ಪಾಲಿಸಿಕೊಂಡು ಬಂದಿದ್ದಾನೆ. ಹತ್ತು ರೂಪಾಯಿಗೆ ಹೊಟ್ಟೆ ತುಂಬುವಾಗ ನೂರು ರೂಪಾಯಿ ಯಾಕೆ ಖರ್ಚು ಮಾಡಬೇಕೆಂದು. ಕಾಲಿಗೆ ಬಿದ್ದರೂ ಅರ್ಧ ಸ್ಟಾರಿನ ಹೋಟೆಲ್ಲನ್ನೂ ಆತ ಹೊಕ್ಕಲಾರ. ಚಿತ್ತರಂಜನದಾಸ್ ರೋಡಿನ ಕರ್ನಾಟಕದ ಒಂದು ರೆಸ್ಟಾರೆಂಟಿನಲ್ಲಿ ಅವನ ಕಾರಣದಿಂದಲೇ ನನಗಿನ್ನೂ ಒಂದು ಮಸಾಲೆದೋಸೆ ತಿನ್ನಲಾಗಲಿಲ್ಲ. ಹುಟ್ಟುಸಸ್ಯಾಹಾರಿ ನನಗೆ ಬಂಗಾಳದ ರಸ್ತೆ ಬದಿ ಅಂಗಡಿಗಳಲ್ಲಿ ಪೂರಿ-ತರ್ಕಾರಿ ಬಿಟ್ಟರೆ ಬೇರೇನೂ ಸಿಗುವುದಿಲ್ಲ. ಕೊಲ್ಕತ್ತಾಗೆ ಬಂದಾಗಿನಿಂದ ದಿನಾ ಬೆಳಗ್ಗೆದ್ದು ಪೂರಿ ತಿಂದೂತಿಂದೂ ನಾನು ಊದಿಕೊಳ್ಳುವುದೊಂದು ಬಾಕಿ. ಹತ್ತು ರೂಪಾಯಿ ಕೊಟ್ಟರೆ ನಾಲ್ಕು ದೊಡ್ಡ ಪೂರಿ ಜೊತೆಗೊಂದಿಷ್ಟು ದಾಲ್ ಅಥವಾ ಬಟಾಟೆಯ ಸಾಗು ಕೊಡುತ್ತಾರೆ. ಐದು ರೂಪಾಯಿಗೆ ಮಡಿಕೆಯಲ್ಲಿ ಚಹಾ. ಒಂದು ಹೊತ್ತಿಗೆ ಅದು ಬೇಕಾದಷ್ಟು. ಹದಿನೈದು ರೂಪಾಯಿಗೆ ಬೆಳಗಿನ ಉಪಹಾರ ಮುಗಿದಿತ್ತು. ಕಲ್ಕತ್ತಾದಲ್ಲಿನ್ನೂ ನಾಕಾಣೆ, ಎಂಟಾಣೆಗಳೂ ಚಲಾವಣೆಯಲ್ಲಿವೆ. ಟ್ರಾಮ್‌ಗಳಲ್ಲಿ ’ಹತ್ತು ರೂಪಾಯಿ ಕೊಟ್ಟರೆ ಚಿಲ್ಲರೆ ಸಿಗುವುದಿಲ್ಲ’ ಎಂಬ ಬ್ರಿಟಿಷರ ಜಮಾನಾದ ಬರಹ ಇನ್ನೂ ಕಾಣಸಿಗುವುದನ್ನು ನೋಡಿ ಮುಸಿಮುಸಿ ನಕ್ಕಿದ್ದಿದೆ. ಬೆಲೆಏರಿಕೆಯ ಬಿಸಿಯಲ್ಲಿರುವವರಿಗೆಲ್ಲ ಕಲ್ಕತ್ತ ಹೇಳಿ ಮಾಡಿಸಿದ ಜಾಗ. ರಾಣಾಘಾಟ್ ಪಂಟುವಾ ಎಂಬ ಸ್ವೀಟಿಗಾಗಿ ತುಂಬ ಪ್ರಸಿದ್ಧ. ಬೇರೆಡೆ ಅದು ಸಿಕ್ಕುವುದು ಕಡಿಮೆಯೇ. ಪೊಂಟುವಾ ಖಾಯೆಂಗೆ ಆಜಾ ಎಂದು ಸೇನ್‌ಗುಪ್ತಾನನ್ನೆಳೆದುಕೊಂಡು ಮಿಷ್ಟಿ ದುಖಾನ್ ಹೊಕ್ಕೆ.’ಪೇಟ್ ಭರ್ನೇಕೆ ಬಾದ್, ಆದ್ಮಿ ಜೋ ಭೀ ಖಾತಾ ಹೈ, ವೋ ಉಸ್ಕಾ ಖಾನಾ ನಹಿ ಹೈ’ ಎಂದ ಪಕ್ಕಾ ಕಮ್ಯುನಿಸ್ಟ್ ಸ್ಟೈಲಲ್ಲಿ. ನಾನು ಬಿಡಬೇಕಲ್ಲ. ಪಂಟುವಾ, ಶೋಂದೇಶ್, ಮಿಷ್ಟಿದೋಯ್ ಒಂದಿಷ್ಟು ಮೆದ್ದ ನಂತರವೇ ನಬೋದ್ವೋಪದ ಬಸ್ ಹತ್ತಿದ್ದು. ಒಂದು ಘಂಟೆಯಲ್ಲಿ ನವದ್ವೀಪ ತಲುಪಿಯಾಗಿತ್ತು. ಎದುರಿಗೆ ವಿಶಾಲವಾಗಿ ಹೂಗ್ಲಿ ನದಿ ಅಷ್ಟಾವಕ್ರಾಕೃತಿಯಲ್ಲಿ ಕೆಂಪು ಕೆಂಪಾಗಿ ಹರಿಯುತ್ತದೆ. ಗಂಗೆ ಇಲ್ಲಿ ಹಲವು ಬಾರಿ ಪಥಬದಲಾಯಿಸಿದ್ದಾಳೆ. ಹೊಸ ಹೊಸ ದ್ವೀಪಗಳು ದಿನಬೆಳಗಾಗುವುದರೊಳಗೆ ಹುಟ್ಟಿಕೊಳ್ಳುತ್ತವೆ. ಹಾಗಾಗಿ ಇದನ್ನು ನವ(ಹೊಸ) ದ್ವೀಪ ಎಂದು ಕರೆದಿರಬಹುದು. ಭಕ್ತಿ ಮಾರ್ಗದ ೯ ವಿಧಗಳನ್ನು ಸೂಚಿಸಲು ನವ ದ್ವೀಪ ಎಂಬ ಹೆಸರು ಕರೆಯಲಾಗಿದೆಯೆಂಬ ನರಹರಿ ಮತ್ತು ಭಕ್ತಿ ವಿನೋದ್ ಠಾಕೂರರ ವ್ಯಾಖ್ಯಾನಗಳೂ ಇವೆ.  ಬೆಂಗಳೂರಿನಲ್ಲಿ ಕೆಂಪೇಗೌಡರ ಕೋಟೆ ಹುಡುಕಿದಂತೆ ಸೇನರ ಅವಶೇಷಗಳ್ಯಾವವೂ ನವದ್ವೀಪ ಪಟ್ಟಣದಲ್ಲಿರುವ ಸುಳಿವಿರಲಿಲ್ಲ. ಹೇಗೂ ಬಂದಾಗಿದೆ. ಭಕ್ತಿ ಮಾರ್ಗದ ಪ್ರಮುಖ ಆಚಾರ್ಯರಲ್ಲೊಬ್ಬರಾದ ಚೈತನ್ಯ ಮಹಾಪ್ರಭುಗಳ ಊರದು. ಅಲ್ಲಿಗೆ ಬಂದು ಸುಮ್ಮನೇ ಹೋಗಲಾದೀತೇ! ಅದಿರುವುದು ಗಂಗೆ ಮತ್ತು ಜಾಲಂಗಿ ನದಿ ಸಂಗಮಿಸುವ ಮಾಯಾಪುರಿಯಲ್ಲಿ. ಇಸ್ಕಾನಿನ ಅಂತರಾಷ್ಟ್ರೀಯ ಮುಖ್ಯಾಲಯವಿರುವುದೂ ಮಾಯಾಪುರದಲ್ಲೇ. ನವದ್ವೀಪದಿಂದ ಮಾಯಾಪುರಕ್ಕೆ ಬೋಟಿನ ಸೌಲಭ್ಯವಿದೆಯೆಂದು ತಿಳಿಯಿತು. ಬಂಗಾಳದಲ್ಲಿ ನದಿಗಳು ಬಹಳವಾದ್ದರಿಂದ ಜಲಸಾರಿಗೆಗೇನೂ ಕೊರತೆಯಿಲ್ಲ. ಕೊಲ್ಕತ್ತದ ಟ್ರಾಫಿಕ್ಕಿನಲ್ಲಿ ಸಿಕ್ಕಿಬೀಳದೇ ಹೂಗ್ಲಿ ನದಿಯಲ್ಲಿ ದೋಣಿಯಲ್ಲಿ ಪ್ರಯಾಣಿಸುವ ಮಜವೇ ಬೇರೆ. ಒಂದು ಕಿಲೋಮೀಟರ್ ನಡೆದನಂತರ ನದಿಯ ದಟ ಸಿಕ್ಕಿತು. ಬೋಟಿನವ ನೊಬೋದ್ವೀಪ್ ನೊಬೋದ್ವೀಪ್ ಎಂದು ಕೂಗುತ್ತಿದ್ದ. ಗೌಡೀಯ ಮಟದ ಹತ್ತಿರ ದೋಣಿಯಿಂದಿಳಿದರೆ ಕಾಲ್ನಡಿಗೆಯಲ್ಲಿ ಮಾಯಾಪುರ ತಲುಪಬಹುದು. ಅಕ್ಕಪಕ್ಕ ಎಲ್ಲಿ ನೋಡಿದರೂ ಮಠಮಂದಿರಗಳೇ. ಹರೇರಾಮ ಹರೇಕೃಷ್ಣ ಭಜನೆ ನಿರಂತರವಾಗಿ ಅಲೆಯಲೆಯಾಗಿ ತೇಲಿ ಬರುತ್ತಿತ್ತು. ವೈಷ್ಣವ ಪಂಥದ ಅತಿದೊಡ್ಡ ಧಾಮವದು. ಪೂರ್ವ ಭಾರತದ ಅತಿದೊಡ್ಡ ವೈದಿಕ ಕೇಂದ್ರಗಳಲ್ಲೊಂದು. ಶತಮಾನಗಳ ಕಾಲ ಭಾರತದ ಆಕ್ಸ್‌ಫರ್ಡ್ ಎಂದು ಹೆಸರಾದ ಸ್ಥಳವದು.  ಗೌಡೀಯ ವೈಷ್ಣವ ಮತಪ್ರವರ್ತಕ ಚೈತನ್ಯ ಮಹಾಪ್ರಭುಗಳ ಜನ್ಮಸ್ಥಾನ.
       ಮಾಯಾಪುರದ ಇಸ್ಕಾನ್ ನಿಜಕ್ಕೂ ಒಂದು ಮಾಯಾಲೋಕವೇ. ಮುಖ್ಯ ಕಟ್ಟಡದ ಎಡಗಡೆ ಶೀಲಪ್ರಭುಪಾದರ ಪ್ರತಿಮೆ. ಪ್ರಾಯಶಃ ಸಮಾಧಿಯಿರುವುದು ಅಲ್ಲೇ ಇರಬೇಕು. ಎಡಗಡೆ ರಾಧಾ ಮಾಧವ ಮಂದಿರ. ಸುತ್ತಲೂ ಅಷ್ಟಸಖಿಯರು. ರಾಧೆಯೊಟ್ಟಿಗೆ ಲಲಿತಾ, ಚಂಪಕಲತಾ, ಚಿತ್ರಾ, ತುಂಗವಿದ್ಯಾ, ವಿಶಾಖಾ, ಇಂದುಲೇಖಾ, ರಂಗದೇವಿ ಹಾಗೂ ಸುದೇವಿ. ನವದ್ವೀಪದ ಹೆಸರಿಗೆ ತಕ್ಕಂತೆ ಒಟ್ಟೂ ಒಂಭತ್ತಾಯ್ತು. ಪಕ್ಕದಲ್ಲಿ ಗೌರಾಂಗ ಮಹಾಪ್ರಭು ಮತ್ತು ಗಿರಿ ಗೋವರ್ಧನ. ಕಡುನೀಲಿ ಬಣ್ಣದ ಕೃಷ್ಣ ರಾಧೆಯರ ಅಲಂಕಾರ ನೋಡಲು ಎರಡು ಕಣ್ಣು ಸಾಲದು. ಫೋಟೋಗ್ರಾಫಿ ಪ್ರೊಹಿಬೀಟೆಡ್ ಎಂದು ಬೋರ್ಡ್ ಹಾಕಿದ್ದರಿಂದ ಕ್ಯಾಮರಾ ಹೊರತೆಗೆಯಲು ಧೈರ್ಯ ಬರಲಿಲ್ಲ. ಇಸ್ಕಾನಿನಲ್ಲಿ ತಾಂಡವವಾಡುವುದು ಆಡಂಬರವೇ ಆದರೂ ಅಲ್ಲಿನ ಎಲ್ಲವೂ larger than life size. ಅದೊಂದು ಉನ್ಮತ್ತ ಭಕ್ತಿ. ಮಂದಿರದ ಮುಖ್ಯ ಭಾಗದ ಪಕ್ಕದಲ್ಲಿ ಪಂಚತತ್ತ್ವ ಮಂದಿರ. ಚೈತನ್ಯ ಮಹಾಪ್ರಭು, ನಿತ್ಯಾನಂದ, ಅದ್ವೈತಾಚಾರ್ಯ, ಗಧಾಧರ ಮತ್ತು ಶ್ರೀವಸ ಠಾಕೂರ್‌ರ ಆಳೆತ್ತರದ ಮೂರ್ತಿಗಳು. ವಸ್ತ್ರಗಳಿಂದ ಹಿಡಿದು ಹೂವಿನ ತನಕ ತಿಳಿ ಹಳದಿ ಬಣ್ಣದ ಅಲಂಕಾರ. ರಾಜಮೌಳಿ, ಬನ್ಸಾಲಿಯ ಸೆಟ್‌ಗಳಿಗಿಂತ ವೈಭವೋಪೇತ. 
ಇಸ್ಕಾನ್ ಮಾಯಾಪುರ


       ನಾನು ನನ್ನನ್ನು ಮರೆತು ನೋಡುತ್ತ ಕೂತಿದ್ದೆ. ’ಅಬೇ ತುಮ್ಹೆ ಮಂದಿರ್ ದೇಖ್ನಾ ಹೇ ತೋ ಕಲ್ಕತ್ತಾಮೆ ನಹಿಂ ಥೆ ಕ್ಯಾ, ಪುಣ್ಯ್ ಸಂಪಾದನ್ ಕರ್ನೇಕೇಲಿಯೇ ಇತ್ನಾ ದೂರ್ ಆನಾಥಾ?’ ಎಂದು ಸೇನ್‌ಗುಪ್ತಾ ದೇವಸ್ಥಾನದೊಳಗೇ ಶುರುಹಚ್ಚಿಕೊಂಡ. ಬಂದ ಕೆಲಸವೇನೋ ಬೇರೆಯದೇ, ಈ ಉರಿಬಿಸಿಲಲ್ಲಿ ಹುಡುಕಿಕೊಂಡು ಹೋಗುವುದೆಲ್ಲಿ? ಸೇನರ ಹೆಸರು ಆ ದೇವಸ್ಥಾನದಲ್ಲಿದ್ದವರಲ್ಲಿ ಯಾರೂ ಕೇಳಿರಲಿಲ್ಲ. ವಾಪಸ್ ಹೋಗಲು ಇವನಂತೂ ಬಿಡುವುದಿಲ್ಲ. ನೊಬೋದ್ವೀಪದಲ್ಲಿದೆ, ಹೋಗಿ ನೋಡು ಎಂದ ಬ್ಯಾನರ್ಜಿಯ ಮೇಲೆ ಸಿಟ್ಟುಮಾಡಿಕೊಳ್ಳೋಣವೆಂದರೆ ಪಕ್ಕದಲ್ಲಿ ಅವರಿಲ್ಲ. ಕೊನೆಗೆ ದೇವಸ್ಥಾನದ ಅರ್ಚಕರನ್ನೇ ಕೇಳುವುದೆಂದು ನಿರ್ಧಾರವಾಯಿತು. ಪುಣ್ಯಕ್ಕೆ ಅವರು ಅದೇ ಊರಿನವರು. ಸೇನರ ಬಗ್ಗೆ ಅವರಿಗೆ ತಿಳಿದಿತ್ತಾದರೂ ಇಲ್ಯಾವುದೂ ಕೋಟೆ ಇದ್ದಂತಿಲ್ಲ, ಬೇಕಾದರೆ ಒಮ್ಮೆ ಹತ್ತಿರದ ಬಾಮನ್‌ಪುಕುರ್‌ಗೆ ಹೋಗಿ ನೋಡಿ ಎಂದರು. ಬ್ರಾಹ್ಮಣಪುರ ಅಲ್ಲಿಂದ ಸುಮಾರು ಎರಡ್ಮೂರು ಕಿಲೋಮೀಟರ್ ದೂರ. ಸೀಟಿಗೆ ಇಪ್ಪತ್ತು ರೂಪಾಯಿ ಕೊಟ್ಟರೆ ಮಾತ್ರ ಬರುವುದಾಗಿ ಸೈಕಲ್ ರಿಕ್ಷಾವಾಲಾನ ಕಂಡೀಶನ್. ಕಡು ಕೋಲ್ಕತ್ತಾವಾಲಾ ಸೇನ್‌ಗುಪ್ತಾ ಬಿಡಬೇಕಲ್ಲ. ಶರಂಪರ ಜಗಳವಾಡಿ ಹದಿನೈದು ರೂಪಾಯಿಗೆ ಒಪ್ಪಿಸಿದ. ಹೋಗಲಿ ಬಿಡು ಮಾರಾಯ, ಐದು ರೂಪಾಯಿಗ್ಯಾಕೆ ಜಗಳ ಎಂದೆ. ’ಬೀಸ್ ರುಪ್ಯಾ ಹೈತೋ ಕಲ್ಕತ್ತಾವಾಲೆ ಸಭೀ ರಿಕ್ಷಾಮೆ ಬೈಟ್‌ನಾ ಹೀ ಬಂದ್ ಕರ್ದೇಂಗೆ, ಕಲ್ಕತ್ತಾವಾಲಾ ತೋ ಕಲ್ಕತ್ತಾವಾಲಾ ಹೋತಾಹೈ’ ಎಂದು ಸೈಕಲ್ ರಿಕ್ಷಾಕ್ಕೆ ಹತ್ತಿ ಅಲ್ಲಲ್ಲ ಹಾರಿ ಕುಳಿತ. ಮೂರು ಚಕ್ರದ ಸೈಕಲ್ಲಿಗೆ ಹಿಂದೆ ಒಂದು ಮರದ ಹಲಗೆ. ಅದರ ಮೇಲೆ ನಾಲ್ಕು ಮೂಲೆಯಲ್ಲಿ ತಲಾ ಒಬ್ಬೊಬ್ಬರಂತೆ ಒಟ್ಟಿಗೆ ನಾಲ್ಕು ಜನ ಕೂರಬಹುದು. ಕಲ್ಕತ್ತ ಒಂದು ಥರದ ನಿಧಾನವಾಗಿ ಚಲಿಸುವ ನಗರ. ಬೆಂಗಳೂರು, ಮುಂಬೈಗಳಂತೆ ಅಲ್ಲಿನ ಜನಕ್ಕೆ ಗಡಿಬಿಡಿಯಿಲ್ಲ. ಸಂಗೀತ ಕೇಳುವುದರಿಂದ ಹಿಡಿದು ಊಟದವರೆಗೂ ಎಲ್ಲವನ್ನೂ ನಿಧಾನವಾಗಿ ಆಸ್ವಾದಿಸಿಯೇ ಮಾಡುವವರು. ಸೈಕಲ್ ರಿಕ್ಷಾ ಕಲ್ಕತ್ತದಲ್ಲಿ ಇಂದಿಗೂ ಬಹುಬೇಡಿಕೆಯ ವಾಹನವಾಗಿರುವುದಕ್ಕೆ ಅದೂ ಕಾರಣವೇನೋ. ಕೊಡೆ ಬಿಡಿಸಿಕೊಂಡು ಬಾಯಲ್ಲೊಂದು ಪಾನ್ ಹಾಕಿ ಮೆಲ್ಲುತ್ತ ಸೈಕಲ್ ರಿಕ್ಷಾದಲ್ಲಿ ಸ್ಲೋ ಮೋಶನ್ನಿನಲ್ಲಿ ಆಚೀಚೆ ನೋಡುತ್ತ ರಾಜಗಾಂಭೀರ್ಯದಲ್ಲಿ ಹೋಗುವುದೆಂದರೆ ಬಂಗಾಳಿಗಳಿಗೆ ದೊಡ್ಡ ಲಕ್ಸುರಿಯ ವಿಷಯ. ಹದಿನೈದು ನಿಮಿಷ ಹೋದರೂ ಕೋಳಿಗೂಡಿನಂಥ ಮನೆಗಳನ್ನು ಬಿಟ್ಟರೆ ಕೋಟೆಯೆಲ್ಲೂ ಕಾಣಲಿಲ್ಲ. ಮುಂದೆ ಸಣ್ಣದಾಗಿ ಬಲಾಳ ದಿಭಿ ಎಂಬ ಬೋರ್ಡ್ ಕಾಣಿಸಿತು. ಚೌಕಾಸಿ ಮಾಡಿದ ಸಿಟ್ಟಿಗಿರಬೇಕು. ಇಲ್ಲಿಂದ ಮುಂದೆ ಬರುವುದಿಲ್ಲ, ಕೋಟೆ ನೋಡಬೇಕಾದರೆ ಇದೇ ಸಣ್ಣ ದಾರಿಯಲ್ಲಿ ಎಡಕ್ಕೆ ಹೋಗಿ ಎಂದ ರಿಕ್ಷಾದವ.
       ಅಲ್ಲಿಂದ ಮುಂದೆ ನಟರಾಜ ಸರ್ವೀಸ್. ಆಚೀಚೆ ಗದ್ದೆ, ಕಾಡು ಬಿಟ್ಟರೆ ವಿರಳವಾಗಿ ಅಲ್ಲೊಂದಿಲ್ಲೊಂದು ಮನೆಗಳು. ಕಾಳಿಯ ದೇವಸ್ಥಾನವೊಂದನ್ನು ದಾಟಿ ಮುಂದೆ ಹೋದರೆ ಒಂದು ದೊಡ್ಡ ದಿಬ್ಬ. ಹಾಗೊಂದೆರಡು ಕಿ.ಮೀ ಸುತ್ತಳತೆಗೆ ಕಮ್ಮಿಯಿಲ್ಲ. ತಕ್ಷಣ ಚಂದ್ರಕೇತುಘರ್ ನೆನಪಾಯ್ತು. ಸುಟ್ಟಮಣ್ಣಿನ ಟೆರಾಕೋಟಾ ಮಾದರಿಗಳಿಗೆ ಪ್ರಾಚೀನ ಬಂಗಾಳ ವಿಶ್ವದಲ್ಲೇ ಹೆಸರುವಾಯಾಗಿತ್ತು. ಅಲ್ಲಿನ ಹಳೆಯ ವಾಸ್ತುಶಿಲ್ಪಗಳೆಲ್ಲ ಅದೇ ಮಾದರಿಯಲ್ಲಿ ರಚಿತಗೊಂಡವು. ಈ ದಿಬ್ಬದ ಮೇಲೆಯೂ ಇಟ್ಟಿಗೆ ನೆಲಗಟ್ಟುಗಳದೇ ಸಾಲುಸಾಲು.
’ಯಹೀ ಹೋಗಾ ಬಲ್ಲಾಲ್ ದಿಭಿ’ ಎಂದ ಸೇನಗುಪ್ತಾ.
        ಅವಸ್ಥೆ ನೋಡಿದರೆ ಅನುಮಾನವಿರಲಿಲ್ಲ. ಬರೀ ಹೊಂಡಗಳು, ಸಂಪೂರ್ಣ ನಾಶವಾದ ಗೋಡೆಗಳ ಕುರುಹು, ಸ್ನಾನಗೃಹಗಳು, ಪಡಸಾಲೆ, ಕೋಣೆ, ಮಂದಿರಗಳು ಪಕ್ಕದಲ್ಲೊಂದು ದೊಡ್ಡ ಕೆರೆ. ಹೆಚ್ಚಿನ ರಚನೆಗಳೆಲ್ಲ ನೆಲೆಗಟ್ಟಿನ ಮೇಲೆ ಅರ್ಧ ಮೀಟರ್ ಹೆಚ್ಚಿಲ್ಲದಂತೆ ಉದುರಿ ಬಿದ್ದಿವೆ, ಇಲ್ಲವೇ ನಾಶವಾಗಿವೆ. ಆದರೆ ಎಲ್ಲವೂ ಇಟ್ಟಿಗೆಗಳಿಂದಲೇ ಮಾಡಿದ್ದು. ತಳಪಾಯ ಇನ್ನೂ ಗಟ್ಟಿಯಾಗಿ ಒಂದು ಥರದಲ್ಲಿ ಆಕರ್ಷಕವಾಗಿವೆ. ಬೆಟ್ಟ ಹತ್ತಲು ಸುಂದರವಾಗಿ ಇಟ್ಟಿಗೆಗಳನ್ನು ಹಾಸಿ ಮಾಡಿದ ಮೆಟ್ಟಿಲುಗಳು ಇಂದಿನ ಇಂಟರ್‌ಲಾಕ್‌ಗಳನ್ನು ನಾಚಿಸುವಂತಿವೆ. ಒಂಭೈನೂರು ವರ್ಷ ಹಿಂದಿನ ಇಟ್ಟಿಗೆಗಳ ರಸ್ತೆ ಚೂರೂ ಮುಕ್ಕಾಗದೇ ನಿಂತಿದ್ದು ಕಂಡು ನಮ್ಮಲ್ಲಿ ಮಾಡುವ ಮೊದಲೇ ಹೊಂಡ ಬೀಳುವ ರಸ್ತೆಗಳು ಯಾಕೋ ನೆನಪಾದವು. ಹತ್ತಿ ಗುಡ್ಡದ ಮೇಲೆ ಹೋದರೆ ಬಲಗಡೆ ದೊಡ್ಡದೊಂದು ಅರಮನೆಯಂಥ ರಚನೆ. ನೆಲದಿಂದ ಆರೇಳು ಅಡಿ ಎತ್ತರದವರೆಗೆ ಸೂರಿಲ್ಲದ ಗೋಡೆಗಳು ಗಟ್ಟಿಯಾಗಿ ನಿಂತಿವೆ. ಸೇನರ ಇತಿಹಾಸದಲ್ಲಿ ಉಲ್ಲೇಖಗೊಂಡ ವಿಜಯಪುರ ಅಥವಾ ಬಿಕ್ರಮಪುರ ನಗರ ಇದೇ ಆಗಿರಬೇಕು. ಹರಪ್ಪ, ಚಂದ್ರಕೇತುಘರ್‌ನಂಥ ಆಕಾಲದ ಐತಿಹಾಸಿಕ ನಗರಗಳ ಸಾಲಿಗೆ ನಿಸ್ಸಂಶಯವಾಗಿ ಸೇರಲ್ಪಡುವ ಅರ್ಹತೆಯಿದ್ದದ್ದು. ದಿಬ್ಬದ ಹಿಂದೊಂದು ಕಂದಕ. ಸ್ವಲ್ಪ ದೂರದಲ್ಲಿ ಹೂಗ್ಲಿ ನದಿ. ಕೋಟೆ ಕಟ್ಟಿಕೊಳ್ಳಲು ಪಕ್ಕಾ ಆಯಕಟ್ಟಿನ ಜಾಗ. ಅದನ್ನು ಬಿಟ್ಟರೆ ನೋಡಲು ಮತ್ತೇನೂ ಇರಲಿಲ್ಲ ಅಲ್ಲಿ.
’ಕ್ಯಾ ಹಾಲತ್ ಬನಾ ದಿಯಾ ಹೇ ಬೇ ಇಸ್ಕಾ’ ಸೇನಗುಪ್ತಾ ಮೂಗಿನ ಮೇಲೆ ಬೆರಳಿಟ್ಟ.
ಮಧ್ಯಾಹ್ನದ ಬಿಸಿಲಲ್ಲಿ ಇನ್ನು ನಿಲ್ಲುವುದು ಸಾಧ್ಯವಿರಲಿಲ್ಲ. ವಾಪಸ್ ಹೊರಡುವಾಗ ಛಕ್ಕನೆ ಏನೋ ನೆನಪಾಯಿತು. ಅದು ಇಲ್ಲೇ ಎಲ್ಲೋ ಗೋಡೆಯಲ್ಲಿರಬೇಕು. ಬಂಗಾಳ ಪ್ರಾಚ್ಯ ವಸ್ತು ಇಲಾಖೆ ನಡೆಸಿದ ಸಂಶೋಧನಾ ಕಾರ್ಯಗಳಲ್ಲಿ ದೊರಕಿದ ಕೆಲವೇ ಕೆಲ ವಿಗ್ರಹಗಳಲ್ಲೊಂದದು. ವರಾಹ ಸ್ವಾಮಿ ಮೂರ್ತಿಯ ಮುಖ. ಒಳಗೋಡೆಯೊಂದಕ್ಕೆ ಆನಿಸಿಟ್ಟಿದ್ದಾರೆ. ಸಾವಿರಾರು ವರ್ಷಗಳ ಕಾಲಗರ್ಭದಲ್ಲಿ ಅಡಗಿಹೋದ ಸೇನರ ರಾಜಧಾನಿಯಲ್ಲಿ ಸರಿಯಾಗಿ ಉಳಿದಿರುವುದು ಪ್ರಾಯಶಃ ಅದೊಂದೇ. ಎಂಭತ್ತರ ದಶಕದಲ್ಲಿ ಯಾವುದೋ ಕಾರಣಕ್ಕೆ ಅಚಾನಕ್ ಕಣ್ಣಿಗೆ ಬಿದ್ದ ನಂತರವೇ ಇಲ್ಲಿ ಪುರಾತತ್ವ ಇಲಾಖೆಯವರ ಹುಡುಕಾಟ ಶುರುವಾಗಿದ್ದು. ಇಂಥ ನಗರವೊಂದಿದೆ ಎಂದು ಹೊರಾಗತ್ತಿಗೆ ತಿಳಿದಿದ್ದೂ ಆಗಲೇ. ಬೆಟ್ಟದ ತುದಿಯಲ್ಲಿ ಒಂದು ಮಂದಿರವಿತ್ತು. ಅದರ ಪಳೆಯುಳಿಕೆಗಳು ಇನ್ನೂ ಗಟ್ಟಿಯಾಗಿ ನಿಂತಿವೆ. ಅಲ್ಲಿಂದ ನೀರು ಹೋಗುವ ಮೋರಿಯ ಪಕ್ಕ ವರಾಹನನ್ನು ಕೂರಿಸಿಟ್ಟಿದ್ದಾರೆ. 



ಬಲ್ಲಾಳದಿಭಿಯಲ್ಲಿ ಸಿಕ್ಕ ಸೇನರ ಕಾಲದ ವಿಗ್ರಹ

       ಬಂಗಾಳಕ್ಕೆ ಸಾವಿರಾರು ಮೈಲಿ ದೂರದ ಕರ್ನಾಟಕದಿಂದ ದಂಡೆತ್ತಿ ಬಂದು ಪಾಲರನ್ನು ಜಯಿಸಿ, ರಾಜ್ಯ ಸ್ಥಾಪಿಸಿ ೨೦೦ ವರ್ಷಗಳ ಕಾಲ ಆಳಿದ್ದು ಕಡಿಮೆ ಸಾಧನೆಯೇ?
’ಕರ್ಣಾಟ ಲಕ್ಷ್ಮಿಯನ್ನು ದೋಚಿದವರನ್ನು ಸಂಹಾರ ಮಾಡಿದ ಸಾಮಂತಸೇನ’ ಎಂದು ದೇವಪಾರಾ ಶಾಸನ ಸೇನರನ್ನು ವರ್ಣಿಸುತ್ತದೆ. ಈ ಸಾಮಂತಸೇನ ಸೇನರ ಮೊದಲ ಅರಸ. ಈತನೇ ಕರ್ನಾಟಕದಿಂದ ಬಂಗಾಳಕ್ಕೆ ದಂಡೆತ್ತಿ ಹೋಗಿ ರಾಜ್ಯಸ್ಥಾಪನೆ ಮಾಡಿರಬಹುದು. ಮಾಧೈ ನಗರ್, ಬ್ಯಾರಕ್‌ಪುರ್ ಶಾಸನಗಳಲ್ಲೂ ಸೇನರ ಕರ್ಣಾಟಕ ಮೂಲದ ಉಲ್ಲೇಖವಿದೆ. ನೈಹಟ್ಟಿ ತಾಮ್ರಶಾಸನ ’ಉತ್ತರ ಬಂಗಾಳ(ರಾಧ)ವನ್ನು ಆಳಿದ ಚಂದ್ರವಂಶದಲ್ಲಿ ಸಾಮಂತ ಸೇನನು ಜನಿಸಿದ’ ಎಂದಿರುವುದನ್ನು ನೋಡಿದರೆ ಸಾಮಂತ ಸೇನನಿಗಿಂತ ಮೊದಲೇ ಅವನ ಪೂರ್ವಜರು ಬಂಗಾಳದಲ್ಲಿ ನೆಲೆಸಿರಬಹುದು.
ಬ್ಯರಾಕ್‌ಪುರ್ ಮತ್ತು ಮಾಧೈ ನಗರದ ತಾಮ್ರಶಾಸನಗಳು ಸೇನರನ್ನು ’ಬ್ರಹ್ಮಕ್ಷತ್ರಿಯ’ರೆಂದೂ ’ಕರ್ನಾಟಕ ಕ್ಷತ್ರಿಯ’ರೆಂದೂ ಕರೆದು ಅವರ ಮೂಲ ಕರ್ನಾಟಕವೆನ್ನುವ ವಾದವನ್ನು ಎತ್ತಿಹಿಡಿದಿವೆ. ಸೇನರು ಹುಟ್ಟಿನಿಂದ ಬ್ರಾಹ್ಮಣರಾಗಿ, ಕಾರ್ಯದಲ್ಲಿ ಕ್ಷತ್ರಿಯರಾದ್ದರಿಂದ ’ಬ್ರಹ್ಮಕ್ಷತ್ರಿಯ’ರೆಂಬ ಬಿರುದು ಬಂದಿರಬಹುದು. ದೇವಪಾರಾ ಶಾಸನವೂ ಸಾಮಂತಸೇನನನ್ನು ’ಬ್ರಹ್ಮವಾದಿ’ ಎಂದು ಕರೆದು ಬ್ರಾಹ್ಮಣ ಮೂಲವನ್ನು ಒತ್ತಿಹೇಳಿದೆ. ಕದಂಬರ ಮಯೂರವರ್ಮನ ಕತೆಯೂ ಹಾಗೆಯೇ ಅಲ್ಲವೇ? ಬ್ರಾಹ್ಮಣ ಮೂಲವನ್ನೂ, ವರಾಹ ಲಾಂಛನವನ್ನೂ ನೋಡಿದರೆ ಕದಂಬರಿಗೂ, ಸೇನರಿಗೂ ಯಾವುದಾದರೂ ಸಂಬಂಧವಿರಬಹುದೇ?
’ಸೇನ್‌ಗುಪ್ತಾ ಸರ್‌ನೇಮ್ ಇರುವವರೆಲ್ಲ ಸೇನರ ಕಾಲದಲ್ಲಿ ದಕ್ಷಿಣದಿಂದ ಬಂದ ಬ್ರಾಹ್ಮಣರು. ಅವರು ವೇದ ಕಲಿತವರಾದ್ದರಿಂದ ವೈದ್ಯ ಎಂಬ ಉಪನಾಮವಿತ್ತು. ಸೇನರು ಮೂಲತಃ ವೈದ್ಯ ಕುಲದವರು ಗೊತ್ತಾ?’ ಪ್ರತಿಕ್ರಿಯೆ ಹೇಗಿರಬಹುದೆಂದು ಸೇನ್‌ಗುಪ್ತನ ಮುಖನೋಡಿದೆ.
’ಅಚ್ಛಾ, ಐಸಾ ಹೇ ಕ್ಯಾ! ಮಗರ್ ಮುಝೆ ಯೇ ಜಾತ್ ಪಾತ್ ಪರ್ ವಿಶ್ವಾಸ್ ನಹೀ ಹೈ’ ಎಂದ ಘನಗಂಭೀರವಾಗಿ.
ಇಂಥ ಹುಟ್ಟು ಕಮ್ಯುನಿಸ್ಟ್ ಬಂಗಾಳಿ ಬ್ರಾಹ್ಮಣರ ಮೇಲೆ ಎಲ್ಲಿಲ್ಲದ ಸಿಟ್ಟು ಬಂತು. ಆದರೆ ಮುಂದೆ ನಾನಂದುಕೊಂಡ ಪ್ರಶ್ನೆಯನ್ನೇ ಕೇಳಿದ. ’ಸೇನಾ ಲೋಗೋಂಕೋ ಕರ್ನಾಟಕ್‌ಸೆ ಯಹಾಂ ಆನೇಕಿ ಜರೂರತ್ ಕ್ಯಾ ಥಿ ಬತಾವೋ’?
ಕರ್ನಾಟಕದಿಂದ ಬಂಗಾಳಕ್ಕೆ ಹೋಗಿ ರಾಜ್ಯ ಕಟ್ಟುವ ಅವಶ್ಯಕತೆ ಅವರಿಗೇನಿತ್ತು ಎಂಬ ಪ್ರಶ್ನೆಗೆ ಇತಿಹಾಸಕಾರರಲ್ಲಿ ಒಮ್ಮತಾಭಿಪ್ರಾಯವಿಲ್ಲ.
        ಬಂಗಾಳವನ್ನಾಳಿದ ಪಾಲರ ಆಡಳಿತ ಸ್ಥಾನಗಳಲ್ಲಿ ಬಹಳಷ್ಟು ಅನ್ಯದೇಶಿಕರಿದ್ದರು. ಅವರ ದಾಖಲೆಗಳಲ್ಲಿ ಗೌಡ-ಮಾಳವ-ಖಾಸಾ-ಹೂನ-ಕುಲಿಕಾ-ಕರ್ಣಾಟ-ಭಾಟ ಇತ್ಯಾದಿ ಹೆಸರುಗಳು ಬಹಳವಾಗಿ ಕಾಣಿಸುತ್ತವೆ. ಈ ಕರ್ನಾಟಕದ ಅಧಿಕಾರಿಗಳು ಪಾಲರ ಅವನತಿಯ ನಂತರ ಬಂಗಾಳ ಮತ್ತು ಬಿಹಾರ ಪ್ರದೇಶದಲ್ಲಿ ಸಣ್ಣ ಸಣ್ಣ ರಾಜ್ಯ ಕಟ್ಟಿಕೊಂಡು ಆಳತೊಡಗಿರಬಹುದು. ವಿಶೇಷವೆಂದರೆ ಬಿಹಾರ ಮತ್ತು ನೇಪಾಳದ ಮಿಥಿಲಾ ಭಾಗವನ್ನು ಕರ್ನಾಟಕ ಮೂಲದ ರಾಜವಂಶವೊಂದು ಸುಮಾರು ಅದೇ ಸಮಯದಲ್ಲಿ ಆಳಿದ್ದಕ್ಕೆ ಸಾಕ್ಷ್ಯಗಳಿವೆ.
       ಕ್ರಿ.ಶ ೧೦೬೮ರಲ್ಲಿ ಬಾದಾಮಿ ಚಾಲುಕ್ಯ ಚಕ್ರವರ್ತಿ ವಿಕ್ರಮಾದಿತ್ಯ ಉತ್ತರ ಭಾರತದ ಮೇಲೆ ದಾಳಿ ನಡೆಸಿ ಅಂಗ,ವಂಗ,ಕಳಿಂಗ, ಗುರ್ಜರ, ಮಾಳ್ವ, ಚೇರರನ್ನು ಜಯಿಸಿ ಸ್ವಾಮಿಯಾದನೆಂದು ಶಾಸನಗಳು ಸಾರಿವೆ. ಅದೇ ರೀತಿ ಗೌಡ, ಮಾಗಧ, ನೇಪಾಳವನ್ನೂ ಆಕ್ರಮಿಸಿ ಅಡಿಯಾಳಾಗಿಸಿಕೊಂಡಿದ್ದನಂತೆ. ಮುಂದೆ ಚಾಲುಕ್ಯ ಸೋಮೇಶ್ವರ ತನ್ನ ಕಾಲನ್ನು ಆಂಧ್ರ, ದ್ರಾವಿಡ, ಮಾಗಧ, ನೇಪಾಳ ಅರಸರ ತಲೆಯೆ ಮೇಲಿಟ್ಟಿದ್ದಾಗಿ ಕೊಚ್ಚಿಕೊಂಡಿದ್ದಾನೆ. ಬಿಜ್ಜಳ ಕೂಡ ಇದೇ ರೀತಿ ಉತ್ತರದ ಹಲವು ರಾಜ್ಯಗಳನ್ನು ಕೈವಶಮಾಡಿಕೊಂಡಿದ್ದನಂತೆ. ಅದು ಹೌದಾಗಿದ್ದರೆ ಸೇನರು ಚಾಲುಕ್ಯ ಕುಲದ ಒಂದು ಕವಲೇ ಆಗಿರಬೇಕು.
        ಕರ್ಣಾಟ ಸೇನರ ಮೊದಲ ದೊರೆ ಸಾಮಂತಸೇನನ ಮಗ ಹೇಮಂತಸೇನ. ಇವನನ್ನು ಮಹಾರಾಜಾಧಿರಾಜ ಎಂದು ಬ್ಯಾರಕಪುರ ಶಾಸನ ಬಣ್ಣಿಸಿದ್ದರೂ ಇವನ ಬಗ್ಗೆ ಪೂರ್ಣ ಮಾಹಿತಿ ಅಲಭ್ಯ. ಇವನ ಮಗ ವಿಜಯಸೇನ ಸೇನರ ಆಳ್ವಿಕೆಯ ವಿಜೃಂಭಣೆಯನ್ನು ದೇಶಕ್ಕೆ ಸಾರಿದ ಮಹಾಪುರುಷ. ಇಡಿಯ ಬಂಗಾಳವನ್ನೂ, ರಾಘವ, ವರ್ಧನ, ಗೌಡ, ಕಾಮರೂಪ ಮತ್ತು ಕಳಿಂಗ ರಾಜರನ್ನು ಹಿಮ್ಮೆಟ್ಟಿಸಿ ಅವರ ರಾಜ್ಯವನ್ನು ಕಬಳಿಸಿದ ವೀರನೆಂದು ದೇವಪಾರ ಶಾಸನ ಸಾರಿದೆ. ಈತ ಮಿಥಿಲೆಯ ಕರ್ಣಾಟ ವಂಶದ ನಾನ್ಯದೇವನ ಸಮಕಾಲೀನ. ನಾನ್ಯದೇವನನ್ನೂ ಸೋಲಿಸಿ ವಿಜಯಸೇನ ಸೆರೆಹಿಡಿದನೆಂದು ಹೇಳುತ್ತಾರಾದರೂ ಈ ಎರಡು ಕರ್ಣಾಟ ವಂಶಗಳು ಒಟ್ಟಾಗಿ ಬಂಗಾಳವನ್ನಾಕ್ರಮಿಸಿ ವಶಪಡಿಸಿಕೊಂಡು ಹಂಚಿಕೊಳ್ಳುವಾಗ ಭಿನ್ನಾಭಿಪ್ರಾಯ ಉಂಟಾಗಿ ಈ ಕಲಹದಲ್ಲಿ ನಾನ್ಯದೇವ ಸೋತು ಹಿಮ್ಮೆಟ್ಟಿದನೆಂದು ಹೆಚ್ಚಿನ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಇದಕ್ಕೆ ಪೂರಕವಾಗಿ ವಿಜಯಸೇನ ಮತ್ತು ಮತ್ತವನ ಮಗ ಬಲ್ಲಾಳಸೇನರು ಮಿಥಿಲೆಯ ಮೇಲೆ ದಂಡಯಾತ್ರೆ ಮಾಡಿದಾಗ ಬಲ್ಲಾಳಸೇನನಿಗೆ ಮಗ ಲಕ್ಷ್ಮಣಸೇನನ ಜನನದ ಸುದ್ದಿ ಸಿಕ್ಕಿತು. ಈಗಲೂ ಮಿಥಿಲೆಯಲ್ಲಿ ಪಾಲಿಸುತ್ತಿರುವ ಲಕ್ಷ್ಮಣ ಸಂವತ್ಸರ ಈ ರಾಜನ ಹೆಸರಿನಿಂದಲೇ ಪ್ರಾರಂಭವಾದದ್ದು.
ಗೌಡ ದೇಶದ ರಾಜನಾದ ಮದನಪಾಲ, ವಿಜಯಸೇನನ ಆಕ್ರಮಣದಿಂದ ಸೋಲನ್ನನುಭವಿಸಿ ಓಡಿಹೋದ. ಈ ಜಯದ ಚಿಹ್ನೆಯಾಗಿ ವಿಜಯಸೇನ ಈಗಿನ ಬಾಂಗ್ಲಾದ ದೇವಪಾರದ ಬಳಿ ಪದುಮ್ ಶಹರ್‌ನಲ್ಲಿ ಕಟ್ಟಿಸಿದ ಪ್ರದ್ಯುಮ್ನೇಶ್ವರ ದೇವಾಲಯದ ಅವಶೇಷಗಳು ಇನ್ನೂ ಉಳಿದುಕೊಂಡಿವೆ. ಜೊತೆಗೆ ವಿಜಯಸೇನನ ವಂಶಸ್ಥರೆಲ್ಲ ಗೌಡೇಶ್ವರರೆಂದು ತಮ್ಮನ್ನು ಕರೆದುಕೊಂಡಿರುವುದರಿಂದ ಇಡೀ ಗೌಡದೇಶ ಆತನ ಕಾಲದಲ್ಲಿ ಸೇನರ ವಶವಾಗಿತ್ತೆನ್ನಬಹುದು. ಜೊತೆಗೆ ಗಂಗಾ ನದಿಯ ಮೇಲೆ ನೌಕಾಯಾತ್ರೆ ಹೂಡಿ, ಪಶ್ಚಿಮ ದೇಶಗಳ ಮೇಲೆ ದಂಡಯಾತ್ರೆ ಮಾಡಿದ್ದಾಗಿ ಕೆಲ ಶಾಸನಗಳು ಹೇಳಿದರೂ ರಾಜ್ಯಗಳ ಮತ್ತು ರಾಜರ ವಿವರ ಕೊಡದೇ ಇರುವುದರಿಂದ ಅದು ಚರ್ಚಾರ್ಹ. ಆದರೂ ಪಾಲರ ನಂತರ ಚದುರಿಹೋಗಿದ್ದ ಬಂಗಾಳವನ್ನು ಒಂದುಗೂಡಿಸಿ, ಒಳಜಗಳಗಳನ್ನು ಹತೋಟಿಗೆ ತಂದು ಅದನ್ನು ಕೊನೆಗೊಳಿಸಿ, ತನ್ನ ವಜ್ರಮುಷ್ಟಿಯಿಂದ ರಾಜ್ಯಭಾರ ಮಾಡಿದ ಯುದ್ಧಕುಶಲಿಯೆಂದೂ ಪರಮ ಭಟ್ಟಾರಕ,  ಮಹಾರಾಜಾಧಿರಾಜ,ಅರಿರಾಜ, ವೃಷಭ ಶಂಕರೇತ್ಯಾದಿ ಬಿರುದುಗಳನ್ನೂ ನೀಡಿ ಇತಿಹಾಸಕಾರರು ಹಾಡಿ ಹೊಗಳಿದ್ದಾರೆ.
         ವಿಜಯಸೇನನ ನಂತರ ಕ್ರಿ.ಶ ೧೧೫೯ರಲ್ಲಿ ಪಟ್ಟಕ್ಕೇರಿದವನು ಅವನ ಮಗ ಬಲ್ಲಾಳಸೇನ. ಬಲ್ಲಾಳ ಚಾಲುಕ್ಯ ರಾಜ ಎರಡನೇ ಜಗದೇಕಮಲ್ಲನ ಮಗಳು ರಮಾದೇವಿಯನ್ನು ಮದುವೆಯಾಗಿದ್ದ. ಬಂಗಾಳದ ಕರ್ಣಾಟ ಸೇನರು ಮೊದಲಿನಿಂದಲೂ ತಮ್ಮ ತಾಯ್ನಾಡಿನ ಜೊತೆ ಸಂಪರ್ಕವಿಟ್ಟುಕೊಂಡಿರಬೇಕು. ವೈದಿಕ ಸಂಸ್ಕೃತಿ ಬಂಗಾಳದಲ್ಲಿ ಪುನಃ ಪ್ರಭಾವಶಾಲಿಯಾಗಿ ಬೆಳೆದಿದ್ದು ಇವನ ಕಾಲದಲ್ಲೇ. ವಿಜಯಸೇನ ಹಾಗೂ ಬಲ್ಲಾಳಸೇನರ ದೀರ್ಘ ಆಳ್ವಿಕೆಗಳು ಬಂಗಾಳದ ಇತಿಹಾಸದಲ್ಲಿ ಚಿರಸ್ಮರಣೀಯ ಪುಟಗಳು. ಗೌಡದೇಶವೆಲ್ಲ ಏಕಾಚಕ್ರಾಧಿಪತ್ಯಕ್ಕೊಳಪಟ್ಟು ಶಾಂತಿ ನೆಲೆಸಿದ್ದ ಸುಭಿಕ್ಷಕಾಲ. ಕರ್ಣಾಟಕ ರಾಜ್ಯದ ಮೇಲೆ ಬಂಗಾಳಿಗಳ ಪ್ರೀತಿವಿಶ್ವಾಸದ ಕಾಣಿಕೆಯೇ ಕವಿ ಉಮಾಪತಿಧರನ ದೇವಪಾರ ಶಾಸನ ಮತ್ತು ಆನಂದಭಟ್ಟನ ಬಲ್ಲಾಳಚರಿತವೆಂಬ ಅಪೂರ್ವ ಕಲಾಕೃತಿಗಳು. ದೇವಪಾರ ಶಾಸನ ಅಂದಿನ ಸಂಗೀತ, ಸಾಹಿತ್ಯ, ಸಂಪ್ರದಾಯ, ಪರಂಪರೆಗಳ ಬಗ್ಗೆ ಮಹತ್ವದ ಬೆಳಕು ಚೆಲ್ಲಿದರೆ ಬಲ್ಲಾಳ ಚರಿತ ಸೇನರ ವಂಶಾವಳಿ, ಪಾಲರ ಜೊತೆಗಿನ ಯುದ್ಧ, ಮಿಥಿಲೆಯ ದಂಡಯಾತ್ರೆ, ಬಲ್ಲಾಳಸೇನನ ಆಳ್ವಿಕೆಗಳು ಮುಖ್ಯವಾದ ಅಂಶವಾಗಿವೆ. ಅದೆಷ್ಟು ದಿಟವೋ ಸುಳ್ಳೋ ಗೊತ್ತಿಲ್ಲ. ಆದರೆ ಬಲ್ಲಾಳ ಚರಿತೆಯಲ್ಲೊಂದು ವಿಚಿತ್ರ ಕಥೆಯಿದೆ. ಒಮ್ಮೆ ಬಲ್ಲಾಳ ಸೇನ ಉದಾಂತಪುರದ ರಾಜನನ್ನು ಸೋಲಿಸಿ ತನ್ನ ರಾಜ್ಯವಿಸ್ತರಣೆಗಾಗಿ ರಾಜ್ಯದ ಅತ್ಯಂತ ಧನಿಕ ವರ್ತಕ ವಲ್ಲಭಾನಂದನಿಂದ ಒಂದು ಕೋಟಿ ರೂಪಾಯಿಗಳ ಸಾಲ ಪಡೆದ. ಆದರೆ ಮಣಿಪುರ ಸಮೀಪದಲ್ಲಿ ಇನ್ನೊಂದು ಯುದ್ಧದ ಸಿದ್ಧತೆ ಮಾಡಿಕೊಳ್ಳಬೇಕಾದ್ದರಿಂದ ವಲ್ಲಭನ ಬಳಿ ಮತ್ತೊಮ್ಮೆ ಸಾಲವನ್ನಪೇಕ್ಷಿಸುತ್ತಾನೆ. ಹರಿಕೇರಿ ಎಂಬ ಪ್ರದೇಶದ ಆದಾಯವನ್ನು ಬಿಟ್ಟುಕೊಟ್ಟರೆ ಸಾಲಕೊಡುವುದಾಗಿ ವಲ್ಲಭ ಶರತ್ತು ವಿಧಿಸುತ್ತಾನೆ. ಇದರಿಂದ ಕೋಪಗೊಂಡ ಬಲ್ಲಾಳಸೇನ ವಣಿಕರ ಸೊತ್ತುಗಳನ್ನೆಲ್ಲ ಬಲವಂತವಾಗಿ ವಶಕ್ಕೆ ಪಡೆಯುತ್ತಾನೆ. ಅನಂತರ ಅರಮನೆಯಲ್ಲಿ ಜರುಗಿದ ಭೋಜನಕೂಟದಲ್ಲಿ ವಣಿಕರನ್ನು ಶೂದ್ರರ ಜೊತೆ ಕೂರಿಸಿ ಅವಮಾನಿಸುತ್ತಾನೆ. ಸಿಟ್ಟಿಗೆದ್ದ ವಣಿಕರು ರಾಜನ ಭೋಜನಕೂಟವನ್ನು ಧಿಕ್ಕರಿಸುತ್ತಾರೆ. ವರ್ತಕ ಮುಖಂಡ ವಲ್ಲಭ ಮಗಧರಾಜ ಪಾಲನ ಅಳಿಯನಾದ್ದರಿಂದ ಸೇನರ ವಿರುದ್ಧ ಮಗಧರನ್ನು ಎತ್ತಿಕಟ್ಟಲು ಪ್ರಾರಂಭಿಸುತ್ತಾನೆ. ತನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆಂದು ಕೆಂಡಾಮಂಡಲಗೊಂಡ ಬಲ್ಲಾಳ ’ಇನ್ನು ಮುಂದೆ ಸವರ್ಣ ವಣಿಕರನ್ನೆಲ್ಲ ಶೂದ್ರರಾಗಿ ಪರಿಗಣಿಸಬೇಕು’ ಎಂದು ರಾಜಾಜ್ಞೆ ಹೊರಡಿಸುತ್ತಾನೆ. ಇದಕ್ಕೆ ಮುಯ್ಯಿ ತೀರಿಸುವ ನೆಪದಲ್ಲಿ ವಣಿಕರು ಎಲ್ಲಾ ಸೇವಕ ಮತ್ತು ಗುಲಾಮರನ್ನು ಒಂದಕ್ಕೆರಡು ಹಣಕೊಟ್ಟು ಖರೀದಿಸಿ ಅವರ ಸೇವೆ ಬೇರೆಯವರಿಗೆ ದೊರೆಯದಂತೆ ಮಾಡುತ್ತಾರೆ. ಬಲ್ಲಾಳ ಸುಮ್ಮನಿರಬೇಕಲ್ಲ. ಕೈವರ್ತರೆಂಬ ಶೂದ್ರಕುಲದವರನ್ನು ಕುಲೀನ ಕುಲದವರೆಂದು ಸಾರಿ ಅವರ ಮುಖಂಡನಿಗೆ ಮಹಾಮಾಂಡಲೀಕ ಬಿರುದು ದಯಪಾಲಿಸುತ್ತಾನೆ. ಜೊತೆಗೆ ಕಮ್ಮಾರರು, ಕುಂಭಾರರು ಇತ್ಯಾದಿ ಜಾತಿಯವರನ್ನು ಸತ್‌ಶೂದ್ರ(!) ಪದವಿಗೇರಿಸುತ್ತಾನೆ. ಇವನ ಕಾಟಕ್ಕೆ ಬೇಸತ್ತ ಹೆಚ್ಚಿನ ವರ್ತಕರು ರಾಜ್ಯ ತ್ಯಜಿಸಿ ವಲಸೆ ಹೋಗುತ್ತಾರೆ. ಇದೇ ಸಂದರ್ಭ ಕೆಲವರಿಗೆ ಜಾತಿಯಲ್ಲಿ ಪ್ರಮೋಶನ್ ಕೊಟ್ಟಂತೆ ಬ್ರಾಹ್ಮಣ ಮತ್ತು ಕ್ಷತ್ರಿಯಕುಲಗಳ ಶುದ್ಧೀಕರಣ ಮಾಡಲು ಕೆಲ ಉಚ್ಚಕುಲದವರಿಗೆ ಡಿಮೋಶನ್ ಕೂಡ ನೀಡಿದ್ದನೆನ್ನುತ್ತದೆ ಬಲ್ಲಾಳ ಚರಿತ.
       ಈ ಬಂಗಾಳಿ ಕಮ್ಯುನಿಸ್ಟರ anti capitalist ನೀತಿಗಳಿಗೆಲ್ಲ ಬಲ್ಲಾಳಸೇನನೇ ಮೂಲ ಆದರ್ಶಪುರುಷನಾಗಿರಬೇಕು. ಬಸು, ಭಟ್ಟಾಚಾರ್ಯರದ್ದೇ ಆಗಲೀ, ಈಗ ಬ್ಯಾನರ್ಜಿಯದ್ದೇ ಆಗಲೀ, ಈ ಬಂಡವಾಳವಿರೋಧಿ ನೀತಿಯನ್ನು ಅಲ್ಲಿನ ಸರ್ಕಾರಗಳೆಲ್ಲ ಚಾಚೂ ತಪ್ಪದೇ ಪಾಲಿಸಿಕೊಂಡು ಬಂದಿವೆ. ಕಥೆಗೆ ಕಾಲಿಲ್ಲವೆಂದುಕೊಂಡರೂ ಸೇನರು ಮೂಲತಃ ಬ್ರಾಹ್ಮಣರು. ರಾಜ್ಯವಾಳಲು ಶುರುಮಾಡಿದ ನಂತರ ಕ್ಷತ್ರಿಯರಾದರು. ಅದೇ ರೀತಿ ರಾಜರಿಗೆ ಆ ಕಾಲದಲ್ಲಿ ಜಾತಿಪದ್ಧತಿಯಲ್ಲಿದ್ದ ಕಟ್ಟುಪಾಡುಗಳನ್ನು ಬದಲಿಸುವ ಹಕ್ಕು ಇದ್ದುದು, ವೈದಿಕಾಚಾರದ ನಿಯಮಗಳನ್ನೆಲ್ಲ ತನ್ನ ಇಷ್ಟಾನುಸಾರ ಆಚರಿಸತೊಡಗಿದ್ದು ಆಶ್ಚರ್ಯದ ವಿಚಾರವೇ. ಇದೇ ಬಲ್ಲಾಳಸೇನ ಅಹಿಚ್ಛತ್ರದಿಂದ(?) ಐದು ಬ್ರಾಹ್ಮಣ ಕುಟುಂಬಗಳನ್ನು ಕರೆಸಿ ಐದು ಗ್ರಾಮಗಳಲ್ಲಿ ನೆಲೆಗೊಳಿಸಿದನಂತೆ. ಮುಖೋಟಿ ಗ್ರಾಮದಲ್ಲಿ ನೆಲೆಸಿದವರು ಮುಖ್ಯೋಪಾಧ್ಯಾಯರಾದರು(ಮುಖರ್ಜಿ), ಚಟ್ಟ ಗ್ರಾಮದವರು ಚಟ್ಟೋಪಾಧ್ಯಾಯ(ಚಟರ್ಜಿ), ಗಂಗರಿದಯದವರು ಗಂಗೋಪಾಧ್ಯಾಯ(ಗಂಗೂಲಿ), ಬಂಡದವರು ಬಂಡೋಪಾಧ್ಯಾಯ(ಬ್ಯಾನರ್ಜಿ) ಎಂದು ಕರೆಯಲ್ಪಟ್ಟರು. ಐದನೇ ಮನೆತನದ ಅರ್ಚಕರಿಗೆ ಭಟ್ಟಾಚಾರ್ಯರೆಂಬ ಹೆಸರು ಬಂದಿತು. ಇವರ ಸಹಾಯಕ್ಕೆ ಬಂದ ಐದು ಕ್ಷತ್ರಿಯ ಕುಟುಂಬಗಳು ಕ್ರಮವಾಗಿ ಬಸು, ದತ್ತ, ಘೋಷ, ಮಿತ್ರ ಮತ್ತು ಪಾಲ್ ಎಂದು ಹೆಸರಾದವಂತೆ.  ಬಂಗಾಳ ಸಾಹಿತ್ಯ ಲೋಕದಲ್ಲಿ ಈತನ ಎರಡು ಕೃತಿಗಳಾದ ಅಭೂತಸಾಗರ ಮತ್ತು ದಾನಸಾಗರಕ್ಕೆ ದೊಡ್ಡ ಹೆಸರಿದೆ. ಅಭೂತಸಾಗರದ ಪ್ರಕಾರ ೧೧೭೮ರಲ್ಲಿ ಬಲ್ಲಾಳಸೇನ ತನ್ನ ಮಗ ಲಕ್ಷ್ಮಣಸೇನನಿಗೆ ರಾಜ್ಯವನ್ನು ಬಿಟ್ಟುಕೊಟ್ಟು ಗಂಗಾ-ಯಮುನಾ ಸಂಗಮಸ್ಥಳವಾದ ನಿರ್ಜರಪುರಕ್ಕೆ ತಪಸ್ಸಾಚರಿಸಲು ತೆರಳಿದನಂತೆ. ಲಕ್ಷ್ಮಣಸೇನ ಪಟ್ಟಕ್ಕೇರುವಾಗ ಅವನಿಗೆ ೬೦ ವರ್ಷ ವಯಸ್ಸು. ಗೋವಿಂದಪುರ, ತಾರಪನ್ ಡಿಘೆ, ಬಾಕುಲತಲಾ, ಅನುಲಿಯಾ, ಶಕ್ತಿಪುರ್, ಭೋವಾಲ್, ಮಾಧೈನಗರ್ ಮತ್ತು ಢಾಖಾ ಶಾಸನಗಳಲ್ಲಿ ಲಕ್ಷ್ಮಣಸೇನನ ವಿವರವಾದ ಉಲ್ಲೇಖಗಳಿವೆ. ಬಂಗಾಳವನ್ನು ಏಕಚಕ್ರಾಧಿಪತ್ಯದಡಿ ಆಳಿದ ಕಟ್ಟಕೊನೆಯ ಹಿಂದೂ ರಾಜನೀತ. ಗೌಡ, ಕಾಮರೂಪ, ಕಳಿಂಗ, ಗಹಡವಾಲ, ಮಗಧ, ಪ್ರಯಾಗಗಳನ್ನು ಗೆದ್ದು ಕೀರ್ತಿಸ್ತಂಭಗಳನ್ನು ನೆಟ್ಟದ್ದಾಗಿ ಶಾಸನಗಳು ಹೇಳಿವೆ. ಕಾಶಿಯವರೆಗೆ ರಾಜ್ಯವಿಸ್ತರಿಸಿ, ಗಯಾದಲ್ಲಿ ಸೇನರ ಧ್ವಜಹಾರಿಸಿದ್ದಾಗಿ ಗಯೆಯ ಅಶೋಕಚಲ್ಲಾನ ಶಾಸನ ಹಾಡಿಹೊಗಳಿದೆ. ಉತ್ತರ ಭಾರತದ ಎಲ್ಲೆಲ್ಲೂ ಮುಸ್ಲೀಮರ ಹಸಿರು ಪತಾಕೆಗಳು ಹಾರಾಡುತ್ತಿದ್ದಾಗ ಏಕೈಕ ಹಿಂದೂರಾಜ್ಯವಾಗಿ ಉಳಿದಿತ್ತು ಲಕ್ಷ್ಮಣಸೇನನ ಬಂಗಾಳ. ಆದರೆ ಮುಸ್ಲಿಮ ಆಕ್ರಮಣಕಾರಿಗಳ ಕಣ್ಣು ಬಂಗಾಳದತ್ತ ಬೀಳಲು ಬಹಳಷ್ಟು ಸಮಯ ಬೇಕಾಗಲಿಲ್ಲ. ವರ್ತಕರನ್ನು ಎದುರು ಹಾಕಿಕೊಂಡು ವ್ಯಾಪಾರ ವ್ಯವಹಾರಗಳನ್ನು ನಿರ್ಲಕ್ಷಿಸಿದ್ದು, ಸಂಪ್ರದಾಯದ ಹೆಸರಲ್ಲಿ ಹೊರರಾಜ್ಯಗಳೊಡನೆ ಸಂಪರ್ಕ ಕಡಿದುಕೊಂಡು ರಾಜ್ಯದೊಳಗೆ ಮೂಗು ಮುಚ್ಚಿ ಕೂತಿದ್ದು, ಕೇವಲ ಕಲೆ-ಸಂಗೀತ-ವಾಸ್ತುಶಿಲ್ಪಗಳೆಡೆಗೇ ಅತಿಯಾದ ಆಸಕ್ತಿ ವಹಿಸಿ ಮೈಮರೆತದ್ದು ಇಸ್ಲಾಂ ಬಂಗಾಳದೆಡೆ ಮುಗಿಬೀಳಲು ಅವಕಾಶ ಮಾಡಿಕೊಟ್ಟಂತಾಯಿತು. ಅಷ್ಟಾಗಿಯೂ ಲಕ್ಷ್ಮಣಸೇನನ ಆಳ್ವಿಕೆ ಇಡೀ ಭಾರತದ ಸಾಹಿತ್ಯಲೋಕದಲ್ಲೊಂದು ಸ್ವರ್ಣಯುಗ. ಗುಪ್ತರ ನಂತರ ಹಿಂದೆಂದೂ ಕಂಡುಕೇಳರಿಯದಷ್ಟು ಸಂಸ್ಕೃತ ಸಾಹಿತ್ಯ ರಚನೆಯಾಗಿದ್ದು ಸೇನರ ಕಾಲದಲ್ಲೇ. ಧೋಯೀ ಕವಿ, ಶರಣ, ಗೋವರ್ಧನ, ಉಮಾಪತಿಧರರಂಥ ಉದ್ದಾಮ ಪಂಡಿತರೆಲ್ಲ ಲಕ್ಷ್ಮಣಸೇನನ ಆಸ್ಥಾನವನ್ನಲಂಕರಿಸಿದ್ದರು. ಹಲಾಯುಧ ಇವನ ಆಸ್ಥಾನದಲ್ಲೇ ಮುಖ್ಯನ್ಯಾಯಾಧೀಶನಾಗಿದ್ದವ. ಹಳೆಯ ತಲೆಮಾರಿನ ಕೊನೆಯ ಯುಗಸ೦ಧಿಯ ಕಾಲದಲ್ಲಿ ಬಂದ ಮಹಾಕವಿ ಗೀತಗೋವಿಂದದ ಜಯದೇವ ಇವನ ಆಸ್ಥಾನದವನೇ. ಭಾರತೀಯ ಕಲೆ, ಸಾಹಿತ್ಯ, ಸಂಸ್ಕೃತಿ, ಶಿಲ್ಪ, ಚಿತ್ರ, ನಾಟ್ಯ, ಅಭಿನಯ ಕ್ಷೇತ್ರಗಳನ್ನು ರಾಮಾಯಣ, ಮಹಾಭಾರತ, ಕಾಳಿದಾಸನನ್ನು ಬಿಟ್ಟರೆ ಗೀತಗೋವಿಂದದಷ್ಟು ಉತ್ಕಟವಾಗಿ ಪ್ರಭಾವಿಸಿದ ಇನ್ನೊಂದು ಕೃತಿಯಿಲ್ಲ. ಲಕ್ಷ್ಮಣ ಸೇನನ ಆಸ್ಥಾನದಲ್ಲಿದ್ದ ಇನ್ನೊಬ್ಬ ಪ್ರಸಿದ್ಧ ಕವಿ ಸದುಕ್ತಿ ಕರ್ಣಾಮೃತವನ್ನು ರಚಿಸಿದ ಶ್ರೀಧರದಾಸ. ಇದರಲ್ಲಿ ಜಯದೇವ ಲಕ್ಷ್ಮಣಸೇನನ ಕುರಿತು ರಚಿಸಿದ ಕೃತಿಯೊಂದರ ೩೧ ಶ್ಲೋಕಗಳ ಉಲ್ಲೇಖವಿದೆ. ಗೀತಗೋವಿಂದದಂಥ ಇನ್ನೊಂದು ಸಾರ್ವಕಾಲಿಕ ಶ್ರೇಷ್ಟವಾಗುವ ಅರ್ಹತೆಯಿದ್ದ ಆ ಕೃತಿಯಿನ್ನೂ ದೊರಕಿಲ್ಲ. ಜೊತೆಗೆ ಅತ್ಯಂತ ಬೇಸರದ ವಿಚಾರವೆಂದರೆ ಸದುಕ್ತಿ ಕರ್ಣಾಮೃತ ಮತ್ತು ವಿದ್ಯಾಕರನ ಸುಭಾಶಿತರತ್ನಕೋಶದಲ್ಲಿ ಉದ್ಧರಿಸಲ್ಪಟ್ಟ, ಉದಾಹರಿಸಲ್ಪಟ್ಟ, ಉಲ್ಲೇಖಿಸಲ್ಪಟ್ಟ ಐದುನೂರಕ್ಕೂ ಹೆಚ್ಚು ಬಂಗಾಳಿ ಕವಿಗಳ ಸಾವಿರಾರು ಕೃತಿಗಳಲ್ಲಿ ಒಂದೂ ಇಂದು ಲಭ್ಯವಿಲ್ಲ. ಬಂಗಾಳದ ಮೇಲೆ ದಾಳಿ ಮಾಡಿದ ಇಸ್ಲಾಂ ಅವುಗಳನ್ನು ಬರ್ಬರವಾಗಿ ನಾಶಮಾಡಿತು. ಮುಂದೆ ಲಕ್ಷ್ಮಣಸೇನನ ಮಗ ವಿಶ್ವರೂಪ ಮುಸ್ಲಿಂ ಸೇನೆಯ ಬಹುಪಾಲನ್ನು ಪೂರ್ವಬಂಗಾಳದಿಂದ ಹೊರಗಟ್ಟುವಲ್ಲಿ ಸಫಲನಾದರೂ ಸಾಮ್ರಾಜ್ಯ ವಿನಾಶದ ಅಂಚಿನಲ್ಲಿತ್ತು. ಒಂದು ಕಾಲದಲ್ಲಿ ಕಲೆ, ವಾಸ್ತುಶಿಲ್ಪ, ವ್ಯಾಪಾರಗಳಲ್ಲಿ ವಿಶ್ವಪ್ರಸಿದ್ಧವಾಗಿದ್ದ ಬಂಗಾಳವನ್ನು ಖಿಲ್ಜಿಗಳು, ಘೋರಿಗಳು, ಲೋಧಿಗಳು ಮೊಘಲರು, ಬ್ರಿಟೀಷರೆಲ್ಲರೂ ಒಬ್ಬರಾದ ಮೇಲೊಬ್ಬರು ಕಿತ್ತು ತಿಂದರು. ಬಂಗಾಳ ಮತ್ತೆ ಮೇಲೇಳಲಿಲ್ಲ. ಅವಿಭಜಿತ ಬಂಗಾಳದ ಕೊನೆಯ ಹಿಂದೂ ಸರದಾರರೆಂಬ ಹೆಮ್ಮೆ ಸೇನರಿಗಿದೆ. ದೂರದ ಕರ್ಣಾಟಕದಿಂದ ವಲಸೆ ಬಂದು ತಮ್ಮ ಭುಜಬಲದಿಂದ ಬಂಗಾಳದಲ್ಲಿ ರಾಜ್ಯ ಕಟ್ಟಿ ಎರಡು ಶತಮಾನಗಳ ಕಾಲ ಆಳಿದ ಈ ಕರ್ಣಾಟ ವಂಶ  ಭಾರತದ ಚರಿತ್ರೆಯಲ್ಲೇ ಅಭೂತಪೂರ್ವವಾದದ್ದು ಮತ್ತು ಕರ್ನಾಟಕದ ಚರಿತ್ರೆಯಲ್ಲಿ ಚಿರಸ್ಥಾಯಿಯಾದದ್ದು.