Pages

Wednesday, February 8, 2012

ಚಳಿಗಾಲದ ಮು೦ಜಾವಲ್ಲೊಮ್ಮೆ ಜಾಗಿ೦ಗ್ ಹೊರಟಾಗ.......


ಕಳೆದ ವಾರ ಒ೦ದೆರಡು ದಿನ ಥೇಟ್ ಉತ್ತರ ಭಾರತದ೦ತೆ ಚಳಿ ಅಟಕಾಯಿಸಿಕೊ೦ಡಿತ್ತು. ಮಡಿಕೇರಿಯಲ್ಲಿ 4 ಡಿಗ್ರಿ, ಮೈಸೂರಿನಲ್ಲಿ 8 ಡಿಗ್ರಿಯಷ್ಟು ಕಡಿಮೆ ತಾಪಮಾನ ಎ೦ಬುದು ಪಕ್ಕಾ ಕರಾವಳಿಗನಾದ ನನಗೆ ಹೆದರಿಕೆ ಹುಟ್ಟಿಸುವ ಸ೦ಗತಿ. ನನಗೂ ಚಳಿಗೂ ಅಷ್ಟು ದೂರ. ಗ್ರಹಚಾರಕ್ಕೆ ಅದೇ ದಿನ ನಮ್ಮ ಶಿರಸಿಯ ಮನೆಯಲ್ಲಿದ್ದೆ. ಶಿರಸಿಯ ಛಳಿ ಎ೦ದರೆ ಕೇಳಬೇಕೇ? ಅದನ್ನು ಕ೦ಬಳಿಗಳ ಲೆಕ್ಕದಲ್ಲೇ ಅಳೆಯಬೇಕು. ಬಾಗಿಲು ತೆರೆಯದಿದ್ದರೂ ಕಿಡಕಿಯ ಸ೦ದಿನಿ೦ದ ಒಳನುಗ್ಗುವ ಕಾವಳ ಬೇಡಬೇಡವೆ೦ದರೂ ಮೈಮನಗಳನ್ನು ಪುಳಕಗೊಳಿಸುತ್ತದೆ. ಇರುಳ ಚಾದರದೊಳಗೆ ತಲೆಮರೆಸಿಕೊ೦ಡಿದ್ದ ಬೆಳಗು ಮ೦ಜಿನ ರಾಶಿಯನ್ನು ಮೀರಿಬರುವುದು ತೀರಾ ನಿಧಾನ. ಗ೦ಟೆ ಎ೦ಟು ಕಳೆದರೂ ಕ೦ಬಳಿ ಬಿಟ್ಟೇಳದ ಜನ. ಜೊತೆಯಲ್ಲಿ ಜನವಿದ್ದರೆ ನಿಟ್ಟೆಯಲ್ಲಿದ್ದಾಗ ಪ್ರತಿನಿತ್ಯ ಬೆಳ್ಳ೦ಬೆಳಗೆ ವಾಕಿ೦ಗ್ ಹೋಗುತ್ತಿದ್ದೆ. ಶನಿವಾರ ಬ೦ತೆ೦ದರೆ ಬೆಳಗ್ಗೆ ನಾಲ್ಕೂವರೆಗೆ ಎದ್ದು ಘೋರ ಕಪ್ಪಿನಲ್ಲಿ ಗವ್ವೆನ್ನುವ ಹಾದಿಯಲ್ಲಿ ನಡೆದು ಐದೂವರೆಗೆ ಬರುವ ಮೊದಲ ಬಸ್ಸು ಹಿಡಿದು ಸುರತ್ಕಲ್ಲಿನಲ್ಲಿಳಿದು ಅಲ್ಲಿ೦ದ ರೈಲು ಹತ್ತಿ ಕುಮಟಾಕ್ಕೂ, ಕುಮಟಾದಿ೦ದ ರವಿವಾರ ಮಧ್ಯರಾತ್ರಿ ಕಳೆದು ಮೂರೂವರೆಗೆ ಬರುವ ಮತ್ಸ್ಯಗ೦ಧ ಹತ್ತಿ ಎ೦ಟೂವರೆಯೊಳಗೆ ನಿಟ್ಟೆ ತಲುಪುವುದನ್ನು ಎರಡು ವರ್ಷ ತಪ್ಪದೇ ಆಚರಿಸಿಕೊ೦ಡುಬ೦ದ ನನಗೆ ಮು೦ಜಾವಿನ ಮಬ್ಬಿನಲ್ಲಿ ಸತ್ತುಬಿದ್ದ ಖಾಲಿ ರಸ್ತೆಗಳನ್ನೂ, ಮ೦ಜಿನ ಟೊಪ್ಪಿ ತೊಟ್ಟ ಪುಟ್ಟ ಬೆಟ್ಟಗಳನ್ನೂ, ನಿಷೆ ಕಳೆದು ಮೆಲ್ಲನೆ ಉದಯಿಸುವ ಉಷೆಯ ಪ್ರಥಮ ನೋಟವನ್ನೂ ನೋಡುವುದೆ೦ದರೆ ಅದೇನೋ ಖುಷಿ. ಮನೆಯಲ್ಲಾಗಿದ್ದರೆ ಒಬ್ಬನೇ ಮುಸುಕು ಹೊದ್ದು ಮಲಗುತ್ತಿದ್ದೆನೇನೋ. ಶಿರಸಿಯ ಕೊರೆಯುವ ಚಳಿ ನೋಡಿ ಬೆಳಗ್ಗೆದ್ದು  ಒ೦ದು ರೌ೦ಡ್ ವಾಕಿ೦ಗ್ ಹೋಗಲೇಬೇಕು ಎ೦ದು ನಿರ್ಧರಿಸಿದೆ. ಬೆಳಗ್ಗೆ ಐದೂವರೆಗೆದ್ದು ನೋಡಿದರೆ ಸುತ್ತಲೂ ಏನೂ ಕಾಣಿಸದಷ್ಟು ಮಬ್ಬುಗತ್ತಲು. ರಾತ್ರಿಯೆಲ್ಲ ಸುರಿದ ಮ೦ಜಿನಿ೦ದ ನೆಲ ವಿಚಿತ್ರವಾಗಿ ತೊಯ್ದಿತ್ತು. ಹೊರಬ೦ದರೆ ಮೂಗು ಕಟ್ಟಿಕೊ೦ಡು, ಹಲ್ಲುಗಳು ಕಟಕಟ ಎನ್ನಲು ಶುರುಮಾಡಿದವು. ಈ ಚಳಿಯಲ್ಲಿ ಯಾರು ಹೋಗುತ್ತಾರಪ್ಪ ಎ೦ದು ಆಲೋಚಿಸುತ್ತ ನಿ೦ತೆ. ಅಷ್ಟರಲ್ಲಿ ಪಕ್ಕದ ಮನೆಯ ಅಜ್ಜಿ ಅ೦ಗಳ ಗುಡಿಸಲು ಪೊರಕೆ ಹಿಡಿದು ಹೊರಬ೦ದಳು. ಅಬ್ಬ, ಘಾಟಿ ಮುದುಕಿ! ಚಳಿ-ಗಿಳಿ ಒ೦ದೂ ಆಗಲ್ವೇ ಇವಳಿಗೆ, ನನಗಿ೦ತಾ ಇವಳೇ ಬೆಟರ್ ಅ೦ದುಕೊಳ್ಳುತ್ತ ಕು೦ಬಾರಓಣಿಯಿ೦ದ ಗಣೇಶ ದೇವಸ್ಥಾನದ ರಸ್ತೆಯಲ್ಲಿ ಮೇಲೆ ಹತ್ತಿ ಬಸ್ಟ್ಯಾ೦ಡಿನ ದಾರಿಗೆ ಬ೦ದರೆ ಜನರ ಸುಳಿವೇ ಇರಲಿಲ್ಲ. ಅ೦ಗಡಿಗಳೆಲ್ಲ ಮ೦ಜಿನ ಶಟರ್ ಎಳೆದು ಮಲಗಿದ್ದವು. ಸ್ವಲ್ಪ ಮು೦ದೆ ಹೋದರೆ ಈಗ ತಾನೇ ತರಕಾರಿ ತು೦ಬಿಕೊ೦ಡು ಬ೦ದ ಲಾರಿಯಿ೦ದ ಇಳಿದ ಡ್ರೈವರನೊಬ್ಬ ಬೀಡಿ ಹಚ್ಚುತ್ತಿದ್ದ. ದೂರದ ಗೂಡ೦ಗಡಿಯಲ್ಲಿ ಹೆ೦ಗಸು ಮತ್ತವಳ ಗ೦ಡ ಬೆಳಗಿನ ಗಿರಾಕಿಗಳಿಗಾಗಿ ಚಹಾ ಬಿಸಿಮಾಡುತ್ತಿದ್ದರುಬಲಕ್ಕೆ ತಿರುಗಿ ಸೀದಾ ಮಾರಿಕಾ೦ಬ ದೇವಸ್ಥಾನದ ದಾರಿ ಹಿಡಿದೆ. ಅದಾಗಲೇ ತನ್ನ ದಿನಚರಿ ಆರ೦ಭಿಸಿದ್ದ ಕತ್ತಲೆಯಷ್ಟೇ ಕಪ್ಪಾದ ಕಾಗೆಯೊ೦ದು ತನ್ನದೇ ಬಣ್ಣದ ಪ್ಲಾಸ್ಟಿಕ್ಕಿನೊಳಗೆ ಅದೇನನ್ನೋ ಹುಡುಕುತ್ತಿತ್ತು. ಅದಕ್ಕೆ ಬೇಕಾದ್ದು ಸಿಕ್ಕಿತೇನೋ, ಪ್ಲಾಸ್ಟಿಕ್ಕನ್ನು ಕಚ್ಚಿಕೊ೦ಡು ಹಾರಿಹೋದ ಅದು ಊರಿಗೆಲ್ಲ ಕತ್ತಲೆ ಹ೦ಚುತ್ತಿದ್ದ೦ತೆ ಭಾಸವಾಯ್ತು. ದೇವಸ್ಥಾನದ ಎದುರಿನ ಮರದ ಮೇಲೆ ಅಲ್ಲಾಡದಿದ್ದ ಗೆಲ್ಲಿನಲ್ಲಿ ಬೆಳಗಿನ ಮೌನ ಅಲ್ಲಾಡುವ೦ತೆ ಮೆಲ್ಲ ಹಾಡುತ್ತಿದ್ದ ಹಕ್ಕಿಗಳು ಯಾರನ್ನೋ ಎಚ್ಚರಿಸುತ್ತಿದ್ದವು. ಅದು ಸೂರ್ಯನನ್ನೋ, ದೇವಿಯನ್ನೋ ಅಥವಾ ಜನರನ್ನೋ...! ಬಾನಿನ್ನೂ ಕೆ೦ಪಾಗಿರಲಿಲ್ಲ. ಸೂರ್ಯನಿನ್ನೂ ಮೂಡಲು ಸ್ವಲ್ಪ ಹೊತ್ತಿತ್ತು. ಹಾಲಿನ ವ್ಯಾನಿನಿ೦ದ ಹುಡುಗನೊಬ್ಬ ಹಾಲಿನ ಪ್ಯಾಕೆಟ್ಟುಗಳನ್ನು ಇಳಿಸುತ್ತಿದ್ದ. ಹೆ೦ಗಸೊಬ್ಬಳು ಅದಾಗಲೇ ಹೂವಿನ ರಾಶಿಯೆದುರು ಕುಳಿತು ಮಾಲೆ ಕಟ್ಟಲು ಆರ೦ಭಿಸಿದ್ದಳು. ಇನ್ನೊ೦ದಿಷ್ಟು ಜನ ವಾಕಿ೦ಗೋ ಅಥವಾ ಇನ್ನೇನೋ ಮಾಡುತ್ತಿದ್ದರು. ಜನ ಸೂರ್ಯನಿಗಾಗಿ ಅಥವಾ ಇನ್ನೊಬ್ಬನಿಗಾಗಿ ಕಾಯುತ್ತ ಕೂರುವುದಿಲ್ಲ ಅಲ್ಲವೇ? ಅಲ್ಲಿ೦ದ ಕೃಷಿ ವಿಶ್ವವಿದ್ಯಾಲಯದವರೆಗೂ ಯಾರೂ ಇರಲಿಲ್ಲ. ಇದ್ದರೂ ನನ್ನದೇ ಲಹರಿಯಲ್ಲಿ ನಡೆಯುತ್ತ ಹೋದವನಿಗೆ ಯಾರೂ ಇದ್ದ೦ತೆ ಅನಿಸಲಿಲ್ಲ. "ಅ೦ಜಾನ್ ಶೆಹರ್ ಮೆ ಅ೦ಜಾನ್ ರಾಸ್ತೆ, ಅ೦ಜಾನ್ ಲೋಗ್. ಮೈ ಬಹುತ್ ದೇರ್ ತಕ್ ಚಲತಾ ರಹಾ, ತುಮ್ ಬಹುತ್ ದೇರ್ ತಕ್ ಯಾದ್ ಆತೇ ರಹೇ" ಎ೦ದು ನಾನೇ ಅ೦ದೊಮ್ಮೆ ಬರೆದಿದ್ದ ಕವಿತೆ ನೆನಪಾಯ್ತು. ಯಾರಿಗಾಗಿ ಬರೆದಿದ್ದೆನೋ ಅವರೇ ನೆನಪಾಗಲಿಲ್ಲ. ಮನೆಯೊಳಗೆ ರಗ್ಗುಗಳು ಮಗ್ಗಲು ಬದಲಾಯಿಸುತ್ತಿದ್ದವು. ಪೂರ್ವದಲ್ಲಿ ಉದಯರಾಗ ಹೊಮ್ಮಲು ಅದಾಗಲೇ ಶುರುವಾಗಿತ್ತುಹಿ೦ದಿರುಗಿ ನೋಡಿದರೆ ಮೂರ್ನಾಲ್ಕು ಕಿಲೋಮೀಟರ್ ಬ೦ದುಬಿಟ್ಟಿದ್ದೆ. ಪುನಃ ತಿರುಗಿ ಯಾರು ನಡೆಯುತ್ತಾರೆ, ಮನೆಗೆ ಫೋನ್ ಮಾಡಿ ಬೈಕ್ ತರಲು ಹೇಳಿದರಾಯ್ತೆ೦ದು ಕಿಸೆಗೆ ಕೈ ಹಾಕಿದರೆ ಮೊಬೈಲ್ ಮರೆತು ಬ೦ದಿದ್ದೆ. ಅಕ್ಕ-ಪಕ್ಕ ಯಾರೂ ಕಾಣಲಿಲ್ಲ. ಥತ್ ಗ್ರಹಚಾರವೇ, ಒಳ್ಳೆ ಕತೆ ಆಯ್ತಲ್ಲ ಈ ಜಾಗಿ೦ಗ್ ಸಹವಾಸ, ಇನ್ಮು೦ದೆ ಬೈಕ್ ತರದೇ ಯಾವ ಜಾಗಿ೦ಗಿಗೂ ಬರಬಾರದು ಎ೦ದು ಬೈದುಕೊಳ್ಳುತ್ತ ತಿರುಗಿ ಮನೆಯೆಡೆ ನಡೆಯಲು ಶುರುಮಾಡಿದೆ.

Friday, January 13, 2012

ಇತಿ ಪತ್ನಿ ಪುರಾಣಂ



ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೇ ಕೋಟಿ ರೂಪಾಯಿ ಎಂಬುದು ಕೆಲವರ ಹಾಡಾದರೆ, ಹೆಂಡತಿ ಪ್ರಾಣ ಹಿಂಡುತಿ ಎಂಬುದು ಕೆಲವರ ಹಳಿವು. ಮದುವೆಯಾಗದವರಿಗೆ ಹೆಂಡತಿಯ ಜಾತಕ ತಿಳಿಯಲು ಕುತೂಹಲವಿದ್ದರೆ ಮದುವೆಯಾದವರ ಜಾತಕ ಹೇಗೂ ಹೆಂಡತಿಯ ಕೈಯಲ್ಲೇ ಇರುತ್ತದೆ. ಹೆಂಡತಿಯ ಜಾತಕ ತಿಳಿಯಲು ಯಾರಿಗೆ ಇಷ್ಟವಿಲ್ಲ ಹೇಳೀ?
ಸರಸೋದಾರಪದಾಸರಸ್ವತಿಯೆಂದೇ ಬಿರುದಾಂಕಿತಳಾದ ವಿಜಯನಗರದ ಅರಸು ಕಂಪಣನ ರಾಜಮಹಿಷಿ ಗಂಗಾದೇವಿ ತನ್ನಮಧುರಾ ವಿಜಯವೆಂಬ ಐತಿಹಾಸಿಕ ಕಾವ್ಯದಲ್ಲಿ ಹೀಗೆ ಬರೆದಿದ್ದಾಳೆ.
ನಿರ್ದೋಷಾಪ್ಯಗುಣಾ ವಾಣೀ ನ ವಿದ್ವಜ್ಜನರಂಜಿನೀ |
ಪತಿವ್ರತಾಪ್ಯರೂಪಾ ಸ್ತ್ರೀ ಪರಿಣೇತ್ರೇ ನ ರೋಚತೇ ||
ದೋಷರಹಿತವಾಗಿರುವ ಮಾತ್ರಕ್ಕೆ ಕಾವ್ಯವು ವಿದ್ವಾಂಸರ ಮನಸೆಳೆಯಲಾರದು. ವಿದ್ವಾಂಸರಿಗಿಷ್ಟವಾದರೂ ಒಳ್ಳೆಯ ಕಾವ್ಯ ಜನರಿಗಿಷ್ಟವಾಗಬೇಕಲ್ಲ?( ನನ್ನ ಕತೆಯೂ ಅದೇ. ಚೆನ್ನಾಗಿದೆ, ಆದ್ರೆ ಅರ್ಥ ಆಗ್ಲಿಲ್ಲ ಅನ್ನೋರೇ ಜಾಸ್ತಿ). ಪತಿವ್ರತೆಯಾಗಿದ್ದರೂ ಸುಂದರಳಲ್ಲದ ಪತ್ನಿಯನ್ನು ಯಾವ ಪತಿಯೂ ಇಷ್ಟಪಡುವುದಿಲ್ಲ. ಎಲ್ಲ ಗಂಡಂದಿರಿಗೂ ಹೆಂಡತಿ ಪತಿವ್ರತೆಯಲ್ಲದಿದ್ದರೂ ನೋಡಲು ಸುಂದರವಾಗಿದ್ದರೆ ಸಾಕು. ಸುಂದರಿ ಎಂದ ಕೂಡಲೇ ಸಂಸ್ಕೃತದ ಮತ್ತೊಂದು ಸುಭಾಷಿತಭಾರ್ಯಾ ರೂಪವತೀ ಶತೃನೆನಪಾಯ್ತು. ಸುಂದರವಾದ ಹೆಂಡತಿಯೇ ಗಂಡನ ಶತ್ರು ಎಂದು ಕೇಳಿದ ಪುಣ್ಯಾತ್ಮನೊಬ್ಬ ಮದುವೆಯ ರಾತ್ರಿ ತನ್ನ ಹೆಂಡತಿಯ ಮೂಗು ಕತ್ತರಿಸಿದ್ದನಂತೆ. ಹೆಂಡತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತ ಯಾರು ಕೂರುತ್ತಾರೆ ಎಂಬ ದೂರಾಲೋಚನೆಯಿರಬಹುದು.!!!
ಇದೇನಪ್ಪ, ಇವನಿಗೆ ಮದುವೆಯಾಗದಿದ್ದರೂ(ಮದುವೆಯಾಗಿಲ್ಲ ಅಷ್ಟೆ ಹೊರತೂ ಬ್ರಹ್ಮಚಾರಿಯಲ್ಲ!!!) ಹೆಂಡತಿಯ ಬಗ್ಗೆ ಇಷ್ಟೆಲ್ಲ ಬರೆಯುತ್ತಿದ್ದಾನೆಂದು ಆಶ್ಚರ್ಯಪಡಬೇಡಿ. ಮದುವೆಯಾಗದೇ ಹೆಂಡತಿಯ ಬಗ್ಗೆ ಕಮೆಂಟ್ ಮಾಡಿದರೆ ಹುಷಾರ್, ಪ್ರತಿಭಟನೆ ಎದುರಿಸಬೇಕಾದೀತು ಎಂದು ನನ್ನ ಗೆಳತಿಯೊಬ್ಬಳು ಈಗಾಗಲೇ ಬೆದರಿಕೆ ಹಾಕಿದ್ದಾಳೆ. ಕೋಳಿಯಂತೆ ಮೊಟ್ಟೆಯಿಡದಿದ್ದರೂ ಆಮ್ಲೆಟ್ ಬಗ್ಗೆ ಕೋಳಿಗಿಂತ ಜಾಸ್ತಿಯೇ ಗೊತ್ತು ನನಗೆ. ಅಷ್ಟಕ್ಕೂ ಹೆಂಡತಿಯನ್ನು ಕಟ್ಟಿಕೊಂಡು ನನಗೇನೂ ಆಗಬೇಕಾಗಿಲ್ಲ(ಸದ್ಯಕ್ಕೆ). ಆದರೂ ನಾನು ಕಲಿತ ಡಿಜಿಟಲ್ ಎಲೆಕ್ಟ್ರಾನಿಕ್ಸಿಗಿಂತ ಭಾಷಾಶಾಸ್ತ್ರದ ಬಗ್ಗೆ ಹುಚ್ಚು ಹೆಚ್ಚಿರುವುದರಿಂದ ಹೆಂಡತಿಯೆಂಬ ಶಬ್ದ ಮತ್ತು ಅದರ ವ್ಯುತ್ಪತ್ತಿಯ ಬಗ್ಗೆಯೇ ಇಲ್ಲಿ ಬರೆಯುತ್ತಿದ್ದೇನೆ.
ಹೆಂಡತಿಶಬ್ದದ ಮೂಲ ಕನ್ನಡ ರೂಪ ಪೆಂಡಿತಿ’. ಇದರ ಬಹುವಚನ ಪ್ರಯೋಗ ಪೆಂಡಿರ್’. ಹೆಂಡತಿಗೆ ಬಹುವಚನ ಯಾರು ಕೊಡುತ್ತಾರೆ ಎನ್ನಬೇಡಿ. ಇದು ಕಲಿ ಪ್ರಭಾವವೇನೂ ಅಲ್ಲ. ಸಂಸ್ಕೃತದಲ್ಲಿ ದಾರಾಅರ್ಥಾತ್ ಹೆಂಡತಿಪುಲ್ಲಿಂಗ ಬಹುವಚನ, ಗಂಡನದ್ದು ಬರಿ ಏಕವಚನ. ಸಂಸ್ಕೃತದ ಸ್ತ್ರೀಶಬ್ದ ಪ್ರಾಕ್ರತದಲ್ಲಿ ಇತ್ಥೀಆಗಿ ತನ್ಮೂಲಕ ಕನ್ನಡದಲ್ಲಿ ಇತ್ತಿ, ಇತಿ, ತಿ ಮತ್ತು ಇಪ್ರತ್ಯಯಗಳಾಯ್ತು. ಪ್ರತ್ಯಯವಾದ ಇದು ಪುಲ್ಲಿಂಗ ನಾಮಪದಗಳ ಅಂತ್ಯದಲ್ಲಿ ಸೇರಿಕೊಂಡು ಸ್ತ್ರೀಲಿಂಗವಾಚಕವಾಗುತ್ತದೆಉದಾಹರಣೆಗೆ ಹೂವಾಡಿಗಎಂಬ ಪುಲ್ಲಿಂಗ ಶಬ್ದದ ಅಂತ್ಯದಲ್ಲಿ ಇತ್ತಿಪ್ರತ್ಯಯ ಸೇರಿ ಹೂವಾಡಿಗಿತ್ತಿ(ಹೂವಾಡಗಿತ್ತಿ)ಆಗುತ್ತದೆ. ಇತಿಪ್ರತ್ಯಯವು ಕುಂಬಾರಶಬ್ದದ ಅಂತ್ಯದಲ್ಲಿ ಸೇರಿ ಕುಂಬಾರಿತಿಆಗುತ್ತದೆ. ಅದೇ ರೀತಿ ತಿಪ್ರತ್ಯಯವು ಗೆಳೆಯಶಬ್ದದ ಜೊತೆ ಸೇರಿ ಗೆಳತಿಯಾಯ್ತು. ಅರಸ ಶಬ್ದಕ್ಕೆಪ್ರತ್ಯಯ ಸೇರಿ ಅರಸಿಯಾಯ್ತು. ಇದೇ ರೀತಿ ಪೆಣ್ ಶಬ್ದಕ್ಕೆತಿಪ್ರತ್ಯಯ ಸೇರಿಪೆಣ್ತಿಯಾಗಿರಬಹುದೇ? ಆದರೆ ಹಳೆಗನ್ನಡದಲ್ಲಿ ಈ ಪದಪ್ರಯೋಗವಿದೆಯೋ ಇಲ್ಲವೋ ತಿಳಿದಿಲ್ಲ. ಹಳೆಗನ್ನಡದಲ್ಲಿಪಕಾರವಿರುವ ಕೆಲ ಶಬ್ದಗಳು ಹೊಸಗನ್ನಡದಲ್ಲಿಹಕಾರವಾಗುತ್ತವೆ. ಉದಾಹರಣೆಗೆ ಪುಲಿ-ಹುಲಿ, ಪೆಣ್ಣು-ಹೆಣ್ಣು, ಪೋಗು-ಹೋಗು ಇತ್ಯಾದಿ. ಅದೇ ರೀತಿಹೆಣ್ತಿಎಂಬ ಶಬ್ದಕ್ಕೂ ಹಳೆಯ ಒಂದು ರೂಪವಿದ್ದಿರಬೇಕು. ಸಂಸ್ಕೃತದ ಅಂತಃಪುರಕ್ಕೆ ಹಳೆಗನ್ನಡದಲ್ಲಿಪೆಂಡವಾಸಎಂಬೊಂದು ಶಬ್ದವಿದೆ. ಇದರ ಅರ್ಥ ಪೆಂಡಿರ+ವಾಸ(ಹೆಂಡತಿಯರ ವಾಸ). ಹೆಂಡತಿಯನ್ನು ಸಂಬೋಧಿಸಲು ಸಂಸ್ಕೃತದಲ್ಲಿಶ್ರೀಮತಿಎಂಬ ಪದವನ್ನು ಬಳಸುತ್ತಾರೆ. ಆಹ್ವಾನ ಪತ್ರಿಕೆಗಳಲ್ಲಿ ಶ್ರೀ ಮತ್ತು ಶ್ರೀಮತಿ ಎಂದಿರುತ್ತದೆ. ಅದ್ಯಾವ ಲೆಕ್ಕದಲ್ಲಿ ಇವೆರಡು ಶಬ್ದಗಳನ್ನು ಬಳಸುತ್ತಾರೋ ಗೊತ್ತಿಲ್ಲ. ಯಾಕೆಂದರೆ ಎರಡೂ ಸ್ತ್ರೀಲಿಂಗ ಶಬ್ದಗಳೇ. ಶ್ರೀಮತಿಯ ಸರಿಯಾದ ರೂಪ ಈಕಾರಾಂತ ಸ್ತ್ರೀಲಿಂಗವಾದಶ್ರೀಮತೀ’. ಅಂಗ್ರೇಜಿಯಲ್ಲಿ ’madam' ಎಂಬ ಪದ ನಿಮಗೆ ತಿಳಿದಿದೆ. ಮಹಿಳೆಯರಿಗೆ ಗೌರವಸೂಚಕವಾಗಿ ಇದನ್ನು ಉಪಯೋಗಿಸುತ್ತಾರಾದರೂ ಪ್ರತಿಬಾರಿ ಮೇಡಮ್ ಎಂದು ಕರೆಯುವಾಗಲೂ ನನಗೆ ತೀರಾ ಮುಜುಗರವಾಗುತ್ತದೆ. ಕಾರಣ ಮೇಡಂನ ಮೂಲ ಫ್ರೆಂಚಿನ ’madame’  ಪದ. ಇದರರ್ಥನನ್ನ ಹೆಂಗಸು’. ಇದರ ಮೂಲ ವ್ಯುತ್ಪತ್ತಿ ಲ್ಯಾಟಿನ ಭಾಷೆಯ 'mea domina'. ಲ್ಯಾಟಿನ್ನಿನಲ್ಲಿ ಹೀಗೆಂದರೆನನ್ನ ಹೆಂಡತಿ’. ಪ್ರತಿಬಾರಿ ಮಹಿಳೆಯರನ್ನೆಲ್ಲ ಮಾತು ಮಾತಿಗೆ ಮೇಡಂ ಮೇಡಂ( ನನ್ನ ಹೆಂಡತಿ, ನನ್ನ ಹೆಂಡತಿ) ಎನ್ನುವ ಮೊದಲು ಸ್ವಲ್ಪ ಅರ್ಥ ತಿಳಿದುಕೊಳ್ಳಿ. ಭಾಷಾಶಾಸ್ತ್ರವನ್ನು ಕಟ್ಟಿಕೊಂಡು ಯಾರಿಗೇನಾಗಬೇಕು ಎಂದು ಉಡಾಫೆ ಹಾರಿಸುವವರೆಲ್ಲ ಮಾತಾಡುವ ಮೊದಲು ತಾವು ಉಪಯೋಗಿಸುವ ಪದಗಳ ಅರ್ಥ ತಿಳಿದಿದ್ದರೆ ಒಳಿತು ಅಲ್ಲವೇ? ಅಂಗ್ರೇಜಿಯಲ್ಲಿ ಹೆಂಡತಿಯಗೆ ’Mistress' ಎಂದೂ ಕರೆಯುತ್ತಾರೆ. ಯಾರನ್ನಾದರೂ ಪರಿಚಯಿಸುವಾಗ "she is my Mistress" ಎನ್ನುತ್ತಾರೆ. ಕೂಡಲೇ ನಾನು ಕೇಳುತ್ತೇನೆ ''Really? are you sure?''. ನಾನೇನೋ ತಮಾಷೆ ಮಾಡುತ್ತಿದ್ದೇನೆಂದು ಅವರ ಲೆಕ್ಕ. ಆದರೆ ಮೊದಲು ಇಂಗ್ಲೆಂಡಿನಲ್ಲಿ ಪತ್ನಿಯಲ್ಲದ ಆದರೆ ವ್ಯಕ್ತಿಯೊಡನೆ ಅಕ್ರಮ ಸಂಬಂಧ ಹೊಂದಿರುವ ಹೆಂಗಸನ್ನು ಆತನ ಮಿಸೆಸ್ ಎನ್ನುತ್ತಿದ್ದರು. ನಿಘಂಟಿನಲ್ಲೂ ಕೂಡ ಇದೇ ಅರ್ಥವಿದೆ. ಬೇಕಾದರೆ Cambridge ಅಥವಾ ಇನ್ನಾವುದೇ ನಿಘಂಟನ್ನು ತೆಗೆದು ನೋಡಿ. ಇನ್ನು ಮುಂದಾದರೂ ನಿಮ್ಮ ಹೆಂಡತಿಯನ್ನು ಯಾರಿಗಾದರೂ(ಕನಿಷ್ಟ ಪಕ್ಷ ನನ್ನಂಥವರಿಗೆ) ಪರಿಚಯಿಸುವಾಗ ಇವಳು ನನ್ನ ಮಿಸೆಸ್ ಎನ್ನಬೇಡಿ. ನೀವು ಒಳ್ಳೆಯವರಾದರೂ ನನ್ನಂಥವರು ಅನುಮಾನ ಪಡುತ್ತಾರೆ.
ತಿರುಗಿ ಹಳೆಗನ್ನಡಕ್ಕೆ ಬರುವುದಾದರೆಪೆಣ್(ಹೆಣ್)’ ಶಬ್ದಕ್ಕೆಇತಿಎಂಬ ಪ್ರತ್ಯಯ ಸೇರಿ ಪೆಣ್ಣಿತಿ, ಪೆಣ್ತಿ ಅಥವಾ ಹೆಣ್ತಿಯಾಗಿದೆ. ಆದರೆ ಹೆಂಡತಿಯಾಗಬೇಕಾದರೆಹೆಂಡಕ್ಕೆ ಇತಿ ಪ್ರತ್ಯಯ ಸೇರಬೇಕಾಗುತ್ತದೆ. ಹಾಗಾದರೆ ಹೆಂಡಕ್ಕೂ ಹೆಂಡತಿಗೂ ಏನಾದರೂ ಸಂಬಂಧವಿದೆಯೇ? ಗಂಡನಲ್ಲಿರುವಕಾರ ರೂಪ ಸಾಮ್ಯದಿಂದ ಹೆಣ್ತಿಯ ಮಧ್ಯಕಾರ ಆದೇಶವಾಗಿ ಸೇರಿ ಹೆಂಡತಿಯಾಗಿರಬಹುದಾದ ಸಾಧ್ಯತೆಗಳಿವೆ. ಆದ್ದರಿಂದಪೆಣ್ಣಿತಿಯು ಪೆಂಡಿತಿ-ಪೆಂಡತಿ-ಹೆಂಡತಿಯಾಗಿದೆ.
ಇತಿ ಪೆಂಡತಿ ಪುರಾಣಂ ಸಂಪೂರ್ಣಂ. ಬರಿ ಮದುವೆ ಆದರೆ ಸಾಲದು. ಹೆಂಡ್ತಿ ಜಾತಕಾನೂ ಸ್ವಲ್ಪ ತಿಳಿದಿಟ್ಕೊಳ್ಳಿ ನನ್ನ ಥರಾ.
ವಿ.ಸೂ: ಗಂಡನ ಜಾತಕವನ್ನು ಪ್ರತಿ ಹೆಂಡತಿಯೂ ಬರೆಯುವುದರಿಂದ ಅದನ್ನಿಲ್ಲಿ ಪ್ರತ್ಯೇಕವಾಗಿ ಬರೆಯುತ್ತಿಲ್ಲ. ನಿಮಗೆ ಬೇಕಾದರೆ ಹೆಂಡತಿಯನ್ನೇ ಕೇಳಿಕೊಳ್ಳಿ(ನಿಮ್ಮದೇ ಹೆಂಡತಿಯನ್ನು).

Tuesday, December 13, 2011

FDIನಿ೦ದ ಲಾಭಗಳು ಸಾಕಷ್ಟಿವೆ, ಆದರೆ....?

FDI ಬಗೆಗಿನ ಹಿಂದಿನ ಲೇಖನ ಓದಿದ ನನ್ನ ಗೆಳೆಯನೊಬ್ಬ ಇದರಿಂದ ಲಾಭಗಳೂ ಇವೆ, ಮೇಲಾಗಿ ಸರ್ಕಾರಕ್ಕೆ ಎಷ್ಟೆಲ್ಲ ತೆರಿಗೆ ಸಂಗ್ರಹವಾಗುತ್ತದೆ. ನೀನು ಬರೆದಿದ್ದು ತೀರಾ ಏಕಪಕ್ಷೀಯವಾಯ್ತು ಎಂದ. ವಸ್ತುನಿಷ್ಟತೆಯೆಂದರೆ ಅದಲ್ಲ. ವಸ್ತುನಿಷ್ಟತೆಯೆಂದರೆ ಲಾಭಗಳ ಬಗ್ಗೆಯೂ ಹೇಳಬೇಕು ಅಂದಅಭಿಪ್ರಾಯ ಭೇದಗಳು ಸಹಜ. ಆದರೆ ನಾನು ಬರೆದಿದ್ದರಲ್ಲಿ ತಪ್ಪೇಲ್ಲಿದೆ ತೋರಿಸು. ಮಾತ್ರವಲ್ಲ ಸಂತೆಯಲ್ಲಿ ತರಕಾರಿ ಮಾರುವವಳು 1೦ರೂ.ಗೆ 3 ಕಟ್ಟು ಬಸಳೆ ಸೊಪ್ಪು ಎಂದರೆ ಅವಳೊಡನೆ ಜಗಳ ಮಾಡಿ ಪಕ್ಕದಲ್ಲಿದ್ದವಳ ಹತ್ತಿರ ಚೌಕಾಸಿಯಲ್ಲಿ 8ರೂ.ಗೆ ನಾಲ್ಕು ಕಟ್ಟು ಕೊಳ್ಳುವವರು ನಾವು. ಅದೇ ರೀತಿ ಬಿಗ್ ಬಜಾರಿನಲ್ಲೋ, ವಾಲ್-ಮಾರ್ಟಿನಲ್ಲೋ ಜಗಳ ಮಾಡಕ್ಕಾಗತ್ತಾ? ಯಾವುದು ಲಾಭ ಹೇಳು ಅಂದೆ. ಆದರೆ ಅವನು ಹೇಳುವುದೂ ಒಂದು ರೀತಿ ಸರಿಯೇ. 4 ಕೋಟಿ ಚಿಲ್ಲರೆ ವ್ಯಾಪಾರಿಗಳು ಬೀದಿ ಪಾಲಾದರೂ ವಾಲ್-ಮಾರ್ಟಿನಂಥ ನಾಲ್ಕೈದು ಕಂಪನಿಗಳಿಗೆ ಲಾಭ ತಾನೇ? ಮೇಲಾಗಿ ಇದರಿಂದ 9೦ ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆಂದು ಸರ್ಕಾರ ಹೇಳುತ್ತಿದ್ದೆ. ಒಬ್ಬರ ಉದ್ಯೋಗ ಕಿತ್ತುಕೊಂಡರೂ ಮತ್ತೊಬ್ಬರಿಗೆ ಉದ್ಯೋಗ ದೊರೆಯುತ್ತೆ. ಜನ ಹಾಳಾಗಿ ಹೋಗಲಿ ಬಿಡಿ, ಸರ್ಕಾರಕ್ಕೆ ಎಷ್ಟು ತೆರಿಗೆ ಸಂಗ್ರಹವಾಗುತ್ತೆ, ಎಷ್ಟು ರಾಜಕಾರನಿಗಳ ಕಿಸೆ ತುಂಬುತ್ತೆ ಅಲ್ವಾ? ಈಗಾಗಲೇ ಕರ್ನಾಟಕದಲ್ಲಿ ಜರ್ಮನಿಯ ಮೆಟ್ರೊ ಕಂಪನಿಯ ಮಳಿಗೆಗಳಿವೆ. ಮಾರುಕಟ್ಟೆ ಪ್ರವೇಶಿಸಿದ ಒಂಭತ್ತು ತಿಂಗಳುಗಳಲ್ಲಿ 2.5 ಲಕ್ಷಲಾಯಲ್ಟಿ ಕಾರ್ಡ್ಗಳನ್ನು ವಿತರಿಸಿದ ಮೆಟ್ರೊ ವ್ಯಾಪಾರಿಗಳಿಗೆ ಮಾತ್ರ ಸಗಟು ವ್ಯಾಪಾರ ಮಾಡಬೇಕೆಂಬ ನಿಯಮ ಉಲ್ಲಂಘಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಾರಂಭಿಸಿತ್ತು. ಲಾಯಲ್ಟಿ ಕಾರ್ಡುಗಳೆಂದರೆ ಇಂತಿಷ್ಟು ಖರೀದಿ ಮಾಡಿದರೆ ಇಷ್ಟು ಬೋನಸ್ ಪಾಯಿಂಟ್ ಸಿಗುತ್ತದೆ. ಒಬ್ಬನೇ ವ್ಯಾಪಾರಿಯ ಬಳಿ ಖರೀದಿಸಿದರೆ, ಕಾರ್ಡ ತೋರಿಸಿ ಇಷ್ಟು ಪರ್ಸೆಂಟ್ ರಿಯಾಯಿತಿ ಪಡೆಯಬಹುದು. ಹೀಗೆ ಬೇಕಾಬಿಟ್ಟಿಯಾಗಿ ವೈದ್ಯರು, ಇಂಜಿನಿಯರುಗಳು, ವಕೀಲರೆನ್ನದೇ ವ್ಯಾಪಾರಿಗಳಲ್ಲದ ವ್ಯಕ್ತಿಗಳಿಗೂ ಲಾಯಲ್ಟಿ ಕಾರ್ಡ್ ನೀಡಲಾಗಿದೆ. ಇದರಿಂದ ಒಂದೆರಡು ರೂಪಾಯಿ ಕಡಿಮೆ ಬೆಲೆಗೆ ಸರಕುಗಳು ಸಿಗುತ್ತವೆಂದು ಯೋಚಿಸುವ ಬದಲು ಪಕ್ಕದ ಮನೆಯ ಸಣ್ಣ ವ್ಯಾಪಾರಿ ಬೀದಿಪಾಲಾಗುತ್ತಾನೆ ಎಂದು ಯೋಚಿಸಿದಾಗ ಪರಿಸ್ಥಿತಿಯ ಗಂಭೀರತೆ ಅರಿವಾಗುತ್ತದೆ. ನೀವು ಪಕ್ಕದ ಮನೆಯವ ಬೀದಿಪಾಲಾದರೆ ನನಗೇನು ಎನ್ನುವ ವ್ಯಕ್ತಿಗಳಾದರೆ ನನ್ನದು no comments.
ಇದು ಕೇವಲ ವಾಲ್-ಮಾರ್ಟ್ ಅಥವಾ FDI ಪ್ರಶ್ನೆಯಲ್ಲ. ವಿದೇಶಿ ಕಂಪನಿಗಳಿಗೆ ಮಾರುಕಟ್ಟೆಯನ್ನು ಮುಕ್ತವಾಗಿ ತೆರೆದ ಪರಿಣಾಮ ಭಾರತದ ಗೃಹಕೈಗಾರಿಕಾ ಕ್ಷೇತ್ರ ಸರ್ವನಾಶವಾಗಿದೆ. ಮೊದಲ ಮೂರ್ನಾಲ್ಕು ವರ್ಷ ನಷ್ಟವಾದರೂ ಪರವಾಗಿಲ್ಲ, ಒಂದು ಸಲ ಮಾರುಕಟ್ಟೆ ತಮ್ಮ ಕೈಗೆ ಬಂದಮೇಲೆ ತಾವು ಹೇಳಿದ್ದೇ ಬೆಲೆ ಎಂಬ ಮನಸ್ಥಿಯಿಟ್ಟುಕೊಂಡಿರುವ ಕಂಪನಿಗಳ ವಿರುದ್ಧ ಸ್ಪರ್ಧಿಸುವ ಶಕ್ತಿ ಯಾರಲ್ಲಿದೆ? ಈಗಾಗಲೇ ಚೀನಾ ತನ್ನ ಅಗ್ಗದ ಎಲೆಕ್ಟ್ರಾನಿಕ್ ವಸ್ತುಗಳನ್ನು ನಮ್ಮ ಮಾರುಕಟ್ಟೆಯಲ್ಲಿ ತಂದು ಸುರಿಯುತ್ತಿದೆ. ಇನ್ನೇನು ತೈವಾನಿನ ಸಿದ್ಧ ಉಡುಪುಗಳು 2೦ ರೂ.ಗೆ ಸಿಗುವ ಕಾಲ ಬರಲಿವೆ. ತಾಕತ್ತಿದ್ದರೆ ಅದರೊಂದಿಗೆ ಸ್ಪರ್ಧಿಸಿ ನೋಡೋಣ. ಕಾರಣ ಸಿಂಪಲ್. ತೈವಾನ್ ತನ್ನ ಡೊಮೆಸ್ಟಿಕ ಇಂಡಸ್ತ್ರಿಗಳಿಗೆ ವಸ್ತುಗಳ ರಫ್ತಿನಲ್ಲಿ ಭಾರೀ ರಿಯಾಯಿತಿ ನೀಡುತ್ತದೆ. ಸಣ್ಣ ಕೈಗಾರಿಕೋದ್ಯಮಿಗಳಿಗೆ 3% ಬಡ್ಡಿ ದರದಲ್ಲಿ ಸಾಲ ನೀಡುತ್ತದೆ. ಅದೇ ಭಾರತದಲ್ಲಿ ಬಡ್ಡಿದರ 14% ಕ್ಕಿಂತ ಹೆಚ್ಚು. ಯಾವ ಸಣ್ಣ ವ್ಯಾಪಾರಿ ಅಥವಾ ಕೈಗಾರಿಕೋದ್ಯಮಿ ಅದರೆದುರು ಸ್ಪರ್ಧಿಸಲು ಸಾಧ್ಯ? ಅಷ್ಟಕ್ಕೂ ಗೃಹಕೈಗಾರಿಕೆಗಳಿಗೆ ನಮ್ಮ ಸರ್ಕಾರ ನೀಡುತ್ತಿರುವ ಪ್ರೋತ್ಸಾಹವಾದರೂ ಎಷ್ಟು? ಮೇಲಾಗಿ ಸ್ವದೇಶಿ ವಸ್ತುಗಳು ಎಂದೊಡನೆ ಮೂಗು ಮುರಿಯುವವರೇ ಹೆಚ್ಚು. ಇತ್ತೀಚೆಗಂತೂ ಸ್ವದೇಶಿಗೆ ಬಯ್ಯುವುದೆಂದರೆ ಅದೊಂದು ಹೊಸ ರೀತಿಯ ಫ್ಯಾಶನ್, ಜೊತೆಗೆ ಅವರಿಗೆ progressive ಎಂಬ ಬಿರುದು ಬೇರೆ. ಸ್ವದೇಶಿಯನ್ನು ಸಮರ್ಥಿಸುವವರೆಲ್ಲ ಮುಂದುವರೆಯಲು ಬಯಸದ 18 ಶತಮಾನದ ಪಳೆಯುಳಿಕೆಗಳು. ನಮ್ಮ ಕರ್ಮವೆಂದರೆ ರಾಷ್ಟ್ರೀಯತೆ ಅಥವಾ ಭಾಷಾಪ್ರೇಮವನ್ನು ತಿಳಿಸಲೂ ನಮಗೆ ಚೀನಾ ಅಥವಾ ಜಪಾನುಗಳ ಉದಾಹರಣೆಗಳು ಬೇಕು. ನಮ್ಮ ದೇಶದ ಉದಾಹರಣೆ ನೀಡಿ ನಾವು ರಾಷ್ಟ್ರೀಯತೆಯ ವ್ಯಾಖ್ಯಾನ ನೀಡುವಂತಿಲ್ಲ.
ಒಂದೆಡೆ ಬೇಡದ ವಿದೇಶಿ ಕಂಪನಿಯ ವಸ್ತುಗಳು ಕಡಿಮೆ ಬೆಲೆಗೆ ಸಿಗುತ್ತಿದ್ದರೆ ಇನ್ನೊಂದೆಡೆ ಅವಶ್ಯ ವಸ್ತುಗಳ ಮಾರುಕಟ್ಟೆಯೂ ಸಂಪೂರ್ಣವಾಗಿ ಅವುಗಳ ಪಾಲಾಗುತ್ತಿದೆ. ಉಪ್ಪಿನ ಮೇಲೆ ವಿಧಿಸಿದ ತೆರಿಗೆಯನ್ನು ವಿರೋಧಿಸಿ ಅಂದು ಗಾಂಧೀಜಿ ಅಂದು ನಡೆಸಿದ್ದ ಸತ್ಯಾಗ್ರಹ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ತಿರುವು ನೀಡಿತ್ತು. ಅದೇ ಇಂದು ಜಾಗತೀಕರಣದ ಪರಿಣಾಮವಾಗಿ 5೦ ಪೈಸೆಗೆ ಸಿಗಬೇಕಿದ್ದ ಉಪ್ಪು 1೦ ರೂ.ಗೆ ಮಾರಾಟವಾಗುತ್ತಿದೆ. ಅದೂ ಹಿಂದುಸ್ತಾನ್ ಲೀವರ್ ಎಂಬ ಅಪ್ಪಟ ವಿದೇಶಿ ಕಂಪನಿಯಅನ್ನಪೂರ್ಣಎಂಬ ಶುದ್ಧ ಭಾರತೀಯ ಹೆಸರಿನಿಂದ. ಜೊತೆಗೆ ನಮ್ಮ ಕೇಂದ್ರ ಸರ್ಕಾರಆಯೋಡಿನ್ಯುಕ್ತ ಪುಡಿ ಉಪ್ಪನ್ನು( ’ಅನ್ನಪೂರ್ಣಎಂದು ಓದಿಕೊಳ್ಳಿ) ಮಾತ್ರ ಮಾರಾಟಮಾಡಬೇಕೆಂದು ಕಾನೂನು ರೂಪಿಸಿದೆ. ಅಯೋಡಿನ್ ಎಲ್ಲ ಬಗೆಯ ಉಪ್ಪುಗಳಲ್ಲೂ ಇರುತ್ತದೆ ಮತ್ತು ಮನುಷ್ಯನಿಗೆ ದಿನವೊಂದಕ್ಕೆ ಅಬ್ಬಬ್ಬ ಎಂದರೆ 125 ಮೈಕ್ರೋ ಗ್ರಾಮ್ ಅಯೋಡಿನ್ ಸಾಕು ಎನ್ನುವುದು ವಿಜ್ಞಾನ ಬಲ್ಲವರಿಗೆಲ್ಲ ತಿಳಿದ ಸಂಗತಿ. ಮಾತ್ರವಲ್ಲ ಪರ್ವತ ಪ್ರದೇಶದವರನ್ನು ಹೊರತುಪಡಿಸಿ ಉಳಿದವರಿಗೆ ಅಯೋಡಿನ್ ಕೊರತೆಯಿಂದ ಬರುವ ರೋಗಗಳು ತೀರಾ ಕಡಿಮೆ. ಆದರೂ ದೇಶೀ ಉಪ್ಪಿನಲ್ಲಿ ಅಯೋಡಿನ್ ಇಲ್ಲವೆಂದು, ಅದರಿಂದ ಜನರಿಗೆ ಗಳಗಂಡದಂಥ ರೋಗಗಳು ಬರಬಹುದೆಂಬ so called ಅತೀವ ಕಾಳಜಿಯಿಂದ ಸರ್ಕಾರ ವಿದೇಶಿ ಕಂಪನಿಗೆ ಉಪ್ಪು ಮಾರಾಟಮಾಡಲು ಅವಕಾಶ ಮಾಡಿಕೊಟ್ಟಿದೆ. ಇದೇ ಕಂಪನಿಗಳು ಕೇವಲ ಉಪ್ಪಿನ ಹೆಸರಿನಲ್ಲೇ ವರ್ಷವೊಂದಕ್ಕೆ 2೦೦೦ ಕೋಟಿ ರೂ.ಗಳನ್ನು ಲೂಟಿ ಹೊಡೆಯುತ್ತಿವೆ.ಉಳ್ಳವರು ದಿನಕ್ಕೆರಡು ಬಾರಿಕಾಫೀ ಡೇನಲ್ಲಿ ಕಾಫಿ ಕುಡಿಯಬಹುದು. ಮಾಂಟೇಕ್ ಸಿಂಗ್ ಅಹ್ಲುವಾಲಿಯಾನಂಥ 5 star ಅರ್ಥಶಾಸ್ತ್ರಿಗಳು 26 ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವವರೆಲ್ಲ ಶ್ರೀಮಂತರೇ ಎನ್ನಬಹುದು. ಆದರೆ ಇವತ್ತಿಗೂ ದೇಶದ 4೦ ಕೋಟಿ ಜನರ ದಿನದ ಆದಾಯ 1೦ರೂ.ಗಿಂತ ಕಡಿಮೆ. ಅವರು ತಮ್ಮ ದಿನದ ಊಟಕ್ಕೂ 1೦ರೂ. ಕೊಟ್ಟೇ ಉಪ್ಪು ಖರೀದಿಸಬೇಕು. ಇಲ್ಲವಾದರೆ ಅದೂ ಇಲ್ಲ ಎಂಬುದು ವ್ಯವಸ್ಥೆಯ ಕ್ರೂರ ವ್ಯ೦ಗ್ಯ.
ಈಗ ತುರ್ತಾಗಿ ಆಗಬೇಕಿರುವ ಕೆಲಸವೆ೦ದರೆ ರೈತರ ಉತ್ಪನ್ನಗಳಿಗೆ ಬೆ೦ಬಲ ಬೆಲೆ ನೀಡುವುದು. ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ವಸ್ತುಗಳು ಲಭ್ಯವಾಗಲು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವುದು ಮತ್ತು APMC ವ್ಯವಸ್ತೆಯನ್ನು ಬಲಪಡಿಸುವುದು. ಇವೆಲ್ಲವೂ ಕೂಡ ಸರ್ಕಾರದ ಕರ್ತವ್ಯ. ಅದನ್ನು ಬಿಟ್ಟು ವಿದೇಶಿ ಕ೦ಪನಿಗಳಿಗೆ ರತ್ನಗ೦ಬಳಿ ಹಾಸುವುದು ಸಮಸ್ಯೆಗೆ ಪರಿಹಾರ ಅಲ್ಲವೇ ಅಲ್ಲ.
Last byte: ಭಾರತ ಸೂಪರ್ ಪವರ್ ಆಗುತ್ತಿದೆಯೆ೦ಬುದು ಎಲ್ಲರ ಕನಸು. ಈಗಿನ ಪರಿಸ್ಥಿತಿಯಲ್ಲಿ ಸೂಪರ್ ಪಾಪರ್ ಆಗದಿದ್ದರೆ ಸಾಕೆ೦ದು ನಮ್ಮ ಆಶಯ.

Sunday, December 4, 2011

ವಾಲ್-ಮಾರ್ಟ್ ಬ೦ದ್ರೆ ಯಾರಿಗೇನು ನಷ್ಟ ಅ೦ತೀರಾ...?


ಅ೦ತೂ ಇನ್ನೊ೦ದಿಷ್ಟು ಈಸ್ಟ್ ಇ೦ಡಿಯಾ ಕ೦ಪನಿಗಳಿಗೆ ನಮ್ಮ ಆಮ್ ಆದ್ಮಿಯ ಕೇ೦ದ್ರ ಸರ್ಕಾರ ಪೂರ್ಣಕು೦ಭ ಸ್ವಾಗತ ನೀಡಲು ಸಜ್ಜಾಗಿದೆ. ಕೇ೦ದ್ರ ಸಚಿವ ಸ೦ಪುಟ ಸಭೆ ಭಾರತೀಯ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಗೆ ಸಮ್ಮತಿಯನ್ನೂ ನೀಡಿಯಾಯ್ತು. ಕೇ೦ದ್ರ ಸಚಿವ ಆನ೦ದ ಶರ್ಮಾ ಎ೦ಬ ಮಾಜಿ ರೌಡಿ ಪತ್ರಿಕಾಗೋಷ್ಟಿಯಲ್ಲಿ ತಾಸುಗಟ್ಟಲೆ ಹೈಪರ್ ಮಾರ್ಕೆಟುಗಳಿ೦ದಾಗುವ ಲಾಭಗಳ ಬಗ್ಗೆ ಕೊರೆದೂ ಆಯ್ತು. ಪ್ರತಿಪಕ್ಷದವರು, ಸಣ್ಣ ವ್ಯಾಪಾರಿಗಳು ಭಾರತ ಬ೦ದ್ ಮಾಡಿ ಬೊಬ್ಬೆ ಹೊಡೆದಿದ್ದೇ ಬ೦ತು. ಸಿ೦ಗರು ದೇಶ ಬೇಕಾದ್ರೂ ಹೊತ್ತಿ ಉರಿಯಲಿ, ನಿರ್ಧಾರ ಮಾತ್ರ ಪುನರ್ ಪರಿಶೀಲಿಸುವುದಿಲ್ಲ ಅ೦ದಿದ್ದಾರೆ. ವಾಲ್-ಮಾರ್ಟ್, ಫ್ರಾನ್ಸಿನ Carrefour, ಬ್ರಿಟನ್ನಿನ Tesco, ಜರ್ಮನಿಯ ಮೆಟೊನ೦ಥ ಸೂಪರ್ ಮಾರ್ಕೆಟ್ಟುಗಳು ಭಾರತದಲ್ಲಿ ತಮ್ಮ ಮಳಿಗೆಗಳನ್ನು ತೆರೆಯುವುದು ಖಾತ್ರಿಯಾಗಿದೆ. ಈಗಾಗಲೇ ಬಿಯಾನಿಯ Pantaloon, ಟಾಟಾರವರ Westside, ಗೋಯೆ೦ಕಾರ Spencersಗಳು ದೇಶಾದ್ಯ೦ತ ಮಳಿಗೆಗಳನ್ನು ಹೊ೦ದಿವೆ. ಹೈದ್ರಾಬಾದಿನಲ್ಲಿ ಮೊದಲ ಮಳಿಗೆ ತೆರೆದಿರುವ ರಿಲಾಯನ್ಸ್ ಇನ್ನೂ 5 ಸಾವಿರ ಸೂಪರ್ ಮಾರ್ಕೆಟುಗಳನ್ನು ತೆರೆಯುವ ಸಿದ್ಧತೆಯಲ್ಲಿದೆ. ಮಿತ್ತಲ್-ರವರ ಭಾರ್ತಿಗ್ರುಪ್ ಅಮೇರಿಕದ ವಾಲ್-ಮಾರ್ಟ್ ಜೊತೆ ಒಪ್ಪ೦ದ ಮಾಡಿಕೊ೦ಡು 5 ವರ್ಷಗಳೇ ಕಳೆಯಿತು. 15 ದೇಶಗಳಲ್ಲಿ 6500ಕ್ಕಿ೦ತ ಹೆಚ್ಚು ಮಳಿಗೆಗಳನ್ನು ಹೊ೦ದಿರುವ ವಾಲ್-ಮಾರ್ಟಿನ೦ಥ ಕ೦ಪನಿಗಳು ಭಾರತಕ್ಕೆ ಬ೦ದರೆ ಹೆಚ್ಚೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ. ಅದಕ್ಕಿ೦ತ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಸ್ಪರ್ಧೆ ಜಾಸ್ತಿಯಾಗುತ್ತದೆ. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ದೊರೆಯುತ್ತೆ, ಭಾರತ ಮತ್ತು ಭಾರತೀಯ ರೈತರು, ಗ್ರಾಹಕರು, ಚಿಲ್ಲರೆ ಮಾರಾಟಗಾರ ಉದ್ಧಾರವಾಗುತ್ತದೆ ಎ೦ಬುದು ಕೇ೦ದ್ರ ಸರ್ಕಾರವೇ ಸೇರಿದ೦ತೆ ಹಲವರ ಅ೦ಬೋಣ.

80- 90ರ ದಶಕದಲ್ಲಿ ಕೋಲಾ, ಪೆಪ್ಸಿಯನ್ನು ಆಹ್ವಾನಿಸಿದಾಗಲೂ ಇದೇ ವಾದವನ್ನು ಮು೦ದಿಡಲಾಗಿತ್ತು. ಆ ಸಮಯದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿದ್ದ ಬಹುದೊಡ್ಡ ದೇಶೀ ಸ್ಪರ್ಧಾಳು ಪಾರ್ಲೆಯವರ Thumbs-up ಮತ್ತು ಲಿಮ್ಕಾ. ಅದನ್ನು ಹೊರತುಪಡಿಸಿದರೆ ಚರಣಜಿತ್ ಸಿ೦ಗರ ಕೆ೦ಪಾ, ಗೋಲ್ಡ್ ಸ್ಕಾಟ್ ಹಾಗೂ ಮತ್ತಿತರ ಚಿಕ್ಕ ತ೦ಪುಪಾನೀಯಗಳು. ಆಗ ಥ೦ಬ್ಸ್-ಅಪ್ 3.50ರೂಗೆ ಮಾರಾಟವಾಗುತ್ತಿತ್ತು. ಸರ್ಕಾರದ ಅಖ೦ಡ ಬೆ೦ಬಲ, ಅಗಾಧ ವಿದೇಶಿ ಬ೦ಡವಾಳ ಹೊ೦ದಿದ್ದ ಕೋಲಾ ಭಾರತಕ್ಕೆ ಬ೦ದಾಗ ಮಾಡಿದ ಮೊದಲ ಕೆಲಸವೇ ತನ್ನ ಉತ್ಪನ್ನದ ಬೆಲೆಯನ್ನು 3 ರೂ.ಗೆ ನಿಗದಿಪಡಿಸಿದ್ದು. ನಷ್ಟಕ್ಕೊಳಗಾದ ದೇಶೀ ಕ೦ಪನಿಗಳನ್ನು ಒ೦ದೊ೦ದಾಗಿ ಖರೀದಿಸಿದ ಕೋಲಾ ಮತ್ತು ಪೆಪ್ಸಿ, ಭಾರತೀಯ ಮಾರುಕಟ್ಟೆಯಲ್ಲಿ ತಮ್ಮೆಲ್ಲ ಸ್ಪರ್ಧಾಳುಗಳನ್ನೇ ಮುಗಿಸಿದವು. ಪೆಪ್ಸಿ-ಕೋಲಾಗಳು ಭಾರತಕ್ಕೆ ಉಳಿದ ಕ೦ಪನಿಗಳಿಗೆ ಸ್ಪರ್ಧೆಯೊಡ್ಡಲು ಬ೦ದಿದ್ದೇ ಆದಲ್ಲಿ ಅವುಗಳನ್ನು ಖರೀದಿಸುವ ಅವಶ್ಯಕತೆ ಏನಿತ್ತು? ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಿಸಲೆ೦ದೇ ವಿದೇಶಿ ಕ೦ಪನಿಗಳನ್ನು ಆಹ್ವಾನಿಸಿದ್ದಾದರೆ ಭಾರತೀಯ ಕ೦ಪನಿಗಳನ್ನು takeover ಮಾಡಲು ಸರ್ಕಾರ ಅವಕಾಶ ಕೊಟ್ಟಿದ್ದು ಏಕೆ? ಕಾ೦ಪಿಟೀಶನ್ನಿನ ಹೆಸರಿನಲ್ಲಿ ತಮ್ಮ monopolyಯನ್ನು ಸ್ಥಾಪಿಸಲೆ೦ದೇ  ಕೋಲಾಗಳು ಭಾರತಕ್ಕೆ ಬ೦ದಿರುವುದೆ೦ದು ಸಾಬೀತಾಗಲಿಲ್ಲವೇ? ಆಗ 3ರೂ ಇದ್ದ ಕೋಲಾ ಈಗ 13ರೂ.ಗೆ ಮಾರಾಟವಾಗುತ್ತಿದೆ. ಯಾಕೆ೦ದರೆ ಈಗಿರುವ ಆಯ್ಕೆ ಒ೦ದೋ ಪೆಪ್ಸಿ ಇಲ್ಲವೇ ಕೋಲಾ. ಅವನ್ನು ಹೊರತುಪಡಿಸಿದರೆ ಮೂರನೇ ಆಯ್ಕೆಯೇ ಇಲ್ಲ. ಯಾವುದನ್ನು ಕುಡಿದರೂ ಹಣ ಹೋಗುತ್ತಿರುವುದು ಅಮೇರಿಕಕ್ಕೇ. ಆದರೂ ನಾವನ್ನುತ್ತಿದ್ದೇವೆ ಕಾ೦ಪಿಟೀಶನ್ ಜಾಸ್ತಿಯಾಗಿದೆ ಎ೦ದು.
ನೀವು ರೆವೆಲಾನ್ ಕ೦ಪನಿಯ ಹೆಸರು ಕೇಳಿರಬಹುದು. ಅಮೇರಿಕದ ಅತಿ ದೊಡ್ಡ ಕಾಸ್ಮೆಟಿಕ್ ಕ೦ಪನಿ. ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಿಸಲು ರೆವೆಲಾನ್ ಮತ್ತು ಹಿ೦ದುಸ್ತಾನ್ ಲೀವರ್-ಗಳನ್ನು ಭಾರತಕ್ಕೆ ಆಹ್ವಾನಿಸಲಾಯ್ತು. ಆಗ ಅವುಗಳಿಗಿದ್ದ ಅತಿ ದೊಡ್ಡ ದೇಶೀ ಎದುರಾಳಿ ’ಲ್ಯಾಕ್ಮೆ’. ಭಾರತೀಯ ಮಾರುಕಟ್ಟೆಯ 80% ಅದರ ಕೈಯಲ್ಲಿತ್ತು. ಕೊನೆಗೊ೦ದು ದಿನ ಅದು ಹಿ೦ದೂಸ್ತಾನ್ ಲೀವರ್ ಲ್ಯಾಕ್ಮೆಯನ್ನು ಖರೀದಿಸುವುದರೊ೦ದಿಗೆ ಅದಕ್ಕಿದ್ದ ಕಾ೦ಪಿಟೀಶನ್ ಖತಮ್ ಆಯ್ತು. ಕಳೆದ 10 ವರ್ಷಗಳಲ್ಲಿ ಇ೦ಥ 36ಕ್ಕಿ೦ತ ಹೆಚ್ಚಿನ ದೊಡ್ಡ ದೊಡ್ಡ ದೇಶೀ ಕ೦ಪನಿಗಳು ವಿದೇಶಿಯರ ಪಾಲಾಗಿವೆ. ವಾಲ್-ಮಾರ್ಟ್ ಒ೦ದರ ವಾರ್ಷಿಕ ವಹಿವಾಟೇ ಸುಮಾರು 22 ಲಕ್ಷ ಕೋಟಿಯಷ್ಟು. ಭಾರತದಲ್ಲಿ ಚಿಲ್ಲರೆ ಮಾರಾಟದ ಅತಿ ದೊಡ್ಡ ಅ೦ಗಡಿಯ ವಹಿವಾಟು ಅಬ್ಬಬ್ಬಾ ಎ೦ದರೆ ಒ೦ದೆರಡು ಕೋಟಿಯಷ್ಟಾಗಬಹುದೇನೋ. ಇವೆರಡರ ನಡುವೆ ಸ್ಪರ್ಧೆ ಎ೦ದರೆ ಬೆನ್ ಜಾನ್ಸನ್ ಅಥವಾ ಮಿಲ್ಕಾ ಸಿ೦ಗರ ಎದುರು ಎರಡೂ ಕಾಲಿಲ್ಲದ ಕು೦ಟನನ್ನು ನಿಲ್ಲಿಸಿ ಓಡು ಎ೦ದ೦ತೆ. ಅಷ್ಟಕ್ಕೂ ಸ್ಪರ್ಧೆ ಯಾರ ನಡುವೆ ಏರ್ಪಡಬೇಕು






ಮೊನ್ನೆ ಪ್ರಣಬ್ ಮುಖರ್ಜಿಯವರು ಸ೦ಕುಚಿತ ಭಾವನೆಯನ್ನು ಬಿಟ್ಟು ಅಮೇರಿಕದ೦ತೆ free economyಯಲ್ಲಿ ಭಾರತ ವಿಶ್ವಾಸ ಬೆಳೆಸಿಕೊಳ್ಳಬೇಕು, ವಿದೇಶೀ ಮಾಲುಗಳು ನಮ್ಮಲ್ಲಿ ಬ೦ದಾಕ್ಷಣ ಭಯಪಡಬೇಕಾದ ಅಗತ್ಯವಿಲ್ಲ. ನಮ್ಮಲ್ಲಿ೦ದಲ್ಲೂ ಬಹಳಷ್ಟು ವಸ್ತುಗಳು ಅಮೇರಿಕಕ್ಕೆ ಹೋಗುತ್ತಿವೆ ಅ೦ದಿದ್ದಾರೆ. ಅಮೇರಿಕದ Anti Dumping Act ಕಾನೂನಿನ ಬಗ್ಗೆ ಅರಿವಿರದಷ್ಟು ನಮ್ಮ ಹಣಕಾಸು ಸಚಿವರು ಮೂರ್ಖರೆ೦ದು ತಿಳಿದಿರಲಿಲ್ಲ. ಭಾರತೀಯ ಸಿದ್ಧಉಡುಪುಗಳು ಹಾಗೂ ಕಾರ್ಪೆಟ್ಟುಗಳಿಗೆ ಅಮೇರಿಕದಲ್ಲಿ ಬಹಳ ಬೇಡಿಕೆಯಿದೆ. ಇದನ್ನು ಸಹಿಸಲಾಗದೇ ಅಮೇರಿಕಾ ಕೆಲ ವರ್ಷಗಳ ಹಿ೦ದೆ ಭಾರತದಿ೦ದ ರಫ್ತಾಗುತ್ತಿದ್ದ ಕಾರ್ಪೆಟ್-ಗಳ ಮೇಲೆ ನಿರ್ಬ೦ಧ ವಿಧಿಸಿತ್ತು. ಅದಕ್ಕೆ ಕೊಟ್ಟ ಕಾರಣ ಭಾರತೀಯ ಕಾರ್ಪೆಟ್ ತಯಾರಿಕೆಯಲ್ಲಿ ಬಾಲಕಾರ್ಮಿಕರ ಬಳಕೆಯಾಗುತ್ತಿದೆ ಎ೦ದು. ಅಮೇರಿಕದಲ್ಲಿ 14 ವರ್ಷದ ಮಗು ಕೆಲಸ ಮಾಡಿದರೆ ಆತ economically self reliant ಎ೦ಬ ಬಿರುದು. ಅದೇ ನಮ್ಮ ದೇಶದಲ್ಲಿ ಬಿಡುವಿನ ಸಮಯದಲ್ಲಿ ಮನೆಯಲ್ಲಿ ತ೦ದೆತಾಯಿಯರೊಡನೆ ಮಕ್ಕಳು ಬಟ್ಟೆ ನೇಯ್ದರೆ ಅದು ಬಾಲಕಾರ್ಮಿಕ ಪದ್ಧತಿ. ಒ೦ದು ವರದಿಯ ಪ್ರಕಾರ ಅಮೇರಿಕದಲ್ಲಿರುವ ಬಾಲ ಕಾರ್ಮಿಕರ ಸ೦ಖ್ಯೆ 20 ಮಿಲಿಯನ್ನಿಗೂ ಅಧಿಕ. ಅಮೇರಿಕ ಅದೆಷ್ಟು ಹೆದರುಪುಕ್ಕಲ ದೇಶವೆ೦ಬುದಕ್ಕೆ ಅದು ತನ್ನ ದೇಶೀ ಕ೦ಪನಿಗಳನ್ನು  ರಕ್ಷಿಸಲು ತರುತ್ತಿರುವ ದಿನಕ್ಕೊ೦ದು ಬಗೆಯ ನೀತಿಗಳೇ ಸಾಕ್ಷಿ. ವಿದೇಶೀ ಕ೦ಪನಿಗಳಿ೦ದ ತನ್ನ ದೇಶೀ ಮಾರುಕಟ್ಟೆಯನ್ನು ರಕ್ಷಿಸಿಕೊಳ್ಳಲು ಅಮೇರಿಕ Buy American Act ಜಾರಿಗೆ ತರಬಹುದಾದರೆ ಭಾರತ ಸರ್ಕಾರಕ್ಕೆ Buy Indian Act ಜಾರಿಗೆ ತರಲು ಏನು ದೊಡ್ರೋಗ? ಮಾತ್ರವಲ್ಲ, IT ಕ್ಷೇತ್ರದಲ್ಲೂ ಕಡಿಮೆ ಸ೦ಬಳಕ್ಕೆ ದುಡಿಯಲು ಬರುತ್ತಿರುವ ನಮ್ಮ ದೇಶದ ಮರ್ಯಾದೆ ಬಿಟ್ಟ ಇ೦ಜಿನಿಯರುಗಳ ಮೇಲೂ ಅಮೇರಿಕಕ್ಕೆ ಸಿಕ್ಕಾಪಟ್ಟೆ ಸಿಟ್ಟಿದೆ. ಓಬಾಮಾ ಕೂಡ ಅಧಿಕಾರಕ್ಕೆ ಬ೦ದ ಕೂಡಲೇ ಮಾಡಿದ ಮೊದಲ ಕೆಲಸವೇ ವಲಸೆ ನೀತಿಯನ್ನು ಕಠಿಣಗೊಳಿಸಿದ್ದು. ಅಮೇರಿಕವೊ೦ದೇ ಏನು, ಐರೋಪ್ಯ ದೇಶಗಳಲ್ಲೂ ಕಡಿಮೆ ವೇತನಕ್ಕೆ ದುಡಿಯುವ ಏಷ್ಯಾದ ಜನರ ಬಗ್ಗೆ ಇವರು ತಮ್ಮ ಉದ್ಯೋಗವನ್ನು ಕಿತ್ತಿಕೊ೦ಡರೆ೦ಬ ಭಾವನೆ ಬಲವಾಗಿದೆ. ಏಷ್ಯಾ ವಿರೋಧಿ ರಾಜಕಾರಣದಲ್ಲಿ ಬಹಳ ದೊಡ್ಡ ಹೆಸರು ಮಾರಿಯಾ ಲಪೆಯದ್ದು. ಈತ ಕಳೆದ ಬಾರಿ ಫ್ರಾನ್ಸಿನ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ. ಈತನೇನಾದರೂ ಅಧಿಕಾರಕ್ಕೆ ಬ೦ದಿದ್ದರೆ ಇಷ್ಟರೊಳಗಾಗಲೇ ಭಾರತೀಯರನ್ನು ಫ್ರಾನ್ಸಿನಿ೦ದ ಒದ್ದು ಒದ್ದು ಓಡಿಸಲಾಗಿತ್ತಿತ್ತು. ನ್ಯೂಝಿಲ್ಯಾ೦ಡಿನಿ೦ದ ಕಳೆದ 10 ವರ್ಷಗಳಲ್ಲಿ ಒ೦ದೂವರೆ ಲಕ್ಷ ಭಾರತೀಯರನ್ನು ಓಡಿಸಲಾಗಿದೆ. ಆಸ್ಟ್ರೇಲಿಯಾದಲ್ಲಿ ಕಲಿಯಲು ಹೋದ ವಿದ್ಯಾರ್ಥಿಗಳನ್ನೂ ಬಿಡುತ್ತಿಲ್ಲ. ಹೊರಗಿನವರಿಗೆ ಹೆದರಿ ಬಾಗಿಲು ಮುಚ್ಚುತ್ತಿರುವ ಬುದ್ಧಿವ೦ತ ದೇಶಗಳು ಒ೦ದೆಡೆಯಾದರೆ ಇನ್ನೊ೦ದೆಡೆ ದಿಡ್ಡಿ ಬಾಗಿಲು ತೆರೆದು ಊರು ಸೂರೆ ಹೋಗುವುದನ್ನೇ ಕಾಯುತ್ತಿರುವೆ ನಾವು. ಉದ್ಧಾರ ಆದಹ೦ಗೇ ಬಿಡಿ.


Thursday, December 1, 2011

ಗ್ಲೋಬಲೈಸೇಶನ್ನೂ, ರಿಸೇಶನ್ನೂ -2

ಉದಾರೀಕರಣವನ್ನು ಜಾರಿಗೆ ತರಬೇಕಾದರೆ ಮೊದಲು ವಿಶ್ವ ಬ್ಯಾಂಕಿನ ಸುಧಾರಣಾ ನೀತಿಗಳನ್ನು ಜಾರಿಗೆ ತರಬೇಕು ಎಂದು ಹಿಂದೊಮ್ಮೆ ಲೇಖನದಲ್ಲಿ ಹೇಳಿದ್ದೇನಷ್ಟೆ. 90ರ ದಶಕದಲ್ಲಿ ವಿಶ್ವ ಬ್ಯಾಂಕಿನ ಸುಧಾರಣೆಗಳನ್ನು ಅತ್ಯಂತ ವೇಗವಾಗಿ ಜಾರಿಗೆ ತಂದಿದ್ದು ದ.ಕೋರಿಯ. ವಿಶ್ವ ಬ್ಯಾಂಕ್, IMF ಅಂದಂತೆ ತನ್ನ ಮಾರುಕಟ್ಟೆಯನ್ನು ಅಮೇರಿಕನ್ ಮತ್ತು ಯುರೋಪಿಯನ್ ಕಂಪನಿಗಳಿಗೆ ಸಂಪೂರ್ಣವಾಗಿ ತೆರೆಯಿತು. ಮಾತ್ರವಲ್ಲ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನೂ ಕೂಡ ಖಾಸಗೀಕರಣ ಮಾಡಿತು. ಸ್ಪರ್ಧೆಯನ್ನು ಹೆಚ್ಚಿಸಲು ತನ್ನ ದೇಶೀಯ ಕೈಗಾರಿಕೆಗಳಿಗೆ ನೀಡಲಾಗುವ ರಕ್ಷಣೆಯನ್ನು ಕಡಿಮೆ ಮಾಡಿತು. ಅಷ್ಟೇ ಅಲ್ಲದೇ ಸಿಯೋಲಿನ ಸ್ಟಾಕ್ ಎಕ್ಸ್-ಚೇಂಜನ್ನು ಸಂಪೂರ್ಣವಾಗಿ ಅಮೇರಿಕದ ಕೈಗೊಪ್ಪಿಸಿತು. ಕೋರಿಯದ ಈ ಸುಧಾರಣೆಗಳಿಂದ ಉಬ್ಬಿ ಹೋದ ಆಗಿನ ಭಾರತದ ಅರ್ಥಮಂತ್ರಿ ಮನಮೋಹನಸಿಂಗ್ ಪಾರ್ಲಿಮೆಂಟಿನಲ್ಲಿ ಕೊರಿಯಾವನ್ನು ಯದ್ವಾತದ್ವಾ ಹೊಗಳಿದ್ದಲ್ಲದೇ ಕೊರಿಯಾಕ್ಕೆಏಶಿಯನ್ ಟೈಗರ್ಎಂಬ ಬಿರುದನ್ನೂ ದಯಪಾಲಿಸಿದರು. ನಂತರ ನಡೆದಿದ್ದೇನು?.... ಇದಾಗಿ ಕೇವಲ ಎಂಟೇ ವರ್ಷಗಳಲ್ಲಿ ವಿಶ್ವ ಬ್ಯಾಂಕಿನ ನೀತಿಗಳಿಂದ ತಾವು ಸಂಪೂರ್ಣ ದೀವಾಳಿಯಾಗಿರುವುದಾಗಿ ಕೊರಿಯಾದ ಪ್ರಧಾನಿ ಕಿಮ್ ಇಲ್ ಸೂನ್ ಅಲ್ಲಿನ ಪಾರ್ಲಿಮೆಂಟಿನಲ್ಲಿ ಘೋಷಿಸಿ, World Economic Forumನ ಸಭೆಯಲ್ಲಿ ತಮ್ಮ ದೇಶದ ಎಲ್ಲಾ ಸಾಲಗಳನ್ನು ಮನ್ನಿಸಬೇಕಾಗಿ ಅಲ್ಲಿನ ವಿತ್ತೀಯ ಸಂಸ್ಥೆಗಳನ್ನು ಕೇಳಿಕೊಳ್ಳಬೇಕಾಯ್ತು. ಇದಾದ ಕೆಲ ವರ್ಷಗಳಲ್ಲೇ ಸಾರ್ವಜನಿಕ ಸಹಭಾಗಿತ್ವದ ಬಹುತೇಕ ಕಂಪನಿಗಳು ಅಮೇರಿಕದ ವಶವಾದವು. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಹುಂಡೈ. ಕೊರಿಯಾದ ಹೆಮ್ಮೆಯ ಕಂಪನಿಯಾದ ಇದು ಈಗ ಅಮೇರಿಕದ ಜನರಲ್ ಮೋಟಾರ್ಸ್-ನ ಕೈಯಲ್ಲಿದೆ.
ಕೊರಿಯಾದ ಕತೆ ಹೀಗಾದರೆ ಇಂಡೋನೇಶಿಯಾದ್ದು ಮತ್ತೊಂದು ಕತೆ. 3೦ ವರ್ಷಗಳಿಗಿಂತ ಹೆಚ್ಚು ಕಾಲ ಇಂಡೋನೇಶಿಯಾದ ಪ್ರಧಾನಿಯಾಗಿದ್ದವನು ಸುಹೃತ್ ಸುಕರ್ಣ. 9೦ರ ದಶಕದಲ್ಲಿ ಉದಾರಿಕರಣದ ಮುನ್ನ ಇಂಡೋನೇಶಿಯಾದ 40 ರುಪಯ್ಯ 1 ಡಾಲರಿಗೆ ಸಮನಾಗಿತ್ತು. ವಿಶ್ವಬ್ಯಾಂಕಿನ ನೀತಿಗಳಿಗೆ ತಲೆದೂಗಿ ತನ್ನ ಕರೆನ್ಸಿಯನ್ನು ಅಪಮೌಲ್ಯೀಕರಣಗೊಳಿಸಿದ ನಂತರ 1 ಡಾಲರಿನ ಮೌಲ್ಯ 17000 ರುಪಯ್ಯಗಳಿಗೇರಿತು. ಥೈಲ್ಯಾಂಡಿನಂಥ ನಗರ ಕೇಂದ್ರೀಕೃತ ಪುಟ್ಟ ದೇಶದ ಕಥೆಯೂ ತೀರ ಭಿನ್ನವೇನಲ್ಲ. ವಿದೇಶಿ ಸಾಲ ವಿಪರೀತವಾಗಿ ಬೆಳೆದಿತ್ತು. ಅದನ್ನು ತೀರಿಸುವಷ್ಟು ದೇಶದ income ಬೆಳೆದಿರಲಿಲ್ಲ. ಹಣ ಬರುವ ಯಾವ ಹೊಸ ಮಾರ್ಗಗಳೂ ಇರಲಿಲ್ಲ. ಅದಕ್ಕೆ ಅಲ್ಲಿನ ಪ್ರಧಾನಿ ಕಂಡುಕೊಂಡ ಅದ್ಭುತ ಐಡಿಯಾವೆಂದರೆ ವೈಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿ ತೆರಿಗೆ ವಿಧಿಸಿದ್ದು. ಆ ತೆರಿಗೆಯಿಂದ ಸಂಗ್ರಹಿಸಿದ್ದ ಮೊತ್ತದಿಂದ ಸಾಲದ ಬಡ್ಡಿಗೆ ಹಣ ಹೊಂದಿಸಿದ್ದು.
ಭಾರತದಲ್ಲೇ ನೋಡೀ. ಕಳೆದ ವರ್ಷ 1 ಡಾಲರ್ ಗಳಿಸಲು 45 ರೂ.ಗಳ ವಸ್ತುಗಳನ್ನು ರಫ್ತು ಮಾಡಬೇಕಿತ್ತು. ಈಗ ಅದೇ 1 ಡಾಲರ್ ಗಳಿಸಲು 53 ರೂಪಾಯಿ ಬೇಕು. ಪರಿಣಾಮವಾಗಿ ರಫ್ತಿನ ಪ್ರಮಾಣ ಹೆಚ್ಚುತ್ತದೆಯೇ ಹೊರತು ಮೌಲ್ಯವಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ 8 ರೂ ಹೆಚ್ಚಾಗಿ ಖರ್ಚಾಗುತ್ತಿದೆ.. ಜೊತೆಗೆ ಆಮದಿನ ಶುಲ್ಕ ಜಾಸ್ತಿಯಾಯ್ತು. Trade deficit ( ರಫ್ತಿನ ಮೌಲ್ಯಕ್ಕಿಂತ ಆಮದಿನ ಮೌಲ್ಯ ಹೆಚ್ಚಾಗುವ ಸ್ಥಿತಿ) ನಿರಂತರವಾಗಿ ಹೆಚ್ಚಾಗುತ್ತಲೇ ಇದೆ. ಜಾಗತೀಕರಣಕ್ಕೂ ಮುಂಚೆ 1991ರಲ್ಲಿ ಭಾರತದ Trade deficit 2 ಸಾವಿರ ಕೋಟಿ ಆಗಿತ್ತು. ಈಗ ಅದು 25 ಸಾವಿರ ಕೋಟಿಯನ್ನು ಮೀರಿದೆ. ಇದರೊಂದಿಗೆ Wall-martನಂಥ ಹೈಪರ್-ಮಾರ್ಕೆಟುಗಳಿಗೆ ಭಾರತೀಯ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶೀ ಬಂಡವಾಳ ಹೂಡಲು ಕೇಂದ್ರ ಸರ್ಕಾರ ಸಮ್ಮತಿಸಿ ಬರೋಬ್ಬರಿ 5 ಕೋಟಿ ಚಿಲ್ಲರೆ ಮಾರಾಟಗಾರರನ್ನು ಬೀದಿ ಪಾಲಾಗಿಸಲು ಸ್ಕೆಚ್ ಹಾಕಿದೆ. ಅಷ್ಟಕ್ಕೂ ವಾಲ್-ಮಾರ್ಟ್ ಭಾರತಕ್ಕೆ ಬಂದ್ರೆ ಏನಾಗತ್ತೆ ಗೊತ್ತಾ....?

Wednesday, November 16, 2011

ಮಳಯಾಳದ ಮಣಿಚಿತ್ರತ್ತಾಳ್ ಮತ್ತು ನನ್ನ ಕಾಡುವ ನಾಗವಲ್ಲಿ

ಮಣಿಚಿತ್ರತ್ತಾಳ್

ಕನ್ನಡದಲ್ಲಿ ’ಆಪ್ತಮಿತ್ರ’ ಚಿತ್ರವನ್ನು ನೋಡದವರಿಲ್ಲ. ಇದು ಸುಮಾರು ೧೫ ವರ್ಷಗಳ ಹಿಂದೆ ಮಲಯಾಳಂನಲ್ಲಿ ತೆರೆಕಂಡ ’ಮಣಿಚಿತ್ರತ್ತಾಳ್’ ಎಂಬ ಚಿತ್ರದ ರಿಮೇಕ್. ಮೋಹನಲಾಲ್, ಶೋಭನಾ ನಟಿಸಿದ ಈ ಚಿತ್ರ ಹಲವು ರಾಷ್ಟ್ರಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಮಾತ್ರವಲ್ಲ ಅತ್ಯಂತ ಚರ್ಚಾಸ್ಪದ ಮತ್ತು ಎವರ್-ಗ್ರೀನ್ ಚಿತ್ರವಾಗಿ ಇಂದಿಗೂ ನೆನಪಿನಲ್ಲುಳಿದಿದೆ. ಇದಕ್ಕೆ ಸಾಕ್ಷಿಯೆಂಬಂತೆ ನಂತರ ಕನ್ನಡದಲ್ಲಿ ’ಆಪ್ತಮಿತ್ರ’ನಾಗಿ, ತೆಲುಗು ಮತ್ತು ತಮಿಳುಗಳಲ್ಲಿ ’ಚಂದ್ರಮುಖಿ’ಯಾಗಿ, ಬಂಗಾಲಿಯಲ್ಲಿ ’ರಾಜಮಹಲ್’, ಹಿಂದಿಯಲ್ಲಿ ’ಭೂಲ್-ಭುಲೈಯ್ಯಾ’ ಆಗಿ ಹೀಗೆ ಭಾರತದ ಬಹುತೇಕ ಭಾಷೆಗಳಲ್ಲಿ ಈ ಚಿತ್ರ ಮರುನಿರ್ಮಾಣಗೊಂಡಿದೆ. ನಾನು ಇವಿಷ್ಟೂ ಚಿತ್ರಗಳನ್ನು ನೋಡಿದ್ದೇನೆ. ಎಲ್ಲ ಚಿತ್ರಗಳೂ ಚೆನ್ನಾಗಿದ್ದರೂ ಯಾವುದೂ ಕೂಡ ಮಲಯಾಳಂನ ’ಮಣಿಚಿತ್ರತಾಳ್’ನ ತೂಕವನ್ನು ಮೀರುವುದಿಲ್ಲ. ಇದು ಇಂದಿಗೂ ಮಲಯಾಳಂನಲ್ಲಿ ಇತಿ ದೊಡ್ಡ ಹಿಟ್ ಚಿತ್ರಗಳಲ್ಲೊಂದೆಂದು ಪರಿಗಣಿಸಲ್ಪಡುತ್ತದೆ. ಫಾಸಿಲ್ ನಿರ್ದೇಶನದ ಈ ಚಿತ್ರಕ್ಕೆ ಕಥೆ ಬರೆದವರು ಮಧುಮುತ್ತನ್. ಪ್ರಸಿದ್ಧ ನಿರ್ದೇಶಕರಾದ ಬಾಡಿಗಾರ್ಡ್ ಖ್ಯಾತಿಯ ಸಿದ್ಧಿಕಿ, ಹಿಸ್ ಹೈನೆಸ್ ಅಬ್ದುಲ್ಲ ಖ್ಯಾತಿಯ ಸಿಬಿ ಮಲಾಯಿಲ್, ಹಿಂದಿಯ ಪ್ರಿಯದರ್ಶನ್ ಇವರೆಲ್ಲ ಈ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ. ೧೯ನೇ ಶತಮಾನದಲ್ಲಿ ತ್ರಾವೆಂಕೋರ್ ರಾಜಮನೆತನದ ’ಆಲುಮುತ್ತಿಲ್ ತರವಾಡು’ವಿನಲ್ಲಿ(ಅರಮನೆ) ನಡೆದಿತ್ತು ಎನ್ನಲಾದ ನೈಜ ಘಟನೆಯನ್ನಾಧರಿಸಿ ಚಿತ್ರ ತಯಾರಿಸಲಾಗಿದೆ ಎಂದು ಕಥಾರಚನೆಕಾರ ಮಧುಮುತ್ತನ್ ಮತ್ತು ನಿರ್ದೇಶಕ ಫಾಸಿಲ್ ಹೇಳಿದ್ದಾರೆ. ಅಲ್ಲದೇ ಹಾಗೆಯೇ ದೊಡ್ಡಮಟ್ಟಿನಲ್ಲಿ ಪ್ರಚಾರ ಮಾಡಲಾಯ್ತು. ಚಿತ್ರದ ಕಥೆ ನಿಮಗೆಲ್ಲ ತಿಳಿದಿದೆ. ಆದರೂ ಮೂಲ ಕಥೆಯನ್ನು ಮತ್ತೊಮ್ಮೆ ಹೇಳುತ್ತೇನೆ. ೧೯ನೇ ಶತಮಾನದಲ್ಲಿ ’ಆಲುಮುತ್ತಿಲ್ ತರವಾಡು’ವಿನಲ್ಲಿ ಶಂಕರನ್ ತಂಪಿ ಎಂಬ ರಾಜನಿದ್ದ. ಒಮ್ಮೆ ತಂಜಾವೂರು ಮೂಲದ ನಾಗವಲ್ಲಿ ಎಂಬ ಪ್ರಸಿದ್ಧ ಭರತನಾಟ್ಯ ನರ್ತಕಿಯನ್ನು ರಾಜ ಬಲವಂತವಾಗಿ ಗೃಹಬಂಧನದಲ್ಲಿರಿಸುತ್ತಾನೆ. ಅವಳನ್ನು ರಕ್ಷಿಸಲು ಅವಳ ಪ್ರಿಯತಮ ರಾಮನಾಥನ್ ಎಂಬವನು ಪ್ರಯತ್ನಪಡುತ್ತಾನೆ. ಇದನ್ನು ತಿಳಿದ ರಾಜ ಸಿಟ್ಟಿನಿಂದ ನಾಗವಲ್ಲಿಯನ್ನು ಅದೇ ಮನೆಯಲ್ಲಿ ದುರ್ಗಾಷ್ಟಮಿಯಂದು ಕೊಲೆ ಮಾಡುತ್ತಾನೆ. ಕೊಲೆಗೆ ಸೇಡು ತೀರಿಸಿಕೊಳ್ಳಲು ರಕ್ತಪಿಪಾಸು ನಾಗವಲ್ಲಿಯ ಆತ್ಮ ದುರ್ಗಾಷ್ಟಮಿಯಂದು ರಾಜಮನೆತನದವರನ್ನು ಕೊಲ್ಲಲು ತಿರುಗಿ ಬರುತ್ತದೆಂದು ಜ್ಯೋತಿಷಿಗಳಿಂದ ತಿಳಿದುಕೊಂಡ ರಾಜ ಮಂತ್ರವಾದಿಗಳ ನೆರವಿನೊಂದಿಗೆ ನಾಗವಲ್ಲಿಯ ಆತ್ಮವನ್ನು ಅರಮನೆಯ ದಕ್ಷಿಣ ದಿಕ್ಕಿನ(ತೆಕ್ಕಿನಿ) ಕೋಣೆಯೊಂದರಲ್ಲಿ ದಿಗ್ಬಂಧನದಲ್ಲಿರಿಸುತ್ತಾನೆ. ಕೆಲ ವರ್ಷಗಳ ನಂತರ ರಾಜ ಶಂಕರನ್ ತಂಪಿಯೂ ನಿಗೂಢವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇವನ ಆತ್ಮವನ್ನೂ ಅದೇ ತೆಕ್ಕಿನಿಯಲ್ಲಿ ದಿಗ್ಬಂಧನಗೊಳಿಸಲಾಗುತ್ತದೆ. ಈ ದಿಗ್ಬಂಧನಕ್ಕೆ ಹಾಕಲಾದ ಬೀಗಮುದ್ರೆಯೇ ’ಮಣಿಚ್ಚಿತ್ರತಾಳ್’(ಮಣಿಚ್ಚಿತ್ರ=Ornate, ತಾಳ್=Lock)
 

ಆಲುಮುಟ್ಟಿಲ್ ತರವಾಡು
ತಮ್ಮ ಪೂರ್ವಿಕರ ಈ ಮನೆಗೆ ಬಂದು ವಾಸಮಾಡುವ ಗಂಗಾ ಮತ್ತು ನಕುಲನ್ ದಂಪತಿಗಳಿಗೆ(ಕನ್ನಡದಲ್ಲಿ ಸೌಂದರ್ಯಾ, ರಮೇಶ್) ಕಾಟ ಕೊಡುವ ನಾಗವಲ್ಲಿ, ನಾಗವಲ್ಲಿಯಿಂದ ಗಂಗಾಳನ್ನು ಬಚಾವ್ ಮಾಡುವ ’psychiatrist’ (ಮಲಯಾಳಂನಲ್ಲಿ ಡಾ. ಸನ್ನಿ ಜೊಸೇಫ್ ಪಾತ್ರದಲ್ಲಿ ಮೋಹನಲಾಲ್, ಕನ್ನಡದಲ್ಲಿ ಡಾ. ವಿಜಯ್ ಪಾತ್ರದಲ್ಲಿ ವಿಷ್ಣುವರ್ಧನ್), ಅದಕ್ಕೆ ಸಹಾಯ ಮಾಡುವ ’ತಾಂತ್ರಿಕ’(ಮಲಯಾಳಂನಲ್ಲಿ ಬ್ರಹ್ಮದತ್ತ ನಂಬೂದಿರಿಪಾಡ್ ಆಗಿ ತಿಲಕನ್, ಕನ್ನಡದಲ್ಲಿ ರಾಮಚಂದ್ರಶರ್ಮನಾಗಿ ಅವಿನಾಶ್) ಇವೆಲ್ಲ ಕತೆಯನ್ನು ನೀವು ನೋಡಿಯೇ ಇರುತ್ತೀರಿ.




ತಿರುವಾಂಕೂರು ರಾಜಮನೆತನಗಳ ಬಗ್ಗೆ ಇರುವ ಅಸಂಖ್ಯ ದಂತಕಥೆಗಳಲ್ಲಿ ನಾಗವಲ್ಲಿಯ ಕಥೆ ಕೂಡ ಒಂದು. ಕೇರಳದ ಒಡನಾಟ ನನಗೆ ಸ್ವಲ್ಪ ಜಾಸ್ತಿಯೇ ಆದ್ದರಿಂದ ನಾನೂ ಕೂಡ ಇಂಥ ಕೆಲ ಕಥೆಗಳನ್ನು ಕೇಳಿಯೂ ಇದ್ದೇನೆ. ಈಗಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯಿಲ್ ಸಮೀಪದ ಪದ್ಮನಾಭಪುರ ತ್ರಾವೆಂಕೋರ್ ರಾಜಮನೆತನದ ಮೊದಲ ರಾಜಧಾನಿ. ಇದು ಕನ್ಯಾಕುಮಾರಿ ಜಿಲ್ಲೆಯ ನಾಗರ್ಕೋಯಿಲ್-ನಿಂದ ಸುಮಾರು ೨0ಕಿ.ಮಿ ಮತ್ತು ತಿರುವನಂತಪುರದಿಂದ ೫0ಕಿ.ಮಿ ದೂರದಲ್ಲಿದೆ. ನಾಗವಲ್ಲಿಯ ’ಆಲುಮುಟ್ಟಿಲ್ ತರವಾಡು’ ಕೂಡ ಇಲ್ಲೇ ಇದೆ. ಪದ್ಮನಾಭಪುರದಲ್ಲಿದ್ದ ರಾಜಧಾನಿ ೧೯ನೇ ಶತಮಾನದ ಪ್ರಾರಂಭದಲ್ಲಿ ಅಲ್ಲಿಂದ ತಿರುವನಂತಪುರಂಗೆ ಸ್ಥಳಾಂತರಗೊಡಿತು. ತದನಂತರ ಪದ್ಮನಾಭಪುರ ತನ್ನ ಹಳೆಯ ವೈಭವವನ್ನೆಲ್ಲ ಕಳೆದುಕೊಂಡಿತು. ಕಥೆಗಳ ಪ್ರಕಾರ ರಾಜವಂಶಸ್ಥರು ಅರಮನೆಯನ್ನು ಸ್ಥಾಳಾಂತರಿಸಿಲು ನಾಗವಲ್ಲಿಯ ಕಾಟವೂ ಒಂದು ಕಾರಣ. ಆದರೆ ಇತಿಹಾಸವನ್ನು ಕೂಲಂಕುಶವಾಗಿ ಗಮನಿಸಿದಾಗ ಅದಕ್ಕೆ ಅಂಥ ಆಧಾರಗಳೇನೂ ಸಿಗುವುದಿಲ್ಲ. ನಾಗವಲ್ಲಿಗಿಂತಲೂ ಅನಂತಪದ್ಮನಾಭ ಮಂದಿರಕ್ಕೆ ಹತ್ತಿರವಾಗುವ ಉದ್ದೇಶದಿಂದಲೇ ಅರಮನೆಯನ್ನು ಸ್ಥಳಾಂತರಿಸಿರುವ ಸಾಧ್ಯತೆಗಳೇ ಹೆಚ್ಚು.  ಅಷ್ಟಕ್ಕೂ ತ್ರಾವೆಂಕೋರಿನ ಅಧಿಕೃತ ಇತಿಹಾಸವನ್ನು ಗಮನಿಸಿದರೆ ನಾಗವಲ್ಲಿ ಹೆಸರಿನ ಯಾವ ರಾಜನರ್ತಕಿಯ ಉಲ್ಲೇಖವಾಗಲೀ ಅವಳು ಕೊಲೆಯಾಗಿ ದೆವ್ವವಾದ ಉಲ್ಲೇಖವಾಗಲೀ ಇಲ್ಲ. ಹಾಂ.. ಸುಗಂಧವಲ್ಲಿ ಎಂಬ ರಾಜನರ್ತಕಿಯ ಉಲ್ಲೇಖವಿದೆ. ಈಕೆಯೂ ತಂಜಾವೂರು ಮೂಲದವಳು. ಕಾರಣಾಂತರಗಳಿಂದ ಈಕೆಯನ್ನು ರಾಜ್ಯದಿಂದ ಗಡೀಪಾರು ಮಾಡಲಾಯ್ತಂತೆ ಮತ್ತು ಈಕೆ ಆತ್ಮಹತ್ಯೆ ಮಾಡಿಕೊಂಡಳಂತೆ. ಕೆಲ ವರ್ಷಗಳ ನಂತರ ರಾಜನೂ ಕೂಡ ಇವಳ ನೆನಪಿನಲ್ಲೇ ನಿಗೂಢವಾಗಿ ಮೃತಪಟ್ಟ. ಹೆಚ್ಚಿನ ಮಾಹಿತಿಗಾಗಿ ”ತಿರುವನಂತಪುರತ್ತಿಂಟೆ ಐತಿಹಾಸಮ್” ಪುಸ್ತಕ ನೋಡಿ.
 ನಾಗವಲ್ಲಿ ನನ್ನನ್ನು ಬಹಳ ದಿನಗಳಿಂದ ಕಾಡುತ್ತಿದ್ದಳು( ಪುಣ್ಯ, ಅವಳ ಆತ್ಮವಲ್ಲ!!). ಮೊನ್ನೆ ಒಂದು ವಾರ ಕನ್ಯಾಕುಮಾರಿ, ನಾಗರಕೋಯಿಲ್ ಮತ್ತು ತಿರುವನಂತಪುರಂನ ಸುತ್ತಮುತ್ತಲಲ್ಲೇ ನಾನಿದ್ದರೂ ಒಮ್ಮೆಯೂ ತರವಾಡಿಗೆ ಭೇಟಿ ಕೊಡಲು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ನಾಗವಲ್ಲಿಯನ್ನು ತುಂಬ ಮಿಸ್ ಮಾಡಿಕೊಂಡಿದ್ದೇನೆ. ಮಾತ್ರವಲ್ಲ ಅವಳಿನ್ನೂ ಕೆಲ ಕಾಲ ನನ್ನನ್ನು ಕಾಡುತ್ತಲಿರಬಹುದು.