Pages

Tuesday, April 22, 2014

ಯಾರೀ ವಿಕ್ರಮಾದಿತ್ಯ?

     


             
        ವಿಕ್ರಮಾದಿತ್ಯನ ಹೆಸರು ಕೇಳದ ಭಾರತೀಯರ್ಯಾರಿದ್ದಾರೆ ಹೇಳಿ! ಬರೀ ಭಾರತೀಯರು ಮಾತ್ರವಲ್ಲ ನೇಪಾಳದವರಿಗೂ ವಿಕ್ರಮಾದಿತ್ಯ ಚಿರಪರಿಚಿತ. ಆತನಿಂದ ಶುರುವಾದ ವಿಕ್ರಮಶಕೆ ನೇಪಾಳದ ಅಧಿಕೃತ ರಾಷ್ಟ್ರೀಯ ಪಂಚಾಂಗ. ಕಾಬಾ ಮೂಲತಃ ವಿಕ್ರಮಾದಿತ್ಯ ನಿರ್ಮಿಸಿದ ಶಿವಾಲಯವೆನ್ನುವವರೂ ಇದ್ದಾರೆ(ಹೆಚ್ಚಿನ ಮಾಹಿತಿಗಾಗಿ ಪಿ.ಎನ್.ಓಕ್‌ರ ಕೃತಿಗಳನ್ನು ಗಮನಿಸಿ). ಆದರೂ ಅಸಲು ಈ ವಿಕ್ರಮಾದಿತ್ಯ ಯಾರು ಎಂಬ ಬಗ್ಗೆ ಇತಿಹಾಸಕಾರರಿಗೇ ಸರಿಯಾಗಿ ಗೊತ್ತಿಲ್ಲ. ಹೆಚ್ಚಿನವರು ಗುಪ್ತರ ಎರಡನೇ ಚಂದ್ರಗುಪ್ತನನ್ನೇ ವಿಕ್ರಮಾದಿತ್ಯನೆಂದರೆ ಇನ್ನು ಕೆಲವರು ಮಾಳವದ ಯಶೋವರ್ಮನನ್ನೇ ವಿಕ್ರಮಾದಿತ್ಯನೆಂದು ತಿಳಿದಿದ್ದಾರೆ. ಇತಿಹಾಸದಲ್ಲೂ ಆ ಹೆಸರಿನ, ಬಿರುದಿನ ಹಲವಾರು ರಾಜರು ಆಗಿಹೋದ್ದಿದೆ. ಆತನೊಬ್ಬ ಕಾಲ್ಪನಿಕ ವ್ಯಕ್ತಿ ಎನ್ನುವ ಇತಿಹಾಸಕಾರರ ಸಂಖ್ಯೆ ದೊಡ್ಡದೇ.
        ವಿಕ್ರಮಾದಿತ್ಯ ಯಾರೆಂದು ತಿಳಿಯುವ ಮೊದಲು ಭಾರತೀಯ ಇತಿಹಾಸದ ಪಿತಾಮಹನೆಂದೇ ಕರೆಯಲ್ಪಡುವ ಪ್ರಸಿದ್ಧ ಬ್ರಿಟಿಷ್ ಇತಿಹಾಸಕಾರ ವಿ.ಎ.ಸ್ಮಿತ್‌ ಮಹಾಶಯನ ಮಾತುಗಳನ್ನು ಕೇಳಿ “The popular belief which associates the Vikrama era of 58-57 BCE with a Raja, Vikramaditya or Bikram of Ujjain at that date is erroneous. There was no such person then. It is however true that probably it was invented by the astronomers of Ujjain. The first name of it was Malwa era. The term Vikramakala used in the later times must refer to one or other of the many kings with the title of Vikramaditya or Vikrama, who was believed to have established the era. The king referred to may be presumed to be Chandragupta II. Vikramaditya who conquered Ujjain about CE 390.“ (the Oxford Students’ History of India P.P 80, 81 by V.A Smith Ed 1915)
"ಕ್ರಿ.ಪೂ 57ರಲ್ಲಿ ವಿಕ್ರಮ ಶಕೆಯನ್ನು ಶುರುಮಾಡಿದನೆನ್ನಲಾಗುವ ವಿಕ್ರಮಾದಿತ್ಯ ಕಾಲವೇ ಅಸ್ಪಷ್ಟ. ಆ ಹೆಸರಿನ ವ್ಯಕ್ತಿಯೇ ಇಲ್ಲ. ಈ ಶಕೆ ಶುರುವಾಗಿದ್ದು ಉಜ್ಜೈನಿಯ ಕೆಲ ಜ್ಯೋತಿಷಿಗಳಿಂದಿರಬಹುದು. ಮಾಳವ ಶಕೆಗೇ ಯಾವುದೋ ಒಬ್ಬ ವಿಕ್ರಮಾದಿತ್ಯನೆಂಬ ರಾಜ ತನ್ನ ಹೆಸರಿಟ್ಟುಕೊಂಡ. ಆ ವಿಕ್ರಮಾದಿತ್ಯ ಬಹುಶಃ ಕ್ರಿ.ಶ 390ರಲ್ಲಿ ಉಜ್ಜೈನಿಯನ್ನಾಕ್ರಮಿಸಿದ್ದ ಗುಪ್ತರ 2ನೇ ಚಂದ್ರಗುಪ್ತನಿರಬಹುದು."
     ನೋಡ್ರಪ್ಪಾ. ಭಾರತೀಯರ ಜನಮಾನಸದಲ್ಲಿ ಬೆರೆತುಹೋದ ಪ್ರಸಿದ್ಧ ವಿಕ್ರಮ ಶಕೆಯ ಶಕಪುರುಷ, ವೇತಾಳಪಂಚವಿಂಶತಿ(ವಿಕ್ರಮ ಬೇತಾಳವೆಂಬ ಹೆಸರಿನಿಂದ ಪ್ರಖ್ಯಾತವಾದ ಬೇತಾಳ ಹೇಳಿದ ಇಪ್ಪತ್ತೈದು ಕಥೆಗಳು), ಸಿಂಹಾಸನ ದ್ವಾತ್ರಿಂಶತ್‌(ಸಿಂಹಾಸನದ ಗೊಂಬೆ ಹೇಳಿದ ಮೂವತ್ತೆರಡು ಕಥೆಗಳು)ನಂಥ ಕಥೆಗಳ ನಾಯಕ, ಮೇಲಾಗಿ ಇಡಿಯ ಭಾರತವನ್ನು ಅಖಂಡವಾಗಿ ಆಳಿದ ಮಹಾರಾಜಾಧಿರಾಜನೊಬ್ಬನನ್ನು ಥಟ್ ಎಂದು ಒಂದೇಟಿಗೆ ಮಾಯ ಮಾಡಿದ ಈ ಇತಿಹಾಸಕಾರರು ಯಾವ ಪಿ.ಸಿ ಸರ್ಕಾರಿಗೆ ಕಡಿಮೆ ಹೇಳಿ.
      ಹಾಗೆಂದ ಮಾತ್ರಕ್ಕೆ ಅವರಿಗ್ಯಾರಿಗೂ ವಿಕ್ರಮಾದಿತ್ಯನ ಇರುವಿಕೆಯ ಅರಿವಿರಲಿಲ್ಲವೆನ್ನಬೇಡಿ. ಪಾಪ, ಎಲ್ಲರಿಗೂ ಅವರವರದೇ ಕಷ್ಟಗಳಿರುತ್ತವೆ. ಇವರಿಗಿದ್ದ ದೊಡ್ಡ ಕಷ್ಟವೆಂದರೆ ಚರ್ಚ್ ಮತ್ತು ಬೈಬಲ್. ಬೈಬಲ್ಲಿನ ಪ್ರಕಾರ ಕ್ರಿ.ಪೂ 4004, ಅಕ್ಟೋಬರ್ 23ರ ಬೆಳಿಗ್ಗೆ 9 ಗಂಟೆಗೆ ಭೂಮಿಯ ಮೇಲೆ ಮೊದಲ ಸೃಷ್ಟಿ ಕಾರ್ಯ ನಡೆಯಿತು ಎಂದು ಚರ್ಚೇ ಘಂಟಾಘೋಷವಾಗಿ ಸಾರಿದೆಯಲ್ಲ. ಹೋಗಿ ಹೋಗಿ ಚರ್ಚಿನ ಮಾತು ಮೀರುವವರುಂಟೇ. ಬೈಬಲ್ಲಿನಲ್ಲಿ ಹೇಳಿದಂತೆ ಕ್ರಿ.ಪೂ 4004ರಲ್ಲಿ ಹುಟ್ಟಿದ ಆಡಮ್‌ಗೆ 130ನೇ ವರ್ಷದಲ್ಲಿ ಮಗನೂ, 235ನೇ ವರ್ಷದಲ್ಲಿ ಮೊಮ್ಮಗನೂ ಹುಟ್ಟಿ 930ನೇ ವರ್ಷದಲ್ಲಿ ಅಂದರೆ ಕ್ರಿ.ಪೂ 3074ರಲ್ಲಿ ಸಾಯುವಾಗ ಏಳನೇ ತಲೆಮಾರು ಹುಟ್ಟಿತ್ತು. ಇಂತಿಪ್ಪ ಬೈಬಲ್ಲೇ ಇದಮಿತ್ಥಂ ಎಂದು ಹೇಳಿದಾಗ ಅಂದಿಗೆ ಹತ್ತಾರು ಸಾವಿರ ವರ್ಷಗಳ ಹಿಂದೆ ಭಾರತದಲ್ಲಿ ನಾಗರಿಕತೆ ಬೆಳೆದು ಉಚ್ಛ್ರಾಯ ಸ್ಥಿತಿಗೆ ತಲುಪಿದ್ದೆಂದರೇನು? ಭಾರತದಲ್ಲಿ ರಾಜಾಧಿರಾಜರು ಆಳಿದ್ದರೆಂದರೇನು? ಶುದ್ಧ ನಾನ್‌ಸೆನ್ಸ್. ಅದಕ್ಕಾಗಿಯೇ ಅಂದೆಂದೋ ಇದ್ದ ಸರಸ್ವತಿ ನಾಗರಿಕತೆಯನ್ನು ರಪಕ್ಕನೆ ಎಳೆದು ತಂದು ಕ್ರಿ.ಪೂ 2000ರದಾಚೀಚೆ ಬಿಸಾಕಿದರು. ರಾಮಾಯಣ, ಮಹಾಭಾರತಗಳೆಲ್ಲ ಅದರ ನಂತರವೇ ಆಯಿತು. ಕ್ರಿ.ಪೂ 16ನೇ ಶತಮಾನದಲ್ಲಿದ್ದ ಚಂದ್ರಗುಪ್ತ ಮೌರ್ಯ ಕ್ರಿ.ಪೂ 237ರಲ್ಲಿ ಅಲೆಕ್ಸಾಂಡರ್ ಬರುವಾಗ ಹೇಗೂ ಸಿಕ್ಕಿಬಿದ್ದ. ಅಷ್ಟೇ ಆಗಿದ್ದರೆ ಕಷ್ಟವಿರುತ್ತಿರಲಿಲ್ಲ. ಇತಿಹಾಸದ ಪುಟಗಳಲ್ಲಿ ಎರಡು ಸಾವಿರ ವರ್ಷಗಳನ್ನು ಮಾಯಮಾಡಿದವರಿಗೆ ಆ ಕಾಲದಲ್ಲಿ ಆಳಿದ ರಾಜರನ್ನೂ, ರಾಜವಂಶಗಳನ್ನೂ ಏನು ಮಾಡುವುದೆಂಬ ಸಮಸ್ಯೆ ಎದುರಾಯಿತು. ಚಂದ್ರಗುಪ್ತ ಮೌರ್ಯನನ್ನು ಅಲೆಕ್ಸಾಂಡರಿನೊಡನೆ ಸಿಕ್ಕಿಸಲು ಹೋಗಿ ಸಾವಿರದ ಮುನ್ನೂರು ವರ್ಷಗಳ ಕಾಲ ಆಳ್ವೆಕೆ ನಡೆಸಿದ್ದ ಅಗ್ನಿವಂಶದ ನಾಲ್ಕು ರಾಜಮನೆತನಗಳೇ ಚರಿತ್ರೆಯ ಪುಟಗಳಲ್ಲಿ ಕಳೆದುಹೋದವು. ಇಲ್ಲಿ ಆಳ್ವಿಕೆ ನಡೆಸಿದ್ದ ನೂರಾರು ಅರಸರಲ್ಲಿ ಅವರಿಗೆ ಸಿಕ್ಕಿದ್ದು ಭೋಜರಾಜನೊಬ್ಬನೇ. ಬೇರೆ ಬೇರೆ ಕಾಲದಲ್ಲಿದ್ದ ಶುಂಗ, ಕಣ್ವ, ಆಂಧ್ರ ರಾಜವಂಶಗಳನ್ನು ಒಂದೇ ಸಮಯದಲ್ಲಿ ಒಂದೇ ಕಡೆ ಆಳುವಂತೆ ಮಾಡಿ ಕಲಸುಮೆಲೋಗರಗೊಳಿಸಿದರು. ಅಷ್ಟು ಮಾತ್ರವಲ್ಲ. ಕ್ರಿ.ಪೂ 918ರಿಂದ-833ರವರೆಗೆ ಕಣ್ವ ವಂಶದ ನಾಲ್ವರು ರಾಜರು ಆಳಿದ್ದಾರೆಂದು ಪುರಾಣಗಳು ಹೇಳಿದರೆ ವಿಲಿಯಂ ಜೋನ್ಸ್ ಎಂಬ ಮಹಾನ್ ಇತಿಹಾಸಕಾರ ಶುಂಗರ ಕಾಲವನ್ನು ಮಾತ್ರ ಕಣ್ವರಿಗೆ ಜೋಡಿಸಿ, ಆ ರಾಜರನ್ನು ಬದಿಗೊತ್ತಿ ಕ್ರಿ.ಪೂ 1253ರಿಂದ - ಕ್ರಿ.ಪೂ 908ರವರೆಗೆ ಕಣ್ವರ ನಾಲ್ಕು ರಾಜರು ಆಳ್ವಿಕೆ ನಡೆಸಿದರೆ ಒಬ್ಬೊಬ್ಬರ ಕೋಟಾದಲ್ಲೂ 86 ವರ್ಷಗಳು ಬರುತ್ತವೆ. ಇಷ್ಟು ವರ್ಷ ಆಳ್ವಿಕೆ ನಡೆಸುವುದು ಪ್ರಕೃತಿ ಕ್ರಮಕ್ಕೆ ವಿರುದ್ಧ, ಹಿಂದೂ ಸಂಸ್ಕೃತಿಗೆ ಸಾಧ್ಯವಾದಷ್ಟು ಹಿಂದಿನ ಪ್ರಾಚೀನತೆಯನ್ನು ಕೊಡಲು ಇವೆಲ್ಲ ಪುರೋಹಿತಷಾಹಿ ಬ್ರಾಹ್ಮಣರು ಮಾಡಿದ ಕುತಂತ್ರ ಎಂದು ಥೇಟ್ ನಮ್ಮ ಚಂಪಾ, ಅನಂತಮೂರ್ತಿಗಳಂತೆ ಅಪ್ಪಣೆ ಹೊರಡಿಸಿದ್ದಾರೆ. ಸಿಕ್ಕಸಿಕ್ಕವರನ್ನು ಕಂಡಕಂಡಲ್ಲಿ ತುಂಬಿಸಿ ಹೆಚ್ಚುಳಿದ ರಾಜರು ಅಸಲು ಹುಟ್ಟಿಯೇ ಇಲ್ಲ, ಅವರ ಅಸ್ತಿತ್ವವೆಲ್ಲ ಸುಳ್ಳೆಂದು ನಿರ್ಧರಿಸಿ ಸಮಾಧಿ ಮಾಡಿಬಿಟ್ಟರು. ಹೀಗೆ ಸಮಾಧಿಗೊಂಡವರಲ್ಲಿ ಪ್ರಸಿದ್ಧ ಶಕಕರ್ತರಾದ ವಿಕ್ರಮಾದಿತ್ಯ ಮತ್ತು ಶಾಲಿವಾಹನರು ಮೊದಲಿಗರು.
       ಕಾರಣ ಸಿಂಪಲ್. ಬ್ರಿಟಿಷ್ ಚರಿತ್ರಕಾರರ ಎಳೆದಾಟದಲ್ಲಿ ಕ್ರಿ.ಪೂ 1534ರಲ್ಲಿದ್ದ ಚಂದ್ರಗುಪ್ತ ಮೌರ್ಯ ಅಲೆಕ್ಸಾಂಡರಿನ ಕಾಲವಾದ ಕ್ರಿ.ಪೂ 322ಕ್ಕೆ ಬಂದುಬಿದ್ದಿದ್ದ. ಅದೇ ಕಾಲದಲ್ಲಿದ್ದ ಗುಪ್ತರು ಕ್ರಿ.ಶ 320 ರಷ್ಟು ಈಚೆಗೆ ಸರಿದು ಹೋದರು. ಅವರ ನಂತರ ಬಂದ ವಿಕ್ರಮಾದಿತ್ಯನನ್ನು ಇಡುವುದೆಲ್ಲಿ? ಸಣ್ಣಪುಟ್ಟ ರಾಜನಾಗಿದ್ದರೆ ಹುಷ್ ಕಾಗೆ ಎನ್ನಬಹುದಿತ್ತು. ಆದರೆ ಅವನು ಕ್ರಿ.ಪೂ 57ರಲ್ಲಿ ಶುರುಮಾಡಿದ ವಿಕ್ರಮ ಶಕೆ ಇಂದಿಗೂ ಜನಮಾನಸದ ಮನಸ್ಸಿನಲ್ಲಿ ಭದ್ರವಾಗಿ ಕೂತಿದೆಯಲ್ಲ. ಅಂಥವನನ್ನು ಗುಪ್ತರ ಕಾಲದೀಚೆ ಎಳೆಯುವುದು ಸುಲಭದ ಮಾತಾಗಿರಲಿಲ್ಲ. ಆದ್ದರಿಂದ ಆ ವ್ಯಕ್ತಿ ಹುಟ್ಟಿಯೇ ಇಲ್ಲ, ಅವನೊಬ್ಬ ಅಪ್ಪಟ್ಟ ಕಾಲ್ಪನಿಕ ಕಥೆಯವನು ಎಂದು ಆಜ್ಞೆ ಮಾಡಿ ಚರಿತ್ರೆಯಲ್ಲಿ ಸ್ವಲ್ಪವೂ ಜಾಗಸಿಗದಂತೆ ಮಾಡಿಬಿಟ್ಟರು. ಅವನ ನಂತರ ಬಂದ ಶಾಲಿವಾಹನನಿಗೂ ಇದೇ ಗತಿಯಾಯ್ತು.
       ಅಸಲಿಗೆ ಇವರಿಬ್ಬರೂ ಹಿಮಾಲಯದಿಂದ ದಕ್ಷಿಣದವರೆಗೆ ಭಾರತವನ್ನಾಳಿದ ಪ್ರಮೇರ ಅಥವಾ ಪನ್ವರ್ ರಾಜವಂಶದ ಮಹಾನ್ ಚಕ್ರವರ್ತಿಗಳು. ಆದರೆ ನಮ್ಮ ಇತಿಹಾಸಕಾರರು ಇವರನ್ನು ಕಾಲ್ಪನಿಕರನ್ನಾಗಿಸಿ ಇವರು ಪ್ರಾರಂಭಿಸಿದ ಶಕೆಗಳನ್ನು ಅನಾಮಧೇಯ ಶಕ ಅರಸರೊಟ್ಟಿಗೆ ಸೇರಿಸಿದ್ದಾರಷ್ಟೆ.
ಪೂರ್ಣೇ ತ್ರಿಂಶಶ್ಚಟೇ ವರ್ಷೇ ಕಲೌ ಪ್ರಾಪ್ತೇ ಭಯಂಕರೇ
ಶಕಾನಾಂಚ ವಿನಾಶಾರ್ಧಮ್ ಆರ್ಯಧರ್ಮ ವಿವೃದ್ಧಯೇ
ಜಾತಶ್ಶಿವಂಜಯಸ್ಸೋಪಿ ಕೈಲಾಸಾತ್ ಗುಹ್ಯಕಾಲಯತ್

...................................................................... (ಭವಿಷ್ಯತ್ಪುರಾಣ, ಶ್ಲೋಕ 3-1-7-14,15)
ಮೂರುಸಾವಿರ ವರ್ಷಗಳ ಭಯಂಕರ ಕಲಿಯುಗದ ನಂತರ ಶಕರನ್ನು ನಾಶಗೊಳಿಸಲು, ಆರ್ಯಧರ್ಮವನ್ನು ಎತ್ತಿಹಿಡಿಯಲು ಶಿವನ ವರಪ್ರಸಾದದಿಂದ ಒಬ್ಬನು ಜನಿಸಿದನು. ಅವನ ತಂದೆಯ ಹೆಸರು ಗಂಧರ್ವಸೇನ. ಗಂಧರ್ವಸೇನನು ತನ್ನ ಮಗನಿಗೆ ವಿಕ್ರಮಾದಿತ್ಯನೆಂದು ಹೆಸರಿಟ್ಟನು. ವಿಕ್ರಮನು ಐದು ವರ್ಷದವನಿದ್ದಾಗ ಕಾಡಿಗೆ ತೆರಳಿ ಹನ್ನೆರಡು ವರ್ಷಗಳ ಕಾಲ ತಪಸ್ಸನ್ನಾಚರಿಸಿದನು. ತಪಸ್ಸಿನ ನಂತರ ಪುನಃ ಅಂಬಾವತಿ(ಉಜ್ಜೈನಿ)ಗೆ ಮರಳಿ 32 ಮೂರ್ತಿಗಳುಳ್ಳ ಸ್ವರ್ಣಸಿಂಹಾಸನವನ್ನೇರಿದನು.
       ಮೇಲಿನ ಭವಿಷ್ಯತ್ಪುರಾಣದ ಶ್ಲೋಕಗಳನ್ನು ಸೂಕ್ಷ್ಮವಾಗಿ ಗಮನಿಸಿ. ಕಲಿಯುಗ ಪ್ರಾರಂಭವಾಗಿದ್ದು ಕ್ರಿ.ಪೂ 3101-02 ರ ಸುಮಾರಿಗೆ. ಕಲಿಯುಗದ ೩೦೦೦ನೇ ವರ್ಷದಲ್ಲಿ ವಿಕ್ರಮಾದಿತ್ಯನ ಜನನವಾಗಿದ್ದು ಅರ್ಥಾತ್ ಕ್ರಿ.ಪೂ 101ರಲ್ಲಿ. ಈತ ಸಿಂಹಾಸನವನ್ನೇರಿದ್ದು ಕ್ರಿ.ಪೂ 82ರಲ್ಲಿ. ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ವಿಕ್ರಮಾದಿತ್ಯನೆಂಬುದು ಹುಟ್ಟಿದಾಗಿನಿಂದ ಇದ್ದ ಹೆಸರೇ ಹೊರತೂ ಇತಿಹಾಸಕಾರರು ಹೇಳುವಂತೆ ಬಿರುದು ಬಾವಲಿಯಲ್ಲ.
       ನಮ್ಮ ಪುರಾಣಗಳು ಪ್ರಮಾರ ರಾಜವಂಶದ 32 ರಾಜರುಗಳ ವರ್ಣನೆಯನ್ನು ನೀಡಿದೆ. ಈ ರಾಜವಂಶದ 8ನೇ ಚಕ್ರವರ್ತಿಯೇ ವಿಕ್ರಮಾದಿತ್ಯ. ವಿಕ್ರಮನ ನಂತರ ಅವನ ರಾಜ್ಯವು ಹದಿನೆಂಟು ಭಾಗಗಳಾಗಿ ಒಡೆದು ಹೋಯ್ತು. ಶಕರು, ಹೂಣರು ಮತ್ತೊಮ್ಮೆ ಭಾರತದತ್ತ ದಂಡೆತ್ತಿ ಬಂದರು. ಇಂಥ ಸಂದರ್ಭದಲ್ಲಿ ಇಡೀ ಭಾರತವನ್ನು ಏಕಛತ್ರಾಧಿಪತ್ಯದಡಿ ತಂದು ಶಕರನ್ನು ದೇಶದಾಚೆ ಒದ್ದೋಡಿಸಿದವನೇ ವಿಕ್ರಮನ ಮರಿಮೊಮ್ಮಗನಾದ ಪ್ರಮಾರರ 11ನೇ ಚಕ್ರವರ್ತಿ ಶಾಲಿವಾಹನ.  ಭವಿಷ್ಯತ್ ಪುರಾಣದ ನೂರು ಅಧ್ಯಾಯಗಳಲ್ಲಿ 72 ಅಧ್ಯಾಯಗಳು ಅಗ್ನಿವಂಶದ ನಾಲ್ಕು ರಾಜಕುಲಗಳ ವರ್ಣನೆಗೇ ಮೀಸಲಾಗಿವೆ. ಇವುಗಳಲ್ಲಿ 44 ಅಧ್ಯಾಯಗಳಲ್ಲಿರುವುದು ಬರೇ ವಿಕ್ರಮಾದಿತ್ಯ ಮತ್ತು ಶಾಲಿವಾಹನರ ವರ್ಣನೆಯೇ. ಇಷ್ಟೆಲ್ಲ ದಾಖಲೆಗಳಿದ್ದಾಗ್ಗೆಯೂ ಇವರಿಬ್ಬರನ್ನೂ ಛೂ ಮಂತರ್ ಎಂದು ಮಾಯಗೊಳಿಸಿದರಲ್ಲ ನಮ್ಮ ಬೃಹಸ್ಪತಿಗಳು. ಬ್ರಿಟೀಷ್ ಘ್ನಾನಪೀಠಿಗಳೇ ಹೇಳಿದಮೇಲೆ ಗೊಡ್ಡು ಪುರಾಣದ ಕಥೆ ಕೇಳುವವರಾರು?
     ಇದೇ ವಿಕ್ರಮಾದಿತ್ಯನ ಆಸ್ಥಾನದ ನವರತ್ನಗಳಲ್ಲೊಂದಾಗಿ ಮೆರೆದವನು ಕವಿಕುಲಗುರು ಕಾಳಿದಾಸ. ವಿಕ್ರಮನನ್ನು ಇಲ್ಲವೆನಿಸಿದಂತೆ ಕಾಳಿದಾಸನನ್ನು ಇಲ್ಲವೆನಿಸುವುದು ಅಸಂಭವ. ಅದಕ್ಕೇ ಅವನನ್ನು ಗುಪ್ತರ ಕಾಲದಿಂದ ಹಿಡಿದು ಏಳನೇ ಶತಮಾನದ ಭೋಜರಾಜನವರೆಗೆ ಎಳೆದಾಡಿ ಅವನಿಗೂ ಸರಿಯೊಂದು ನೆಲೆಯಿಲ್ಲದಂತೆ ಮಾಡಿಬಿಟ್ಟರು. ನಮಗೆ ತಿಳಿದ ಏಳು ಕೃತಿಗಳನ್ನು ಹೊರತುಪಡಿಸಿ ಈ ಕಾಳಿದಾಸ ಶ್ಯಾಮಲಾ ದಂಡಕ, ಘಟಕರ್ಪರ ಕಾವ್ಯವೇ ಇತ್ಯಾದಿ ಸಣ್ಣ ಪುಟ್ಟ ಲಘುಕಾವ್ಯಗಳನ್ನು ರಚಿಸಿದ್ದನೆಂದು ತಿಳಿದುಬರುತ್ತದೆ. ಇದೇ ಕಾಳಿದಾಸನ ಇನ್ನೊಂದು ಕೃತಿ ಜ್ಯೋತಿಷ್ಯಾಸ್ತ್ರವನ್ನಾಧರಿಸಿದ ’ಜ್ಯೋತಿರ್ವಿದಾಭರಣ’. ಇದರಲ್ಲಿ ಕಾಳಿದಾಸ ವಿವಿಧ ಶಕೆಗಳ ಬಗ್ಗೆ ವಿವರವಾಗಿ ಬರೆದಿದ್ದಾನೆ. ಅವನೇ ಹೇಳುವಂತೆ ಕಲಿಯುಗದಲ್ಲಿ ಆರು ಶಕೆಗಳು ಮತ್ತು ಶಕಕರ್ತೃರಿದ್ದಾರೆ.
ಯುಧಿಷ್ಟಿರೋ ವಿಕ್ರಮಶಾಲಿವಾಹನೌ
ನರಾಧಿನಾಥೋ ವಿಜಯಾಭಿನಂದನಃ |
ಇಮೇನ ನಾಗಾರ್ಜುನಮೇದಿನೀವಿಭು
ರ್ಬಲಿ ಕ್ಷಮಾತ್ ಷಟ್ ಶಕಕಾರಕಾ: ||

ಕಲಿಯುಗದ ಆರು ಶಕಕರ್ತೃರು ಯುಧಿಷ್ಟಿರ, ವಿಕ್ರಮಾದಿತ್ಯ, ಶಾಲಿವಾಹನ, ವಿಜಯಾಭಿನಂದನ, ನಾಗಾರ್ಜುನ ಮತ್ತು ಬಲಿ.
ಕ್ರಿ.ಪೂ 3102ರಲ್ಲಿ ಶುರುವಾದ 4,32,000 ವರ್ಷಗಳ ಕಲಿಯುಗದಲ್ಲಿ ಯುಧಿಷ್ಟಿರ ಶಕೆ 3044 ವರ್ಷಗಳು(ಯುಧಿಷ್ಟಿರ ಶಕೆಯ ಒಟ್ಟೂ ಕಾಲ ದ್ವಾಪರ ಯುಗದ 36 + ಕಲಿಯುಗದ 3044 ವರ್ಷಗಳು = 3080 ವರ್ಷ, ಯುಧಿಷ್ಟಿರ ಶಕೆ ಶುರುವಾಗಿದ್ದು ಮಹಾಭಾರತ ಯುದ್ಧ ಮುಗಿದ ನಂತರ ಅರ್ಥಾತ್ ಕ್ರಿ.ಪೂ 3138ರಲ್ಲಿ).
ವಿಕ್ರಮಾದಿತ್ಯನಿಂದ ಶುರುವಾದ ವಿಕ್ರಮಶಕೆಯ ಅವಧಿ 135 ವರ್ಷ. ಅಂದರೆ 3044ನೇ ಕಲಿಯುಗ ವರ್ಷದಿಂದ 3179ನೇ ಕಲಿಯುಗ ವರ್ಷದವರೆಗೆ.(ಕ್ರಿ.ಪೂ 57ರಿಂದ ಕ್ರಿ.ಶ 78)
ಶಾಲಿವಾಹನ ಶಕೆಯ ಅವಧಿ 18,೦೦೦ ವರ್ಷಗಳು. 3179ನೇ ಕಲಿಯುಗ ವರ್ಷದಿಂದ 21,179ನೇ ಕಲಿಯುಗ ವರ್ಷದವರೆಗೆ.(ಕ್ರಿ.ಶ 78- ಕ್ರಿ.ಶ 21257)
ಇದಾದ ನಂತರ 1೦,೦೦೦ ವರ್ಷಗಳ ವಿಜಯಾಭಿನಂದನ ಶಕೆ, 4 ಲಕ್ಷ ವರ್ಷಗಳ ನಾಗಾರ್ಜುನ ಶಕೆ, 821 ವರ್ಷಗಳ ಬಲಿ ಶಕೆ ಬರಲಿಕ್ಕಿದೆಯಷ್ಟೆ. ಇವು ಆರನ್ನೂ ಸೇರಿಸಿದರೆ ಅದು ಕಲಿಯುಗದ ಅವಧಿಯಾದ 4,32,000 ವರ್ಷಗಳಾಗುತ್ತದೆ. ಕೊನೆಯ ಮೂರು ಶಕೆಗಳು ಭವಿಷ್ಯತ್ಕಾಲದ್ದಾದ್ದರಿಂದ ಅವುಗಳ ಚಿಂತೆ ಬಿಟ್ಟು ತಿರುಗಿ ಜ್ಯೋತಿರ್ವಿಧಾಭರಣದತ್ತ ಬರೋಣ.
ಯುಧಿಷ್ಟೀರೋಭೂ ದ್ಭುವಿ ಹಸ್ತಿನಾಪುರೇ | ತಥೋಜ್ಜಯಿನ್ಯಾಂ ಪುರಿ ವಿಕ್ರಮಾಹವಯಃ ||
ಶಾಲೇಯಧಾರಾಭೃತಿ ಶಾಲಿವಾಹನಃ | ಸುಚಿತ್ರಕೂಟೇ ವಿಜಯಾಭಿನಂದನಃ ||
ನಾಗಾರ್ಜುನೋ ರೋಹಿತಕೇ ಕ್ಷಿತೌ ಬಲಿ | ರ್ಭವಿಷತೀಂದ್ರೋ ಭೃಗುಕಚ್ಛಪತ್ತನೇ ||

ಚಂದ್ರವಂಶದ ಯುಧಿಷ್ಟಿರನ ರಾಜಧಾನಿ ಹಸ್ತಿನಾಪುರ, ಪ್ರಮಾರ ವಂಶದ ವಿಕ್ರಮನದ್ದು ಉಜ್ಜಯಿನೀ, ಅದೇ ವಂಶದ ಶಾಲಿವಾಹನನ ರಾಜಧಾನಿ ಧಾರಾನಗರ. ಗೋಹಿಲ ವಂಶದ ವಿಜಯಾಭಿನಂದನನದ್ದು ಚಿತ್ರಕೂಟ, ಸಿಸೋದರ ಕುಲದ ನಾಗಾರ್ಜುನ ಆಳುವುದು ರೋಹಿತಕದಲ್ಲಿ, ಕಲ್ಕಿವಂಶದ ಬಲಿಯ ರಾಜಧಾನಿ ಭೃಗುಕಚ್ಛ.
ಇದೇ ಕಾಳಿದಾಸ ವಿಕ್ರಮನನ್ನು ಮುಂದಿನ ಶ್ಲೋಕದಲ್ಲಿ ಹೊಗಳಿದ್ದನ್ನು ಗಮನಿಸಿ
ದೀಯತಾಂ ದಶಲಕ್ಷಾಣಿ ಶಾಸನಾನಿ ಚತುರ್ದಶ |
ಹಸ್ತೇ ನ್ಯಸ್ತಚತುಃಶ್ಲೋಕೇ ಉತಾಗಚ್ಛತು ಗಚ್ಛತು ||
ಸರಸ್ವತೀ ಸ್ಥಿತಾ ವಕ್ತ್ರೇ ಲಕ್ಷ್ಮೀಃ ಕರಸರೋರುಹೇ |
ಸರ್ವದಾ ಸರ್ವದೋ ಸೀತಿ ಮಿಥ್ಯಾ ಸಂಸ್ತೂಯಸೇ ಬುಧೈ |
ನಾರಯೋ ಲೇಭಿರೇ ಪೃಷ್ಟಂ ನ ವಕ್ಷಃ ಪರಯೋಷಿತಃ ||
ವಿಕ್ರಮನು ಎಷ್ಟು ದೊಡ್ಡ ವಿದ್ವಜ್ಜನಪೋಷಕನೆಂದರೆ ಕೈಯಲ್ಲಿ ನಾಲ್ಕು ಶ್ಲೋಕಗಳಿದ್ದರೆ ಅವನನ್ನು ಎಂಥ ಸಮಯದಲ್ಲೂ ಭೇಟಿಯಾಗಬಹುದಿತ್ತು. ಕವಿಗಳ ಪ್ರತಿ ಶ್ಲೋಕಕ್ಕೂ ಹತ್ತು ಲಕ್ಷ ವರಹಗಳು, ಹದಿನಾಲ್ಕು ಶಾಸನಗಳು ಬಹುಮಾನವಾಗಿ ದೊರೆಯುತ್ತಿದ್ದವು.
ಹೇ ರಾಜನೇ! ಸರಸ್ವತಿಯೇ ನಿನ್ನ ಮುಖ, ಲಕ್ಷ್ಮಿಯೇ ನಿನ್ನ ಕೈಗಳು. ವಿದ್ವಾಂಸರು ನಿನ್ನನ್ನು ಕೇಳಿದ್ದೆಲ್ಲ ಕೊಡುವ ದಾನಿಯೆಂದು ಹೊಗಳುತ್ತಾರೆ. ಅದು ಮಾತ್ರ ಬರಿ ಸುಳ್ಳು. ಶತ್ರುಗಳಿಗೆ ನಿನ್ನ ಬೆನ್ನು, ಪರಾಸ್ತ್ರೀಯರಿಗೆ ನಿನ್ನ ಎದೆ ಎಂದಿಗೂ ದೊರಕದು.
ಏಳನೇ ಶತಮಾನದ ಭೋಜರಾಜನನ್ನು ಕುರಿತು ಹದಿನೈದನೇ ಶತಮಾನದಲ್ಲಿ ಬಂದ ಭೋಜಪ್ರಬಂಧದಲ್ಲಿ ಇದೇ ಶ್ಲೋಕಗಳನ್ನು ಕಾಪಿ-ಪೇಸ್ಟ್ ಮಾಡಲಾಗಿದೆ. ವರರುಚಿ, ಭಾಸ, ಮಾಘ, ಭವಭೂತಿ, ದಂಡಿ, ಕಾಳಿದಾಸರು ಸೇರಿ ಇರೋ-ಬರೋ ಸಂಸ್ಕೃತ ಕವಿಗಳನ್ನೆಲ್ಲ ಭೋಜನ ಆಸ್ಥಾನದಲ್ಲಿದ್ದರೆಂಬಂತೆ ಒಟ್ಟಿಗೆ ತುರುಕಿ ಕಲಸುಮೆಲೋಗರಗೊಳಿಸಿದ ಭೋಜಪ್ರಬಂಧವೆಂಬ ಶುದ್ಧ ಕಾಲ್ಪನಿಕ ಕೃತಿಯನ್ನು ಹಿಡಿದುಕೊಂಡು ’ಹಿತಿಆಸ’ಕಾರರು ಭೋಜನನ್ನೇ ವಿಕ್ರಮಾದಿತ್ಯನನ್ನಾಗಿಸಿದರು. ಭೋಜಪ್ರಬಂಧದ ಅರ್ಧಕ್ಕರ್ಧ ಕಥೆ ೧೩ನೇ ಶತಮಾನದಲ್ಲಿ ರಚಿತವಾದ ಕುಮಾರದಾಸನ ಕುರಿತಾದ ಸಿಂಹಳದ ’ಪೂಜಾವಳಿ’ ಎಂಬ ಕೃತಿಯಿಂದ ಕದ್ದಿದ್ದು. ಶುದ್ಧ ವೈದಿಕ ಕಾಳಿದಾಸನನ್ನು ಕುರಿಕಾಯುವ ಪೆದ್ದನನ್ನಾಗಿಸಿ ಕನ್ನಡಿಗರಿಗೆ ಚರಿತ್ರೆಯ ದಾರಿತಪ್ಪಿಸಿದ ರಾಜಕುಮಾರರ ’ಕಪಿರತ್ನ ಕಾಳಿದಾಸ’ವೂ ಇದೇ ಕೃತಿಯನ್ನಾಧರಿಸಿದ್ದು.
ವಿಕ್ರಮನ ಆಸ್ಥಾನ ಜ್ಯೋತಿಷಿಯಾದ ಶ್ರೀಕೃಷ್ಣಮಿಶ್ರನ ಜ್ಯೋತಿಷ್ಯಫಲರತ್ನಮಾಲಾ ಗ್ರಂಥವನ್ನು ಗಮನಿಸೋಣ.
ಶ್ರೀವಿಕ್ರಮಾರ್ಕೋ ಜಗತೀತಲೇಸ್ಮಿನ್ | ಜೀಯಾನ್ಮನುಪ್ರಖ್ಯಯಶಾ ನರೇಂದ್ರಃ ||
ಪುಪೋಷ ಯಃ ಕೋಟಿಸುವರ್ಣತೋ ಮಾಂ | ಸಬಾಂಧವಂ ಸಪ್ತತಿ ವತ್ಸರಾಣಿ ||

ನನ್ನನ್ನೂ, ನನ್ನ ಬಂಧುಗಳನ್ನೂ ಎಪ್ಪತ್ತು ವರ್ಷಗಳ ಕಾಲ ಕಾಪಾಡಿದ, ನನಗೆ ಒಂದು ಕೋಟಿ ಸುವರ್ಣ ನಾಣ್ಯಗಳಿಂದ ಕನಕಾಭಿಷೇಕ ನಡೆಸಿದ ಅಭಿನವ ಮನುವಿನಂಥ ವಿಕ್ರಮಾದಿತ್ಯ ಚಕ್ರವರ್ತಿಯು ಯಾವಾಗಲೂ ಶಾಂತಿ ಮತ್ತು ಯಶಸ್ಸಿನಿಂದ ರಾರಾಜಿಸುವಂಥಾಗಲಿ.
       ವಿಕ್ರಮನು ದಕ್ಷಿಣ ಸಾಗರದಿಂದ ಹಿಮಾಲಯದವರೆಗೂ ಶಾಸಿಸಿ, ಶಕರನ್ನು ಒದ್ದೋಡಿಸಿ, ನೇಪಾಳವನ್ನು ಗೆದ್ದು ಅಂಶುವರ್ಮನನ್ನು ಸಾಮಂತನಾಗಿಸಿ ವಿಕ್ರಮ ಶಕೆಯನ್ನು ಕ್ರಿ.ಪೂ 57ರಲ್ಲಿ ಸ್ಥಾಪಿಸಿದ. ಇದಾದ ನಂತರ ಉಜ್ಜೈನಿಗೆ ಹಿಂದಿರುಗಿ 7೦ ವರ್ಷಗಳ ಕಾಲ ಕವಿಗಳು, ವಿದ್ವಾಂಸರ ಜೊತೆ ತನ್ನ ಆಸ್ಥಾನದಲ್ಲಿ ಕಾಲಕ್ಷೇಪ ನಡೆಸಿದ. ವಿಕ್ರಮ ಪಟ್ಟಕ್ಕೇರಿದ್ದು 2೦ನೇ ವರ್ಷದಲ್ಲಿ, ನಂತರ 24 ವರ್ಷಗಳ ಕಾಲ ದಂಡಯಾತ್ರೆಯಲ್ಲಿ ಈಡೀ ಭರತಖಂಡವನ್ನು ಗೆದ್ದು ಶಕಸ್ಥಾಪಕನಾಗಿ, ಜ್ಯೋತಿಷ್ಯಫಲರತ್ನಮಾಲದ ರಚನೆಯ ವೇಳೆಗೆ 7೦ ವರ್ಷಗಳನ್ನು ವಿದ್ವಾಂಸರ ಮಧ್ಯೆ ಕಳೆದಿದ್ದ.
ಕಾಶ್ಮೀರವನ್ನಾಳಿದ 82ನೇ ಅರಸು ಹಿರಣ್ಯನು ಸಂತಾನವಿಲ್ಲದೇ ಕ್ರಿ.ಶ 14ರಲ್ಲಿ ತೀರಿಕೊಂಡಾದ ಸಿಂಹಾಸನ ಮ್ಲೇಚ್ಛರ ವಶವಾಗಬಹುದೆಂದು ಹೆದರಿ ಕಾಶ್ಮೀರ ರಾಜಾಸ್ಥಾನದವರು ವಿಕ್ರಮನಲ್ಲಿ ಮೊರೆಯಿಟ್ಟರಂತೆ. ಆಗ ತನ್ನ ಮಂತ್ರಿ ಮಾತ್ರಗುಪ್ತನನ್ನು ಕಾಶ್ಮೀರದ ಅರಸನನ್ನಾಗಿ ವಿಕ್ರಮನು ನೇಮಿಸಿ ಇಡೀ ಭರತವರ್ಷವನ್ನು ಏಕಚಕ್ರಾಧಿಪತ್ಯದಡಿ ತಂದನು. ಈ ಘಟನೆ ನಡೆದಾಗ ಅವನಿಗೆ ೧೧೫ ವರ್ಷಗಳಾಗಿದ್ದವು. ಇದಾದ ಐದನೇ ವರ್ಷ ವಿಕ್ರಮನು ಅಸ್ತಂಗತನಾದನೆಂದು ಕಲ್ಹಣನ ರಾಜತರಂಗಿಣಿಯೂ ಉಲ್ಲೇಖಿಸುತ್ತದೆ. ಕಲ್ಹಣನು ಕಾಳಿದಾಸನಿಗಿಂತ ಒಂದು ಹೆಜ್ಜೆ ಮುಂದೆಯೇ ಹೋಗಿ ’ಶಕರನ್ನೂ, ಮ್ಲೇಚ್ಛರನ್ನೂ ಸಂಹರಿಸಲು ಮಹಾವಿಷ್ಣುವೇ ಭೂಮಿಯಲ್ಲಿ ಅವತಾರವೆತ್ತಬೇಕೆಂದಿದ್ದ. ಆದರೆ ವಿಕ್ರಮನು ವಿಷ್ಣುವಿನ ಕೆಲಸವನ್ನು ಹಗುರಗೊಳಿಸಲು ತಾನೇ ಮ್ಲೇಚ್ಛರನ್ನು ನಾಶಗೊಳಿಸಿದ’ನೆಂದು ಹೊಗಳಿದ್ದಾನೆ.
        ಹೀಗೆ ಒಂದೆರಡು ಕವಿ, ಇತಿಹಾಸಕಾರರಲ್ಲ, ಮತ್ಸ್ಯ, ಬ್ರಹ್ಮಾಂಡ ಪುರಾಣ, ಶತಪಥ ಬ್ರಾಹ್ಮಣದಿಂದ ಮೊದಲ್ಗೊಂಡು ನೇಪಾಳರಾಜವಂಶಾವಳೀ, ಕಲಿಯುಗ ರಾಜವೃತ್ತಾಂತ, ಬೌದ್ಧರ ದೀಪವಂಶ-ಮಹಾವಂಶ, ಪ್ಟಾಲೆಮಿಯ ದಾಖಲೆಗಳು, ಭಾಸ್ಕರಾಚಾರ್ಯನ ಸಿದ್ಧಾಂತಶಿರೋಮಣಿ, ಸೋಮನಾಥ ಮಿಶ್ರನ ಜ್ಯೋತಿಷ್ಯ ಕಲ್ಪಲತಾ ಸೇರಿದಂತೆ ಅಸಂಖ್ಯ ಜಾನಪದ, ಪೌರಾಣಿಕ ಕಥೆಗಳೂ ವಿಕ್ರಮನನ್ನು ಬಾಯ್ತುಂಬ ಹೊಗಳಿವೆ.
        ಇನ್ನು ಶಾಲಿವಾಹನನೂ ಸಾಮಾನ್ಯನಲ್ಲ. ಸಾಕ್ಷಾತ್ ವಿಕ್ರಮಾದಿತ್ಯನ ಮರಿಮೊಮ್ಮಗ. ಅಜ್ಜನನ್ನು ಇಲ್ಲವೆನ್ನಿಸಿದವರಿಗೆ ಮೊಮ್ಮಗನನ್ನು ಇಲ್ಲವೆನಿಸುವುದು ಕಷ್ಟದ ಕೆಲಸವೇ! ’ವಾಹನ’ ಪ್ರಾಸಪದವನ್ನೇ ಹಿಡಿದುಕೊಂಡು ಶಾಲಿವಾಹನನನ್ನು ’ಶಾತವಾಹನ’ ಅರಸನನ್ನಾಗಿಸಿ ಅವನಿಗಿಂತ ನಾನೂರು ವರ್ಷ ಮೊದಲಿದ್ದ ಶಾತವಾಹನರ ಗೌತಮೀಪುತ್ರ ಶಾತಕರ್ಣಿಯೊಡನೆ ಗಂಟುಹಾಕಿದರು. ಅಬ್ಬಾ ಬುದ್ಧಿವಂತಿಕೆಯೆಂದರೆ ಅದು. ಇಂಥ ಗಂಟುಗಳನ್ನು ಬಿಡಿಸಲಾಗದೇ ನಮ್ಮ ಇತಿಹಾಸದ ಪುಸ್ತಕಗಳೆಲ್ಲ ಇನ್ನಷ್ಟು ಗಂಟು ಗಂಟಾಗಿ ಕಗ್ಗಂಟಾಗಿ ರಾಡಿಯಾಗಿವೆ. ಶಾಲಿವಾಹನನು ವಿಕ್ರಮನ ನಂತರ ಅರವತ್ತು ವರ್ಷಗಳ ಅರಾಜಕತೆಯಲ್ಲಿ ಹದಿನೆಂಟು ತುಂಡಾದ ರಾಜ್ಯವನ್ನು ಒಟ್ಟುಗೂಡಿಸಿ, ನಿತ್ಯ ದೇಶವನ್ನು ಲೂಟಿಮಾಡುತ್ತಿದ್ದ ಶಕರು, ಚೀನಿಯರು, ಬಾಹ್ಲೀಕರು, ಕಾಮರೂಪಿಯರು, ರೋಮನ್ನರು, ಟಾರ್ಟರರು, ಮ್ಲೇಚ್ಛರ ದಂಡುಗಳ ರುಂಡಚೆಂಡಾಡಿ ಉಜ್ಜೈನಿಯ ಅಧಿಪತಿಯಾದವ. ಭವಿಷ್ಯತ್ ಪುರಾಣದ ಪ್ರಕಾರ ವಿದೇಶಿಗರನ್ನು ಸಿಂಧೂನದಿಯಾಚೆ ಓಡಿಸಿದ್ದರಿಂದ ನದಿಯೀಚೆಗಿನ ಭಾಗ ಸಿಂಧೂಸ್ಥಾನವೆಂದೂ, ಆಚೆಗಿನ ಭಾಗ ಮ್ಲೇಚ್ಛಸ್ಥಾನವೆಂದೂ ಕರೆಯಲ್ಪಟ್ಟಿತು. ಇವನಿಂದ ಕರೆಯಲ್ಪಟ್ಟ ಸಿಂಧೂಸ್ಥಾನವೇ ಅಪಭೃಂಶವಾಗಿ ಮುಂದೆ ಹಿಂದೂಸ್ಥಾನವೆನಿಸಿದ್ದು. ಈ ದಿಗ್ವಿಜಯದ ಕುರುಹಾಗಿಯೇ ಕ್ರಿ.ಶ 78ರಲ್ಲಿ ಶಾಲಿವಾಹನ ಶಕೆ ಆರಂಭವಾಯಿತು. ಇದು ಇಂದು ನಮ್ಮ ರಾಷ್ಟ್ರೀಯ ಶಕೆಯಾಗಿದೆ. ಇವನ ಕುರಿತು ಪ್ರಸಿದ್ಧ ಜಾನಪದ ಕಥೆಯೊಂದಿದೆ. ಶಾಲಿವಾಹನನಿಗೆ ಮಣ್ಣಿನ ಆಟಿಕೆಗಳಿಗೆ ಜೀವ ನೀಡಬಲ್ಲ ವಿಶೇಷವಾದ ಶಕ್ತಿಯೊಂದಿತ್ತು.  ರಾಜ್ಯಭೃಷ್ಟನಾಗಿದ್ದರೂ, ಯಾರ ನೆರವೂ ಇಲ್ಲದಿದ್ದರೂ, ವಿದೇಶಿಗರೆಲ್ಲ ಒಟ್ಟಾಗಿ ಧಾಳಿ ಮಾಡಿದರೂ ತನ್ನ ಶಕ್ತಿಯನ್ನುಪಯೋಗಿಸಿ ಅವರನ್ನೆಲ್ಲ ಸೋಲಿಸಿಬಿಟ್ಟ. ಶಾಲಿವಾಹನ ಮಣ್ಣಿನಿಂದ ಮಾಡಿದ ಆನೆ, ಕುದುರೆ, ಸೈನಿಕರ ಗೊಂಬೆಗಳಿಗೆ ಜೀವ ನೀಡುತ್ತ ಹೋದನಂತೆ. ಎಷ್ಟು ಬಾರಿ ಹೊಡೆದುರುಳಿಸಿದರೂ ಮತ್ತೆ ಮತ್ತೆ ಮಣ್ಣಿನಿಂದೆದ್ದು ಬರುತ್ತಿದ್ದ ಈ ಸೈನ್ಯವನ್ನು ಎದುರಿಸಲಾಗದೇ ಶಕರು ಧೂಳೀಪಟವಾದರಂತೆ. ಕಥೆಗಳು ಏನೇ ಇದ್ದರೂ ಶಾಲಿವಾಹನ, ವಿಕ್ರಮಾದಿತ್ಯರೆರಡೂ ನಮ್ಮ ನೆಲದ ಮಹಾನ್ ಸ್ವಾತಂತ್ರ್ಯವೀರರೆಂಬುದು ನಿರ್ವಿವಾದ. ಅವರನ್ನು ಪುಸ್ತಕಗಳಿಂದಳಿಸಿದಷ್ಟು ಸುಲಭವಾಗಿ ಮನಸ್ಸಿನಿಂದಳಿಸುವುದು ಸಾಧ್ಯವಿಲ್ಲ. ಇಂಥವರನ್ನಳಿಸಲು ನಮ್ಮ ಬುದ್ಧಿಜೀವಿ ಇತಿಹಾಸಕಾರರು ಪ್ರಯತ್ನಿಸಿದಷ್ಟೂ ಅವರು ಮಣ್ಣಿನಿಂದ ಮತ್ತೆ ಮತ್ತೆ ಮೇಲೆದ್ದು ಬರುತ್ತಾರೆ, ಥೇಟ್ ಶಾಲಿವಾಹನನ ಗೊಂಬೆಗಳಂತೆ.

Friday, March 21, 2014

ರಾಮಾಯಣದ ಪ್ರಕ್ಷೇಪಗಳು

     
     ವಿದ್ವನ್ಮಿತ್ರರಾದ ಶ್ರೀನಿವಾಸರ ರಾಮಾಯಣದ ಪ್ರಕ್ಷೇಪಭಾಗಗಳ ಬಗೆಗಿನ ಜಿಜ್ಞಾಸೆಗೆ ಬಗ್ಗೆ ನನಗೆ ತಿಳಿದ ಕೆಲ ಮಾಹಿತಿಗಳನ್ನು ನೀಡುತ್ತಿದ್ದೇನೆ. ಲಂಕೆಯ ಕುರಿತು ಬರೆದ ಲೇಖನದಲ್ಲಿ ಅದರ ಸ್ಥಳವಿರಬಹುದಾದ ಒಂದು ಸಾಧ್ಯತೆಯನ್ನಷ್ಟೇ ನಾನು ಹೇಳಿದ್ದು. ಒಪ್ಪಲೇ ಬೇಕೆಂಬ ಆಗ್ರಹದಿಂದಲ್ಲ. ಇತಿಹಾಸವನ್ನು ವಿಜ್ಞಾನದಂತೆ output  ತೋರಿಸಿ ಸಮರ್ಥಿಸಲಾಗದು. ಕಾವ್ಯ ಅಥವಾ ಇತಿಹಾಸ ರಚನೆಗೊಂಡ ಕಾಲದ ಭೌಗೋಳಿಕ, ಸಾಂಸ್ಕೃತಿಕ ವಲಯಗಳನ್ನು ವಿಶ್ಲೇಷಿಸಿಯೇ ಸರಿ ತಪ್ಪುಗಳ ವಿವೇಚನೆಗೆ ಬರಬೇಕಷ್ಟೆ. ಆ ವಿಧಾನ ಇತಿಹಾಸಕಾರರಿಂದ ಇತಿಹಾಸಕಾರರಿಗೆ, ವಿದ್ವಾಂಸರಿಂದ ವಿದ್ವಾಂಸರಿಗೆ ಬದಲಾಗಬಹುದು. ರಸಗ್ರಾಹಿಯಾಗಿದ್ದರೆ ರಾಮಾಯಣವನ್ನು ಕಾವ್ಯವಾಗಿ ಆಸ್ವಾದಿಸಿ. ಆಸ್ತಿಕರಾಗಿದ್ದಲ್ಲಿ ಪುರಾಣವಾಗಿ ಪೂಜಿಸಿ. ರಾಮಾಯಣ ನಡೆದ ಘಟನೆ ಎಂಬ ಇತಿಹಾಸದ ದೃಷ್ಟಿಯಿಂದ ನೋಡುವುದಾದರೆ ಅದರಲ್ಲಿರುವ ಘಟನೆಗಳನ್ನು ವೈಚಾರಿಕ(ಎಡಪಂಥೀಯ ಬುದ್ಧಿಜೀವಿಗಳ ವೈಚಾರಿಕತೆಯಲ್ಲ) ನೆಲೆಗಟ್ಟಿನಲ್ಲಿ ವಿಶ್ಲೇಷಿಸಬೇಕಾಗಿದೆ.
    ಸಂಧ್ಯಾವಂದನೆಗೆ ಸಾವಿರ ಪಾಠವಂತೆ. ನಾನಾಗಲೇ ಹೇಳಿದಂತೆ ರಾಮಾಯಣದಲ್ಲಿ ಮೂರು ಪಾಠಕ್ರಮಗಳಿವೆ. ನಮ್ಮ ಕಡೆ ಹೆಚ್ಚು ಪ್ರಚಲಿತದಲ್ಲಿರುವುದು ದಾಕ್ಷಿಣಾತ್ಯ ಪಾಠಕ್ರಮ. ಮೂಲ ದಾಕ್ಷಿಣಾತ್ಯ ಪಾಠಕ್ಕಾಗಿ ’ಮದ್ರಾಸಿನ ನಿರ್ಣಯಸಾಗರ ಮುದ್ರಣ, ದ್ವಿತೀಯ ಸಂಸ್ಕರಣ, ೧೯೦೨’ ನೋಡಿ. ಪಾಶ್ಚಿಮೋತ್ತರೀಯವನ್ನು ಲಾಹೋರಿನ ದಯಾನಂದ ಮಹಾವಿದ್ಯಾಲಯದವರು ಪ್ರಕಟಿಸಿದ್ದಾರೆ. ಗೌಡೀಯ ಮೂಲಪಾಠ ಕಲ್ಕತ್ತಾದ ಸಂಸ್ಕೃತ ಗ್ರಂಥಮಾಲೆಯಲ್ಲಿ ಪ್ರಕಟವಾಗಿದೆ. ಗೌಡೀಯ ಮತ್ತು ಪಶ್ಚಿಮೋತ್ತರೀಯಗಳು ಹೆಚ್ಚು ನಿಕಟ. ದಾಕ್ಷಿಣಾತ್ಯದಲ್ಲಿ ಉಳಿದವುಗಳಿಗಿಂತ ಹೆಚ್ಚು ಪ್ರಕ್ಷೇಪಿತ ಭಾಗಗಳು ಸೇರಿಕೊಂಡಿವೆ. (ಮೂರೂ ಪಾಠಕ್ರಮಗಳಿಗಾಗಿ ನೋಡಿ: Bulcke: The Three Recensions of the Ramayana, Journal of Oriental Research, madras, vol XVII) ಇನ್ನು ಮೂಲರಾಮಾಯಣದ ಪ್ರಕ್ಷೇಪಭಾಗಗಳ ಬಗ್ಗೆ ಹೇಳುವುದಾದರೆ ಮೂರೂ ಪಾಠಾಂತರಗಳ ತುಲನೆಯಿಂದ, ಕಾಂಡಗಳ ಶೈಲಿಗಿರುವ ಮಹದಂತರದಿಂದ ಉತ್ತರಕಾಂಡವು ನಂತರ ಸೇರಿಸಲ್ಪಟ್ಟದ್ದೆಂದು ನಿಸ್ಸಂಶಯವಾಗಿ ಹೇಳಬಹುದು. ಉತ್ತರ ರಾಮಚರಿತದಿಂದ ತಿಲಕ ವ್ಯಾಖ್ಯಾನದವರೆಗೆ ಎಲ್ಲವೂ ಇದನ್ನು ಪ್ರಕ್ಷೇಪಭೂಯಿಷ್ಟವೆಂದೇ ಹೇಳಿವೆ. ಸೀತೆಯು ವೇದವತಿಯಾಗಿದ್ದಳೆಂಬ ಅಂಶ, ರಾಮನು ಅವತಾರ ಪುರುಷನೆಂಬ ಕಲ್ಪನೆ ಇಲ್ಲಿ ಮಾತ್ರ ಬರುವಂಥದ್ದು. ಯುದ್ಧಕಾಂಡದ ಕೊನೆಗೆ ’ಇತಿ ರಾಮಾಯಣಮಿದಂ ಕೃತ್ಸ್ನಂ’ ಎಂಬ ಫಲಶ್ರುತಿಯಿರುವುದು ಕಾವ್ಯ ಮುಗಿಯುವುದನ್ನು ಸೂಚಿಸುತ್ತದೆ. ಇನ್ನು ಬಾಲಕಾಂಡದ ಹೆಚ್ಚಿನಂಶ ಪ್ರಕ್ಷೇಪವೆಂಬ ವಾದಕ್ಕೆ ಮೂಲಕಾರಣವೆಂದರೆ ರಾಮಾಯಣದ ಮೊದಲ ಅನುಕ್ರಮಣಿಕೆಯಲ್ಲಿ ಬಾಲಕಾಂಡದ ಕಥೆಯೇ ಇಲ್ಲ. ಬಾಲಕಾಂಡದ ಶೈಲಿಯೂ ಉತ್ತರಕಾಂಡದ ಶೈಲಿಯೂ ಪರಸ್ಪರ ಹೋಲಿಕೆಯಾಗುವುದರಿಂದ, ಸಗರ, ವಿಶ್ವಾಮಿತ್ರ, ಸಮುದ್ರಮಥನದಂಥ ಮುಖ್ಯ ಕಥೆಗೆ ಸಂಬಂಧವಿಲ್ಲದ ಪೌರಾಣಿಕ ಶೈಲಿಯಲ್ಲಿ ರಚಿತವಾದ ಉಪಕಥೆಗಳಿರುವುದರಿಂದ ಇವು ಮುಂದೆಲ್ಲೋ ಸೇರಿದವೆನ್ನಬಹುದು(ನೋಡಿ: Lesny V: Gepraege des Balakanada ZDMG, Vol XXVII pp 497). ಅಯೋಧ್ಯಾವರ್ಣನೆ(೫-೭), ರಾಮನ ಜನ್ಮ ಮತ್ತು ಬಾಲ್ಯ(೧೮-೩೧), ವಿವಾಹ(೬೬-೭೩) ಇಷ್ಟು ಸರ್ಗಗಳು ಪೂರ್ವರೂಪವೆಂದೂ ಉಳಿದ ಕಥಾನಕಗಳೆಲ್ಲ ಅನಂತರ ಕಾಲದವೆಂದೂ ತಿಳಿಯುತ್ತಾರೆ.  ಲಕ್ಷ್ಮಣನ ಮದುವೆಯ ವಿಷಯದಲ್ಲಿ ಪರಸ್ಪರ ವಿರುದ್ಧ ವಿಷಯಗಳು ಬೇರೆ ಬೇರೆ ಕಾಂಡದಲ್ಲಿ ಕಂಡುಬರುವುದರ ಬಗ್ಗೆ ತಿಳಿಸಿದ್ದೆ. ಜೊತೆಗೆ ಅಯೋಧ್ಯಕಾಂಡದಲ್ಲಿ ಭರತ ಬಾಲ್ಯದಲ್ಲೇ ಸೋದರಮಾವನ ಮನೆಗೆ ಹೋಗಿ ದಶರಥನ ಮರಣದವರೆಗೂ ಅಲ್ಲೇ ಇದ್ದನೆಂದರೆ(II 8-28) ಬಾಲಕಾಂಡದಲ್ಲಿ ಭರತ ಅಯೋಧ್ಯೆಯಲ್ಲಿದ್ದಂತೆಯೂ, ಮಿಥಿಲೆಯಲ್ಲಿ ಮದುವೆಯಾಗುವ ವರ್ಣನೆಗಳಿವೆ. ಜೊತೆಗೆ ರಾಮಾಯಣದ ೨ನೇ ಸರ್ಗದ ಕೊನೆಯಲ್ಲಿ "ರಘುವರಚರಿತಂ ಮುನಿಪ್ರಣೀತಂ ದಶಶಿರಸಶ್ಚ ವಧಂ ನಿಶಾಮಯಧ್ವಂ " ಎಂದಿರುವುದರಿಮ್ದ ವಾಲ್ಮೀಕಿಯು ಕಥೆಯನ್ನು ಅಯೋಧ್ಯಾವರ್ಣನೆಯಿಂದ ಪ್ರಾರಂಭಿಸಿರಬೇಕೆಂದೂ, ವಾಲ್ಮೀಕಿಯಿಂದ ರಚಿಸಲ್ಪಟ್ಟ ಕಾವ್ಯವನ್ನು ನೀವೆಲ್ಲರೂ ಕೇಳಿ ಎಂಬ ಸಂಬೋಧನಾರ್ಥವು ತೋರುವುದರಿಂದ ವಾಲ್ಮೀಕಿಯ ಶಿಷ್ಯರಲ್ಲಿ ಯಾವನೋ ಒಬ್ಬ ರಾಮಾಯಣವನ್ನು ಗುರುಮುಖವಾಗಿ ಕೇಳಿ ಅದನ್ನು ಜನರಿಗೆ ತಿಳಿಸಲು ಕೆಲ ಸರ್ಗಗಳನ್ನು ಬರೆದು ಸೇರಿಸಿರಬೇಕೆಂದೂ ಗ್ರಹಿಕೆ. ಹಾಗಲ್ಲದೇ ವಾಲ್ಮೀಕಿಯೇ ಬರೆದುದಾಗಿದ್ದರೆ ’ಮುನಿಪ್ರಣೀತಂ’ ಎನ್ನಬೇಕಾದ ಅವಶ್ಯಕತೆಯಿರಲಿಲ್ಲ. ಅದರೊಟ್ಟಿಗೆ ವಾಲ್ಮೀಕಿಯ ಕಾಲದಲ್ಲಿ ರಾಮಾಯಣದ ಕಥೆ ಪ್ರಸಿದ್ಧವಾಗಿತ್ತು
ಕೃತ್ಸ್ನಂ ರಾಮಾಯಣಂ ಕಾವ್ಯಂ ಗಾಯತಾಂ ಪರಮಾ ಮುದಾ |
ಋಷಿಬಾಟೇಷು ಪುಣ್ಯೇಷು ಬ್ರಾಹ್ಮಣಾವಸಥೇಷು ಚ |
ರಥ್ಯಾಸು ರಾಜಮಾರ್ಗೇಷು ಪಾರ್ಥಿವಾನಾಂ ಗೃಹೇಷು ಚ||

ರಾಮಾಯಣ ಕಾಲದಲ್ಲೇ ಋಷಿವಾಟ, ಬ್ರಾಹ್ಮಣಗೃಹ, ರಸ್ತೆ ರಾಜಮಾರ್ಗಗಳಲ್ಲಿ ಇದನ್ನು ಹಾಡುತ್ತಿದ್ದರಂತೆ. ರಾಮಾಯಣದ ಪ್ರಚಾರ ದೇಶಾದ್ಯಂತ ಇದ್ದುದರಿಂದ ಬಾಯಿಂದ ಬಾಯಿಗೆ ಹೋಗುವಾಗ ಮೂಲಪಾಠದಲ್ಲಿ ಎಷ್ಟೆಷ್ಟೋ ವ್ಯತ್ಯಾಸಗಳು ಕಳೆದ ಎರಡುಮೂರು ಸಾವಿರ ವರ್ಷಗಳಲ್ಲುಂಟಾಗಿರುವುದು ಸಹಜ. ಆರ್.ಸಿ.ಮಜುಮ್ದಾರ್, ಎಚ್,ಡಿ,ಸಂಕಾಲಿಯಾ, ಪಿ.ವಿ.ಕಾಣೆ, ಆನಂದ ಗುರುಗೆ, ಪಿ.ಸಿ.ಸೇನ್ ಗುಪ್ತಾ ಮುಂತಾದ ಸುಪ್ರಸಿದ್ಧ ಇತಿಹಾಸಕಾರರ ಪ್ರಕಾರ(ವೆಬರ್ ಮತ್ತು ಜಾಕೋಬಿಯಂಥ ಎಡಪಂಥೀಯ ಇತಿಹಾಸಕಾರರ ವಾದಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದೇನೆ) ಮೊದಲು ಅಯೋಧ್ಯೆ, ಕಿಷ್ಕಿಂಧೆ, ಲಂಕೆಯ ಸುತ್ತ ಹೆಣೆದ ಹಾಡುಗಬ್ಬಗಳಿದ್ದವು. ಎರಡನೇಯದಾಗಿ ವಾಲ್ಮೀಕಿ ಅವುಗಳನ್ನೊಟ್ಟುಗೂಡಿಸಿ ಕಾವ್ಯರಚನೆ ಮಾಡಿದ. ಮೂರನೇಯದಾಗಿ ಅದು ಕಾಂಡಗಳಾಗಿ ವಿಂಗಡಿಸಲ್ಪಟ್ಟಿತು. ನಾಲ್ಕನೇಯದಾಗಿ ಭೌಗೋಳಿಕ ಮತ್ತು ಅತಿಮಾನುಷ ಪ್ರಕ್ಷೇಪಗಳು ಕಾಣಿಸಿಕೊಂಡವು.ಅಂತಿಮವಾಗಿ ಬಾಲಕಾಂಡದ ಐತಿಹ್ಯ ಮತ್ತು ಉತ್ತರಕಾಂಡವನ್ನು ಸೇರಿಸಲಾಯಿತು.
     ವಿದ್ವಾಂಸರ ಪ್ರಕಾರ ರಾಮಾಯಣದ ಹೆಚ್ಚಿನ ಪ್ರಕ್ಷೇಪಗಳಿಗೆ ಕಾರಣ ರಾಮನು ಅವತಾರವೆಂಬ ಕಲ್ಪನೆ ಬೆಳೆದುಬಂದಿದ್ದು(ನೋಡಿ: ಪಿ.ವಿ.ಕಾಣೆ, History of Dharmashastra, Vol II) ಶಥಪಥಬ್ರಾಹ್ಮಣ(I .VIII . 1. 1, VII . v.I.5, XIV I. 2. 11), ತೈತ್ತರೀಯ ಬ್ರಾಹ್ಮಣ(I.I.3.5), ಕಾಠಕಸಂಹಿತಾ ಮಾತ್ರವಲ್ಲ ಸ್ವತಃ ರಾಮಾಯಣದ ಅಯೋಧ್ಯಾಕಾಂಡದ ೧೧೦ನೇ ಶ್ಲೋಕದಲ್ಲೂ ಬ್ರಹ್ಮನ ಅವತಾರಗಳ ಕಲ್ಪನೆಯಿದೆಯೇ ಹೊರತೂ ವಿಷ್ಣುವಿನದ್ದಲ್ಲ. ಬ್ರಹ್ಮನೇ ಮತ್ಸ್ಯ, ಕೂರ್ಮ, ವರಾಹಾವತಾರಗಳನ್ನು ತಳೆದನೆಂಬ ಶ್ಲೋಕವನ್ನು ಗಮನಿಸಿ
ತತಃ ಸಮಭವದ್ ಬ್ರಹ್ಮಾ ಸ್ವಯಂಭೂರ್ದೈವತೈಃ ಸಹ |
ಸ ವರಾಹಸ್ತೋ ಭೂತ್ವಾ ಪ್ರೋಜ್ಜಹಾರ ವಸುಂಧರಾ ||

ಪ್ರಾಯಶಃ ಮಹಾಭಾರತೋತ್ತರ ಕಾಲದಲ್ಲಿ ಕೃಷ್ಣನನ್ನು ವಿಷ್ಣುವಿನ ಜೊತೆ ಕಲ್ಪಿಸಿಕೊಂಡು ಕೃಷ್ಣಾವತಾರವೆಂದಂತೆ ರಾಮಾವತಾರದ ಕಲ್ಪನೆಯೂ ಹರಡಿರಬೇಕು. ಅದರ ಪರಿಣಾಮವೇ ರಾಮಾಯಣದುದ್ದಕ್ಕೂ ಪ್ರಕ್ಷೇಪಗಳುಂಟಾದುದು. ಅದೇ ರೀತಿ ಬುದ್ಧನ ಅವತಾರ ಕಲ್ಪನೆ ಬರುವುದು ಸಾವಿರದೈನೂರು ವರ್ಷದ ಹಿಂದೆ ರಚಿತವಾದ ಭಾಗವತದಲ್ಲಿ ಮಾತ್ರ. ಅವತಾರ ವರ್ಣನೆ ಬರುವ ಬಾಲಕಾಂಡದ ಪುತ್ರಕಾಮೇಷ್ಟಿ(ಸರ್ಗ ೧೫,೧೮) ಮತ್ತು ಪರಶುರಾಮನು ರಾಮನನ್ನು ವಿಷ್ಣುವೆನ್ನುವುದು(೭೬, ೧೭-೧೯) ಪ್ರಕ್ಷಿಪ್ತ ಭಾಗಗಳು. ಉಳಿದೆಡೆ ರಾಮನನ್ನು ’ವಿಷ್ಣುನಾ ಸದೃಶೋ ವೀರ್ಯೇ’ ಎಂದಿದೆಯೇ ಹೊರತೂ ಅವತಾರವೆಂದಲ್ಲ. ಕೊನೆಯ ಭಾಗದಲ್ಲಿ ’ರಾಮೋ ರಾಜ್ಯಮುಪಾಸಿತ್ವಾ ಬ್ರಹ್ಮಲೋಕಂ ಪ್ರಯಾಸ್ಯತಿ’ ಎಂದಿದಿಯೇ ಹೊರತೂ ವೈಕುಂಠಕ್ಕೆ ತೆರಳಿದನಂತಲ್ಲ. ಅಯೋಧ್ಯಾಕಾಂಡದ ಮೊದಲ ೩೫ ಶ್ಲೋಕಗಳು ಪ್ರಕ್ಷಿಪ್ತವೆಂದು ವಿದ್ವಾಂಸರ ಅಭಿಪ್ರಾಯ. ದಕ್ಷಿಣಾತ್ಯದ ಅರಣ್ಯಕಾಂಡದಲ್ಲಿ ರಾಮನನ್ನು ’ದೇವವರ’ ಎಂದರೆ, ಕಿಷ್ಕಿಂಧಾಕಾಂಡದಲ್ಲಿ ಅವತಾರದ ಮಾತಿಲ್ಲ. ಮತ್ತದೇ ದಾಕ್ಷಿಣಾತ್ಯದಲ್ಲಿ ಹನುಮಂತನು ರಾಮನನ್ನು ’ವಿಷ್ಣುತುಲ್ಯ ಪರಾಕ್ರಮ, ಸರ್ವಲೋಕೇಶ್ವರ, ಲೋಕನಾಥ’ ಎನ್ನುತ್ತಾನೆ. ಇಂಥ ಅವತಾರಗಳ ವರ್ಣನೆಯೂ ಒಂದು ಪಾಠದಲ್ಲಿ ಕಂಡುಬಂದರೆ ಮತ್ತೊಂದರಲ್ಲಿರುವುದಿಲ್ಲ. ಇದೇ ರೀತಿ ಯುದ್ಧಕಾಂಡದಲ್ಲಿ ಬರುವ ೫೯ನೇ ಸರ್ಗ, ಮಂಡೋದರೀವಿಲಾಪ, ದೇವತಾಪ್ರಶಂಸೆ, ಆದಿತ್ಯ ಹೃದಯದ ಉಪದೇಶಗಳು ಒಂದರಲ್ಲಿದ್ದರೆ ಇನ್ನೊಂದರಲ್ಲಿಲ್ಲ. ರಾವಣನು ಮಾರೀಚನಲ್ಲಿ ಬರುವ ವರ್ನನೆ (III-31-35) ಮೂರೂ ಪಾಠಕ್ರಮಗಳಲ್ಲುಲ್ಲೇಖವಾಗಿಲ್ಲ. ಕೆಲ ಪ್ರಕ್ಷೇಪರೂಪಗಳು ಕಾಳಿದಾಸ, ಮಹಾಭಾರತದ ಕೆಲ ಸರ್ಗಗಳ ವೇಳೆಗಾಗಲೇ ಪ್ರಸಿದ್ಧವಾಗಿದ್ದರಿಂದ ಅವುಗಳ ಪ್ರಾಚೀನತೆಯನ್ನು ಊಹಿಸಬಹುದು. ಇಷ್ಟೆಲ್ಲ ಪ್ರಕ್ಷೇಪಗಳು ಸೇರಬೇಕಾದರೆ ನಾಲ್ಕೈದು ನೂರು ವರ್ಷಗಳಾದರೂ ಕಳೆದಿರಬಹುದು. ಆದರೂ ಇದು ಕ್ರಿ.ಪೂ ಒಂದನೇ ಶತಮಾನಕ್ಕೀಚೆಗಿನದ್ದಲ್ಲ.(ರಾಮಾಯಣ ಕಾಲನಿರ್ಣಯಕ್ಕಾಗಿ ನೋಡಿ: (i)H.Jakobi: ದಶ ರಾಮಾಯಣp 100; (ii). M Winternitz: History of Indian Literature Vol I p 500,517; (iv). C Vaidya: The Riddle of Ramayana, (v).The age of Ramayana , J.R.A.S 1915) ರಾಮಾಯಣದ ಕಥಾವೃತ್ತಾಂತ ವೈದಿಕ ಸಾಹಿತ್ಯ, ಪಾಣಿನಿ ಸೂತ್ರಗಳಲ್ಲಿ ಬರುವುದಿಲ್ಲ. ಹಾಗೆಂದು ಭಾರತದ ಮೂಲಕಥೆ ಬರುತ್ತದೆ. ರಾಮಾಯಣ ಕಥಾನಾಯಕರ ಸ್ವಭಾವ ಭಾರತದ ಮುಖ್ಯವೀರರ ಸ್ವಭಾವಕ್ಕಿಂತ ಹೆಚ್ಚು ಸುಸಂಸ್ಕೃತವೆಂದು ಪಾಶ್ಚಾತ್ಯ ಇತಿಹಾಸಕಾರರ ಅಭಿಪ್ರಾಯ. ಮಾನವರೊಡನೆ ವಾನರರೂ ರಾಕ್ಷಸರೂ ಭಾರತದಲ್ಲಿ ವಾಸಿಸುತ್ತಿದ್ದ ಕಾಲದ ರಾಮಾಯಣವು ತ್ರೇತಾಯುಗದ ಕಥೆ. ಮಹಾಭಾರತವು ದ್ವಾಪರದ ಕೊನೆಯ ಕಥೆ. ಸಂಸ್ಕೃತಿಯು ಯುಗದಿಂದ ಯುಗಕ್ಕೆ ವಿಕಸಿತಗೊಳ್ಳುವುದೆಂದು ಪಾಶ್ಚಾತ್ಯರು ಭಾವಿಸಿದ್ದರೆ ಹ್ರಾಸಗೊಳ್ಳುವುದೆಂದು ನಮ್ಮ ಪುರಾಣಗಳು ಹೇಳುತ್ತವೆ. ಪ್ರಕ್ಷೇಪಗಳನ್ನು ಬಿಟ್ಟುಬಿಟ್ಟರೆ ರಾಮಾಯಣದ ಮೂಲಕಥೆ ದಿವ್ಯಕಥೆಯಲ್ಲ. ಅದು ಒಂದು ರಾಜಪರಿವಾರದ ಸಾಂಸಾರಿಕ ಚಿತ್ರಣ. ಪೂರ್ವದಿಂದ ನಡೆದು ಬಂದ ಧರ್ಮಕ್ಕೂ ಸನ್ನಿವೇಶದ ವೈಪರೀತ್ಯಕ್ಕೂ ನಡೆವ ಘರ್ಷಣೆ. ರಾಜನ ಧರ್ಮದ ವ್ಯಾಪ್ತಿ ವೈಯಕ್ತಿಕತೆಯನ್ನು ದಾಟಿ ಸಾರ್ವತ್ರಿಕತೆಯನ್ನು ಪಡೆವ ಬಗೆ. ಮಾನವೀಯ ಸ್ವಾರಸ್ಯದ ಜೊತೆ ವಿಶಾಲವಾದ ಧ್ಯೇಯಗಳ ಸಮಾಗಮ. ಅದು ದೇವರಲ್ಲದ ಒಬ್ಬ ಆದರ್ಶ ಮಾನವನ ಕಥೆ. ಅಲ್ಲಿ ರಾಮನೇ ಕೇಂದ್ರ ಅವನ ಕಷ್ಟ-ಸುಖಗಳು, ಅವನ ಆದರ್ಶಗಳು, ಅವನ ಕೃತಿಗಳು, ಧರ್ಮನಿರತ ರಾಮನ ವಿಜಯ, ಅಧರ್ಮದ ಪರಾಭವ. ಅಲ್ಲಿ ಒಂದು ಅನಾದೃಶ್ಯ ಏಕಸೂತ್ರತೆಯಿದೆ, ಕವಿಪ್ರತಿಭೆಯ ಕೈವಾಡವಿದೆ, ಸಾಮಾನ್ಯ ಘಟನೆಗಳನ್ನೇ ತೆಗೆದುಕೊಂಡು ಹೃದಯಂಗಮವಾಗಿ, ರಸಮಯವಾಗಿ ವರ್ಣಿಸಿದ ವಾಲ್ಮೀಕಿಯ ಕಾವ್ಯಕಲೆ ಅಬ್ಬ ಅದೊಂದು ಅದ್ಭುತ. ರಾಮ, ಲಕ್ಷ್ಮಣ, ಸೀತೆ, ಹನುಮಂತ ಮುಂತಾದ ಪಾತ್ರಗಳನ್ನು ಪವಾಡಪುರುಷರನ್ನಾಗಿಸಿ, ದೇವಾಂಶಸಂಭೂತರನ್ನಾಗಿಸಿ ಮಾಡಿ ಧರ್ಮದ ಶೃದ್ಧೆಯನ್ನು ಹೆಚ್ಚಿಸುವಂತೆ ಹಲವಾರು ಅತಿಮಾನುಷ ಕಥೆಗಳನ್ನು ಸೇರಿಸಿದ್ದು ಮುಂದಿನ ಕವಿಗಳೇ ಹೊರತೂ ಆದಿಕವಿಯಲ್ಲ. ಆದಿಕಾವ್ಯವನ್ನು ಅಲೌಕಿಕವೆಂದು ತಿಳಿದರೆ ಅದನ್ನು ವಿಮರ್ಶೆಗೊಳಪಡಿಸಬೇಕಾದ ಅಗತ್ಯವಿಲ್ಲ. ಲೌಕಿಕವೆಂದೂ ಇತಿಹಾಸವೆಂದೂ ತಿಳಿದರೆ ಅದರ ಕಾವ್ಯವಿಮರ್ಶೆಗೊಳಪಡಿಸಿದರೆ ಅದರ ಕಳೆ ಹೆಚ್ಚುವುದೇ ಹೊರತೂ ಕಡಿಮೆಯಾಗುವುದಿಲ್ಲ. ಪುರಾಣಗಳ ನೀರಸತೆಗೂ ಕಾವ್ಯಗಳ ಸ್ವಾರಸ್ಯಕ್ಕೂ ಇರುವ ವ್ಯತ್ಯಾಸವೇ ಅದು. ಅಗ್ನಿಪರೀಕ್ಷೆಗೆ ಸೀತೆಯನ್ನು ಒಡ್ಡುವುದು, ಸಾಕಾಗದೇ ಎರಡನೇ ಸಲ, ಮೂರನೇ ಸಲ ಮಾಡಿಸುವುದು ಇವೆಲ್ಲ ಪ್ರಕ್ಷೇಪ ವೈಚಿತ್ರ್ಯಗಳಷ್ಟೇ ಹೊರತೂ ಇನ್ನೇನೂ ಅಲ್ಲ. ಪೂರ್ವಾಪರ ವಿರೋಧವಿದ್ದರೂ ಅದ್ಭುತಗಳು ಯಾವುದಕ್ಕೂ ವಿರುದ್ದವಲ್ಲವೆಂಬ ಸಮಾಧಾನವನ್ನು ನಮಗೆ ನಾವೇ ಕೊಟ್ಟುಕೊಳ್ಳಬೇಕಷ್ಟೆ. ಯುದ್ಧಕಾಂಡದಲ್ಲಿ ಇಂಥ ಅದ್ಭುತ ಚರಿತ್ರೆಗಳನ್ನು ವರ್ಣಿಸಲು ಭಾರೀ ಅವಕಾಶಗಳಿರುವುದರಿಂದ ಮಾಯಾಸೀತೆ, ಸಂಜೀವಿನಿ, ದೇವೇಂದ್ರನ ರಥ, ಅಗ್ನಿಪರೀಕ್ಷೆ ಇವೆಲ್ಲ ಮತ್ತೆ ಸೇರಿಸಿದಂತಿವೆ ಎನ್ನುವುದು. ಸೀತೆಯ ಸ್ವಭಾವ ಗೊತ್ತಿದ್ದರೂ ಅವಳ ಪಾತಿವ್ರತ್ಯವನ್ನು ಶಂಕಿಸುವುದೇ ವಿಚಿತ್ರ. ಒಂದು ವೇಳೆ ರಾಮಾಯಣದ ಪಾತ್ರಗಳೆಲ್ಲ ದೇವೋಪಮ ಧ್ಯೇಯವುಳ್ಳ ಮಾನವರು ಅಥವಾ ದೇವತೆಗಳು ಎಂದಿಟ್ಟುಕೊಂಡರೂ ದೇವತೆಗಳು ದೋಷಾತೀತರು, ಅವರು ಎಲ್ಲದಕ್ಕೂ ಸಮರ್ಥರು ಎಂದು ಸಾಧಿಸಲು ಹೊರಟಾಗಲೆಲ್ಲ ಮೂಲಾಂಶ ಮರೆಯಾಗುತ್ತದೆ. ವೈದಿಕ ವಾಙ್ಮಾಯದಲ್ಲಿ ಋಗ್ವೇದದಲ್ಲಿ ಒಮ್ಮೆ ರಾಮನ ಹೆಸರಿದೆ(ಋಗ್ವೇದ X.93.14),ಸೀತೆಯು ಕೃಷಿಯ ಅಧಿಷ್ಟಾತ್ರಿದೇವತೆ(ಅಥರ್ವವೇದ III.17.8)(ರಾಮಾಯಣದಲ್ಲಿ ಭೂಮಿಯನ್ನೂಳುವಾಗ ನೆಗಿಲ ತುದಿಗೆ ಸೀತೆ ಸಿಕ್ಕುವ ಸನ್ನಿವೇಶವನ್ನು ನೆನಪಿಸಿಕೊಳ್ಳಿ) ರಾಮಾಯಣದಲ್ಲಿ ಇತಿಹಾಸಕ್ಕಿಂತ ಕಲ್ಪನೆ ಹೆಚ್ಚೆಂಬುದನ್ನೇ ಇವು ತೋರಿಸುತ್ತವೆ,
      ಇನ್ನು ಇಕ್ಷ್ವಾಕು ಕುಲದವರು ಇಡೀ ಭೂಮಿಯನ್ನು ಆಳುತ್ತಿದ್ದರೆಂಬುದೆಲ್ಲ ಕವಿಕಲ್ಪನೆ. ಈಗಿನ ಅಯೋಧ್ಯೆಯ ಪ್ರದೇಶದಲ್ಲಿ ಕೋಸಲರೂ, ಬಿಹಾರದ ಉತ್ತರದಲ್ಲಿ ವಿದೇಹರೂ, ಕಾಶಿಯ ಸುತ್ತಮುತ್ತ ಕಾಶೀಯರೂ ಸ್ವತಂತ್ರರಾಗಿ ಆಳುತ್ತಿದ್ದರೆಂಬುದಕ್ಕೆ ಗ್ರಂಥಾಧಾರಗಳಿವೆ. ಗಂಡಕಿ ನದಿಯ(’ಸದಾನೀರ’ವೆಂಬ ಹೆಸರಿನಿಂದ ಪ್ರಸ್ತಾಪಿಸಲ್ಪಟ್ಟಿದೆ) ಪಶ್ಚಿಮದಲ್ಲಿ ಕೋಸಲರೂ ಪೂರ್ವದಲ್ಲಿ ವಿದೇಹರೂ ಆಳುತ್ತಿದ್ದರಿಂದ ಅದು ಅವೆರಡು ರಾಜ್ಯಗಳ ಗಡಿಯಾಗಿರುವುದರಿಂದ ರಾಮನು ಅರಣ್ಯವಾಸದಲ್ಲಿ ಗಂಡಕಿಯನ್ನು ದಾಟಿರಲು ಸಾಧ್ಯವಿಲ್ಲ. ರಾಮಾಯಣದಲ್ಲುಲ್ಲೇಖವಾಗಿರುವ ಪಂಚವಟಿಯಿರುವುದು ನಾಸಿಕದಲ್ಲಲ್ಲ. ಚಿತ್ರಕೂಟದಿಂದ ಗೋದಾವರಿಯ ಪಯಣದಲ್ಲಿ ಎಲ್ಲಿಯೂ ವಿಂಧ್ಯ ಮತ್ತು ನರ್ಮದೆಯ ಪ್ರಸ್ತಾವವಿಲ್ಲ. ವಿಂಧ್ಯದ ಬೆಳವಣಿಗೆಯನ್ನು ತಡೆದಿದ್ದ ಅಗಸ್ತ್ಯರ ಉಲ್ಲೇಖ ಒಂದು ಬಾರಿ ಕಂಡುಬರುತ್ತದೆ. ವಿಂಧ್ಯ ಪರ್ವತಾವಳಿ ಮತ್ತು ನರ್ಮದೆ ಮಧ್ಯಭಾರತದ ಎದ್ದುಕಾಣುವ ಭೌಗೋಳಿಕ ಕುರುಹುಗಳು. ಇವನ್ನು ದಾಟದೇ ನಾಸಿಕಕ್ಕೆ ಹೋಗಲು ಕನಸಿನಲ್ಲಿಯೂ ಸಾಧ್ಯವಿಲ್ಲ. ತ್ರಿವೇಣಿ ಸಂಗಮದ ಸ್ಥಳದ ಉಲ್ಲೇಖವಿರುವುದರಿಂದ ರಾಮನು ಅಲಹಾಬಾದಿನಿಂದ ದಕ್ಷಿಣಾಭಿಮುಖವಾಗಿ ರೇವ, ಗೋವಿಂದಘರ್, ಷಹದೂರ್, ಬಿಲಾಸಪುರ್, ಶೋರಿ ನಾರಾಯಣ್, ರಾಯಪುರ ಮಾರ್ಗವಾಗಿ ಬಂದು ಸದ್ಯ ಛತ್ತೀಸಘಡದ ದಕ್ಷಿಣ ತುದಿಯಲ್ಲಿರುವ ದಂಡಕ ಎನ್ನಲಾಗುತ್ತಿದ್ದ ’ಗೋಂಡ್’ ಅಡವಿಯನ್ನು ಪ್ರವೇಶಿಸಿರಬೇಕು. ಈ ಹಾದಿಯ ಶಬರಿನಾರಾಯನ ಅಥವಾ ಶೋರಿನಾರಾಯಣದಲ್ಲೇ ರಾಮನು ಆದಿವಾಸಿ ಶಬರಿಯನ್ನು ಭೇಟಿಯಾಗಿದ್ದು. ಈ ಸ್ಥಳ ಇಂದಿಗೂ ಶಬರರು ಗೊಂಡರು ಸೇರಿದಂತೆ ಆದಿವಾಸಿಗಳ ಕೇಂದ್ರಸ್ಥಳ. ಇನ್ನು ಪಂಚವಟಿಯಿರುವುದು ಆಂಧ್ರದ ಖಮ್ಮಂ ಜಿಲ್ಲೆಯ ದಕ್ಷಿಣದ ಅಯೋಧ್ಯೆಯೆಂದೇ ಕರೆಯಲ್ಪಡುವ ಭದ್ರಾಚಲಂನ ಹತ್ತಿರದ ಪರ್ಣಶಾಲೆಯಲ್ಲಿ. ರಾಮ ಮರದ ಎಲೆಗಳಿಂದ ನಿರ್ಮಿಸಿದ ಕುಟೀರದಿಂದ ಈ ಹೆಸರು ಬಂದುದು. ಆಸ್ತಿಕರಿಗೆ ತಮ್ಮನ್ನು ರಾಮನೊಡನೆ, ರಾಮಾಯಣದೊಡನೆ ’connect' ಮಾಡಿಕೊಳ್ಳಲು ಈ ಪರ್ಣಶಾಲೆಗಿಂತ ಅದ್ಭುತ ಜಾಗ ಇನ್ನೊಂದಿರಲಾರದು. ರಾಮಾಯಣದ ಪಂಚವಟಿ, ಅದಿರುವ ದಂಡಕಾರಣ್ಯದ ಸ್ಥಳ, ಸೀತಾಪಹರಣ ನಡೆದಿದ್ದು ಇಲ್ಲಿಂದಲೇ.
     ಪ್ರಕ್ಷೇಪಗಳು ಹೇಗೆ ಕಾಲಮಾನಕ್ಕನುಗುಣವಾಗಿ ಪರಿಚಯಿತವಾಗುತ್ತವೆ ಎಂಬುದರ ಬಗ್ಗೆ ಒಂದು ಉದಾಹರಣೆ ನೋಡೋಣ. ಅರಣ್ಯವಾಸದಲ್ಲಿದ್ದ ರಾಮನನ್ನು ನೋಡಲು ಬಂದ ಭರತ ರಾಮನನ್ನು ಪುನಃ ಕರೆತರಲಾರದೇ ಅವನ ಪಾದುಕೆಗಳನ್ನು ತಂದನೆಂಬ ಕಥೆ ನಮಗೆ ತಿಳಿದಿದೆ. ಅವಾದರೂ ಎಂಥ ಪಾದುಕೆಗಳು? ಎಲ್ಲ ಆವೃತ್ತಿಗಳೂ ತಿಳಿಸುವಂತೆ ಸುವರ್ಣಾಲಂಕೃತವಾದವು. ಕೇವಲ ದಶರಥಜಾತಕದಲ್ಲಿ ಮಾತ್ರ ಹುಲ್ಲಿನ ಪಾದುಕೆಯ ಪ್ರಸ್ತಾಪವಿದೆ. ಎಲ್ಲವನ್ನೂ ತ್ಯಜಿಸಿ ಋಷಿಯಂತೆ ನಾರುಮಡಿಯುಟ್ಟು ಕಾಡಿಗೆ ತೆರಳಿದ ರಾಮ ಸುವರ್ಣ ಪಾದುಕೆಗಳನ್ನು ಹೇಗೆ ಹೊಂದಲು ಸಾಧ್ಯವೆಂಬುದು ಗಮನಾರ್ಹ ವಿಚಾರ. ಇಂಥ ಸಂದರ್ಭದಲ್ಲಿ ಪಾದುಕಾ ಪೂಜೆಯ ಕಲ್ಪನೆಯ ಬೆಳವಣಿಗೆಯನ್ನು ಪರಿಶೀಲಿಸುವುದು ಅಗತ್ಯ. ವೈದಿಕ ಸಾಹಿತ್ಯದಲ್ಲಿ ವಿಷ್ಣುವಿನ ಮೂರು ಹೆಜ್ಜೆಗಳ ಪ್ರಸ್ತಾಪ ಬಿಟ್ಟರೆ ಪಾದುಕೆ ಅಥವಾ ಹೆಜ್ಜೆಗುರುತುಗಳ ಆರಾಧನೆಯ ವರ್ಣನೆಯಿಲ್ಲ. ಅಲ್ಲದೇ ದೈವೀ ವ್ಯಕ್ತಿಯೋರ್ವನ ಅಥವಾ ಋಷಿಯ ಹೆಜ್ಜೆಗುರುತುಗಳನ್ನಾಗಲೀ ಅವರ ಪಾದುಕೆಗಳನ್ನಾಗಲೀ ಪೂಜಿಸಿದ ಕ್ರಮ ಎಲ್ಲಿಯೂ ಉಲ್ಲೇಖಗೊಂಡಿಲ್ಲ. ನಮಗೆ ತಿಳಿದ ಮಟ್ಟಿಗೆ ಈ ಕಲ್ಪನೆ ಮೊಟ್ಟಮೊದಲು ಬೌದ್ಧರದ್ದು. ಬುದ್ಧನು ತನ್ನನ್ನು ಮನುಷ್ಯರೂಪದಲ್ಲಿ ಪೂಜಿಸುವುದನ್ನು ನಿಷೇಧಿಸಿದಾಗ ಭಕ್ತರು ಅವನ ಕುರುಹುಗಳನ್ನು ಆರಾಧಿಸತೊಡಗಿದರು. ಹೀಗಾಗಿಯೇ ನಮ್ಮ ಪ್ರಾಚೀನ ಬೌದ್ಧ ಸ್ಮಾರಕಗಳಾದ ಸಾಂಚಿ, ಕಾರ್ಲೇ, ಅಮರಾವತಿ ಮತ್ತು ನಾಗಾರ್ಜುನಕೊಂಡಗಳಲ್ಲಿ ಬುದ್ಧನ ಜೀವನಚರಿತ್ರೆಯ ಜೊತೆಗೆ ಅವನ ಹೆಜ್ಜೆಗುರುತುಗಳೂ ಇವೆ. ಆದ್ದರಿಂದ ಭರತನು ರಾಮನ ಪಾದುಕೆಗಳನ್ನು ಪೂಜಿಸುವ ಪ್ರಕ್ಷೇಪ ಕ್ರಿ.ಶಕಕ್ಕಿಂತ ಮೊದಲು ಸೇರಿರಲಾರದು. ಮುಂದೆ ಅಯೋಧ್ಯಾಕಾಂಡವನ್ನು ಪುನರ್ರೂಪಿಸುವಾಗ ಪಾದುಕೆಗಳು ಸುವರ್ಣಭೂಷಿತವಾದವು. ಚಕ್ರವರ್ತಿ ಭರತ ಮರದ ಪಾದುಕೆಗಳನ್ನು ಪೂಜಿಸಲಾರನಷ್ಟೆ!
      ಬರೋಡಾ ವಿಶ್ವವಿದ್ಯಾಲಯದವರು ಎಷ್ಟೋ ವರ್ಷಗಳ ಸಂಶೋಧನೆಯ ನಂತರ ಮೂಲಪಾಠ ಮತ್ತು ಪಾಠಾಂತರಗಳನ್ನು ಪರಿಷ್ಕರಿಸಿ ಸಂಸ್ಕರಣವನ್ನು ಸಿದ್ಧಗೊಳಿಸಿದ್ದಾರೆ. ಆದ್ದರಿಂದ ಮೂಲರಾಮಾಯಣ ಮತ್ತು ಪ್ರಕ್ಷಿಪ್ತ ಭಾಗಗಳನ್ನು ಗುರುತಿಸುವುದು ಸದ್ಯಕ್ಕೆ ಕಷ್ಟದ ಕೆಲಸವಲ್ಲ.
     ಅಶ್ವಘೋಷ, ಭಾಸ, ಕಾಳಿದಾಸ, ಭವಭೂತಿ, ಮುರಾರಿ, ರಾಜಶೇಖರ, ಬಾಣರಂಥವರು ವಾಲ್ಮೀಕಿಗೆ ನಮಸ್ಕರಿಸಿಯೇ ತಮ್ಮ ಕಾವ್ಯರಚನೆಯನ್ನು ಮಾಡಿದ್ದು. ವಿಷ್ಣು, ವಾಯು, ಭಾಗವತ, ಕೂರ್ಮ, ಅಗ್ನಿ, ನಾರದೀಯ, ಸ್ಕಂದ, ಪದ್ಮಾದಿ ಪುರಾಣ ಉಪಪುರಾಣಗಳಲ್ಲೆಲ್ಲ ವಾಲ್ಮೀಕಿಯ ರಾಮಾಯಣ ಬೇರೆ ಬೇರೆ ರೂಪದಿಂದ ಬೆಳೆದು ಬೃಹತ್ ವಟವೃಕ್ಷವಾಗಿ ಬೆಳೆದಿದೆ. ಯೋಗವಾಸಿಷ್ಟ, ಆಧ್ಯಾತ್ಮ ರಾಮಾಯಣ, ಅದ್ಭುತರಾಮಾಯಣ, ಆನಂದರಾಮಾಯಣದಂತೆ ಸಹಸ್ರ ಸಹಸ್ರ ಉದ್ಗೃಂಥಗಳು ಮಾತ್ರವಲ್ಲ ದೇಶಭಾಷೆಗಳ ಲೆಕ್ಕವಿಲ್ಲದಂತೆ ಜೈನ, ಬೌದ್ಧ ಸಾಹಿತ್ಯವೂ ರಾಮಾಯಣ ಸಂಸ್ಕೃತಿ ಪ್ರಚಾರವನ್ನು ಬೇರೆ ಬೇರೆ ರೀತಿಗಳಿಂದ ಮಾಡುತ್ತಲೇ ಬಂದಿವೆ. ರಾಮಕಥೆಯ ಬೆಳವಣಿಗೆ ಸಾವಿರಾರು ವರ್ಷಗಳಲ್ಲಿ ಸಾವಿರಾರು ರೀತಿಗಳಲ್ಲಿ ನಡೆದಿರುವುದರಿಂದ ಅದರ ನಿರೀಕ್ಷಣೆಯನ್ನು ಯಾವ ಗ್ರಂಥದ ಮಿತಿಯಲ್ಲೂ ಕೂಡಿಸಲು ಅಸಾಧ್ಯ. ವಿಮರ್ಶಿಸುವುದಂತೂ ಮನುಷ್ಯಮಾತ್ರರಿಗೆ ದೂರದ ಮಾತು.
      ಹಾಂ ಅಂದಹಾಗೆ, ಲಂಕೆ ಮಧ್ಯಭಾರತದಲ್ಲೆಲ್ಲೋ ಇದ್ದರೆ ಗೋಕರ್ಣದಲ್ಲಿ ರಾವಣ ಸ್ಥಾಪಿಸಿದ ಆತ್ಮಲಿಂಗವಿದೆಯಲ್ಲ ಎಂಬ ಚಿಂತೆ ತಲೆಕೊರೆಯುತ್ತಿತ್ತು. ಅಷ್ಟಕ್ಕೂ ಕೈಲಾಸದಿಂದ ಶ್ರೀಲಂಕಾಕ್ಕೆ ಹೋಗುವಾಗ ರಾವಣ ಪಶ್ಚಿಮ ಕರಾವಳಿಗೆ ಬಂದುದು ಆಶ್ಚರ್ಯವೇ. ಪುಷ್ಪಕ ವಿಮಾನದಲ್ಲಿ ಮನೋವೇಗದಲ್ಲಿ ಲಂಕೆಗೆ ಹೋಗುವವನು ಅಲ್ಲಿಗೆ ಹೋಗಿಯೇ ಸಂಧ್ಯಾವಂದನೆ ಮಾಡಬಹುದಿತ್ತಲ್ಲ ಎಂಬ ಪ್ರಶ್ನೆ ಶುದ್ಧ ಕುಹಕವೇ. ಇರಲಿ. ಗೋಕರ್ಣದ ಕಥೆ ನಿಮಗೆ ಗೊತ್ತಲ್ಲ. ಶಿವನಿಂದ ಆತ್ಮಲಿಂಗವನ್ನು ಪಡೆದ ರಾವಣ ಲಂಕೆಯ ಮಾರ್ಗದಲ್ಲಿ ತೆರಳುತ್ತಿರಲು ಸಾಯಂಸಂಧ್ಯೆ ಸಮೀಪಿಸಿತು. ಸಂಧ್ಯಾಕಾಲದಲ್ಲಿ ಸೂರ್ಯನಿಗೆ ಅರ್ಘ್ಯ ನೀಡುವ ಸಮಯ. ಆತ್ಮಲಿಂಗವನ್ನು ನೆಲದ ಮೇಲಿಡುವಂತಿರಲಿಲ್ಲ. ಕೈಯಲ್ಲಿ ಲಿಂಗ ಹಿಡಿದು ಸಂಧ್ಯಾವಂದನೆ ಮಾಡುವಂತಿಲ್ಲವೆಂದು ಚಿಂತಾಕ್ರಾಂತನಾದ ರಾವಣನಿಗೆ ಅಲ್ಲೇ ಸುಳಿದಾಡುತ್ತಿದ್ದ ವಟುವೇಷದ ಗಣೇಶ ಕಾಣುತ್ತಾನೆ. ಆತ್ಮಲಿಂಗವನ್ನು ಸಂಧ್ಯಾವಂದನೆ ಪೂರ್ಣಗೊಳ್ಳುವ ತನಕ ಹಿಡಿದುಕೊಳ್ಳುವಂತೆ ವಿನಂತಿಸಿ ನೆಲದಲ್ಲಿರಿಸದಂತೆ ಕೇಳಿಕೊಂಡ. ಇದಕ್ಕೆ ಪ್ರತಿಯಾಗಿ ಗಣಪತಿ, ಲಿಂಗವೇನಾದರೂ ಭಾರವಾದರೆ ಮೂರು ಬಾರಿ ರಾವಣನನ್ನು ಕೂಗಿ ಲಿಂಗವನ್ನು ನೆಲದಲ್ಲಿರಿಸುವುದಾಗಿ ಹೇಳಿದ. ರಾವಣ ಸಂಧ್ಯಾವಂದನೆ ಮುಗಿಸಿ ಬರುವುದರೊಳಗೆ ಗಣೇಶ ಆತ್ಮಲಿಂಗವನ್ನು ನೆಲದಲ್ಲಿರಿಸಿದ. ದೇವತೆಗಳ ಸಂಚನ್ನು ಅರಿತುಕೊಂಡ ರಾವಣ ಕೋಪೋದ್ರಿಕ್ತನಾಗಿ ಲಿಂಗವನ್ನು ಬುಡಮೇಲು ಮಾಡಲು ಯತ್ನಿಸಿದನಾದರೂ ಸಫಲವಾಗಲಿಲ್ಲ. ಕೈಗೆ ಸಿಕ್ಕ ತುದಿಯ ಚೂರುಗಳು ಬೇರೆ ಬೇರೆ ಸ್ಥಳದಲ್ಲಿ ಬಿದ್ದು ಧಾರೇಶ್ವರ, ಗುಣವಂತೇಶ್ವರ, ಸಿದ್ಧೇಶ್ವರ, ಮುರ್ಡೇಶ್ವರಗಳೆಂದು ಖ್ಯಾತವಾದವು. ರಾವಣ ರಭಸಕ್ಕೆ ಲಿಂಗವು ಗೋವಿನ ಕಿವಿಯ ಆಕಾರವನ್ನು ತಳೆದಿದ್ದರಿಂದ ಈ ಸ್ಥಳ ಗೋಕರ್ಣವೆಂದು ಪ್ರಸಿದ್ಧವಾಯಿತು.
ಕಥೆ ಕೇಳಿದಿರಲ್ಲ. ಥೇಟ್ ಇಂಥದ್ದೇ ಕಥೆ ಉತ್ತರ ಪ್ರದೇಶದ ಲಖಿಮಪುರ ಖೇರಿಯ ಗೋಲಾ ಗೋಕರ್ಣನಾಥದಲ್ಲೂ ನಡೆದಿದೆ. ಅಲ್ಲಿಯೂ ಇದೇ ರಾವಣನ ಆತ್ಮಲಿಂಗವನ್ನು ಇದೇ ಗಣಪತಿ ಹೀಗೆಯೇ ನೆಲದಲ್ಲಿಟ್ಟ ಕಥೆಯಿದೆ. ಈ ಲಿಂಗವೂ ಗೋವಿನ ಕಿವಿಯ ಆಕಾರದಲ್ಲೇ ಇದೆ. ಹಾಗಾದರೆ ಇವೆರಡರಲ್ಲಿ ಅಸಲಿ ಗೋಕರ್ಣ ಯಾವುದು? ಅಥವಾ ರಾವಣ ಎರಡೆರಡು ಬಾರಿ ಮೋಸಹೋದನೇ?
ಶಿವನಲ್ಲಿ ಎಷ್ಟು ಆತ್ಮಲಿಂಗಗಳಿದ್ದವು? ಬಹಳಷ್ಟಿದ್ದರೆ ಮತ್ತೊಮ್ಮೆ ತಪಸ್ಸು ಮಾಡಿ ಇನ್ನೊಂದು ಆತ್ಮಲಿಂಗವನ್ನು ತಂದುಕೊಳ್ಳುವುದು ರಾವಣನಿಗೇನೂ ಕಷ್ಟವಾಗಿರಲಿಲ್ಲ. ಹೇಗಿದ್ದರೂ ಶಿವ ಬೇಡಿದ್ದೆಲ್ಲ ನೀಡುವ ಭೋಲಾಶಂಕರನಲ್ಲವೇ. ಏಕೆ ಈ ಪ್ರಶ್ನೆ ಎಂದರೆ ಆಂಧ್ರದಲ್ಲಿ ಪಂಚಾರಾಮ ಕ್ಷೇತ್ರಗಳೆಂಬ ಐದು ಖ್ಯಾತ ಶಿವ ಕ್ಷೇತ್ರಗಳಿವೆ. ಶಿವನಿಂದ ಆತ್ಮಲಿಂಗ ಪಡೆದ ತಾರಕಾಸುರ ಲೋಕಕಂಟಕನಾಗಿ ಮೆರೆಯುತ್ತಿದ್ದಾಗ ಕುಮಾರಸ್ವಾಮಿಯು ಲಿಂಗವನ್ನು ಐದು ಚೂರುಗಳನ್ನಾಗಿಸಿ ಭೂಸ್ಪರ್ಶ ಮಾಡಿಸಿದನಂತೆ. ಹೀಗೆ ಆತ್ಮಲಿಂಗ ಬಿದ್ದ ಐದು ಜಾಗಗಳೇ ಅಮರರಾಮ, ದ್ರಾಕ್ಷಾರಾಮ, ಸೋಮರಾಮ, ಕ್ಷೀರರಾಮ ಮತ್ತು ಕುಮಾರರಾಮವೆಂಬ ಐದು ಪಂಚಾರಾಮ ಕ್ಷೇತ್ರಗಳಾಗಿ ಪ್ರಸಿದ್ದವಾದವು.
ತಮಿಳ್ನಾಡಿನ ತಿರುಚಿನಾಪಳ್ಳಿಯ ರಂಗನಾಥನದ್ದೂ ಇದೇ ಕಥೆ. ಆದರೆ ರಂಗನಾಥನ ವಿಗ್ರಹವನ್ನು ಹಿಡಿದುಕೊಂಡು ಹೋಗುತ್ತಿದ್ದವ ರಾವಣನಲ್ಲ, ಅವನ ತಮ್ಮ ವಿಭೀಷಣ. ಮತ್ತದೇ ಗಣಪತಿ ದಾರಿಯಲ್ಲಿ ಸಿಕ್ಕು ಸಂಧ್ಯಾವಂದನೆಯ ಸಮಯದಲ್ಲಿ ವಿಭೀಷಣ ತಂದ ವಿಗ್ರಹವನ್ನು ನೆಲಕ್ಕಿಟ್ಟು.............. ಛೇ, ರಾಕ್ಷಸರ ದಡ್ಡತನವೇ. ಅದಕ್ಕೇ ಎಲ್ಲ ಕಥಗಳಲ್ಲೂ ಕೊನೆಗೆ ರಾಕ್ಷಸರೇ ಸಾಯುವುದು.

Tuesday, March 18, 2014

ಲಂಕೆ ಇದ್ದುದೆಲ್ಲಿ? ಒಂದು ವೈಚಾರಿಕ ವಿಶ್ಲೇಷಣೆ...!

     ಇದುವರೆಗೆ ಸಿಕ್ಕಿದ ರಾಮಾಯಣದ ಹಸ್ತಪ್ರತಿಗಳು ಮೂರು ಪಾಠಕ್ರಮಗಳನ್ನು ನಿರ್ದೇಶಿಸಿವೆ. ಮೊದಲನೇಯದು ದಾಕ್ಷಿಣಾತ್ಯ, ಎರಡನೇಯದು ಗೌಡೀಯ ಮತ್ತು ಮೂರನೇಯದು ಪಶ್ಚಿಮೋತ್ತರೀಯ. ಉದೀಚ್ಯಪಾಠವೇ ಕೊನೆಯ ಎರಡು ಭೇದದ್ವಯಗಳಾದವೆಂಬ ಭಾವನೆಯಿದೆ. ದಾಕ್ಷಿಣಾತ್ಯವು ದಕ್ಷಿಣ ಭಾರತದವರಿಗೆ ಹೆಚ್ಚು ಪರಿಚಿತ. ಈ ಮೂರೂ ಕ್ರಮಗಳಲ್ಲಿ ಯಾವ ಶ್ಲೋಕಗಳು ಸಾಮಾನ್ಯವಾಗಿವೆಯೋ ಅದೇ ರಾಮಾಯಣದ ಪ್ರಾಚೀನ ಶ್ಲೋಕಗಳೆಂದು ವಿದ್ವಾಂಸರು ಪರಿಗಣಿಸುತ್ತಾರೆ. ದಾಕ್ಷಿಣಾತ್ಯದಲ್ಲಿ ಇಲ್ಲದ ಕೇವಲ ಉದೀಚ್ಯದಲ್ಲಿ ಮಾತ್ರ ಕಂಡುಬರುವ ಅಂಶಗಳಲ್ಲಿ ಪ್ರಮುಖವಾದವು ಭರತ ಶತ್ರುಘ್ನರ ಯಾತ್ರೆ ಮತ್ತು ರಾಜಗೃಹವಾಸ, ಸೀತೆಯು ಜನಕನ ಮಾನಸಪುತ್ರಿಯೆಂಬ ಕಥೆ, ಕೇಸರಿಯ ಮಗನಾಗಿ ಹನುಮಂತನ ಜನ್ಮ, ನಿಕಷೆಯ ವೃತ್ತಾಂತ, ಕಾಲನೇಮಿಯ ಕಥೆ ಇತ್ಯಾದಿ. ಇಂಥ ಕಥೆಗಳೆಲ್ಲ ಸುಮಾರು ಕ್ರಿ,ಶ ೧ನೇ ಶತಮಾನದೀಚೆ ಸೇರಿಸಲ್ಪಟ್ಟವು. ೫ನೇ ಶತಮಾನದೀಚೆ ಉದೀಚ್ಯವು ಮತ್ತೆರಡು ಕವಲಾಯಿತು. ಅದೇ ರೀತಿ ರಾಮಾದಿಗಳ ಜನ್ಮತಿಥಿ, ನಕ್ಷತ್ರಗಳ ವರ್ಣನೆ, ಬಾಲಕಾಂಡದ ಪೌರಾಣಿಕ ಕಥೆಗಳು, ಅಕಂಪನ, ಅಯೋಮುಖಿಯರ ವೃತ್ತಾಂತ, ಹನುಮಂತನಿಗೂ ಲಂಕೆಯ ಅಭಿಮಾನಿ ದೇವತೆಗಳಿಗೂ ಯುದ್ಧ, ಅಗಸ್ತ್ಯನು ಆದಿತ್ಯ ಹೃದಯವನ್ನು ಉಪದೇಶಿಸುವುದು ಇತ್ಯಾದಿಗಳು ಕೇವಲ ದಾಕ್ಷಿಣಾತ್ಯದಲ್ಲಿ ಮಾತ್ರ ಕಂಡುಬರುವಂಥವು.
     ಉತ್ತರಕಾಂಡವು ರಾಮಾಯಣದಲ್ಲಿ ನಿಸ್ಸಂಶಯವಾಗಿ ಬಹಳ ಕಾಲದ ನಂತರ ಸೇರಿದ್ದು. ಇದು ವಾಲ್ಮೀಕಿರಚಿತವಲ್ಲದ್ದೆಂದು ಭವಭೂತಿಯೇ ಮೊದಲಾದವರು ಸಂದೇಹ ವ್ಯಕ್ತಪಡಿಸಿದ್ದಾರೆ. ರಾಮನು ಅವತಾರಪುರುಷನೆಂಬ ವರ್ಣನೆ, ಸೀತೆಯು ವೇದವತಿಯ ಅಂಶವೆಂಬ ಕಲ್ಪನೆಗಳು ಇಲ್ಲಿಯೇ ಮೂಡಿದ್ದು. ಮಹಾಭಾರತದ ರಾಮೋಪಾಖ್ಯಾನದಿಂದ ಹಿಡಿದು ಜಾನಕೀಹರಣ, ರಾಮಚರಿತ, ಭಟ್ಟಿಕಾವ್ಯ, ಅನರ್ಘರಾಘವ ಸೇರಿ ರಾಮಾಯಣದ ಗ್ರಂಥಗಳಲ್ಲೆಲ್ಲ ಕಥೆಯು ಮುಕ್ತಾಯವಾಗುವುದು ರಾಮಪಟ್ಟಾಭಿಷೇಕದಲ್ಲೇ. ಇದೇ ರೀತಿ ಪ್ರಕ್ಷೇಪಗೊಂಡ ಇನ್ನೊಂದು ಭಾಗವು ಬಾಲಕಾಂಡ. ಇದೂ ಕೂಡ ರಾಮಾಯಣ ರಚಿತಗೊಂಡು ಎಷ್ಟೋ ಕಾಲದ ನಂತರ ಒಂದಕ್ಕಿಂತ ಹೆಚ್ಚು ಸಮಯಗಳಲ್ಲಿ ಸೇರಲ್ಪಟ್ಟಿದ್ದು. ಇಲ್ಲಿ ಹೇಳಿದ ಕೆಲ ವಿಷಯಗಳು ಮುಂದಿನ ಭಾಗಗಳಲ್ಲಿ ತದ್ವಿರುದ್ಧವಾಗಿವೆ. ಉದಾಹರಣೆಗೆ ಬಾಲಕಾಂಡದಲ್ಲಿ ಲಕ್ಷ್ಮಣನಿಗೂ ಊರ್ಮಿಳೆಗೂ ಮದುವೆಯಾಯಿತೆಂದಿದ್ದರೆ ಅರಣ್ಯಕಾಂಡದಲ್ಲಿ ಶೂರ್ಪನಖಿಯೊಡನೆ ರಾಮನು ಲಕ್ಷ್ಮಣನಿಗಿನ್ನೂ ಮದುವೆಯಾಗಿಲ್ಲವೆನ್ನುತ್ತಾನೆ. ಇಂಥ ಕಾರಣಗಳಿಂದ ಬಾಲಕಾಂಡವೂ ಉತ್ತರಕಾಂಡದಂತೆ ಪ್ರಕ್ಷೇಪಭೂಯಿಷ್ಟವೆಂದು ವಿದ್ವಾಂಸರು ಭಾವಿಸುತ್ತಾರೆ. ರಾಮನು ವಿಷ್ಣುವಿನ ಅವತಾರವೆಂಬ ಕಲ್ಪನೆ ಬರುವುದು ಪ್ರಕ್ಷೇಪಗೊಂಡ ಬಾಲಕಾಂಡದಲ್ಲಿಯೇ. ಉಳಿದೆಡೆ ’ವಿಷ್ಣುನಾಸದೃಶೋ ವೀರ್ಯೇ’ ಎಂದಿದೆಯೇ ಹೊರತೂ ವಿಷ್ಣುವಿನ ಅವತಾರವೆಂದಲ್ಲ. ದಾಕ್ಷಿಣಾತ್ಯಪಾಠದ ಸುಂದರಕಾಂಡದಲ್ಲೂ ಒಂದೇ ಒಂದು ಕಡೆ ಹನುಮಂತನು ರಾಮನನ್ನು ’ವಿಷ್ಣುತುಲ್ಯ ಪರಾಕ್ರಮಃ’ ಎಂದು ಸ೦ಬೋಧಿಸುತ್ತಾನೆ. ರಾಮನು ವಿಷ್ಣುವಿನ ಅವತಾರವೆಂಬ ಕಲ್ಪನೆ ಬೆಳೆದದ್ದು ಪ್ರಾಯಶಃ ಗುಪ್ತರ ಕಾಲದಲ್ಲಾದ ವೈಷ್ಣವ ಮತದ ಬೆಳವಣಿಗೆಯಲ್ಲಿರಬಹುದು. ಮೂಲರಾಮಾಯಣದಲ್ಲಿ ಅತಿಮಾನುಷ ಘಟನೆಗಳು ಅತ್ಯಲ್ಪವಾದ ಕಾರಣ ಪುಷ್ಪಕ ವಿಮಾನ, ಲಂಕಾದಹನ, ಸಂಜೀವಿನಿ ಪರ್ವತವನ್ನು ತರುವುದು, ಅಗ್ನಿಪರೀಕ್ಷೆಗಳೆಲ್ಲ ಮತ್ತೆ ಪ್ರಕ್ಷೇಪಿತ ಭಾಗಗಳೇ. ರಾಮನನ್ನು ಆದರ್ಶಪುರುಷನೆಂದು ತೋರಿಸುವುದಕ್ಕೆ ವಾಲಿವಧೆಯನ್ನು ನ್ಯಾಯಸಂಗತಗೊಳಿಸುವ ಪ್ರಯತ್ನವೂ ಹೊಸದೇ.
     ಲೆಟ್ ಮಿ ಕಮ್ ಟು ದ ಪಾಯಿಂಟ್. ಕಿಷ್ಕಿಂಧೆ ಎಲ್ಲಿದೆ ಎಂಬುದು ದೊಡ್ಡ ಪ್ರಶ್ನೆ. ಲಂಕೆ ಎಲ್ಲಿದೆ ಎಂಬುದು ಅದಕ್ಕಿಂತ ದೊಡ್ಡ ಪ್ರಶ್ನೆ. ಇದೇನು ಹುಚ್ಚಾಟ ಎನ್ನಬೇಡಿ. ನಮ್ಮಲ್ಲಿ ಪ್ರತಿ ಊರಿನಲ್ಲೊಂದು ರಾಮಾಯಣಕ್ಕೆ ಸಂಬಂಧಿಸಿದ ಸ್ಥಳವಿದೆ, ಪ್ರತಿ ಹಳ್ಳಿಯಲ್ಲೂ ಪಾಂಡವರು ಬಂದು ಕಟ್ಟಿದ ದೇವಸ್ಥಾನವಿದೆ, ಪ್ರತಿ ಗುಡ್ಡದ ಮೇಲಿನ ಕಲ್ಲಿನಲ್ಲಿ ಹನುಮಂತನ ಹೆಜ್ಜೆಯೋ, ಭೀಮನ ಪಾದವೋ ಇದೆ. ಹನುಮಂತ ಹುಟ್ಟಿದ್ದು ಗೋಕರ್ಣದಲ್ಲೆಂದು ಅಷ್ಟಮಂಗಲದಲ್ಲಿ ಕಂಡುಬಂದಿದೆ, ಕಿಷ್ಕಿಂಧೆಯಿರುವುದು ಇಲ್ಲೇ, ಕಿಷ್ಕಿಂಧೆಯಿರುವುದು ಹಂಪೆಯಲ್ಲಿ, ಕಿಷ್ಕಿಂಧೆಯಿರುವುದು ಮಹಾರಾಷ್ಟ್ರದ ಅಂಜನಾದ್ರಿಯಲ್ಲಿ ಎಂಬಂಥ ಹತ್ತಾರು ನಂಬಿಕೆಗಳಿರಲಿ ಬಿಡಿ. ಕಿಷ್ಕಿಂಧಾ, ಋಷ್ಯಮೂಕ, ಪಂಪಾಸರೋವರ, ಪ್ರಸ್ರವಣ ಮುಂತಾದವು ದಂಡಕಾರಣ್ಯದಲ್ಲಿವೆ ಎಂದು ರಾಮಾಯಣದಲ್ಲೇ ಎನ್ನಲಾಗಿದೆ. ಚಿತ್ರಕೂಟ, ಪಂಪಾ, ಕಿಷ್ಕಿಂಧೆ, ಪಂಚವಟಿ, ದಂಡಕಾರಣ್ಯಗಳು ಮಧ್ಯಭಾರತ ಮತ್ತು ಅದಕ್ಕಿಂತ ತುಸು ಕೆಳಗಿರುವ ಪರಸ್ಪರ ಸಂಬಂಧಿತ ಸ್ಥಳಗಳೆಂದು ವಿವಾದಾತೀತ ಆಧಾರಗಳು ಕ್ರಿ.ಶ ೬ನೇ ಶತಮಾನದವರೆಗೂ ದೊರಕುತ್ತವೆ. ವಾಯು, ಬ್ರಹ್ಮಾಂಡ, ಮಾರ್ಕಂಡೇಯ, ಮತ್ಸ್ಯ ಪುರಾಣಗಳೂ ಕಿಷ್ಕಿಂಧೆಯ ಜನಪದವನ್ನು ಮಲದ, ಕುರೂಷ, ಮೇಖಲ, ಕೋಸಲ, ವಿದಿಷ, ಅನುಪಗಳೊಡನೆ ಕೂಡಿಸಿ ಇವೆಲ್ಲ ವಿಂಧ್ಯದಲ್ಲಿವೆ ಎಂದು ಬಣ್ಣಿಸುತ್ತವೆ. ಈ ಪರಿಸರದಲ್ಲೇ ಲಂಕೆಯೂ ಇದ್ದಿರಬೇಕು. ಅದು ಸರೋವರ ಅಥವಾ ನದಿಮಧ್ಯದ ದ್ವೀಪವಾಗಿರಬೇಕು. ಮೂಲಕಥೆಯಲ್ಲಿ ಕೈಯಾಡಿಸಿ ಮಹಾಕಾವ್ಯವನ್ನು ಪುನರ್ರಚಿಸುವಾಗ ಪವಾಡಸದೃಶ ಅದ್ಭುತ ಅಂಶಗಳನ್ನು ಸೇರಿಸಲಾಯ್ತು. ಕಿಷ್ಕಿಂಧಾನಗರಿಯು ಎಲ್ಲ ಸೌಲಭ್ಯಗಳನ್ನು ಹೊಂದಿದ ದೊಡ್ಡ ಗುಹೆ ಮಾತ್ರ ಎಂದು ಕವಿ ಪದೇ ಪದೇ ಹೇಳಿದ್ದಾನೆ. ರಾಮ ಲಕ್ಷ್ಮಣರು ಭೇಟಿಕೊಟ್ಟಾಗ ಅಲ್ಲಿನ ಹೊರಬಾಗಿಲುಗಳಲ್ಲಿ ಭಟರುಗಳಿದ್ದರು, ಗುಹೆಯೊಳಗೆ ಅರಮನೆಗಳು, ಹಲವಾರು ಮನೆಗಳೂ ಇದ್ದವು. ಕಿಷ್ಕಿಂಧೆಯಲ್ಲಿಯೇ ವಾಲಿಯು ರಾಮನ ಬಾಣಕ್ಕೆ ತುತ್ತಾಗಿ ಕೊನೆಯುಸಿರೆಳೆಯುವಾಗ ’ನಿನ್ನೊಡನೆ ಯುದ್ಧಮಾಡದಿರುವ, ಕಾಡಿನಲ್ಲಿ ಹಣ್ಣುಹಂಪಲು ತಿಂದು ಬದುಕುವ ನನ್ನನ್ನೇಕೆ ಕೊಂದೆ’ ಎಂದು ಪ್ರಶ್ನಿಸುತ್ತಾನೆ. ಇದಕ್ಕೆ ರಾಮ ಕೊಡುವ ಉತ್ತರ ಗಮನಾರ್ಹ.
ಇಕ್ಷ್ವಾಕುಕೂಣಾಮಿಯಂ ಭೂಮಿಃ ಸ ಶೈಲವನ ಕಾನನಾ
ಮೃಗಪಕ್ಷಿ ಮನುಷ್ಯಾಣಾಂ ನಿಗ್ರಹಾನುಗ್ರಹಾವಪಿ ||

ಅದರರ್ಥ ಕಿಷ್ಕಿಂಧೆಯು ಕೌಸಲದ ದಕ್ಷಿಣದಲ್ಲಿರುವ ಒಂದು ಭಾಗವಾಗಿತ್ತು. ಹೀಗಾಗಿ ಕಿಷ್ಕಿಂಧೆಯನ್ನು ಕರ್ನಾಟಕದಲ್ಲಿ ಗುರುತಿಸುವುದು ಶುದ್ಧಾಂಗ ತಪ್ಪು.
     ಕಿಷ್ಕಿಂಧಾಕಾಂಡದಲ್ಲಿ ಸುಗ್ರೀವನು ಪೂರ್ವದಿಕ್ಕಿನತ್ತ ತೆರಳಿದ ವಿನುತನಿಗೆ ಸೀತೆಯನ್ನು ಹುಡುಕೆಂದು ಹೇಳುವ ಸ್ಥಳಗಳಲ್ಲಿ ಲೋಹಿತ ಸಾಗರವೂ ಒಂದು. ಇದು ಬ್ರಹ್ಮಪುತ್ರಾ ನದಿಯೆಂದು ಗುರ್ತಿಸಲಾಗಿದೆ. ಸಾಗರ ಎಂಬ ಪ್ರತ್ಯಯದ ಬಳಕೆಯನ್ನು ನೋಡಿದರೆ ಇದು ಯಾವಗಲೂ ಸಮುದ್ರವನ್ನೇ ಬಿಂಬಿಸುತ್ತಿರಲಿಲ್ಲವೆನ್ನುವುದು ಸತ್ಯ. ನದಿ ಅಥವಾ ಭಾರೀ ಪ್ರಮಾಣದ ಸರೋವರಗಳೂ ಸಾಗರಗಳೆಂದೇ ಕರೆಯಲ್ಪಟ್ಟಿವೆ. ಶತಬಲಿಯ ನೇತೃತ್ವದಲ್ಲಿ ವಾನರರ ತಂಡ ಶೋಧನೆ ನಡೆಸಿದ ಸ್ಥಳಗಳಲ್ಲಿ ಮ್ಲೇಚ್ಛ, ಪುಳಿಂದ,  ಬಾಹ್ಲೀಕ, ಪೌರವ, ನೀಹಾರ, ಶಕ, ಯವನ, ಚೀನಾ, ಕ್ರೌಂಚ ದೇಶಗಳೂ ಸೇರಿವೆ. ಈ ಪಟ್ಟಿಯಲ್ಲಿ ಶಕ, ಯವನರಂಥ ಹೊಸ ಜನಾಂಗಗಳನ್ನೂ ಎಳೆದು ತರಲಾಗಿದೆ. ಹೂಣರು ಈ ಪಟ್ಟಿಯಲ್ಲಿಲ್ಲದ ಕಾರಣ ಅವರು ಪ್ರಬಲರಾಗಿದ್ದು ಐದನೇ ಶತಮಾನದ ಹೊತ್ತಿಗೆ. ಆದ್ದರಿಂದ ಈ ಸರ್ಗಗಳ ರಚನೆಯಾಗಿದ್ದು ಕ್ರಿ.ಶ ಎರಡರಿಂದ ನಾಲ್ಕನೇ ಶತಮಾನದೊಳಗಿರಬಹುದು. ಪಶ್ಚಿಮದತ್ತ ಹೊರಟ ಸುಷೇಣ ಶೋಧ ನಡೆಸಿದ ಸ್ಥಳಗಳು ಅಭೀರ, ಮರೀಚಪಟ್ಟಣ ಇತ್ಯಾದಿ. ಅಭೀರರು ಕ್ಷತ್ರಪರ ನಂತರ ಕ್ರಿ.ಶ ಮೂರನೇ ಶತಮಾನದಲ್ಲಿ ಪಶ್ಚಿಮ ಭಾರತದಲ್ಲಿ ರಾಜಕೀಯ ವ್ಯವಸ್ಥೆಯಾಗಿ ರೂಪಗೊಂಡರು. ಅದಕ್ಕೂ ಮೊದಲು ಕ್ರಿ.ಪೂ ಒಂದನೇ ಶತಮಾನದಲ್ಲಿ ಕೇರಳದಿಂದ ಕಾಳುಮೆಣಸು(ಮರೀಚ) ಮತ್ತು ಸಾಂಬಾರ ಪದಾರ್ಥಗಳಿ ಪರದೇಶಗಳಿಗೆ ರಫ್ತಾಗುತ್ತಿದ್ದವು. ರೋಮನ್ನರು ಕೇರಳ ಕರಾವಳಿಯ ಮುಜರಿಸ್ ಬಂದರುಗಳಿಂದ ಕಾಳುಮೆಣಸನ್ನು ಕೊಂಡೊಯ್ಯುತ್ತಿದ್ದರೆಂದು ಪಾಶ್ಚಾತ್ಯ ಭೂಗೋಳಶಾಸ್ತ್ರಜ್ಞರಾದ ಸ್ಟ್ರಾಬೋ ಮತ್ತು ಪ್ಲೈನಿ ತಿಳಿಸಿದ್ದಾರೆ. ಮರೀಚ ಪಟ್ಟಣವು ಈ ಪಟ್ಟಿಯಲ್ಲಿ ಸೇರಿದ್ದು ಕಿಷ್ಕಿಂಧಾ ಕಾಂಡದ ಪಕ್ಷಿಪ್ತ ಭಾಗಗಳ ಕಾಲಮಿತಿಯನ್ನು ನಿರ್ಣಯಿಸಲು ಸಹಕಾರಿಯಾಗಿದೆ. ಅರಣ್ಯ ಕಾಂಡದಲ್ಲೂ ಮರೀಚಪಟ್ಟಣದ ಉಲ್ಲೇಖವಿದೆ. ಖರದೂಷಣರನ್ನು ಕೊಂದ ವಿಷಯವನ್ನು ರಾವಣನಿಗೆ ತಿಳಿಸಲು ಶೂರ್ಪಣಖಿ ಲಂಕೆಗೆ ಓಡುವ ಪ್ರಕರಣ. ಬಳಿಕ ರಾವಣ ಕತ್ತೆಗಳಿಂದ ಎಳೆಯಲ್ಪಟ್ಟ ರಥವನ್ನೇರಿ ಮಾರೀಚನ ಆಶ್ರಮವನ್ನು ತಲಪುತ್ತಾನೆ. ದಾರಿ ಮಧ್ಯದ ವರ್ಣನೆಗಳಲ್ಲಿ ಸಮುದ್ರತೀರದ ಸೂರ್ಯಾಸ್ತ, ಮರೀಚ(ಕಾಳುಮೆಣಸಿನ) ತೋಟಗಳು, ಶಂಖ ಮತ್ತು ಮುತ್ತಿನ ರಾಶಿಗಳಿವೆ. ಇದು ಪಕ್ಕಾ ಪಶ್ಚಿಮ ಸಮುದ್ರ ತೀರದ ವರ್ಣನೆ. ವಾಸ್ತವವಾಗಿ ಕೇರಳದ ಕ್ರಾಂಗಾನೂರ್ ಮೊದಲು ಮರೀಚಪಟ್ಟಣವಾಗಿ ಪ್ರಸಿದ್ಧವಾಗಿತ್ತು. ಅರಣ್ಯ ಕಾಂಡವನ್ನು ಪುನರೂಪಿಸಿದ ಕವಿಗೆ ಲಂಕೆಯು ದಕ್ಷಿಣದ ಹಿಂದೂಮಹಾಸಾಗರದಲ್ಲೆಲ್ಲೋ ಇದ್ದೀತೆಂಬ ಅಸ್ಪಷ್ಟ ಕಲ್ಪನೆಯಿರಬಹುದು. ಅದಕ್ಕಾಗಿಯೇ ದಕ್ಷಿಣ ಭಾರತದ ಹೆಚ್ಚಿನ ಯಾವ ಪ್ರದೇಶಗಳ ಉಲ್ಲೇಖವಿಲ್ಲದಿದ್ದರೂ ಮೊದಲಿನಿಂದಲೂ ಹೆಸರಾಗಿದ್ದ ಮರೀಚಪಟ್ಟಣದ ಹೆಸರು ಒಂದಕ್ಕಿಂತ ಹೆಚ್ಚು ಬಾರಿ ಬಂದಿದೆ. ರಾಮನ ಬಾಣದಿಂದ ದೂರ ಎಸೆಯಲ್ಪಟ್ಟ ಮಾರೀಚನು ಲಂಕೆಗೆ ಓಡಿದ. ಖರನನ್ನು ರಾಮ ಕೊಂದಾಗ ಲಂಕೆಗೆ ಅವಸರವಾಗಿ ಧಾವಿಸಿದ ಶೂರ್ಪನಖಿ ಈ ಕಥೆಯನ್ನು ರಾವಣನಿಗೆ ತಿಳಿಸಿದಳು. ಹೀಗೆ ಇಬ್ಬರೂ ಅವಸರವಸರವಾಗಿ ಮಧ್ಯಭಾರತದಿಂದ ಶ್ರೀಲಂಕಾಕ್ಕಂತೂ ಓಡಲು ಸಾದ್ಯವಿರಲಿಲ್ಲ. ಇಲ್ಲಿ ಮತ್ತೂ ಒಂದು ವಿಷಯವಿದೆ. ರಾಮ ಸೀತೆಯರು ಹತ್ತು ವರ್ಷಗಳ ಕಾಲ ಚಿತ್ರಕೂಟದಲ್ಲಿದ್ದಾಗ(ಇದು ಉತ್ತರ ಪ್ರದೇಶದ ಮಿರ್ಜಾಪುರ, ಭಾಂಡಾಗಳ ಆಸುಪಾಸಿನ ಜಾಗ) ರಾಕ್ಷಸ, ಅಸುರರೊಡನೆ ಒಂದೇ ಒಂದು ಯುದ್ಧವೂ ನಡೆದಿಲ್ಲ. ಯಾಕೆಂದರೆ ಈ ಪ್ರದೇಶ ಕೋಸಲದ ಒಂದು ಭಾಗವಾಗಿತ್ತು. ಅದರ ನಂತರ ರಾಮ ಬಂದಿದ್ದು ದಂಡಕಾರಣ್ಯಕ್ಕೆ. ವಿಚಿತ್ರವೆಂದರೆ ಚಿತ್ರಕೂಟದಿಂದ ಇಲ್ಲಿನವರೆಗಿನ ಪಯಣದಲ್ಲಿ ಎಲ್ಲೂ ವಿಂಧ್ಯ ಮತ್ತು ನರ್ಮದೆಯ ಪ್ರಸ್ತಾವನೆಯಿಲ್ಲ. ನರ್ಮದೆಯನ್ನು ದಾಟದೇ ನಾಸಿಕಕ್ಕಾಗಲೀ, ಪೂರ್ವ ಮಧ್ಯಭಾರತಕ್ಕಾಗಲೀ ತೆರಳಲು ಅಸಾಧ್ಯ. ಕಾಳಿದಾಸನ    ರಘುವಂಶದ ೧೩ನೇ ಸರ್ಗದಲ್ಲೂ ನರ್ಮದೆಯ ಮಾತಿಲ್ಲ. ಸಹ್ಯ, ಮಲಯ ಪರ್ವತಗಳ ಸುಳಿವಿಲ್ಲ. ಗೋದಾವರಿಯನ್ನುಲ್ಲೇಖಿಸಿದರೂ ರಾಮಾಯಣವಾಗಲೀ ಕಾಳಿದಾಸನಾಗಲೀ ನಾಸಿಕದ ಹೆಸರೆತ್ತುವುದಿಲ್ಲ. ಹಾಗೆ ನೋಡಿದರೆ ನಾಸಿಕದಲ್ಲಿ ನಾಲ್ಕು ಸಾವಿರ ವರ್ಷಗಳಿಂದಲೂ ಜನವಸತಿಯ ಕುರುಹು ಇತ್ತೆಂದು ಉತ್ಖನಗಳಿಂದ ಸಾಬೀತಾಗಿದೆ. ದಂಡಕದ ಒಂದು ಭಾಗವಾದ ಪಂಚವಟಿಯ ಪ್ರಾಂತ್ಯದಲ್ಲೇ ರಾಕ್ಷಸರೊದನೆ ಮೊದಲ ಯುದ್ಧ ನಡೆದಿದ್ದು. ಈ ಪಂಚವಟಿ ಮತ್ತು ಪರ್ಣಶಾಲೆಯಿರುವುದು ನಾಸಿಕದಲ್ಲಲ್ಲ, ಬದಲಾಗಿ ಆಂಧ್ರದ ಉತ್ತರ ತುದಿಯ ಗೋದಾವರೀ ತೀರದಲ್ಲಿ. ರಾಮ ಲಕ್ಷ್ಮಣರು ಇಲ್ಲಿದ್ದಾಗಲೇ ಜನಸ್ಥಾನದ ರಕ್ಷಣೆಗೆ ಮತ್ತು ರಾಮನ ಸಂಹಾರಕ್ಕಾಗಿ ಎಂಟು ಜನ ರಾಕ್ಷಸರು ಕಳುಹಿಸಲ್ಪಡುತ್ತಾರೆ. ಯಾವುದೇ ಪ್ರದೇಶಕ್ಕೆ ಶಸ್ತ್ರಧಾರಿಗಳಾದ ಅಪರಿಚಿತರು ಬಂದಾಗ ಅಲ್ಲಿನ ಮೂಲನಿವಾಸಿಗಳೊಡನೆ ತಿಕ್ಕಾಟವಾಗುವುದು ಸಹಜ. ಅದೂ ಅಲ್ಲದೇ ಭಾರತದ ದಕ್ಷಿಣ ತುದಿಯಿಂದಲೂ ದೂರವಿದ್ದ ಪ್ರದೇಶವೊಂದರಲ್ಲಿ ಕುಳಿತು ಮಧ್ಯಭಾರತದ ದಂಡಕಾರಣ್ಯವನ್ನು ನಿಯಂತ್ರಿಸಲು ಖರ,ದೂಷಣರಿಗಾಗಲೀ ಅಥವಾ ಅವರ ಒಡೆಯ ರಾವಣನಿಗಾಗಲೀ ಆಗದ ಮಾತು.  ಆದ್ದರಿಂದ ತಾರ್ಕಿಕವಾಗಿ ಲಂಕೆಯು ಚಿತ್ರಕೂಟ ಮತ್ತು ದಂಡಕಾರಣ್ಯದಿಂದ ನೂರಾರು ಕಿ.ಮಿ ದೂರದಲ್ಲಿರಲು ಸಾಧ್ಯವಿಲ್ಲ. ಪಂಚವಟಿಯ ಪ್ರಾಂತ್ಯದ ಸಾಲವೃಕ್ಷಗಳ ವರ್ಣನೆಯನ್ನೇ ನೋಡಿ. ಶೋರಿಯಾ ರೋಬಸ್ಟಾ ಜಾತಿಗೆ ಸೇರಿದ ಸಾಲ ವೃಕ್ಷಗಳು ಎಲ್ಲಿಬೇಕಾದರೂ ಬೆಳೆಯಬಹುದೆಂದು ವಾದಮಾಡಬಹುದಾದರೂ ಕಾಶ್ಮೀರ ಮತ್ತು ಆಸ್ಸಾಂನ್ನು ಹೊರತುಪಡಿಸಿ ಇದು ವಿಶೇಷವಾಗಿ ಕಾಣಬರುವುದು ದಕ್ಷಿಣ ಬಿಹಾರ, ಮಧ್ಯಪ್ರದೇಶದ ಪೂರ್ವಭಾಗ, ಛತ್ತೀಸಘಢ, ಪಶ್ಚಿಮ ಓರಿಸ್ಸಾ ಮತ್ತು ಗೋದಾವರಿಯ ಮುಖಜಭೂಮಿಯಲ್ಲಿ ಮಾತ್ರ.
     ಲಂಕೆ ಎಲ್ಲಿದೆ ಎಂಬ ವಿಷಯಕ್ಕೆ ಪುನಃ ಬರೋಣ. ಪುರಾಣಗಳು, ಮಹಾಭಾರತದಿಂದ ಮೊದಲಾಗಿ ವರಾಹಮಿಹಿರನ ಬೃಹಜ್ಜಾತಕಗಳು ಸಿಂಹಳ ಮತ್ತು ಲಂಕೆ ಬೇರೆಬೇರೆಯೆಂದರೆ, ರಾಮಾಯಣದಲ್ಲೆಲ್ಲೂ ಸಿಂಹಳದ ಪ್ರಸ್ತಾಪವೇ ಇಲ್ಲ. ಅಶೋಕನ ಕಾಲದಿಂದ ತೊಡಗಿ ೧೨ನೇ ಶತಮಾನಗಳವರೆಗೂ ಶ್ರೀಲಂಕಾವನ್ನು ಸಿಂಹಳವೆನ್ನಲಾಗಿದೆಯೇ ಹೊರತೂ ಲಂಕೆಯೆಂದಲ್ಲ. ಮರೀಚಪಟ್ಟಣವೊಂದನ್ನು ಹೊರತುಪಡಿಸಿ ಇಡೀ ರಾಮಾಯಣದಲ್ಲಾಗಲೀ, ಕಾಳಿದಾಸನ ರಘುವಂಶವಾಗಲೀ, ಉತ್ತರ ರಾಮಚರಿತವಾಗಲೀ ಗೋದಾವರಿಯ ದಕ್ಷಿಣ ಭಾಗದಲ್ಲಿರುವ ಸ್ಥಳಗಳ ಸರಿಯಾದ ವರ್ಣನೆ ಎಲ್ಲೂ ಇಲ್ಲ. ಹಾಗಾದರೆ ಅಸಲು ಲಂಕೆ ಇರುವುದೆಲ್ಲಿ?
ಮೂಲಲಂಕೆಯ ನೆಲೆಯ ಬಗ್ಗೆ ಬೆಳಕು ಚೆಲ್ಲುವ ರಾಮಾಯಣದ ಒಂದು ಘಟನೆ ಸಂಪಾತಿಗೆ ಸಂಬಂಧಿಸಿದ್ದು. ಸಂಪಾತಿ ವಾನರರಿಗೆ ಹೇಳುತ್ತಾನೆ
ಮಹೇಂದ್ರಸ್ಯ ಗಿರಿದ್ವಾರ ಮಾವೃತ್ಯ ಚ ಸಮಾಸ್ಥಿತಿಃ
ತತ್ರ ಕಶ್ಚಿನ್ಮಯಾ ದೃಷ್ಟಃ ಸೂರ್ಯೋದಯ ಸಮಪ್ರಭಾಮ್ ||
ಸ್ತ್ರೀಯಮಾದಾಯ ಗಚ್ಛನ್ವೈ  ಭಿನ್ನಾಜನಯೋಪಮಃ ||
ಹರಾನ್ದಾ ಶರಥೇರ್ಭಾರ್ಯಾಂ ರಾಮಸ್ಯ ಜನಕಾತ್ಮಜಮ್
ಭ್ರಷ್ಟಾಭರಣಕೌಶೇಯಂ ಶೋಕವೇಗ ಪರಾಜಿತಾಮ್ ||

ಮಹೇಂದ್ರದ ಗಿರಿಯ ಬುಡದಲ್ಲಿ ನನ್ನ ಮಗ ಸುಪಾರ್ಶ್ವನು ಹಾದಿಗಡ್ಡ ಕುಳಿತಿರುವಾಗ ಸೂರ್ಯೋದಯದ ಕಾಂತಿಗೆ ಸಮಾನವಾದ ಸ್ತ್ರೀಯೊಬ್ಬಳನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡು ಹೋಗುತ್ತಿದ್ದ ಪುರುಷನೊಬ್ಬನನ್ನು ಕಂಡ. ಅವನು ಕಾಡಿಗೆಯಂತೆ ಕಪ್ಪಗಿದ್ದನು. ಆದರೂ ಆತ ವಿನೀತ ಭಾವದಿಂದ ದಾರಿಬಿಟ್ಟುಕೊಡೆಂದು ಯಾಚಿಸಿದ. ಹೀಗೆ ಕೇಳಿಕೊಂಡಾಗ ಸುಪಾರ್ಶ್ವನು ಸಹಜವಾಗಿಯೇ ದಾರಿಬಿಟ್ಟುಕೊಟ್ಟ. ಆದರೆ ಆಮೇಲೆ ಆ ಪುರುಷನು ರಾವಣನೆಂದೂ, ಅವಳು ಸೀತೆಯೆಂದೂ ತಿಳಿಯಿತು.
 ಇದು ಸೀತಾಪಹರಣದ ಬಗೆಗಿನ ರಾಮಾಯಣದಲ್ಲಿ ಕಂಡುಬರುವ ಪ್ರಥಮಾನುಭವದ ಅತ್ಯಂತ ಸಹಜವಾಗಿ ಒಪ್ಪಿಕೊಳ್ಳಬಹುದಾದ ವರದಿ. ನಾನಾಗಲೇ ಹೇಳಿದಂತೆ ಪುಷ್ಪಕ ವಿಮಾನ ಪ್ರಕರಣ ಪ್ರಕ್ಷೇಪಭೂಯಿಷ್ಟವಾಗಿದ್ದು ಎಷ್ಟೋ ಕಾಲದ ನಂತರ ಸೇರಿಸಲ್ಪಟ್ಟಿದ್ದು.  ಮೇಲಿನ ಶ್ಲೋಕದಿಂದ ಸ್ಪಷ್ಟವಾಗಿ ತಿಳಿಯುವುದೇನೆಂದರೆ ರಾವಣ ಸೀತೆಯನ್ನೆಳೆದುಕೊಂಡು ದಟ್ಟಕಾಡುಗಳಿಂದಾವೃತವಾದ ಪರ್ವತಗಳ ಕಣಿವೆಯಲ್ಲಿ ಸಾಗುತ್ತಿದ್ದಾನೆ. ಕುದುರೆಗಾಡಿ, ರಥಗಳು ಸಾಗಲು ಸಾಧ್ಯವಿಲ್ಲದ ಇಂಥ ಕಣಿವೆ, ಅರಣ್ಯಗಳನ್ನು ದಂಡಕ, ಸಾಲಾವೃಕ್ಷಾರಣ್ಯಗಳ ಕಡೆ ಇಂದಿಗೂ ಕಾಣಬಹುದು. ರಾವಣನು ಆಕಾಶಮಾರ್ಗವಾಗಿ ಸೀತೆಯೊಡನೆ ಪಯಣಿಸಿದನೆಂಬುದು ನಂತರ ಸೇರಿಕೊಂಡ ಶುದ್ಧ ಕಾವ್ಯಮಯ ಕಲ್ಪನೆ. ಮೇಲಿನ ಘಟನೆಯಿಂದ ರಾವಣನ ಆವಾಸಸ್ಥಾನ ಹೆಚ್ಚೇನೂ ದೂರವಿರಲಾರದು ಅಂದುಕೊಳ್ಳಬಹುದು. ಸಾಗರವೆಂದರೆ ದೊಡ್ಡ ಸರೋವರ ಅಥವಾ ಅಗಲ ಹರಿವಿನ ನದಿಯ ಆಚೆಯ ದಡದಲ್ಲಿ ಅವನ ವಸತಿಯಿರಬೇಕು. ಮುಂದೆ ಸಂಪಾತಿಯ ಸೂಚನೆಯಂತೆ ದಕ್ಷಿಣಾಭಿಮುಖವಾಗಿ ತೆರಳಿದ ವಾನನರು ಮಹೇಂದ್ರಗಿರಿಗೆ ಬಂದರು. ಗಿರಿಯನ್ನೇರಿದ ಬಳಿಕ ಸಾಗರದ ದಡವನ್ನು ಕಂಡರು. ಈ ಕಾಂಡವನ್ನು ಪುನರ್ರಚಿಸಿದ ಕವಿಗೆ ದಕ್ಷಿಣ ಭಾರತದ ಅಸ್ಪಷ್ಟ ಚಿತ್ರಣವಷ್ಟೇ ಇತ್ತು. ಹೀಗಾಗಿ ಈ ಸಾಗರವನ್ನೇ ಹಿಂದೂ ಸಾಗರದ ಉತ್ತರ ತುದಿಯೆಂದು ಭಾವಿಸಲಾಯ್ತು. ಹನುಮಂತನು ಸಾಗರೋಲ್ಲಂಘನ ಮಾಡುವಂತೆ ಮಾಡಲಾಯ್ತಲ್ಲದೇ ಇಡೀ ಕಪಿಸೈನ್ಯವನ್ನು ಮಧ್ಯಭಾರತದಿಂದ ಸಾವಿರಾರು ಕಿ.ಮಿ ದೂರದ ದಕ್ಷಿಣಕ್ಕೆ ಕರೆತರಲಾಯ್ತು. ಅದೇ ಮಹಾಭಾರತದಲ್ಲಿ ಬಲರಾಮನ ತೀರ್ಥಯಾತ್ರೆಯ ವಿವರಣೆಯಲ್ಲಿ ’ಗಂಗಾಸಾಗರದಲ್ಲಿ ತೀರ್ಥಸ್ನಾನ ಮಾಡಿ, ಮಹೇಂದ್ರಪರ್ವತದತ್ತ ತೆರಳಿದನು. ಅದನ್ನು ದರ್ಶಿಸಿ ದಕ್ಷಿಣಾಭಿಮುಖವಾಗಿ ತೆರಳಿ ಗೋದಾವರಿ ನದಿಯನ್ನು ಕಂಡನು’ ಎಂದಿದೆ. ಮಹೇಂದ್ರ ಪರ್ವತವು ಗೋದಾವರಿಯ ಉತ್ತರಕ್ಕಿತ್ತೆಂಬುದು ಇದರಿಂದ ಸ್ಪಷ್ಟ. ಮಹೇಂದ್ರ ಪರ್ವತದ ಪ್ರಸ್ತಾಪ ಗಂಗ ಇಂದ್ರವರ್ಮನ ಗೌತಮಿ ತಾಮ್ರ ಶಾಸನದಲ್ಲಿಯೂ ಇದೆ. ಉತ್ತರಕಾಂಡದ ವಿಮರ್ಶಾತ್ಮಕ ಆವೃತ್ತಿಯನ್ನು ಪ್ರಕಟಿಸಿದ ಯು.ಪಿ. ಷಾ ಇದನ್ನು ಆಂಧ್ರದ ಗಡಿಭಾಗದಲ್ಲಿರುವ ಓರಿಸ್ಸಾದ ಗಂಜಾಂ ಜಿಲ್ಲೆಯಲ್ಲಿ ಗುರುತಿಸುತ್ತಾರೆ.
     ರಾಮಾಯಣದ ಯುದ್ಧಕಾಂಡದಲ್ಲಿ ರಾವಣನನ್ನು ದೇವಕಂಟಕನೆಂದೂ, ರಾಕ್ಷಸರನ್ನು ದೈವಕಂಟಕರೆಂದೂ, ವಿಶ್ವಕರ್ಮನ ಲಂಕೆಯು ನಂತರ ಸಾಲಕಂಟಕ ಸಂತತಿಯ ಆವಾಸಸ್ಥಾನವಾಯಿತೆಂದೂ ಹೇಳಲಾಗಿದೆ. ಅಬುಲ್ ಫಜಲ್ ತನ್ನ ಐನೇ ಅಕ್ಬರಿಯಲ್ಲಿ ಗಡಕಟಂಗ ಎಂಬ ಸ್ಥಳವನ್ನುಲ್ಲೇಖಿಸುತ್ತಾನೆ. ಈ ಸಾಲಕಂಟಕ, ಗಡಕಟಂಗ ಮತ್ತು ಗೊಂಡವನಗಳು ಒಂದೇ ಎಂದು ಸಂಕಾಲಿಯಾರಂಥ ಖ್ಯಾತ ಇತಿಹಾಸಕಾರರು ಸಿದ್ಧಪಡಿಸಿದ್ದಾರೆ. ಗೊಂಡವನದಲ್ಲಿ ಇಂದಿಗೂ ರಾವಣನನ್ನು ತಮ್ಮ ಮೂಲಪುರುಷನೆಂದು ಹೇಳಿಕೊಳ್ಳುವ ಗೊಂಡ ಸಮುದಾಯದವರಿದ್ದಾರೆ. ಛತ್ತೀಸಗಢ, ಉತ್ತರ ಆಂಧ್ರಪ್ರದೇಶ, ಒರಿಸ್ಸಾದ ಪೂರ್ವಭಾಗ, ದಕ್ಷಿಣ ಮಧ್ಯಪ್ರದೇಶ, ಮಹಾರಾಷ್ಟ್ರದ ಪಶ್ಚಿಮ ಭಾಗ ಸೇರಿದ ಮಧ್ಯಭಾರತದಲ್ಲಿ ಇವರ ಜನಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ.
     ಈಗ ರಾಮೇಶ್ವರಂ ಮತ್ತು ಶ್ರೀಲಂಕಾದ ಮಧ್ಯವಿರುವ ರಾಮಸೇತು ಮಾನವನಿರ್ಮಿತವೆಂಬ ಕಲ್ಪನೆಯನ್ನು ನಂಬಿಕೆಯ ವಿಚಾರವಾದರೂ ಸ್ವಲ್ಪ ಹೊತ್ತು ಪಕ್ಕಕ್ಕಿಡಿ.  "As per the geological, geographical and remote sensing investigations carried out so far, the Adam's Bridge area is of natural origin with a particular stratigraphic sequence, formed due to marine geomorphological and coastal shoreline processes. Studies by Geological Survey of India also confirm this." ಎಂದು ನಾಸಾ ಮತ್ತು ಭಾರತ ಸರ್ಕಾರದ ವಿಜ್ಞಾನಿಗಳ ತಂಡ ತನ್ನ ಅಧಿಕೃತ ದಾಖಲೆಯಲ್ಲೇ ಹೇಳಿವೆ.
     ’ಉತ್ತರ ಫಾಲ್ಗುಣಿಯು ಹಸ್ತಾ ನಕ್ಷತ್ರದೊಡನೆ ಸೇರಿದ ಶುಭ ಮುಹೂರ್ತದಲ್ಲಿ ವಾನರ ಸೇನೆ ರಾಮನ ನೇತೃತ್ವದಲ್ಲಿ ದಕ್ಷಿಣಾಭಿಮುಖವಾಗಿ ಪ್ರಯಾಣ ಮಾಡಿತು. ಅವರು ಹಸಿರಿನಿಂದ ಆವೃತವಾದ ಸಹ್ಯ ಪರ್ವತವನ್ನು, ನದಿ ಝರಿ ಕಾಡುಗಳಿಂದ ಕೂಡಿದ ಮಲಯ ಪರ್ವತವನ್ನು ಕಂಡರು. ಬಳಿಕ ಅವರು ಮಹೇಂದ್ರ ಪರ್ವತವನ್ನು ತಲುಪಿದರು. ರಾಮನು ಈ ಪರ್ವತವನ್ನೇರಿ ಆಮೆ, ಮೀನುಗಳಿಂದ ತುಂದಿದ ಸಾಗರವನ್ನು ಕಂಡನು.’ ಇದು ರಾಮಾಯಣದಲ್ಲಿ ಕಂಡುಬರುವ ವರ್ಣನೆ. ಕಿಷ್ಕಿಂಧೆ ಕರ್ನಾಟಕದಲ್ಲಿತ್ತು ಎಂದುಕೊಂಡರೂ ದಕ್ಷಿಣ ತುದಿಗೆ ಸಾಕಷ್ಟು ದೂರವಿದೆ. ರಾಮನ ಸೇನೆ ದಕ್ಷಿಣಾಭಿಮುಖವಾಗಿ ಸಾವಿರಾರು ಮೈಲುಗಳಷ್ಟು ಬಂದರೂ ಸಹ್ಯ, ಮಲಯ, ಮಹೇಂದ್ರ ಪರ್ವತಗಳನ್ನು ಬಿಟ್ಟರೆ ಮತ್ಯಾವ ಗುರುತಿನ ನೆಲಗಳನ್ನೂ ಹೆಸರಿಸದಿದ್ದುದು ನೋಡಿದರೆ(ಮಾನವನ ಅಸ್ತಿತ್ವದ ಆರಂಭಕಾಲದಿಂದಲೂ ಜನವಸತಿಯನ್ನು ಹೊಂದಿದ ಕಾವೇರಿ ಕಾಣದಿದ್ದುದು ಆಶ್ಚರ್ಯ) ಕವಿಗೆ ದಕ್ಷಿಣ ಭಾರತದ ಪರಿಚಯ ಸರಿಯಾಗಿಲ್ಲವೆನ್ನುವುದು ಸ್ಪಷ್ಟ. ಇನ್ನು ರಾಮೇಶ್ವರದ ಬಗ್ಗೆಯಂತೂ ಕವಿಗೆ ಏನೂ ಗೊತ್ತಿಲ್ಲ. ಹನುಮಂತ ಇಲ್ಲಿಂದಲೇ ೧೦೦ ಯೋಜನಗಳ ಸಮುದ್ರವನ್ನು ದಾಟಿದನೆಂದಿದೆ. ವಾನರರು ಕಟ್ಟಿದ ರಾಮಸೇತುವೂ ೧೦೦ ಉದ್ದ, ೧೦ ಯೋಜನ ಅಗಲವಿತ್ತಂತೆ. ಒಂದು ಯೋಜನವೆಂದರೆ ಆರ್ಯಭಟೀಯಂ, ಸೂರ್ಯಸಿದ್ಧಾಂತವೇ ಇತ್ಯಾದಿ ಗ್ರಂಥಗಳ ಪ್ರಕಾರ ೮ ಕಿ.ಮಿ. ಮತ್ತು ಭಾಗವತ ಪುರಾಣದ ಪ್ರಕಾರ ೧೩ ಕಿ.ಮೀ. ಇರಲಿ..... ೮ ಕಿ.ಮೀ ಎಂದೇ ಇಟ್ಟುಕೊಳ್ಳೋಣ. ಅಲ್ಲಿಗೆ ರಾಮೇಶ್ವರಂ ಮತ್ತು ಶ್ರೀಲಂಕಾದ ನಡುವಿನ ಉದ್ದ ೮೦೦ ಕಿ.ಮೀಗಳಾಗಬೇಕಾಯ್ತಲ್ಲ? ಆದರೆ ಈಗ ಇರುವುದು ಅಬ್ಬಬ್ಬಾ ಎಂದರೆ ೨೪ ಕಿ.ಮೀಗಳಷ್ಟೇ. ಭಾರತ ಮತ್ತು ಶ್ರೀಲಂಕಾದ ಮಧ್ಯ ಮೈಲಿಗಟ್ಟಲೆ ವಿಸ್ತಾರವಾದ ಸಾಗರವಿರುವುದಾದರೆ ರಾಕ್ಷಸರು ಲಂಕೆಯಿಂದ ಹೊರಗೆ ಪದೇ ಪದೇ ಹೋಗಿಬರುತ್ತಿದ್ದುದು ಹೇಗೆ? ವಾಸ್ತವವಾಗಿ ಸೇತುವೆ ಕಟ್ಟಲ್ಪಟ್ಟ ರಾಮೇಶ್ವರ ಎಂಥಹ ಸ್ಥಳ? ಮಹೇಂದ್ರ ಪರ್ವತವಿರುವುದಾಗಿಯೂ, ಅದರ ಮೇಲಿಂದ ಹನುಮಂತ ಲಂಕೆಗೆ ಜಿಗಿದನೆಂದೂ, ಅಕ್ಕಪಕ್ಕದ ಬೆಟ್ಟಗಳನ್ನು, ಮರಗಳನ್ನು, ಕಲ್ಲುಬಂಡೆಗಳನ್ನು ಎತ್ತಿಹಾಕಿ ನಳನೂ ವಾನರರೂ ಸೇತುವಿನ ನಿರ್ಮಾಣಮಾಡಿದರೆಂದು ಹೇಳುವುದಾದರೆ ರಾಮೇಶ್ವರದಲ್ಲಿ ದೂರದೂರಕ್ಕೂ ಕಾಣಸಿಗುವುದು ಬರಿಯ ಮರಳ ದಿಣ್ಣೆಗಳಷ್ಟೆ. ಇಲ್ಲಿನ ಮರಳ ಬಿಸಿಲಲ್ಲಿ ಕಾದು ಕೆಂಪಾಗಿ ತಾಮ್ರದ ಬಣ್ಣದಲ್ಲಿರುವುದರಿಂದ ಈ ಪ್ರಾಂತ್ಯ ಪ್ರಾಚೀನ ಕಾಲದಿಂದಲೂ ತಾಮ್ರಪರ್ಣಿ ಎಂದೇ ಹೆಸರಾಗಿತ್ತು. ಇಲ್ಲೆಲ್ಲೂ ಕುರುಚಲು ಗಿಡಗಳನ್ನು ಬಿಟ್ಟರೆ ಸಸ್ಯಸಂಪತ್ತಿಲ್ಲ, ಬೆಟ್ಟಗುಡ್ಡಗಳಿಲ್ಲ. ಕಲ್ಲುಬಂಡೆಗಳು ಬೇಕೆಂದರೂ ಒಳನಾಡಿನಲ್ಲಿ ಕೆಲವು ಮೈಲಿ ದೂರದಿಂದ ಹೊತ್ತು ತರಬೇಕು. ಈ ಪ್ರಕರಣವೊಂದು ಸುಂದರ ಕಲ್ಪನಾ ಸಾಮ್ರಾಜ್ಯ.
     ಇನ್ನು ರಾಮ-ರಾವಣರ ಸೈನ್ಯ ವ್ಯೂಹಗಳ ರಚನೆಯನ್ನು ಗಮನಿಸಿ. ರಾವಣನು ಲಂಕೆಯ ಉಳಿದ ದಿಕ್ಕುಗಳಂತೆ ದಕ್ಷಿಣ ದಿಕ್ಕಿನಲ್ಲೂ ಸಾವಿರಾರು ಭಟರೊಡನೆ ತನ್ನ ಸೇನಾಪತಿಯನ್ನು ನಿಯುಕ್ತಿಗೊಳಿಸಿದನು. ಆದರೆ ಲಂಕೆಯು ಗಿರಿಶಿಖರದ ಮೇಲಿದ್ದು, ಹಿಂಭಾಗದಲ್ಲಿ ಉದ್ದಕ್ಕೂ ಬರೀ ಸಾಗರವಿರುವುದರಿಂದ, ರಾವಣ ಹಿಂಭಾಗದಿಂದಲೂ ದಾಳಿಯನ್ನು ನಿರೀಕ್ಷಿಸಿದ್ದನೆಂದರೆ ಆಶ್ಚರ್ಯವೇ. ಇದೆಲ್ಲ ಕವಿಗಳ ಕಾವ್ಯದಲ್ಲಿ ಕಂಡುಬರುವ ಸಾಂಪ್ರದಾಯಿಕ ವರ್ಣನೆ. ನಮ್ಮ ಕವಿಯಂತೂ ಅದು ಸಂದರ್ಭಕ್ಕೆ ಹೊಂದುತ್ತದೋ ಇಲ್ಲವೋ ಎಂದು ಪರಿಗಣಿಸಲು ಹೋಗದೇ ಕಥೆಯನ್ನು ಇನ್ನಷ್ಟು ರಮ್ಯವಾಗಿಸಲು ಅಲ್ಲಲ್ಲಿ ತಿರುಕಿದ್ದಾನೆ. ಸಾಮಾನ್ಯವಾಗಿ ರೂಢಿಯಲ್ಲಿರುವಂತೆ ರಾಮ ವಿಜಯದಶಮಿಯ ದಿನ ಲಂಕೆಗೆ ಮುತ್ತಿಗೆ ಹಾಕಿ ರಾವಣನನ್ನು ಕೊಂದನೆಂಬುದೂ ಸತ್ಯವಲ್ಲ. ಕಿಷ್ಕಿಂಧಾಕಾಂಡದಲ್ಲಿ ರಾಮ-ಲಕ್ಷ್ಮಣರು ವಸಂತಕಾಲಕ್ಕೆ ಪಂಪಾಪ್ರಾಂತ್ಯಕ್ಕೆ ಬಂದರು ಎಂದಿದೆ.  ಸುಗ್ರೀವ ಪಟ್ಟಾಭಿಷೇಕ ನಡೆದಿದ್ದು ಶ್ರಾವಣ ಮಾಸದಲ್ಲಿ. ಮಳೆಗಾಲದ ನಾಲ್ಕು ತಿಂಗಳು ಕಳೆದ ನಂತರ ಸೀತೆಯನ್ನು ಹುಡುಕಬೇಕೆಂದು ರಾಮ, ಸುಗ್ರೀವರ ಒಪ್ಪಂದವಾಯ್ತು. ಮಧ್ಯದಲ್ಲಿ ಉದ್ಯೋಗದ ಮಾಸವಾದ ಕಾರ್ತೀಕ ಬಂತೆಂದು ಸುಗ್ರೀವನಿಗೆ ನೆನಪಿಸುತ್ತಾನೆ. ಅಷ್ಟರಲ್ಲಾಗಲೇ ಆಶ್ವೀಜದ ವಿಜಯದಶಮಿ ಕಳೆದುಹೋಗಿತ್ತು. ಕಾಲದ ಕುರಿತಾದ ವರ್ಣನೆಯೇ ಸ್ಪಷ್ಟಪಡಿಸುತ್ತದೆ ರಾಮನು ವಿಜಯದಶಮಿಯಂದು ಯಾತ್ರೆಯನ್ನು ಆರಂಭಿಸಲಾಗಲೀ, ರಾವಣನನ್ನು ಕೊಂದದ್ದಾಗಲೀ ಅಲ್ಲವೆಂದು.
     ಪುನಃ ಲಂಕೆಯೆಡೆ ಬರೋಣ. ಸಂಸ್ಕೃತ ಸಾಹಿತ್ಯದಲ್ಲಿ ಸಿಲೋನ್ ಅಥವಾ ಶ್ರೀಲಂಕಾವನ್ನು ಸಿಂಹಳ ಎಂದು ಗುರುತಿಸಲಾಗಿತ್ತೇ ಹೊರತೂ ಲಂಕೆಯೆಂದಲ್ಲ. ಮಹಾಭಾರತದ ವನಪರ್ವದಿಂದ ಹಿಡಿದು ಸಮುದ್ರಗುಪ್ತನ ಅಲಹಾಬಾದ್ ಸ್ಥಂಭ ಶಾಸನ, ವರಾಹಮಿಹಿರನ ಬೃಹತ್ ಸಂಹಿತೆಯವರೆಗೂ ಲಂಕೆ ಮತ್ತು ಸಿಂಹಳವನ್ನು ಬೇರೆಬೇರೆಯಾಗಿಯೇ ಉಲ್ಲೇಖಿಸಲಾಗಿದೆ. ಫಾಹಿಯಾನ, ಹ್ಯೂಯಾನ್ಸಾಂಗ್, ಇಟ್ಸಿಂಗ್ ಈ ಮೂರೂ ಪ್ರಸಿದ್ಧ ಚೀನಿ ಯಾತ್ರಿಕರಿಗೂ ಈ ದ್ವೀಪ ಸಿಂಹಳವೆಂಬ ಹೆಸರಿನಿಂದ ಗೊತ್ತಿತ್ತೇ ಹೊರತೂ ಲಂಕೆಯೆಂದಲ್ಲ. ಮಾವಿನ ಹಣ್ಣಿನ ಆಕಾರದಲ್ಲಿರುವುದರಿಂದ ಇದಕ್ಕೆ ಆಮ್ರದ್ವೀಪವೆಂಬ ಹೆಸರೂ ಇತ್ತು. ಸಿಲೋನಿನ ಪ್ರಾಚೀನ ಪಾಲಿ ಸಾಹಿತ್ಯದಲ್ಲಿ ರಾಮಾಯಣದ ಉಲ್ಲೇಖವಿಲ್ಲ. ದೀಪವಂಶ ಮತ್ತು ಮಹಾವಂಶಗಳು ಟ್ರಂಕಾಮಲಿಗೆಯ ಆಗ್ನೇಯದಲ್ಲಿರುವ ಇಲಂಕೈ ಎಂಬ ಪ್ರದೇಶವನ್ನು ಗುರುತಿಸಿವೆ. ಯಕ್ಷರು ಈ ನಗರವನ್ನು ವ್ಯವಸ್ಥಿತವಾಗಿ ಆಳುತ್ತಿದ್ದರಂತೆ. ವಿಜಯನೆಂಬುವವನು ಕುವಣ್ಣನ ಸಹಾಯದಿಂದ ಅವರ ರಾಜನನ್ನು ಕೊಂದನಂತೆ. ಸಿಂಹಳದ ’ಮಹಾಮಯೂರಿ’ಯಲ್ಲಿ ವಿಭೀಷಣನನ್ನು ಇಲ್ಲಿ ಪೂಜಿಸಲ್ಪಡುವ ಯಕ್ಷನೆನ್ನಲಾಗಿದೆ. ರಾವಣನೊಂದಿಗೆ ಸೇರಿಕೊಂಡ ವಿಭೀಷಣ ಇವನೇ ಇರಬೇಕು.
      ಇನ್ನೊಂದು ಮಜಾ ವಿಷಯ ನೋಡಿ. ಹತ್ತನೇ ಶತಮಾನದ ಹೊತ್ತಿಗೆ ದಕ್ಷಿಣ ಕೊಂಕಣದ ಶಿಲಾಹಾರರು ಗೋವೆಯನ್ನು ಗೆದ್ದರು. ಇದನ್ನು ಬಹಳ ಹೆಮ್ಮೆಯಿಂದ ತಮ್ಮ ತಾಮ್ರಶಾಸನದಲ್ಲಿ ’ನಿಶ್ಶಂಕ ಲಂಕೇಶ್ವರ’ನೆಂದು ಹೇಳಿಕೊಂಡಿದ್ದಾರೆ. ಇನ್ನೊಂದು ದಾಖಲೆಯಲ್ಲೂ ಶಿಲಾಹಾರರನ್ನು ಲಂಕೆಯ ಒಡೆಯರೆನ್ನಲಾಗಿದೆ.  ಭೌಗೋಳಿಕ ದೃಷ್ಟಿಯಿಂದ ಗೋವೆ ಅಥವಾ ಮತ್ತಿತರ ದ್ವೀಪದಂಥ ಪ್ರದೇಶಗಳಿಗೆ ಲಂಕೆ ಎಂಬ ಹೆಸರಿನಿಂದ ಕರೆಯುವ ವಾಡಿಕೆಯಿದ್ದಿತ್ತೇನೋ. ಇದು ದಕ್ಷಿಣ-ಮಧ್ಯಭಾರತದಿಂದ ಬೆಳೆದುಬಂದ ಪರಂಪರೆ. ಲಂಕಾ ಎಂಬುದು ಭಾಷಾ ವಿಜ್ಞಾನಿಗಳ ಪ್ರಕಾರ ಮುಂಡಾರಿ ಭಾಷೆಯ ಶಬ್ದವೇ ಹೊರತೂ ಸಂಸ್ಕೃತ ಜನ್ಯವಲ್ಲ. ಇದು ಇಂಡೋ ಆರ್ಯನ್ ಅಥವಾ ದ್ರಾವಿಡ ಭಾಷವರ್ಗಕ್ಕೆ ಸೇರದೇ ಆದಿವಾಸಿಗಳ ಆಸ್ಟ್ರೋ ನೇಸಿಯನ್ ಭಾಷಾ ಕುಟುಂಬಕ್ಕೆ ಸೇರಿದ್ದು. ರಾವಣನನ್ನು ತಮ್ಮ ಮೂಲಪುರುಷನೆಂದುಕೊಳ್ಳುವ ಗೊಂಡ ಸಮುದಾಯವೇ ಸೇರಿದಂತೆ ಇಂದಿಗೂ ಈ ಭಾಷೆಯನ್ನು ಮಾತಾಡುವ ಬುಡಕಟ್ಟುಗಳು ಮಧ್ಯಭಾರತದಲ್ಲಿವೆ. ಆಂಧ್ರ ಒರಿಸ್ಸಾ ಗಡಿಯ ತೆಲ್ ಮತ್ತು ಮಹಾನದಿಯ ಸಂಗಮಸ್ಥಾನದಲ್ಲಿರುವ ಸೋನ್‌ಪುರವನ್ನು ಪಶ್ಚಿಮ ಲಂಕಾ ಎನ್ನಲಾಗಿದೆ. ಆಂಧ್ರದ ಗೋದಾವರಿಯ ನಡುವಿನ ಅಸಂಖ್ಯ ನಡುಗಡ್ಡೆಗಳಿಗೆ, ಅಳಿವೆ ಪ್ರದೇಶದ ಸಣ್ಣಪುಟ್ಟ ದ್ವೀಪಗಳಿಗೆ ಲಂಕಾ ಎಂಬ ಹೆಸರಿದೆ. ಕೋತಲಂಕಾ, ಅಪ್ಪಲರಮುನಿ ಲಂಕಾ, ಐನಾವಿಲಿ ಲಂಕಾ, ಕೃಷ್ಣಲಂಕಾ ಮಾತ್ರವಲ್ಲ ಬಾಪಟ್ಲದ ಸೂರ್ಯಲಂಕಾ, ಕೃಷ್ಣಾ ತೀರದ ನಾಗಯಲಂಕಾ ಎಂಬ ಹೆಸರುಗಳು ಆಂಧ್ರದೇಶದಲ್ಲಿ ದ್ವೀಪಗಳಿಗಿರುವ ಸಾಮಾನ್ಯ ಹೆಸರುಗಳು.  ಗೋದಾವರೀ ನದಿ ಮುಖಜ ಭೂಮಿಯ ಸಮೀಪ ಸ್ಥಳವನ್ನೂ ಪ್ರಾಕ್ಕಿಲ್ಲಂಕಾ ಅಥವಾ ಹಳೆಯ ಲಂಕೆ ಎಂದು ಕರೆಯುತ್ತಾರೆ. ಗೋದಾವರಿಯ ಉತ್ತರಕ್ಕಿರುವ ಬಸ್ತರ್‌ನಲ್ಲಿ ಲಂಕಾ ಮತ್ತು ಲಕ್ಕೈ ಎಂಬ ಹೆಸರಿನ ಎರಡು ಹಳ್ಳಿಗಳನ್ನು ಕಾಣಬಹುದು. ಇದೇ ಪ್ರದೇಶದಲ್ಲಿ ೯ನೇ ಶತಮಾನದ ಕುಮಾರ ಸೋಮೇಶ್ವರ ದೇವನ ಶಾಸನವೊಂದು ದೊರೆತಿದೆ. ಆರಂಭಿಕ ಸಂಶೋಧನೆಗಳಿಂದ ಈ ಸ್ಥಳ ಬಹಳ ಪುರಾತನವೆಂದು ತಿಳಿದುಬಂದಿದೆ. ವಿವಿಧ ಐತಿಹಾಸಿಕ ಅವಧಿಗಳಿಗೆ ಸಂಬಂಧಿಸಿದ ಕಬ್ಬಿಣದ ಸಾಧನಗಳು, ಮಡಿಕೆ ಚೂರುಗಳೂ, ಮುದ್ರೆಯುಳ್ಳ ಬೆಳ್ಳೀನಾಣ್ಯಗಳು, ಆಯುಧಗಳು ಕಂಡುಬಂದಿವೆ. ಗೋದಾವರೀ ಮುಖಜ ಭೂಮಿಯಲ್ಲಿಯೂ ಇಂಥದೇ ಉತ್ಖನನಗಳಾದರೆ ಲಂಕೆಯ ಇತಿಹಾಸದ ಮೇಲೆ ಹೆಚ್ಚು ಬೆಳಕು ಬೀರಬಹುದು.

Thursday, February 6, 2014

ಯಾವ ಚಂದ್ರಗುಪ್ತ? ಎಲ್ಲಿಯ ಇಂಡಿಕಾ? ಏನೀ ಗೋಳು?

ಅಶೋಕ ದ ಗ್ರೇಟ್ ಎಂಬ ಇಲ್ಲದ ವ್ಯಕ್ತಿಯನ್ನು ಬುದ್ಧನ ಮಟ್ಟಕ್ಕೇರಿಸಿದ ಬ್ರಿಟಿಷ್ ಬ್ರಹ್ಮರ ಕಥೆ ಹಿಂದೊಮ್ಮೆ ಹೇಳಿದ್ದೆನಷ್ಟೆ.
     ನಾವು ಸಾಧಾರಣವಾಗಿ ನಂಬಿಕೊಂಡುಬಂದ ಸಂಗತಿಯೇನೆಂದರೆ ಕ್ರಿ.ಪೂ 327ರ ಆಸುಪಾಸಿಗೆ ಮೌರ್ಯರ ಕಾಲದಲ್ಲಿ ಅಲೆಗ್ಸಾಂಡರ್ ನಮ್ಮ ಮೇಲೆ
ಚಂದ್ರಗುಪ್ತ ಮೌರ್ಯ
’ದಂಡ’ಯಾತ್ರೆ ನಡೆಸುವವರೆಗೂ ನಮ್ಮ ದೇಶಕ್ಕೆ ನಂಬಬಹುದಾದ ಇತಿಹಾಸವೆಂಬುದು ಯಾವುದೂ ಇರಲಿಲ್ಲ. ಈ ಗ್ರೀಕ್ ವೀರ ತನ್ನ ಜೊತೆ ಕರೆತಂದ ಕೆಲ ಮೇಧಾವಿಗಳು ಬರೆದಿಟ್ಟ ಪ್ರಾಚೀನ  ದಾಖಲೆಗಳಿಂದಲೇ ಭಾರತದ ಇತಿಹಾಸ ಶುರುವಾಗುವುದು. No  dates of ancient history of India can be divided. Indian history begins as far the exact dates are concerned, from the invansion of Alexander on India in 327 BC ಎಂದು V.A. Smithನಂಥ ಪ್ರಗಲ್ಭ ಇತಿಹಾಸಕಾರರೇ ಅಪ್ಪಣೆ ಹೊರಡಿಸಿದ್ದಾರೆ. ಇವನ ಕಾಲದ ಕೊಂಚ ನಂತರ ಅಂದರೆ ಅದೇ ಸುಮಾರು ಕ್ರಿ.ಪೂ ೪ನೇ ಶತಮಾನದಲ್ಲಿ ರಚಿಸಲ್ಪಟ್ಟ ಮೆಗಸ್ತನೀಸನ ’ಇಂಡಿಕಾ’ ಭಾರತದ ಇತಿಹಾಸದ ಕುರಿತಾಗಿರುವ ಮೊತ್ತಮೊದಲ ಅಧಿಕೃತ ದಾಖಲೆಯೆಂದು ನಮ್ಮ ಪ್ರಗತಿಪರ ನವ್ಯ ಇತಿಹಾಸಕಾರಿಂದೆಲ್ಲ ಮುಕ್ತಕಂಠದಲ್ಲಿ ಶ್ಲಾಘಿಸಲ್ಪಟ್ಟಿದೆ. ಸಾವಿರದೈನೂರು ವರ್ಷಗಳ ಹಿಂದೆಯೇ ಹೆಸರೊಂದನ್ನು ಬಿಟ್ಟು ಮತ್ತೆಲ್ಲ ನಾಮಾವಶೇಷಗೊಂಡಿರುವ ಈ ಕೃತಿಯೇ ನಮ್ಮ ಬೃಹಸ್ಪತಿಗಳಿಗೆಲ್ಲ ಇತಿಹಾಸವನ್ನು ನಿರ್ಧರಿಸಲಿರುವ ಏಕೈಕ ಚಾರಿತ್ರಿಕ ಆಧಾರ. ಸೆಲ್ಯುಕಸ್‌ನ ರಾಯಭಾರಿಯಾಗಿ ಚಂದ್ರಗುಪ್ತ ಮೌರ್ಯನ ರಾಜಧಾನಿಯಾದ ಪಾಟಲೀಪುತ್ರದಲ್ಲಿದ್ದು ಮೆಗಸ್ತನೀಸನು ರಚಿಸಿದ ಇಂಡಿಕಾ ಆ ಕಾಲದ ಭಾರತದ ಆಡಳಿತಾತ್ಮಕ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಭಯಂಕರ ಬೆಳಕು ಬೀರುತ್ತದೆಂದು ನಾವು ಓದಿದ ಪಠ್ಯಪುಸ್ತಕಗಳಲ್ಲೆಲ್ಲ ಪ್ರಶಸ್ತಿಪತ್ರದೊಡನೆ ಗೋಲ್ಡ್ ಮೆಡಲ್ ನೀಡಲಾಗಿದೆ.
     ದುರದೃಷ್ಟವೆಂದರೆ ನಮ್ಮ ಪುರಾಣೇತಿಹಾಸಗಳಲ್ಲಿ ಸೂಚ್ಯವಾಗಿಯೋ, ವಾಚ್ಯವಾಗಿಯೋ ದಿನ, ತಾರೀಖು, ಸಂವತ್ಸರಗಳು ಮಾತ್ರವಲ್ಲದೇ ನಕ್ಷತ್ರಗಳ ಚಲನೆ, ಅವುಗಳ ಸ್ಥಾನವನ್ನೂ ಸೇರಿದಂತೆ ಸೂಕ್ಷ್ಮಾತಿಸೂಕ್ಷ್ಮ ಅಂಶಗಳನ್ನೂ ಬರೆದಿಟ್ಟಿರುವಾಗ ಅವ್ಯಾವವೂ ನಮಗೆ ಸರಿಯೆನಿಸುವುದೇ ಇಲ್ಲ. ಕಲಿಯುಗ ಪ್ರಾರಂಭವಾಗಿದ್ದು ಮಹಾಭಾರತ ಯುದ್ಧ ನಡೆದ 36ನೇ ವರ್ಷವಾದ ಕ್ರಿ.ಪೂ 3102ರಲ್ಲೆಂದು ವೈಜ್ಞಾನಿಕವಾಗಿಯೇ ಅನುಮಾನಕ್ಕೆಡೆಯಿಲ್ಲದಂತೆ ಸಾಬೀತಾಗಿದೆ. ಕಲಿಯುಗ ಪ್ರಾರಂಭಗೊಂಡಿದ್ದು ಪ್ರಮಾದಿ ಸಂವತ್ಸರದ ಯುಗಾದಿಯಂದೆಂದೂ, ಆ ದಿನ ಮೇಷ ರಾಶಿಯಲ್ಲಿ ಏಳು ಗ್ರಹಗಳು ಸೇರಿದ್ದವೆಂದು ನಮ್ಮ ಪುರಾಣಗಳು ದಾಖಲಿಸಿದ ಸತ್ಯಕ್ಕೆ ಖಗೋಳಶಾಸ್ತ್ರಜ್ಞರೆಲ್ಲ ಒಪ್ಪಿ ಅಹುದಹುದೆಂದಿದ್ದಾರೆ. ಮಹಾಭಾರತ ಯುದ್ದದಿಂದಲೇ ಮೊದಲ್ಗೊಂಡು ವಿವಿಧ ರಾಜರ ಆಳ್ವಿಕೆಯ ಕ್ರಮಗಳನ್ನು   ಭಾಗವತ, ಮತ್ಸ್ಯ, ವಾಯು, ಬ್ರಹ್ಮಾಂಡ, ಭವಿಷ್ಯತ್, ವಿಷ್ಣುಪುರಾಣಗಳಿಂದ ಹಿಡಿದು ವೃದ್ಧಗರ್ಗ, ಬೃಹತ್ಸಂಹಿತೆ, ಶತಪಥ ಬ್ರಾಹ್ಮಣ, ಕಲ್ಹಣನ ರಾಜತರಂಗಿಣಿ, ನೇಪಾಳರಾಜವಂಶಾವಳೀ, ಭಾಸ್ಕರಾಚಾರ್ಯರ ಸಿದ್ಧಾಂತ ಶಿರೋಮಣಿ, ಅದರ ಮೇಲಿನ ಟೀಕೆಯಾದಂಥ ಕೃಷ್ಣ ಮಿಶ್ರನ ಜ್ಯೋತಿಷ್ಯ ಫಲರತ್ನಮಾಲ, ಸೋಮನಾಥ ಮಿಶ್ರನ ಜ್ಯೋತಿಷ್ಯ ಕಲ್ಪಲತಾ, ಕಲಿಯುಗ ರಾಜ ವೃತ್ತಾಂತಗಳವರೆಗೆ ಲೆಕ್ಕವಿಲ್ಲದಷ್ಟು ಪೌರಾಣಿಕ, ಐತಿಹಾಸಿಕ ಕೃತಿಗಳು ಖಚಿತವಾಗಿಯೇ ವಿವರಿಸಿವೆ. ನಮಗೆ ರಾಮಾಯಣ, ಮಹಾಭಾರತವನ್ನೋದಲೇ ಪುರುಸೊತ್ತಿಲ್ಲದ ಮೇಲೆ ಇವನ್ನೆಲ್ಲ ಕೇಳೋರು ಯಾರು ಬಿಡಿ. ಮಹಾಭಾರತದ ವಿಷಯಕ್ಕೇ ಬನ್ನಿ.
ಮಹಾಭಾರತದಲ್ಲಿ ಉತ್ತರೆಗೆ ಪರೀಕ್ಷಿತನು ಜನಿಸುವ ದಿನ ಸಪ್ತರ್ಷಿ ಮಂಡಲವು ಮಘಾ ನಕ್ಷತ್ರವನ್ನು ಪ್ರವೇಶಿಸಿತೆಂದು ಉಲ್ಲೇಖವಿದೆ. ಸಪ್ತರ್ಷಿ ಮಂಡಲವು ನೂರು ವರ್ಷಕ್ಕೆ ಒಂದೊಂದೆ ನಕ್ಷತ್ರವಾಗಿ ಹಿಂದೆ ಸರಿಯುತ್ತ 2700 ವರ್ಷಗಳಿಗೆ ಮತ್ತೆ ಪುನಃ ಅದೇ ಸ್ಥಾನಕ್ಕೆ ಬಂದುನಿಲ್ಲುತ್ತದೆ. ಇದು ಪಕ್ಕಾ ಖಗೋಳ ಜ್ಯೋತಿಷ್ಯವನ್ನಾಧರಿಸಿದ ವೈಜ್ಞಾನಿಕ ಲೆಕ್ಕಾಚಾರ. ಮತ್ಸ್ಯಪುರಾಣವನ್ನೇ ಗಮನಿಸಿ.
ಊರ್ಧ್ವಂ ಪ್ರವಕ್ಷ್ಯಾಮಿ ಮಾಗಧಾ ಏಬೃಹಧೃಥಾಃ |
ಸಂಗ್ರಾಮೇ ಭಾರತೇ ವೃತ್ತೇ ಸಹದೇವೇ ನಿಪಾತಿತೇ |
ಸೋಮಾಧಿಸ್ತಸ್ಯ ದಾಯಾದೋ ರಾಜಾಭೂತ್ಸ ಗಿರಿವ್ರಜೇ ||
(ಅಧ್ಯಾಯ 271, ಶ್ಲೋಕ 18,18)
ಬೃಹಧೃಥ ವಂಶದ ಮಗಧ ರಾಜರ ಬಗ್ಗೆ ಹೀಗಿದೆ.
ಭಾರತ ಯುದ್ಧದಲ್ಲಿ ಜರಾಸಂಧನ ಮಗ ಸಹದೇವ ಮಡಿದನು. ಅವನ ಮಗ ಸೋಮಧಿಯು ಗಿರಿವ್ರಜದಲ್ಲಿ ರಾಜನಾಗಿ ಐವತ್ತೆ೦ಟು ವರ್ಷ ರಾಜ್ಯಭಾರ ಮಾಡಿದನು.
ಮಹಾಪದ್ಮಾಭಿಷೇಕಾಸ್ತು ಯಾವಜ್ಜನ್ಮ ಪರೀಕ್ಷಿತಃ |
ಏಕಮೇವ ಸಹಸ್ರಂತು ಜ್ಞೇಯಂ ಪಂಚಶತೋತ್ತರಂ ||
(ಅಧ್ಯಾಯ 273, ಶ್ಲೋಕ 36)
ಪರೀಕ್ಷಿತನ ಹುಟ್ಟಿನಿಂದ ಮಹಾಪದ್ಮನ ಪಟ್ಟಾಭಿಷೇಕದವರೆಗೆ ಸಾವಿರದ ಐದುನೂರು ವರ್ಷಗಳಾದವು.
ಪೌಲೋಮಾಸ್ತು ತದಾಂಧ್ರಾಸ್ತು ಮಹಾಪದ್ಮಾಂತರೇಪುನಃ |
ಅನಂತರಂ ಶತಾನ್ಯಷ್ಟೌ ಷಟ್ತ್ರಿಂಶತ್ ಸಮಾಸ್ತಥಾ ||
ತಾವತ್ಕಾಲಾಂತರಂ ಭಾವ್ಯಮಾಂಧ್ರಾಂತಾದಾಪರೀಕ್ಷಿತಃ |
ಭವಿಷ್ಯೇ ತೇ ಪ್ರಸಂಖ್ಯಾತಾ ಪುರಾಣಜ್ಞೈಃ ಶ್ರುತರ್ಷಿಭಿಃ ||
ಸಪ್ತರ್ಷಯಸ್ತಥಾ ಪ್ರಾಂಶುಃ ಪ್ರದೀಪ್ತೇನಾಗ್ನಿನಾ ಸಮಾಃ |
ಸಪ್ತವಿಂಶತಿ ಭಾವ್ಯಾನಾ ಮಾಂಧ್ರಾಣಾಂತು ಯದಾಪುನಃ ||
(273, 37,38,39)
ಮಹಾಪದ್ಮ ನಂದನಿಂದ ಆಂಧ್ರ ಪುಲೋಮನ ನಡುವಿನ ಅವಧಿ 836 ವರ್ಷಗಳು. ಅಂದರೆ ಪರೀಕ್ಷಿದ್ರಾಜನ ಕಾಲದಿಂದ ಆಂಧ್ರರ ಪತನದವರೆಗೆ ಒಂದುಸಾವಿರದ ಎಂಟುನೂರ ಎಂಭತ್ತಾರು ವರ್ಷಗಳು ಕಳೆದಂತಾಗುವವು.
ಪರೀಕ್ಷಿತನ ಜನನದಿಂದ ಆಂಧ್ರರಾಜರ ಕಾಲದವರೆಗೆ 2700 ವರ್ಷಗಳಲ್ಲಿ ಅಗ್ನಿನಕ್ಷತ್ರದಲ್ಲಿದ್ದ ಸಪ್ತರ್ಷಿ ಮಂಡಲದ ಒಂದು ಸುತ್ತು ಪೂರ್ಣಗೊಂಡಿತು.
     ಮಹಾಭಾರತ ನಡೆಯುವುದಕ್ಕಿಂಥ 571 ವರ್ಷಗಳ ಮೊದಲು ಕ್ರಿ.ಪೂ 3709 ಕುರುವಂಶದ ಬೃಹದ್ರಥನಿಂದ ರಾಜಗೃಹ ಅಥವಾ ಗಿರಿವ್ರಜವನ್ನು ರಾಜಧಾನಿಯನ್ನಾಗಿಟ್ಟುಕೊಂಡು ಮಗಧ ಸಾಮ್ರಾಜ್ಯ ಅಥವಾ ಬೃಹದ್ರಥ ರಾಜವಂಶ ಸ್ಥಾಪಿಸಲ್ಪಟ್ಟಿತು. ಈ ವಂಶದ ಹತ್ತನೇ ತಲೆಮಾರೇ ಮಹಾಭಾರತದ ಸಂದರ್ಭದಲ್ಲಿ ಭೀಮನಿಂದ ಕೊಲ್ಲಲ್ಪಟ್ಟ ಜರಾಸಂಧ. ಇವನ ಮಗ ಸಹದೇವನ ನಂತರ ಈ ವಂಶದ 22 ರಾಜರು ಒಟ್ಟೂ 1006 ವರ್ಷಗಳ ಕಾಲ ಅಂದರೆ ಕ್ರಿ.ಪೂ 2132ರವರೆಗೆ ಮಗಧವನ್ನಾಳಿದರು. ಬೃಹದ್ರಥ ವಂಶದ ಕೊನೆಯ ಅರಸು ರಿಪುಂಜಯನನ್ನು ಹತ್ಯೆಗೈದು ಅವನ ಮಂತ್ರಿಯಾಗಿದ್ದ ಶುನಕ ತನ್ನ ಮಗ ಪ್ರದ್ಯೋತನನನ್ನು ಪಟ್ಟಕ್ಕೇರಿಸಿದ. ಕ್ರಿ.ಪೂ 2132ರಿಂದ ಕ್ರಿ.ಪೂ 1994ರವರೆಗೆ 138 ವರ್ಷ ಐದು ತಲೆಮಾರುಗಳ ಕಾಲ ಮಗಧವನ್ನಾಳಿದವರು ಈ ಪ್ರದ್ಯೋತನ ರಾಜವಂಶದವರು. ಪ್ರದ್ಯೋತರ ನಂತರ ಕ್ರಿ.ಪೂ 1994ರಿಂದ 1634ರವರೆಗೆ 360 ವರ್ಷಗಳ ಕಾಲ ಮಗಧವು ಶಿಶುನಾಗ ವಂಶದ ಹತ್ತು ರಾಜರುಗಳಿಂದ ಆಳಲ್ಪಟ್ಟಿತು. ಈ ಸಾಮ್ರಾಜ್ಯವನ್ನು ಸ್ಥಾಪಿಸಿದವನು ಶಿಶುನಾಗ. ಇವನ ಮಗ ಕಾಕವರ್ಣ. ಶಿಶುನಾಗರ ೪,೫,೬ನೇ ರಾಜರಾದ ಕ್ಷೇಮಜಿತ್, ಬಿಂಬಿಸಾರ ಮತ್ತು ಅಜಾತಶತ್ರುಗಳ ಕಾಲದಲ್ಲಿಯೇ ಬುದ್ಧನು ಬದುಕಿದ್ದು.
      ಮಹಾಭಾರತ ಯುದ್ಧ ನಡೆದ ಸುಮಾರು 15೦೦ ವರ್ಷಗಳಿಗೆ ಅಂದರೆ ಕ್ರಿ.ಪೂ 1634ರಲ್ಲಿ ಮಗಧದಲ್ಲಿ ಮಹಾಪದ್ಮನಂದನ ಪಟ್ಟಾಭಿಷೇಕ ನಡೆಯಿತು. ಅವನೂ ಅವನ ಮಕ್ಕಳೂ ಸೇರಿ ನವನಂದರು ನೂರು ವರ್ಷಗಳವರೆಗೆ ಆಳ್ವಿಕೆ ನಡೆಸಿದರು. ತನಗಾದ ಅವಮಾನಕ್ಕೆ ಪ್ರತೀಕಾರವಾಗಿ ನಂದರ ಕೊನೆಯ ಅರಸ ಧನನಂದನನ್ನು ಚಂದ್ರಗುಪ್ತ ಮೌರ್ಯನೆಂಬ ಯುವಕನ ಸಹಾಯದಿಂದ ಕೊಲ್ಲಿಸಿದ ಚಾಣಕ್ಯ ಅವನನ್ನೇ ಕ್ರಿ.ಪೂ 1534ರಲ್ಲಿ ಮಗಧದ ಸಿಂಹಾಸನವನ್ನೇರಿಸಿದ. 316 ವರ್ಷಗಳ ಮೌರ್ಯವಂಶದ ಆಳ್ವಿಕೆಯ ನಂತರ 891 ವರ್ಷಗಳು ಶುಂಗ, ಕಾಣ್ವ ಮತ್ತು ಆಂಧ್ರ ವಂಶಗಳು ಮಗಧವನ್ನಾಳಿದವು. ಆಂಧ್ರವಂಶದ ಕೊನೆಯ ರಾಜ ಚಂದ್ರಶ್ರೀ ಅಥವಾ ಚಂದ್ರಮಸುವಿನ ಆಳ್ವಿಕೆಯಲ್ಲೇ ಅಲೆಕ್ಸಾಂಡರಿನ ದಂಡಯಾತ್ರೆ ನಡೆದದ್ದು(ಕ್ರಿ.ಪೂ 327). ಈ ಚಂದ್ರಮಸುವನ್ನೇ ಗ್ರೀಕ್ ಲೇಖಕರು Agrammes ಅಥವಾ Xandramus ಎಂದಿದ್ದು. ಅದೇ ವರ್ಷ ಚಂದ್ರಮಸುವನ್ನೂ ಅವನ ಮಗ ಪುಲೋಮನನ್ನೂ ಹತ್ಯೆಗೈದು ಆಂಧ್ರ ಭೃತ್ಯ ವಂಶವನ್ನು ಸ್ಥಾಪಿಸಿ ಪಾಟಲೀಪುತ್ರವನ್ನು ರಾಜಧಾನಿಯನ್ನಾಗಿಸಿ ಅಧಿಕಾರಕ್ಕೇರಿದವನು ಮೊದಲನೇ ಚಂದ್ರಗುಪ್ತ. ’ಆಂಧ್ರಭೃತ್ಯಾಸ್ಸಪ್ತಃ’ ಎಂದು ವಿಷ್ಣುಪುರಾಣವೂ, ’ಆಂಧ್ರಾಣಾಂ ಸಂಸ್ಥಿತಾರಾಜ್ಯೇತೇಷಾಂ ಭೃತ್ಯಾನ್ವಯೇ ಸಪ್ತೈವಾಂಧ್ರಾ ಭವಿಷ್ಯಂತಿ’ ಎಂದು ಮತ್ಸ್ಯ ಪುರಾಣವೂ ಆಂಧ್ರರ ಬಳಿಕ ಆಂಧ್ರಭೃತ್ಯವಂಶದ ಏಳು ರಾಜರುಗಳು ರಾಜ್ಯವಾಳಿದ್ದನ್ನು ತಿಳಿಸುತ್ತದೆ. ಈ ಆಂಧ್ರಭೃತ್ಯರೇ ಭಾರತೀಯ ಇತಿಹಾಸದ ಸ್ವರ್ಣಯುಗದ ನಿರ್ಮಾತೃರೆನಿಸಿಕೊಂಡ ಗುಪ್ತರು. ಗುಪ್ತರ ಚಂದ್ರಗುಪ್ತನ ಕಾಲದಲ್ಲಿ ಸೆಲ್ಯುಕಸ್ಸಿನ ರಾಯಭಾರಿಯಾಗಿ ಭಾರತಕ್ಕೆ ಬಂದವನು ಮೆಗಸ್ತನೀಸ್. ಈ ಚಂದ್ರಗುಪ್ತನ ಮಗನೇ ಇತಿಹಾಸ ಕಂಡ ಅಪ್ರತಿಮ ದಂಡನಾಯಕನೆಂದು ಹೊಗಳಲ್ಪಟ್ಟ ಸಮುದ್ರಗುಪ್ತ. ಈ ರಾಜರ ವಂಶಕ್ರಮವನ್ನು ಹಿಂದೂ ಪುರಾಣಗಳು ಮಾತ್ರವಲ್ಲ, ಪ್ರಾಚೀನ ಬೌದ್ಧ ಸಾಹಿತ್ಯವೂ, ಎಲಿಯಂ ಜೋನ್ಸಿನಂಥ ಮಹಾನ್ ಇತಿಹಾಸಕಾರರೂ ಒಪ್ಪಿಕೊಂಡಿದ್ದಾರೆ. ಇಷ್ಟೆಲ್ಲ ಸಾಕ್ಷ್ಯಾಧಾರಗಳಿದ್ದರೂ ಕ್ರಿ.ಪೂ 1534ರಲ್ಲಿದ್ದ ಚಂದ್ರಗುಪ್ತ ಮೌರ್ಯನನ್ನು ಕ್ರಿ.ಪೂ 327ಕ್ಕೆ ದರದರನೆ ಎಳೆದುಕೊಂಡು ತಂದುಬಿಟ್ಟದ್ದಲ್ಲದೇ, ಇವನನ್ನೇ ಅಲೆಕ್ಸಾಂಡರಿನ
ಗುಪ್ತರ ಮತ್ತು ಮೌರ್ಯರ ಕಾಲದ ನಾಣ್ಯಗಳು
ಸಮಕಾಲೀನನ್ನಾಗಿಸಿ ಭಾರತದ ಚರಿತ್ರೆಯ ಸಾವಿರದೈನೂರು ವರ್ಷಗಳನ್ನೇ ಮಂಗಮಾಯಮಾಡಿದವರಿಗೇನೆನ್ನಬೇಕು? ಮೂರ್ಖ ಬ್ರಿಟಿಷರು ಮಾಡಿಟ್ಟುಹೋದ ತಪ್ಪು ಕಾಲನಿರ್ಣಯಗಳನ್ನೇ ಸರಿಯೆಂದುಕೊಂಡು ಅವರು ಹೋದ ಎಪ್ಪತ್ತು ವರ್ಷಗಳ ನಂತರವೂ ನಾವು ಕೋಲೆ ಬಸವನಂತೆ ತಲೆ ಅಲ್ಲಾಡಿಸುತ್ತಿದ್ದೇವೆ. ಹಾಗೆಂದು ಅವರೇನು ಸುಮ್ಮನೇ ಹೆಸರು ಕಲ್ಪಿಸಿದ್ದರೇ ಎನ್ನಬೇಡಿ! ಹಾಗೆ ಮಾಡಲು ಅವರಿಗಿದ್ದ ಒಂದೇ ಒಂದು ಆಧಾರ ಗ್ರೀಕ್ ಲೇಖಕರು ಉಲ್ಲೇಖಿಸಿದ ’ಸ್ಯಾಂಡ್ರೋಕಾಟಸ್’ ಎಂಬ ಹೆಸರು. ಮೆಗಸ್ತನೀಸ್ ಮಾತ್ರವಲ್ಲದೇ ಡಿಯೋಡೊರಸ್, ಕರ್ಟಿಯಸ್‌ನಂಥ ಗ್ರೀಕ್ ಲೇಖಕರೇ ’ಕ್ಸಂಡ್ರಮಸ್‌’ನನ್ನು ಕೊಂದು ಸ್ಯಾಂಡ್ರೋಕಾಟಸ್ ಪಟ್ಟಕ್ಕೇರಿದನೆಂದೂ, ಆತನ ನಂತರ ಅವನ ಮಗ ’ಸ್ಯಾಂಡ್ರೋಸಿಪ್ಟಸ್’ ರಾಜ್ಯವಾಳಿದನೆಂದೂ ಹೇಳಿದ್ದಾರೆ. ಚಂದ್ರಗುಪ್ತ ಮೌರ್ಯ ಧನನಂದನನ್ನು ಕೊಂದು ಸಿಂಹಾಸನಕ್ಕೇರಿದ, ಅವನ ನಂತರ ಆಳಿದವನು ಮಗ ಬಿಂದುಸಾರ. ಗುಪ್ತ ಚಂದ್ರಗುಪ್ತನು ಚಂದ್ರಮಸುವನ್ನು ಕೊಂದು ಗುಪ್ತ ವಂಶವನ್ನು ಸ್ಥಾಪಿಸಿದ್ದು. ಅವನ ನಂತರ ಅವನ ಮಗ ಸಮುದ್ರಗುಪ್ತ ರಾಜನಾದ. ಈಗ ನೀವೇ ಹೇಳಿ ’ಕ್ಸಂಡ್ರಮಸ್’ ಮತ್ತು ’ಸ್ಯಾಂಡ್ರೋಸಿಪ್ಟಸ್’ ಹೆಸರುಗಳು ಧನನಂದ ಮತ್ತು ಬಿಂದುಸಾರನ ಗ್ರೀಕ್ ಅಪಭೃಂಶದ ಹೆಸರುಗಳೋ ಅಥವಾ ಚಂದ್ರಮಸ್ ಮತ್ತು ಸಮುದ್ರಗುಪ್ತರದ್ದೋ? ಸ್ಯಾಂಡ್ರೋಕಾಟಸ್ ಆ ಕಾಲದ ಭಾರತೀಯ ರಾಜರಲ್ಲೇ ಶ್ರೇಷ್ಟನೆಂದೂ, ಕುಲೀನ ಮನೆತನದವನೆಂದೂ, ದೊಡ್ಡ ಸೈನ್ಯದೊಂದಿಗೆ ಇಡೀ ಭಾರತವನ್ನೇ ಗೆದ್ದನೆಂದೂ ಗ್ರೀಕರ ಅಂಬೋಣ. ಶೂದ್ರ ಸ್ತ್ರೀಯ ಮಗನಾದ ಚಂದ್ರಗುಪ್ತ ಮೌರ್ಯ ಕುಲೀನ ಮನೆತನದವನೂ ಅಲ್ಲ, ಚಾಣಕ್ಯನ ಕೃಪೆಯಿಂದ, ಕೋಸಲ, ವಿದೇಹದಂಥ ಅಕ್ಕಪಕ್ಕದ ರಾಜರ ಸಹಾಯದಿಂದ ಅಧಿಕಾರವುಳಿಸಿಕೊಂಡಿದ್ದನ್ನು ಬಿಟ್ಟರೆ ಅವನಂಥ ಶ್ರೇಷ್ಟ ರಾಜನೂ ಅಲ್ಲ. ಅದೇ ಮೊದಲನೇ ಚಂದ್ರಗುಪ್ತ ಹಾಗಲ್ಲ. ಸೂರ್ಯವಂಶಕ್ಕೆ ಸೇರಿದ ಇವನಿಗೆ ವಿಜಯಾದಿತ್ಯನೆಂಬ ಬಿರುದಿತ್ತು. ಇವನ ಮಗ ಸಮುದ್ರಗುಪ್ತನು ಅಶೋಕಾದಿತ್ಯನೆಂದೂ, ಮೊಮ್ಮಗ ಎರಡನೇ ಚಂದ್ರಗುಪ್ತನು ವಿಕ್ರಮಾದಿತ್ಯನೆಂದೂ ಬಿರುದಾಂಕಿತರಾಗಿದ್ದರು. ತನ್ನ ಗುಪ್ತಚರರಿಂದ ಚಂದ್ರಗುಪ್ತನ ಸೈನ್ಯಬಲವನ್ನು ತಿಳಿದುಕೊಂಡ ಮಹಾಶೂರವೀರ ಗ್ರೀಕ್ ರಾಜನಿಗೆ ಕೈಕಾಲು ನಡುಕ ಶುರುವಾಗಿ ಗಂಗೆಯನ್ನು ದಾಟದೇ ತನ್ನ ದಂಡಯಾತ್ರೆಯನ್ನು ಬಿಟ್ಟು ಪಲಾಯನಗೈದನಂತೆ. ಸಾವಿರ ವರ್ಷಗಳಿಗಿಂತ ಹೆಚ್ಚು ಕಾಲದ ಅಂತರವನ್ನು ಹೊಂದಿರುವ ಈ ಇಬ್ಬರು ಚಂದ್ರಗುಪ್ತರಿಗೆ ಎತ್ತಣಿಂದೆತ್ತಣ ಸಂಬಂಧ. ಅಶೋಕನ ಕಥೆಯೂ ಅಷ್ಟೇ. ಇತಿಹಾಸದಲ್ಲಿ ಮೂವರು ಅಶೋಕರ ಉಲ್ಲೇಖವಿದೆ. ಕಲ್ಹಣನ ರಾಜತರಂಗಿಣಿಯಲ್ಲಿ ಪ್ರಸ್ತಾಪಿಸಲ್ಪಟ್ಟ ಕಾಶ್ಮೀರವನ್ನಾಳಿ ತದನಂತರ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಗೋನಂದ ವಂಶದ ಧರ್ಮಾಶೋಕ ಮೊದಲಿನವನು. ಈತ ಕಾಶ್ಮೀರವನ್ನಾಳಿದ ನಲವತ್ತೆಂಟನೇ ಅರಸು. ಇವನ ಮರಿಮೊಮ್ಮಗನೇ ಕನಿಷ್ಕ ಚಕ್ರವರ್ತಿ. ಎರಡನೇಯವನು ಇದೇ ಕಾಲದಲ್ಲಿದ್ದ ಅಶೋಕವರ್ಧನನೆಂದು ಹೆಸರಾಗಿದ್ದ ಚಂದ್ರಗುಪ್ತ ಮೌರ್ಯನ ಮೊಮ್ಮಗ. ಮೂರನೇಯವನು ನಾವಿಂದು ಅಶೋಕಾ ದ ಗ್ರೇಟ್ ಅಂದುಕೊಳ್ಳುವ ಮಹಾಶೋಕನೆಂದು ಹೆಸರಾಗಿದ್ದ ಸಮುದ್ರಗುಪ್ತ. ಎಷ್ಟೋ ಶತಮಾನಗಳ ನಂತರ ಬಂದ ದೀಪವಂಶ, ಅಶೋಕವದನದಂಥ ಫ್ಯಾಂಟಸಿ ಕಥೆಗಳೆಲ್ಲ ಕ್ರಿ.ಪೂ ಮೂರನೇ ಶತಮಾನದ ಸುಮಾರಿಗೆ ಇಡೀ ಭರತಖಂಡವನ್ನು ಏಕಚಕ್ರಾಧಿಪತ್ಯದಡಿ ತಂದು ಆಳಿದ ಈ ಸಮುದ್ರಗುಪ್ತನ ಕುರಿತಾದವೇ. ಇವನ ಜೀವನಚರಿತ್ರೆಯನ್ನು ಬರೆದ ಹರಿಸೇನ, ಕಲಿಯುಗ ರಾಜ ವೃತ್ತಾಂತ, ಕಲ್ಹಣನ ರಾಜತರಂಗಿಣಿಗಳೆಲ್ಲ ಈ ಅಶೋಕನನ್ನೇ ದ ಗ್ರೇಟ್ ಎಂದು ಸಾರಿವೆ. ಬುದ್ಧರ ಮಂಜುಷ್ರೀಮೂಲಕಲ್ಪದಲ್ಲಿರುವ ಹೆಸರು ಸಮುದ್ರಗುಪನದ್ದೇ. ಈಗ ಅಶೋಕನ ಹೆಸರಲ್ಲಿ ಸಿಕ್ಕಿರುವ  ಶಾಸನಗಳೆಲ್ಲ ಕ್ರಿ.ಪೂ ಮೂರನೇ ಶತಮಾನದವೇ. ಯಾರೊಪ್ಪಲಿ ಬಿಡಲಿ, ಆ ಕಾಲದಲ್ಲಿ ಸಮುದ್ರಗುಪ್ತನನ್ನು ಹೊರತುಪಡಿಸಿದರೆ ಅಶೋಕನೆಂಬ ಹೆಸರಿನ ಮತ್ತೊಬ್ಬ ರಾಜ ಭಾರತದಲ್ಲೇ ಇರಲಿಲ್ಲವೆಂಬುದು ಐತಿಹಾಸಿಕ ಸತ್ಯ. ಹೆಸರೊಂದೇ ಎಂಬ ಕಾರಣಕ್ಕೆ ಯಾರ್ಯಾರನ್ನೋ ಎಲ್ಲೆಲ್ಲಿಗೋ ಎತ್ತಿಹಾಕಿ ಏನೇನೋ ಬಿಡಿಸಲಾಗದ ಗೋಜಲು ಗೋಜಲಾಗಿಸಿದ ಕೀರ್ತಿಯೆಲ್ಲ ಮಾಕ್ಸ್‌ಮುಲ್ಲರ್, ವಿ.ಎ.ಸ್ಮಿತ್‌, ಜೇಮ್ಸ್ ಪ್ರಿನ್ಸೆಪ್‌ನಂಥ ಬ್ರಿಟಿಷ್ ಇತಿಹಾಸಕಾರರಿಗೆ ಸಲ್ಲಬೇಕು. ಈಗ ಅದೇ ತಲೆಕೆಟ್ಟ ಕೆಲಸವನ್ನು ಅವರ ಮಾನಸ ಪುತ್ರರಾದ ರೋಮಿಲಾ ಥಾಪರ್, ಇರ್ಫಾನ್ ಹಬೀಬ್, ಕೋಶಾಂಬಿಯಂಥ ಬುರುಡೆ ದಾಸರು ಮುಂದುವರೆಸಿದ್ದಾರೆ. ಈಗ್ಗೆ ಹತ್ತಾರು ಸಾವಿರ ವರ್ಷಗಳ ಹಿಂದೆ ಯುರೋಪಿಯನ್ನರು ಹುಟ್ಟುವ ಮೊದಲೇ, ಅಮೇರಿಕನ್ನರು ಕಣ್ಣುಬಿಡುವ ಮುಂದೇ, ಪ್ರಪಂಚದ ಇತರೆಡೆ ಬಟ್ಟೆಯುಡದೇ ತಿರುಗುತ್ತಿದ್ದ ಕಾಲದಲ್ಲಿ ಕಣ್ಣುಕೂರೈಸುವ ಅದ್ಭುತ ವೈದಿಕ ನಾಗರಿಕತೆಯೊಂದು ಭಾರತದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿ ನಾವಿಂದೂ ನೆನೆಸಿಕೊಂಡು ತಲೆ ಎತ್ತಿ ನಿಲ್ಲುವಂತೆ ಅವಿಚ್ಛಿನ್ನವಾಗಿ, ಅಖಂಡವಾಗಿ ವಿಕಸನಗೊಂಡಿತ್ತು. ಅಂಥ ವೇದಕಾಲವನ್ನು ಜಗ್ಗಿ ಮೂರು ಸಾವಿರ ವರ್ಷದ ಹಿಂದೆ ತಂದುಬಿಟ್ಟಿದ್ದಲ್ಲದೇ, ಐದು ಸಾವಿರ ವರ್ಷಗಳ ಹಿಂದೆ ನಡೆದ ಮಹಾಭಾರತ ಯುದ್ಧದ ಕಾಲವನ್ನು ಮೂರು ಸಾವಿರ ವರ್ಷಗಳೀಚೆ ಎಸೆದು, ಕ್ರಿ.ಪೂ 1800ರಲ್ಲಿದ್ದ ಬುದ್ಧನನ್ನು ಕ್ರಿ.ಪೂ 5ನೇ ಶತಮಾನದಲ್ಲಿ ಮತ್ತೊಮ್ಮೆ ಹುಟ್ಟಿಸಿ, ಎರಡೂವರೆ ಸಾವಿರ ವರ್ಷಗಳ ಹಿಂದೆ ಬದುಕಿದ್ದ ಆಚಾರ್ಯ ಶಂಕರರು ಎಂಟನೇ ಶತಮಾನದಲ್ಲಿ ಇನ್ನೊಮ್ಮೆ ಅವತರಿಸುವಂತೆ ಮಾಡಿ, ಕ್ರಿ.ಪೂ 1500ರಲ್ಲೇ ಸತ್ತು ಸ್ವರ್ಗ ಸೇರಿದ್ದ ಚಂದ್ರಗುಪ್ತ ಮೌರ್ಯನನ್ನೇ ಅಲೆಕ್ಸಾಂಡರಿನ ಸಮಕಾಲೀನನನ್ನಾಗಿಸಿದವರ ಬುದ್ಧಿಮತ್ತೆಗಂತೂ ಅಬ್ಬಾ..... ಸಲಾಮ್ ಹೊಡೆಯಲೇ ಬೇಕು.
      ಪ್ರಪಂಚದ ಯಾವ ದೇಶದ ಯಾವ ಮೂಲೆಗಾದರೂ ಹೋಗಿ ಹೇಳಿ ’ನಿಮ್ಮ ಇತಿಹಾಸ ನೀವಂದುಕೊಂಡದ್ದಕ್ಕಿಂತ ಹಳೆಯದು, ನಿಮ್ಮ ಹಿರಿಯರು ಪ್ರಪಂಚ ಕಾಣದ ವೈಭವದಲ್ಲಿ ಶ್ರೇಷ್ಟ ನಾಗರಿಕತೆಯೊಂದನ್ನು ನಡೆಸಿದರು’ ಎಂದು. ಖುಷಿಯಿಂದ ಕುಣಿದಾಡುತ್ತಾರೆ. ಅದೇ ಮಾತನ್ನು ನಮ್ಮವರಿಗೆ ಹೇಳಿ ನೋಡಿ. ಸತ್ತರೂ ನಂಬಲಿಕ್ಕಿಲ್ಲ. ನಮಗಿನ್ನೂ ನಮ್ಮ ಪೂರ್ವಜರು ಎಲ್ಲಿಂದಲೋ ಬಂದು ದಾಳಿಮಾಡಿದವರು, ನಮ್ಮದು ದಟ್ಟ ದರಿದ್ರ ಅನಾಗರೀಕ ದೇಶ, ನಾವು ಸಂಸ್ಕೃತಿ ಕಲಿತಿದ್ದೇ ಬ್ರಿಟಿಷರಿಂದ ಎಂದುಕೊಳ್ಳುವುದರಲ್ಲೇ ಪರಮಸುಖ.

ಆಕರ: The plot in Indian Chronology: ಪಂಡಿತ ಕೋಟಾ ವೇಂಕಟಾಚಲಂ
J.M. McCrindle: Ancient India as Described by Megasthenes and Arrian
E.J Rapson: The Cambridge History of India
 ವಾಜಪೇಯಂ ಶ್ರೀರಂಗಾಚಾರ್ಯ, ಶ್ರೀಮದ್ವೈಪಾಯನಮುನಿಪ್ರಣೀತಂ ಶ್ರೀಮತ್ಸ್ಯಮಹಾಪುರಾಣಂ
Dates in ancient history of india: Aryasomayajulu

Friday, January 24, 2014

ಬೇಡನಾದ ಬ್ರಾಹ್ಮಣ..!


     ವಾಲ್ಮೀಕಿಗಿರಿಸಂಭೂತವಾಗಿ ರಾಮಸಾಗರವನ್ನು ಸೇರಿದ ರಾಮಾಯಣವೇ ಒಂದು ಮಹಾನದಿ. ಅದು ಸಾವಿರಾರು ಕವಿಗಳ ಪ್ರತಿಭೆಗೆ ಸ್ಫೂರ್ತಿದಾಯಿನಿಯಾಗಿ ಅನಂತಕಾಲದಿಂದಲೂ ಈ ಭೂಮಿಯನ್ನು ಪಾವನಗೊಳಿಸುತ್ತಿರುವ ಪುಣ್ಯಗಂಗೆ. ಅಂದಿನಿಂದ ಇಂದಿನವರೆಗೆ ರಾಮಾಯಣವು ಸಹಸ್ರ ಸಹಸ್ರ ಕವಿಗಳಿಂದ ಸಾವಿರ ಸಾವಿರ ಬಾರಿ ಪುನಃ ಪುನಃ ಬರೆಯಲ್ಪಟ್ಟಿದೆ. ’ತಿಣುಕಿದನು ಫಣಿರಾಯ ರಾಮಾಯಣದ ಕವಿಭಾರದಲಿ’ ಎಂಬಂತೆ ಅದೆಷ್ಟೇ ರಾಮಾಯಣಗಳಿದ್ದರೂ ಪುರ್ವೋತ್ತರದ ವಿಚಾರಮಾಡುವ ಕೆಲಸ ವಿದ್ವಾಂಸನಿಗೆ ಬಂದರೆ ಎಲ್ಲದಕ್ಕೂ ಮೂಲವಾಗುವುದು ವಾಲ್ಮೀಕಿ ರಾಮಾಯಣವೇ. ಪ್ರಚಲಿತ ಮೂಲ ವಾಲ್ಮೀಕಿ ರಾಮಾಯಣದಲ್ಲಿ ಕೆಲವೊಂದು ಭಾಗಗಳು ಪ್ರಕ್ಷಿಪ್ತವಾದರೂ ರಾಮಾಯಣ ಮತ್ತು ವಾಲ್ಮೀಕಿಯ ವೃತ್ತಾಂತದ ಬಗ್ಗೆ ತಿಳಿಯಲು ಅವೇ ಮೂಲ ಆಧಾರ. ಅಗಸನ ಮಾತು ಕೇಳಿ ಕಾಡಿಗಟ್ಟಲ್ಪಟ್ಟ ಸೀತೆಗೆ ಆಶ್ರಯಕೊಟ್ಟು, ಲವಕುಶರನ್ನು ಸಾಕಿ ಅವರಿಗೆ ರಾಮಾಯಣವನ್ನು ಕಲಿಸಿ ಮತ್ತೆ ಸೀತೆಯು ರಾಮನನ್ನು ಯಾಗಮಂಟಪದಲ್ಲಿ ಸಂಧಿಸುವಂತೆ ಮಾಡಿದ ಕೀರ್ತಿ ವಾಲ್ಮೀಕಿಯದ್ದೆಂದು ಉತ್ತರ ರಾಮಾಯಣ ತಿಳಿಸುತ್ತದೆ. ಹೀಗೆ ವಾಲ್ಮೀಕಿಯು ರಾಮಾಯಣವನ್ನು ಬರೆದ ಕವಿಯಷ್ಟೇ ಅಲ್ಲ, ರಾಮಾಯಣದ ಪ್ರಮುಖ ಪಾತ್ರಧಾರಿಯೂ ಹೌದು. ಅಯೋಧ್ಯಾ ಕಾಂಡದ ಸರ್ಗವೊಂದರಲ್ಲಿ ರಾಮ, ಲಕ್ಷ್ಮಣ, ಸೀತೆಯರು  ಚಿತ್ರಕೂಟದ ಸಮೀಪ ವಾಲ್ಮೀಕಿಯನ್ನು ಕಂಡು ವಂದಿಸಿದರೆಂದಿದೆ. ಬಾಲಕಾಂಡದ ಕ್ರೌಂಚ ಪ್ರಸಂಗದಿಂದ ವಾಲ್ಮೀಕಿಯ ಆಶ್ರಮ ತಮಸಾನದಿ ತೀರದಲ್ಲಿತ್ತೆಂದು ತಿಳಿಯುತ್ತದೆ. ಈ ವಾಲ್ಮೀಕಿ ಬೇಡಕುಲದವನೆಂಬ ರೂಢಿ ನಮ್ಮಲ್ಲಿ ಬಹುಮಟ್ಟಿಗೆ ಪ್ರಚಾರದಲ್ಲಿದೆ. ನಮ್ಮ ಹಿಂದಿನ ’ಗನ’ ಸರ್ಕಾರವು ಸಿದ್ರಾಮಯ್ಯನವರಿಂದ ಕುರುಬರ ಓಟು ಕದಿಯಲು ’ಕನಕ’ಜಯಂತಿಯಂದೂ, ಶ್ರೀರಾಮುಲುವನ್ನು ಸಂತೈಸಲು ’ವಾಲ್ಮೀಕಿ’ ಜಯಂತಿಯಂದೂ ರಜೆ ಘೋಷಿಸಿದ್ದು ಎಲ್ಲರಿಗೂ ತಿಳಿದ ವಿಚಾರವೇ. ಇನ್ನು ಒಕ್ಕಲಿಗರಿಗಾಗಿ ಕೆಂಪೇಗೌಡ ಜಯಂತಿಯಂದೂ, ಮುಸ್ಲೀಮರಿಗಾಗಿ ಟಿಪ್ಪುಸುಲ್ತಾನ್ ಜಯಂತಿಗೂ ಹೀಗೆ ಜಾತಿಗೊಂದು ಜಯಂತಿಗಳಿಗೆ ರಜೆ ಘೋಷಿಸಿ ಸೆಕ್ಯುಲರಿಸಮ್ಮನ್ನು ಎತ್ತಿಹಿಡಿಯಲು ತುದಿಗಾಲಲ್ಲಿ ನಿಂತಿದೆ. ಪ್ರಚಲಿತವೂ, ಪ್ರಚಾರವೂ ಏನೇ ಇದ್ದರೂ ವಾಲ್ಮೀಕಿ ಬೇಡನಾಗಿದ್ದನೇ? ಎಂಬ ಸತ್ಯಾಸತ್ಯತೆಯನ್ನು ಸ್ವಲ್ಪ ವಿಚಾರಿಸೋಣ.
     ಈ ಕಥೆ ಮೊದಲು ದೊರಕುವುದು ಆಧ್ಯಾತ್ಮ ರಾಮಾಯಣದಲ್ಲಿ. ಚಿತ್ರಕೂಟದ ಸಮೀಪ ವಾಲ್ಮೀಕಿ ದರ್ಶನಕ್ಕೆ ಬಂದ ರಾಮನಿಗೆ ವಾಲ್ಮೀಕಿಯೇ ಹೇಳುವುದು:
ಅಹಂ ಪುರಾ ಕಿರಾತೇಷು ಕಿರಾತೈಃ ಸಹ ವರ್ಧಿತಃ |
ಜನ್ಮಮಾತ್ರದ್ವಿಜತ್ವಂ ಮೇ ಶೂದ್ರಾಚಾರರತಃ ಸದಾ ||

ನಾನು ಬೆಳೆದದ್ದೆಲ್ಲ ಕಿರಾತರ ನಡುವೆ, ಶೂದ್ರಾಚಾರದಲ್ಲೇ ನಾನಿದ್ದೆ. ಕೇವಲ ಜನ್ಮದಿಂದ ಮಾತ್ರ ನಾನು ದ್ವಿಜನಾಗಿದ್ದೆ.(ಗಮನಿಸಿ ಇಲ್ಲಿ ಕಿರಾತನೆಂದಿದೆಯೇ ಹೊರತೂ ಬೇಡನೆಂದಲ್ಲ)
ಅನಂತರ ಕಳ್ಳರ ಸಹವಾಸದಿಂದ ಕಳ್ಳನಾದೆ. ಒಮ್ಮೆ ಸಪ್ತರ್ಷಿಗಳ ವಸ್ತುಗಳನ್ನು ಅಪಹರಿಸಲು ಹೊರಟಾಗ ಅವರೆಂದರು "ನೀನು ಯಾವ ಹೆಂಡತಿ ಮಕ್ಕಳಿಗಾಗಿ ಇಷ್ಟು ಪಾಪಕಾರ್ಯಗಳನ್ನು ಮಾಡುತ್ತಿರುವೆಯೋ ಅದರಲ್ಲಿಯೂ ಅವರು ಭಾಗಿಗಳಾಗುವರೋ ಕೇಳಿಕೊಂಡು ಬಾ" ಎಂದು. ನಾನು ಹಾಗೆ ಕೇಳಿದಾಗ ಯಾರೂ ಭಾಗಿಗಳಾಗಲು ಒಪ್ಪಲಿಲ್ಲ. ಅದರಿಂದ ವೈರಾಗ್ಯವುಂಟಾಯಿತು. ಅವರು ಅಲ್ಲಿಯೇ ಜಪಮಾಡುವಂತೆ ’ಮರಾ’ ಎಂಬ ಮಂತ್ರೋಪದೇಶ ಮಾಡಿದರು.
’ಏಕಾಗ್ರಮನಸಾತ್ರೈವ ಮರೇತಿ ಜಪ ಸರ್ವದಾ’
ನಾನು ಹಾಗೆಯೇ ಮಾಡುತ್ತಿರಲು ನನ್ನಮೇಲೆ ಹುತ್ತ ಬೆಳೆಯಿತು. ವರ್ಷಗಳ ನಂತರ ಋಷಿಗಳು ಬಂದು ನನ್ನನ್ನು ಹೊರಬರುವಂತೆ ಕರೆದರು.
ವಲ್ಮೀಕಾನ್ನಿರ್ಗತಶ್ಚಾಹಂ ನೀಹಾರಾದಿವ ಭಾಸ್ಕರಃ |
ಮಾಮಪ್ಯಾಹುರ್ಮುನಿಗಣಾಃ ವಾಲ್ಮೀಕಿಸ್ತ್ವಂ ಮುನೀಶ್ವರಃ ||

ವಲ್ಮೀಕದಿಂದ ಹೊರಬಂದುದರಿಂದ ಮುಂದೆ ಈತ ವಾಲ್ಮೀಕಿಯೆಂದೇ ಹೆಸರಾದ. ಅಲ್ಲದೇ ವರುಣನು(ಪ್ರಚೇತ) ಮಳೆಯನ್ನು ಸುರಿಸಿ ಹುತ್ತವನ್ನು ಕರಿಗಿಸಿದ್ದರಿಂದ ಪ್ರಾಚೇತಸನೆಂಬ ಹೆಸರೂ ಬಂದಿತು. ಇದಕ್ಕೂ ಮೊದಲು ಆತನಿಗೆ ಯಾವ ಹೆಸರಿತ್ತೆಂಬುದು ರಾಮಾಯಣದಲ್ಲೆಲ್ಲೂ ಉಲ್ಲೇಖವಿಲ್ಲ.
     ಇದೇ ಕಥೆಯು ಮುಂದೆ ಆನಂದ ರಾಮಾಯಣದಲ್ಲೂ ಇದೆ. ಇದಕ್ಕೆ ಪುಷ್ಟಿಕೊಡುವ ವಿಚಾರ ಮಹಾಭಾರತದ ಅನುಶಾಸನ ಪರ್ವದಲ್ಲೂ ಕಂಡುಬರುತ್ತದೆ. ಅಲ್ಲಿ ಯುಧಿಷ್ಠಿರನಿಗೆ ವಾಲ್ಮೀಕಿಯು ಹೇಳುತ್ತಾನೆ.
ವಾಲ್ಮೀಕಿಶ್ಚಾಹ ಭಗವಾನ್ ಯುಧಿಷ್ಠಿರಮಿದಂ ವಚಃ |
ವಿವಾದೇ ಸಾಗ್ನಿಮುನಿಭಿರ್ಬ್ರಹ್ಮಘ್ನೋ ವೈ ಭವಾನಿತಿ
ಉಕ್ತಃ ಕ್ಷಣೇನ ಚಾವಿಷ್ಟಸ್ತೇನಾಧರ್ಮೇಣ ಭಾರತ |
ಸೋಽಹಮೀಶಾನಮನಘಂ ಅಮೋಘಂ ಶರಣಂ ಗತಃ ||
ಮುಕ್ತಶ್ಚಾಸ್ಮಿತತೋ ಪಾಪೈಃ

"ಅಗ್ನಿಪೂಜಕರಾದ ಮುನಿಗಳೊಡನೆ ನಾನು ವಿವಾದ ಮಾಡಿದ್ದರಿಂದ ನೀನು ಬ್ರಹ್ಮಘ್ನನೆಂದುಬಿಟ್ಟರು. ಕೂಡಲೇ ನಾನು ಅಧರ್ಮಿಷ್ಟನಾದೆ. ಕಡೆಗೆ ಈಶ್ವರನನ್ನು ಶರಣುಹೋಗಿ ಪಾಪಮುಕ್ತನಾದೆ."
ಅಶ್ವಘೋಷನ ಬುದ್ಧಚರಿತ್ರೆಯಲ್ಲೂ ವಾಲ್ಮೀಕಿಯ ವೃತ್ತಾಂತವಿದೆ. ಅಲ್ಲಿ ವಾಲ್ಮೀಕಿಯನ್ನು ಚ್ಯವನ ಮಹರ್ಷಿಯ ಮಗನೆಂದಿದೆ.
’ವಾಲ್ಮೀಕಿರಾದೌ ಚ ಸಸರ್ಜ ಪದ್ಯಂ ಜಗ್ರಂಥಯನ್ನ ಚ್ಯವನೋ ಮಹರ್ಷಿಃ ’
ಈ ಚ್ಯವನನು ಭೃಗುವಿನ ಮಗ.
’ಭೃಗೋಮಹರ್ಷೇಃ ಪುತ್ರೋಽಭೂತ್ ಚ್ಯವನೋ ನಾಮ ಭಾರ್ಗವಃ’
ಭಾರ್ಗವನಾದ ವಾಲ್ಮೀಕಿಯೇ ರಾಮಚರಿತೆಯನ್ನು ಬರೆದವನೆಂದು ಶಾಂತಿಪರ್ವದಲ್ಲಿ ಸ್ಪಷ್ಟ ಉಲ್ಲೇಖವಿದೆ.
ಶ್ಲೋಕಶ್ಚಾಯಂ ಪುರಾಗೀತೋ ಭಾರ್ಗವೇನ ಮಹಾತ್ಮನಾ |
ಆಖ್ಯಾತೇ ರಾಮಚರಿತೇ ನೃಪಂತಿ ಪ್ರತಿ ಭಾರತ ||

ಸ್ವತಃ ರಾಮಾಯಣ, ಮಹಾಭಾರತಗಳಲ್ಲೇ ವಾಲ್ಮೀಕಿಯು ಬ್ರಾಹ್ಮಣನೆಂದಿದೆಯೇ ಹೊರತೂ ಬೇಡನೆಂದಲ್ಲ. ಆದರೆ ಕೆಲವು ಕಾಲ ಶೂದ್ರಾಚಾರ ನಿರತನಾಗಿದ್ದರೂ ಇರಬಹುದು.
     ರಾಮಾಯಣದ ಹುಟ್ಟಿಗೆ ಕಾರಣವೆನಿಕೊಂಡ ’ಮಾನಿಷಾದ’ ಶ್ಲೋಕವನ್ನೇ ಗಮನಿಸಿ. ಇದು ಛಂದಸ್ಸಿನ ದೃಷ್ಟಿಯಿಂದ ನಿರ್ದುಷ್ಟವೆನಿಸಿದರೂ, ಅರ್ಥದ ದೃಷ್ಟಿಯಿಂದ ಅಪೂರ್ವ ಮಹತ್ವದ್ದೆಂದೇನೂ ಭಾಸವಾಗುವುದಿಲ್ಲ. ಕೆಲ ವ್ಯಾಖ್ಯಾನಕಾರರು ’ಮಾ’ ಎಂದರೆ ಲಕ್ಷ್ಮಿಯೆಂದೂ, ಮಾನಿಷಾದ ಎಂದರೆ ಲಕ್ಷ್ಮಿನಿವಾಸನಾದ ವಿಷ್ಣುವೆಂದೂ ಬಗೆಬಗೆಯ ಅರ್ಥಗಳನ್ನು ತೋರಿಸಿ ರಾಮಾಯಣಕ್ಕೆ ಮಂಗಳಶ್ಲೋಕವೆನಿಸುವ ಔಚಿತ್ಯ ಅದರಲ್ಲುಂಟೆಂದು ವಿವರಣೆ ನೀಡಿದ್ದಾರೆ. ಇದು ಪಂಡಿತರ ವ್ಯಾಖ್ಯಾನಕೌಶಲವೇ ಹೊರತೂ ಮತ್ತೇನೂ ಅಲ್ಲ. ಕ್ರೌಂಚ ಪಕ್ಷಿಯೊಂದನ್ನು ನಿಷಾದನೊಬ್ಬನು ಕೊಂದು ಕೆಡಹುತ್ತಾನೆ. ನೆಲಕ್ಕೆ ಬಿದ್ದು ಹೊರಳಾಡಿ ಸಾಯುತ್ತಿರುವ ಅದನ್ನು ಕಂಡ ವಾಲ್ಮೀಕಿಯ ಬಾಯಿಂದ ಹೊರಬಂದ ಶ್ಲೋಕವಿದು. ಪಕ್ಷಿಯನ್ನು ಕೊಂದದ್ದಕ್ಕಾಗಿ ವಾಲ್ಮೀಕಿ ನಿಷಾಧನನ್ನು ಶಪಿಸುತ್ತಾನೆ. ಬೇಟೆಯಾಡುವುದು ಬೇಡನ ಸಹಜ ಧರ್ಮ. ವಾಲ್ಮೀಕಿ ಮೂಲತಃ ಬೇಡನೇ ಆಗಿದ್ದಲ್ಲಿ ಹಕ್ಕಿಯನ್ನು ಕೊಂದವನೊಬ್ಬನನ್ನು ಹೀಗೆ ಶಪಿಸಲು ಸಾಧ್ಯವೇ ಇರುತ್ತಿರಲಿಲ್ಲ.
      ರಾಜಸ್ಥಾನ, ಪಂಜಾಬ್, ಗುಜರಾತಿನಲ್ಲಿ ಬಹುಸಂಖ್ಯೆಯಲ್ಲಿರುವ ಈಗಿನ ವಾಲ್ಮೀಕಿ ಸಮುದಾಯದವರಿಗೆ ಆ ಹೆಸರು ಬ್ರಿಟಿಷರ ಕಾಲದಲ್ಲಿ ಹೇಗೆ ಬಂತೆಂಬ ವಿವರಣೆಗೆ ಪಂಡಿತ ಅಮಿತ್‌ಚಂದ ಶರ್ಮಾರ ’’ಬಾಲ್ಮೀಕಿ ಪ್ರಕಾಶ್’ ಎಂಬ ಹಿಂದಿ ಹೊತ್ತಿಗೆಯನ್ನು ಗಮನಿಸಿ.

Wednesday, January 1, 2014

ಸ್ವಾಮಿಯೇ ಶರಣಂ ಅಯ್ಯಪ್ಪ: ಒಂದಿಷ್ಟು ಇತಿಹಾಸ, ಇನ್ನೊಂದಿಷ್ಟು ಪುರಾಣ

     
     ಮಕರ ಸಂಕ್ರಮಣ ಹತ್ತಿರ ಬರುತಿದೆ. ಅಯ್ಯಪ್ಪ ಭಕ್ತರೆಲ್ಲ ೪೧ ದಿನದ ವ್ರತದ ನಂತರ ಇರುಮುಡಿ ಹೊತ್ತು ಶಬರಿಮಲೈನತ್ತ ತೆರಳಿದ್ದಾರೆ. ಕಠಿಣ ವ್ರತವನ್ನು ಪಾಲಿಸಿ, ಕಾಡುಮೇಡುಗಳಲ್ಲಿ ಕಲ್ಲುಮುಳ್ಳುಗಳ ಹಾದಿಯಲ್ಲಿ ಬರಿಗಾಲಲ್ಲಿ ನಡೆಯುವ ಕಷ್ಟದ ಮಧ್ಯದಲ್ಲೂ ವರ್ಷದಿಂದ ವರ್ಷಕ್ಕೆ ಶಬರಿಮಲೆ ಆಸ್ತಿಕರ ಬಹುದೊಡ್ಡ ಶೃದ್ಧಾಕೇಂದ್ರವಾಗಿ ಬೆಳೆಯುತ್ತಲೇ ಇದೆ. ತ್ಯಾಗ, ಪ್ರೇಮಗಳ ಸಾಕಾರಮೂರ್ತಿಯಾಗಿ ಅಯ್ಯಪ್ಪನು ವರ್ಷಾನುವರ್ಷಗಳಿಂದ ಭಕ್ತರನ್ನುದ್ಧರಿಸುತ್ತಲೇ ಇದ್ದಾನೆ. ಹಾಗಾದರೆ ಶಬರಿಮಲೆ ಮತ್ತು ಅಯ್ಯಪ್ಪನ ನೈಜ ಹಿನ್ನೆಲೆಯೇನು?
    ಅಯ್ಯಪ್ಪನಿಗೆ ಎರಡು ಮುಖಗಳಿವೆ. ಮೊದಲನೇಯದು ಪೌರಾಣಿಕ, ಇನ್ನೊಂದು ಐತಿಹಾಸಿಕ. ಪೌರಾಣಿಕ ಕಥೆ ನಿಮಗೆಲ್ಲ ತಿಳಿದದ್ದೇ. ಮಹಿಷಾಸುರನ ತಂಗಿಯಾದ ಮಹಿಷಿಯು ಹರಿಹರಪುತ್ರರಿಂದಲ್ಲದೇ ಬೇರಾರಿಂದಲೂ ಸಾವುಬರದಂತೆ ಬ್ರಹ್ಮನಿಂದ ವರಪಡೆದು ಲೋಕಕಂಟಕಳಾಗಿ ಮೆರೆಯುತ್ತಾಳೆ. ಕೆಲ ಐತಿಹ್ಯಗಳ ಪ್ರಕಾರ ಭಸ್ಮಾಸುರನ ಸಂಹಾರಕ್ಕಾಗಿ ಮೋಹಿನಿ ಅವತಾರ ತಳೆಯುವ ವಿಷ್ಣುವನ್ನು ಶಿವನು ಮೋಹಿಸುತ್ತಾನೆ. ಇವರೀರ್ವರ ಶಕ್ತಿಯಿಂದ  ಹರಿಹರಸುತನಾಗಿ ಜನಿಸಿದ ಮಗುವೇ ಅಯ್ಯಪ್ಪ. ಮಕ್ಕಳಿಲ್ಲದ ಪಾಂಡ್ಯರಾಜ ಪಂಪಾತೀರದಲ್ಲಿದ್ದ ಈ ಮಗುವನ್ನು ನೋಡಿ ತನ್ನ ಮಗನಂತೆ ಸಾಕುತ್ತಾನೆ. ಹುಟ್ಟುವಾಗಲೇ ಕೊರಳಲ್ಲಿ ಮಣಿಯಿದ್ದುದರಿಂದ ಇವನಿಗೆ ಮಣಿಕಂಠನೆಂದು ನಾಮಕರಣ ಮಾಡಲಾಯ್ತು. ಮಾತುಬಾರದ, ಕಣ್ಣುಕಾಣದ ಗುರುಪುತ್ರನನ್ನು ಅನುಗ್ರಹಿಸುವುದು, ರಾಣಿಯ ಹೊಟ್ಟೆ ನೋವು ನಿವಾರಿಸಲು ಹುಲಿಯ ಹಾಲನ್ನು ತರಲು ಕಾಡಿಗೆ ತೆರಳುವುದು, ದೇವೇಂದ್ರನನ್ನು ಬ೦ಧಿಯನ್ನಾಗಿಸಿದ್ದ ಮಹಿಷಿಯನ್ನು ಕೊಲ್ಲುವುದು, ಶಬರಿಮಲೆಯ ಕಾಡಿನಲ್ಲಿ ನೆಲೆನಿಲ್ಲುವುದೇ ಮುಂತಾದ ಕಥೆಗಳನ್ನೆಲ್ಲ ನೀವು ತಿಳಿದೇ ಇರುತ್ತೀರಿ. ಈಗ ಅದಕ್ಕಿಂತ ವಿಭಿನ್ನವಾದ, ನೀವು ಕೇಳದ, ಯಾವ ಐತಿಹಾಸಿಕ ಚಿತ್ರಕ್ಕೂ ಕಡಿಮೆಯಿಲ್ಲದ ಅತಿರೋಚಕ ಕಥೆಯುಳ್ಳ ಅಯ್ಯಪ್ಪನ ಇತಿಹಾಸವನ್ನೊಮ್ಮೆ ನೋಡೋಣ.
ತಮಿಳ್ನಾಡಿನ ಪುದುಕೊಟ್ಟೈನ ಸಮೀಪದ ಶಂಗಂ ಪೂರ್ವಕಾಲದ ಶಾಸ್ತನ ವಿಗ್ರಹ
      
ಪಂಡಾಲಂ ಅರಮನೆ
     ಮುಸಲ್ಮಾನ ದಾಳಿಕಾರರು ಮಧುರೈಯನ್ನಾಕ್ರಮಿಸಿದ್ದ ಕಥೆಯನ್ನು ಹಿಂದಿನ ಲೇಖನದಲ್ಲಿ ಬರೆದಿದ್ದೆ. ಈ ದಾಳಿಯನ್ನು ತಾಳಲಾಗದೇ ಮಧುರೈನಿಂದ ಕೇರಳಕ್ಕೆ ವಲಸೆಬಂದ ಪಾಂಡ್ಯರಾಜಮನೆತನವೊಂದು ತಿರುವಾಂಕೂರು ಅರಸರ ನೆರವಿನೊಂದಿಗೆ ಸುಮಾರು ಕ್ರಿ.ಶ 1194-1202ರ ನಡುವೆ ಪಂಡಾಲಂ ರಾಜ್ಯವನ್ನು ಸ್ಥಾಪಿಸಿತು. ಕೇರಳ ಕ್ಷತ್ರಿಯರು ಸಾಧಾರಣವಾಗಿ ವಿಶ್ವಾಮಿತ್ರ ಗೋತ್ರದವರಾದರೆ ಪಂಡಾಲಂನವರು ತಮಿಳ್ನಾಡು ಮೂಲದ ಭಾರ್ಗವ ಗೋತ್ರದವರು. ಕೇರಳದಲ್ಲೂ, ತಮಿಳ್ನಾಡಿನಲ್ಲೂ ಶಂಗಂನ ಪೂರ್ವ ಕಾಲದಿಂದಲೂ ಹರಿಹರ ಪುತ್ರನೆನ್ನಲಾಗುವ ಅಯ್ಯನಾರ್ ಶಾಸ್ತನ ಆರಾಧನೆ ಜಾರಿಯಲ್ಲಿದೆ. ಸಹಜವಾಗಿಯೇ ಶಬರಿಮಲೆಯ ಕಾಡುಗಳಲ್ಲಿದ್ದ ಪುರಾತನ ಕಾಲದಿಂದಲೂ ಸುತ್ತಲಿನ ಜನರಿಂದ, ಆಳರಸರಿಂದ ಪೂಜಿಸಲ್ಪಡುತ್ತಿದ್ದ ಶಾಸ್ತನನ್ನೇ ತನ್ನ ಆರಾಧ್ಯ ದೈವವನ್ನಾಗಿ ಪಂಡಾಲಂ ರಾಜಮನೆತನ ಸ್ವೀಕರಿಸಿತು. ಮುಸ್ಲೀಮರಿಂದ 
ದೇಶಭೃಷ್ಟರಾದರೂ ಪಂಡಾಲಂ ಮತ್ತು ಸಮೀಪದ ಕಡಕ್ಕಡದಲ್ಲಿ ಹಲವಾರು ಮಸೀದಿಗಳನ್ನೂ, ಚರ್ಚುಗಳನ್ನೂ, ಅವಲೋಕಿತೇಶ್ವರನ ಬೌದ್ಧವಿಹಾರಗಳನ್ನೂ ನಿರ್ಮಿಸಿದ್ದ ಪಂಡಾಲಂ ರಾಜರು ಮೊದಲಿನಿಂದಲೂ ಕೇರಳದ ಆತ್ಮವಾಗಿದ್ದ ಪರಮತ ಸಹಿಷ್ಣುತೆಯನ್ನು ಎತ್ತಿ ಹಿಡಿದವರು. ಕೆಲಕಾಲದ ನಂತರ ಪಂಡಾಲಂ ರಾಜ್ಯಕ್ಕೆ ’ಉದಯನ’ನೆಂಬ ದರೋಡೆಕೋರನ ಕಾಟ ಶುರುವಾಯ್ತು. ಕರಿಮಲ, ತಲಪರ, ಇಂಚಿಪ್ಪರದ ದಟ್ಟಕಾಡುಗಳಲ್ಲಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡು ಸುತ್ತಲಿನ ರಾಜ್ಯಗಳನ್ನು ದೋಚುವುದೇ ಆತನ ಮುಖ್ಯ ಕಸುಬಾಗಿತ್ತು. ಕೇರಳ-ತಮಿಳ್ನಾಡುಗಳೆರಡನ್ನೂ ಬೆಸೆಯುತ್ತಿದ್ದ ಶಬರಿಮಲೆ ಆಕಾಲದ ಯಾತ್ರಿಗಳ ಮತ್ತು ವ್ಯಾಪಾರಿಗಳ ಪ್ರಮುಖ ಮಾರ್ಗ. ಇದೇ ದಾರಿಯಲ್ಲಿದ್ದು ವ್ಯಾಪಾರಿಗಳನ್ನೂ ಸುತ್ತಲಿನ ಗ್ರಾಮಗಳನ್ನೂ ದೋಚುತ್ತಿದ್ದ ಉದಯನ ಮೂಲತಃ ಬೌದ್ಧನಾಗಿದ್ದು ಶಬರಿಮಲೆಯಲ್ಲಿದ್ದ ಪುರಾತನ ಶಾಸ್ತನ ದೇವಾಲಯವನ್ನು ಧ್ವಂಸಗೊಳಿಸಿ ಮೂರ್ತಿಯನ್ನು ನಾಶಮಾಡಿದನಂತೆ. ಅರಮನೆಯ ಸಮೀಪದಲ್ಲಿದ್ದ ದೇವಾಲಯಗಳನ್ನು ದೋಚಿ ಅರಮನೆಯಲ್ಲಿದ್ದ ಪಾಂಡ್ಯರಾಜನ ತಂಗಿಯನ್ನು ಹೊತ್ತೊಯ್ದ. ತನ್ನನ್ನು ಮದುವೆಯಾಗಲು ರಾಜಕುಮಾರಿಗೆ ೨೧ ದಿನಗಳ ಗಡುವು ವಿಧಿಸಿದ ಉದಯನ ಆಕೆಯನ್ನು ಸೆರೆಯಲ್ಲಿಟ್ಟ. ರಾಜಕುಮಾರಿಯ ಕನಸಲ್ಲಿ ಕಾಣಿಸಿಕೊಂಡ ಧರ್ಮಶಾಸ್ತನು ಶೀಘ್ರದಲ್ಲೇ ಸೆರೆವಾಸದಿಂದ ಬಿಡುಗಡೆಯಾಗುವುದೆಂದೂ, ತನ್ನ ಪರಮಭಕ್ತರಾದ ಪಂಡಾಲಂ ಮನೆತನವನ್ನು ಕಾಪಾಡಲು ತಾನೇ ಸ್ವತಃ ಅವಳ ಮಗನಾಗಿ ಜನಿಸುವೆನೆಂದೂ ಭರವಸೆಯಿತ್ತನಂತೆ. ಅದೇ ಸಮಯಕ್ಕೆ ಆಕೆಯ ಬಹುವಾಗಿ ಪ್ರೀತಿಸುತ್ತಿದ್ದ ರಾಜ್ಯದ ಸೇನಾಧಿಪತಿ ಕಾಂಪಿಲ್ಲಿಲ್ ಪಿಳ್ಳೈನ ಮಗ ಜಯಂತನು ರಾತ್ರಿ ಸಮಯದಲ್ಲಿ ಉದಯನನ ಶಿಬಿರದ ಮೇಲೆ ದಾಳಿ ನಡೆಸಿ ರಾಜಕುಮಾರಿಯನ್ನು ಸೆರೆಯಿಂದ ಬಿಡಿಸಿ ಕರೆದೊಯ್ದ. ತನ್ನ ಮರಳುವಿಕೆಯಿಂದ ರಾಜಮನೆತನ ಮರ್ಯಾದೆ ಹಾಳಾಗಬಹುದೆಂಬ ಅಂಜಿಕೆಯಿಂದ ಆಕೆ ಅರಮನೆಗೆ ಹೋಗಲೊಪ್ಪದೇ ಕಾಡಿನಲ್ಲೇ ಉಳಿಯುವುದಾಗಿ ತಿಳಿಸಿದಳು. ರಾಜಕುಮಾರಿಯನ್ನು ವರಿಸಿದ ಜಯಂತನು ಆಕೆಯೊಡನೆ ಪೊನ್ನಂಬಲದ ಕಾಡುಗಳಲ್ಲಿ ವಾಸಮಾಡತೊಡಗಿದ. ಉದಯನನ ಕೈಯಲ್ಲಿ ಇಬ್ಬರೂ ಮೃತಪಟ್ಟರೆಂದು ಅವರಿಬ್ಬರನ್ನೂ ರಾಜಮನೆತನದವರು ಮರೆತರು. ಇವರೀರ್ವರ ಮಗನೇ ಆರ್ಯನ್ ಅಥವಾ ಅಯ್ಯನ್. ಆರ್ಯನ್ ಎಂಬುದು ಶಾಸ್ತನ ಹೆಸರುಗಳಲ್ಲೊಂದು ಕೂಡ ಹೌದು. ಅಯ್ಯನನ ತಂದೆಯೆನ್ನಲಾಗುವ ಜಯಂತನು ಉದಯನನಿಂದ ಕೊಲ್ಲಲ್ಪಟ್ಟ ಶಬರಿಮಲೆಯ ಅರ್ಚಕರ ಮಗನಾಗಿದ್ದನೆಂಬ ಕಥೆಯೂ ಇದೆ. ಆದರೆ ಆತ ’ವೆಲ್ಲಲಾರ್ ಕುಲಜಾತನ್ ಅಯ್ಯನ್ ಅಯ್ಯಪ್ಪನ್’ ಎಂದು ಭಕ್ತರಿಂದ ಕರೆಯಲ್ಪಡುವುದೂ, ’ಇಳವರ್ಸೆವಂಪತ್ತು’ ಮತ್ತು ನಾಲಂಕಲ್ ಕೃಷ್ಣ ಪಿಳ್ಳೈರ ’ಮಹಾಕ್ಷೇತ್ರಂಗಳ್ಕುಮುಂಬಿಲ್’ಗಳೂ ಆತ ಬ್ರಾಹ್ಮಣನಾಗಿರದೇ ಕೊಟ್ಟಾಯಮ್ ಸಮೀಪದ ಎರುಮೇಲಿಯ ವೆಲ್ಲಾಲ ಸಮುದಾಯದವನೆಂಬುದನ್ನೇ ಧೃಡೀಕರಿಸುತ್ತವೆ. ಕೆಲ ವರ್ಷಗಳ ನಂತರ ಕುಲಪೊನ್ನಂಬಲಮೇಡುವಿಗೆ ಬೇಟೆಗೆ ಬಂದಿದ್ದ ಪಂಡಾಲಂ ರಾಜ ಕಾಡುಪ್ರಾಣಿಗಳೊಡನೆ ಆಡುತ್ತಿದ್ದ ಅಯ್ಯನನ್ನು ನೋಡಿ ಅವನ ಹಿನ್ನೆಲೆಯನ್ನು ತಿಳಿದು ತನ್ನ ರಾಜ್ಯಕ್ಕೆ ಕರೆದೊಯ್ಯುತ್ತಾನೆ. ಶಾಸ್ತನ ಅನುಗ್ರಹದಿಂದ ಹುಟ್ಟಿನಿಂದಲೇ ಅತಿಮಾನುಶ ಶಕ್ತಿಗಳನ್ನು ಹೊಂದಿದ್ದ ಅಯ್ಯಪ್ಪ ತನ್ನ ಹದಿನಾಲ್ಕನೇ ವಯಸ್ಸಿನಲ್ಲೇ ಉದಯನನ್ನು ಸೋಲಿಸಿ, ಶಾಸ್ತನ ದೇವಸ್ಥಾನವನ್ನು ಮರುನಿರ್ಮಿಸುವ ಶಪಥಮಾಡಿ ಅದಕ್ಕಾಗಿ ದೊಡ್ಡ ಸೈನ್ಯವೊಂದನ್ನು ಕಟ್ಟಲಾರಂಭಿಸುತ್ತಾನೆ. ಅಯ್ಯಪ್ಪನ ತಂದೆ ಆಲಂಗಾಡ್ ರಾಜ್ಯಕ್ಕೆ ಸೇರಿದ ಮುಪ್ಪತ್ತಡಮ್‍ನ ನಾಯರ್ ಮನೆತನಕ್ಕೆ ಸೇರಿದವನು. ಸ್ವತಃ ಅಯ್ಯಪ್ಪನು ಕಳರಿ ಸೇರಿದಂತೆ ಶಸ್ತ್ರವಿದ್ಯೆಗಳನ್ನೆಲ್ಲ ಕಲಿತದ್ದಿಲ್ಲೇ. ಪಾಂಡ್ಯರಾಜನ ತಾಯಿ ಅಂಬಲಪ್ಪುಳ ರಾಜಮನೆತನಕ್ಕೆ ಸೇರಿದವಳು. ಪಂಡಾಲಂನ ಜೊತೆ ಈ ಎರಡೂ ರಾಜ್ಯದ ಸೈನ್ಯವನ್ನೊಟ್ಟುಗೂಡಿಸಿ, ಅರಬ್ಬಿನ ಕಡಲ್ಗಳ್ಳ(pirate) ವಾವರನನ್ನು ಯುದ್ದದಲ್ಲಿ ಸೋಲಿಸಿ ಆತನ ಸ್ನೇಹ ಸಂಪಾದಿಸಿ, ಪಾಂಡ್ಯರಾಜರಿಗೆ ನಿಷ್ಟನಾಗಿದ್ದ ಕೊಚ್ಚು ಕಡುತ, ತಳಪರದ ವಿಲ್ಲನ್ ಮತ್ತು ಮಲ್ಲನ್ ಎಂಬ ಯುದ್ಧವೀರರೊಡನೆ ಉದಯನನ ವಿರುದ್ದ ಯುದ್ಧ ಸಾರುತ್ತಾನೆ. ಕರಿಮಲೈ ಕೊಟ್ಟದ ಕರಿಕಾನನದಲ್ಲಿ ನಡೆದ ಭೀಕರ ಯುದ್ಧದಲ್ಲಿ ಉದಯನನ ಪಡೆಯನ್ನು ಅಯ್ಯಪ್ಪನ ಸೈನ್ಯ ನಾಮಾವಶೇಷಗೊಳಿಸಿತು. ಅಯ್ಯಪ್ಪನ ಬಲಗೈ ಬಂಟನಾಗಿದ್ದ ಕೊಚ್ಚು ಕಡುತ ಉದಯನನನ್ನು ತರಿದು ಬಿಸುಡುತ್ತಾನೆ. ಯುದ್ಧದ ನಂತರ ಎರುಮೇಲಿಯ ಶರಂಗುಟ್ಟಿಯಲ್ಲಿ ತನ್ನ ಶಸ್ತ್ರಾಸ್ತ್ರಗಳನ್ನೆಲ್ಲ ಇಟ್ಟು ಸೀದಾ ಶಬರಿಮಲೈಗೆ ತೆರಳಿದ ಅಯ್ಯಪ್ಪ ಅಲ್ಲಿ ಶಾಸ್ತನ ದೇವಾಲಯವನ್ನು ಪುನರ್ನಿಮಿಸುವಂತೆ ತನ್ನ ಸಹಚರರಿಗೆ ತಿಳಿಸಿ ಮಣಿಮಂಟಪದಲ್ಲಿ ತಪಸ್ಸಿಗೆ ತೊಡಗುತ್ತಾನೆ. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ಶುಭದಿನವಾದ ಮಕರ ಸಂಕ್ರಾಂತಿಯಂದು ಸ್ವತಃ ತಾನೇ ಶಾಸ್ತನ ಮೂರ್ತಿಯನ್ನು ಹೊಸದಾಗಿ ನಿರ್ಮಿಸಿದ ಶಬರಿಮಲೆಯ ದೇವಾಲಯದಲ್ಲಿ ಪ್ರತಿಷ್ಟಾಪಿಸುತ್ತಾನೆ. ಅಲ್ಲಿಂದ ಒಬ್ಬನೇ ಪೊನ್ನಂಬಲಮೇಡುವಿನ ಕಾಡಿಗೆ ತೆರಳಿದ ಅಯ್ಯಪ್ಪ ಜ್ಯೋತಿರೂಪದಲ್ಲಿ ಕೊನೆಯದಾಗಿ ದರ್ಶನ ನೀಡಿದನೆಂದು ಹೇಳಲಾಗುತ್ತದೆ. (ಇದರ ಪ್ರತೀಕವೇ ಈಗ ಬೆಟ್ಟದಲ್ಲಿ ಕಾಣುವ ಮಕರಜ್ಯೋತಿ, ಮಕರವಿಳಕ್ಕು ಎಂಬುದು ಪೂಜಾಕಾಲದಲ್ಲಿ ಆಕಾಶದಲ್ಲಿ ಕಾಣಿಸಿಕೊಳ್ಳುವ ನಕ್ಷತ್ರ. ಮಕರಜ್ಯೋತಿ ಮಾನವನಿರ್ಮಿತವೆಂದು ಬೊಬ್ಬೆಹೊಡೆಯುವವರಿಗೆ ಜ್ಯೋತಿ ಮತ್ತು ವಿಳಕ್ಕುಗಳ ನಡುವಿನ ವ್ಯತ್ಯಾಸ ಗೊತ್ತಿಲ್ಲವೆಂದೇ ಅರ್ಥ). ಅದರಾಚೆ ಅಯ್ಯಪ್ಪನನ್ನು ಕಂಡವರಿಲ್ಲ. ಪಂಡಾಲಂನ ಜನರಿಗೆ ಬಾಲಕ ಅಯ್ಯಪ್ಪನು ಸ್ವತಃ ಧರ್ಮಶಾಸ್ತನ ಅವತಾರವೆಂದು ಮನವರಿಕೆಯಾಗುತ್ತದೆ. ಅಲ್ಲಿಂದಾಚೆ ಮಲೆಯಲ್ಲಿ ಶಾಸ್ತನ ರೂಪದಲ್ಲಿ ಸ್ವತಃ ಅಯ್ಯಪ್ಪನೇ ಪೂಜಿಸಲ್ಪಡುತ್ತಾನೆ. ಧರ್ಮಶಾಸ್ತನೆಂದರೆ ಧರ್ಮವನ್ನು ಶಾಸಿಸುವನೆಂದು. ನಾವಿಂದು ಅಯ್ಯಪ್ಪನದೆಂದು ಕೇಳುವ ಕಥೆಯೆಲ್ಲ ಅವನ ಜೊತೆ ಸಮೀಕರಿಸಲ್ಪಟ್ಟ ಹರಿಹರ ಪುತ್ರ ಧರ್ಮಶಾಸ್ತನದ್ದು. ಯಜುರ್ವೇದದಲ್ಲೂ ’ಶಾಸ್ತಃ ಅಧಿಪತಿರ್ ವೋ ಅಸ್ತು’ ಎಂದು ಶಾಸ್ತನನ್ನು ಸ್ತುತಿಸಲಾಗಿದೆ. ಕಾಲಾಗ್ನಿ ರುದ್ರೋಪನಿಷತ್, ಮೈತ್ರೇಯಿ ಉಪನಿಷತ್, ತೈತ್ತರೀಯ ಅರಣ್ಯಕದಲ್ಲೂ ಶಾಸ್ತನ ಕುರಿತಾದ ಶ್ಲೋಕಗಳಿವೆ. ಶಾಸ್ತನೆಂಬ ಹೆಸರು ಕೇವಲ ಭಾರತದ ಮಾತ್ರವಲ್ಲ ಪ್ರಾಚೀನ ಗ್ರೀಕಿನ ಪುರಾಣಗಳಲ್ಲೂ ಪ್ರಸ್ತಾಪಿಸಲ್ಪಟ್ಟಿದೆ. ಇಜಿಪ್ಟಿನ ಕೆಂಪು ಸಮುದ್ರದ ಹತ್ತಿರ ಕಜಿರ್-ಅಲ್-ಖದಿಮ್ ಎಂಬ ಸ್ಥಳದಲ್ಲಿ ದೊರಕಿದ  ಕ್ರಿ.ಪೂ ೨ನೇ ಶತಮಾನದ ಪ್ಯಾಪಿರಸ್ ದಾಖಲೆಗಳಲ್ಲೂ ಶಾಸ್ತನ ಉಲ್ಲೇಖವಿದೆ. ತಮಿಳಿನ ಪ್ರಾಚೀನ ಶೈವ ಭಕ್ತಿ ಸಾಹಿತ್ಯವಾದ ತಿರುಮುರೈನ ತೇವಾರಮ್‌ನಲ್ಲಿ ಶಾಸ್ತನನ್ನು ಶಿವನ ಮಗನೆನ್ನಲಾಗಿದೆ("ಶಾಸ್ತಾನೈ ಮಗನೈ ವೈದಾರ್). ನನ್ನ ಅನುಮಾನದಂತೆ ತುಳುನಾಡಿನಲ್ಲಿ ಸುಬ್ರಹ್ಮಣ್ಯ, ಮಲಯಾಳದೇಶದ ಶಾಸ್ತ ಮತ್ತು ತಮಿಳಿನ ಬ್ರಹ್ಮಶಾಸ್ತನೆಂದು ಕರೆಯಲ್ಪಡುವ ಮುರುಗ ಒಂದೇ ಆಗಿರಬಹುದೇ?(ನನ್ನ ಅನುಮಾನವಷ್ಟೇ!). ಭಗವದ್ಗೀತೆಯಂತೆಯೇ ಬ್ರಹ್ಮಾಂಡಪುರಾಣದ ಒಂದು ಭಾಗವಾದ
    
ಕಂಚಿಯಲ್ಲಿರುವ ಶಾಸ್ತನ ಮೂರ್ತಿ
’ಭೂತನಾಥೋಪಾಖ್ಯಾನ’ವು ಶಾಸ್ತನು ರಾಜಶೇಖರ ಪಾಂಡ್ಯನಿಗೆ ನೀಡಿದ ಉಪದೇಶಗಳ ಸಂಗ್ರಹ. ಇನ್ನು ಶಬರಿಮಲೆಯು ಬೌದ್ಧ ದೇವಾಲಯವೆಂದೂ, ಶಾಸ್ತನೆನ್ನುವುವುದು ಬುದ್ಧನ ಹೆಸರೆಂದೂ ವಾದ ಮಾಡುವ ಅಂಬೇಡ್ಕರ್‌ವಾದಿಗಳೂ ಇದ್ದಾರೆ(http://www.ambedkar.org/Tirupati/). ಬುದ್ಧನಿಗೆ ಶಾಸ್ತನೆಂಬ ಹೆಸರಿರುವ ಉಲ್ಲೇಖ ದೊರಕುವುದು ಅಮರಕೋಶದ मुनींद्रः श्रीधनः शास्ता मुनिः शाक्यमुनिस्तु यः ಎಂಬ ಶ್ಲೋಕದಲ್ಲಿ. ಹಾಗೆ ನೋಡಿದರೆ ಅದನ್ನು ರಚಿಸಿದ ಅಮರಸಿಂಹ ಮೂಲತಃ ಜೈನ. ಇದೇ ಅಮರಕೋಶವು ಭಗವಾನ್ ಬುದ್ಧ ಮತ್ತು ಗೌತಮ ಬುದ್ಧರಿಬ್ಬರೂ ಬೇರೆಬೇರೆ, ಮೂಲ ಬುದ್ಧನು ವಿಷ್ಣುವಿನ ಅವತಾರವಾದರೆ ಗೌತಮನೊಬ್ಬ ಸಾಧಾರಣ ಮನುಷ್ಯನೆನ್ನುತ್ತದೆ. ಜೊತೆಗೆ ’ತಥಾಗಥ’ನೆನ್ನುವುದು ಬುದ್ಧನದ್ದಲ್ಲದೇ ಮಹಾವೀರನ ಹೆಸರೆನ್ನುತ್ತದೆ. ಹಾಗಾದರೆ ಬುದ್ಧ ಮಹಾವೀರರಿಬ್ಬರೂ ಒಬ್ಬರೇ ಆಥವಾ ಬುದ್ಧನೆನ್ನಲಾಗುವ ಎಷ್ಟು ವ್ಯಕ್ತಿಗಳಿದ್ದರು?
ವಾವರ ಮತ್ತು ಅಯ್ಯಪ್ಪ
  ಶಬರಿಮಲೈನಲ್ಲಿ ಅಯ್ಯಪ್ಪನ ಜೊತೆ ವಾವರಸ್ವಾಮಿಯಾಗಿ ಪೂಜಿಸಲ್ಪಡುವವನು ಆತನ ಸಹಚರ ಮುಸ್ಲಿಂ ಯೋಧ ವಾವರ. ಈ ವಾವರ ಯಾರೆಂಬ ಬಗ್ಗೆ ಬಹಳಷ್ಟು ಕಥೆಗಳೂ ಜೊತೆಗೊಂದಿಷ್ಟು ಗೊಂದಲಗಳೂ ಇವೆ. ಈತನ ೧೫ನೇ ಪೀಳಿಗೆಯವರೆನ್ನಲಾಗುವ ವೆಟ್ಟಿಪ್ಲಕ್ಕಲ್ ಕುಟುಂಬದವರು ಅಲಪ್ಪುಳದ ಹತ್ತಿರ ವಾಸಿಸುತ್ತಿದ್ದಾರೆ. ಶಬರಿಮಲೆಯಲ್ಲಿರುವ ವಾವರನ ದೇವಾಲಯದ ಪೂಜೆಯ ಉಸ್ತುವಾರಿ ಇವರದ್ದೇ. ಒಂದು ಕಥೆಯ ಪ್ರಕಾರ ಪಂಡಾಲಂನ ಮೇಲೆ ದಾಳಿ ಮಾಡಿದ ವಾವರನನ್ನು ಅಯ್ಯಪ್ಪನು ಸೋಲಿಸುತ್ತಾನೆ. ಈ ಘಟನೆಯ ನಂತರ ಅವರಿಬ್ಬರೂ ಒಳ್ಳೆಯ ಗೆಳೆಯರಾಗುತ್ತಾರೆ. ಈತ ಕೇರಳದಲ್ಲಿ ಇಸ್ಲಾಮಿನ ಪ್ರಸಾರಕ್ಕಾಗಿ ಬಂದಿದ ಹಜರತ್ ವಾವರ್ ಬಾಬಾ ಎಂಬ ಸಂತನಾಗಿದ್ದನೆಂಬ ವಾದವೂ ಇದೆ. ಆದರೆ ಹೆಚ್ಚಿನ ದಾಖಲೆಗಳು ಮತ್ತು ಜನಪದ ಕಥೆಗಳು ಹೇಳುವಂತೆ ಈತನೊಬ್ಬ ಅರೇಬಿಯಾ ಮೂಲದ ಕಡಲುಗಳ್ಳ. ಕೇರಳಕ್ಕೂ ಅರಬ್ಬಿಗೂ ಮಧ್ಯ ಸಾವಿರಾರು ವರ್ಷದಿಂದ ಜಲಮಾರ್ಗದ ಮೂಲಕ ವ್ಯಾಪಾರ ವ್ಯವಹಾರದ ನಂಟಿತ್ತು. ಇಸ್ಲಾಮ್ ಭಾರತದಲ್ಲಿ ಮೊದಲು ಕಾಲಿಟ್ಟಿದ್ದೇ ಕೇರಳದ ಮಲಬಾರಿನಲ್ಲಿ. ಇಲ್ಲಿನ ಕಾಳುಮೆಣಸಿನ ರುಚಿಯ ಬೆನ್ನತ್ತಿ ಬಂದಿದ್ದ ವಾಸ್ಕೋಡಗಾಮನೂ ಒಬ್ಬ ಅಪ್ಪಟ ಕಡಲ್ಗಳ್ಳನೇ. ಕಡಲ್ಗಳ್ಳನಾಗಿ ಕೊಳ್ಳೆಹೊಡೆಯಲು ಕೇರಳದ ಕಾಯಂಕುಳಂನ ತೀರಕ್ಕೆ ವಾವರ ಬಂದಿದ್ದನಂತೆ. ಈತ ಅರಬಿನ ವ್ಯಾಪಾರಿಯಾಗಿದ್ದನೆಂಬ ವಾದಕ್ಕೆ ಪುಷ್ಟಿಕೊಡುವುದೇ ಇಂದಿಗೂ ಶಬರಿಮಲೆಗೆ ಇರುಮುಡಿ ಕಟ್ಟುವವರು ವಾವರನಿಗಾಗಿ ಕಾಳುಮೆಣಸನ್ನು ತೆಗೆದುಕೊಂಡು ಹೋಗಿ ಸಮರ್ಪಿಸುವುದು. ಕಾಯಂಕುಳಂನ ರಾಜನ ಕೋರಿಕೆಯ ಮೇರೆಗೆ ಅಯ್ಯಪ್ಪನು ವಾವರನನ್ನು ಯುದ್ಧದಲ್ಲಿ ಸೋಲಿಸಿ ತನ್ನ ಅನುಯಾಯಿಯಾಗಿಸಿಕೊಳ್ಳುತ್ತಾನೆ.  ಮುಂದೆ ಅಯ್ಯಪ್ಪ ವಾವರರಿಬ್ಬರೂ ಗಾಢ ಸ್ನೇಹಿತರಾದರು. ವಾವರನಿಗೊಂದು ದೇವಾಲಯವನ್ನು ನಿರ್ಮಿಸುವಂತೆಯೂ ತನ್ನನ್ನು ಪೂಜಿಸುವ ಮೊದಲು ವಾವರನನ್ನು ದರ್ಶಿಸುವಂತೆಯೂ ಅಯ್ಯಪ್ಪ ತನ್ನ ಭಕ್ತರಿಗೆ ತಿಳಿಸಿದನೆಂದು ನಂಬಿಕೆ. ಇದೇ ಕಾರಣಕ್ಕೆ ಅಯ್ಯಪ್ಪನ ದೇವಾಲಯಕ್ಕೆ ತೆರಳುವ ಮುನ್ನ ಭಕ್ತರು ಪಕ್ಕದಲ್ಲಿರುವ ವಾವರನ ಮಸೀದಿಗೆ ಭೇಟಿಕೊಡುವ ಸಂಪ್ರದಾಯವಿದೆ.
      ನರರ ನಡುವಿನ ಅಡ್ಡಗೋಡೆಗಳನ್ನು ಕುಟ್ಟಿ ಕೆಡುಹಿ, ಕಂದಕಗಳನ್ನು ತುಂಬಿ, ಜನಕೋಟಿಯನ್ನು ಒಂದು ದಿವ್ಯ ಆದರ್ಶ ಸಾಧನೆಗಾಗಿ ಒಗ್ಗೂಡಿಸಿದ ಅದ್ಭುತ ಶಕ್ತಿ ಅಯ್ಯಪ್ಪನದು. ಮಾಲಾಧಾರಣೆ, ಮಂಡಲವ್ರತ, ಶಬರಿಮಲೆ ಯಾತ್ರೆ, ಮಕರ ಜ್ಯೋತಿ ದರ್ಶನ, ಮಕರ ಬೆಳಕು ಉತ್ಸವದಲ್ಲಿ ಪಾಲ್ಗೊಳ್ಳುವಿಕೆ - ಇವೆಲ್ಲ ಇಂದು ಲಕ್ಷ-ಲಕ್ಷ ಅಯ್ಯಪ್ಪ ಭಕ್ತರಿಗೆ ಮುದನೀಡುವ ಸಂಗತಿಗಳು. ದೇಶ-ಭಾಷೆ ಯಾವುದೇ ಇರಲಿ, ಪರಸ್ಪರ ಒಡನಾಡಿಗಳಾಗಿ ಶಬರಗಿರಿ ಯಾತ್ರೆ ಮಾಡಿ, ಸ್ವಾಮಿದರ್ಶನ ಪಡೆದು ಪುಲಕಿತರಾಗಿ ಬರುವ ಭಕ್ತಾದಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ದೇಶಾದ್ಯಂತ ಹೆಚ್ಚುತ್ತಿದೆ. ಇದು ಜನಜೀವನದಲ್ಲಿ ಹಿಂದೂ ಧರ್ಮದ ಅಂತಸ್ಸತ್ತ್ವದ ಅಭಿವ್ಯಕ್ತಿಗೊಂದು ಜ್ವಲಂತ ನಿದರ್ಶನ.

Friday, December 6, 2013

ಇಲ್ಲದ ಅಶೋಕನನ್ನು ಪ್ರಚ್ಛನ್ನ ಬೌದ್ಧನನ್ನಾಗಿಸಿದ್ಯಾರು?

 
ಅಶೋಕನ ಸಾ೦ದರ್ಭಿಕ ಚಿತ್ರ(ಕೃಪೆ: ಗೂಗಲ್)
       ಗೌತಮ ಬುದ್ಧನ ಜನ್ಮಸ್ಥಳವಾದ ನೇಪಾಳದ ಲುಂಬಿನಿಯಲ್ಲಿ ಅತ್ಯಂತ ಹಳೆಯ ಬೌದ್ಧ ದೇಗುಲವೊಂದು ಪತ್ತೆಯಾಗಿದೆಯಂತೆ. ಇದು ಬುದ್ಧ ಬದುಕಿದ್ದ ಅವಧಿ ಬಗೆಗೆ ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಾಮಾನ್ಯವಾಗಿ ನಂಬಲಾಗುವಂತೆ ಬುದ್ಧ ಹುಟ್ಟಿದ್ದ ಕಾಲ ಕ್ರಿ.ಪೂ 483 ರಿ೦ದ 563ರ ನಡುವೆ. ಇಲ್ಲಿಯೇ ವಿವಾದ ಶುರುವಾಗುವುದು. ಈ ಕಾಲವನ್ನು ನಿಷ್ಕರ್ಷೆಗೊಳಿಸಿದ್ದು ಸಾಮ್ರಾಟ ಅಶೋಕನ ಕಾಲವನ್ನಾಧರಿಸಿ. ಮಹಾವಂಶ ಮತ್ತು ದೀಪವಂಶಗಳೆಂಬ ಸಿಂಹಳೀಯ ಕೃತಿಗಳಲ್ಲಿ ಬುದ್ಧನ ನಿರ್ವಾಣದ 218ನೇ ವರ್ಷದಲ್ಲಿ ಅಶೋಕನು ಬೌದ್ಧಮತವನ್ನು ಸ್ವೀಕರಿಸಿದನೆನ್ನಲಾಗಿದೆ. ಈ ಅಶೋಕನ ಕಾಲವನ್ನು ನಿರ್ಧರಿಸಿದ್ದು ಅವನಜ್ಜ ಚಂದ್ರಗುಪ್ತನನ್ನು ಭೇಟಿಯಾದ ಮೆಗಸ್ತನೀಸ್‌ನ ಕಾಲದಿಂದ. ಆದರೆ ಮೆಗಸ್ತನೀಸ್‌ನ ಗ್ರೀಕ್ ದಾಖಲೆಗಳಲ್ಲಿರುವ 'ಸ್ಯಾಂಡ್ರೋಕಾಟಸ್' ಎಂಬ ಹೆಸರು ಮೌರ್ಯರ ಚಂದ್ರಗುಪ್ತನದ್ದಾಗಿರದೇ ಗುಪ್ತರ ಮೊದಲ ಚಂದ್ರಗುಪ್ತನದ್ದೆನ್ನಲು ಬಲವಾದ ಆಧಾರಗಳಿವೆ. ಈ ಚಂದ್ರಗುಪ್ತ 'ಜಂಡ್ರಮಸ್‌'ನ ಮಗನೂ 'ಸ್ಯಾಂಡ್ರೋಸಿಪ್ಟಸ್‌'ನ ತಂದೆಯೆಂದಿದೆ. 'ಜಂಡ್ರಮಸ್‌' ಎಂಬುದು ಗುಪ್ತರ ಮೊದಲ ಚಂದ್ರಗುಪ್ತನ ತಾಯಿ ಚಂದ್ರಮಸ್ ಮತ್ತು  'ಸ್ಯಾಂಡ್ರೋಸಿಪ್ಟಸ್‌' ಎಂಬುದು ಚಂದ್ರಗುಪ್ತನ ಮಗನಾದ ಸಮುದ್ರಗುಪ್ತನ ಗ್ರೀಕ್ ಅಪಭೃಂಶಗಳು. ಮೆಗಸ್ತನಿಸ್ ಚಂದ್ರಗುಪ್ತನ ರಾಜಧಾನಿ 'ಪಾಲಿಬೊತ್ರಾ' ಎನ್ನುತ್ತಾನೆ. ಆದು ಗುಪ್ತರ ರಾಜಧಾನಿಯಾದ ಪಾಟಲೀಪುತ್ರವೇ ಹೊರತೂ ಮೌರ್ಯರ ಗಿರಿವ್ರಜವಲ್ಲ. ಇಂಥ ಗೊಂದಲಗಳಿಗುತ್ತರಿಸಲು ಅಶೋಕನನ್ನು ಬಣ್ಣಿಸುವ ಯಾವ ಇತಿಹಾಸಕಾರನಿಗೂ ಆಗಿಲ್ಲ.  ಬುದ್ಧನ ಕಾಲವೇ ಬದಲಾದ ಮೇಲೆ, ಮೆಗಸ್ತನಿಸ್ ಭೇಟೀಯಾಗಿದ್ದು ಚಂದ್ರಗುಪ್ತ ಮೌರ್ಯನನ್ನಲ್ಲವೆಂದ ಮೇಲೆ ಅಶೋಕ ಯಾರು? ಯಾವ ಕಾಲದಲ್ಲಿದ್ದ? ಎಂಬ ಜಿಜ್ಞಾಸೆ ಶುರುವಾಗುವುದು ಸಹಜವೇ. ಅವನ ಕಾಲ ಬದಲಾದ ಬಗ್ಗೆ ಮತ್ತೆ ನೋಡೋಣ.  
     ಈಗಿನ ವಿಷಯವೆ೦ದರೆ, ಅಶೋಕನಿದ್ದುದೇ ಹೌದೆಂದಿಟ್ಟುಕೊಳ್ಳೋಣ. ಹಾಗಾದರೆ ಆತ ಬೌದ್ಧನಾಗಿದ್ದನೇ ಅಥವಾ ಜೈನನಾಗಿದ್ದನೇ ಎಂದು. ಅಶೋಕನು ಜೈನನೇ ಆಗಿರಬಹುದೆಂಬ ಊಹೆಯ ಮೊದಲ ಕಾರಣವೇ ಆತನ ಅಜ್ಜನೂ, ಮೌರ್ಯರ ಮೊದಲ ಅರಸನೂ ಆಗಿದ್ದ ಚಂದ್ರಗುಪ್ತಮೌರ್ಯನು ರಾಜ್ಯವನ್ನು ತೊರೆದು ಜೈನಸನ್ಯಾಸಿಯಾಗಿದ್ದು, ಈತನ ಮಗ ಬಿಂದುಸಾರನೂ ಜೈನಮತವನ್ನು ಸ್ವೀಕರಿಸಿದ್ದ. ಸಹಜವಾಗಿಯೇ ಜೈನಮತದ ನಂಬಿಕೆಗಳಲ್ಲೇ ಅಶೋಕ ಬೆಳೆದ. ಅವನದ್ದೆನ್ನುವ ಶಾಸನಗಳಲ್ಲಿರುವಂತೆ ಅವನಿಗೆ ಸಸ್ಯಾಹಾರದ ಬಗ್ಗೆ ಒಲವಿತ್ತು,  ಆತ ಸ್ವತಃ ಸಸ್ಯಾಹಾರಿಯಾಗಿದ್ದ, ತನ್ನ ರಾಜ್ಯದಲ್ಲಿ ಪ್ರಾಣಿವಧೆಯನ್ನು ನಿಷೇಧಿಸಿದ್ದನಂತೆ. ಇವೆರಡೂ ಅಪ್ಪಟ ಜೈನ ತತ್ತ್ವಗಳೇ. ಜೈನರಷ್ಟು ಪ್ರಾಣಿಪ್ರೀತಿಯನ್ನು ಬೇರಾವ ಮತದಲ್ಲೂ ಕಾಣಲು ಸಾಧ್ಯವಿಲ್ಲ. ಖರೋಷ್ತಿ ಲಿಪಿಯಲ್ಲಿ, ಗ್ರೀಕ್ ಮತ್ತು ಅರಾಮೈಕ್ ಭಾಷೆಯಲ್ಲಿರುವ ಕ೦ದಹಾರ್ ಶಾಸನ ಈತ ಮೀನುಗಾರಿಕೆಯನ್ನೂ, ಬೇಟೆಯನ್ನೂ ನಿಷೇಧಿಸಿದ್ದನೆನ್ನುತ್ತದೆ. ಇನ್ನು ಬೌದ್ಧಮತಕ್ಕೂ ಸಸ್ಯಾಹಾರಕ್ಕೂ ಎಲ್ಲಿಂದೆಲ್ಲಿಯ ಸಂಬಂಧ. ಮಹಾಪರಿನಿಬ್ಬಾಣ ಸುತ್ತ, ಮಜ್ಜಿಮ ನಿಕಾಯಗಳೇ ಇತ್ಯಾದಿಗಳಲ್ಲಿ ಉಲ್ಲೇಖಿಸಿದಂತೆ ಸ್ವತಃ ಬುದ್ಧನ ಮರಣ ಸಂಬಂಧಿಸಿದ್ದೇ ಕೊಳೆತ ಹಂದಿಮಾಂಸವನ್ನು ತಿಂದುಂಟಾದ ಅತಿಸಾರದಿಂದ. ಅಶೋಕನ ಹಿರಿಯ ಪತ್ನಿ ಬೌದ್ಧಮತೀಯಳಾದ ಶಾಕ್ಯಕುಮಾರಿ. ಈಕೆಯ ಜೋಡಿ ಮಕ್ಕಳು ಮಹೇಂದ್ರ ಮತ್ತು ಸಂಘಮಿತ್ರಾ. ಮಾತ್ರವಲ್ಲ ಈಕೆಗಿನ್ನೂ ಅನೇಕ ಮಕ್ಕಳಿದ್ದರು. ಅಶೋಕನ ಕಿರಿಯ
ಅವಲೋಕಿತೇಶ್ವರ
ಪತ್ನಿ ಜೈನಳಾದ ಪದ್ಮಾವತಿ. ಈಕೆಯ ಮಗ ಕುನಾಲನು ಅಶೋಕನ ರಾಜಾಜ್ಞೆಯ ಫಲವಾಗಿ ಕಣ್ಣುಕಳೆದುಕೊಂಡನಂತೆ. ತನ್ನ ಹಿರಿಯ ಪತ್ನಿಗೆ ಮಕ್ಕಳಿದ್ದಾಗ್ಯೂ ಸಹ ಅಶೋಕ ತನ್ನ ನಂತರ ಜೈನರಾಣಿ ಪದ್ಮಾವತಿಯ ಮೊಮ್ಮಗನೂ, ಕುನಾಲನ ಮಗನೂ ಆದಂತಹ ಸಂಪ್ರತಿಗೆ ಪಟ್ಟಕಟ್ಟಿದ್ದೇಕೆ? ಇದಕ್ಕಾತನಿಗೆ ಜೈನಮತದ ಬಗ್ಗೆ ಇದ್ದ ಅಪಾರ ಒಲವೇ ಕಾರಣವೇ? ಮಹೇಂದ್ರ ಮತ್ತು ಸಂಘಮಿತ್ರರು ಬೌದ್ಧಮತವನ್ನು ಪ್ರಸಾರಗೊಳಿಸಲು ಶ್ರೀಲಂಕಾಕ್ಕೆ ತೆರಳಿದರೆಂದು ನಂಬಲಾಗುವುದಾದರೂ ಅಶೋಕನ ಕಾಲದ ಮಾತ್ರವಲ್ಲ ಸಿಂಹಳೀಯರ ಯಾವ ದಾಖಲೆಗಳಲ್ಲೂ ಅದರ ಉಲ್ಲೇಖವಿಲ್ಲ. ಖ್ಯಾತ ಇತಿಹಾಸಕಾರ V.  A. Smith ಸೇರಿ ಅನೇಕರು ಶ್ರೀಲಂಕಾ ಮಹೇಂದ್ರನಿಂದ ಮತಾಂತರಗೊಂಡಿತೆಂಬ ವಾದವನ್ನೇ ನಿರಾಕರಿಸುತ್ತಾರೆ. ವಿದೇಶಗಳಲ್ಲಿ ಅಶೋಕನು ಧರ್ಮಪ್ರಸಾರಕ್ಕೆ ವಿದ್ವಾಂಸರನ್ನು ಕಳುಹಿಸಿದ್ದನ್ನು ಉಲ್ಲೇಖಿಸುವ ಆತನದ್ದೆನ್ನಲಾಗುವ ೨ ಮತ್ತು ೧೩ನೇ ಶಾಸನಗಳು ಈ ಕುರಿತು ಏನನ್ನೂ ತಿಳಿಸುವುದಿಲ್ಲ ಮಾತ್ರವಲ್ಲ ಅಶೋಕನ ಯಾವ ಶಾಸನಗಳಲ್ಲೂ ಅವರಿಬ್ಬರ ಹೆಸರಿಲ್ಲ. ಮೇಲಿನೆರಡೂ ಶಾಸನಗಳಲ್ಲಿ ತಂಬಪಣ್ಣಿ ಅಥವಾ ತಾಮ್ರಪರ್ಣಿಯ ತನಕ ಶ್ರವಣ ಧರ್ಮದ ಪ್ರಚಾರಕರು ತಲುಪಿದ ಹೇಳಿಕೆಯಿದೆ. ಆದರೆ ಇದಿದ್ದುದು ತಮಿಳ್ನಾಡಿನ ತಿರುನಲ್ವೇಲಿಯ ಸಮೀಪ. ಅಲ್ಲಿಗೆ ಅಶೋಕನ ಧರ್ಮಪ್ರಚಾರಕರು ತಮಿಳ್ನಾಡಿನ ತಾಮ್ರಪರ್‍ಣಿ ನದಿಯನ್ನು ದಾಟಲಿಲ್ಲವೆಂದಾಯ್ತು. ಅದೂ ಅಲ್ಲದೇ ಶ್ರವಣವೆಂಬುದು ಕೇವಲ ಬೌದ್ಧಮತ ಮಾತ್ರವಲ್ಲ. ಜೈನ, ಬೌದ್ಧ, ಚಾರ್ವಾಕ, ಅಜೀವಿಕ, ಗೋಸಲ ಸೇರಿದಂತೆ ಎಲ್ಲ ಅವೈದಿಕ ಮತಗಳೂ ಶ್ರವಣಮತಗಳೆಂದೇ ಕರೆಯಲ್ಪಡುತ್ತವೆ. ಅಶೋಕನ ಮಗ ಮಹೇಂದ್ರನು ಹುಣ್ಣಿಮೆಯ ರಾತ್ರಿಯಂದು ರಾಜಹಂಸದಂತೆ ಆಕಾಶಮಾರ್ಗವಾಗಿ ಸಿಂಹಳವನ್ನು ತಲುಪಿ, ತನ್ನ ಮೊದಲ ಭೇಟಿಯಲ್ಲೇ ಮಿಹಿಂತಲೆಯಲ್ಲಿ ಅಲ್ಲಿನ ರಾಜ ದೇವಾನಾಂಪಿಯತಿಸ್ಸನನ್ನೂ ಅವನ ನಲವತ್ತು ಸಾವಿರ ಅನುಯಾಯಿಗಳನ್ನೂ ಮತಾಂತರಿಸಿದನೆಂಬ ದೀಪವಂಸದ ಕಥೆಯು ಚಂದಮಾಮ, ಬಾಲಮಿತ್ರದಷ್ಟೇ ರಸವತ್ತಾಗಿದೆಯೇ ಹೊರತೂ ಬೇರೇನೂ ಅಲ್ಲ. ಬಿಂದುಸಾರನ ಮಕ್ಕಳ ಸಂಖ್ಯೆಯು ಒಂದೆಡೆ ೯೦, ಇನ್ನೊಂದೆಡೆ ೯೯, ಮತ್ತೊಂದೆಡೆ ೧೦೧ ಹೀಗೆ ಬೇರೆ ಬೇರೆ ಕಡೆ ಬೇರೆಬೇರೆಯಾಗಿದೆ. ಇರಲಿ ಬಿಡಿ. ತನ್ನ 90+ ಅಣ್ಣತಮ್ಮಂದಿರನ್ನೆಲ್ಲರನ್ನೂ ಕೊಂದು ಅಶೋಕ ಪಟ್ಟಕ್ಕೇರಿದ್ದ. ಬೌದ್ಧ-ಜೈನಮತಗಳು ಪರಸ್ಪರ ವಿರೋಧಿಗಳೆಂದೇ ಪರಿಗಣಿಸಲ್ಪಡುತ್ತಿದ್ದ ಆ ಕಾಲದಲ್ಲಿ ಜೈನಸಂಪ್ರದಾಯದ ಸಂಪ್ರತಿ ಪಟ್ಟಕ್ಕೇರಿದ್ದರಿಂದ ಬೌದ್ಧಾನುಯಾಯಿ ಮಹೇಂದ್ರನೇನಾದರೂ ಕೊಲ್ಲಲ್ಪಡುವ ಭಯದಿಂದ ದೇಶಬಿಟ್ಟು ತೆರಳಿರಬಹುದೇ?
      ಅಶೋಕನ ರಾಜ್ಯದಲ್ಲಿ ವೈದಿಕ, ಬೌದ್ಧ, ಜೈನ, ನಾಸ್ತಿಕ ಅಜೀವಿಕ ಮತಗಳು ಸಮಾನ ಪ್ರಾಮುಖ್ಯತೆಯನ್ನು ಪಡೆದಿದ್ದವು. ಎಲ್ಲ ಮತಗಳಿಗೂ, ಅವುಗಳ ಪ್ರಚಾರಕ್ಕೂ ಅಶೋಕ ಮಹತ್ವವನ್ನು ನೀಡಿದ್ದ. ತನ್ನ ಪ್ರತಿಷ್ಟೆಯನ್ನು ಹೆಚ್ಚಿಸಿಕೊಳ್ಳಲು ವಿವಿಧ ಮತಪಂಡಿತರುಗಳನ್ನೂ, ಮಿಶನರಿಗಳನ್ನೂ ಈತ ವಿದೇಶಗಳಿಗೆ ಕಳುಹಿಸಿದ್ದ. ಬೇರೆ ದೇಶಗಳಲ್ಲಿ ಚಿಕಿತ್ಸಾಲಯಗಳನ್ನು ಸ್ಥಾಪಿಸಿ, ಜನಸೇವೆ ಮಾಡಿ ತಮ್ಮ ಪ್ರತಿಷ್ಟೆಯನ್ನು ಹೆಚ್ಚಿಸಿಕೊಳ್ಳುವ ಅಶೋಕನ ನೀತಿಯನ್ನೇ ಈಗಿನ ಕಾಲದ ಹೆಚ್ಚಿನ ಮಿಶನರಿಗಳೆಲ್ಲ ಪಾಲಿಸುತ್ತಿರುವುದು. ಸರಿಸುಮಾರು ಕ್ರಿ.ಪೂ ಮೂರನೇ ಶತಮಾನದ ಕಾಲದಲ್ಲೇ ರೋಮನ್, ಪರ್ಶಿಯನ್ ಸಾಮ್ರಾಜ್ಯಗಳಲ್ಲಿ ಋಗ್ವೇದಕಾಲದ ದೇವತೆಯಾಗಿದ್ದ ಮಿತ್ರನನ್ನು ಪೂಜಿಸುವ ರೋಮನ್ ಮಿತ್ರಾಯಿಸಮ್ ಮತ್ತು  ಪರ್ಶಿಯನ್ ಮಿತ್ರಾಯಿಸಮ್ ಎಂಬ ಮತಗಳು ಪ್ರವರ್ಧಮಾನಕ್ಕೆ ಬ೦ದವು. ಭಾರತದಿಂದ ರೋಮ್ ಸಾಮ್ರಾಜ್ಯಕ್ಕೆ ಹಬ್ಬಿದ್ದ ಮಿತ್ರಾಯಿಸಂ ಮುಂದೆ ಕ್ರೈಸ್ತ ಮತದ ಹುಟ್ಟಿಗೆ ಕಾರಣವಾಯ್ತೆಂಬ ವಾದಗಳೂ ಇವೆ. ಅಶೋಕನದ್ದೆನ್ನಲಾಗುವ ಶಾಸನಗಳಲ್ಲಿ ಐದು ಯವನ(ರೋಮನ್) ರಾಜರುಗಳ ಹೆಸರುಗಳಿವೆ. ಹಾಗೆಂದು ಅವನ ಕಾಲದ ಯಾವ ಗ್ರೀಕ್ ದಾಖಲೆಗಳಲ್ಲೂ ಅಶೋಕನ ಹೆಸರೂ ಇಲ್ಲ, ಆತನ ಬೌದ್ಧಮತದ ಬಗ್ಗೆಯೂ ಇಲ್ಲದಿರುವುದೇಕೆ? ಆದರೂ ಅವನ ಕಾಲದಲ್ಲಿ ಬೌದ್ಧಮತವು ಭಾರತದಲ್ಲಿ ವ್ಯಾಪಕವಾಗಿಯೇ ಬೆಳೆಯುತ್ತಿತ್ತೆಂದಿಟ್ಟುಕೊಳ್ಳೋಣ. ಅಶೋಕನೂ ಅದಕ್ಕೆ ಅವಕಾಶವನ್ನೂ ಆದ್ಯತೆಯನ್ನೂ ನೀಡಿದ್ದ.
ಬೌದ್ಧಿಸಂನಲ್ಲಿ ಬ್ರಹ್ಮ ಮತ್ತು ಶಿವ
ಅಧಿಕಾರಸ್ಥಾನದಲ್ಲಿರುವವರನ್ನು ಓಲೈಸುವ ಮತಪಂಡಿತರ ಚಾಳಿ ಅಂದಿನಿಂದ ಇಂದಿನವರೆಗೂ ಹಾಗೇ ಉಳಿದುಕೊಂಡು ಬಂದಿದೆ. ನಿನ್ನೆ ಮೊನ್ನೆ ಯಡಿಯೂರಪ್ಪ, ಶೆಟ್ಟರ ಹಿಂದೆ ತಿರುಗುತ್ತಿದ್ದ ಆಸ್ಥಾನ ಜ್ಯೋತಿಷಿಗಳು ಇಂದು ಸಿದ್ದರಾಮಯ್ಯನ ಹಿಂದೆ ತಿರುಗಿದಂತೆ. ಅದೇ ಕಾರಣಕ್ಕೆ ಆತ ಪಾಟಲಿಪುತ್ರದಲ್ಲಿ ಮೊಗ್ಗಲಿಪುಟ್ಟಸಿಸ್ಯ ಭಿಕ್ಷು ಆಯೋಜಿಸಿದ್ದ ಮೂರನೇ ಶ್ರವಣ ಸಮ್ಮೇಳನದಲ್ಲಿ ಭಾಗವಹಿಸಿದ್ದಿರಬಹುದು. ಇನ್ನು ಆರ್ಯಮಂಜುಶ್ರೀಮೂಲಕಲ್ಪ ಮತ್ತು ದೀಪವಂಶಗಳಲ್ಲಿರುವಂತೆ ಸ್ವತಃ ಬುದ್ಧನೇ ತನ್ನ ಮರಣದ 218ನೇ ವರ್ಷದಲ್ಲಿ ಚಕ್ರವರ್ತಿಯೊಬ್ಬ ಬಂದು ತನಗಾಗಿ 84 ಸಾವಿರ ಸ್ತೂಪಗಳನ್ನು ನಿರ್ಮಿಸುವುದಾಗಿ ಹೇಳಿದ್ದನೆನ್ನುವುದು ಮೂರ್ತಿಪೂಜೆಯನ್ನು ಎಲ್ಲ ವಿಧಗಳಲ್ಲೂ ನಿರಾಕರಿಸಿದ ಬುದ್ಧನ ಮೂಲತತ್ತ್ವಗಳಿಗೆ ಮಾಡಿದ ಅವಮಾನವೇ ಸರಿ. ಮೂಲವೆಲ್ಲವನ್ನೂ ಬಿಟ್ಟು ಅಳಿದ ಧರ್ಮಗುರುಗಳ ಹೆಸರಲ್ಲಿ ಉಳಿದ ಜನ ತಮ್ಮ ಬೇಳೆಬೇಯಿಸಿಕೊಳ್ಳುವುದು ಹೊಸತೂ ಅಲ್ಲ, ಅದರಿಂದಲೇ ಇ೦ದಿನ ಧರ್ಮಗಳೆಲ್ಲ ಕೆಟ್ಟು ಕೆರ ಹಿಡಿಯುತ್ತಿರುವುದು ಸುಳ್ಳೂ ಅಲ್ಲ.
      ಇನ್ನು ಕಳಿ೦ಗ ಯುದ್ಧದ ವಾದವ೦ತೂ ವಿಚಿತ್ರ. ಕಳಿಂಗವು ಮೊದಲು ನಂದರ ವಶದಲ್ಲಿದ್ದು ಚಂದ್ರಗುಪ್ತನ ಕಾಲದಲ್ಲಿ ಸ್ವತಂತ್ರವಾಗಿತ್ತು. ಕಳಿಂಗ, ದಕ್ಷಿಣ ಭಾರತದ ತುದಿಯನ್ನು ಹೊರತುಪಡಿಸಿ ಈಗಿನ  ಪಾಕಿಸ್ತಾನ, ಅಫ್ಘಾನಿಸ್ತಾನಗಳನ್ನೂ ಒಳಗೊಂಡಿದ್ದ ಭಾರತದ ಬಹುಭಾಗ ಮೌರ್ಯಸಾಮ್ರಾಜ್ಯದ ತೆಕ್ಕೆಯಲ್ಲೇ ಇತ್ತೆನ್ನಲಾಗುತ್ತದೆ.  ಚಕ್ರವರ್ತಿಯಾದವನೊಬ್ಬನ ಪಾಲಿಗೆ ಯುದ್ಧ, ಸಾವು, ನೋವುಗಳು, ಆಸ್ತಿ-ಪಾಸ್ತಿನಾಶಗಳೆಲ್ಲ ಸಾಮಾನ್ಯ. ಅದು ಯಾವುದೇ ಯುದ್ಧದಲ್ಲಾಗಿರಬಹುದು. ಸ್ವಂತ
ಅಶೋಕನ ಕಾಲದ ಮೌರ್ಯ ಸಾಮ್ರಾಜ್ಯ
ಅಣ್ಣತಮ್ಮಂದಿರನ್ನು ಕೊಲೆಗೈದು ಪಟ್ಟಕ್ಕೇರಿದ, ತನಗೆ ನಿಷ್ಟರಲ್ಲವೆಂಬ ಅನುಮಾನದಿಂದ ೫೦೦ ಮಂತ್ರಿಗಳನ್ನು ಕೊಲ್ಲಿಸಿದ, ಹಿಟ್ಲರಿನ ಗ್ಯಾಸ್ ಚೇಂಬರಿನಂತೆ ಜನರನ್ನು ಚಿತ್ರಹಿಂಸೆ ಕೊಟ್ಟು ಕೊಲ್ಲಲೆಂದೇ ಅಶೋಕನ ನರಕವೆಂಬ ಅರಮನೆಯೊಂದನ್ನೇ ಕಟ್ಟಿದ ಅಶೋಕಾ ದ ಗ್ರೇಟ್‌ನ ಪಾಲಿಗಂತೂ ಹೇಳುವುದೇ ಬೇಡ ಬಿಡಿ.
      ಅಶೋಕನ ಜೀವನದ ಬಗ್ಗೆ ಮಾಹಿತಿ ನೀಡುವ ಪ್ರಮುಖ ಗ್ರಂಥಗಳೆಂದರೆ ಮಥುರಾದ ಬೌದ್ಧಸನ್ಯಾಸಿಯೊಬ್ಬ ಕ್ರಿ.ಶ. 1ನೇ ಶತಮಾನದಲ್ಲಿ ಬರೆದಿದ್ದ ಅಶೋಕವದನ ಮತ್ತು ಕ್ರಿ.ಶ 5ನೇ ಶತಮಾನದಲ್ಲಿ ರಚಿತಗೊಂಡ ಪಾಲಿ ಭಾಷೆಯಲ್ಲಿರುವ ಸಿಂಹಳದ ಎರಡು ಕೃತಿಗಳಾದ ದೀಪವಂಶ ಹಾಗೂ ಮಹಾವಂಶಗಳು ಮಾತ್ರ. ಇವೆರಡೂ ಅಶೋಕನಿಗಿಂತ ಎಷ್ಟೋ ಕಾಲದ ನಂತರ ರಚನೆಗೊಂಡವು. ಬಿಟ್ಟರೆ ಅಶೋಕನದೆಂದು ಹೇಳಲಾಗುವ 14 ಮುಖ್ಯ ಶಾಸನಗಳು. ತಮಾಶೆಯೆಂದರೆ ಇವಾವುದರಲ್ಲೂ ಅಶೋಕನ ಕಳಿಂಗ ಯುದ್ಧದ ಬಗ್ಗೆ ಹಾಗೂ ಆತನ ಮಗನಾದ ಮಹೇಂದ್ರನ ಒ೦ದೇ ಒಂದು ಸಾಲು ಕೂಡ ಇಲ್ಲ. ಅದೂ ಅಲ್ಲದೇ ಅಶೋಕವದನದ ಪ್ರಕಾರ ಆತ ಪೌಂಡ್ರದೇಶದ ಹದಿನೆಂಟು ಸಾವಿರ ನಾಸ್ತಿಕವಾದಿ ಅಜೀವಿಕ ಪರಂಪರೆಯವರನ್ನು ಕೊಲ್ಲಿಸಿ, ಇನ್ನುಳಿದವರ ತಲೆಕಡಿದು ತಂದರೆ ತಲೆಗೆ ತಲಾ ಒಂದು ಬೆಳ್ಳಿನಾಣ್ಯವನ್ನು ಕೊಡುವುದಾಗಿ ಶಾಸನವನ್ನೂ ಹೊರಡಿಸಿದನಂತೆ. ದೊಡ್ಡ ಸಾಮ್ರಾಜ್ಯದ ಚಕ್ರವರ್ತಿಯಾಗಿ ಮೆರೆದ ಇಂಥ ಕ್ರೂರಿಯೊಬ್ಬನಿಗೆ ಪುಟ್ಟ ಕಳಿಂಗ ರಾಜ್ಯದ ವಿರುದ್ಧ ನಡೆದ ಯುದ್ಧದ ಸಾವು-ನೋವು ಏನೇನೂ ಆಗಿರಲಿಲ್ಲ. ಹಾಗೊಂದುವೇಳೆ ಯುದ್ಧದ ನಾಶದಿಂದ ಮನನೊಂದು ಅಹಿಂಸೆಯ ಹಾದಿ ಹಿಡಿಯಬೇಕೆಂದರೆ ಆತನ ಮೊದಲ ಆಯ್ಕೆ ಜೈನ ಮತವಾಗುತ್ತಿತ್ತೇ ಹೊರತೂ ಬೌದ್ಧಮತವಲ್ಲ. ಇನ್ನು ಪ್ರಾಣಿಬಲಿಯನ್ನು ನಿಷೇಧಿಸಿದ್ದನ್ನೇ ಮುಂದಿಟ್ಟುಕೊಂಡು ಆತ ಯಜ್ಞಯಾಗಾದಿಗಳ ವಿರೋಧಿಯಾದ ಬೌದ್ಧಮತಾನುಯಾಯಿಯೆಂದು ಹೇಳಲಾಗದು, ಈತನ 13ನೇ ಶಿಲಾಲೇಖ ನಿಜವಾಗಿಯೂ ಈತನದ್ದೇ? ಈತನದ್ದಾದರೆ ಅದನ್ನು ಕೆತ್ತಿಸಿದ್ದು ಪಟ್ಟಕ್ಕೆ ಬಂದ 14ನೇ ವರ್ಷದಲ್ಲೋ? ಅಥವಾ 28ನೇ ವರ್ಷದಲ್ಲೋ? ಅಥವಾ ಅದಕ್ಕೂ ನಂತರವೇ? ಎಂಬ ಚರ್ಚೆಯೇ ಇನ್ನೂ ನಿಂತಿಲ್ಲ. ಆದರೂ ಇದರಲ್ಲಿ ಕಾಣಬರುವ ’ಧರ್ಮ’ ಮತ್ತು ’ಉಪಾಸಕ’ ಶಬ್ದಗಳನ್ನು ಕೇವಲ ಬೌದ್ಧ ತತ್ತ್ವಶಾಸ್ತ್ರದೊಡನೆ ಸಮೀಕರಿಸುವುದೆಲ್ಲ ’ಎಡ’ದವರಿಗೆ ಮಾತ್ರ ಸಾಧ್ಯವೇನೋ. ಧರ್ಮವೆಂಬ ಶಬ್ದ ಕೌಟಿಲ್ಯನ ಅರ್ಥಶಾಸ್ತ್ರದಲ್ಲೂ ಬಹಳಷ್ಟು ಬಾರಿ ಬಂದಿದೆ. ಹಾಗೆಂದಮಾತ್ರಕ್ಕೆ ಅವನನ್ನೂ ಬೌದ್ಧನೆನ್ನಲಾದೀತೇ? ಇನ್ನು ’ಧರ್ಮ‌ಅಶೋಕ’ ಅಥವಾ ’ಧರ್ಮ‌ಅಶೋಕ ಬಿಂದುಸಾರ ಮೌರ್ಯ’ನೆಂದು ಅಶೋಕನು ತನ್ನನ್ನು ಕರೆದುಕೊಂಡಿದ್ದು ತನ್ನ ಹೆಸರನ್ನು ತನ್ನ ತಾಯಿಯಾದ ’ಮಹಾರಾಣಿ ಧರ್ಮಾ’ ಅಥವಾ ’ಶುಭದ್ರಾಂಗಿ’ಯೊಡನೆ ಸಮೀಕರಿಸಿಕೊಂಡಿದ್ದಷ್ಟೆ. ಬಿಂದುಸಾರನಿಗಿದ್ದ ಹಲವಾರು ಪತ್ನಿಯರ ನಡುವೆ ತನ್ನ ಮಾತೃಪರಂಪರೆಯನ್ನು ಗುರುತಿಸಲು ಹೀಗೆ ಮಾಡಿರಬಹುದು. ಆತನ ಹೆಚ್ಚಿನ ಶಾಸನಗಳ ಭಾಷೆ ’ಪ್ರಾಕೃತ’ ಮತ್ತು ಅದರ ಉಪಭಾಷೆಯಾದ ’ಮಾಗಧಿ’ಯೇ ಹೊರತೂ ಬೌದ್ಧರು ಬಳಸುತ್ತಿದ್ದ ’ಪಾಲಿ’ ಅಲ್ಲ. ಹಾಗೆ ನೋಡಿದರೆ ಅಶೋಕನದ್ದೆಂದು ಹೇಳಲಾಗುವ ಯಾವ ಶಾಸನಗಳಲ್ಲೂ ಅವನ ಹೆಸರಿನ ಉಲ್ಲೇಖವಿಲ್ಲ. ಅಲ್ಲಿ ಬಳಕೆಯಲ್ಲಿರುವುದು ’ದೇವಾನಂಪಿಯ’ ಮತ್ತು ’ಪಿಯದಸಿ’ ಎಂಬ ಹೆಸರುಗಳು. ಈ ಪಿಯದಸಿಯೇ ಅಶೋಕನೆನ್ನಲು ಇರುವ ಏಕೈಕ ಆಧಾರ ಸಿಂಹಳದ ದೀಪವಂಶ. ಬಿಟ್ಟರೆ 1915ರಲ್ಲಿ ಸಿಕ್ಕ ರಾಯಚೂರಿನ ಮಸ್ಕಿಯ ಶಿಲಾಲೇಖವೊಂದರಲ್ಲೇ ಅಶೋಕನ ಹೆಸರಿನ ಉಲ್ಲೇಖವಿರುವುದು. ಸಾರಾನಾಥದ ಅಶೋಕ ಸ್ತಂಭದಿಂದ(Lion Capital of Asoka) ನಾಲ್ಕು ಸಿಂಹಗಳ ಚಿಹ್ನೆಯನ್ನು ಭಾರತದ ಅಧಿಕೃತ ರಾಜಮುದ್ರೆಯನ್ನಾಗಿ ತೆಗೆದುಕೊಳ್ಳಲಾಗಿದೆ. ಹಿಂದೂಧರ್ಮದಲ್ಲಿ ಸಿಂಹವನ್ನು ರಾಜತ್ವ ಮತ್ತು ಶೌರ್ಯದ ಪ್ರತೀಕವಾಗಿ ಗಣಿಸಲಾಗಿದೆ. ಜೈನ ತತ್ತ್ವಶಾಸ್ತ್ರದಂತೆ ಸಿಂಹವು ಅವರ ೨೪ನೇ
ಸಾರಾನಾಥ ಸ್ತೂಪ
ತೀರ್ಥಂಕರ ಮಹಾವೀರನ ಪ್ರತೀಕವೂ ಹೌದು. ಜಾತಕ ಕಥೆಗಳನ್ನಾಗಲೀ, ಬೌದ್ಧ ತತ್ತ್ವಶಾಸ್ತ್ರವನ್ನಾಗಲೀ ತೆಗೆದು ನೋಡಿದರೆ ಬುದ್ಧನ ಪ್ರತೀಕವೇನಿದ್ದರೂ ಅದು ಜಿಂಕೆ ಅಥವಾ ಸಾರಂಗ. ಸಿಂಹಕ್ಕೂ ಶ್ರವಣಮತಕ್ಕೂ ಸಂಬಂಧವೇ ಇಲ್ಲ. ಸಿಂಹದ ಕೆಳಗಿರುವ ಆನೆಯೂ ಮತ್ತೆ ರಾಜತ್ವ ಹಾಗೂ ಶುಭಸೂಚನೆಯ ಪ್ರತೀಕವೇ. ಇಂದ್ರನ ಐರಾವತ ತನ್ನ ಗರ್ಭವನ್ನು ಪ್ರವೇಶಿಸುವಂತೆ ಮಹಾವೀರ ಮತ್ತು ಗೌತಮ ಬುದ್ಧರೀರ್ವರ ತಾಯಂದಿರಿಗೂ ಕನಸು ಬಿದ್ದಿತ್ತಂತೆ. ಅಂದಿನ ಕಾಲದಲ್ಲಿ ಶುಭಶಕುನದ ಇಂಥ ಸ್ವಪ್ನಗಳನ್ನು ಕಾಣುತ್ತಿದ್ದುದು ಸಹಜ. ಅಶೋಕ ಸ್ತಂಭದಲ್ಲಿರುವ ಆನೆ, ಕುದುರೆ, ಸಿಂಹ, ಎತ್ತುಗಳನ್ನೆಲ್ಲ ಹಿಂದೂ ಧರ್ಮಶಾಸ್ತ್ರವು ಜೈನ, ಬೌದ್ಧ ಮತಗಳು ಜನ್ಮತಾಳುವ ಸಹಸ್ರ ಸಹಸ್ರ ವರ್ಷಗಳಿಂದಲೂ ಬಲ, ವೇಗ, ಪರಾಕ್ರಮ ಪ್ರತೀಕವಾಗಿ ಗ್ರಹಿಸುತ್ತ ಬಂದಿದೆ. ಒಂದು ಕಡೆ ಹಿಂದೂದೇವರ ಮೇಲೆ ನಂಬಿಕೆ ಇಲ್ಲವೆನ್ನುತ್ತ ಮತ್ತೊಂದೆಡೆ ಶಿವನನ್ನು ಯಮಾರಿ, ಲೋಕೇಶ್ವರನನ್ನಾಗಿಸಿ, ವಿಷ್ಣುವನ್ನು ಅವಲೋಕಿತೇಶ್ವರನನ್ನಾಗಿಸಿ, ಕುಬೇರನನ್ನು ಜಂಭಲನನ್ನಾಗಿ, ದುರ್ಗೆಯನ್ನು ಆರ್ಯತಾರೆಯನ್ನಾಗಿ, ಇಂದ್ರನನ್ನು ಸಕ್ಕನನ್ನಾಗಿಸಿ ವೈದಿಕ ದೇವತೆಗಳನ್ನೆಲ್ಲ ಕದ್ದು ತಮ್ಮದೆಂದು ಕಥೆ ಬೆಳೆಸುವುದು ಬೌದ್ಧಶಾಸ್ತ್ರಗಳಲ್ಲಿ ಮಾಮೂಲು. ಇನ್ನು ಚಕ್ರವು ಸಾರ್ವಭೌಮತೆಯ ಸಂಕೇತ. ಚಕ್ರವರ್ತಿಯೆಂಬ ಶಬ್ದ ಹುಟ್ಟಿದ್ದೇ ಚಕ್ರದಿಂದ. ನೀವು ರಾಜನಾಗಿದ್ದಲ್ಲಿ, ನಿಮ್ಮ ರಾಜ್ಯದ ಸುತ್ತ ಇರುವ ಉಳಿದ ರಾಜ್ಯಗಳೂ, ಅವುಗಳ ಸುತ್ತಲಿರುವ ಇನ್ನುಳಿದ ರಾಜ್ಯಗಳೂ ಎಲ್ಲವನ್ನೂ ಸೇರಿಸಿ ’ಚಕ್ರ’ ಎನ್ನಲಾಗುತ್ತಿತ್ತು. ಆ ಇಡೀ ಚಕ್ರವನ್ನು ಗೆದ್ದು ಆಳಿದವನೇ ’ಚಕ್ರವರ್ತಿ’. 24 ಕಡ್ಡಿಗಳುಳ್ಳ ಚಕ್ರವು ಜೈನರ 24 ತೀರ್ಥಂಕರರನ್ನು ಪ್ರತಿನಿಧಿಸುತ್ತದೆ ವಿನಃ ಬುದ್ಧನನ್ನಲ್ಲ. ಬೌದ್ದರ ’ಆರ್ಯಾಷ್ಟಾಂಗಮಾರ್ಗ’(ಅತ್ತಾಂಗಿಕೋ ಮಗ್ಗೊ)ವನ್ನು ಪ್ರತಿನಿಧಿಸುವ ಧರ್ಮಚಕ್ರಕ್ಕಿರುವುದು 8 ಕಡ್ಡಿಗಳು ಮಾತ್ರ. ಅಲ್ಲಿಗೆ ಅಶೋಕಚಕ್ರಕ್ಕೂ ಬುದ್ಧಮತಕ್ಕೂ ಯಾವ ಸಂಬಂಧವೂ ಇಲ್ಲವೆಂದಾಯ್ತು.
     ಅಸಲಿಗೆ ಸಾಮ್ರಾಟ ಅಶೋಕನೆಂಬ ಹೆಸರಿನ ರಾಜನೊಬ್ಬನಿದ್ದನೆಂಬುದರ ಬಗ್ಗೆಯೇ ಇತಿಹಾಸಕಾರರಲ್ಲಿ ಭಿನ್ನಾಭಿಪ್ರಾಯಗಳಿವೆ. ಆ ಹೆಸರಿನ ಒಬ್ಬನಿದ್ದರೂ ಆತ ಜನಪದದ ಮಾನಸದಿಂದ ಮರೆತು ಹೇಳಹೆಸರಿಲ್ಲದೇ ಮೂಲೆಗುಂಪಾಗಿ ಇತಿಹಾಸದ ಪುಟಗಳಲ್ಲಿ ಹುದುಗಿಹೋಗಿದ್ದ. 1837ರಲ್ಲಿ ಬ್ರಿಟಿಷ್ ಉತ್ಖನನಶಾಸ್ತ್ರಜ್ಞ ಜೇಮ್ಸ್ ಪ್ರಿನ್ಸೆಪ್ ಶ್ರೀಲಂಕಾದ ಬೌದ್ಧ ಕಾವ್ಯಗಳಾದ ಪಂಚತಂತ್ರದ ಫ್ಯಾಂಟಸಿ ಕಥೆಗಳಂತಿರುವ ದೀಪವಂಶ ಮತ್ತು ಮಹಾವಂಶಗಳಿಂದ ಆ ಹೆಸರನ್ನು ಉದ್ಧರಿಸಿದ್ದನ್ನು ಬಿಟ್ಟರೆ ಅಶೋಕನ ಬಗೆಗಿನ ಯಾವ ಐತಿಹಾಸಿಕ ದಾಖಲೆಗಳೂ ನಮ್ಮಲ್ಲಿ ಲಭ್ಯವಿಲ್ಲ. ಇತ್ತೀಚಿಗಿನ ಸಂಶೋಧನೆಗಳಿಂದ ಬುದ್ಧನ ಜೀವಿತಕಾಲವೇ ಕ್ರಿ.ಪೂ ಒಂದುಸಾವಿರಕ್ಕಿಂತ ಹಿಂದೆ ಹೋಗಿರುವಾಗ ಬುದ್ಧನಿರ್ವಾಣದ 218ನೇ ವರ್ಷದಲ್ಲಿ ಅಶೋಕ ಬುದ್ಧದೀಕ್ಷೆ ಸ್ವೀಕರಿಸಿದನೆಂಬ ಕಥೆಯಿರುವ ದೀಪವಂಶ, ಮಹಾವಂಶಗಳ ಕಥೆ ಎಷ್ಟು ನಂಬಲರ್ಹ?

Friday, November 22, 2013

ಮತ್ತೆ ಮಧುರೈ



 
ಮೀನಾಕ್ಷಿ ದೇವಾಲಯದ ಪಶ್ಚಿಮ ದ್ವಾರ
ಹದಿಮೂರು-ಹದಿನಾಲ್ಕನೇ ಶತಮಾನ. ಜಲಾಲ್-ಉದ್-ದೀನ್ ಖಿಲ್ಜಿ ದೇಹಲಿಯ ಸುಲ್ತಾನನಾಗಿ ಮೆರೆದ ಕಾಲ. ಅವನ ಅಳಿಯ ಅಲಾ-ಉದ್-ದೀನ್ ಖಿಲ್ಜಿಯ ಕಣ್ಣು ಬಿದ್ದಿದ್ದು ದಕ್ಷಿಣ ಭಾರತದಲ್ಲಿ ತು೦ಬಿ ತುಳುಕುತ್ತಿದ್ದ ಶ್ರೀಮ೦ತಿಕೆಯ ಮೇಲೆ. ದೇಹಲಿಯ ಪಟ್ಟವೇರಲು ಕೊಪ್ಪರಿಗೆಗಟ್ಟಲೆ ಹಣಬೇಕೆ೦ದು ಅರಿತಿದ್ದ ಅಲಾದೀನ್ ದ೦ಡನಾಯಕನಾಗಿ ಡೆಕ್ಕನ್‌ನ ಮೇಲೆ ಆಕ್ರಮಣ ಮಾಡಲು ಸುಲ್ತಾನನ ಅನುಮತಿ ಕೇಳಿದ. ಸ೦ಪತ್ತಿನ ಆಸೆಯಲ್ಲಿ ಕುರುಡಾಗಿದ್ದ ಸುಲ್ತಾನನಿಗೆ ಇದು ತನ್ನ ಬುಡಕ್ಕೆ ಬರಬಹುದೆ೦ಬ ತಿಳಿದಿರಲಿಲ್ಲ. ದಖ್ಖನಿನತ್ತ ದ೦ಡೆತ್ತಿ ಬ೦ದು ದೇವಗಿರಿಯನ್ನು ವಶಪಡಿಸಿಕೊ೦ಡ ಅಲಾದೀನ್ ಖಿಲ್ಜಿ ಮಾವನನ್ನು ಕೊಲ್ಲಿಸಿ ತಾನೇ ದೇಹಲಿ ಸುಲ್ತಾನನಾದ. ಈತನ ಸೈನ್ಯ ಗುಜರಾತಿನ ಖ೦ಬತ್‌ನ ಮೇಲೆ ದಾಳಿಮಾಡಿದಾಗ ಸೆರೆಸಿಕ್ಕ ಸಾವಿರಾರು ಯುದ್ಧಕೈದಿಗಳಲ್ಲಿ ’ಚಾ೦ದ್‌ರಾಮ್ಎ೦ಬ ಯುವಕನೂ ಒಬ್ಬ. ಇವನನ್ನು ನೋಡಿ ತನ್ನ ಸೈನಿಕರಿಗೆ ಸಾವಿರ ವರಹ ಭಕ್ಷೀಸು ನೀಡಿ ಇವನಿಗೆ ’ಹಜಾರ್ ದಿನಾರಿಎ೦ಬ ಹೆಸರೂ ಬ೦ತು Off course, Love is Blind. ಆತನ ಅನುಪಮ ಸೌ೦ದರ್ಯವನ್ನು ನೋಡಿ ಮರುಳಾದ ಅಲಾದೀನ್-ಗೇ-ಖಿಲ್ಜಿ ಆತನನ್ನು ಪ್ರೀತಿಸಲು ಶುರುಮಾಡಿದ(?).
ಅಲಾ-ಉದ್-ದೀನ್ ಖಿಲ್ಜಿ
ಚಾ೦ದರಾಮನ ವೃಷಣಗಳನ್ನು ಛೇದಿಸಿ, ಇಸ್ಲಾಮಿಗೆ ಮತಾ೦ತರಿಸಿ ತನ್ನ ಅ೦ತಃಪುರದಲ್ಲಿಟ್ಟುಕೊ೦ಡ. ಇವನ ಮೇಲೆ ಅಲಾದೀನನ ಬ್ಲೈ೦ಡ್ ಲವ್ ಎಷ್ಟರಮಟ್ಟಿತ್ತೆ೦ದರೆ ಇವನಿಗೋಸ್ಕರ ತನ್ನ ಸ್ವ೦ತ ಹೆ೦ಡತಿ ಮಾಲಿಕ್-ಇ-ಜಹಾನ್ ಮತ್ತು ಮಕ್ಕಳಾದ ಖಿಜರ್ ಖಾನ್ ಮತ್ತು ಶಾದಿ ಖಾನರನ್ನೇ ಜೈಲಿಗಟ್ಟಿದ. ಈ ಚಾ೦ದರಾಮನೇ ಮು೦ದೆ ಖಿಲ್ಜಿ ಸಾಮ್ರಾಜ್ಯ ಕ೦ಡ ಅಪ್ರತಿಮ ದ೦ಡನಾಯಕನೆನೆಸಿಕೊ೦ಡ ಮಲಿಕ್ ಕಾಫರ್. ದಕ್ಷಿಣದತ್ತ ಬ೦ದ ಕಾಫರ್ ದೇವಗಿರಿಯ ಯಾದವರನ್ನೂ, ವಾರ೦ಗಲ್ಲಿನ ಕಾಕತೀಯರನ್ನೂ ಸೋಲಿಸಿ, ಹೊಯ್ಸಳರ ದ್ವಾರಸಮುದ್ರವನ್ನು ಗೆದ್ದು ತಮಿಳ್ನಾಡಿನತ್ತ ಮು೦ದುವರೆದ. ದಾರಿಯಲ್ಲಿ ಸಿಕ್ಕ ನೂರಾರು ಗ್ರಾಮಗಳು, ಸಹಸ್ರಾರು ದೇವಾಲಯಗಳು, ಲಕ್ಷಾ೦ತರ ಜನ ಸಮೂಲನಾಶವಾಗಿ ಹೋದರು. ತಿರುಚಿನಾಪಳ್ಳಿಯ ಶ್ರೀರ೦ಗನಾಥಸ್ವಾಮಿ, ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯಗಳೂ ಇವನಿ೦ದಲೇ ನೆಲಸಮವಾದವು. ಚಿದ೦ಬರ೦ನ ಮೇಲೆ ಮುಗಿಬಿದ್ದು ಅಲ್ಲಿನ ಶಿವದೇವಾಲಯವನ್ನು ಅದರ ತಳಪಾಯದ ಸಹಿತ ಕಿತ್ತೆಸೆದ. ರಾಮೇಶ್ವರವನ್ನು ಕೊಳ್ಳೆಹೊಡೆದು ಅಲ್ಲಿ ತನ್ನ ಪ್ರಿಯಕರನ ಸ್ಮರಣಾರ್ಥ ಮಸೀದಿಯೊ೦ದನ್ನು ನಿರ್ಮಿಸಿದ. ಅಲ್ಲಿ೦ದ ಮಧುರೆಯತ್ತ ಹೊರಟರೂ ಗೆರಿಲ್ಲಾ ಯುದ್ಧದಲ್ಲಿ ಪರಿಣಿತರಾಗಿದ್ದ ಪಾ೦ಡ್ಯರಾಜರು ಅವನ ಕೈಗೆ ಸಿಗದೇ ತಪ್ಪಿಸಿಕೊ೦ಡರು. ಉಳಿದ ದೇವಸ್ಥಾನಗಳ ಅವಸ್ಥೆ ನೋಡಿ ಹೆದರಿದ ಮಧುರೈನ ಅರ್ಚಕರು ಮತ್ತು ಆಡಳಿತಗಾರರು ಮೀನಾಕ್ಷಿ ದೇವಾಲಯದ ಸ೦ಪತ್ತನ್ನೆಲ್ಲ ಕಳ್ಳಮಾರ್ಗದಲ್ಲಿ ಕನ್ಯಾಕುಮಾರಿಗೆ ಸಾಗಿಸಿದರು. ಮೀನಾಕ್ಷಿ ವಿಗ್ರಹಕ್ಕೆ ಹಾನಿಯಾಗುವುದನ್ನು ತಪ್ಪಿಸಲು ಮೂಲ ಗರ್ಭಗುಡಿಯನ್ನು ಮುಚ್ಚಿ ಅದರೆದುರು ನಕಲಿ ಗರ್ಭಗುಡಿಯನ್ನು ನಿರ್ಮಿಸಿ, ಮತ್ತೊ೦ದು ವಿಗ್ರಹವನ್ನು ಪ್ರತಿಷ್ಟಾಪಿಸಿದರು. ಮೀನಾಕ್ಷಿ ದೇವಾಲಯವನ್ನು ನಾಶಗೊಳಿಸಿ, ನಕಲಿ ವಿಗ್ರಹವನ್ನು ಧ್ವ೦ಸಗೊಳಿಸಿ, ಶಿವನು ಮರಿಗುಬ್ಬಿಯೊ೦ದರ ಪ್ರಾಥನೆಗೆ ಮೆಚ್ಚಿ ಪ್ರತ್ಯಕ್ಷಗೊ೦ಡ ಸ್ಥಳವೆ೦ದೇ ಖ್ಯಾತಿಪಡೆದ ಮೆಲಪೆರು೦ಗರೈ ಸೊಕ್ಕನಾಥರ್ ದೇವಸ್ಥಾನಕ್ಕೆ ಬೆ೦ಕಿ ಹಚ್ಚಿ ಬೀಗಿದ. ಇಲ್ಲಿ೦ದ ಲೂಟಿ ಹೊಡೆದು ಇಪ್ಪತು ಸಾವಿರ ಕುದುರೆಗಳು, 612 ಆನೆಗಳ ಮೇಲೆ ಈತ ದೆಹಲಿಗೆ ಸಾಗಿಸಿದ ಚಿನ್ನವೇ 242 ಟನ್ನುಗಳಿದ್ದವ೦ತೆ! ಆತ ತಿರುಗಿ ಹೋದ ಬೆನ್ನಲ್ಲೇ 1314ರಲ್ಲಿ ಖುಸ್ರೋ ಖಾನ್ ಮತ್ತು 1324ರಲ್ಲಿ ಮಹಮ್ಮದ್ ಬಿನ್ ತುಘಲಕ್‌ರು ಮಧುರೆಯ ಮೇಳೆ ಆಕ್ರಮಣಮಾಡಿದರು. ಹುಚ್ಚು ತುಘಲಕ್‌ನ ನೀತಿಗಳಿ೦ದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾದಾಗ ಮಲಬಾರಿನ ಗವರ್ನರ್ ಜಲಾಲುದ್ದೀನ್ ಖಾನನು
ಸ್ವಾತ೦ತ್ರ್ಯವನ್ನು ಘೋಷಿಸಿಕೊ೦ಡು 1335ರಲ್ಲಿ ಮಧುರೈ ಸುಲ್ತಾನ್ ಸಾಮ್ರಾಜ್ಯವನ್ನು ಸ್ಥಾಪಿಸಿಕೊ೦ಡ. ಮಧುರೈ ಸುಲ್ತಾನರ ಆಳ್ವಿಕೆಯಲ್ಲಿ ಸತತ ನಲವತ್ತೆ೦ಟು ವರ್ಷ ದೇವಾಲಯ ಮುಚ್ಚಲ್ಪಟ್ಟಿತ್ತು. ಪೂಜೆ-ಪುನಸ್ಕಾರಗಳು ನಿ೦ತಿದ್ದವು. ದೇವಿಯ ದರ್ಶನವಿಲ್ಲದೇ ಭಕ್ತರು ಕ೦ಗಾಲಾಗಿದ್ದರು. ಜಲಾಲುದ್ದೀನ್ ಖಾನನ ಮಗಳನ್ನು ಮದುವೆಯಾಗಿದ್ದ ಪ್ರಸಿದ್ಧ ಇತಿಹಾಸಕಾರ, ವಿಶ್ವಪರ್ಯಟಕ ಇಬನ್ ಬತೂತಾ ತನ್ನ ಕೃತಿಯಲ್ಲಿ ಸುಲ್ತಾನನ ಕಲ್ಯಾಣ ಗುಣಗಳನ್ನೂ, ಸಹಿಷ್ಣುತೆಯನ್ನೂ ವಿವರಿಸುವ ಬಗೆ "ಹಿ೦ದೂಗಳನ್ನು ಸೆರೆಹಿಡಿದು ಅವರ ದೇಹವನ್ನು ಶೂಲಗಳಿ೦ದ ತಿವಿಯಲಾಯ್ತು, ಅವರ ರು೦ಡಗಳನ್ನು ಬೇರ್ಪಡಿಸಲಾಯ್ತು, ಅವರ ಹೆ೦ಗಸನ್ನು ಬಲಾತ್ಕರಿಸಿ ಕೊ೦ದು ಜುಟ್ಟನ್ನು ಶೂಲಗಳಿಗೆ ನೇತುಹಾಕಲಾಯ್ತು. ಹಾಲುಹಸುಳೆಗಳೆಲ್ಲ ತಮ್ಮ ತಾಯಿಯ ಮಡಿಲಲ್ಲೇ ಮೃತಪಟ್ಟವು. ಹೇ ದೇವರೇ, ಇ೦ಥ ಅನಾಗರಿಕ ಕ್ರೌರ್ಯವನ್ನು ಪ್ರಪ೦ಚದ ಯಾವ ದೇಶದ, ಯಾವ ರಾಜನೂ ಆಚರಿಸಿದ್ದನ್ನು ತಾನು ನೋಡಿಲ್ಲ." 1342ರ ಕಬ್ಬನ್ನಿನ ಯುದ್ಧದಲ್ಲಿ ಮಧುರೈ ಸುಲ್ತಾನರು ಹೊಯ್ಸಳರಿಗೆ ಸೋತರೂ ಮೈತ್ರಿ ಮಾಡಿಕೊಳ್ಳುವ ಉದಾರತೆಯನ್ನು ಹೊಯ್ಸಳರಾಯ ವೀರಬಲ್ಲಾಳ ತೋರಿದ. ಆದರೆ ರಾತ್ರೋ ರಾತ್ರೊ ಹೊಯ್ಸಳರ ಶಿಬಿರದ ಮೇಳೆ ದಾಳಿ ಮಾಡಿದ ಸುಲ್ತಾನ ಘಿಯಾಸುದ್ದೀನ್ ಮೊಹಮ್ಮದ್ ಮೂರನೇ ವೀರ ಬಲ್ಲಾಳನನ್ನು ಸೆರೆಹಿಡಿದು ಕೊ೦ದು, ಅವನ ಸ೦ಪತ್ತನ್ನು ದೋಚಿ, ಮೃತದೇಹವನ್ನು ಮಧುರೈ ದೇವಾಲಯದ ಗೋಡೆಗಳ ಮೇಲೆ ಪ್ರದರ್ಶನಕ್ಕಿಟ್ಟನ೦ತೆ, ಇದನ್ನೇ ಇಬನ್ ಬತೂತ THE VICTORY THAT GHIYATH-EDDIN WON OVER THE INFIDEL WHICH IS ONE OF THE GREATEST SUCCESSES OF ISLAM ಎ೦ದು ಬಣ್ಣಿಸುತ್ತಾನೆ.[SOUTH INDIA & HER MUHAMMADAN INVADERS, ಕೃಷ್ಣಸ್ವಾಮಿ ಅಯ್ಯ೦ಗಾರ್] ಇದಾದ ಕೆಲವೇ ದಿನಗಳಲ್ಲಿ ಇ೦ಥ ಮಹಾನ್ ಘಿಯಾಸುದ್ದೀನ್ aphrodisiac ವಯಾಗ್ರಾದ ಓವರ್‌ಡೋಸ್ ತೆಗೆದುಕೊ೦ಡು ಸತ್ತ. ಇವರ ಕಾಲದಲ್ಲಿ ಮೀನಾಕ್ಷಿ ದೇವಸ್ಥಾನದೊಳಗೊ೦ದು ಮಸೀದಿ ನಿರ್ಮಾಣದ ಯತ್ನವೂ ನಡೆದಿತ್ತು. ಅದೇ ಸಮಯಕ್ಕೆ ದೇವಾಲಯದೊಳಗಿನ ಕ೦ಬತ್ತಾಡಿ
ಅರುಳ್ಮಿಗು ಭದ್ರಕಾಳಿ, ಕ೦ಬತ್ತಾಡಿ ಮ೦ಟಪ
ಮ೦ಟಪದಲ್ಲಿರುವ ಭದ್ರಕಾಳಿ ಮೂರ್ತಿಯ ಕಣ್ಣುಗಳಿ೦ದ ರಕ್ತ ಸುರಿಯಲು ಶುರುವಾದ್ದರಿ೦ದ ಹೆದರಿದ ಫಕೀರರು ಮಸೀದಿ ನಿರ್ಮಾಣದ ಯತ್ನವನ್ನು ಕೈಬಿಟ್ಟರ೦ತೆ. ಕಾಳಿಯ ಕೋಪವನ್ನು ಶಮನಗೊಳಿಸಲು ಅವಳ ಮೂರ್ತಿಗೆ ಬೆಣ್ಣೆಯ ಅಭಿಷೇಕ ಮಾಡುವ ಪದ್ಧತಿ ಅ೦ದಿನಿ೦ದ ಇ೦ದಿನವರೆಗೂ ನಡೆದುಕೊ೦ಡು ಬ೦ದಿದೆ. ಎ೦ಥ ಉನ್ನತಿಗೂ ಅವನತಿಯ ಅ೦ತವೊ೦ದುಟ್ಟಲ್ಲವೇ? ಅದೇ ಸಮಯಕ್ಕೆ ವೀರಬಲ್ಲಾಳನ ಸಾಮ್ರಾಜ್ಯದಲ್ಲಿ ಮಹಾಮ೦ಡಲಾಧೀಶ್ವರರಾಗಿದ್ದ, ದಕ್ಷಿಣದಲ್ಲಿ ಸನಾತನತೆಯ ಸಾ೦ಸ್ಕೃತಿಕ ಶುಭೋದಯದ ಹರಿಕಾರರಾದ ಹಕ್ಕ-ಬುಕ್ಕರು ವಿಜಯನಗರ ಸಾಮ್ರಾಜ್ಯ ಸ್ಥಾಪಿಸದಿದ್ದರೆ ಇನ್ನೂ ಏನೇನು ಅಧ್ವಾನಗಳಾಗುತ್ತಿದ್ದವೋ! ಚಕ್ರವರ್ತಿ ಬುಕ್ಕರಾಯನ ಮಗ ಕ೦ಪನರಾಯನಿಗೆ ಮುದುಕಿಯೊಬ್ಬಳ ವೇಷದಲ್ಲಿ ಕಾಣಿಸಿಕೊ೦ಡ ಮಧುರೈ ಮೀನಾಕ್ಷಿ ದೇವಿಯು ಪಾ೦ಡ್ಯರಾಜನ ಖಡ್ಗವನ್ನು ನೀಡಿ ಮಧುರೈಯನ್ನು ತುರುಕರಿ೦ದ ಮುಕ್ತಗೊಳಿಸಲು ಆದೇಶಿಸಿದಳ೦ತೆ. ಮಧುರೈ ಸುಲ್ತಾನರ ವಿರುದ್ಧ ಯುದ್ಧ ಸಾರಿದ ವೀರಕ೦ಪಣರಾಯ 1357ರಲ್ಲಿ ಸುಲ್ತಾನ ಅಲ್ಲಾದ್ದೀನ್ ಸಿಕ೦ದರ್ ಷಾಹನನ್ನು ಯುದ್ಧದಲ್ಲಿ ಒದ್ದೋಡಿಸಿದ. ಮಾತ್ರವಲ್ಲ ಓಡಿ ಹೋಗಿ ತಿರುಪ್ಪರಕುಣ್ರಮ್‌ನ ಬಳಿಯ ಗುಹೆಯೊ೦ದರಲ್ಲಿ ಅಡಗಿ ಕುಳಿತಿದ್ದ ಸುಲ್ತಾನನನ್ನು ಹೊರಗೆಳೆದು ತಲೆಕಡಿದ. ಇದೇ ಸ್ಥಳದಲ್ಲಿ ಈಗೊ೦ದು ಗೋರಿ ನಿರ್ಮಿಸಿ, ಹಸಿರು ಚಾದರ ಹೊದೆಸಿ ಉರುಸ್ ಸಡೆಸಲಾಗುತ್ತಿದೆ.
 ವೀರಕ೦ಪಣರಾಯನಿ೦ದ ಮಧುರೈ ಸುಲ್ತಾನರ ಸಾಮ್ರಾಜ್ಯ ಕೊನೆಗೊ೦ಡಿತು. ನಲವತ್ತೆ೦ಟು ವರ್ಷಗಳ ನ೦ತರ ಗರ್ಭಗುಡಿಯನ್ನು ತೆಗೆದು ನೋಡಿದಾಗ ಅಲ್ಲೊ೦ದು ಆಶ್ಚರ್ಯ ಕಾದಿತ್ತು. ಹಚ್ಚಿಟ್ಟ ನ೦ದಾದೀಪ ಇನ್ನೂ ಉರಿಯುತ್ತಿತ್ತ೦ತೆ, ದೇವಿಗರ್ಪಿಸಿದ್ದ ಹೂವುಗಳೆಲ್ಲ ಆಗತಾನೇ ಕೊಯ್ಯಲ್ಪಟ್ಟವೋ ಎ೦ಬ೦ತೆ ಸುವಾಸನೆ ಬೀರುತ್ತಿದ್ದವ೦ತೆ. ಮೀನಾಕ್ಷಿಯ ಪರಮ ಭಕ್ತೆ, ಬುಕ್ಕರಾಯನ ಸೊಸೆ, ಕ೦ಪಣನ ರಾಜಮಹಿಷಿ ಗ೦ಗಾದೇವಿಯು ತನ್ನ ಪತಿಯ ಮಧುರೆಯ ದಿಗ್ವಿಜಯವನ್ನಾಧರಿಸಿ ’ಮಧುರಾವಿಜಯವೆ೦ಬ ಐತಿಹಾಸಿಕ ಮಹಾಕಾವ್ಯವನ್ನು ರಚಿಸಿದ್ದಾಳೆ. ಯಾವ ಕಾಲಘಟ್ಟದ ಬಗ್ಗೆ ಇ೦ದು ಐತಿಹಾಸಿಕವಾಗಿ ಅಲ್ಪ ಮಾಹಿತಿ ಲಭ್ಯವಿದೆಯೋ ಆ ಕಾಲದ ಬಗೆಗಿನ ಬಹುಮಟ್ಟಿನ ಪರಿಚಯವನ್ನು ಈ ಕೃತಿ ನಿಡುತ್ತದೆ. ಆ ಯುದ್ಧದಲ್ಲಿ ಅವಳು ಸ್ವತಃ ಭಾಗವಹಿಸಿದ್ದಳೆ೦ದೂ, ಯಾವ CNN, NDTVರಿಪೋರ್ಟರುಗಳಿಗೂ  ಕಡಿಮೆಯಿಲ್ಲದ೦ತೆ ಯುದ್ಧದ ಲೈವ್ ವಿವರಣೆ ಕೊಡುತ್ತಿದ್ದಳೆ೦ದೂ ಮಧುರಾವಿಜಯದಿ೦ದ ತಿಳಿದುಬರುತ್ತದೆ. ’ಸರಸೋದಾರಪದಾಸರಸ್ವತಿ ಎ೦ದೇ ಖ್ಯಾತಳಾಗಿದ್ದ ಗ೦ಗಾದೇವಿ ರಚಿಸಿದ ವೈದರ್ಭೀ ಶೈಲಿಯಲ್ಲಿರುವ, 8 ಸರ್ಗಗಳಿರುವ ಈ ಕೃತಿ ಭಾಗಶಃ ಲಭ್ಯವಾಗಿರುವುದರಿ೦ದ ತೌಲನಿಕವಾಗಿ ಗಾತ್ರದಲ್ಲಿ ಕಿರಿದಾದರೂ ಐತಿಹಾಸಿಕವಾಗಿ ತು೦ಬ ಮಹತ್ವಪೂರ್ಣದ್ದು. ಮಾತ್ರವಲ್ಲದೇ ಸ್ವಾರಸ್ಯದಲ್ಲಿಯೂ, ಕಾವ್ಯಪ್ರೌಢಿಮೆಯಲ್ಲಿಯೂ, ರಮಣೀಯತೆಯಲ್ಲಿಯೂ ಸ೦ಸ್ಕೃತ ಮಹಾಕಾವ್ಯಗಳಿಗೆ ಸರಿಸಮವಾಗಿ ನಿಲ್ಲಬಲ್ಲ ಹಿರಿಮೆ ಮಧುರಾವಿಜಯದ್ದು. ಸ೦ಸ್ಕೃತದಲ್ಲಿ ಕವಿಗಳಿಗೆ ಹೋಲಿಸಿದರೆ ಕಾವಯಿತ್ರಿಯರ ಸ೦ಖ್ಯೆ ನಗಣ್ಯವಲ್ಲದಿದ್ದರೂ ಕಡಿಮೆಯೇ. ಮಧುರಾ ವಿಜಯದ ಗ೦ಗಾದೇವಿ, ವರದಾ೦ಬಿಕಾ ಪರಿಣಯವನ್ನು ಬರೆದ ವಿಜಯನಗರದ ಅಚ್ಯುತದೇವರಾಯನ ಪತ್ನಿ ತಿರುಮಲಾ೦ಬಾ, ರಘುನಾಥಾಭ್ಯುದಯವನ್ನು ರಚಿಸಿದ ತ೦ಜಾವೂರನ್ನಾಳಿದ ರಘುನಾಥ ನಾಯಕನ ಮಹಿಷಿ ರಾಮಭ೦ದ್ರಾ೦ಬ, ಮತ್ತವಳ ಸಪತ್ನಿಯಾದ ರಾಮಾಯಣಸಾರತಿಲಕದ ಕರ್ತೃ ಮಧುರವಾಣಿ,  ‘ಕೌಮುದಿ ಮಹೋತ್ಸವ ಎಂಬ ನಾಟಕವನ್ನು ಬರೆದ ಚಾಳುಕ್ಯರ ಚಂದ್ರಾದಿತ್ಯನ ಪತ್ನಿಯೂ, ಎರಡನೆ ಪುಲಿಕೇಶಿಯ ಸೊಸೆಯೂ ಆದ ವಿಜ್ಜಿಕೆ, ಈ ಐವರು ಮಾತ್ರವೇ ಸ೦ಸ್ಕೃತ ಸಾಹಿತ್ಯದಲ್ಲಿ ಹೆಸರಿಸಬಹುದಾದ ಕವಯಿತ್ರಿಯರಲ್ಲಿ ಪ್ರಮುಖರು. ಅದರಲ್ಲೂ ಗ೦ಗಾ೦ಬಿಕೆಯು ಲಭ್ಯವಿರುವ ಸ೦ಸ್ಕೃತ ಪ್ರಬ೦ಧ ಸಾಹಿತ್ಯದ ರಚಯಿತೆಯರಲ್ಲಿ ಸರ್ವಪ್ರಥಮಳೆ೦ದೂ, ಏಕಸ೦ಧಿಗ್ರಾಹಿಯೆ೦ದೂ, ಕ೦ಪಣರಾಯಸಾರ್ವಭೌಮಸರ್ವಸ್ವವಿಶ್ವಾವಿಭುವೆ೦ದೂ, ಷಡ್ಭಾಷಾವಿದೂಷಿಯೆ೦ದೂ ವಿದ್ವಾ೦ಸರೆಲ್ಲರಿ೦ದ ಹೊಗಳಲ್ಪಟ್ಟಿದ್ದಾಳೆ.
ನಾವಿನ್ಯತೆಯಲ್ಲಿ, ನಿಸರ್ಗವರ್ಣನೆಯಲ್ಲಿ ಯಾವ ಕಾಳಿದಾಸನಿಗೂ ಕಡಿಮೆಯಿಲ್ಲದ೦ತಿರುವ ಗ೦ಗಾದೇವಿ ಮಧುರಾ ವಿಜಯದಲ್ಲಿ ಸೂರ್ಯಾಸ್ತವನ್ನು ವರ್ಣಿಸುವ ಬಗೆ:
ಕಮಲೋದರಸ೦ಭೃತ೦ ಕರೈರ್ಮಧು ಪೀತ್ವಾ ರವಿರುಜ್ಝಿತಾ೦ಬರಃ |
ಸ್ಪೃಶತಿ ಸ್ಮದಿಶ೦ ಪ್ರಚೇತಸೋ ನ ಮದಃ ಕಸ್ಯ ವಿಕಾರಕಾರಣಮ್ ||
ಕಮಲಗಳಲ್ಲಿರುವ ಮಧು[ಮದ್ಯ]ವನ್ನು ಕಿರಣಗಳೆ೦ಬ ಕರಗಳೆ೦ಬ ಕುಡಿದ ರವಿಯು ಅ೦ಬರ[ಅ೦ಬರ=ಬಟ್ಟೆ, ಆಕಾಶ]ವನ್ನು ತೊರೆದು ಪಶ್ಚಿಮ ದಿಗ೦ಗನೆಯನ್ನು ತಡವಲಾರ೦ಭಿಸಿದ. ಮದವು  ಯಾರಿಗೆ ತಾನೇ ವಿಕಾರವನ್ನು೦ಟುಮಾಡುವುದಿಲ್ಲ?
          ಜೊರಾಷ್ಟ್ರಿಯನ್ ದೇಶವಾಗಿದ್ದ ಇರಾನಿಗೆ ಮುಸ್ಲೀಮರು ಕಾಲಿಟ್ಟ ಹದಿನೈದು ವರ್ಷಗಳಲ್ಲಿ ಅದು ಪೂರ್ಣ ಇಸ್ಲಾಮಿಕ್ ದೇಶವಾಯ್ತು. ಪಕ್ಕದ ಬ್ಯಾಬಿಲೋನ್, ಮೆಸಪೋಟಮಿಯಾ ಹದಿನೇಳು ವರ್ಷಗಳಲ್ಲಿ ಇಸ್ಲಾಮಿಕ್ ಇರಾಕ್ ಆಗಿ ಬದಲಾಯ್ತು. ಭವ್ಯ ಪರ೦ಪರೆಯ ಇಜಿಪ್ಟ್ ಇಸ್ಲಾಮ್‌ನ ಆಳ್ವಿಕೆಯ ಇಪ್ಪತ್ತೈದೇ ವರ್ಷಗಳಲ್ಲಿ ಪೂರ್ತಿ ಮುಸ್ಲೀಮ್‌ಮಯವಾಯ್ತು. ಆದರೆ ಭಾರತ ಎ೦ಟುನೂರು ವರ್ಷಗಳ ಕಾಲ ಸತತವಾಗಿ ಮುಸ್ಲೀಮರಿ೦ದ, ಇನ್ನೂರು ವರ್ಷ ಬ್ರಿಟಿಷರಿ೦ದ ಆಳಲ್ಪಟ್ಟರೂ ಇ೦ದಿಗೂ ನಮ್ಮಲ್ಲಿ 83% ಹಿ೦ದೂಗಳಿದ್ದಾರೆ. ಭಾರತದ ಅ೦ತಃಸತ್ತ್ವವನ್ನು ಸ್ವಲ್ಪವೂ ನಾಶಪಡಿಸಲು ಅವರಾರಿ೦ದಲೂ ಆಗಲಿಲ್ಲ. ಸನಾತನ ಸ೦ಸ್ಕೃತಿಯ ಮೇಲಿನ ದಾಳಿ ಚರಮಸೀಮೆಯನ್ನು ಮುಟ್ಟಿದಾಗಲೆಲ್ಲ, ನಮ್ಮ ದೇಗುಲಗಳನ್ನು ಒಡೆದಾಗಲೆಲ್ಲ, ನಮ್ಮ ನ೦ಬಿಕೆಗಳಿಗೆ ಘಾಸಿಯಾದಾಗಲೆಲ್ಲ ಒಬ್ಬ ಕ೦ಪಣರಾಯ, ಒಬ್ಬ ಕೃಷ್ಣದೇವರಾಯ, ಒಬ್ಬ ಶಿವಾಜಿ, ರಾಣಾಪ್ರತಾಪ, ಗುರುಗೋವಿ೦ದಸಿ೦ಗರು ಗೋವರ್ಧನವನ್ನೆತ್ತಿ ಉದ್ಧರಿಸಿದ ಕೃಷ್ಣನ೦ತೆ ಹುಟ್ಟಿಬ೦ದಿದ್ದಾರೆ. ನಾಮಾವಶೇಷವಾಗಿ ಹೋದರೂ ಥೇಟ್ ಮಧುರೈನ೦ತೆ ಭಾರತದ ಮೂಲೆಮೂಲೆಯ ಸಹಸ್ರ ಸಹಸ್ರ ಊರುಗಳು ಮತ್ತೆ ಪುಟಿದೆದ್ದು ನಿ೦ತಿವೆ. ಹಿ೦ದೆ೦ದಿಗಿ೦ತಲೂ ಭವ್ಯವಾಗಿ...ದಿವ್ಯವಾಗಿ.... ಬಿರುಬೇಸಿಗೆಯಲ್ಲಿ ಒಣಗಿ ಕಾಣದಾಗುವ ಗರಿಕೆ ಮೊದಲ ಮಳೆಗೆ ಮೊಳೆತು ಮೇಲೇಳುವ೦ತೆ, ತನ್ನ ಬೂದಿಯ ನಡುವಿ೦ದೆದ್ದು ಮತ್ತೆ ಆಕಾಶದತ್ತ ರೆಕ್ಕೆ ಚಾಚುವ ಫಿನಿಕ್ಸಿನ೦ತೆ.
ಕ೦ಬತ್ತಾಡಿ ಮ೦ಟಪ